Sunday, May 25, 2014

ಕಾಂಗ್ರೆಸ್ ಆತ್ಮ ಎಲ್ಲಿದೆ? ಹುಡುಕಿ ಕೊಡಿ!

ವಾರ್ತಾಭಾರತಿ ಕನ್ನಡ ದೈನಿಕದಲ್ಲಿ ರವಿವಾರ ಮೇ ೨೫ ರಂದು ಪ್ರಕಟವಾದ ಬುಡಬುಡಿಕೆ

ದಿಲ್ಲಿ ಕಾಂಗ್ರೆಸ್‌ನೊಳಗೆ ಕಲರವ. ಸೋತ ಸಂಭ್ರಮವನ್ನು ಆಚರಿಸಿಕೊಳ್ಳಲು ‘ಆತ್ಮಾವಲೋಕನ ಸಭೆ’ಯನ್ನು ಸೋನಿಯಾಗಾಂಧಿ ಕರೆದಿರುವುದು ಗೊತ್ತಾಗಿ, ಮೇಡಂ ಅವರ ಪ್ರಮಾಣ ವಚನ ಸಭೆಯೋ ಎಂಬಂತೆ ಸೋತ ಕಾಂಗ್ರೆಸ್ ಮುಖಂಡರೆಲ್ಲ ಮೀಸೆಯ ಮಣ್ಣನ್ನು ಕೊಡವಿಕೊಂಡು ಸಭೆಗೆ ಹಾಜರಾದರು. ‘ಬಹುಶಃ 50 ಸೀಟ್ ಸಿಕ್ಕಿದ ಸಂಭ್ರಮವನ್ನು ಆಚರಿಸಿಕೊಳ್ಳಲು ನಮ್ಮನ್ನು ಕರೆದಿರಬಹುದು’’ ಎಂದು ದಿಗ್ಗಿ, ಕಪಿಲ್, ಅಝಾದ್ ಮೊದಲಾದವರೆಲ್ಲ ಗರಿಗರಿ ಖಾದಿಯನ್ನು ತೊಟ್ಟು ಹಾಜರಾಗಿದ್ದರು. ರಾಹುಲ್ ಅಂತೂ ಫಲಿತಾಂಶದಿಂದ ರೋಮಾಂಚನಗೊಂಡಿದ್ದರು. ಇಷ್ಟು ಸ್ಥಾನಗಳಾದರೂ ಸಿಕ್ಕಿದೆ ಎಂದರೆ ಅದರ ಅರ್ಥ ಇನ್ನೂ ನಮ್ಮ ಮೇಲೆ ನಂಬಿಕೆ ಉಳಿಸಿಕೊಂಡಿದ್ದಾರೆ ಎಂದಲ್ಲವೆ? ಇದನ್ನು ನಾವು ಆಚರಿಸಬೇಕು. ಈ ಆಚರಣೆಗಾಗಿ ಅಮೆರಿಕ, ಲಂಡನ್, ಜರ್ಮನ್, ಫ್ರಾನ್ಸ್ ಪ್ರಧಾನಿಗಳಿಗೆ ಆಹ್ವಾನ ನೀಡಬೇಕು ಎಂದು ತಾಯಿಗೆ ಸಲಹೆ ನೀಡಿದ್ದ. ‘‘ಸುಮ್ಮನೆ ಹಿತ್ತಲಲ್ಲಿ ಹೋಗಿ ಆಟ ಆಡ್ಕೊಂಡಿರು. ಕಿರಿ ಕಿರಿ ಮಾಡ್ಬೇಡ...’’ ಎಂದು ಸೋನಿಯಾ ಮಗನ ತಲೆಗೆ ಎರಡು ಮೊಟಕಿದ್ದರು. ಆಟ ಆಡಲು ಕಾಂಗ್ರೆಸ್‌ನ್ನು ಕೊಡಬಾರದಿತ್ತು...ಎಲ್ಲವನ್ನೂ ಮುರಿದಿಕ್ಕಿದ್ದಾನೆ ಎಂದು ಸೋನಿಯಾ ಗೊಣಗಿದರು.
ಅಂತೂ ಆತ್ಮಾವಲೋಕನ ಸಭೆ ಆರಂಭವಾಯಿತು. ಅಷ್ಟರಲ್ಲಿ ಸೋನಿಯಾಗಾಂಧಿ ಮಾತು ಆರಂಭಿಸಿದರು ‘‘ಕಾಂಗ್ರೆಸ್ ತನ್ನ ಸೋಲಿನ ಕುರಿತಂತೆ ಆತ್ಮ ಅವಲೋಕನ ಮಾಡಲು ಈ ಸಭೆಯನ್ನು ಕರೆದಿದೆ...ಮೊತ್ತ ಮೊದಲು ನಾವು ಕಾಂಗ್ರೆಸ್‌ನ ಆತ್ಮವನ್ನು ಅವಲೋಕನ ಮಾಡಬೇಕು... ಮಿ. ದ್ವಿಗ್ವಿಜಯ್ ಸಿಂಗ್...ಎಲ್ಲಿದೆ ಕಾಂಗ್ರೆಸ್‌ನ ಆತ್ಮ. ಅದನ್ನು ಸಭೆಯ ಮುಂದೆ ತನ್ನಿ...’’
ಆಗಷ್ಟೇ ಹನಿಮೂನ್ ಮುಗಿಸಿಕೊಂಡು ಬಂದಿದ್ದ ದಿಗ್ವಿಜಯ್ ಕಂಗಾಲಾದರು. ‘‘ಆತ್ಮ...ಅದೂ ಅದೂ...ನಾನು ಕಾಂಗ್ರೆಸ್‌ಗೆ ಕಾಲಿಡುವಾಗಲೇ ಅದನ್ನು ರಾಜೀವ್‌ಗಾಂಧಿಯವರ ಕೈಗೆ ಕೊಟ್ಟಿದ್ದೆ. ಅದು ನಿಮ್ಮ ತಿಜೋರಿಯಲ್ಲಿ ಭದ್ರವಾಗಿರಬೇಕು...’’
ಸೋನಿಯಾ ಮೇಡಂ ಸಿಟ್ಟಾದರು ‘‘ನಾನು ಕೇಳುತ್ತಾ ಇರುವುದು ನಿಮ್ಮ ಮೆದುಳಿನ ಬಗ್ಗೆ ಅಲ್ಲ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ ಎಂದು ಕೇಳುತ್ತಿದ್ದೇನೆ. ತಿಜೋರಿಯಲ್ಲಿರುವುದು ನಿಮ್ಮ ಮೆದುಳು ಮಾತ್ರ. ಇಡೀ ಕಾಂಗ್ರೆಸ್ ಮುಖಂಡರ ಮೆದುಳು ನನ್ನ ತಿಜೋರಿಯಲ್ಲಿ ಭದ್ರವಾಗಿದೆ. ಕಾಂಗ್ರೆಸ್‌ನ ಆತ್ಮ ಎಲ್ಲಿದೆ? ರಾಹುಲ್‌ನ ಕೈಗೆ ಸಿಗದ ಹಾಗೆ ಜಾಗೃತೆಯಾಗಿ ಇಟ್ಟುಕೊಳ್ಳಿ ಎಂದು ಕೊಟ್ಟಿದ್ದೆನಲ್ಲ...ಇದೀಗ ನೋಡಿ...ಆತ್ಮಾವಲೋಕನ ಮಾಡಲು ಕರೆದ ಸಭೆಯಲ್ಲಿ ಕಾಂಗ್ರೆಸ್‌ನ ಆತ್ಮವೇ ಕಾಣುತ್ತಿಲ್ಲ....ಆತ್ಮ ಇಲ್ಲದೆ ಆತ್ಮಾವಲೋಕನ ನಡೆಸುವುದು ಹೇಗೆ?’’
‘‘ಮೇಡಂ...ನನಗೆ ವೀರಪ್ಪ ಮೊಯ್ಲಿಯವರ ಮೇಲೆಯೇ ಡೌಟು. ಕಾಂಗ್ರೆಸ್‌ನ ಆತ್ಮವನ್ನು ಅಂಬಾನಿಗೆ ಮಾರಿ ಅವರು ಚಿಕ್ಕಬಳ್ಳಾಪುರದಲ್ಲಿ ಗೆದ್ದದ್ದು ಅಂತ ನನ್ನ ಗೂಢಚಾರರು ಹೇಳಿದ್ದಾರೆ...’’
‘‘ನೀವು ಯಾರು? ಯಾವ ಲೋಕಸಭೆಯ ಎಂಪಿ ನೀವು?’’
‘‘ಅದೇ ಮೇಡಂ...ಎರಡು ಲಕ್ಷ ಓಟಿನಲ್ಲಿ ಸೋಲಿಸಿದ್ದು...’’
‘‘ಎರಡು ಲಕ್ಷ ಅಂತರದಲ್ಲಿ ಸೋಲಿಸಿದ್ದೇ...ಯಾರನ್ನು ಎಲ್ಲಿ?’’
‘‘ಅದೇ ಮೇಡಂ...ಮಂಗಳೂರಿನಲ್ಲಿ...ಎರಡು ಲಕ್ಷ ಓಟಿಗೆ ಸೋತದ್ದು ನಾನೇ...ಇಂದಿರಾಗಾಂಧಿಯ ಕಾಲದಲ್ಲಿ ನಾನು ಸಾಲಮೇಳಕ್ಕೆ ಫೇಮಸ್...ನಾನೇ ಜನಾರ್ದನಪೂಜಾರಿ...’’
ಸೋನಿಯಾಗೆ ಸಿಟ್ಟು ಒತ್ತರಿಸಿ ಬಂತು ‘‘ಇವರನ್ನು ಯಾರು ಒಳಗೆ ಬಿಟ್ಟದ್ದು...ತಕ್ಷಣ ಹೊರಗೆ ಹಾಕಿ....’’ ಎಂದದ್ದೇ ತಡ....ಭಾರತ ಸೇವಾದಳದ ಕಾರ್ಯಕರ್ತರು ಅವರನ್ನು ಎಳೆದುಕೊಂಡು ಹೋದರು.
‘‘ಆತ್ಮ ಎಲ್ಲಿದೆ...ಆತ್ಮ ಎಲ್ಲಿದೆ...ತಕ್ಷಣ ಉತ್ತರಿಸಿ. ಇಲ್ಲದಿದ್ದರೆ ಎಲ್ಲರನ್ನೂ ವಜಾ ಮಾಡಬೇಕಾಗುತ್ತದೆ...’’
‘‘ಅಣು ಒಪ್ಪಂದದ ಸಂದರ್ಭದಲ್ಲಿ ಅಮೆರಿಕಕ್ಕೆ ಹೋದ ಮನಮೋಹನ್ ಸಿಂಗ್ ಕಾಂಗ್ರೆಸ್‌ನ ಆತ್ಮವನ್ನು ಅಲ್ಲೇ ಬಿಟ್ಟು ಬಂದಿರಬೇಕು...ನೀವು ಒಮ್ಮೆ ಒಬಾಮ ಅವರಿಗೆ ಫೋನ್ ಮಾಡಿ ನೋಡಿ....’’ ಯಾರೋ ಆರೋಪಿಸಿದರು.
‘‘ಬಹುಶಃ ಕಲ್ಲಿದ್ದಲು ಗಣಿಯ ಒಳಗೆ ಇಣುಕಿ ನೋಡುವಾಗ ಅದರೊಳಗೆ ಬಿದ್ದಿರುವ ಸಾಧ್ಯತೆಯೇ ಜಾಸ್ತಿ...ಮನಮೋಹನ್ ಸಿಂಗ್ ಅವರನ್ನು ಒಮ್ಮೆ ಗಣಿಯ ಒಳಗೆ ಇಳಿಸಿ ನೋಡಿದರೆ ಸಿಕ್ಕಿದರೂ ಸಿಕ್ಕಬಹುದು...’’ ಅಯ್ಯರ್ ಹೇಳಿದರು.
‘‘ನನಗೆ ತಿಳಿದಿರುವ ಮಟ್ಟಿಗೆ ಅದನ್ನು ಸಲ್ಮಾನ್ ಖುರ್ಷಿದ್ ಅವರು ಉತ್ತರ ಪ್ರದೇಶದಲ್ಲಿ ಮುಲಾಯಂ ಜೊತೆ ಸೇರಿ ಬಿರಿಯಾನಿ ಮಾಡಿ ತಿಂದಿರಬೇಕು....’’
ಸಲ್ಮಾನ್ ಖುರ್ಷಿದ್ ಸಿಟ್ಟಾದರು ‘‘ನಾನು ಬಿರಿಯಾನಿ ಮಾಡಿದ್ದು ಮುಝಫ್ಫರ್ ನಗರದ ಅಲ್ಪಸಂಖ್ಯಾತ ಕುರಿಗಳನ್ನು ಕಡಿದು. ಕಾಂಗ್ರೆಸ್ ಆತ್ಮವನ್ನು ಬಿರಿಯಾನಿ ಮಾಡಿ ತಿನ್ನುವಷ್ಟು ಇನ್ನೂ ಕೆಟ್ಟು ಹೋಗಿಲ್ಲ....ಇಂದಿನ ಸಭೆಗೆ ಗೈರು ಹಾಜರಾಗಿದ್ದಾರಲ್ಲ ಚಿದಂಬರಂ...ಅವರಲ್ಲಿ ಕೇಳಿ...ಅವರು ಫೈನಾನ್ಸ್ ಮಿನಿಸ್ಟರಾಗಿದ್ದಾಗ ಕಾಂಗ್ರೆಸ್‌ನ ಆತ್ಮವನ್ನು ಒತ್ತೆಯಿಟ್ಟು ವಿಶ್ವಬ್ಯಾಂಕ್‌ನಿಂದ ಸಾಲ ತಂದಿರುವ ಸಾಧ್ಯತೆಯೂ ಇದೆ...’’
‘‘ಮೇಡಂ...ಅಸ್ಸಾಂನಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಗೊಗೊಯಿ ಶಿಲುಬೇಗೇರಿಸಿರುವ ಬಗ್ಗೆ ದಟ್ಟವಾಗಿ ವದಂತಿ ಹಬ್ಬಿದೆ. ಒಮ್ಮೆ ಅವರಲ್ಲಿ ವಿಚಾರಿಸಿ ನೋಡಿದರೂ ಆಗಬಹುದು...’’ ಇನ್ಯಾರೋ ಇನ್ನೊಂದು ಸಲಹೆ ನೀಡಿದರು.
‘‘ಯಾವುದಕ್ಕೂ ಪ್ರಿಯಾಂಕಾ ಮೇಡಮ್ ಅವರಲ್ಲೂ ವಿಚಾರಿಸುವುದು ಒಳ್ಳೆಯದು. ರಾಬರ್ಟ್ ವಾದ್ರಾ ಅವರ ತಿಜೋರಿಯಲ್ಲಿ ಹುಡುಕಿದರೆ ಕೆಲವೊಮ್ಮೆ ಸಿಕ್ಕಿದರೂ ಸಿಕ್ಕಿತು...’’ ಸೋನಿಯಾಗೆ ಅದು ಯಾರೋ ಭಿನ್ನಮತೀಯ ಎನ್ನುವುದು ಗೊತ್ತಾಗಿ ಬಿಟ್ಟಿತು. ಉತ್ತರಿಸುವುದಕ್ಕೇ ಹೋಗಲಿಲ್ಲ.
‘‘ನಾಡಿದ್ದು ನರೇಂದ್ರ ಮೋದಿಯವರ ಪ್ರಮಾಣವಚನ ಸಮಾರಂಭದಲ್ಲಿ ಹುಡುಕೋಣ....ಅಲ್ಲಿ ಸಿಕ್ಕಿದರೂ ಸಿಕ್ಕೀತು...’’ ಇನ್ಯಾರೋ ತಲೆಗೆಟ್ಟ ಸಲಹೆ ನೀಡಿದರು. ವೀರಪ್ಪ ಮೊಯ್ಲಿ ಮಾತ್ರ ಇಂತಹ ಸಲಹೆ ನೀಡಲು ಸಾಧ್ಯ ಎಂದು ಸೋನಿಯಾ ಅರ್ಥ ಮಾಡಿಕೊಂಡರು.
‘‘ಪ್ರಧಾನಿ ಮೋದಿಗೆ ಹುಡುಕಿಕೊಡಲು ಮನವಿ ಸಲ್ಲಿಸೋಣ...’’ ಮಗದೊಬ್ಬ ಸಲಹೆ ನೀಡಿದರು. ಇದು ಮೈಸೂರಿನ ಎಚ್. ವಿಶ್ವನಾಥ್ ಇರಬೇಕು ಎಂದು ಸೋನಿಯಾ ಊಹಿಸಿದರು.
‘‘ಬೇಡ ಮೇಡಂ...ನಾವೆಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಮನವಿ ಮಾಡೋಣ....ನಮ್ಮ ಕಾಂಗ್ರೆಸ್‌ನ ಆತ್ಮವನ್ನು ಮೋದಿ ಬಳಗ ಕದ್ದುಕೊಂಡಿದೆ. ಆದುದರಿಂದ ಮೋದಿ ಸರಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸೋಣ....’’ ಸೋನಿಯಾ ಸಿಟ್ಟಿನಿಂದ ತಲೆಯೆತ್ತಿ ನೋಡಿದರೆ ದಿಗ್ವಿಜಯ್ ಸಿಂಗ್. ಸೋನಿಯಾ ನಿಟ್ಟುಸಿರಿಟ್ಟು.
ಅಷ್ಟರಲ್ಲಿ ‘‘ಮೇಡಂ...’’ ಎಂಬ ಸದ್ದು. ಇಡೀ ಸಭೆ ಬೆಚ್ಚಿ ಬಿದ್ದಿತು. ಮನಮೋಹನ್ ಸಿಂಗ್ ಬಾಯಿ ತೆರೆದಿದ್ದಾರೆ. ಅವರು ಮಾತನಾಡುತ್ತಿದ್ದಾರೆ. ಅರೆ! ಮನಮೋಹನ್ ಸಿಂಗ್ ಮಾತನಾಡುತ್ತಿದ್ದಾರೆ....ಮೊತ್ತ ಮೊದಲ ಬಾರಿಗೆ ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಮಾತನಾಡಲು ಬಿಟ್ಟರು ‘‘ಮೇಡಂ...ಕಾಂಗ್ರೆಸ್‌ನ ಆತ್ಮ ಈಗ ಅಲ್ಲ 1992ರಲ್ಲೇ ಕಾಣೆಯಾಗಿದೆ....’’
‘‘ಹೌದಾ...ಹೇಗೆ...’’
‘‘ಅಂದಿನ ಪ್ರಧಾನಿ ನರಸಿಂಹರಾವ್ ಅವರ ಕೈಯಲ್ಲಿ ಕಾಂಗ್ರೆಸ್‌ನ ಆತ್ಮವನ್ನು ಜೋಪಾನ ಮಾಡಲು ನೀವೇ ತಾನೆ ಕೊಟ್ಟದ್ದು? ಆದರೆ ಬಾಬರೀ ಮಸೀದಿ ಆ ಆತ್ಮದ ಮೇಲೆ ಬಿದ್ದು ಬಿಟ್ಟಿತು. ಅದೀಗ ಕಾಣೆಯಾಗಿದೆ. ಬಾಬರೀ ಮಸೀದಿಯ ಧೂಳಿನಲ್ಲಿ ನಾವು ಆ ಆತ್ಮವನ್ನು ಹುಡುಕಬೇಕಾಗಿದೆ...’’

ರವಿವಾರ - ಮೇ -25-2014

Sunday, May 18, 2014

ಅಕ್ಕಿಯನ್ನು ಇನ್ನು ಕಂಪ್ಯೂಟರ್‌ನಲ್ಲೇ ಬೆಳೆಯೋದು....

 ವಾರ್ತಾ ಭಾರತಿ ಕನ್ನಡ ದೈನಿಕದ ಮೇ ೧೮ ರ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

ಅಂದು ಪತ್ರಕರ್ತ ಎಂಜಲು ಕಾಸಿ ಎಂದಿಗಿಂತ ತುಸು ಬೇಗ ಅಂದರೆ ಬೆಳಗ್ಗೆ ಹತ್ತು ಗಂಟೆಗೆ ಎದ್ದಿದ್ದ. ಅಂದಿನ ಬೆಳಗ್ಗೆ ಎಂದಿನಂತಿಲ್ಲ ಅನ್ನಿಸಿತು. ಅನುಮಾನ ಬಂದು, ಸೀದಾ ಅಂಗಳಕ್ಕೆ ಬಂದ. ಮೇಲೆ ನೋಡಿದರೆ ಮಾವಿನ ಮರದಲ್ಲಿ ಹಲಸಿನ ಗಾತ್ರದಷ್ಟು ದೊಡ್ಡ ಮಾವುಗಳು ನೇತಾಡುತ್ತಿದ್ದವು. ಕಾಸಿ ಬೆಚ್ಚಿ ಬಿದ್ದ. ಅರೆ! ಹಲಸಿನ ಗಾತ್ರ ಮಾವು! ಜೋರಾಗಿ ಹೆಂಡತಿಯನ್ನು ರಕ್ಷಣೆಗೆಂದು ಕೂಗಿದ ‘‘ಸೂಸಿ...ಸೂಸಿ...ಇಲ್ಲಿ ಬಾ...ಬೇಗ ಬಾ...’’
ಸೂಸಿ ಒಳಗಿನಿಂದ ಓಡಿ ಬಂದಳು ‘‘ಏನಾಯ್ತು...?’’ ಅಚ್ಚರಿಯಿಂದ ಕೇಳಿದಳು.
‘‘ಆಗುವುದೇನು, ಮರದಲ್ಲಿ ನೋಡು?’’ ಎಂದು ಕೇಳಿದ.
ಸೂಸಿ ನಿಟ್ಟುಸಿರಿಟ್ಟಳು ‘‘ಅಷ್ಟೇಯ? ನಿಮಗಿನ್ನೂ ಗೊತ್ತಿಲ್ಲವಾ? ಪತ್ರಕರ್ತರಾಗಿ ಹತ್ತು ಗಂಟೆಗೆ ಎದ್ದರೆ ನಿಮಗೆ ಗೊತ್ತಾಗೋದು ಹೇಗೆ? ದೇಶದಲ್ಲಿ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದಿದೆ...ಅಭೂತಪೂರ್ವವಾಗಿ ನರೇಂದ್ರ ಮೋದಿ ಗೆದ್ದಿದ್ದಾರೆ. ಆದುದರಿಂದ ಇವತ್ತಿನಿಂದ ಮಾವಿನ ಕಾಯಿಗಳೆಲ್ಲ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ...’’ ಸೂಸಿ ಹೇಳಿದಳು.
‘‘ಅಲ್ಲ ಕಣೆ...ಅದಕ್ಕೂ ಇದಕ್ಕೂ ಏನು ಸಂಬಂಧ...’’ ಕಾಸಿ ಕೇಳಿದ.
‘‘ಅಭಿವೃದ್ಧಿ ಕಣ್ರೀ....ಅಭಿವೃದ್ಧಿ. ಮೋದಿ ಅಧಿಕಾರಕ್ಕೆ ಬಂದದ್ದೇ ಅಭಿವೃದ್ಧಿ ಆಗ್ತಾ ಇದೆ...ಇದೀಗ ಗೆದ್ದದ್ದಷ್ಟೇ. ಅಷ್ಟರಲ್ಲಿ ಮಾವು ಹೆದರಿ ಹಲಸಿನ ಹಣ್ಣಿನಷ್ಟು ದೊಡ್ಡದಾಗಿದೆ. ನಮ್ಮ ಹೆಂಟೆ ಪಾಪ ರುಬ್ಬು ಕಲ್ಲಿನಷ್ಟು ದೊಡ್ಡ ಮೊಟ್ಟೆ ಇಟ್ಟು ಸತ್ತೇ ಹೋಗಿದೆ...ಎಲ್ಲ ಮೋದಿ ಮಹಾತ್ಮೆ ಕಣ್ರೀ....’’
ಕಾಸಿ ವಿಸ್ಮಯಗೊಂಡ. ಆಕಾಶವನ್ನು ನೋಡಿದರೆ ಅಲ್ಲಿ ಕೇಸರಿ ಸೂರ್ಯ. ಮನೆಯ ಮುಂದೆ ನೋಡಿದರೆ ವಿಮಾನ ನಿಲ್ದಾಣ...ಮೆಟ್ರೋರೈಲು ಕಣ್ಮುಂದೆಯೇ ಧಡ್ ಧಡ್ ಎಂದು ಹೋಗುತ್ತಿದೆ...’’
ಒಳಗೆ ಬಂದ. ಅಷ್ಟರಲ್ಲಿ ಎಂಟು ವರ್ಷದ ಮಗ ಭಾರತದಲ್ಲಿ 40 ರಾಜ್ಯಗಳಿವೆ....’’ ಎಂದು ಓದುತ್ತಿದ್ದ. ಅರೇ! ನಲವತ್ತು ರಾಜ್ಯಗಳು ಯಾವಾಗ ಸೃಷ್ಟಿಯಾಯಿತು? ಕಾಸಿಗೆ ಅಚ್ಚರಿಯಾಯಿತು ‘‘ಮಗನೇ ದೇಶದಲ್ಲಿ 40 ರಾಜ್ಯ ಅಂತ ಯಾರು ಹೇಳಿಕೊಟ್ಟಿರೋದು....’’
‘‘ಅಪ್ಪಾ ಮೋದಿ ಗೆದ್ದರೆ ಪಕ್ಕದ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಭಾರತಕ್ಕೆ ಸೇರತ್ತೆ ಎಂದು ಮೇಷ್ಟ್ರು ಹೇಳುತ್ತಿದ್ದರು. ಆ ಲೆಕ್ಕದಲ್ಲಿ ಭಾರತದ ರಾಜ್ಯಗಳು ಜಾಸ್ತಿ ಆಗಿವೆ ಅಪ್ಪ. ಇವತ್ತು ಮೋದಿ ಗೆದ್ದಿರೋದರಿಂದ ಪಾಕಿಸ್ತಾನ ‘‘ನಮ್ಮನ್ನು ಭಾರತಕ್ಕೆ ಸೇರಿಸ್ಕೊಳ್ಳಿ’’ ಅಂತ ಘೋಷಿಸಿದೆ....’’
‘‘ಹೌದಾ...’’ ಎಂದು ಒಳ ಹೋಗಿ ಮನೆಯ ಕಪಾಟು ತೆರೆದು ನೋಡಿದರೆ ಅದರ ತುಂಬಾ ರಾಶಿ ರಾಶಿ ನೋಟುಗಳು....‘‘ಸೂಸಿ....’’ ಮತ್ತೆ ಕಾಸಿ ಚೀರಿದ.
ಸೂಸಿ ಓಡಿ ಬಂದಳು. ‘‘ಏನ್ರೀ...ಅದು...’’ ಕೇಳಿದಳು.
ಕಾಸಿ ತೆರೆದ ಕಾಪಾಟಿನ ಮುಂದೆ ಸ್ತಂಭೀಭೂತನಾಗಿ ನಿಂತಿದ್ದ. ಸೂಸಿಗೆ ಅರ್ಥವಾಯಿತು ‘‘ಓ ಅದಾ...ನಿಮಗೆ ಇನ್ನೂ ವಿಷಯ ಗೊತ್ತಿಲ್ವಾ....ಸ್ವಿಸ್ ಬ್ಯಾಂಕಿನಲ್ಲಿದ್ದ ಕಪ್ಪು ಹಣವನ್ನೆಲ್ಲ ಅಲ್ಲಿನ ಬ್ಯಾಂಕಿನ ಮ್ಯಾನೇಜರ್‌ಗಳು ನರೇಂದ್ರ ಮೋದಿಯ ಪಾದ ಬುಡಕ್ಕೆ ತಂದು ಸುರಿದಿದ್ದಾರಂತೆ...ಅದನ್ನು ಮೋದಿಯವರು ಇಡೀ ದೇಶಕ್ಕೆ ಹಂಚಿದ್ದಾರೆ. ನಮ್ಮ ಪಾಲಿನದ್ದನ್ನು ಈಗಷ್ಟೇ ಬಿಜೆಪಿಯ ಸ್ಥಳೀಯ ಮುಖಂಡರು ತಂದು ಕೊಟ್ಟರು...ಇದರಲ್ಲಿ ನಮ್ಮ ಪಾಲಿನ ಹತ್ತು ಕೋಟಿ ರೂಪಾಯಿ ಇದೆ ಗೊತ್ತಾ...’’
ಕಾಸಿಗೆ ತಲೆ ಗಿರ್ರೆಂದಿತು. ನೇರವಾಗಿ ಸ್ನಾನ ಮಾಡಿ, ತಿಂಡಿ ತಿಂದು ಮನೆಯ ಹೊರಗೆ ಬರುವಷ್ಟರಲ್ಲಿ ಒಂದಿಷ್ಟು ಜನ ಸಾಲು ಸಾಲಾಗಿ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದರು. ‘‘ಯಾರ್ರೀ ನೀವು? ಯಾಕೆ ಗಂಟು ಮೂಟೆಯೊಂದಿಗೆ ಹೊರಡುತ್ತಿದ್ದೀರಿ?’’ ಕಾಸಿ ಕೇಳಿದ.
‘‘ನಾವು ಬಾಂಗ್ಲಾ ವಲಸಿಗರು. ಮೋದಿ ಗೆದ್ದಿದ್ದಾರಲ್ಲ. ಅವರು ನಮಗೆ ಗಡುವು ನೀಡಿದ್ದಾರೆ. ಅವರು ಅಧಿಕಾರ ಸ್ವೀಕರಿಸುವ ಮೊದಲು ನಾವೆಲ್ಲ ಬಾಂಗ್ಲಾಕ್ಕೆ ವಾಪಾಸ್ ಹೋಗುತ್ತಿದ್ದೇವೆ....ಬೇಗ ಟ್ರೈನ್ ಹಿಡೀಬೇಕು...’’
ಬ್ಲಾಂಗ್ಲಾ ದೇಶಿಯರೆಲ್ಲ ವಲಸೆ ಹೋಗಿರುವುದರಿಂದ ಬೆಂಗಳೂರು ಬಣ ಬಣ ಅನ್ನುತ್ತಿತ್ತು. ಎಲ್ಲಿ ನೋಡಿದರೂ ಖಾಲಿ ಖಾಲಿ ಜಾಗ. ಯಾರು ಎಲ್ಲಿ ಬೇಕಾದರೂ ಮನೆ ಕಟ್ಟಬಹುದು....ಕಾಸಿ ರೋಮಾಂಚನಗೊಂಡ.
‘‘ಮಗನಿಗೆ ಹೊಸ ಅಟ್ಲಾಸ್ ತಂದು ಕೊಡಬೇಕು. ಈಗ ಇರುವ ಭಾರತದಲ್ಲಿ ಪಾಕಿಸ್ತಾನ, ಚೀನಾ, ನೇಪಾಳ, ಶ್ರೀಲಂಕಾ ಎಲ್ಲ ಬೇರೆ ಬೇರೆ ಇವೆ. ಇನ್ನು ಮುಂದೆ ಅಖಂಡ ಭಾರತವಾಗಿರುವುದರಿಂದ ಅಟ್ಲಾಸ್ ಬದಲಿಸಬೇಕಾಗುತ್ತದೆ...’’ ಎಂದು ಯೋಚಿಸಿ ಅಟ್ಲಾಸ್ ಅಂಗಡಿಗೆ ಹೋಗಿ ಮೋದಿ ಸರಕಾರದ ಅಟ್ಲಾಸ್ ಪುಸ್ತಕ ತೆಗೆದುಕೊಂಡ.
  ಮನೆಗೆ ವಾಪಾಸ್ ಬಂದು ಟಿವಿ ಆನ್ ಮಾಡಿ ಕ್ರಿಕೆಟ್ ನೋಡಿದರೆ ಅಲ್ಲಿ ಭಾರತೀಯ ಆಟಗಾರರು ಲಕ್ಷಾಂತರ ರನ್ ಮಾಡಿದ್ದಾರೆ. ಮತ್ತು ಧೋನಿ ಹೇಳುತ್ತಿದ್ದಾನೆ ‘‘ನಾವು ಬರೇ ಹತ್ತು ಓವರ್‌ನಲ್ಲಿ ಒಂದು ಲಕ್ಷ ರನ್ ಮಾಡಲು ಮೋದಿ ಅಲೆಯೇ ಕಾರಣ. ಮುಂದಿನ ದಿನಗಳಲ್ಲಿ ನಾವು ಕೋಟ್ಯಂತರ ರನ್‌ಗಳನ್ನು ಮಾಡಲಿದ್ದೇವೆ. ಬಿಸಿಸಿಐ ಅಧ್ಯಕ್ಷರಾಗಿ ಅಮಿತ್ ಶಾ ಏನಾದರೂ ಆಯ್ಕೆಯಾದರೆ, ರನ್ನಿನ ಹೊಳೆಯಲ್ಲಿ ದೇಶವನ್ನು ಮುಳುಗಿಸಲಿದ್ದೇವೆ. ರನ್‌ಗಳನ್ನೇ ಅಮೆರಿಕ, ಚೀನಾ, ಇಂಗ್ಲೆಂಡ್‌ಗಳಿಗೆ ಮಾರಿ ಭಾರತ ಶ್ರೀಮಂತ ರಾಷ್ಟ್ರವಾಗಲಿದೆ...’’
ಬಾಯಗಲಿಸಿ ಕಾಸಿ ಅದನ್ನೇ ನೋಡಿದ. ಮಧ್ಯಾಹ್ನ ನೋಡಿದರೆ ಸೂಸಿ ಬಿರಿಯಾನಿ ಮಾಡಿದ್ದಳು. ನೋಡಿದರೆ ರನ್‌ಗಳ ಬಿರಿಯಾನಿ.! ‘‘ಹೌದು ಕಣ್ರೀ...ಕ್ರಿಕೆಟ್‌ನಲ್ಲಿ ಈ ಭಾರಿ ಧೋನಿ ಸಂಗ್ರಹಿಸಿದ ರನ್‌ಗಳಿಂದ ಬಿರಿಯಾನಿ ಮಾಡಿದ್ದೇನೆ ರುಚಿ ನೋಡಿ ಹೇಳಿ...ರಾತ್ರಿಗೆ ವಿರಾಟ್ ಕೊಹ್ಲಿ ಅವರು ಸಂಗ್ರಹಿಸಿದ ರನ್‌ಗಳಿಂದ ಪಲಾವ್ ಮಾಡಲಿದ್ದೇನೆ....’’ ಕಾಸಿ ಬಟ್ಟಲನ್ನೇ ಅಚ್ಚರಿಯಿಂದ ನೋಡಿದ.
‘‘ಅಕ್ಕಿಯಿಂದ ಏನಾದರೂ ಐಟಂ ಮಾಡಬಾರದೆ...?’’ ಕಾಸಿ ಪತ್ನಿಗೆ ಕೇಳಿದ. ‘‘ಪ್ರಿಂಟರ್ ಸರಿಯಿಲ್ಲ ಕಣ್ರೀ...’’ ಸೂಸಿ ಉತ್ತರಿಸಿದಳು. ಪ್ರಿಂಟರ್‌ಗೂ ಅಕ್ಕಿಗೂ ಏನು ಸಂಬಂಧ?
‘‘ಅದೇ ಕಣ್ರೀ...ಮೋದಿ ಅಭಿವೃದ್ಧಿಯಲ್ಲಿ ಅಕ್ಕಿ ಗದ್ದೆಯಲ್ಲಿ ಬೆಳೆಯೋದಿಲ್ಲ. ಕಂಪ್ಯೂಟರ್‌ನಲ್ಲಿ ಕ್ಲಿಕ್ ಮಾಡಿದ್ರೆ ಪ್ರಿಂಟರ್‌ನಲ್ಲಿ ದರದರಾಂತ ಅಕ್ಕಿ ಸುರಿಯತ್ತೆ...ಪ್ರಿಂಟರ್ ಸರಿಯಾದ ತಕ್ಷಣ ನಿಮಗೆ ಬೇಕಾದ ಅಕ್ಕಿಯಿಂದ ಬೇಕಾದ ರೊಟ್ಟಿ ಮಾಡಿ ಕೊಡುವಾ...’’
‘‘ಅಕ್ಕಿ ಕಂಪ್ಯೂಟರ್‌ನಲ್ಲಿ ಮಾಡೋದಾದ್ರೆ...ದೇಶದ ರೈತರೆಲ್ಲ ಏನು ಮಾಡುತ್ತಿದ್ದಾರೆ...’’ ಕಾಸಿ ಕೇಳಿದ.
‘‘ಮಾಡೋದೇನು...ರೈತರನ್ನೆಲ್ಲ ನಮ್ಮ ಮೋದಿ ಸಾಹೇಬ್ರು ಪ್ರತಿ ಊರಿನ ಮಧ್ಯೆ ನಿಲ್ಲಿಸಿದ್ದಾರೆ....’’
‘‘ಅಂದ್ರೆ...ಊರು ಕಾಯೋಕಾ?’’
‘‘ಊರು ಕಾಯೋದೇನು ಬಂತು ಮಣ್ಣು...ಯಾವಾಗ ಮೋದಿ ಆಯ್ಕೆಯಾದರೋ ಆಗಲೇ ಅಳಿದುಳಿತ ರೈತರೆಲ್ಲ ನೇಣು ಹಾಕಿಕೊಂಡರು. ಮೋದಿ ಅಭಿವೃದ್ಧಿಯ ಭಾರತದಲ್ಲಿ ರೈತರಿರೋದು ಅವಮಾನ ಅಲ್ವಾ? ಅದಕ್ಕೆ. ರೈತರ ತ್ಯಾಗಕ್ಕಾಗಿ ಪ್ರತಿ ಊರಿನ ಮಧ್ಯೆ ಒಬ್ಬೊಬ್ಬ ರೈತರ ಬೃಹತ್ ಉಕ್ಕಿನ ಪ್ರತಿಮೆಯನ್ನು ಮೋದಿ ನಿರ್ಮಿಸಲಿದ್ದಾರೆ. ಹಾಗೆಯೇ ದಿಲ್ಲಿಯಲ್ಲಿ ವಲ್ಲಭಬಾಯಿ ಪಟೇಲ್ ಅವರ ಪ್ರತಿಮೆಗಿಂತಲೂ ದೊಡ್ಡ ರೈತನ ಪ್ರತಿಮೆಯನ್ನು ನಿರ್ಮಿಸಲಿದ್ದಾರಂತೆ. ಈ ಪ್ರತಿಮೆಗೆ ಗುಜರಾತ್‌ನ ಅದಾನಿ ಮತ್ತು ಮುಂಬಯಿಯ ಅಂಬಾನಿ ದುಡ್ಡು ಹಾಕ್ತಾರಂತೆ....’’
ಸ್ವಲ್ಪ ಹೊತ್ತು ತಡೆದು ಸೂಸಿ ಹೇಳಿದಳು ‘‘ನೋಡ್ರಿ...ಬೇಗ ಬೇಗ ಊಟ ಮಾಡಿ. ರಾತ್ರಿ ಒಂಬತ್ತು ಗಂಟೆಗೆ ಸರಿಯಾಗಿ ಪಾಕಿಸ್ತಾನದ ಜೊತೆಗೆ ಮೋದಿ ಯುದ್ಧವನ್ನು ಘೋಷಣೆ ಮಾಡಿದ್ದಾರೆ. ಎಲ್ಲವನ್ನೂ ನೇರ ಪ್ರಸಾರ ಮಾಡುತ್ತಾರೆ...ದೇಶದ ಎಲ್ಲೇ ಕೋಮುಗಲಭೆ ನಡೆದರೂ ಅದನ್ನು ಮೋದಿ ಆಡಳಿತದಲ್ಲಿ ನೇರ ಪ್ರಸಾರವಂತೆ...ಟಿವಿ ಸೀರಿಯಲ್ ನೋಡಿ ಬೋರ್ ಹೊಡೆದಿದೆ. ಇನ್ನೇನಿದ್ದರೂ ಯುದ್ಧ, ಗಲಭೆಗಳನ್ನೇ ಲೈವ್ ಆಗಿ ನೋಡಿ ಮಜಾ ಪಡೆಯಬಹುದು...’’
ಕಾಸಿ ತನ್ನೆರಡು ಕಿವಿಗಳನ್ನು ಮುಚ್ಚಿ ‘‘ನಿಲ್ಲಿಸೂ.....’’ ಚೀರಿದ. ಅಷ್ಟರಲ್ಲಿ ಪತ್ನಿ ಕೂಗೋದು ಕೇಳಿಸಿತು ‘‘ಬೆಳಗಾಯಿತು ಎದ್ದೇಳ್ರೀ....ಅದೇನು ನಿದ್ದೆ ಕಣ್ಣಲ್ಲಿ ನಿಲ್ಲಿಸು ಅಂತ ಬೊಬ್ಬೆ ಹೊಡೀತೀರಿ...ಬನ್ನಿ...ಇವತ್ತು ಮೇ 16. ಫಲಿತಾಂಶ ಇನ್ನೇನು ಹೊರ ಬೀಳತ್ತೆ’’
ಕಾಸಿ ಕಣ್ಣು ಬಿಟ್ಟ ‘‘ಹಾಗಾದ್ರೆ...ನಾನು ನೋಡಿದ್ದು, ಕೇಳಿದ್ದು ಎಲ್ಲ ಕನಸಾ?’’ ನಿಟ್ಟುಸಿರು ಬಿಟ್ಟ. ಅಷ್ಟರಲ್ಲಿ ಪತ್ನಿ ಸೂಸಿ ಜೋರಾಗಿ ಕೂಗಿ ಹೇಳಿದಳು ‘‘ರೀ...ಮೋದಿಗೆ ಎಲ್ಲ ಕಡೆ ವಿಜಯ ಸಾಧಿಸ್ತಾ ಇದ್ದಾರೆ...’’

Saturday, May 10, 2014

ನೀವು ಸೂಟ್‌ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...

 ಪತ್ರಕರ್ತ ಎಂಜಲು ಕಾಸಿಗೆ ಇದು ಕಷ್ಟಕಾಲ. ಯಾಕೆಂದರೆ ಆತನ ಐದು ವರ್ಷದ ಮಗನನ್ನು ಎಲ್‌ಕೆಜಿಗೆ ಸೇರಿಸಬೇಕಾದ ಸಮಯ ಬಂದಿದೆ. ಹಲವು ಶಾಲೆಗಳಿಗೆ ಈಗಾಗಲೇ ಭೇಟಿ ಮಾಡಿ ಬಸವಳಿದಿದ್ದ. ಮುಖ್ಯವಾಗಿ ಪತ್ರಕರ್ತ ಎಂಜಲು ಕಾಸಿಯ ದೊಡ್ಡ ಸಮಸ್ಯೆಯೇ ಅವನಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ. ತನಗೆ ಗೊತ್ತಿರುವ ಕನ್ನಡದಲ್ಲಿ ಅದೆಷ್ಟೋ ಇಂಟರ್ಯೂಗಳನ್ನು ಮಾಡಿದ ಪತ್ರಕರ್ತ ಎಂಜಲು ಕಾಸಿ ಇದೀಗ ತಾನೇ ಇಂಟರ್ಯೂ ಬರೆಯಬೇಕಾದ ಪರಿಸ್ಥಿತಿ.
ಅದು ಹೇಗೋ ಒಂದು ಖಾಸಗಿ ಶಾಲೆಯಲ್ಲಿ ಕಾಂಪೌಂಡ್‌ನೊಳಗೆ ಪ್ರವೇಶ ಸಿಕ್ಕಿತು. ರ್ಯಾಪಿಡೆಕ್ಸ್ ಪುಸ್ತಕದ ಸಹಾಯದಿಂದ ಹರುಕು ಮುರುಕು ಇಂಗ್ಲಿಷ್ ಕಲಿತು, ಶಾಲೆಯ ವಾಚ್‌ಮೆನ್ ಜೊತೆಗೆ ಇಂಗ್ಲಿಷ್‌ನಲ್ಲಿ ಅನುಮತಿ ಕೇಳಿದ್ದ. ಇಂಗ್ಲಿಷ್ ಕಿವಿಗೆ ಬಿದ್ದದ್ದೇ ವಾಚ್‌ಮ್ಯಾನ್ ತಕ್ಷಣ ಒಳಗೆ ಬಿಟ್ಟ. ಬರೇ ಕಾಂಪೌಂಡ್ ದಾಟಿದರೆ ಮುಗಿಯುತ್ತದೆಯೆ, ಜಗಲಿ ಹತ್ತಬೇಕು. ಅಲ್ಲಿಂದ ಶಾಲೆಯ ಒಳಗೆ ಪ್ರವೇಶ ಪಡೆಯಬೇಕು. ಅಲ್ಲಿಂದ ಪ್ರಿನ್ಸಿಪಾಲ್ ರೂಂ ಮುಟ್ಟಬೇಕು. ಇಷ್ಟೆಲ್ಲ ಸಾಹಸವನ್ನು ಅದು ಹೇಗೋ ಮಾಡಿ ಮುಗಿಸಿದ. ಅಷ್ಟರಲ್ಲಿ ಪ್ರಿನ್ಸಿಪಾಲ್ ತಮ್ಮ ಅಮೆರಿಕನ್ ಇಂಗ್ಲಿಷ್‌ನಲ್ಲಿ ಒದರಿದರು ‘‘ಮಿ. ಕಾಸಿ....ನಿಮಗೆ ಇಂಗ್ಲಿಷ್ ಬಂದರೆ ಸಾಲದು. ನಿಮಗೆ ಕನ್ನಡ ಗೊತ್ತಿರಬಾರದು. ನಮ್ಮ ಶಾಲೆಯ ಒಬ್ಬ ಎಲ್‌ಕೆಜಿ ವಿದ್ಯಾರ್ಥಿಯ ತಂದೆಗೆ ಕನ್ನಡ ಗೊತ್ತಿದೆ ಎನ್ನುವುದು ನಮ್ಮ ಶಾಲೆಗೆ ಶೇಮ್ ಶೇಮ್ ಪಪ್ಪಿ ಶೇಮ್...ಗೊತ್ತಾ?’’
 ಕಾಸಿ ಹಣೆ ಒರೆಸಿಕೊಂಡು, ತನ್ನ ರ್ಯಾಪಿಡೆಕ್ಸ್ ಇಂಗ್ಲಿಷ್‌ನಲ್ಲಿ ಹೇಳಿದ ‘‘ನನಗೆ ಕನ್ನಡ ಗೊತ್ತೇ ಇಲ್ಲ. ಕನ್ನಡ ಯಾವ ರಾಜ್ಯದ ಭಾಷೆ ಎನ್ನುವುದೂ ಗೊತ್ತಿಲ್ಲ...’’
ಪ್ರಿನ್ಸಿಪಾಲರಿಗೆ ಖುಷಿಯಾಯಿತು. ‘‘ನಿಮ್ಮ ಮಗನನ್ನು ಎಲ್‌ಕೆಜಿಗೆ ಸೇರಿಸಬೇಕಾದರೆ ನೀವು ಪರೀಕ್ಷೆ ಬರೆದು ಪಾಸಾಗಬೇಕು. ಹಾಗಾದಲ್ಲಿ ಮಾತ್ರ...’’
ಎಲ್ಲ ಪರೀಕ್ಷೆಗಳು ಮುಗಿಯಿತು ಎಂದರೆ ಇದೀಗ ಮತ್ತೆ ಹೊಸದಾಗಿ ಪರೀಕ್ಷೆ ಶುರುವಾಗಿದೆಯಲ್ಲ ಎಂದು ಕಾಸಿ ಕಂಗಾಲಾದ. ‘‘ಸಾರ್...ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅಂತ...ನನ್ನ ಮಗನನ್ನು ಸೇರಿಸಬೇಕಾದರೆ ನನಗೆ ಯಾಕೆ ಬರೆ?’’
ಪ್ರಿನ್ಸಿಪಾಲ್ ಕಾಸಿಯ ಹರುಕು ಮುರುಕು ಇಂಗ್ಲಿಷ್‌ನ್ನು ಮೆಚ್ಚಿಕೊಂಡರು. ‘‘ನೋಡಿ...ಪರೀಕ್ಷೆ ನಿಮಗೆ ಮಾತ್ರ ಅಲ್ಲ, ನಿಮ್ಮ ಮಗುವಿಗೂ ಪರೀಕ್ಷೆಯಿದೆ. ಮೊದಲು ನಿಮಗೆ ಪರೀಕ್ಷೆ ಇರತ್ತೆ. ಅದರಲ್ಲಿ ನೀವು ಡಿಸ್ಟಿಂಕ್ಷನ್ ಪಡೆದರೆ, ಮತ್ತೆ ನಿಮ್ಮ ಪತ್ನಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗುತ್ತದೆ. ಅವರೂ ಕೂಡ ಅದರಲ್ಲಿ ಡಿಸ್ಟಿಂಕ್ಷನ್ ಅಂಕ ಪಡೆದರೆ ಮತ್ತೆ ನಿಮ್ಮ ಮಗುವಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ನಿಮ್ಮ ಮಗು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದರೆ ಬಳಿಕ ನೀವು ನೀಡುವ ಸೂಟ್‌ಕೇಸ್ ಭಾರವನ್ನು ತೂಕ ಮಾಡಲಾಗುತ್ತದೆ. ಅದು ನಿಮ್ಮ ಮಗುವಿನ ಭಾರಕ್ಕೆ ಸರಿಯಾಗಿದ್ದರೆ ನಿಮ್ಮ ಮಗುವಿಗೆ ಎಲ್‌ಕೆಜಿಯಲ್ಲಿ ಅಡ್ಮಿಶನ್ ನೀಡಲಾಗುತ್ತದೆ...’’
‘‘ಮಗು ಇನ್ನೂ ಶಾಲೆಗೆ ಸೇರಿಯೇ ಇಲ್ಲ...ಪರೀಕ್ಷೆ ಯಾವುದರ ಬಗ್ಗೆ?’’ ಕಾಸಿ ಅಚ್ಚರಿಯಿಂದ ಕೇಳಿದ.
ಪ್ರಿನ್ಸಿಪಾಲ್ ನಕ್ಕ ‘‘ನಿಮಗಿನ್ನೂ ಇದರ ಬಗ್ಗೆ ಏನೂ ಗೊತ್ತಿಲ್ಲ ಎಂದಾಯಿತು. ಹೀಗೆ ಆದರೆ ನೀವು ಪರೀಕ್ಷೆ ಪಾಸಾದ ಹಾಗೆಯೆ. ನೋಡಿ...ನಿಮ್ಮ ಮಗುವಿಗೆ ಹತ್ತನೆ ತರಗತಿಯ ಹತ್ತು ಪ್ರಶ್ನೆಗಳು, ಪಿಯುಸಿಯ 12 ಪ್ರಶ್ನೆಗಳು ಮತ್ತು ಸ್ನಾತಕೋತ್ತರ ಪದವಿಯ ಎರಡು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ನಿಮ್ಮ ಮಗು ಸಲೀಸಾಗಿ ಉತ್ತರಿಸಿದರೆ ಎಲ್‌ಕೆಜಿಗೆ ಸೇರಿಸಲಾಗುತ್ತದೆ...’’
‘‘ಇನ್ನೂ ಎಲ್‌ಕೆಜಿಗೆ ಸೇರುವ ಮಗುವಿಗೆ ಸ್ನಾತಕೋತ್ತರ ಪದವಿಯ ಪ್ರಶ್ನೆಯೆ?’’ ಕಾಸಿ ಸಿಡಿಲು ಬಡಿದ ಮರದಂತಾದ.
‘‘ಹೌದು ಕಣ್ರೀ...ನಮ್ಮ ಶಾಲೆ ಅತ್ಯುತ್ತಮ ಫಲಿತಾಂಶಕ್ಕೆ ಹೆಸರಾಗಿರುವ ಶಾಲೆ. ಹತ್ತು ರ್ಯಾಂಕುಗಳನ್ನು ಪಡೆದಿರುವ ಶಾಲೆ. ಎಲ್ಲ ಮಕ್ಕಳೂ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿರುವ ಶಾಲೆ...ಆದುದರಿಂದ ಇಷ್ಟೆಲ್ಲ ಪ್ರಶ್ನೆಗಳಿಗೆ ನಿಮ್ಮ ಮಗು ಸರಿಯಾದ ಉತ್ತರ ಬರೆಯಲೇ ಬೇಕು. ಆಗ ಮಾತ್ರ ಸೀಟು ಸಿಗುತ್ತೆ...’’ ಪ್ರಿನ್ಸಿಪಾಲ್ ಸ್ಪಷ್ಟವಾಗಿ ನುಡಿದರು.
‘‘ಅಲ್ಲ ಸಾರ್...ಎಲ್‌ಕೆಜಿಗೆ ಸೇರುವ ಮಗು ಉತ್ತರ ಬರೆಯುವುದು ಹೇಗೆ...?’’ ಕಾಸಿ ಕಂಗಾಲಾಗಿ ಕೇಳಿದ.
‘‘ಅದು ನಮಗೆ ಗೊತ್ತಿಲ್ಲ. ನಮ್ಮ ಕಾನ್ವೆಂಟ್‌ನಲ್ಲಿ ನಿಮಗೆ ಸೀಟು ಸಿಗಬೇಕಾದರೆ ನಿಮ್ಮ ಮಗು ಪಾಸಾಗಲೇ ಬೇಕು. ನೀವು ನಿಮ್ಮ ಮಗುವಿಗೆ ಟ್ಯೂಶನ್ ಕೊಡಿಸಿ. ಪರೀಕ್ಷೆಗೆ ಬೇಕಾದ ತಯಾರಿಯನ್ನು ಮಗುವಿಗೆ ಒಂದು ವರ್ಷ ಇರುವಾಗಲೇ ಮಾಡಿಸಬೇಕು. ಈಗ ಬಂದು ಏನು ಮಾಡುವುದು ಎಂದು ಕೇಳಿದರೆ ಹೇಗೆ? ನಮ್ಮ ಶಾಲೆಯಲ್ಲಿ ಪ್ರವೇಶ ಸಿಗಲಿಲ್ಲ ಎಂದರೆ ಕಸದ ಬುಟ್ಟಿ ಇದ್ದೇ ಇದೆಯಲ್ಲ...’’ ಪ್ರಿನ್ಸಿಪಾಲರು ಆಕ್ರೋಶದಿಂದ ಹೇಳಿದರು.
‘‘ಕಸದ ಬುಟ್ಟಿ....’’ ಕಾಸಿಗೆ ಅರ್ಥವಾಗಲಿಲ್ಲ.
‘‘ಅದೇರಿ...ಸರಕಾರಿ ಶಾಲೆ. ನಮ್ಮ ಶಾಲೆಗಳಲ್ಲಿ ರಿಜೆಕ್ಟ್ ಆಗಿರುವ ಮಾಲುಗಳನ್ನು ಎಸೆಯುವುದಕ್ಕಿರುವ ಕಸದ ಬುಟ್ಟಿಯೇ ಸರಕಾರಿ ಶಾಲೆ. ಅದಕ್ಕೆ ತೆಗೆದುಕೊಂಡು ಹಾಕಿ...’’ ಪ್ರಿನ್ಸಿಪಾಲರು ದಾರಿ ತೋರಿಸಿದರು.
ಕಾಸಿ ಆತಂಕಗೊಂಡ. ‘‘ಸಾರ್...ಮಗುವಿಗೆ ಹೊರಗೆ ಟ್ಯೂಶನ್ ಕೊಡೋದಾದ್ರೆ....ಶಾಲೆಗೆ ಯಾಕೆ ಸೇರಿಸೋದು...?’’
‘‘ನೋಡ್ರಿ...ದಡ್ಡ ಮಕ್ಕಳನ್ನು ನಾವು ಸೇರಿಸಿಕೊಳ್ಳಲ್ಲ. ಕಲಿತ ಮಕ್ಕಳನ್ನು ಮಾತ್ರ ತೆಗೆದುಕೊಳ್ಳೋದು. ನಮ್ಮ ಶಾಲೆಯ ಸರ್ಟಿಫಿಕೇಟ್ ಸಿಗಬೇಕಾದರೆ ನಿಮ್ಮ ಮಗು ಈಗಾಗಲೇ ಎಲ್ಲ ತಿಳ್ಕೊಂಡಿರಬೇಕು....ಇಂಗ್ಲಿಷ್ ಮಾಧ್ಯಮ ಎಂದರೆ ಸುಮ್ಮಗಾಗಲ್ಲ....ಅಂದ ಹಾಗೆ...ಮಗು ಪ್ರವೇಶ ಪರೀಕ್ಷೆಯಲ್ಲಿ ಪಾಸಾದರೂ ನೀವು ಸೂಟ್‌ಕೇಸ್ ಪರೀಕ್ಷೆಯಲ್ಲಿ ಪಾಸಾಗಬೇಕಾಗುತ್ತದೆ...’’
ಕಾಸಿ ನಿಂತ ನೆಲ ಕಂಪಿಸಿತು ‘‘ಸಾರ್ ಅದ್ಯಾವುದು...ಸೂಟ್‌ಕೇಸ್ ಪರೀಕ್ಷೆ...’’
ಪ್ರಿನ್ಸಿಪಾಲರು ವಿವರಿಸತೊಡಗಿದರು ‘‘ನೋಡ್ರಿ...ನಮ್ಮ ತಕ್ಕಡಿಯೊಂದಿದೆ. ಅದರಲ್ಲಿ ನೀವು, ನಿಮ್ಮ ಹೆಂಡತಿ ಮತ್ತು ನಿಮ್ಮ ಮಗು ಕುಳಿತುಕೊಳ್ಳಬೇಕು. ಮತ್ತು ಇನ್ನೊಂದು ತಟ್ಟೆಯಲ್ಲಿ ನಿಮ್ಮ ಭಾರದ ಸೂಟ್‌ಕೇಸ್ ಇಡಬೇಕು...’’
‘‘ಸೂಟ್‌ಕೇಸ್‌ನ್ನು ಏನು ಮಾಡುತ್ತೀರಿ ಸಾರ್...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಸೂಟ್‌ಕೇಸನ್ನು ನಿಮಗೇ ವಾಪಾಸ್ ಕೊಡುತ್ತೇವೆ. ಅದರೊಳಗಿರುವ ಹಣವನ್ನು ನಾವು ತೆಗೆದುಕೊಳ್ಳುತ್ತೇವೆ...’’ ಪ್ರಿನ್ಸಿಪಾಲರು ವಿವರಿಸಿದರು.
‘‘ಅಂದರೆ ಸೂಟ್‌ಕೇಸ್‌ನೊಳಗೆ ನಮ್ಮಷ್ಟು ಭಾರ ತೂಗುವ ನೋಟುಗಳನ್ನು ಇಡಬೇಕೋ...’’ ಕಾಸಿ ಒಮ್ಮೆಲೆ ಎದ್ದು ನಿಂತ.
‘‘ಹೂಂ...ಎಲ್ಲವೂ ಒಂದು ಸಾವಿರ ರೂಪಾಯಿಯ ನೋಟಾಗಿರಬೇಕು....’’ ಪ್ರಿನ್ಸಿಪಾಲರು ಒತ್ತಿ ಹೇಳಿದರು.
ಕಾಸಿ ಎದ್ದು ನಿಂತ ‘‘ಸಾರ್ ಬರುತ್ತೇನೆ....ನಮಸ್ಕಾರ’’ ಅಚ್ಚ ಕನ್ನಡದಲ್ಲಿ ಹೇಳಿದ.
ಪ್ರಿನ್ಸಿಪಾಲ್ ಸಿಟ್ಟಾದರು ‘‘ಏನ್ರೀ...ನಿಮಗೆ ಕನ್ನಡ ಬರುತ್ತೆ. ನಿಮ್ಮ ಮಗುವನ್ನು ಸೇರಿಸಿಕೊಳ್ಳೋದಕ್ಕೆ ಆಗಲ್ಲ...ಗೆಟ್ ಔಟ್...’’
ಕಾಸಿ ಹೇಳಿದ ‘‘ಹೌದು. ನನಗೆ ಕನ್ನಡ ಬರುತ್ತೆ. ಈವರೆಗೆ ನನಗೆ ಕನ್ನಡ ಬರದ್ದಕ್ಕೆ ನನ್ನ ಬಗ್ಗೆ ಕೀಳರಿಮೆ ಇತ್ತು. ಇವತ್ತು ನಿಮ್ಮನ್ನು ನೋಡಿದ ಬಳಿಕ ನನಗೆ ಕನ್ನಡ ಬರತ್ತೆ, ಇಂಗ್ಲಿಷ್ ಬರಲ್ಲ ಎಂದು ಹೆಮ್ಮೆಯಾಗತ್ತೆ...’’ ಎಂದು ಅಂಗಳ ತಲುಪಿದ. ಅಲ್ಲಿ ನೋಡಿದರೆ ಅಂಗಳದಲ್ಲಿ ಬಿಸಿಲಲ್ಲಿ ಒಬ್ಬ ಬಡಪಾಯಿ ಮಹಿಳೆ ಭಿಕ್ಷೆ ಬೇಡುತ್ತಿತ್ತು. ‘‘ಏನಮ್ಮ...ಈ ಬಿಸಿಲಲ್ಲಿ ಕೂತು ಭಿಕ್ಷೆ ಬೇಡುತ್ತೀಯಲ್ಲ...’’ ಕಾಸಿ ಕೇಳಿದ.
‘‘ಮೊನ್ನೆ ಮೊನ್ನೆ ಆ ಶಾಲೆಯ ಜಗಳಿಯಲ್ಲಿ ಕೂತು ಭಿಕ್ಷೆ ಬೇಡುತ್ತಿದ್ದೆ ಕಣಪ್ಪ....ಇದೀಗ ಸುಪ್ರೀಂಕೋರ್ಟ್ ಆದೇಶ ಆಗಿದೆ. ಜಗಳಿಯಲ್ಲೂ ಕೂರಬಾರದು. ಬೇಕಾದರೆ ಅಂಗಳದಲ್ಲಿ ಕೂತು ಭಿಕ್ಷೆ ಬೇಡಬಹುದು ಅಂತ...’’ ಮಹಿಳೆ ಹೇಳಿತು.
‘‘ಯಾರಮ್ಮ ನೀನು?’’ ಕಾಸಿ ಕೇಳಿದ.
‘‘ಇನ್ಯಾರೂ ಅಂತ ತಿಳ್ಕಂಡೆ? ನಾನಪ್ಪ ನಿನ್ನ ತಾಯಿ ಕನ್ನಡಮ್ಮ....’’

Sunday, April 13, 2014

ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?

 ವಾರ್ತಾಭಾರತಿ ದೈನಿಕದರವಿವಾರ - ಏಪ್ರಿಲ್ -13-2014ರ ಸಂಚಿಕೆಯಲ್ಲಿ  ಪ್ರಕಟವಾದ ಬುಡಬುಡಿಕೆ 

ವಿಶೇಷ ಸುದ್ದಿ ಏನು ಇಲ್ಲ ಎಂದು ಸಂಪಾದಕೀಯ ವಿಭಾಗದಲ್ಲಿ ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿ ಕುಳಿತಿರಲಾಗಿ, ಅದೇ ಹೊತ್ತಿಗೆ ಸಂಪಾದಕರ ಕರೆಯೂ ಮರಣದ ಗಂಟೆಯಂತೆ ಬಾರಿಸಿತು ‘‘ಏನ್ರೀ...ಡೆಡ್ ಲೈನ್ ಹೊತ್ತಾಯಿತು...ಇನ್ನೂ ಲೀಡ್ ಸುದ್ದಿ ಬಂದಿಲ್ಲ....’’
‘‘ವಿಶೇಷ ಸುದ್ದಿ ಏನೂ ಇಲ್ಲ ಸಾರ್....ಇಂಟರ್ಯೂ ಮಾಡೋಣ ಅಂದ್ರೆ ಚುನಾವಣಾ ಆಯೋಗ ಬಿಡ್ತಾ ಇಲ್ಲ ಸಾರ್....’’ ಕಾಸಿ ತಡಬಡಿಸಿ ಉತ್ತರಿಸಿದ.
‘‘ಗುಪ್ತಚರ ಇಲಾಖೆಗೆ ಫೋನ್ ಮಾಡ್ರಿ... ಯಾಸಿನ್ ಭಟ್ಕಳನ ಕುರಿತಂತೆ ಏನಾದ್ರೂ ಸುದ್ದಿ ಇದ್ದೇ ಇರತ್ತೇ...ಅದನ್ನು ಅವರು ಗುಪ್ತವಾಗಿ ನಿಮ್ಮಿಂದಿಗೆ ಹಂಚಿಕೊಳ್ಳುತ್ತಾರೆ....’’ ಸಂಪಾದಕರು ಸಲಹೆ ನೀಡಿದ್ದೇ...ಪತ್ರಕರ್ತ ಎಂಜಲು ಕಾಸಿ ಗುಪ್ತಚರ ಇಲಾಖೆಗೆ ಫೋನ್ ಮಾಡಿದ.
ಅತ್ತಲಿಂದ ಮಾತು ಬಾಂಬಿನಂತೆ ತೂರಿ ಬಂತು ‘‘ಹಲೋ...ಇಂಟೆಲಿಜೆಂಟ್ಸ್ ವಿಭಾಗ...ಗುಪ್ತ್ ಚರ ಇಲಾಖೆ...ಯಾಸಿನ್ ಭಟ್ಕಳ ಮಾತಾಡ್ತಾ ಇದ್ದೇನೆ....ನಿಮಗೇನು ಬೇಕು...’’
ಕಾಸಿಯ ಮೈಯೆಲ್ಲ ಕಂಪಿಸಿತು ‘‘ಸಾರ್...ನೀವು ಯಾಸಿನ್ ಭಟ್ಕಳ ಅವ್ರಾ...ನೀವು ಗುಪ್ತಚರ ಇಲಾಖೆಯಲ್ಲಿ ಕುಳಿತು ಅದೇನು ಮಾಡ್ತಾ ಇದ್ದೀರಿ ಸಾರ್...’’ ಅಚ್ಚರಿಯಿಂದ ಕೇಳಿದ.
‘‘ನಾನು ಗುಪ್ತಚರ ಇಲಾಖೆಯ ಪತ್ರಿಕಾವಕ್ತಾರ ಕಣ್ರೀ....ಎಲ್ಲ ಪತ್ರಿಕೆಗಳಿಗೆ ಗುಪ್ತವಾಗಿ ನನ್ನ ಕುರಿತ ಸುದ್ದಿಗಳನ್ನು ಹಂಚುವುದೇ ನನ್ನ ಕೆಲಸ. ಇತ್ತೀಚೆಗೆ ಸುದ್ದಿಸಂಸ್ಥೆಗಳೆಲ್ಲ ಸುದ್ದಿಗಳಿಲ್ಲದೆ ಬರಗಾಲ ಎದುರಿಸುತ್ತಿದೆ. ಆದುದರಿಂದ ಸರಕಾರವೇ ನನ್ನನ್ನು ಪ್ರತಿ ದಿನ ಮುಖ್ಯ ಸುದ್ದಿಯನ್ನು ಕೊಡಲು ಗುಪ್ತಚರ ಇಲಾಖೆಯಲ್ಲಿ ನೇಮಕ ಮಾಡಿದೆ...ಲೀಡ್ ಸುದ್ದಿ ಇಲ್ಲದೆ ಕಂಗಾಲಾಗಿರುವ ಪತ್ರಿಕೆಗಳಿಗೆ ಸುದ್ದಿ ಹಂಚುವುದೇ ನನ್ನ ಕೆಲಸ ಕಣ್ರೀ...ಹೇಳಿ...ನಿಮಗೆ ಯಾವ ಥರ ಸುದ್ದಿ ಬೇಕು? ಲೀಡ್ ಸುದ್ದಿ ಬೇಕೋ...ಚುನಾವಣಾ ಸುದ್ದಿ ಬೇಕೋ...ಹವಾಮಾನ ಸುದ್ದಿ ಬೇಕೋ...ಒಳಗಿನ ಪುಟಕ್ಕೆ ತುಂಬಿಸಲು ಸುದ್ದಿ ಬೇಕೋ...ಮ್ಯಾಗಸಿನ್‌ಗೆ ವರ್ಣರಂಜಿತ ಲೇಖನ ಬೇಕೋ...ಅದೇನೇ ಬೇಕಾದರೂ ನಾನು ಕೊಡುತ್ತೇನೆ...’’
ಕಾಸಿಯ ಹೆಗಲ ಮೇಲಿರುವ ಭಾರವೆಲ್ಲ ಇಳಿದಂತಾಯಿತು ‘‘ಸಾರ್...ಫ್ರಂಟ್ ಪೇಜ್‌ಗೆ ಮುಖ್ಯ ಸುದ್ದಿ ಇಲ್ಲಾ ಸಾರ್...ಏನಾದರೂ...ಕೊಡಿ...’’
‘‘ಇದು ಮೂಲವ್ಯಾಧಿಯ ಸುದ್ದಿ...ಆದುದರಿಂದ ಸ್ವಲ್ಪ ಜಾಗರೂಕತೆಯಿಂದ ಮೂಲಗಳಿಂದ ಎಂದು ಬಳಸಿ ಈ ಸುದ್ದಿಯನ್ನು ನೀವು ನೀಡಬೇಕಾಗುತ್ತದೆ’’ ಯಾಸಿನ್ ಭಟ್ಕಳ ಹೇಳಿದ.
‘‘ಖಂಡಿತಾ ಸಾರ್...ನಾವು ಮೂಲ ವ್ಯಾಧಿ ಸುದ್ದಿಗಳನ್ನು ಮಾತ್ರ ಹಾಕೋದು ಸಾರ್. ಮೂಲಗಳಿಂದ ತಿಳಿದು ಬಂದಿದೆ, ಮೂಲಗಳು ತಿಳಿಸಿವೆ, ಮೂಲದಿಂದ ಬಂದಿದೆ...ಮುಖ್ಯವಾಗಿ ನಮಗೆ ಗುಪ್ತಚರ ಇಲಾಖೆಯ ಮೂಲವ್ಯಾಧಿ ಎಂದರೆ ತುಂಬಾ ಇಷ್ಟ ಸಾರ್...’’ ಕಾಸಿ ಹೇಳಿದ.
‘‘ಸರಿ ಹಾಗಾದರೆ ಬರೆದುಕೊಳ್ಳಿ...ನಾಗಸಾಕಿ, ಹಿರೋಷಿಮಾ ಸ್ಫೋಟದಲ್ಲಿ ತನ್ನ ಕೈವಾಡ ಇರುವುದು ನಿಜ ಎನ್ನುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ. ಈ ಸ್ಫೋಟ ನಡೆಸುವ ಒಂದು ದಿನದ ಹಿಂದೆ ಉಸಾಮ ಬಿನ್ ಜೊತೆಗೆ ಮಾತುಕತೆ ನಡೆಸಿದ ಭಟ್ಕಳ್, ಅಂತಹದೇ ಸ್ಫೋಟವನ್ನು ಗುಜರಾತ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ....’’
‘‘ಸಾರ್...ಅದ್ಭುತ ಸುದ್ದಿಸಾರ್...ಇದು ನಿಜವಾ ಸಾರ್...?’’ ಕಾಸಿ ರೋಮಾಂಚನದಿಂದ ಕೇಳಿದ.
‘‘ನಿಮಗೆ ನಿಜ ಬೇಕಾ, ಸುದ್ದಿ ಬೇಕಾ?’’ ಆ ಕಡೆಯಿಂದ ಭಟ್ಕಳ್ ಕೇಳಿದ. ‘‘ನಿಜ ಯಾರಿಗೆ ಬೇಕು ಸಾರ್? ನಮಗೆ ಸುದ್ದಿ ಬೇಕು...ನಿಮ್ಮ ಕುರಿತಂತೆ ಇನ್ನಷ್ಟು ಗುಪ್ತಚರ ಮೂಲಗಳನ್ನು ನಮ್ಮ ಕಡೆಗೆ ಬಿಟ್ಟುಬಿಡಿ ಸಾರ್...ನಾವು ಬದ್ಕೋತೀವಿ...’’ ಕಾಸಿ ಅಂಗಲಾಚಿದ.
‘‘ಇಂದು ವಾತಾವರಣ ತೀವ್ರ ಬಿಸಿಯೇರಿದ್ದು, ಇದರಲ್ಲಿ ತನ್ನ ಕೈವಾಡವಿರುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಆ ಕಡೆಯಿಂದ ಭಟ್ಕಳ್ ಹೇಳಿದ.
‘‘ಸಾರ್...ಇದು ಹವಾಮಾನ ವರದಿ ಕಾಲಂನಲ್ಲಿ ಹಾಕ್ಕೋಬಹುದು ಸಾರ್...ನಮಗೆ ಫ್ರಂಟ್ ಪೇಜ್ ಸುದ್ದಿ ಬೇಕು ಸಾರ್...’’
‘‘ನೋಡಿ...ನೀವು ಪಿಟಿಐ ಸಹಿತ ವಿವಿಧ ಸುದ್ದಿ ಸಂಸ್ಥೆಗಳಿಗೆ ಸದಸ್ಯರಾಗುವಂತೆ ನಿಮ್ಮ ಹತ್ತಿರದ ಆರೆಸ್ಸೆಸ್ ಕಚೇರಿಗೆ ಸದಸ್ಯರಾಗಿ ಅಥವಾ ನಿಮ್ಮ ಪತ್ರಿಕೆಗಳ ಹೆಸರನ್ನು ಅಲ್ಲಿ ನಮೂದಿಸಿ. ನಾವು ಎಲ್ಲರಿಗೂ ಕರೆದು ಸುದ್ದಿಗಳನ್ನು ಕೊಡಲು ಸಾಧ್ಯವಿಲ್ಲ. ಆರೆಸ್ಸೆಸ್ ಕಚೇರಿಯಿಂದಲೇ ಜೆರಾಕ್ಸ್ ಕಾಪಿಗಳು ಬೇಕಾದಷ್ಟು ಸಿಗುತ್ತವೆ. ಅಲ್ಲಿಂದಲೇ ಸಿಗುತ್ತದೆ...ನೀವು ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ....’’
‘‘ಆದರೆ ಆರೆಸ್ಸೆಸ್ ಕಚೇರಿಯವರು ಕೊಡೋದಕ್ಕಿಂತ ಇಂಟೆಲಿಜೆನ್ಸ್ ಕಚೇರಿ ಕೊಟ್ಟರೇನೇ ಅದಕ್ಕೆ ವ್ಯಾಲ್ಯೂ ಜಾಸ್ತಿ ಸಾರ್...’’ ಕಾಸಿ ಫೋನ್‌ನಲ್ಲೇ ಹಲ್ಲು ಕಿರಿದ.
‘‘ಯಾರು ಕೊಟ್ರೆ ನಿಮಗೇನ್ರೀ...ನೀವು ಮೂಲವ್ಯಾಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ....ಗುಪ್ತಚರ ಮೂಲಗಳು ಎಂದೇ ಬರೆಯಿರಿ. ‘‘ಮೋದಿಯ ವಿರುದ್ಧ ಸೊಳ್ಳೆಗಳ ಮೂಲಕ ಮಾರಕ ರೋಗವನ್ನು ಹಂಚಿ, ಹತ್ಯೆಗೆ ಯಾಸಿನ್ ಭಟ್ಕಳ ಸಂಚು ರೂಪಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಬರೆಯಿರಿ....’’
‘‘ಸಾರ್...ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದು ಕಣ್ರೀ...ಆ ಸೊಳ್ಳೆಗಳಿಗೆ ಇಂಡಿಯನ್ ಮುಜಾಹಿದ್‌ನ ಮೂಲಕ ತರಬೇತಿ ಕೊಡಿಸಿ, ಅದನ್ನು ಮೋದಿಯ ಬಳಿಗೆ ಕಳುಹಿಸಿ ಅದರಿಂದ ಕಚ್ಚಿಸುವ ಒಂದು ದೊಡ್ಡ ಸಂಚನ್ನು ಯಾಸಿನ್ ಭಟ್ಕಳ್ ರೂಪಿಸಿದ್ದ. ಭಟ್ಕಳ್ ಬಂಧನದಿಂದ ಅದು ವಿಫಲವಾಯಿತು ಎಂದು ಗುಪ್ತಚರ ಮೂಲಗಳ ಅಧಿಕಾರಿಗಳು ತಿಳಿಸಿದ್ದಾರೆ....’’
‘‘ಸಾರ್... ಯಾಸಿನ್ ಭಟ್ಕಳ್ ಬಂಧನದ ಬಳಿಕ ಆ ಸೊಳ್ಳೆಗಳು ಏನಾಯಿತು ಸಾರ್? ಅವುಗಳನ್ನು ಬಂಧಿಸಲಿಲ್ಲವೆ?’’
‘‘ಅವುಗಳ ಹುಡುಕಾಟ ತೀವ್ರವಾಗಿದೆ. ಕೆಲವು ಸೊಳ್ಳೆಗಳು ತಪ್ಪಿಸಿಕೊಂಡು ಪಾಕಿಸ್ತಾನ ಸೇರಿವೆ. ಇನ್ನು ಕೆಲವು ಭಟ್ಕಳದಲ್ಲಿ ನೆಲೆಯೂರಿರುವ ಸಾಧ್ಯತೆ ಇದೆ. ಅದನ್ನು ಬಂಧಿ ಸಲು ವ್ಯಾಪಕ ಕಾರ್ಯಾಚರಣೆ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಭಟ್ಕಳ್ ಆ ಕಡೆಯಿಂದ ಸ್ಕೂಪ್ ಸುದ್ದಿಯನ್ನು ಹೇಳಿದ.
ಕಾಸಿಗೆ ತುಂಬಾ ಖುಷಿಯಾಯಿತು ‘‘ಸಾರ್...ಒಂದಿಷ್ಟು ಕೃಷಿ ಮಾಹಿತಿಯನ್ನು ನೀಡಿ ಸಾರ್...’’

‘‘ಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ರೋಗ ಬರಲು ಯಾಸಿನ್ ಭಟ್ಕಳ್ ರೂಪಿಸಿದ ಸಂಚೇ ಕಾರಣ ಎನ್ನುವುದು ಯಾಸಿನ್ ಭಟ್ಕಳ್ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...ಟೊಮೆಟೋ ಬೆಲೆ ಇಳಿಯುವುದಕ್ಕಾಗಿ ಭಟ್ಕಳ್ ಪಾಕಿಸ್ತಾನಿ ಕೃಷಿಕರ ಜೊತೆಗೆ ಸೇರಿ ಸಂಚು ರೂಪಿಸಿದ್ದು, ಇದರಿಂದಾಗಿ ಕೃಷಿಕರ ಮೂಲಕ ಸರಕಾರದ ವಿರುದ್ಧ ದಂಗೆ ಎಬ್ಬಿಸುವುದು ಭಟ್ಕಳ್ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ...’’ ಕಾಸಿ ಎಲ್ಲವನ್ನೂ ನೋಟ್ ಮಾಡಿಕೊಂಡ. ‘‘ಸಾರ್...ಈ ತಾವು ಪತ್ರಿಕೋದ್ಯಮದಲ್ಲಿ ಯಾವುದಾದರೂ ಡಿಗ್ರಿ ಮಾಡಿದ್ದೀರಾ...’’ ಕಾಸಿ ಅನಗತ್ಯ ಪ್ರಶ್ನೆಯೊಂದನ್ನು ಕೇಳಿದ.
‘‘ಹಾಗೇನಿಲ್ಲ ಕಣ್ರೀ...ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರಿಂದ ಇಂತಹ ಮೂಲವ್ಯಾಧಿ ಸುದ್ದಿಗಳು ಸಿಗಲು ಸಾಧ್ಯವಿಲ್ಲ. ಮುಖ್ಯವಾಗಿ ಮೂಲವ್ಯಾಧಿ ಪತ್ರಿಕೋದ್ಯಮದ ಬಗ್ಗೆ ಅಪಾರ ಅನುಭವ ಇರಬೇಕಾಗುತ್ತದೆ. ಗುಪ್ತಚರ ಇಲಾಖೆಗಳ ಮೂಲಗಳನ್ನು ಹುಡುಕಿಕೊಂಡು ಅಲ್ಲಿರುವ ಕೆಲವು ಜನಿವಾರದ ಮೂಲಗಳನ್ನು ಪತ್ತೆ ಹಚ್ಚಿ, ಅವರಿಂದ ಕೆಲವು ದೊಗಳೆ ಚಡ್ಡಿ ಮೂಲಗಳನ್ನು ಗುರುತಿಸಿ, ಆ ಚಡ್ಡಿಯೊಳಗೆ ಸುದ್ದಿಗಳನ್ನು ತಮ್ಮದಾಗಿಸಿಕೊಳ್ಳಲು ಅಪಾರ ಅನುಭವ ಬೇಕು ಕಣ್ರೀ...ಯಾವುದಕ್ಕೂ ನೀವು ನಾಳೆಯಿಂದ ಕಚೇರಿಯ ಪಕ್ಕದಲ್ಲಿರುವ ಶಾಖೆಗೆ ಬನ್ನಿ. ಅಲ್ಲಿ ನಾನೇ ನಿಮಗೆ ಇದರ ಕುರಿತಂತೆ ಪಾಠ ಹೇಳಿಕೊಡುತ್ತೇನೆ....’’ ಎಂದದ್ದೇ ಆ ಕಡೆಯಿಂದ ಫೋನ್ ಕಡಿಯಿತು.
‘‘ಸಾರ್...ಮುಖಪುಟಕ್ಕೆ ಲೀಡ್ ಸುದ್ದಿ ಸಿಕ್ಕಿತು...’’ ಎಂದು ಎಂಜಲು ಕಾಸಿ ಸಂಪಾದಕರ ಕೊಠಡಿಯೆಡೆಗೆ ಧಾವಿಸಿದ.

Sunday, April 6, 2014

ನೀಲೇಕಣಿಯವರ ಹೆಸರಲ್ಲಿ ನಾಟಕ ಬರೀತೀನಿ ಕಣ್ರಿ....

ವಾರ್ತಾ ಭಾರತಿ ದೈನಿಕದ ರವಿವಾರ - ಏಪ್ರಿಲ್ -06-2014 ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

ಮಧ್ಯಾಹ್ನದ ಬಿಸಿಲು ಜಾಸ್ತಿಯಾಯಿತು ಎಂದು ಪತ್ರಕರ್ತ ಎಂಜಲು ಕಾಸಿ ಮನೆಯಲ್ಲಿ ತಣ್ಣಗೆ ಮಲಗಿದ್ದ. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಾಗಿ ಎದ್ದು ಬಾಗಿಲು ತೆರೆದರೆ ಗಿರೀಶ್ ಕಾರ್ನಾಡ್ ನಿಂತ್ಕೊಂಡಿದ್ದಾರೆ. ‘‘ಸಾರ್ ನೀವಾ....?’’ ಎಂದು ಕಾಸಿ ರೋಮಾಂಚನಗೊಂಡ.
‘‘ಅರೇ ಕಾಸಿಯವರೇ, ನಿಮ್ಮ ಮನೇನಾ ಇದು... ನಿಮ್ಮಲ್ಲಿ ಎಷ್ಟು ಜನ ಇದ್ದಾರೆ...’’ ಎಂದು ಕೇಳಿದರು.
ಕಾಸಿಗೆ ಗೊಂದಲವಾಯಿತು. ತಮ್ಮ ನಾಟಕಕ್ಕೆ ಜನ ಸೇರಿಸುವುದಕ್ಕಾಗಿ ಬಂದಿದ್ದಾರೆಯೇ ಎಂಬ ಅನುಮಾನದಿಂದ ‘‘ಸಾರ್...ನಾನು ನನ್ನ ಹೆಂಡತಿ ಸೂಸಿ ಸಾರ್. ಇಬ್ಬರು ಬರ್ತೇವೆ ಸಾರ್...ನಾಟಕ ಎಲ್ಲಿ ಇಟ್ಟಿದ್ದೀರಿ ಸಾರ್?’’ ಕೇಳಿದ.
‘‘ನಾಟಕ ಅಲ್ಲ ಕಣ್ರೀ...ಮತ ಕೇಳೋದಕ್ಕೆ ಬಂದಿದ್ದೇನೆ...’’ ಎಂದು ಕಾಸಿಗೆ ಶಾಕ್ ಕೊಟ್ಟು ಬಿಟ್ಟರು.
‘‘ಸಾರ್ ಓಟಿಗೆ ನಿಂತಿದ್ದೀರಾ...?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಇಲ್ಲ ಕಣ್ರೀ...ನೀಲೇಕಣಿಯವರ ಪರವಾಗಿ ಓಟಿಗೆ ಇಳಿದಿದ್ದೇನೆ...’’ ಕಾರ್ನಾಡ್ ಸ್ಪಷ್ಟೀಕರಣ ನೀಡಿದರು.
ಕಾಸಿ ಮತ್ತೂ ರೋಮಾಂಚನಗೊಂಡ ‘‘ಹೌದಾ ಸಾರ್...ಶೂಟಿಂಗ್ ಇಲ್ವಾ ಸಾರ್...ಬಾಲಿವುಡ್‌ನಲ್ಲಿ ಇತ್ತೀಚೆಗೆ ನೀವು ಬಿಸಿ ನಟರಲ್ವಾ ಸಾರ್. ಅದನ್ನು ಬಿಟ್ಟು ಶೂಟಿಂಗ್‌ಗೆ ಬಂದಿದ್ದೀರಾ...’’
 ‘‘ನಾನೀಗ ಬಾಲಿವುಡ್‌ನಲ್ಲಿ ತುಂಬಾ ತುಂಬಾ ಬಿಸಿ ಕಣ್ರೀ...ಸಲ್ಮಾನ್‌ಖಾನ್ ಜೊತೆಗೆ ‘ಏಕ್ ಥಾ ಟೈಗರ್’ನಲ್ಲಿ ನಟಿಸಿದ ಬಳಿಕ ನನಗೆ ಸಿಕ್ಕಾಬಟ್ಟೆ ಡಿಮ್ಯಾಂಡ್ ಬರ್ತಾ ಇದೆ. ಸಲ್ಮಾನ್ ಖಾನ್ ಬದಲಿಗೆ ನನ್ನನ್ನೇ ಹಾಕೋಕೆ ನಿರ್ಮಾಪಕರು ರೆಡಿ ಇದ್ದಾರೆ. ಆದರೆ ಶರ್ಟ್ ಬಿಚ್ಚಿ ಎದೆ ತೋರಿಸೋದಕ್ಕೆ ತುಸು ನಾಚಿಕೆ ಕಣ್ರೀ...ಆಫರ್‌ನೆಲ್ಲ ಸಲ್ಮಾನ್‌ಖಾನ್‌ಗೆ ಬಿಟ್ಟುಕೊಟ್ಟೆ...ಇದೀಗ ನೀಲೇಕಣಿಯವರು ಕೆಲವು ದಿನದ ಕಾಲ್‌ಶೀಟ್ ಕೇಳಿದ್ದಾರೆ. ಆದ್ದರಿಂದ ನನ್ನ ಶೂಟಿಂಗನ್ನು ಬಾಲಿವುಡ್‌ನಿಂದ ಬೆಂಗಳೂರಿಗೆ ವರ್ಗಾಯಿಸಿದ್ದೇನೆ...’’
 ಕಾಸಿಗೆ ತಕ್ಷಣ ತಾನು ಶರ್ಟ್ ಹಾಕಿಕೊಳ್ಳದೇ ಇರುವುದು ನೆನಪಿಗೆ ಬಂತು. ಒಳ ಹೋದವನೇ ಶರ್ಟ್ ಹಾಕಿಕೊಂಡು ಬಂದು ಕಾರ್ನಾಡರ ಇಂಟರ್ಯೂ ಮಾಡಲು ಶುರು ಮಾಡಿದ.
‘‘ಸಾರ್...ಬಾಲಿವುಡ್‌ನಲ್ಲಿ ನಿಮ್ಮ ರೆಮ್ಯುನರೇಷನ್ ತುಂಬಾ ಜಾಸ್ತಿಯಾಗಿದೆಯಲ್ಲ... ನಿಮ್ಮ ಕಾಲ್‌ಶೀಟ್‌ನ ರೇಟ್ ಎಷ್ಟು ಸಾರ್?’’ ಕಾಸಿ ಕೇಳಿ ಬಿಟ್ಟ.
ಕಾರ್ನಾಡ್‌ಗೆ ಮುಜುಗರವಾಯಿತು ‘‘ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಕಣ್ರೀ...ಒಟ್ಟಾರೆಯಾಗಿ ನೀಲೇಕಣಿಯವರು ಗೆಲ್ಲಬೇಕು. ಅದಕ್ಕಾಗಿ ಪ್ರಚಾರಕ್ಕಿಳಿದಿದ್ದೇನೆ...’’
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ನೀಲೇಕಣಿ ಯವರನ್ನೇ ಯಾಕೆ ಆರಿಸಿದ್ರಿ. ಅವರಲ್ಲಿ ಅದೇನು ವೈಶಿಷ್ಟವನ್ನು ಕಂಡ್ರೀ ಸಾರ್?’’
‘‘ನೋಡಿ ಕಾಸಿಯವ್ರೇ...ನನಗೆ ತುಘಲಕ್ ನಾಟಕ ಬರೆಯಲು ಸ್ಫೂರ್ತಿಯೇ ನೀಲೇಕಣಿಯವರು. ಅವರಿಲ್ಲದಿದ್ದರೆ ನಾನು ತುಘಲಕ್ ನಾಟಕವನ್ನು ಬರೆಯುತ್ತಿರಲಿಲ್ಲ’’
ಕಾಸಿಗೆ ಗೊಂದಲವಾಯಿತು ‘‘ಅದು ಹೇಗೆ ಸಾರ್?’’ ಕೇಳಿದ.
‘‘ನೋಡ್ರಿ...ತುಘಲಕ್ ಏನು ಮಾಡಿದ? ಚಿನ್ನ, ತಾಮ್ರದ ನಾಣ್ಯದ ಬದಲಿಗೆ ಚರ್ಮದ ನಾಣ್ಯಗಳನ್ನು ಜಾರಿಗೆ ತಂದ. ಒಂದು ಕ್ರಾಂತಿಯನ್ನೇ ಮಾಡಿದ. ಇದೀಗ ನೀಲೇಕಣಿಯವರು ಏನು ಮಾಡಿದರು? ರೇಷನ್ ಕಾರ್ಡ್ ಬದಲು ಆಧಾರ್‌ಕಾರ್ಡ್ ತಂದರು. ತುಘಲಕ್‌ನ ಮುಂದಾಲೋಚನೆ ನಮ್ಮ ನೀಲೇಕಣಿಯವರಿಗಿದೆ...’’ ಕಾರ್ನಾಡರು ವಿವರಿಸಿದರು.
ಕಾಸಿಗೂ ಹೌದೆನಿಸಿತು ‘‘ಆದರೆ ತುಘಲಕ್‌ನ ಚರ್ಮದ ನಾಣ್ಯಗಳನ್ನೆಲ್ಲ ತೆಂಗಿನ ಬುಡಕ್ಕೆ ಗೊಬ್ಬರವಾಗಿ ಬಳಸಲಾಯಿತಂತಲ್ಲ ಸಾರ್...’’ ಕಾಸಿ ಅನುಮಾನವೊಂದನ್ನು ಮುಂದಿಟ್ಟ.
‘‘ಬಳಸಿದರೇನಾಯಿತು...ಒಳ್ಳೆಯದೇ ಆಯಿತು. ತುಘಲಕ್‌ನ ರಾಜ್ಯದಲ್ಲಿ ತೆಂಗಿನ ಗಿಡದ ಫಸಲು ಜಾಸ್ತಿಯಾಯಿತು. ಮರಗಳು ಹೆಚ್ಚು ಹೆಚ್ಚು ಫಲವನ್ನು ಕೊಟ್ಟ ಕಾರಣ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಯಿತು..’’ ಕಾರ್ನಾಡ್ ಇತಿಹಾಸದ ಸೂಕ್ಷ್ಮಗಳನ್ನು ವಿವರಿಸಿದರು.
ಕಾಸಿ ಮತ್ತೆ ರೋಮಾಂಚನಗೊಂಡ. ತುಘಲಕ್‌ನ ಕಾಲದ ಈ ಘಟನೆಯನ್ನು ಯಾರೂ ವಿವರಿಸಿರಲಿಲ್ಲ. ‘‘ಸಾರ್...ಅಂದರೆ ನೀಲೇಕಣಿಯವರು ಮಾಡಿಸಿಕೊಟ್ಟಿರುವ ಆಧಾರ್‌ಕಾರ್ಡ್‌ಗಳಿಗೆ ತೆಂಗಿನ ಮರದ ಬುಡವೇ ಗತಿಯಾ?’’
ಕಾರ್ನಾಡರು ಸಿಟ್ಟಾದರು ‘‘ಅದರಿಂದ ಏನಾಯಿತು. ತೆಂಗಿನ ಬುಡಕ್ಕೆ ಹಾಕಿದರೆ ಫಸಲು ಜಾಸ್ತಿಯಾಗುತ್ತದೆ. ಎಕ್ಸ್‌ಪೋರ್ಟ್ ಜಾಸ್ತಿಯಾಗಿ ವಿದೇಶಿ ವಿನಿಮಯ ಹೆಚ್ಚಳವಾಗುತ್ತದೆ. ದೇಶದ ಆರ್ಥಿಕ ಬಿಕ್ಕಟ್ಟು ಸುಧಾರಣೆಯಾಗುತ್ತದೆ...’’ ಎನ್ನುತ್ತಾ ಭಾರತದ ಇಡೀ ಅರ್ಥವ್ಯವಸ್ಥೆಯನ್ನು ಕುಳಿತಲ್ಲೇ ಬುಡಮೇಲು ಗೊಳಿಸತೊಡಗಿದರು.
ಕಾಸಿಯ ತಲೆ ಗಿರ್ರೆಂದು ತಿರುಗತೊಡಗಿತು ‘‘ಹಾಗಾದ್ರೆ...ತೆಂಗಿನ ಮರದ ಫಸಲನ್ನು ಹೆಚ್ಚಿಸಲು ಈ ಆಧಾರ್ ಕಾರ್ಡ್ ಮಾಡಲಾಗಿದೆಯೇ ಸಾರ್...’’ ಕೇಳಿದ.
‘‘ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು....ಆಧಾರ್ ಒಂದು ಬಹುಪಯೋಗಿ ಕಾರ್ಡ್. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಬಹುದು ಎನ್ನುವುದಕ್ಕಾಗಿ ನಾನು ಹೇಳಿದೆ...’’
ಕಾಸಿಯ ಅನುಮಾನ ಮುಗಿಯಲಿಲ್ಲ ‘‘ಹಾಗಲ್ಲ ಸಾರ್...ಆಧಾರ್ ಕಾರ್ಡ್ ಪ್ಲಾಸ್ಟಿಕ್ ಸಾರ್. ಅದನ್ನು ಗೊಬ್ಬರವಾಗಿ ಬಳಸುವುದು ಹೇಗೆ...’’
‘‘ನೋಡ್ರಿ...ಅದನ್ನು ಹೇಗೆ ಬಳಸಬಹುದು ಎನ್ನುವುದರ ಸರ್ವ ಉಪಾಯ ನೀಲೇಕಣಿಯಲ್ಲಿದೆ. ನೀವು ಅವರನ್ನು ಮತಹಾಕಿ ಗೆಲ್ಲಿಸಿದರೆ ಆಧಾರನ್ನು ಯಾವ ರೀತಿಯಲ್ಲೆಲ್ಲ ಬಳಸಬಹುದು ಎನ್ನುವುದನ್ನು ನಿಮಗೆ ಹೇಳಿಕೊಡುತ್ತಾರೆ. ತುಘಲಕ್ ಮಾಡಿದ್ದ ರೀತಿಯಲ್ಲೇ ಆಧಾರ್ ಕಾರ್ಡನ್ನು ಮುಂದೆ ರೂಪಾಯಿಯ ಬದಲಿಗೆ ಕರೆನ್ಸಿಯ ರೂಪದಲ್ಲಿ ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ನೀಲೇಕಣಿಯವರು ಸಂಶೋಧನೆ ನಡೆಸುತ್ತಿದ್ದಾರೆ. ಆ ಸಂಶೋಧನೆ ಯಶಸ್ವಿಯಾಗಬೇಕಾದರೆ ನೀವೆಲ್ಲ ನೀಲೇಕಣಿಯವರನ್ನು ಗೆಲ್ಲಿಸಬೇಕು...’’
ಕಾರ್ನಾಡ್ ಅವರ ಮಾತಿನಿಂದ ಕಾಸಿಗೆ ಖುಷಿಯಾಯಿತು ‘‘ಸಾರ್... ತುಘಲಕ್ ಥರ ಈ ನೀಲೇಕಣಿಯವರು ರಾಜಧಾನಿಯನ್ನು ಬದಲಿಸುವ ಸಾಧ್ಯತೆ ಇದೆಯಾ...’’ ಕೇಳಿದ.
‘‘ಯಾರಲ್ಲೂ ಹೇಳಬೇಡಿ. ಸ್ಕೂಪ್ ಸುದ್ದಿ ಇದು. ಗುಟ್ಟಾಗಿರಲಿ. ನೀಲೇಕಣಿ ಗೆದ್ದರೆ ರಾಜಧಾನಿಯನ್ನು ದಿಲ್ಲಿಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡುತ್ತಾರಂತೆ. ದಿಲ್ಲಿಯಲ್ಲಿದ್ದವರೆಲ್ಲ ಬೆಂಗಳೂರಿಗೆ ವಲಸೆ ಬರ್ಬೇಕಾಗತ್ತೆ. ಸುಪ್ರೀಂಕೋರ್ಚು, ಸಂಸತ್‌ಭವನ, ರಾಷ್ಟ್ರಪತಿ ಭವನ ಎಲ್ಲವನ್ನು ಬುಡ ಸಮೇತ ಎತ್ತಿ ಬೆಂಗಳೂರಿಗೆ ವರ್ಗಾಯಿಸುವ ಪ್ಲಾನ್ ಇದೆ. ನನ್ನ ತುಘಲಕ್ ನಾಟಕದಲ್ಲಿ ಬರುವ ದೃಶ್ಯವೊಂದರಿಂದ ಅವರು ಸ್ಫೂರ್ತಿ ಪಡೆದು ಈ ನಿರ್ಧಾರವನ್ನು ಮಾಡಿದ್ದಾರೆ. ಮುಖ್ಯವಾಗಿ ನೀವು ನಿಮ್ಮ ಪತ್ನಿ ಸೂಸಿ ಅವರು ನೀಲೇಕಣಿಯವರಿಗೆ ಮತ ನೀಡಬೇಕು. ನೀವು ಗೆಲ್ಲಿಸಿದರೆ ಇದೆಲ್ಲ ಸಾಧಿಸಲು ಸಾಧ್ಯ. ಮುಖ್ಯವಾಗಿ ಅವರು ಗೆದ್ದರೆ ಅವರ ಹೆಸರಿನಲ್ಲಿ ನಾಟಕವೊಂದು ಬರೆಯಬೇಕು ಎಂದಿದ್ದೇನೆ. ‘ಟಿಪ್ಪು ಸುಲ್ತಾನನ ಕನಸುಗಳು’ ಇದ್ದಂತೆಯೇ ‘ನೀಲೇಕಣಿಯವರ ಕನಸುಗಳು’ ಎಂಬ ನಾಟಕವನ್ನು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿಸಬೇಕು ಎಂದಿದ್ದೇನೆ...’’
‘‘ನೀಲೇಕಣಿಯವರ ಕನಸುಗಳು ನಾಟಕ ಈಗಾಗಲೇ ಬಿಡುಗಡೆಯಾಗಿದೆ ಸಾರ್....ಚುನಾವಣಾ ಪ್ರಣಾಳಿಕೆಯನ್ನೇ ನಾಟಕವನ್ನಾಗಿ ಮರು ಪ್ರಿಂಟ್ ಮಾಡಿದರೆ ಆಯಿತು ಸಾರ್...ನಿಮಗೆ ಕೆಲಸ ಸುಲಭವಾಯಿತು....’’ ಕಾಸಿ ಸಲಹೆ ನೀಡಿದ್ದೇ....ಕಾರ್ನಾಡರು ‘‘ಬಾಲಿವುಡ್‌ನಿಂದ ಫೋನ್ ಬಂದಿದೆ...ಈಗ ಬಂದೆ...’’ ಎನ್ನುತ್ತಾ ತಮ್ಮ ಕಾರು ಹತ್ತಿ ರೊಂಯ್ಯನೆ ಹೊರಟರು.

Sunday, March 30, 2014

ಗುಜರಾತಿನ ಮೊಟ್ಟೆ ನೋಡಿದ್ದೀರಾ....!

ಮಾರ್ಚ್ 30 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

‘‘ಅಭಿವೃದ್ದಿ ನೋಡಿ... ಅಭಿವೃದ್ಧಿ ನೋಡಿ...ಗುಜರಾತ್ ಅಭಿವೃದ್ಧಿ ನೋಡಿ....ಗುಜರಾತ್ ರೈತರನ್ನು ನೋಡಿ...ಗುಜರಾತ್ ಉದ್ಯಮವನ್ನು ನೋಡಿ...ಗುಜರಾತ್ ಸೆಕ್ಯುಲರಿಸಂ ನೋಡಿ...ಗುಜರಾತ್ ತೆಂಗಿನಕಾಯಿ ನೋಡಿ...ಗುಜರಾತ್ ಲಿಂಬೆಹಣ್ಣು ನೋಡಿ...ಬನ್ನಿ....ಬನ್ನಿ...’’

ಚುನಾವಣಾ ಸಂತೆಯಲ್ಲಿ ಮೋದಿ ಬ್ರಿಗೇಡ್‌ನ ನರಕವರ್ತಿ ಬೇಲೆಸೂಲಿಯವರು ತಮ್ಮ ಡಮರುಗವನ್ನು ತಿರುಗಿಸಿ ಜಾಗೋ ಮಾಡುತ್ತಿದ್ದರು. ಎಲ್ಲರೂ ಕುತೂಹಲದಿಂದ ನರಕವರ್ತಿ ಬೇಲಿಸೂಲಿ ಯವರ ಜಾದೂ ನೋಡುವುದಕ್ಕೆ ಸುತ್ತುವರಿದರು.

‘‘ಗುಜರಾತ್ ದೇಶಪ್ರೇಮ ನೋಡಿ...ಗುಜರಾತ್‌ನ ಅಣೆಕಟ್ಟು ನೋಡಿ...ಗುಜರಾತ್ ಬಿಕ್ಕಟ್ಟು ನೋಡಿ...’’ ಎಂದು ಟುರ್ರ್‌ ಟುರ್ರ್‌ ಎಂದು ತಿರುಗಿಸುತ್ತಿರುವಾಗ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಆಗಮನವಾಯಿತು. ‘‘ಸಾರ್ ಗುಜರಾತ್‌ನ ಕೋಳಿ ಮೊಟ್ಟೆಯನ್ನು ತೋರಿಸುತ್ತೀರಾ...’’ ಕನ್ನಡದ ಬಡಪಾಯಿ ಕೋಳಿ ಸಾಕಣೆಗಾರನೊಬ್ಬ ಆಸೆಯಿಂದ ನರಕವರ್ತಿ ಬೇಲೆ ಸೂಲಿಯವರಲ್ಲಿ ಕೇಳಿದ.

‘‘ತೋರಿಸುವೆ...ತೋರಿಸುವೆ...ಸಹನೆ ಯಿಂದಿರಿ...ಮೋದಿಗೆ ಮತ ಹಾಕಿ...ಮೋದಿಯ ಅಭಿವೃದ್ಧಿಯನ್ನು ಕರ್ನಾಟಕಕ್ಕೂ ತರೋಣ...ನೋಡಿ ಗುಜರಾತ್‌ನ ಕೋಳಿಮೊಟ್ಟೆ...’’ ನೋಡಿದರೆ ರುಬ್ಬುವ ಕಲ್ಲಿನಂತೆ ಭಾಸವಾಗುವ ಅದೇನೋ ಅಲ್ಲಿತ್ತು... ‘‘ಸಾರ್...ಅದು ರುಬ್ಬುವ ಕಲ್ಲು ಅಲ್ಲವಾ?’’ ಪತ್ರಕರ್ತ ಎಂಜಲು ಕಾಸಿ ಅನುಮಾನದಿಂದ ಕೇಳಿದ. ‘‘ಅಭಿವೃದ್ಧಿ ಕಣ್ರೀ...ಅಭಿವೃದ್ಧಿ. ಗುಜರಾತ್‌ನಲ್ಲಿ ಕೋಳಿಗಳು ರುಬ್ಬುವ ಕಲ್ಲಿನಷ್ಟು ದೊಡ್ಡ ಮೊಟ್ಟೆಯನ್ನು ಇಡುತ್ತವೆ. ಈ ಒಂದು ಮೊಟ್ಟೆಯಿಂದ ಇಡೀ ಗುಜರಾತ್‌ಗೇ ಆಮ್ಲೆಟ್ ಮಾಡಿ ಬಡಿಸಬಹುದು...ಈ ಕೋಳಿಮೊಟ್ಟೆಗಾಗಿ ಅದೆಷ್ಟೋ ದೇಶಗಳ ಉದ್ಯಮಿಗಳು ಬಂಡವಾಳ ಹೂಡಲು ಗುಜರಾತ್‌ಗೆ ಆಗಮಿಸುತ್ತಿದ್ದಾರೆ...ಗೊತ್ತೇನ್ರೀ.....’’ ‘‘ಸಾರ್...ಮೊಟ್ಟೆಯೇ ಇಷ್ಟು ದೊಡ್ಡದಿದ್ದರೆ ಕೋಳಿ ಎಷ್ಟು ದೊಡ್ಡದಿರಬೇಡ?’’ ಕಾಸಿ ಅಚ್ಚರಿ ಯಿಂದ ಕೇಳಿದ.

ಬೇಲೆಸೂಲಿ ತನ್ನ ಜಾಗೋ ಭಾರತ್ ಮುಂದು ವರಿಸಿದ ‘‘ಹೌದು ಕಣ್ರೀ...ಅದು ಗುಜರಾತ್ ಕೋಳಿಗಳು. ದೇಶಪ್ರೇಮಿ ಕೋಳಿಗಳು. ಮೋದಿ ಯಿಂದಾಗಿ ಅವುಗಳು ದೇಶಪ್ರೇಮವನ್ನು ಕಲಿತು ಕೊಂಡಿದೆ. ದೊಡ್ಡ ದೊಡ್ಡ ಮೊಟ್ಟೆಯಿಟ್ಟು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಂಡಿವೆ...ಆದರೆ ಸಿದ್ದರಾಮಯ್ಯ ಅವರ ರಾಜ್ಯದ ಕೋಳಿಗಳು ಮೊಟ್ಟೆಯನ್ನೇ ಇಡುವುದಕ್ಕೆ ಸೋಮಾರಿತನ ಮಾಡಿವೆ...ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿ ದರೆ ನಮ್ಮ ಕೋಳಿಗಳೂ ಇಷ್ಟು ದೊಡ್ಡ ಮೊಟ್ಟೆಯನ್ನು ಹಾಕಿ ದೇಶವನ್ನು ಅಭಿವೃದ್ಧಿಗೊಳಿಸುತ್ತದೆ...’’

ಬೇಲೆಸೂಲಿಯ ಮಾತನ್ನು ಕೇಳಿ ಎಂಜಲು ಕಾಸಿ ರೋಮಾಂಚನ ಗೊಂಡ. ‘‘ಮೊಟ್ಟೆಯೇ ಇಷ್ಟು ದೊಡ್ಡದಿದ್ದರೆ ಕೋಳಿ ಎಷ್ಟು ದೊಡ್ಡದಿರಬಹುದು ಸಾರ್...’’ ಕಾಸಿ ಕೇಳಿದ. ‘‘ತುಂಬಾ ಅದ್ಭುತವಾದ, ದೇಶಪ್ರೇಮ ಭರಿತವಾದ ಪ್ರಶ್ನೆಯನ್ನು ಕೇಳಿದಿರಿ. ನಿಮಗೆ ಅಭಿನಂದನೆಗಳು. ಗುಜರಾತ್‌ನ ಕೋಳಿಗಳು ರಾಜಸ್ತಾನದಲ್ಲಿರುವ ಒಂಟೆಯಷ್ಟು ದೊಡ್ಡ ದಿರುತ್ತವೆ...ಕೆಲವು ಹೆಣ್ಣು ಕೋಳಿಗಳು ಹಾಲನ್ನೂ ಕೊಡುತ್ತವೆ...ಗುಜರಾತ್‌ನಲ್ಲಿ ಅಮುಲ್ ಕಂಪೆನಿಗಳಿಗೆ ಈ ಹಾಲು ಪೂರೈಕೆಯಾಗುತ್ತವೆ...ಒಂದು ವೇಳೆ ನರೇಂದ್ರಮೋದಿಯವರು ದೇಶದ ಪ್ರಧಾನಿಯಾದರೆ ಈ ಹಾಲು ಕೊಡುವ ಕೋಳಿ ಗಳಲ್ಲಿ ಕೆಲವನ್ನು ಕರ್ನಾಟಕಕ್ಕೆ ನೀಡುವ ಬಗ್ಗೆ ತುಂಬಾ ಆಸಕ್ತಿ ತಳೆದಿದ್ದಾರೆ...’’ ಬೇಲೆಸೂಲಿ ತನ್ನ ಬೇಳೆ ಬೇಯಿಸುತ್ತಿರುವಾಗ ಕಾಸಿ ಮೆಲ್ಲನೆ ಕೇಳಿದ ‘‘ಅಲ್ಲ ಸಾರ್...ಅದನ್ನೊಮ್ಮೆ ಮುಟ್ಟಿ ನೋಡಬಹುದೆ?’’

ಬೇಲೆ ಸೂಲಿ ಸಿಟ್ಟಾದರು ‘‘ಮುಟ್ಟಿ ನೋಡುವುದಕ್ಕೆ ಅದು ಕಾಂಗ್ರೆಸ್ ಅಭ್ಯರ್ಥಿ ನಗ್ಮಾ ಅವರ ಕೆನ್ನೆಯಲ್ಲ. ಗುಜರಾತ್‌ನ ಅಭಿವೃದ್ಧಿಯ ಸಂಕೇತವಾಗಿರುವ ಮೊಟ್ಟೆ ಅದು. ಅದರೊಳಗೆ ಗುಜರಾತ್‌ನ ಕನಸು ಗಳಿವೆ. ಆ ಕನಸುಗಳು ಮುಂದಿನ ಚುನಾವಣೆಯಲ್ಲಿ ಮರಿ ಹಾಕಲಿವೆ...’’ ಎನ್ನುತ್ತಾ ‘‘ಯಧಾ ಯಧಾಹಿ ಧರ್ಮಸ್ಯ...’’ ಎಂದು ಸಂಸ್ಕೃತ ಶ್ಲೋಕವನ್ನು ಉಗುಳ ತೊಡಗಿದರು. ಕಾಸಿಗೆ ಹೆದರಿಕೆಯಾಯಿತು. ಸಂಸ್ಕೃತದಲ್ಲಿ ಶಾಪ ಹಾಕುತ್ತಿದ್ದಾರೋ ಎಂದು ಹೆದರಿ ವಿಷಯಾಂತರ ಮಾಡಿದ ‘‘ಸಾರ್...ಗುಜರಾತ್‌ನ ಅಭಿವೃದ್ಧಿಗೆ ಉದಾಹರಣೆಯಾಗಿ ಬೇರೇನೇನು ಇದೆ...’’

ಬೇಲೆ ಸೂಲಿಯವರಿಗೆ ಸಂತೋಷವಾಯಿತು ‘‘ನೋಡಿ...ಇವನೇ ಗುಜರಾತಿನ ರೈತ...ಮೈತುಂಬಾ ಚಿನ್ನಾಭರಣಗಳನ್ನು ಧರಿಸಿಕೊಂಡಿದ್ದಾನೆ...ದೇಹ ದಷ್ಟಪುಷ್ಟವಾಗಿದೆ...ಕರ್ನಾಟಕದ ರೈತರು ಪೀಚಲು ಆಗಿದ್ದಾರೆ...ಧರಿಸುವುದಕ್ಕೆ ಬಟ್ಟೆಯೂ ಇಲ್ಲ...ಆದರೆ ಗುಜರಾತ್‌ನ ರೈತರು ಬಹಳ ಶ್ರೀಮಂತರು...’’ ಗುಜರಾತ್‌ನ ರೈತನನ್ನು ಕಾಸಿ ಕಣ್ಣು ಪಿಳುಕಿಸಿ ನೋಡಿದ್ದೇ ಕಾಸಿಗೆ ಅನುಮಾನ ಬಂತು. ಇವನನ್ನು ಎಲ್ಲೋ ನೋಡಿದ್ದೇನಲ್ಲ....‘‘ಸಾರ್...ಇವನು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಥರ ಇದ್ದಾನೆ...ಇವನು ಗುಜರಾತ್‌ನ ರೈತ ಆಗಲು ಹೇಗೆ ಸಾಧ್ಯ...?’’

‘‘ಗುಜರಾತ್‌ನ ರೈತರೆಲ್ಲರೂ ಬಪ್ಪಿ ಲಹರಿ ಥರವೇ ಇರ್ತಾರೆ...ಮೈತುಂಬಾ ಬಂಗಾರ...ಯಾಕೆಂದರೆ ಅವರ ಗದ್ದೆಯಲ್ಲಿ ಅಕ್ಕಿ ಬೆಳೆಯುವುದಿಲ್ಲ. ಬೇರೆ ಬೇರೆ ಥರದ ಚಿನ್ನದ ಸರಗಳನ್ನು ಬೆಳೆಯುತ್ತಾರೆ...ಕೆಲವನ್ನು ಮಾರಿ ಉಳಿದದ್ದನ್ನು ಕತ್ತಿಗೆ, ಸೊಂಟಕ್ಕೆ ಬೆರಳಿಗೆ ಸುತ್ತಿಕೊಳ್ಳುತ್ತಾರೆ...’’ ‘‘ಗುಜರಾತಿನಲ್ಲಿ ಪಿಜ್ಜಾ ತಿನ್ನುತ್ತಾರೆ ಕಣ್ರೀ...ಶ್ರೀಮಂತ ರೈತರಲ್ಲವೆ? ಅವರು ಪಿಜ್ಜಾವನ್ನು ಬೆಳೆದು ಮಾರುತ್ತಾರೆ. ಕರ್ನಾಟಕದಲ್ಲಿರುವ ಪಿಜ್ಜಾ ಹಟ್‌ಗಳಿಗೆ ಪಿಜ್ಜಾ ಸಪ್ಲೈ ಮಾಡೋದೆ ಗುಜರಾತ್‌ನ ರೈತರು ಕಣ್ರೀ...ದೇಶಪ್ರೇಮಿ ರೈತರು ಕಣ್ರೀ...ಮಳೆಗಾಲದಲ್ಲಿ ಗದ್ದೆಯಲ್ಲಿ ಚಿನ್ನ, ಬೆಳ್ಳಿ ಬೆಳೆಯುತ್ತಾರೆ. ಚಳಿಗಾಲದಲ್ಲಿ ತಿನ್ನುವುದಕ್ಕಾಗಿ ಪಿಜ್ಜಾ ಬೆಳೆಯುತ್ತಾರೆ. ಬೇಸಿಗೆ ಗಾಲದಲ್ಲಿ ಗಡಿಯಲ್ಲಿ ಹೋಗಿ ದೇಶ ಕಾಯ್ತಾರೆ....’’
ಕಾಸಿಗೆ ಇಡೀ ಚುನಾವಣಾ ಸಂತೆಯೇ ಗರಗರ ತಿರುಗಿದಂತಾಯಿತು. ‘‘ಆದರೆ ಇವರು ಟಿವಿಯಲ್ಲಿ ಹಾಡು ಹೇಳುವುದನ್ನು ನಾನು ಕೇಳಿದ್ದೇನೆ...ಇವನು ಬಪ್ಪಿ ಲಹರಿ ಸಾರ್...’’ ಕಾಸಿ ಹೇಳಿದ.

ಬೇಲೆಸೂಲಿಗೆ ಸಿಟ್ಟು ಬಂತು ‘‘ದೇಶದ್ರೋಹಿಗಳ ಸಂಚು ಕಣ್ರೀ...ಆದುದರಿಂದ ನರೇಂದ್ರ ಮೋದಿಯ ಸಾಧನೆಯನ್ನು ಮುಚ್ಚಿ ಹಾಕಲು ನಿಮ್ಮಿಂದ ಇಂತಹ ಮಾತನ್ನಾಡಿಸುತ್ತಾರೆ... ಗುಜರಾತ್‌ನ ರೈತರು ಹಾಡನ್ನೂ ಹಾಡುತ್ತಾರೆ ಕಣ್ರೀ....ಅವರು ಹುಟ್ಟು ಸಂಗೀತಗಾರರು...ಅವರು ಬೇಕಾದ್ರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ಗಳಾಗಿಯೂ ಭಾಗವಹಿಸುತ್ತಾರೆ.

ಯಾಕೆಂದರೆ ಗುಜರಾತ್ ಸಂಪೂರ್ಣ ಅಭಿವೃದ್ಧಿ ಹೊಂದಿದೆ....ಗುಜರಾತ್‌ನ ರೈತರು ಹುಟ್ಟು ದೇಶಪ್ರೇಮಿಗಳು...ನೀವು ಬಾಯಿ ಮುಚ್ಚದೇ ಇದ್ದರೆ ಗುಜರಾತಿ ದೇಶಪ್ರೇಮಿ ಯುವಕರು ನಿಮ್ಮ ಬಾಯಿ ಮುಚ್ಚಿಸುತ್ತಾರೆ ಎಚ್ಚರಿಕೆ...’’ ಕಾಸಿ ಬಾಯಿ ಮುಚ್ಚಿದ. ಈಗ ನರಕವರ್ತಿ ಬೇಲೆಸೂಲಿ ತನ್ನ ಜೇಬಿನಿಂದ ಮೊಟ್ಟೆಯಾಕಾರದ ಅದೇನನ್ನೋ ಹೊರಗೆ ತೆಗೆದ ‘‘ಇದೇನು ಹೇಳಿ...’’
ಸಂತೆಯಲ್ಲಿ ಸೇರಿದ್ದ ಎಲ್ಲರೂ ಒಂದಾಗಿ ಹೇಳಿದರು ‘‘ಕೋಳಿ ಮೊಟ್ಟೆ...’’

‘‘ನಾನು ಮೊದಲು ಹಾಗೆ ತಿಳಿದುಕೊಂಡಿದ್ದೆ. ಸತ್ಯ ಗೊತ್ತಾದದ್ದೇ ನಾನು ಮೋದಿಯ ಅಭಿಮಾನಿ ಯಾಗಿ ಬಿಟ್ಟೆ. ಇದು ಮೊಟ್ಟೆ ಅಲ್ಲ ಕಣ್ರೀ...ಗುಜರಾತಿನ ರೈತರು ಬೆಳೆದಿರುವ ಗೋದಿಯ ಕಾಳುಗಳು...ಒಂದು ಕಾಳು ಮೊಟ್ಟೆಯಷ್ಟು ದೊಡ್ಡದು. ಒಂದು ಚಪಾತಿ ಮಾಡಲು ಗುಜರಾತಿ ನಲ್ಲಿ ಬೆಳೆದ ಎರಡು ಗೋದಿ ಕಾಳುಗಳು ಸಾಕು. ಇಂದು ಗುಜರಾತಿನಲ್ಲಿ ಎಲ್ಲರೂ ಹೊಟ್ಟೆ ತುಂಬಾ ತಿಂದು ತೇಗಿ ಸುಖವಾಗಿದ್ದಾರೆ. ಬೇರೇನು ಕೆಲಸ ಇಲ್ಲ ಎಂದು ಹೊಡೆದಾಡಿಕೊಳ್ಳುತ್ತಾರೆ. ಅದನ್ನೇ ದೊಡ್ಡದು ಮಾಡಿ ಕೋಮುಗಲಭೆ ಎಂದು ಕಾಂಗ್ರೆಸ್‌ನೋರು ಗಲಭೆ ಎಬ್ಬಿಸಿದ್ದಾರೆ....’’

‘‘ಗುಜರಾತಿನ ತೆಂಗಿನ ಕಾಯಿ ಗೋಲಗುಮ್ಮಟ ದಷ್ಟು ದೊಡ್ಡದಿರುತ್ತದೆ. ಅಲ್ಲಿ ಒಂದು ತೆಂಗಿನ ಕಾಯಿ ಒಂದು ವರ್ಷಕ್ಕೆ ಸಾಕಾಗತ್ತೆ. ಅದನ್ನು ಹೊತ್ತುಕೊಂಡು ಬರುವುದು ಕಷ್ಟವೆಂದು ಇಲ್ಲಿಗೆ ತರಲಿಲ್ಲ...ಗುಜರಾತಿನ ದನಗಳು ಕೊಡುವ ಹಾಲು ಬೆಣ್ಣೆಯಷ್ಟು ಗಟ್ಟಿಯಾಗಿರುತ್ತೆ....ಅಲ್ಲಿಯ ದನಗಳು ಬೆಳಗ್ಗೆ ಎದ್ದು ವಂದೇಮಾತರಂ ಹಾಡನ್ನು ರಾಗವಾಗಿ ಹಾಡುತ್ತೆ...ಯಾಕೆಂದರೆ ಅವುಗಳು ಗುಜರಾತಿನ ದೇಶ ಪ್ರೇಮಿ ದನಗಳು ಕಣ್ರೀ...ದನಗಳಿಗೆ, ಕೋಳಿ ಗಳಿಗೆ, ತೆಂಗಿನಮರಗಳಿಗೆ ಮೋದಿಯ ಮಹತ್ವ ಗೊತ್ತು. ಆದರೆ ನಮಗೆ ಮಾತ್ರ ಇನ್ನೂ ಗೊತ್ತಾಗಿಲ್ಲ ಕಣ್ರೀ...’’

ಅಷ್ಟರಲ್ಲಿ ಕಾಸಿ ಕೇಳಿದ ‘‘ಸಾರ್...ಗುಜರಾತ್‌ನಲ್ಲಿ ರೈಲುಗಳು ಹಳಿಯಿಲ್ಲದೆಯೇ ಓಡುತ್ತದೆಯಂತೆ ಹೌದಾ...’’
‘‘ಹೌದು ಕಣ್ರೀ...ಹೌದು...’’ ಎಂದು ಬೇಲೆಸೂಲಿ ಏನೋ ಹೇಳಲು ಹೊರಟವನಿಗೆ ಅನುಮಾನ ಬಂದು ಕಾಸಿಯನ್ನು ನೋಡಿದ. ಕಾಸಿ ಹಳಿತಪ್ಪಿದ ರೈಲಿನಂತೆ ಅಲ್ಲಿಂದ ದಡಬಡನೆ ಓಡತೊಡಗಿದ.

Sunday, March 23, 2014

ಅವರು ನಮಸ್ಕಾರ ಮಾಡಿದರು ಅಂತ, ನಾನು ಚೂರಿ ಹಾಕುವುದಾ...

ಮಾರ್ಚ್ 23 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

ಮಲೇಶ್ಯಾ ವಿಮಾನ ಕಾಣೆಯಾಗಿರುವುದು ಮತ್ತು ಭಾರತದಲ್ಲಿ ಚುನಾವಣೆ ಘೋಷಣೆಯಾಗಿರುವುದು ಒಟ್ಟೊಟ್ಟಿಗೆ ಆಗಿರುವುದು ಪತ್ರಕರ್ತ ಎಂಜಲು ಕಾಸಿಗೆ ತಲೆ ತುರಿಕೆ ತಂದಿತು. ಚುನಾವಣೆಗೂ ವಿಮಾನಕ್ಕೂ ಸಂಬಂಧ ಇದ್ದರೂ ಇದ್ದೀತು ಎಂದು ಅಭಿಪ್ರಾಯ ಸಂಗ್ರಹಿಸಲು ರಾಜಕೀಯ ಮುಖಂಡರ ಮನೆ ಬಾಗಿಲನ್ನು ತಟ್ಟಲು ಧಾವಿಸಿದ.

ನೇರವಾಗಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿಯ ಮನೆಯ ಬಾಗಿಲನ್ನು ತಟ್ಟಿದ. ಭದ್ರತೆಯ ಕಾರಣಕ್ಕಾಗಿ ಕಾಸಿಯನ್ನು ಮನೆಯ ಒಳಗೆ ಬಿಡಲಿಲ್ಲ. ಹೊರಗಿನಿಂದಲೇ ಕಾಸಿ ಪ್ರಶ್ನೆ ಕೇಳಿದ ‘‘ಸಾರ್...ಮಲೇಶ್ಯದಲ್ಲಿ ವಿಮಾನ ಕಾಣೆಯಾಗಿದೆ...’’ ಎಂದದ್ದೇ ತಡ. ಒಳಗಿನಿಂದ ನರೇಂದ್ರ ಮೋದಿ ಮಾತನಾಡತೊಡಗಿದರು ‘‘ಕೇಂದ್ರದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದರೆ ಇಂದು ಮಲೇಶ್ಯಾ ವಿಮಾನ ಕಾಣೆಯಾಗುತ್ತಲೇ ಇರಲಿಲ್ಲ. ಯುಪಿಎ ಸರಕಾರ ಮತ್ತು ಸೋನಿಯಾಗಾಂಧಿಯೇ ಈ ವಿಮಾನ ಕಾಣೆಯಾಗಲು ಮುಖ್ಯ ಕಾರಣ. ಮುಂದಿನ ಚುನಾವಣೆಯಲ್ಲಿ ನಾನು ಪ್ರಧಾನಮಂತ್ರಿಯಾದರೆ, ಈ ವಿಮಾನವನ್ನು ಕೆಲವೇ ಸೆಕೆಂಡುಗಳಲ್ಲಿ ಪತ್ತೆ ಮಾಡಿಕೊಡುತ್ತೇನೆ....’’

ಕಾಸಿ ರೋಮಾಂಚನಗೊಂಡ ‘‘ಸಾರ್ ಈಗ್ಲೇ ಪತ್ತೆ ಮಾಡಿ ಕೊಡಬಹುದಲ್ಲ....ಚುನಾವಣೆಯಲ್ಲಿ ನಿಮ್ಮ ಇಮೇಜು ಹೆಚ್ಚುತ್ತದೆ...’’ ಮೋದಿಗೆ ಸಲಹೆ ನೀಡಿದ. ‘‘ಈಗ ಪತ್ತೆ ಮಾಡಿಕೊಟ್ಟರೆ ಅದರ ಲಾಭವನ್ನೆಲ್ಲ ಯುಪಿಎ ಸರಕಾರ ತನ್ನದಾಗಿಸಿಕೊಳ್ಳುತ್ತದೆ. ಇಂದು ಇಡೀ ವಿಶ್ವ ನಾನು ಪ್ರಧಾನಿಯಾಗುವುದನ್ನು ಕಾಯು ತ್ತಿದೆ. ನಾನು ಪ್ರಧಾನಿಯಾದರೆ ಮಾತ್ರ ಮಲೇಶ್ಯಾ ವಿಮಾನ ಪತ್ತೆಯಾಗಲು ಸಾಧ್ಯ...’’ ಪತ್ರಕರ್ತ ಎಂಜಲು ಕಾಸಿ ವಿಮಾನ ಸಿಕ್ಕಿಯೇ ಬಿಟ್ಟಿತು ಎಂಬಂತೆ ಸಂಭ್ರಮದಿಂದ ನೋಟ್ ಮಾಡಿಕೊಂಡು ಅಲ್ಲಿಂದ ನೇರವಾಗಿ ರಾಹುಲ್‌ಗಾಂಧಿಯ ಮನೆಯ ಬಾಗಿಲು ತಟ್ಟಿದ. ಕಾಸಿಯನ್ನು ಕಂಡದ್ದೇ ವೀರಪ್ಪ ಮೊಯ್ಲಿಯವರು ಗುರಾಯಿಸಿದರು. ಎಲ್ಲಿ, ನೇತ್ರಾವತಿ ನದಿ ತಿರುವು ಬಗ್ಗೆ ಪ್ರಶ್ನೆ ಕೇಳುವುದಕ್ಕೆ ಬಂದಿದ್ದಾನೋ ಎಂದು ಹೆದರಿ ‘‘ಏನಾಗಬೇಕು...ಹೇಳಿ...’’ ಎಂದರು.

‘‘ಅದೇ ಸಾರ್. ಮಲೇಶ್ಯಾದಲ್ಲಿ ವಿಮಾನ ಕಾಣೆಯಾ ಗಿದೆ...’’ ಕಾಸಿ ಪ್ರಶ್ನೆಯನ್ನು ಆರಂಭಿಸಿದ್ದೇ ಮೊಯ್ಲಿ ಮಾತನಾಡತೊಡಗಿದರು ‘‘ಮಲೇಶ್ಯಾದಲ್ಲಿ ವಿಮಾನ ಕಾಣೆಯಾಗಿರುವುದಕ್ಕೂ ನದಿ ತಿರುವಿಗೂ ಯಾವ ಸಂಬಂಧವೂ ಇಲ್ಲ. ನಮ್ಮದು ನೇತ್ರಾವತಿ ತಿರುವು ಯೋಜನೆ ಅಲ್ಲ...ಎತ್ತಿನ ಹೊಳೆ ಯೋಜನೆ....’’ ಕಾಸಿಗೆ ಅರ್ಥವಾಗಲಿಲ್ಲ ‘‘ಅಲ್ಲ ಸಾರ್...ಮಲೇಶ್ಯಾ ದಲ್ಲಿ ವಿಮಾನ ಕಾಣೆಯಾಗಿದೆ ನಿಮ್ಮ ಅಭಿಪ್ರಾಯ...’’ ಮೊಯ್ಲಿ ಮತ್ತಷ್ಟು ಸ್ಪಷ್ಟೀಕರಣ ನೀಡಿದರು ‘‘ನೋಡ್ರಿ...ಬಹುಶಃ ವಿಮಾನದ ಸಿಲಿಂಡರ್‌ನ ಗ್ಯಾಸ್ ಮುಗಿದಿರಬೇಕು. ಆಧಾರ್ ಕಾರ್ಡ್ ಇದ್ದರೆ ನಾವು ಮಲೇಶ್ಯಕ್ಕೆ ವರ್ಷಕ್ಕೆ 12 ಸಿಲಿಂಡರ್‌ಗಳನ್ನು ಸಬ್ಸಿಡಿ ರೂಪದಲ್ಲಿ ನೀಡುವುದಕ್ಕೆ ಸಿದ್ಧ...’’

ಕಾಸಿಗೆ ಏನೇನೂ ಅರ್ಥವಾಗಲಿಲ್ಲ. ಏನು ಕೇಳಿದರೂ ಅದಕ್ಕೆ ಸಿಲಿಂಡರ್‌ಗಳನ್ನು ಜೋಡಿಸುತ್ತಿದ್ದಾರಲ್ಲ ಎಂದು ಆತ ಕಂಗಾಲಾದ ‘‘ಸಾರ್...ಮಲೇಶ್ಯಾದ ವಿಮಾನ...’’ ಎಂದು ಮತ್ತೆ ಬಾಯಿ ತೆರೆಯುವಷ್ಟರಲ್ಲಿ ಮೊಯ್ಲಿ ಹೇಳತೊಡಗಿದರು ‘‘ರಾಮಾಯಣದಲ್ಲಿ ಪುಷ್ಪಕ ವಿಮಾನದ ಬಗ್ಗೆ ಒಂದು ಅಧ್ಯಾಯ ಇದೆ....ನಾನು ಇತ್ತೀಚೆಗೆ ಬರೆದ ಕಾವ್ಯದ ಒಂದು ಭಾಗ....’’ ಎಂದು ಕಾವ್ಯ ಓದಲು ಶುರು ಹಚ್ಚುವಷ್ಟರಲ್ಲಿ ಕಾಸಿ ಅಲ್ಲಿಂದ ಓಡಿ ಯಡಿಯೂರಪ್ಪರ ಮನೆಯನ್ನು ಮುಟ್ಟಿದ.

‘‘ಏನ್ರೀ ಓಡ್ಕೊಂಡು ಬರ್ತಾ ಇದ್ದೀರಾ? ಜೆಡಿಎಸ್‌ನೋರು ಟಿಕೆಟ್ ಕೊಡ್ತೇನೆ ಎಂದು ಏನಾದ್ರೂ ಅಟ್ಟಿಸಿಕೊಂಡು ಬಂದ್ರಾ...’’ ಯಡಿಯೂರಪ್ಪ ಕಾಸಿಯನ್ನು ಜೋಕು ಮಾಡಿದರು.
ಎಂಜಲು ಕಾಸಿ ನಾಚಿಕೊಂಡ ‘‘ಸಾರ್...ಮಲೇಶ್ಯಾ ವಿಮಾನ ಕಾಣೆಯಾಗಿರುವುದರ ಬಗ್ಗೆ ನಿಮ್ಮ ಅನ್ನಿಸಿಕೆ...’’
ಯಡಿಯೂರಪ್ಪ ಸಿಟ್ಟಾದರು ‘‘ನಾನು ಕಾಣೆಯಾಗಿರುವ ನನ್ನ ಕೆಜೆಪಿ ವಿಮಾನವನ್ನು ಹುಡುಕ್ತಾ ಇದ್ದೇನೆ...ನೀವು...’’
‘‘ಹಾಗಲ್ಲ ಸಾರ್...ನೀವು ಮಾಜಿ ಮುಖ್ಯಮಂತ್ರಿ. ನಿಮ್ಮ ಅನ್ನಿಸಿಕೆ ಬಹಳ ಮುಖ್ಯ’’ ಕಾಸಿ ಒತ್ತಾಯಿಸಿದ.
‘‘ಮಲೇಶ್ಯಾ ವಿಮಾನ ಏನು ಬಂತು. ನನ್ನನ್ನು ಐದು ವರ್ಷ ಮುಖ್ಯಮಂತ್ರಿ ಮಾಡಿದ್ದಿದ್ದರೆ ವಿಧಾನಸೌಧ ವನ್ನೇ ಮಾಯ ಮಾಡಿ ತೋರಿಸ್ತಿದ್ದೆ. ಇಂದು ವಿಮಾನ ಮಾಯ ಆಗಿರೋದರಿಂದ ಮಲೇಶ್ಯ ವಿಶ್ವದಲ್ಲೇ ಸುದ್ದಿಯಾಗುತ್ತಿದೆ. ನಾವು ಕೂಡ ಇದೇ ಥರ ಮಾಯ ಮಾಡುವುದಕ್ಕೆ ಕಲಿಯಬೇಕು. ಅದೇನೋ ಒಂದಿಷ್ಟು ಭೂಮಿಯನ್ನು ಮಾಯ ಮಾಡಿದೆ ಎಂದು ಲೋಕಾಯುಕ್ತರು ಏನೇನೋ ಆರೋಪ ಮಾಡಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ ಬಿಟ್ಟರು. ಈಗ ಮಲೇಶ್ಯದಲ್ಲಿ ವಿಮಾನವೇ ಮಾಯ ಆಗಿದೆ. ಇದ ಕ್ಕಾಗಿ ಅಲ್ಲಿಯ ಪ್ರಧಾನಮಂತ್ರಿ, ಮುಖ್ಯಮಂತ್ರಿಗಳು ಅಧಿಕಾರದಿಂದ ಕೆಳಗಿಳಿದ ಸುದ್ದಿಯನ್ನು ನೀವೇನಾದರೂ ಕೇಳಿದ್ದೀರಾ? ಇಲ್ಲವಲ್ಲ?....’’ ಯಡಿಯೂರಪ್ಪರ ಉತ್ತರ ಕೇಳಿದ್ದೇ ಕಾಸಿ ಥಟ್ಟನೆ ಅಲ್ಲಿಂದ ಮಾಯ ಆಗಿ ದೇವೇಗೌಡರ ಮುಂದೆ ಬಂದು ನಿಂತ.
ಕಾಸಿಯನ್ನು ಕಂಡದ್ದೇ ದೇವೇಗೌಡರು ಸಿಟ್ಟಾದರು. ‘‘ಸಿದ್ದರಾಮಯ್ಯನ ಎಂಜಲು ತಿಂದು ನನ್ನ ಬಳಿ ತಲೆಗೆಟ್ಟ ಪ್ರಶ್ನೆ ಕೇಳೋದಕ್ಕೆ ಬಂದಿದ್ದೀಯಾ? ಅದೇನು ಕೇಳಬೇಕೋ ಕೇಳು...’’
‘‘ಸಾರ್...ಮಲೇಶ್ಯದಲ್ಲಿ ವಿಮಾನ ಕಾಣೆಯಾ ಗಿದೆ....ಇನ್ನೂ ಸಿಕ್ಕಿಲ್ಲ...’’ ಕಾಸಿ ಕಾಲಿನ ಹೆಬ್ಬೆರಳಲ್ಲಿ ಉಂಗುರ ಬರೆಯುತ್ತಾ ಪ್ರಶ್ನಿಸಿದ.
‘‘ನೋಡ್ರಿ...ನಾನು ಪ್ರಧಾನಿಯಾಗಿದ್ದಿದ್ರೆ ಇಂದು ಮಲೇಶ್ಯಾದ ವಿಮಾನ ಕೆಲವೇ ದಿನಗಳಲ್ಲಿ ಪತ್ತೆಯಾಗಿರುತ್ತಿತ್ತು. ಕೇರಳದ ಹಲವು ಮಂತ್ರವಾದಿಗಳು ನನಗೆ ಗೊತ್ತಿದ್ದಾರೆ. ಅವರನ್ನು ಕಳುಹಿಸಿಕೊಟ್ಟು ಸಮಸ್ಯೆ ಬಗೆ ಹರಿಸುತ್ತಿದ್ದೆ. ನಮ್ಮ ದೇಶದ ಖ್ಯಾತಿಯೂ ಹೆಚ್ಚುತ್ತಿತ್ತು. ಆದರೆ ಇಲ್ಲಿ ನೋಡಿದ್ರೆ ಸಿದ್ದರಾಮಯ್ಯ ಮೂಢನಂಬಿಕೆ ವಿರೋಧಿ ಕಾನೂನು ಜಾರಿಗೆ ತರ್ತಾನಂತೆ....ಮಂತ್ರವಾದಿಗಳನ್ನು ಜೈಲಿಗೆ ಹಾಕ್ತಾನಂತೆ...ನನ್ನ ಪ್ರಾಣ ಇರುವವರೆಗೆ ಅದಕ್ಕೆ ಅವಕಾಶ ಕೊಡೋದಿಲ್ಲ.’’
ಕಾಸಿ ಅಲ್ಲಿಂದ ಮೆಲ್ಲನೆ ಎದ್ದು ನೇರವಾಗಿ ವಾಟಾಳ್ ನಾಗರಾಜ್ ಬಳಿಗೆ ಓಡಿದ. ‘‘ಸಾರ್...ವಿಮಾನ ಕಾಣೆಯಾಗಿದೆ...ಇನ್ನೂ ಸಿಕ್ಕಿಲ್ಲ...’’
ವಾಟಾಳ್ ತನ್ನ ಟೋಪಿ ಧರಿಸಿ ಅಣಿಯಾದರು ‘‘ಇದನ್ನು ಇಷ್ಟು ತಡವಾಗಿ ಬಂದು ಹೇಳ್ತೀರಲ್ಲಾರೀ... ನಾಳೇನೇ ಧರಣಿ ಮಾಡ್ತೀನಿ...ವಿಮಾನ ನಿಲ್ದಾಣಕ್ಕೆ ಹೋಗಿ ಧರಣಿ ಮಾಡ್ತೇನೆ....ವಿಮಾನ ಹೋಗದ ಹಾಗೆ ರಸ್ತೆ ತಡೆ ಮಾಡ್ತೇನೆ....’’
ಕಾಸಿ ಅಲ್ಲಿಂದ ನೇರವಾಗಿ ಮಂಗಳೂರಿಗೆ ಧಾವಿಸಿದ. ನೋಡಿದರೆ ಜನಾರ್ದನ ಪೂಜಾರಿ! ‘‘ಸಾರ್...ವಿಮಾನ ಅಪಹರಣ ಆಗಿದೆ...ಇನ್ನೂ ಸಿಕ್ಕಿಲ್ಲ...’’
ಜನಾರ್ದನ ಪೂಜಾರಿ ಬೆಚ್ಚ ಆದರು ‘‘ಎಂತದು ಅದು ಸಿಗಲಿಕ್ಕೆ ಗೋಳಿ ಬಜೆಯ? ಇಷ್ಟರವರೆಗೆ ಹೋದಲ್ಲೆಲ್ಲ ಪ್ರಭಾಕರಭಟ್ಟರು ಅಡ್ಡ ಬರ್ತಾ ಇದ್ದರು. ಅವರು ನಮಸ್ಕಾರ ಮಾಡುವಾಗ ನಾನು ನಮಸ್ಕಾರ ಮಾಡುವುದು ತಪ್ಪಾ? ನಾನೆಂತ ಪ್ರಭಾಕರ ಭಟ್ಟರಿಗೆ ಚೂರಿ ಹಾಕಬೇಕಾ? ನನ್ನ ಬೆನ್ನಿನಲ್ಲಿ ನೋಡಿ? ಇಪ್ಪತ್ತು ಚೂರಿ ಉಂಟು. ಎಲ್ಲ ಚೂರಿ ಕಳೆದ ಬಾರಿ ಎಲೆಕ್ಷನ್‌ನಲ್ಲಿ ನಮ್ಮವರು ಹಾಕಿದ್ದು. ಈ ಬಾರಿ ಚೂರಿ ಹಾಕುವ ಹಾಗೆ ಇಲ್ಲ....’’
‘‘ಯಾಕೆ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಚೂರಿ ಹಾಕಲಿಕ್ಕೆ ಬೆನ್ನಿನಲ್ಲಿ ಜಾಗ ಎಲ್ಲಿ ಉಂಟು? ಈ ಬಾರಿ ಹಾಕುವವರು ಇದ್ದರೆ ಎದೆಗೇ ಹಾಕಬೇಕು. ವಿಮಾನ ಮಾಯ ಆಗುವುದರ ಬಗ್ಗೆ ನೀವು ಮಾತನಾಡ್ತೀರಿ...ನಮ್ಮ ನೇತ್ರಾವತಿ ನದಿ ಮಾಯ ಆಗುವುದರ ತಲೆಬಿಸಿಯಲ್ಲಿ ನಾನಿ ದ್ದೇನೆ....ನಾನು ಓಟಿಗೆ ನಿಲ್ಲಬಾರದು ಎನ್ನುವ ಒಂದೇ ಒಂದು ಕಾರಣಕ್ಕೆ ಮೊಯ್ಲಿಯವರು ನೇತ್ರಾವತಿಯನ್ನು ಮಾಯ ಮಾಡ್ತಾರಂತೆ...ಇಡೀ ಮಂಗಳೂರನ್ನೇ ಮಾಯ ಮಾಡ್ತಾರಂತೆ...ನಾನು ಜೀವದಲ್ಲಿದ್ದರೆ ಬಿಡುವುದಿಲ್ಲ....’’ ಅಷ್ಟರಲ್ಲಿ ಪೂಜಾರಿ ಪಕ್ಕಕ್ಕೆ ದೃಷ್ಟಿ ಹಾಯಿಸಿದ್ದೇ ಓಡ ತೊಡಗಿದರು. ಕಾಸಿಯೂ ಹೆದರಿ ಅವರೊಟ್ಟಿಗೆ ಓಡತೊಡಗಿದ ‘‘ಎಂತಾಯಿತು ಸಾರ್...ಯಾಕೆ ಓಡ್ತಾ ಇದ್ದೀರಿ...’’ ಕಾಸಿ ಗಾಬರಿಯಿಂದ ಕೇಳಿದ.
‘‘ಅದೇ ಕಲ್ಲಡ್ಕದ ಪ್ರಭಾಕರ ಭಟ್ಟರು ಬರುತ್ತಿ ದ್ದಾರೆ. ಅವರು ಬಂದು ಇನ್ನು ನಮಸ್ಕಾರ ಹಾಕಿದರೆ ಮಂಗಳೂರಿನ ಬ್ಯಾರಿಗಳನ್ನು ಸಮಾಧಾನ ಮಾಡುವುದು ಯಾರು? ಇತ್ತೀಚೆಗೆ ಈ ಪ್ರಭಾಕರ ಭಟ್ಟರ ಕಾಟದಿಂದ ಬೀದಿಗಿಳಿಯುವುದೇ ಕಷ್ಟವಾಗಿದೆ ಮಾರ್ರೆ....ಹೋದಲ್ಲೆಲ್ಲ ಅಡ್ಡ ಬಂದು ನನಗೆ ಒಂದು ನಮಸ್ಕಾರ ಹಾಕಿ ಹೋಗುವುದು. ಇದು ಪೆದಂಬಲ್ವಾ....ನಾನು ಏನು ಮಾಡುವುದು? ಅವರು ನಮಸ್ಕಾರ ಹಾಕಿದರು ಅಂತ ಅವರಿಗೆ ಚೂರಿ ಹಾಕ್ಲಿಕ್ಕೆ ಆಗ್ತದಾ? ಅದು ನಮ್ಮ ಸಂಸ್ಕೃತಿಯಾ....’’ ಎಂದು ಏದುಸಿರು ಬಿಡುತ್ತಾ ಕೇಳಿದರು.

Monday, March 17, 2014

ಮೋದಿ ಜೊತೆಗೆ ಜಾಫರ್ ಶರೀಫ್ ಡಿನ್ನರ್!

 
ಮಾರ್ಚ್ ೧೬ ರವಿವಾರ ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ 

ಮಧ್ಯಾಹ್ನದ ಹೊತ್ತಿಗೆ ಪತ್ರಕರ್ತ ಎಂಜಲು ಕಾಸಿಯ ಹೊಟ್ಟೆ ಚುರ್ರ್‌ ಅಂತು. ರಾಜಕೀಯ ರ್ಯಾಲಿಗಳ ಹಿಂದೆ ಹೋಗಿ ಹೋಗಿ ಆತ ಸುಸ್ತಾಗಿದ್ದ. ನೇರವಾಗಿ ಒಂದು ಹೊಟೇಲನ್ನು ಹೊಕ್ಕು, ವೈಟರ್‌ನನ್ನು ಕರೆದು ಊಟಕ್ಕೆ ಆರ್ಡರ್ ಮಾಡಿದ. ಅಷ್ಟರಲ್ಲಿ ವೈಟರ್ ಕೇಳಿದ ‘‘ಸಾರ್...ಯಾರ ಜೊತೆಗೆ...ಮೋದಿ ಜೊತೆಗೆ ಊಟ ಮಾಡ್ತೀರಾ...ಕೇಜ್ರಿವಾಲ್ ಜೊತೆಗೆ ಊಟ ಮಾಡ್ತೀರಾ...ರಾಹುಲ್ ಜೊತೆಗೆ ಊಟ ಮಾಡ್ತೀರಾ?’’ ಕಾಸಿಗೆ ಅರ್ಥವಾಗಲಿಲ್ಲ. ‘‘ಅಂದ್ರೆ...’’ ಎಂದು ಕೇಳಬೇಕೆನ್ನುವಾಗಲೇ ವೈಟರ್ ಉತ್ತರಿಸಿದ ‘‘ಇದೆಲ್ಲ ಚುನಾವಣಾ ಸ್ಪೆಶಲ್ ಸಾರ್.
ಈಗಾಗಲೇ ಬೇರೆ ಬೇರೆ ಪಕ್ಷದ ನಾಯಕರು ಇಷ್ಟು ರೂಪಾಯಿ ಕೊಟ್ರೆ ನಮ್ಮ ನಾಯಕರ ಜೊತೆಗೆ ಊಟ ಮಾಡಬಹುದು...ಕಾಫಿ ಕುಡಿಯಬಹು...ಎಂದು ಘೋಷಣೆ ಮಾಡಿದ್ದಾರೆ. ಇದೀಗ ನಾವೇ ಅವರೆಲ್ಲರಿಂದ ಗುತ್ತಿಗೆ ಪಡೆದಿದ್ದೇವೆ...ನಿಮಗೆ ಯಾರ ಜೊತೆಗೆ ಊಟ ಮಾಡಬೇಕೋ ಅವರ ಜೊತೆಗೆ ನಾವು ವ್ಯವಸ್ಥೆ ಮಾಡು ತ್ತೇವೆ....’’
ಕಾಸಿಗೆ ಕುತೂಹಲವಾಯಿತು. ‘‘ಹಾಗಾದ್ರೆ ರಾಹುಲ್ ಜೊತೆಗೆ ಊಟ ಮಾಡುವುದಕ್ಕೆ ವ್ಯವಸ್ಥೆ ಮಾಡ್ತೀರಾ...’’
ವೈಟರ್ ಬರೆದುಕೊಳ್ಳಲಾರಂಭಿಸಿದ ‘‘ಖಂಡಿತಾ ವ್ಯವಸ್ಥೆ ಮಾಡುವ. ಬರೇ ರಾಹುಲ್ ಮಾತ್ರವ, ಅಥವಾ ನೆಂಜಿಕೊಳ್ಳುವುದಕ್ಕೆ ಇತರ ಪುಡಿ ಕಾಂಗ್ರೆಸ್ಸಿಗರೂ ಜೊತೆಗೆ ಬೇಕಾ...’’ ಕಾಸಿಗೆ ಅರ್ಥವಾಗಲಿಲ್ಲ. ಮತ್ತೆ ವೈಟರ್ ವಿವರಿಸಿದ ‘‘ಸಾರ್...ರಾಹುಲ್ ಜೊತೆಗೆ ದಿಗ್ವಿಜಯ್ ಸಿಂಗ್ ಇದ್ದರೆ ಊಟದ ಬಿಲ್ ಜಾಸ್ತಿಯಾಗತ್ತೆ. ಲೋಕಲ್ ಪುಡಿ ರಾಜಕಾರಣಿಗಳಿಗೆ ಯಾವುದೇ ಚಾರ್ಜ್ ಬೀಳಲ್ಲ...’’

‘‘ಬರೇ ರಾಹುಲ್ ಜೊತೆಗೆ ಊಟಕ್ಕೆ ಎಷ್ಟಾಗತ್ತೆ....?’’ ಕಾಸಿ ಮುಗ್ಧವಾಗಿ ಕೇಳಿದ.
‘‘ಸಾರ್ ರಾಹುಲ್ ಜೊತೆಗೆ ಊಟ ಮಾಡುವುದಾದರೆ ನೀವು ಬಿಲ್‌ನ್ನು ಡಾಲರ್ ಮೂಲಕ ಪಾವತಿಸಬೇಕಾಗತ್ತೆ. ಬೇಕಾದ್ರೆ... ಸ್ವಿಸ್‌ನಲ್ಲಿರುವ ಅವರ ಅಕೌಂಟಿಗೆ ಹಾಕಿದರೂ ನಡೆಯುತ್ತದೆ. ಒಂದು ಹೊತ್ತಿನ ಊಟಕ್ಕೆ ಎರಡು ಕೋಟಿ ರೂಪಾಯಿ. ಮೂರು ಹೊತ್ತಿನ ಊಟಕ್ಕೆ ರಿಯಾಯಿತಿ ಇದೆ...’’
ಕಾಸಿಗೆ ತಲೆ ಗಿರ್ರೆಂದು ತಿರುಗಿತು. ಕಿಸೆಯಲ್ಲಿ ಬರೇ 30 ರೂಪಾಯಿ ಇಟ್ಟುಕೊಂಡು ಊಟಕ್ಕೆ ಕುಳಿತವನಲ್ಲಿ ಒಂದು ಊಟಕ್ಕೆ ಎರಡು ಕೋಟಿ ರೂಪಾಯಿ ಎಂದರೆ ಏನಾಗಬಹುದು ಪಾಪ!
‘‘ರೀ...ಬೇಡಾ...ರಾಹುಲ್ ಸಹವಾಸವೇ ಬೇಡ. ನನಗೆ ಆಮ್ ಆದ್ಮಿ ಕೇಜ್ರಿವಾಲ್ ಜೊತೆಗಿನ ಊಟ ಕೊಡಿ...’’ ಮೂವತ್ತು ರೂಪಾಯಿಯ ಪ್ಲೇಟ್ ಊಟ ಇನ್ನಷ್ಟು ಕಡಿಮೆಗೆ ಸಿಗಬಹುದು ಎಂದು ಕಾಸಿ ಭಾವಿಸಿದ. ಆಮ್ ಆದ್ಮಿಯಲ್ವೆ?
ವೈಟರ್ ಸಲಹೆ ನೀಡಿದ ‘‘ಸಾರ್...ಅದು ಆಮ್ ಆದ್ಮಿ ಸಾರ್. ಚುನಾವಣೆಯ ಹೊತ್ತಿನಲ್ಲಿ ಆಮ್ ಆದ್ಮಿಗಳ ಬೆಲೆ ಏಕಾಏಕಿ ಹೆಚ್ಚುತ್ತೆ. ಅವರ ಜೊತೆ ಊಟ ತುಂಬಾ ಕ್ವಾಸ್ಟ್ಲಿ ಸಾರ್. ಮೊನ್ನೆ ಬಿಜೆಪಿಯ ಎಲ್. ಕೆ. ಅಡ್ವಾಣಿಯವರೇ ಕೇಜ್ರಿವಾಲ್ ಊಟಕ್ಕೆ ಬುಕ್ ಮಾಡಿದ್ರು. ಆದರೆ ಈವರೆಗೂ ಕೇಜ್ರಿವಾಲ್ ಅವಕಾಶ ಕೊಟ್ಟಿಲ್ಲ. ಸೋನಿಯಾಗಾಂಧಿಗೂ ಕೇಜ್ರಿವಾಲ್ ಊಟ ಅಂದ್ರೆ ಒಳಗೊಳಗೆ ಇಷ್ಟ. ಆದರೆ ತುಂಬಾ ಡಿಮಾಂಡ್ ಸಾರ್. ನಿಮಗೆ ಅದರ ತಂಟೆ ಬೇಡ’’
ಕಾಸಿಗೆ ಕುತೂಹಲವಾಯಿತು. ‘‘ಅಲ್ಲರೀ... ಎಲ್ಲರೂ ಕೇಜ್ರಿವಾಲ್ ಜೊತೆಗಿನ ಊಟವನ್ನು ಯಾಕೆ ಇಷ್ಟ ಪಡ್ತಾ ಇದ್ದಾರೆ? ಅದರಲ್ಲೇನಿದೆ ವಿಶೇಷ?’’
 ‘‘ಅದು ಹೊಸ ರುಚಿ ಕಾಲಂನಲ್ಲಿ ಬಂದಿರೋ ಸ್ಪೆಶಲ್ ಊಟ. ವಿದೇಶದಿಂದಲೂ ಅದಕ್ಕೆ ಒಳಗೊಳಗೆ ಡಿಮ್ಯಾಂಡ್ ಇದೆಯಂತೆ. ಅಷ್ಟೇ ಅಲ್ಲ, ತೆಳುವಾಗಿ ಆ ಊಟದ ಮೇಲೆ ಕೇಸರಿಯನ್ನು ಸವರಿರುತ್ತಾರೆ. ಒಳಗೆ ದಲಿತ, ಶ್ರೀಸಾಮಾನ್ಯ ಎಂದೆಲ್ಲ ಬೇರೆ ಬೇರೆ ಮಸಾಲೆಗಳಿವೆ. ಸಂಪೂರ್ಣ ಎಸಿ ರೂಂನಲ್ಲೇ ಆಮ್ ಆದ್ಮಿ ಊಟ ನಡೆಯೋದು. ದಲಿತರಿಗಾಗಿ ದೇವನೂರು ಮಸಾಲೆ ಅರೆದು ತಯಾರಿಸಿದ ಊಟ ಅದು. ಐಟಿ ಕಂಪೆನಿಯ ಹುಡುಗರಿಗೆ ಬೇಕಾದ ಫಾಸ್ಟ್‌ಫುಡ್ ಐಟಂಗಳೂ ಅದರಲ್ಲಿವೆ. ರೈತರಿಗೆ ಬೇಕಾದ ಕಡ್ಲೆಕಾಯಿ ಬೀಜಗಳನ್ನೂ ಬರೋಬರಿ ಸೇರಿಸಲಾಗುತ್ತದೆ. ಈ ಕಾರಣದಿಂದ ಕೇಜ್ರಿವಾಲ್ ಊಟಕ್ಕೆ ವಿಶೇಷ ಬೇಡಿಕೆ. ನಿಮಗೆ ಬೇಕಾದರೆ ವ್ಯವಸ್ಥೆ ಮಾಡಿಕೊಡುವ. ಆದರೆ ಬಿಲ್ ನೋಡಿ ಬೆಚ್ಚಿ ಬೀಳಬಾರದು...’’
ಕಾಸಿ ಕುಳಿತಲ್ಲೇ ಹಣೆ ಒರೆಸಿಕೊಂಡ. ವೈಟರ್ ಮತ್ತೊಂದು ಸಲಹೆ ನೀಡಿದ ‘‘ಸಾರ್...ಬೇಕಾದರೆ ಕೇಜ್ರಿವಾಲ್ ಜೊತೆಗೆ ಚಹಾ ಕುಡಿಯಬಹುದು...’’
‘‘ಊಟದ ಹೊತ್ತಲ್ಲಿ ಯಾರಾದರೂ ಚಹಾ ಕುಡೀತಾರ...ಹೋಗ್ಲಿ...ಕೇಜ್ರಿವಾಲ್ ಜೊತೆಗೆ ಚಹಾ ಕುಡಿಯಬೇಕಾದರೆ ಎಷ್ಟಾಗುತ್ತದೆ...’’
‘‘ಬರೇ ಕಡಿಮೆ ಸಾರ್...ಒಂದು ಚಹಾಕ್ಕೆ ಎರಡು ಲಕ್ಷ ರೂಪಾಯಿ ಆಗುತ್ತದೆ. ಅದು ನಿಮ್ಮ ಖಾತೆಗೇ ಹೋಗಿ ಬೀಳುತ್ತದೆ. ಆಮ್ ಆದ್ಮಿ ಅಂದರೆ ನೀವೇ ಅಲ್ಲವೆ? ಅವರು ಪ್ರಧಾನಿಯಾದರೆ ನಿಮಗೇ ಅಲ್ಲವೆ ಲಾಭ?’’ ವೈಟರ್ ಸಮಜಾಯಿಶಿ ಹೇಳಿದ.
ಕಾಸಿ ತನ್ನ ಜೇಬಲ್ಲಿರುವ 30 ರೂಪಾಯಿಯನ್ನು ಮತ್ತೊಮ್ಮೆ ಮುಟ್ಟಿ ನೋಡಿ ಹೇಳಿದ ‘‘ಕೇಜ್ರಿವಾಲ್ ಸಹವಾಸವೇ ಬೇಡ. ನನಗೆ ನರೇಂದ್ರ ಮೋದಿ ಜೊತೆ ಊಟ ಮಾಡಲು ಸಾಧ್ಯವೆ?’’
‘‘ಇಲ್ಲ ಸಾರ್. ನರೇಂದ್ರ ಮೋದಿಯ ಜೊತೆಗೆ ಊಟ ಮಾಡಲು ಜಾಫರ್ ಶರೀಫ್ ಅವರು ಬುಕ್ ಮಾಡಿದ್ದಾರೆ. ಇವತ್ತು ರಾತ್ರಿಯ ಸ್ಪೆಶಲ್ ಬಿರಿಯಾನಿಗಾಗಿ ಈಗಾಗಲೇ ಎರಡು ಕೊಬ್ಬಿದ ಅಲ್ಪಸಂಖ್ಯಾತ ಕುರಿಗಳನ್ನು ಹಲಾಲ್ ಮಾಡಲಾಗಿದೆ. ನರೇಂದ್ರ ಮೋದಿಯ ಜೊತೆಗೆ ಜಾಫರ್ ಶರೀಫ್ ಇಫ್ತಾರ್ ಕೂಟವನ್ನು ಮಾಡಿದ್ದಾರೆ...’’
ಕಾಸಿ ಬೆಚ್ಚಿ ಬಿದ್ದ. ಅರೆ! ರಮಝಾನ್ ತಿಂಗಳೇ ಬಂದಿಲ್ಲ. ಇಫ್ತಾರ್ ಕೂಟವೇ? ‘‘ಇಫ್ತಾರ್ ಕೂಟ ಮಾಡುವುದು ರಮಝಾನ್‌ನ ಉಪವಾಸದ ಸಂದರ್ಭ ದಲ್ಲಿ ಅಲ್ಲವೆ?’’ ತನ್ನ ಪ್ರಶ್ನೆಯನ್ನು ಮುಂದಿಟ್ಟ.
ವೈಟರ್ ಹಲ್ಲು ಕಿರಿದ. ‘‘ಟಿಕೆಟ್ ಕೊಡದೇ ಕಾಂಗ್ರೆಸ್‌ನೋರು ಜಾಫರ್ ಶರೀಫ್ ಅವರನ್ನು ಉಪವಾಸ ಕೆಡವಿದ್ದಾರೆ ಸಾರ್. ಅದರ ಸಿಟ್ಟಿನಲ್ಲಿ ಅವರು ನರೇಂದ್ರ ಮೋದಿ ಜೊತೆಗೆ ಇಫ್ತಾರ್ ಕೂಟ ಇಟ್ಕೊಂಡಿದ್ದಾರೆ ಸಾರ್. ಟಿಕೆಟ್ ಕೊಡದೇ ಇದ್ದರೆ ನಾನು ಮಕ್ಕಾಕ್ಕೆ ಹೋಗ್ತೇನೆ ಎಂದು ಜಾಫರ್ ಶರೀಫ್ ಅನೌನ್ಸ್ ಮಾಡಿದ್ದರು ಸಾರ್. ಕಾಟ ತಪ್ಪಿತು ಎಂದು ಕಾಂಗ್ರೆಸ್‌ನೋರು ಟಿಕೆಟ್ ಕೊಡಲಿಲ್ಲ. ಈಗ ಹೇಳಿದಂತೆ ಮಕ್ಕಾಕ್ಕೆ ಹೋಗದೆ ಗುಜರಾತ್‌ನಲ್ಲಿ ಮೋದಿ ಜೊತೆಗೆ ಊಟ ಮಾಡ್ತೇನೆ ಎಂದು ಕಾಂಗ್ರೆಸ್‌ನೋರಿಗೆ ಬೆದರಿಕೆ ಹಾಕ್ತಾ ಇದ್ದಾರೆ ಸಾರ್...ನಿಮಗೆ ನರೇಂದ್ರ ಮೋದಿ ತಂಟೆ ಬೇಡ ಸಾರ್. ಅಡ್ವಾಣಿಯವರ ಜೊತೆಗೆ ನೀವು ಊಟ ಮಾಡುವುದಾದರೆ ಫ್ರೀಯಾಗಿ ಮಾಡಬಹುದು...ಆದರೆ ಅವರ ಊಟದ ಬಿಲ್‌ನ್ನು ನೀವು ಪಾವತಿಸಬೇಕಾಗುತ್ತದೆ...’’
ಅಡ್ವಾಣಿಯಾದರೂ ಫ್ರೀಯಾಗಿ ಸಿಕ್ಕಿದರಲ್ಲಾ ಎಂದು ಕಾಸಿ ಸಂತೋಷಗೊಂಡ ‘‘ಹಾಗಾದ್ರೆ ಫ್ರೀಯಾಗಿ ಯಾರ್ಯಾರ ಜೊತೆಗೆ ಊಟ ಮಾಡಬಹುದು ಹೇಳಿ...’’
 ವೈಟರ್ ಪಟ್ಟಿಯನ್ನು ಓದಿ ಹೇಳಿದ ‘‘ದೇವೆಗೌಡರ ಜೊತೆಗೆ ಫ್ರೀಯಾಗಿ ರಾಗಿ ಮುದ್ದೆ ತಿನ್ನಬಹುದು. ವಾಟಾಳ್ ನಾಗರಾಜ್ ಜೊತೆಗೆ ಸೇರಿ ಫ್ರೀಯಾಗಿ ಸೆಗಣಿ ತಿನ್ನಬಹುದು. ಕುಮಾರಸ್ವಾಮಿ ಮಣ್ಣಿನ ಮೊಮ್ಮಗನಾಗಿರುವುದರಿಂದ ಅವರ ಜೊತೆಗೆ ಫ್ರೀಯಾಗಿ ಮಣ್ಣು ತಿನ್ನಬಹುದು...ಮೈಸೂರಿನ ಅಭ್ಯರ್ಥಿ ಪತ್ರಕರ್ತ ಪ್ರತಾಪ ಸಿಂಹನ ಜೊತೆಗೆ ಸೇರಿ ಫ್ರೀಯಾಗಿ ನರೇಂದ್ರ ಮೋದಿಯ ಅಭಿವೃದ್ಧಿಯ ಬೂಟು ನೆಕ್ಕಬಹುದು... ಪುತ್ತೂರಿನ ಸದಾನಂದ ಗೌಡರ ಜೊತೆಗೆ ಕುಳಿತು ಫ್ರೀಯಾಗಿ ಸುಬ್ರಹ್ಮಣ್ಯದಲ್ಲಿ ಎಂಜಲು ಸೇವೆ ಮಾಡಬಹುದು...’’
ಹೀಗೆಲ್ಲ ಫ್ರೀ ಐಟಂಗಳನ್ನು ವೈಟರ್ ಹೇಳು ತ್ತಿದ್ದಂತೆಯೇ ಎಂಜಲು ಕಾಸಿ ಅಲ್ಲಿಂದ ಎದ್ದು ಓಡ ತೊಡಗಿದ. ಅವನಿಗೆ ಮನೆಯಲ್ಲಿ ಹೆಂಡತಿ ಮಕ್ಕಳ ಜೊತೆಗೆ ಅಂಬಲಿ ಕುಡಿಯುವ ಮನಸ್ಸಾಗಿತ್ತು.

ಕಾರ್ಟೂನ್-ಪಿ ಮಹಮ್ಮದ್-ಕೃಪೆ-ವಿ.ಕ. 

Sunday, March 2, 2014

ಕೋಪ ಬಂದರೆ ಅರಬೀಸಮುದ್ರವನ್ನೇ ತಿರುಗಿಸುತ್ತೇನೆ ಗೊತ್ತುಂಟಾ?

ಶಿವನು ತಲೆಯ ಮೇಲೆ ಗಂಗೆಯನ್ನು ಕಟ್ಟಿಕೊಂಡಂತೆ ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರು ತಲೆಯ ಮೇಲೆ ನೇತ್ರಾವತಿ ನದಿಯನ್ನು ಕಟ್ಟಿ, ತೊಡೆಯ ಮೇಲೆ ತನ್ನ ಪುತ್ರ ಹರ್ಷ ಮೊಯ್ಲಿಯನ್ನು ಕುಳ್ಳಿರಿಸಿ ತಪಸ್ಸು ಗೈಯುತಿರುವಾಗ ವಿಶ್ವಾಮಿತ್ರನ ಮುಂದೆ ಮೇನಕೆ ಹಾಜರಾಗುವಂತೆ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿ ಹಾಜರಾದ.
‘‘ಸಾರ್, ನೀವು ನೇತ್ರಾವತಿಯನ್ನು ತಿರುಗಿಸುತ್ತೀ ರಂತೆ ಹೌದಾ?’’ ಕೇಳಿದ.

‘‘ಹೌದ್ರಿ...ನಾನೇ ಮಂಗಳೂರಿಗೆ ಬೇಡಚ ಎಂದ ಮೇಲೆ, ನನ್ನೊಟ್ಟಿಗೆ ನೇತ್ರಾವತಿಯನ್ನೂ ನನ್ನ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗುತ್ತೇನೆ. ಮೂರು ಸರ್ತಿ ಮಂಗಳೂರಿನಲ್ಲಿ ಓಟಿಗೆ ನಿಂತೆ. ಸೋತೆ. ನಾನೆ ಬೇಡ ವೆಂದ ಮೇಲೆ, ನಾನು ಈ ನೇತ್ರಾವತಿಯನ್ನು ಮಂಗಳೂರಿನವರಿಗೆ ಬಿಡುತ್ತೇನ...ಅದಕ್ಕೇ ಅದನ್ನು ನಾನು ನನ್ನ ನೆತ್ತಿಯ ಮೇಲೆ ಕಟ್ಟಿಕೊಂಡು ತಿರುಗಾಡುತ್ತಿದ್ದೇನೆ...’’

‘‘ಸಾರ್...ಈ ನೇತ್ರಾವತಿಯನ್ನು ಮಂಗಳೂರಿಗೆ ಬಿಟ್ಟು ಬಿಡಬೇಕಾದರೆ ಏನು ಮಾಡಬೇಕು ಸಾರ್...’’ ಎಂಜಲು ಕಾಸಿ ರಾಜಿ ಪಂಚಾತಿಗೆಗೆ ಇಳಿದ. ಕೋಪ ತಾಪದಿಂದ ಇದ್ದ ವೀರಪ್ಪ ಮೊಯ್ಲಿಯವರು ಈಗ ಶಾಂತರಾದರು. ಮೆಲ್ಲಗೆ ಹಸನ್ಮುಖರಾಗಿ ತನ್ನ ಸುಪುತ್ರ ಹರ್ಷಮೊಯ್ಲಿಯ ಕಡೆಗೆ ನೋಡಿದರು. ‘‘ಹೋಗಲಿ. ನೀವು ಹೇಳಿದ್ದೀರಿ ಎಂದು ಇನ್ನೊಂದು ಅವಕಾಶ ಕೊಡುವೆ. ನನ್ನ ಬದಲಿಗೆ ಹರ್ಷ ಮೊಯ್ಲಿಯನ್ನು ಗೆಲ್ಲಿಸಿದರೆ ಈ ನೇತ್ರಾವತಿಯನ್ನು ಮಂಗಳೂರಿಗೇ ಬಿಟ್ಟು ಬಿಡುತ್ತೇನೆ. ಇಲ್ಲವಾದರೆ ನನ್ನ ಲುಂಗಿಗೆ ಬೆಲ್ಟಿನಂತೆ ನೇತ್ರಾವತಿಯನ್ನು ಕಟ್ಟಿಕೊಂಡು ಸೀದಾ ದಿಲ್ಲಿಗೆ ಹೋಗುತ್ತೇನೆ ಅಷ್ಟೇ...’’

‘‘ಸಾರ್...ಹರ್ಷ ಮೊಯ್ಲಿ ಏನು ಸಾಧನೆ ಮಾಡಿದ್ದಾ ರೆಂದು ಅವರನ್ನು ಜನರು ಗೆಲ್ಲಿಸಬೇಕು ಸಾರ್...?’’ ಎಂಜಲು ಕಾಸಿ ಕೇಳಿದ.
‘‘ನನ್ನ ಮಗನಾಗಿ ಹುಟ್ಟಿರುವುದು ಸಣ್ಣ ಸಾಧನೆ ಯೇನ್ರಿ...ಆ ಸಾಧನೆಗಾಗಿ ಮಂಗಳೂರಿನ ಜನರು ಈ ನನ್ನ ಸುಪುತ್ರನನ್ನು ಗೆಲ್ಲಿಸಿ ಎಂಪಿ ಮಾಡಿಸಬೇಕು. ಉಳಿ ದಂತೆ ಅವನನ್ನು ಮಿನಿಸ್ಟರ್ ಮಾಡುವ ಹೊಣೆಯನ್ನು ಬೇಕಾದರೆ ನಾನು ಹೊತ್ತುಕೊಳ್ಳುತ್ತೇನೆ...’’ ಮೊಯ್ಲಿ ಭರವಸೆ ನೀಡಿದರು.
‘‘ಸಾರ್...ಅವರನ್ನು ಮಂಗಳೂರಿನ ಜನರು ಆಯ್ಕೆ ಮಾಡಿದರೆ ನದಿ ತಿರುವು ಯೋಜನೆ ಕೈ ಬಿಡುತ್ತೀರಾ ಸಾರ್..?’’ ಕಾಸಿ ಮತ್ತೊಮ್ಮೆ ಖಚಿತ ಪಡಿಸಲು ಕೇಳಿಕೊಂಡ.
‘‘ಖಂಡಿತಾ ಕೈ ಬಿಡುತ್ತೇವೆ ಕಣ್ರೀ...ಬದಲಿಗೆ ಎತ್ತಿನ ಹೊಳೆ ಯೋಜನೆ ಕೈಗೆತ್ತಿಕೊಳ್ಳುತ್ತೇವೆ...’’ ವೀರಪ್ಪ ಮೊಯ್ಲಿ ಭರವಸೆ ನೀಡಿದರು.
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಅದೆರಡೂ ಒಂದೇ ಅಂತಲ್ವಾ ಸಾರ್...ಹೆಸರು ಬೇರೆ ಬೇರೆ...’’
ಮೊಯ್ಲಿ ಸಿಟ್ಟಾದರು. ‘‘ನೇತ್ರಾವತಿ ಹೊಳೆಯನ್ನೂ ಮುಟ್ಟಬೇಡಿ...ಎತ್ತಿನ ಹೊಳೆಯನ್ನೂ ಮುಟ್ಟಬೇಡಿ ಎಂದರೆ ಹೇಗೆ...ಮಂಗಳೂರಿನವರು ಶಾಂತ ಸ್ವಭಾವದವರು. ಹೊಳೆ ಹರಿದು ಸಮುದ್ರಕ್ಕೆ ಸೇರಿ ವೇಸ್ಟ್ ಆಗ್ಬಾರ್ದು ನೋಡಿ...ಅದಕ್ಕಾಗಿ...’’
‘‘ಸಾರ್...ಈ ನದಿ ತಿರುವಿನ ಮೂಲಕ ನೇತ್ರಾವತಿಯ ಮತಗಳನ್ನೆಲ್ಲ ಚಿಕ್ಕ ಬಳ್ಳಾಪುರ ಕಡೆಗೆ ತಿರುಗಿಸುವ ಉಪಾಯ ಏನಾದರೂ ಉಂಟಾ ಸಾರ್...’’ ಕಾಸಿ ಕೇಳಿದ.
‘‘ನೋಡ್ರಿ ಈ ಯೋಜನೆಯ ಮೂಲಕ ಬಿಡುಗಡೆ ಯಾಗುವ ಹಣವನ್ನು ನಾವು ತಿರುವು ಯೋಜನೆಯ ಮೂಲಕ ತಿರುಗಿಸಿ ಎಲ್ಲ ಶಾಸಕರಿಗೆ, ಎಂಪಿಗಳಿಗೆ ಹಂಚುವುದು ನಮ್ಮ ಗುರಿ. ಆಗ ಎಲ್ಲ ಪ್ರದೇಶದ ಜನ ಪ್ರತಿನಿಧಿಗಳಿಗೂ ನ್ಯಾಯ ಸಿಕ್ಕಿದಂತಾಗುತ್ತದೆ. ಇಲ್ಲದಿ ದ್ದರೆ ಎಲ್ಲ ಕಡಲಿಗೆ ಸೇರಿ ವೇಸ್ಟಾಗುತ್ತದೆ...’’ ವೀರಪ್ಪ ಮೊಯ್ಲಿ ಯೋಜನೆಯ ಉದ್ದೇಶವನ್ನು ವಿವರಿಸಿದರು.
‘‘ಸಾರ್...ನೇತ್ರಾವತಿಯನ್ನು ತಿರುಗಿಸುವ ಭರದಲ್ಲಿ ನಿಮ್ಮ ಮಗ ಹರ್ಷಮೊಯ್ಲಿಯ ಭವಿಷ್ಯವೂ ಅದರ ಜೊತೆಗೆ ಕೊಚ್ಚಿ ಸಮುದ್ರ ಸೇರಿದರೆ...’’ ಕಾಸಿ ಅನುಮಾನದಿಂದ ಕೇಳಿದ.
‘‘ಅಪಶಕುನ ಮಾತನಾಡಬೇಡಿ ಕಾಸಿಯವ್ರೆ... ನಾನು ಅದಕ್ಕೆ ಅಲ್ಲವಾ ನೇತ್ರಾವತಿಯನ್ನು ನೆತ್ತಿಗೆ ಕಟ್ಟಿಕೊಂಡು ತಿರುಗಾಡುವುದು. ಅವನನ್ನು ನಾನು ನೇರವಾಗಿ ನದಿಗೆ ಇಳಿಸುವುದಿಲ್ಲ. ನನ್ನ ಹೆಗಲ ಮೇಲೆ ಕುಳ್ಳಿರಿಸಿ ನಾನೇ ಚುನಾವಣೆಯೆಂಬ ನದಿಗೆ ಇಳಿಯು ತ್ತೇನೆ...’’ ಮೊಯ್ಲಿ ಹೇಳಿದರು.
‘‘ಸಾರ್ ತಂದೆ ಮಗ ಒಟ್ಟಿಗೆ ಕೊಚ್ಚಿಕೊಂಡು ಹೋದರೆ...’’ ಕಾಸಿಯ ಅನುಮಾನ ಮುಗಿಯಲಿಲ್ಲ.
‘‘ಕೊಚ್ಚಿಕೊಂಡು ಹೋಗಲಿಕ್ಕೆ...ಈ ನೇತ್ರಾವತಿ ಯಲ್ಲಿ ನೀರು ಎಷ್ಟುಂಟು? ಬರೇ ಮೊಣಕಾಲಿನವರೆಗೆ ಮಾತ್ರವಲ್ಲವ? ನನ್ನನ್ನು ಮೂರು ಬಾರಿ ಸೋಲಿಸಿದ ಮಂಗಳೂರಿನ ಜನರು ಕುಡಿಯುವುದಕ್ಕೆ ನೀರಿಲ್ಲದೆ ನನ್ನ ಹೆಸರು ಕರೆಯಬೇಕು...ಅಷ್ಟು ಮಾಡದಿದ್ದರೆ ನೋಡಿ...’’ ಎಂದು ತನ್ನ ಹೆಗಲಿನ ಶಾಲನ್ನು ಕೊಡವಿ ಕೊಂಡರು.
‘‘ಆದರೆ ಈ ಬಾರಿ ಜನಾರ್ದನ ಪೂಜಾರಿಯನ್ನು ಗೆದ್ದ ಬಳಿಕ ಬಿಜೆಪಿಯನ್ನು ಎದುರಿಸುವಂತಹ ಸ್ಥಿತಿ ಇದೆ. ಪೂಜಾರಿಯ ಎದುರುಗಡೆ ಹರ್ಷ ಮೊಯ್ಲಿ ಗೆಲ್ಲಬಹುದಾ?’’ ಕಾಸಿ ಕೇಳಿದ.
‘‘ನನ್ನ ಮಗ ಹುಷಾರಿದ್ದಾನೆ. ಅವನು ಒಂದು ನಿಮಿಷದಲ್ಲಿ ಇಡೀ ಮಂಗಳೂರು ಸುತ್ತಿದ್ದಾನೆ ಗೊತ್ತುಂಟಾ...ನಿಮಗೊಂದು ಕತೆ ಹೇಳ್ತೇನೆ. ಒಮ್ಮೆ ನನ್ನ ಮಗನ ಜೊತೆಗೆ ನಾನು ಹೇಳಿದೆ. ನೀನು ಒಂದು ನಿಮಿಷದಲ್ಲಿ ಇಡೀ ಮಂಗಳೂರು ಸುತ್ತಿ ಬರಬೇಕು ಅಂತಾ...ಆಗ ಅವನೇನು ಹೇಳಿದ ಗೊತ್ತುಂಟಾ? ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬರುವೆ ಎಂದ...’’ ಎನ್ನುತ್ತಾ ತೊಡೆಯ ಮೇಲಿರುವ ಮಗನ ಮುಖನ್ನು ಮೆಚ್ಚುಗೆಯಿಂದ ನೋಡಿದರು.
‘‘ಸಾರ್...ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬರುವುದು ಆಗುವ ಹೋಗುವ ವಿಷಯವಾ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಅದಕ್ಕೆ ಹೇಳಿದ್ದು. ನನ್ನ ಮಗ ಅಮೆರಿಕದಲ್ಲಿ ಓದಿ ಬಂದಿದ್ದರೂ, ಭಾರತದ ಐಡಿಯಾ ಹೊಂದಿದ್ದಾನೆ. ಅವನು ನನಗೆ ಎರಡು ಸುತ್ತು ಬಂದು ಹೇಳಿದ. ‘ತಂದೆಯೇ...ನಿನಗೆ ಎರಡು ಸುತ್ತು ಬಂದರೆ ಇಡೀ ಮಂಗಳೂರು ಸುತ್ತಿದ ಪುಣ್ಯ ಸಿಗುತ್ತದೆ ಎಂದು ಯಾವುದೋ ಮಹಾಕಾವ್ಯದಲ್ಲಿ ಓದಿದ್ದೇ...’ ಎಂದು. ಹಾಗೆ ಎರಡೇ ಎರಡು ಸೆಕೆಂಡಿನಲ್ಲಿ ಇಡೀ ಮಂಗಳೂರು ಸುತ್ತಿ ಬಂದ...’’
ಕಾಸಿಗೆ ತಲೆ ಗಿರ್ರೆಂದಿತು. ‘‘ಹಾಗಾದರೆ ಇಡೀ ದೇಶವನ್ನು ಸುತ್ತಿ ಬರುವುದು ಹೇಗೆ ಸಾರ್?’’ ಕಾಸಿ ತಲೆ ತುರಿಸುತ್ತಾ ಕೇಳಿದ.
ಮೊಯ್ಲಿ ನಗುತ್ತಾ ಉತ್ತರಿಸಿದರು ‘‘ಅದು ಭಾರೀ ಸುಲಭ. ರಾಹುಲ್‌ಗಾಂಧಿಯನ್ನು ಎರಡು ಸುತ್ತು ಸುತ್ತಿದರೆ ಆಯಿತು...’’
ಕಾಸಿ ಈಗ ಬೆಚ್ಚಿ ಬಿದ್ದ ‘‘ಸಾರ್...ಹಾಗಾದರೆ ಇಡೀ ವಿಶ್ವವನ್ನು ಸುತ್ತುವುದು ಹೇಗೆ ಸಾರ್?’’
‘‘ಅದು ಮತ್ತಷ್ಟು ಸುಲಭ. ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿಯವರನ್ನು ಒಟ್ಟಿಗೆ ನಿಲ್ಲಿಸಿ ಎರಡು ಸುತ್ತು ಸುತ್ತಿದರೆ ಇಡೀ ವಿಶ್ವವನ್ನು ಸುತ್ತಿದ ಪುಣ್ಯ ಸಿಗುತ್ತದೆ ಗೊತ್ತುಂಟಾ... ನನ್ನ ಮಗ ಇಡೀ ವಿಶ್ವವನ್ನು ಈಗಾಗಲೇ ಹಲವು ಬಾರಿ ಸುತ್ತಿ ಬಂದಿದ್ದಾನೆ...’’ ಎನ್ನುತ್ತಾ ಮೀಸೆಯ ಮೇಲೆ ಕೈಯಾಡಿಸಿದರು.
‘‘ಸಾರ್...ಹಾಗಾದ್ರೆ...ಮಂಗಳಗ್ರಹಕ್ಕೆ ಒಂದು ಸುತ್ತು ಬರುವುದು ಹೇಗೆ ಸಾರ್...’’ ಕಾಸಿ ಅಧಿಕ ಪ್ರಸಂಗದ ಪ್ರಶ್ನೆ ಕೇಳಿದ.
‘‘ಮಂಗಳಗ್ರಹಕ್ಕೆ ಸುತ್ತು ಬರುವುದು ಯಂತಕ್ಕೆ? ನಿನ್ನ ಬೊಜ್ಜ ಮಾಡುವುದಕ್ಕಾ? ನನ್ನ ಮಗನನ್ನು ತಮಾಷೆ ಮಾಡಿದರೆ ಉಂಟಲ್ಲಾ....ನಾನು ಸುಮ್ಮನಿರಲಿಕ್ಕಿಲ್ಲ...ನನ್ನ ಮಗನನ್ನು ಮಂಗಳೂರಿನಲ್ಲಿ ಗೆಲ್ಲಿಸದಿದ್ದರೆ ನಾನು ಸುಮ್ಮನೆ ಬಿಡುವುದಿಲ್ಲ. ನೇತ್ರಾವತಿ ಮಾತ್ರವಲ್ಲ, ಇಡೀ ಅರಬೀ ಸಮುದ್ರವನ್ನೇ ತಿರುಗಿಸುವ ಯೋಜನೆ ಹಾಕಿ ಬಿಡುತ್ತೇನೆ....’’ ಮೊಯ್ಲಿ ಶಪಥ ಮಾಡಿದರು.
‘‘ಅರಬೀ ಸಮುದ್ರವನ್ನು ತಿರುಗಿಸುವ ಬದಲು, ಈ ರಾಜಕಾರಣಿಗಳನ್ನೆಲ್ಲ ಮತದಾರರು ಅರಬೀ ಸಮುದ್ರದ ಕಡೆಗೆ ತಿರುಗಿಸಿದರೆ ಏನು ಮಾಡುತ್ತೀರಿ ಸಾರ್?’’ ಕಾಸಿ ಕೇಳಿದ್ದೇ...ಮೊಯ್ಲಿ ಗ್ಯಾಸ್ ಸಿಲಿಂಡರ್‌ನಂತೆ ಒಮ್ಮೆಲೆ ಸ್ಫೋಟಿಸಿದರು ‘‘ಯಾರಲ್ಲಿ...ಇವನನ್ನು ಹಿಡಿದು ಇವನ ಬಾಯಿಗೆ ನೂರರ ಹತ್ತು ನೋಟನ್ನು ತುರುಕಿ ಕಳುಹಿಸಿ. ಇನ್ನು ಮುಂದೆ ಇವನು ಎಲ್ಲಿಯೂ ನನ್ನ ವಿರುದ್ಧ ಬಾಯಿ ತೆರೆಯಬಾರದು’’
ಕಾಸಿ ರೋಮಾಂಚನಗೊಂಡು ಬಾಯಿ ಅಗಲಿಸಿ ಕೂತ.

Sunday, February 2, 2014

ಗುಜರಾತ್ ಚಾಯ್‌ವಾಲಾನ ರೆಡ್ ಲೇಬಲ್ ಟೀ....

ರವಿವಾರ - ಫೆಬ್ರವರಿ -02-2014ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ

 ‘‘ಆಯಿಯೇ... ಆಯಿಯೇ... ಸ್ಪೆಶಲ್ ಗುಜರಾತ್ ರೆಡ್ ಲೇಬಲ್ ಚಾಯ್, ಬ್ಲಾಕ್ ಲೇಬಲ್ ಚಾಯ್, ಗ್ರೀನ್ ಲೇಬಲ್ ಚಾಯ್...’’ ಎಂದು ಚಾಯ್ ವಾಲಾ ಕರೆಯುತ್ತಿದ್ದಂತೆಯೇ ಎಂಜಲು ಕಾಸಿ ಕಿವಿ ನಿಮಿರಿತು. ಗುಜರಾತ್‌ಗೆ ನರೇಂದ್ರ ಮೋದಿಯ ಇಂಟರ್ಯೂಗೆಂದು ಬಂದಿದ್ದ. ಹೇಗಿದ್ದರೂ ಚಾಯ್ ವಾಲಾ ಮುಖ್ಯಮಂತ್ರಿಯಾಗಿರುವ ನಾಡು. ಒಂದು ಚಹಾ ಕುಡಿದು ನೋಡುವ ಎಂದು ಗೂಡಂಗಡಿಗೆ ಕಾಲಿಟ್ಟರೆ, ಅದು ಗುಜರಾತ್‌ನ ಬಿಜೆಪಿ ಕಚೇರಿ ಯಾಗಿತ್ತು. ನೋಡಿದರೆ ನರೇಂದ್ರ
ಮೋದಿ ಸ್ವತಃ ಸ್ಟವ್ ಹೊತ್ತಿಸಿ ಚಹಾ ಮಾಡಿಕೊಡುತ್ತಿದ್ದರು.

ಅವರ ಬೆನ್ನ ಹಿಂದೆ ಬೇರೆ ಬೇರೆ ಲೇಬಲ್‌ನ ಟೀ ಡಬ್ಬಗಳಿದ್ದವು. ಕಾಸಿಯನ್ನು ಕಂಡದ್ದೇ ಮೋದಿ ಖುಷಿಯಾದರು ‘‘ಆಯಿಯೇ ಕಾಸಿ ಸಾಬ್ ಆಯಿಯೆ...ಹೇಗಿದೆ ಕರ್ನಾಟಕ ಮೀಡಿಯಾ... ಎಲ್ಲರಿಗೂ ಪ್ಲಾಸ್ಕ್‌ನಲ್ಲಿ ಚಹಾ ಕಳಿಸಿದ್ದೆ ಅಲ್ವಾ, ಸಿಕ್ಕಿದೆಯೇ? ಕೆಲವರಿಗೆ ಪರ್ಸನಲ್ ಆಗಿ ಬ್ಯಾಂಕ್ ಅಕೌಂಟಿಗೇ ಹಾಕಲು ಹೇಳಿದ್ದೇನೆ...’’ ಎಂದು ನಕ್ಕರು.

ಎಲ್ಲರೆದುರು ಈ ‘ಪರ್ಸನಲ್’ ಮ್ಯಾಟರ್ ಎತ್ತಿದ್ದು ಕಂಡು ಕಾಸಿಗೆ ಮುಜುಗರವಾಯಿತು. ಅವನು ನಾಚಿ ಕೊಂಡ. ‘‘ಬನ್ನಿ, ಬನ್ನಿ, ಗುಜರಾತ್‌ನ ವಿವಿಧ ಲೇಬಲ್ ಟೀ ಕುಡ್ದು ಹೋಗಿ...’’ ಎಂದು ಮೋದಿ ಕಾಸಿಯನ್ನು ಕರೆದರು.
ಕಾಸಿ ಅಂಗಡಿಯೊಳಗೆ ಕಾಲಿಟ್ಟ. ನೋಡಿದರೆ ಕಿಕ್ಕಿರಿದ ಜನ.
ಮೋದಿ, ತನ್ನ ಕೇಸರಿ ಟವೆಲ್‌ನಿಂದ ಹಣೆ ಒರೆಸಿಕೊಂಡು ಕಾಸಿ ಮುಂದೆ ನಿಂತರು. ‘‘ಯಾವ ಲೇಬಲ್ ಬೇಕು? ರೆಡ್ ಲೇಬಲ್ ಟೀ, ಗ್ರೀನ್ ಲೇಬಲ್...ಬ್ಲಾಕ್ ಟೀ...’’ಕೇಳಿದರು. ಕಾಸಿಗೆ ನಾಲಗೆ ಚುರ್ ಅನ್ನಿಸಿತು. ‘‘ಇದೆಲ್ಲ ಗುಜರಾತ್ ಸ್ಪೆಶಲ್ಲಾ ಸಾರ್?’’
‘‘ಹೂಂ ಕಣ್ರೀ... ಇದೆಲ್ಲ ಗುಜರಾತ್ ಸ್ಪೆಶಲ್. ಈ ಚಾಯ್‌ಗಾಗಿ ದೇಶ ವಿದೇಶಗಳಿಂದ ಉದ್ಯಮಿಗಳು ಬರ್ತಾ ಇದ್ದಾರೆ...ಸದ್ಯಕ್ಕೆ ಆರೆಸ್ಸೆಸ್‌ನೋರು ಈ ಬಿಸಿನೆಸ್‌ಗೆ ಸಖತ್ ಇನ್‌ವೆಸ್ಟ್ ಮಾಡಿದ್ದಾರೆ.... ನಿಮಗೆ ರೆಡ್ ಲೇಬಲ್ ಕೊಡ್ತೇನೆ...ಸದ್ಯಕ್ಕೆ ಹೆಚ್ಚು ಸುದ್ದಿಯಲ್ಲಿರುವ ಚಾಯ್ ಅದು...’’
‘‘ಅದೇನು ಸಾರ್ ಅದ್ರಲ್ಲಿ ಸ್ಪೆಶಲ್...’’ ಕಾಸಿ ಕೇಳಿದ.

‘‘ನೋಡ್ರಿ ಈ ಕಾಂಗ್ರೆಸ್‌ನೋರು ನಮ್ಮ ಆಡಳಿತ ದಲ್ಲಿ ಹಸಿರು ಕ್ರಾಂತಿ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳು ತ್ತಾರೆ. ಪಂಜಾಬ್‌ನಲ್ಲಿ ಗ್ರೀನ್ ರೆವೆಲ್ಯೂಶನ್ ಮಾಡಿ ಅಕ್ಕಿ, ಗೋಧಿ ಬೆಳೆದ್ರೆ, ನಾವು ಗುಜರಾತ್‌ನಲ್ಲಿ ರೆಡ್ ರೆವೆಲ್ಯೂಶನ್ ಮಾಡಿ ಟೀ ಬೆಳೆದಿದ್ದೇವೆ... ಗುಜರಾತ್ ಹತ್ಯಾಕಾಂಡದ ಮೂಲಕ 2002ರಲ್ಲಿ ನಾವು ಬೆಳೆಸಿದ ಟೀ ತೋಟದ ಬೆಳೆ ಇನ್ನೂ ಮುಗಿದಿಲ್ಲ ಗೊತ್ತಾ...ಅದೇ ಟೀಯನ್ನು ನಾವಿಂದು ಅಂತಾರಾಷ್ಟ್ರೀಯವಾಗಿ ಎಕ್ಸ್ ಪೋರ್ಟ್ ಮಾಡ್ತಿದ್ದೀವಿ...ಒಂದು ರೆಡ್ ಟೀ ಹಾಕಲಾ?’’ ಎಂದು ಚಾಯ್ ಮಾಡಲು ಸಜ್ಜಾದರು. ಯಾಕೋ ಕಾಸಿಯ ಮೂಗಿಗೆ ಚಾಯ್ ವಾಸನೆಯ ಬದಲಿಗೆ ರಕ್ತದ ವಾಸನೆ ಬಡಿಯಿತು.

‘‘ಸಾರ್ ನನಗೆ ರೆಡ್ ಎಂದರೆ ಅಲರ್ಜಿ. ಅದಿರ್ಲಿ ಸಾರ್ ಈ ಗ್ರೀನ್ ಲೇಬಲ್ ಎಲ್ಲಿ ಬೆಳೆದಿರೋದು...’’
ಮೋದಿ ತನ್ನ ಗಡ್ಡ ಸವರಿಕೊಂಡರು. ‘‘ಈ ಗ್ರೀನ್ ಟೀ ಕೂಡ ನಮ್ಮ ಗುಜರಾತ್‌ನಲ್ಲೇ ಬೆಳೆದಿರೋದು. ಪಂಜಾಬ್‌ನೋರು ತಾವು ಮಾತ್ರ ಮಹಾ ಕೃಷಿಕರು ಎಂದು ತಿಳಿದುಕೊಂಡಿದ್ದರು. ಅವರ ಭೂಮಿಯನ್ನು ಕಿತ್ತುಕೊಂಡು ಅವರ ನ್ನೆಲ್ಲ ಪಂಜಾಬಿಗೆ ಓಡಿಸಿ ಅದರಲ್ಲಿ ನಾವು ಗ್ರೀನ್ ಟೀ ತೋಟ ಮಾಡಿ ದ್ದೇವೆ... ಅಪ್ಪಟ ಗುಜರಾತ್ ಟೀ...’’

ಯಾಕೋ ಗುಜರಾತ್‌ನಲ್ಲಿ ಭೂಮಿ ಕಳೆದುಕೊಂಡ ಪಂಜಾಬ್ ರೈತರು ಕಣ್ಣು ಮುಂದೆ ಬಂದರು. ‘‘ಸಾರ್... ಗ್ರೀನ್ ಟೀಯಲ್ಲಿ ಪಂಜಾಬ್‌ನ ರೈತರ ಕಣ್ಣೀರು ಬಿದ್ದು ಉಪ್ಪು ಜಾಸ್ತಿಯಾಗಿದೆ...ಅದು ನನಗೆ ಅಷ್ಟು ಸೇರಲ್ಲ... ಈ ಬ್ಲಾಕ್ ಟೀ ಎಂದರೆ ಏನ್ರೀ...’’
‘‘ಅದೂ ಅಪ್ಪಟ ಗುಜರಾತ್‌ನ ಚಾಯ್ ಕಣ್ರೀ... ನರ್ಮದಾ ತಟದಲ್ಲಿ ಆದಿವಾಸಿಗಳು ಮತ್ತು ದಲಿತರ ಕಣ್ಣೀರನ್ನು ಕಾಲುವೆಯಾಗಿ ಹರಿಸಿ ಬೆಳೆಸಿದ ಟೀ ತೋಟ ಕಣ್ರೀ... ಬಹಳ ರುಚಿಯಾಗಿರುತ್ತೆ...ಒಂದು ಬ್ಲಾಕ್ ಟೀ ಹಾಕ್ಲಾ...’’ ಮೋದಿ ಕೇಳಿದರು.

ಕಾಸಿಗೆ ಯಾಕೋ ನರ್ಮದಾ ನದಿಯಲ್ಲಿ ಕೊಚ್ಚಿ ಹೋದ ದಲಿತರ, ಆದಿವಾಸಿಗಳ ಬದುಕು ನೆನಪಾ ಯಿತು. ಬೇಡ ಅನ್ನಿಸಿತು. ‘‘ಸಾರ್ ಬೇರೆ ಯಾವುದಾ ದರೂ ಕಂಪೆನಿಯ ಟೀ ಇದೆಯಾ...’’ ಮೋದಿ ತಕ್ಷಣ ಹೇಳಿದರು ‘‘ನೋಡ್ರೀ...ಇದು ಗುಜರಾತ್‌ನಲ್ಲಿ ಇತ್ತೀಚೆಗೆ ಭಾರೀ ಫೇಮಸ್ ಟೀ. ಸದಾ ಈ ಚಾಯ್ ಕುರಿತಂತೆ ಪತ್ರಿಕೆಗಳಲ್ಲಿ ಜಾಹೀರಾತು ಬರ್ತಾ ಇರತ್ತೆ. ಇದರ ಹೆಸರು ‘ಹೆಣ್ಣನ್ ಏ ಒನ್’ ಟೀ ಅಂತ. ಕೊಡ್ಲಾ....’’ ಕಾಸಿಗೆ ಹೆಸರು ಕೇಳಿಯೇ ಹೆದರಿಕೆಯಾಯಿತು ‘‘ಅದೇನು ಸಾರ್ ಹೆಣ್ಣನ್ ಏ ವನ್ ಟೀ ಅಂದ್ರೆ...’’

ಮೋದಿ ಅತ್ಯುತ್ಸಾಹದಿಂದ ವಿವರಿಸಿದರು ‘‘ಹೆಣ್ಣುಗಳ ಹೆಣಗಳನ್ನೇ ಗೊಬ್ಬರವನ್ನಾಗಿಸಿ ಬೆಳೆಸಿದ ಅತ್ಯುತ್ತಮ ಟೀ ಕಣ್ರೀ... ತುಂಬಾ ಹೆಣ್ಣು ಮಕ್ಕಳು ಈ ಟೀ ಪ್ಲಾಂಟೇ ಶನ್‌ಗಾಗಿ ತಮ್ಮ ಪ್ರಾಣತ್ಯಾಗ ಮಾಡಿದ್ದಾರೆ...ಹಲವು ಹೆಣ್ಣು ಮಕ್ಕಳು ಬೇಹುಗಾರಿಕೆಗೆ ಬಲಿಯಾಗಿದ್ದಾರೆ... ತುಂಬಾ ರುಚಿಯಾದ ಟೀ ಕಣ್ರೀ ಇದು...ಒಂದು ಕಪ್ ಹೆಣ್ಣನ್ ಏ ವನ್ ಟೀ ಕೊಡ್ಲಾ...?’’
‘‘ಸಾರ್... ಈ ಟೀಯನ್ನು ಮಾಡಲು ಹೇಗೆ ಕಲಿತಿರಿ ಸಾರ್...?’’ ಕಾಸಿ ಕುತೂಹಲದಿಂದ ಕೇಳಿದ.

‘‘ನೋಡ್ರೀ...ತುಂಬಾ ಹಿಂದೆ ಹಿಟ್ಲರ್ ಎಂಬೋರು ಇಂತಹ ಟೀ ಮಾಡೋದರಲ್ಲಿ ಪ್ರವೀಣರಾಗಿದ್ದರು.  ಎಲ್‌ಪಿಜಿ ಗ್ಯಾಸ್ ಉಪಯೋಗವೇ ಇಲ್ಲದ ದಿನಗಳಲ್ಲಿ ಇಂತಹ ಟೀ ಗಳನ್ನು ಮಾಡುವುದಕ್ಕಾಗಿಯೇ ಗ್ಯಾಸ್ ಚೇಂಬರ್ ಗಳನ್ನು ಮಾಡುತ್ತಿದ್ದರು. ಅವರು ಹುತಾತ್ಮರಾದ ಬಳಿಕ ಈ ಟೀಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಆದರೂ ಅಮೆರಿಕದಂತಹ ದೇಶಗಳು ಇರಾಕ್‌ನಲ್ಲಿ, ಅಫ್ಘಾನಿಸ್ತಾನದಲ್ಲಿ, ವಿಯೆಟ್ನಾಂನಲ್ಲಿ ಇಂತಹದೇ ಟೀಯನ್ನು ಗುಟ್ಟಾಗಿ ಮಾಡಿ ಮಾರುತ್ತಿದ್ದುದು ಎಲ್ಲರಿಗೂ ಗೊತ್ತಿರುವಂತಹದೇ.

ಇದರ ಲಾಭವನ್ನು ಭಾರತವೂ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ನಾನು ಸ್ವದೇಶಿ ಚಾಯ್ ಆಂದೋಲನವನ್ನು ಶುರು ಮಾಡಿದೆ. ಬಿಜೆಪಿ ಯಲ್ಲಿ ಕಾರ್ಯಕರ್ತನಿದ್ದಾಗ ಇಂತಹ ಚಹಾ ಮಾಡುವು ದನ್ನು ಅಲ್ಲಲ್ಲಿ ಕಲಿತೆ. ಆರೆಸ್ಸೆಸ್‌ನ ಮುಖಂಡರು ನಾನು ಮಾಡಿದ ಚಹಾವನ್ನೇ ಬೆಳಗ್ಗೆ ಎದ್ದು ಕುಡಿಯ ತೊಡಗಿದರು. ಮುಂದೆ ಗುಜರಾತಿನ ಮುಖ್ಯಮಂತ್ರಿ ಯಾದ ಬಳಿಕ ಈ ಟೀಯನ್ನು ಬೃಹತ್ ಪ್ರಮಾಣದಲ್ಲಿ ಬೆಳೆಯತೊಡಗಿದೆ.

ಹೀಗೆ ಟೀ ಪ್ಲಾಂಟೇಶನ್ ಮಾಡಿ ಮಾರತೊಡಗಿದೆ. ಇದೀಗ ನಾನು ಸ್ವದೇಶಿ ಟೀ ಪೇಟೆಂಟ್ ಪಡೆದಿರುವುದು ಅಮೆರಿಕಕ್ಕೆ ಅಸೂಯೆಯಾ ಗಿದೆ. ಈ ಮೂಲಕ ಭಾರತ ಸ್ವಾವಲಂಬಿಯಾಗುವುದು ಅದಕ್ಕೆ ಇಷ್ಟವಿಲ್ಲ. ಆದುದರಿಂದ ಅದು ನನ್ನ ಮೇಲೂ ನನ್ನ ಟೀ ಮೇಲೂ ನಿಷೇಧ ಹಾಕಿದೆ. ಇದನ್ನು ಭಾರತೀ ಯರು ಅರಿತಿದ್ದಾರೆ. ಇಂದು ನನ್ನ ಟೀಯಿಂದಾಗಿ ಭಾರತ ಸ್ವಾವಲಂಬಿಯಾಗಿದೆ. ಮುಂದೆ ನಾನು ಪ್ರಧಾನಿ ಯಾದರೆ ಈ ಟೀ ತೋಟವನ್ನು ದೇಶದೆಲ್ಲೆಡೆ ಬೆಳೆಸಿ, ವಿದೇಶಕ್ಕೂ ಟೀ ವಿತರಣೆ ಮಾಡಲಿದ್ದೇನೆ. ವಿಶ್ವದ ಏಕೈಕ ಚಹಾವಾಲಾ ಎಂದು ಹೆಸರು ಪಡೆಯುವ ಗುರಿಯನ್ನು ಹೊಂದಿದ್ದೇನೆ...’’
ಕಾಸಿ ಎಲ್ಲವನ್ನು ನೋಟ್ ಮಾಡಿಕೊಂಡು ಇನ್ನೇನು ಏಳುವುದಕ್ಕೆ ಸಿದ್ಧತೆ ಮಾಡತೊಡಗಿದ. ಅಷ್ಟರಲ್ಲಿ ಮತ್ತೆ ಕೇಳಿದರು ‘‘ಅದಿರಲಿ, ನೀವು ಚಹಾ ಕುಡಿಯಲೇ ಇಲ್ಲ... ಯಾವ ಲೇಬಲ್ ಟೀ ಹಾಕಲಿ, ಹೇಳಿ...’’
ಕಾಸಿ ಅನುಮಾನ, ಭಯದಿಂದ ಕೇಳಿದ ‘‘ನಿಮ್ಮ ಟೀ ನಿಮ್ಮ ಕಾರ್ಯಕರ್ತರಷ್ಟೇ ಕುಡಿದರೆ ಚೆನ್ನಾಗಿರುತ್ತದೆ. ನಾವು ಮನುಷ್ಯರು ನೋಡಿ. ಯಾವುದಾದರೂ ಮನುಷ್ಯರು ಕುಡಿಯುವ ಟೀ ನಿಮ್ಮಲ್ಲಿ ಇದೆಯಾ?’’
ನರೇಂದ್ರ ಮೋದಿ ಸಿಟ್ಟಿನಿಂದ ಕೆಂಪು ಚಹಾದಂತೆ ಕುದಿಯತೊಡಗಿದರು. ಒಂದು ಕ್ಷಣ ವೌನವಾಗಿ ಮತ್ತೆ ಹೇಳಿದರು ‘ಲಾ.... ಟೀ... ಅಂಥ ಇದೆ... ಕುಡೀತೀರಾ...?’’
ಕಾಸಿಗೆ ಅದು ಹೊಸ ಹೆಸರು ‘‘ಅದೆಂಥ ಸಾರ್ ಲಾ...ಟೀ...ಅಂತ?’’
ಮೋದಿ ಸಿಟ್ಟಿನಿಂದ ಹೇಳಿದರು ‘‘ಅದೇರೀ...ಲಾ ಠೀ... ನಮ್ಮ ಪೊಲೀಸರ ಕೈಯಲ್ಲಿರತ್ತಲ್ಲ ಲಾಠಿ. ಅದೇ ಲಾಠಿಯಿಂದ ಮಾಡಿದ ಟೀ....ನನ್ನ ಟೀ ಕುಡಿಯದವರಿ ಗೆಲ್ಲ ಆ ಠೀಯನ್ನು ಕುಡಿಸುತ್ತೇವೆ. ಗುಜರಾತ್ ಪೊಲೀ ಸರು ಕಂಡು ಹಿಡಿದ ಟೀ ಅದು...ಲಾಠಿ...ನನ್ನ ರೆಡ್ ಟೀ ಕುಡೀತೀರಾ? ಇಲ್ಲಾ ಲಾಠೀ ರುಚಿ ನೋಡ್ತೀರಾ...’’
ಕಾಸಿ ಭಯದಿಂದ ನಡುಗಿದ. ಅದೇನನ್ನಿಸಿತೋ ‘‘ನೋಡಿ ಸಾರ್ ಕೇಜ್ರಿವಾಲ್ ಬಂದ್ರು...’’ ಎಂದು ಕೈ ತೋರಿಸಿದ. ಮೋದಿ ಒಮ್ಮೆಲೆ ಕಂಪಿಸಿ ಹೊರಗೆ ಇಣುಕಿದರು. ಅದೇ ಸಮಯವನ್ನು ಬಳಸಿಕೊಂಡು ಎಂಜಲು ಕಾಸಿ ಅಲ್ಲಿಂದ ಓಡತೊಡಗಿದ.

Sunday, January 19, 2014

ಶ್ರೀ ಹರ್ಷ ಚರಿತೆ ಕಾವ್ಯವನ್ನು ಪೂರ್ಣವಾಗಿ ಪಠಿಸಿ

 
ಇದು 19 ಜನವರಿ 2014ರ ಬುಡಬುಡಿಕೆ. ಪತ್ರಕರ್ತ  ಎಂಜಲು ಕಾಸಿ, ಮಹಾಕವಿ ವೀರಪ್ಪ ಮೊಯ್ಲಿಯನ್ನು ಸಂಧಿಸಿದಾಗ ಸಂಭವಿಸಿದ ಸಿಲಿಂಡರ್ ಸ್ಫೋಟ.

ಆಧಾರ್ ಕಾರ್ಡ್ ಇದ್ದರೆ ಮಾತ್ರ ಸಿಲಿಂಡರ್, ಸಿಲಿಂಡರ್ ಇದ್ದರೆ ಮಾತ್ರ ಆಧಾರ್ ಕಾರ್ಡ್, 7 ಸಬ್ಸಿಡಿ ಸಿಲಿಂಡರ್, 12 ಸಬ್ಸಿಡಿ ಸಿಲಿಂಡರ್ ಹೀಗೆಲ್ಲ ಗ್ಯಾಸ್ ಮುಗಿದ ಖಾಲಿ ಸಿಲಿಂಡರ್‌ನಂತೆ ಸಚಿವ ವೀರಪ್ಪ ಮೊಯ್ಲಿಯವರು ಸದ್ದು ಮಾಡುತ್ತಿರುವಾಗ, ಪತ್ರಕರ್ತ ಎಂಜಲು ಕಾಸಿ ಮೊಯ್ಲಿಯವರ ಮನೆಯ ಬಾಗಿಲನ್ನು ತಟ್ಟಿದ. ಅವನೇನೂ ಈ ಬಾರಿ ಅವರ ಇಂಟರ್ಯೂಗೆಂದು ಹೋಗಿರಲಿಲ್ಲ. ಅವರ ಇಂಟರ್ಯೂ ಮಾಡಬೇಕಾದರೆ ಅವರ ಮಗ ಹರ್ಷಕುಮಾರನ ಇಂಟರ್ಯೂನ್ನೂ ಅವರು ಫ್ರೀ ಆಗಿ ಕೊಡುತ್ತಿದ್ದುದ ರಿಂದ ಇಂಟರ್ಯೂ ರಗಳೆ ಬೇಡ ಎಂದು ಸುಮ್ಮನಾಗಿದ್ದ.

ಅನಿಲ ಸಿಲಿಂಡರ್‌ಗೆ ಆಧಾರ್ ಅಗತ್ಯವೇ, ನಿಜಕ್ಕೂ ಸಬ್ಸಿಡಿ ರೂಪದಲ್ಲಿ ಎಷ್ಟು ಸಿಲಿಂಡರ್ ಸಿಗುತ್ತವೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಲು ಸಚಿವರ ಮನೆಯ ಬಾಗಿಲನ್ನು ತಟ್ಟಿದ್ದ. ದಕ್ಷಿಣಕನ್ನಡದ ಯಾವುದೋ ಯುನಿರ್ವಸಿಟಿಯ ವಿದ್ವಾಂಸರು ಬಾಗಿಲು ತೆಗೆದು ಕಣ್ಣಗಲಿಸಿ ನೋಡಿ ‘‘ಸಾಹೇಬರು ಬಿಸಿಯಾಗಿ ದ್ದಾರೆ’’ ಎಂದು ಬಾಗಿಲು ಮುಚ್ಚಲು ನೋಡಿದರು. ಪತ್ರಕರ್ತ ಎಂಜಲು ಕಾಸಿ ತನ್ನ ಹಳೆಯ ಹರಿದ ಐಡೆಂಟಿಟಿ ಕಾರ್ಡ್ ತೋರಿಸಿದಾಕ್ಷಣ ವಿದ್ವಾಂಸರು ಹಲ್ಲು ಬಿಟ್ರು ‘‘ನೀವಾ ಮಾರ್ರೆ...ನಾನು ಗೊತ್ತಾಗ ಲಿಲ್ಲವಾ...ಹಂಪಿ ಯುನಿವರ್ಸಿಟಿ...ಮೊಯ್ಲಿ ಸಾಹೇಬರು ಒಳಗೆ ಮಹಾಕಾವ್ಯ ಬರೀತಾ ಇದ್ದಾರೆ....’’

ಮಹಾಕಾವ್ಯ ಎಂದಾಕ್ಷಣ ಎಂಜಲು ಕಾಸಿ ಬೆವರ ತೊಡಗಿದ. ಹಿಂದೊಮ್ಮೆ ತಮ್ಮ ಮಹಾಕಾವ್ಯವನ್ನು ಅರ್ಧಗಂಟೆ ಆತನ ಮುಂದೆ ಓದಿದ್ದರು. ‘‘ಸಾರ್ ನಾನು ಮತ್ತೆ ಬರ್ತೇನೆ ಆಗದಾ?’’ ಕಾಸಿ ಕೇಳಿದ. ವಿದ್ವಾಂಸರು ಅಷ್ಟರಲ್ಲೇ ಅವನನ್ನು ಎಳೆದುಕೊಂಡು ಹೋಗಿ ವೀರಪ್ಪ ಮೊಯ್ಲಿಯವರ ಮುಂದೆ ನಿಲ್ಲಿಸಿದರು. 

ಸಚಿವರನ್ನು ಕಂಡದ್ದೇ ಸಬ್ಸಿಡಿ ಸಿಲಿಂಡರ್ ಕಂಡ ಶ್ರೀಸಾಮಾನ್ಯನಂತೆ ಕಾಸಿ ಹಲ್ಲು ಕಿರಿದು ಕೇಳಿದ ‘‘ಸಾರ್...ಮಹಾಕಾವ್ಯ ಬರೆಯುತ್ತಿದ್ದೀರಂತೆ...’’

ಮಹಾಕವಿಗಳು ನಿಧಾನಕ್ಕೆ ತಲೆಯೆತ್ತಿದರು. ನೋಡಿದರೆ ಅವರ ಪಕ್ಕದಲ್ಲೇ ಅವರ ಬೆನ್ನಿಗಂಟಿ ಒಂದು ಮಗುವೂ ಇತ್ತು. ಅವರ ಸುಪುತ್ರ ಹರ್ಷ ಕುಮಾರ ಇವನೇ ಇರಬೇಕು ಎಂದು ಕಾಸಿ ಅರ್ಥ ಮಾಡಿ ಕೊಂಡ. ‘‘ಹೌದು...ಇದು ಹೊಸ ಮಹಾ ಕಾವ್ಯ... ತುಂಬಾ ಸಂಶೋಧನೆ ಮಾಡಿ ಬರೆಯುತ್ತಾ ಇದ್ದೇನೆ...’’ ಎಂದು ಹಣೆಯ ಬೆವರು ಒರೆಸಿಕೊಂಡರು.
‘‘ಕಾವ್ಯದ ಹೆಸರೇನು ಸಾರ್? ಮಹಾಭಾರತಾನೋ, ರಾಮಾಯಣಾನೋ?’’ ಕಾಸಿ ಆಸಕ್ತಿಯನ್ನು ನಟಿಸಿದ.

‘‘ಮಹಾಕಾವ್ಯದ ಹೆಸರು ಶ್ರೀಹರ್ಷಚರಿತೆ ಅಂತ... ಈಗಾಗಲೇ ಈ ಕಾವ್ಯ ಬರೆಯಲು ರಾಜಮಾತೆ ಸೋನಿಯಾ ಗಾಂಧಿಯ ಆಶೀರ್ವಾದ ವನ್ನೂ, ರಾಜಕುವರ ರಾಹುಲ್‌ಗಾಂಧಿಯವರ ಅನುಮತಿ ಯನ್ನು ಪಡೆದಿದ್ದೇನೆ...’’ ಮೊಯ್ಲಿಯವರು ಉದ್ಗರಿಸಿದರು.
‘‘ರಾಜ ಹರ್ಷವರ್ಧನನ ಕುರಿತಂತೆ ಕಾವ್ಯ ಬರೆಯುತ್ತಿದ್ದೀರಾ ಸಾರ್?’’ ಕಾಸಿ ಭಯ ಭಕ್ತಿಯಿಂದ ಕೇಳಿದ.

‘‘ಇಲ್ಲ ಕಣ್ರೀ...ನನ್ನ ಮಗ ಹರ್ಷಮೊಯ್ಲಿಯ ಕುರಿತಂತೆ ಮಹಾಕಾವ್ಯ ಬರೆಯುತ್ತಾ ಇದ್ದೇನೆ... ಮುಂದಿನ ಚುನಾವಣೆಯಲ್ಲಿ ನಿಲ್ಲುವ ಸಂದರ್ಭದಲ್ಲಿ ಅವನ ಸಾಧನೆ, ಇತಿಹಾಸ, ಬದುಕು, ತ್ಯಾಗ, ಬಲಿದಾನ...ಇತ್ಯಾದಿಗಳೆಲ್ಲ ಕರಾವಳಿಯಲ್ಲಿ ಜನಜನಿತ ವಾಗಬೇಕು ಎನ್ನುವ ಕಾರಣದಿಂದ..."ಎನ್ನುತ್ತಾ ಕಾವ್ಯವನ್ನು ಓದತೊಡಗಿದರು....ಅಮೆರಿಕದೊಳ್ ವಿದ್ಯಾರ್ಜನೆ ಯಂಗೈದು, ಲಂಡನ್‌ನೊಳ್ ಅಪರಿಮಿತ ದಿಗ್ವಿಜಯಂಗಳ್ ಮೆರೆದು ಇಂತುಂ ಶ್ರೀಹರ್ಷ ಮೊಯ್ಲಿ ಮಂಗಳೂರಿಂಗೆ ವಿಜಯಂಗೈದಂ...’’
ಕಾಸಿಗೆ ಉಸಿರುಗಟ್ಟಿದಂತಾಗಿ...ಕೇಳಿದ ‘‘ಸಾರ್... ಈ ಕಾವ್ಯವನ್ನೂ ನೀವೇ ಬರೀತೀರಾ, ಅಥವಾ ಹಿಂದಿನ ಹಾಗೆ...’’ ಕೇಳಿದ.

ಮೊಯ್ಲಿ ಒಮ್ಮೆಲೆ ರೇಗಿದರು ‘‘ಏನ್ರಿ ಅದು ಹಿಂದಿನ ಹಾಗೆ, ಮುಂದಿನ ಹಾಗೆ...ಏನೋ ವಿವೇಕ ರೈಗಳು ನನ್ನ ಕಾವ್ಯಕ್ಕೆ ಮುನ್ನುಡಿ ಬರೆದ ಒಂದೇ ತಪ್ಪಿಗೆ ಇಡೀ ಕಾವ್ಯವನ್ನೇ ಅವರು ಬರೆದುಕೊಟ್ಟರು ಎಂದೆಲ್ಲ ಗಾಸಿಪ್ ಹಬ್ಬಿಸಿ ಮಂಗಳೂರು ಲೋಕಸಭಾ ಚುನಾವಣೆಯಲ್ಲಿ ನನ್ನ ಮಾನವನ್ನು ಹರಾಜು ಹಾಕಿದಿರಿ...ನನ್ನ ಮಗನ ಚರಿತೆಯನ್ನು ನಾನಲ್ಲದೆ ಇನ್ಯಾರ್ರೀ ಬರೀತಾರೆ...’’
ಅದೂ ಹೌದು ಅನ್ನಿಸಿತು ‘‘ಸಾರ್ ಅದೇನೋ ಸರಿ. ಆದರೆ ನಮಗೆಲ್ಲ ಇತಿಹಾಸದ ಹರ್ಷ ಗೊತ್ತು ಸಾರ್. ಆದರೆ ಕಾಂಗ್ರೆಸ್ ಸರಕಾರ ಬಂದ ಮೇಲೆ ಹರ್ಷ ವೆನ್ನುವುದನ್ನು ನೋಡದೆ ತುಂಬಾ ಸಮಯ ಆಯ್ತು ಸಾರ್...ಗ್ಯಾಸ್ ಇದ್ರೆ ಆಧಾರ್ ಇಲ್ಲ...ಆಧಾರ್ ಇದ್ರೆ ಸಬ್ಸಿಡಿ ಇಲ್ಲ...’’

‘‘ಅದಕ್ಕಾಗಿಯೇ ನನ್ನ ಮಗ ಹರ್ಷ ವಿಜಯಂಗೈಯು ತ್ತಿದ್ದಾನೆ...ಶ್ರೀ ಹರ್ಷ ಚರಿತೆ ಕಾವ್ಯವನ್ನು ಪೂರ್ಣವಾಗಿ ಪಠಿಸಿದರೆ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಹರ್ಷ, ಸಂತೋಷದ ಹೊನಲೇ ಹರಿಯುತ್ತದೆ...’’ ಎಂದು ಮೊಯ್ಲಿ ಹಸನ್ಮುಖಿಯಾದರು.
‘‘ಸಾರ್...ನಿಮ್ಮ ಮಹಾಕಾವ್ಯವನ್ನು ಓದಿದ ಜನರೇ ಸಿಟ್ಟಿಗೆದ್ದು ನಿಮಗೆ ಮತ ಹಾಕಲಿಲ್ಲ ಎಂಬ ಗಾಳಿ ಸುದ್ದಿ ಇದೆ. ಇದೀಗ ಈ ಹೊಸ ಕಾವ್ಯವನ್ನು ಜನರು ಸ್ವೀಕರಿಸುತ್ತಾರೆಯೇ...’’ ಕಾಸಿ ಅನುಮಾನದಿಂದ ಕೇಳಿದ.

‘‘ಯಾರ್ರೀ ಹೇಳಿದ್ದು? ನನ್ನ ಮಹಾಕಾವ್ಯ ಮೆಚ್ಚಿ ವೀರಕವಿ ಎಂದು ಬಿರುದು ಕೊಟ್ಟು ಪೇಜಾವರಶ್ರೀ ಶಾಲು ಹೊದಿಸಿದರು ಗೊತ್ತುಂಟೋ...’’ ಮೊಯ್ಲಿ ಸವಾಲು ಹಾಕಿದರು.
‘‘ಟೋಪಿ ಹಾಕುವ ಬದಲು ಶಾಲು ಹೊದಿಸಿದ್ರು ಎಂದು ಉಡುಪಿಯ ವೈದಿಕ ಜನರು ಕೃಷ್ಣಮಠದ ಉನ್ನತ ಪಂಕ್ತಿಯಲ್ಲಿ ಭೂರಿ ಭೋಜನವುಂಡು ನಗುತ್ತಿದ್ದರು ಸಾರ್...’’ ಎಂದು ಮತ್ತೆ ಮೊಯ್ಲಿಯನ್ನು ಚುಚ್ಚಿದ.
‘‘ನಾನು ನನ್ನ ಮಗನ ಕುರಿತಂತೆ ಬರೆಯುತ್ತಿರುವ ಶ್ರೀ ಹರ್ಷ ಚರಿತೆ ಮಹಾಕಾವ್ಯ ಕರಾವಳಿಯಲ್ಲಿ ಈಗಾಗಲೇ ಸುದ್ದಿಯಲ್ಲಿದೆ...ಈಗಾಗಲೇ ಎಲ್ಲ ಪತ್ರಿಕೆಗಳಲ್ಲಿ ಈ ಕಾವ್ಯದ ಆಯ್ದ ಭಾಗಗಳು ಪ್ರಕಟಗೊಂಡಿವೆ ಗೊತ್ತುಂಟಾ...’’ ಮೊಯ್ಲಿ ಮತ್ತೆ ಸವಾಲು ಹಾಕಿದರು.

‘‘ಸಾರ್ ಅದು ಜಾಹೀರಾತು ಅಲ್ವಾ?’’ ಕಾಸಿ ಅಚ್ಚರಿಯಿಂದ ಕೇಳಿದ. ‘‘ಜಾಹೀರಾತಲ್ಲ ನಿಮ್ಮ ಬೊಜ್ಜ...ಈ ಕಾವ್ಯ ವರ್ತಮಾನ ಕಾಲಕ್ಕೆ ತುಂಬಾ ಬೆಲೆ ಬಾಳುತ್ತದೆ ಎಂದು ವಿದ್ವಾಂಸರೆಲ್ಲ ಹೇಳುತ್ತಿ ದ್ದಾರೆ...ಅಲ್ಲವೇನ್ರಿ...?’’ ಎಂದು ಹಂಪಿ ಯುನಿವರ್ಸಿಟಿಯ ವಿದ್ವಾಂಸರಿಗೆ ಕೇಳಿದರು.
‘‘ಖಂಡಿತ ಸಾರ್...ಕುಮಾರವ್ಯಾಸನ ಭಾಮಿನಿ ಮತ್ತು ಹರಿಹರನ ರಗಳೆ ಛಂದಸ್ಸಿನಲ್ಲಿ ಬರೆಯಲಾದ ಅಪರೂಪದ ಕಾವ್ಯ ಇದು...ಇದರಲ್ಲಿರುವ ಮಾತ್ರೆ ಗಳು, ಗಣಗಳು...ಬಹಳ ವಿಶಿಷ್ಟವಾದುದು...’’
ಕಾಂಗ್ರೆಸ್‌ನಲ್ಲಿ ಆರೆಸ್ಸೆಸ್‌ನ ಗಣಗಳಿಗೆ ಏನು ಪಾತ್ರ? ಕಾಸಿಗೆ ಅರ್ಥವಾಗಲಿಲ್ಲ. ಒಳಗೊಳಗೆ ಚುನಾವಣಾ ಒಪ್ಪಂದವಾಗಿದೆಯೋ ಎಂದು ತಲೆ ತುರಿಸಿದ ‘‘ಸಾರ್, ಈ ಆರೆಸ್ಸೆಸ್ ಗಣಗಳು ಇದ್ದಲ್ಲಿ ರಗಳೆಗಳಿರುವುದು ಸಹಜವೇ ಸಾರ್....’’ ಕಾಸಿ ಕೂಡ ರಗಳೆ ಛಂದಸ್ಸಿನ ಕುರಿತಂತೆ ತನ್ನ ಪ್ರೌಢಿಮೆಯನ್ನು ಮೆರೆದ.

‘‘ರಗಳೆಯಲ್ಲ, ನಿಮ್ಮ ಬೊಜ್ಜ. ಅದು ಚಡ್ಡಿಗಳ ಗಣ ಅಲ್ಲ...ಇದು ನಮ್ಮ ಕವಿಗಳ ಗಣ...’’ ಮೊಯ್ಲಿ ಬೆಚ್ಚದಿಂದ ಹೇಳಿದರು.
‘‘ಓಹೋ ಹಾಗದರೆ ಇದು ಕಾಂಗ್ರೆಸ್‌ನ ಭಾರತ ಸೇವಾ ದಳದ ಗಣಗಳಾಗಿರಬೇಕು’’ ಎಂದು ಕಾಸಿ ಅರ್ಥವಾದವನಂತೆ ತಲೆಯಾಡಿಸಿದ. ‘‘ಆದರೆ ಸಾರ್...ನೀವು ಮೂರು ಸಾರಿ ಸೋತ ಆ ಪಾಳು ಬಿದ್ದ ಮಂಗಳೂರಿನ ಬಾವಿಗೆ ನಿಮ್ಮ ಮಗನನ್ನು ತಳ್ಳುವುದು ಸರಿಯಾ...’’ ಈ ಪ್ರಶ್ನೆಗೆ ಮೊಯ್ಲಿ ಮತ್ತೆ ಬೆಚ್ಚ ಆದರು.

‘‘ನೀವು ಹೀಗೆಲ್ಲ ಮಾತನಾಡಬಾರದು...ನನ್ನ ಮಗ ಅಮೆರಿಕದಲ್ಲಿ ಹುಟ್ಟಿ, ಲಂಡನ್‌ನಲ್ಲಿ ಅಂಬೆಗಾಲಿಕ್ಕಿ, ಪ್ಯಾರಿಸ್‌ನಲ್ಲಿ ತೊದಲು ಹೆಜ್ಜೆ ಇಟ್ಟು ಬೆಳೆದವನು. ಇವನು ಮಂಗಳೂರಿನಲ್ಲಿ ಬಂದು ಓಟಿಗೆ ನಿಲ್ಲುವುದೇ ದೊಡ್ಡದು. ನೀವೆಲ್ಲ ಓಟು ಹಾಕಿ ಅವನಿಗೆ ಕೃತಜ್ಞತೆ ಯನ್ನು ಸಲ್ಲಿಸಬೇಕು...ನನ್ನ ಕಾವ್ಯದ ಮೊದಲ ಅಧ್ಯಾಯದಲ್ಲೇ ಅವನ ಬಾಲಲೀಲೆಗಳನ್ನು ಬಣ್ಣಿಸಿದ್ದೇನೆ. ಇದು ಚಂಪೂಕಾವ್ಯದಲ್ಲಿದೆ. ಓದಲೇ...’’ ಎಂದು ಕೇಳಿದರು.

‘‘ಸಾರ್...ಗೋದಾಮಿನಲ್ಲಿ ಸ್ಟಾಕಿರುವ ನಿಮ್ಮ ಹಿಂದಿನ ಮಹಾಕಾವ್ಯಗಳ ಪ್ರತಿಗಳನ್ನೆಲ್ಲ ಕಡಲುಕೊರೆತ ತಡೆಯುವುದಕ್ಕೆ ಕಡಲಿಗೆ ಸುರಿದು ಮೊಯ್ಲಿ ಕಾವ್ಯದ ಹಿರಿಮೆಯನ್ನು ಮೇಲೆತ್ತಲಿದ್ದೇವೆ ಎಂದು ಜನಾರ್ದನ ಪೂಜಾರಿ ಅಲ್ಲಲ್ಲಿ ಹೇಳಿ ತಮಾಷೆ ಮಾಡುತ್ತಾರೆ ಸಾರ್...ಹೀಗಿರುವಾಗ ನಿಮ್ಮ ಹೊಸ ಕಾವ್ಯದ ಗತಿ ಏನು ಸಾರ್?’’

‘‘ಪ್ರಭಾಕರ ಭಟ್ಟರನ್ನು ತಬ್ಬಿಕೊಂಡ ಮೇಲೆ ಪೂಜಾರಿಯವರಿಗೆ ಸ್ವಲ್ಪ ಜಂಬ ಬಂದ ಹಾಗೆ ಇದೆ... ನಾನೂ ಬಿಡುವುದಿಲ್ಲ...ಹರ್ಷ ಚರಿತೆ ಮಹಾಕಾವ್ಯಕ್ಕೆ ಎಸ್.ಎಲ್.ಭೈರಪ್ಪರತ್ರ ಮುನ್ನುಡಿ ಬರೆಸುತ್ತೇನೆ... ಚಿದಾನಂದ ಮೂರ್ತಿಯವರಲ್ಲಿ ಸಂಶೋಧನೆ ಮಾಡಿಸಿ, ಹರ್ಷ ಮೊಯ್ಲಿಯ ಎಲ್ಲ ವೈಭವಗಳ ಶಾಸನಗಳನ್ನು ಮಂಗಳೂರಿನಲ್ಲಿ ಮೈಲುಕಲ್ಲುಗಳಂತೆ ನೆಡುತ್ತೇನೆ...’’ ಮೊಯ್ಲಿಯವರು ಸಿಟ್ಟಿನಿಂದ ಹೇಳಿದರು.

‘‘ಸಾರ್ ನಿಮ್ಮ ಮಗ ಅದೇನೋ ಗ್ರಾಮೀಣ ಜನರ ಬದುಕನ್ನು ಹಸನು ಮಾಡಿದ್ದಾರಂತಲ್ಲ ಸಾರ್... ಆ ಗ್ರಾಮ ಯಾವ ದೇಶದಲ್ಲಿರುವುದು ಸಾರ್.. ಅಮೆರಿಕದಲ್ಲೋ, ಲಂಡನ್‌ನಲ್ಲೋ...’’
ಕಾಸಿಯ ಪ್ರಶ್ನೆಗೆ ಮೊಯ್ಲಿಯವರು ಸಿಲಿಂಡರ್‌ನಂತೆ ಸ್ಫೋಟಿಸಿದರು ‘‘ಹಿಡಿಯಿರಿ ಅವನನ್ನು. ಅವನ ಕೈ ಕಾಲು ಕಟ್ಟಿ ಅವನ ಕಿವಿಗೆ ಒಂದು ಗಂಟೆ ನನ್ನ ಮಹಾಕಾವ್ಯವನ್ನು ಓದಿ ಹೇಳಿ.ರಿ...’’ ಎಂದು ಆದೇಶಿಸಿ ದರು. ಆದರೆ ಕಾಸಿಗೆ ಅದು ‘‘ಕಾದ ಸೀಸವನ್ನು ಸುರಿಯಿರಿ’’ ಎಂಬಂತೆ ಕೇಳಿ, ಈ ಸಬ್ಸಿಡಿಯೂ ಬೇಡ, ಸಿಲಿಂಡರೂ ಬೇಡ ಎಂದು ಅಲ್ಲಿಂದ ಓಡ ತೊಡಗಿದ.

Sunday, January 12, 2014

ನಾನು ಒಡೆದದ್ದು ಅಸಮಾನತೆಯ ಗೋಡೆ....

ವಿಧಾನ ಸೌಧದ ಗೋಡೆ ಡೆದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವರ ಆಂಜನೇಯ ಅವರ ಸಂದರ್ಶನವನ್ನು ಪತ್ರಕರ್ತ ಎಂಜಲು ಕಾಸಿ ಮಾಡಿದ್ದಾನೆ. ಜನವರಿ -12-2014 ರ ವಾರ್ತಾ ಭಾರತಿ ಪತ್ರಿಕೆಯಲ್ಲಿ ಈ ಬುಡಬುಡಿಕೆ ಪ್ರಕಟವಾಗಿದೆ 

ತಗ್ಗಿ ಬಗ್ಗಿ ಪತ್ರಕರ್ತ ಎಂಜಲು ಕಾಸಿ ಕಚೇರಿಯೊಳಗೆ ನುಗ್ಗಿದ್ದು ನೋಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಆಂಜನೇಯ ಗರಂ ಆದರು ‘‘ಏನ್ರೀ...ಗೋಡೆ ಒಡೆದಿರುವುದನ್ನು ವಿಚಾರಿಸೋದಕ್ಕೆ ಕಚೇರಿಗೆ ಬಂದ್ರಾ...’’ 

‘‘ಹಾಗಲ್ಲ ಸಾರ್...’’ ಎಂದು ಎಂಜಲು ಕಾಸಿ ಮುಜುಗರದಿಂದ ನಿಂತಲ್ಲೇ ಕಾಲಲ್ಲಿ ಉಂಗುರ ಬರೆಯತೊಡಗಿದ. 
‘‘ಹಾಗೂ ಇಲ್ಲ, ಈಗೂ ಇಲ್ಲ....ಒಂದಿನಾದ್ರೂ ನನ್ನ ಸಾಧನೆಯನ್ನು ಬರೆಯೋದಕ್ಕೆ ಈ ಇಲಾಖೆಗೆ ನುಗ್ಗಿದ್ದೀರಾ...ಇದೀಗ ಗೋಡೆ ಒಡೆದಿರುವುದು ಗೊತ್ತಾದದ್ದೇ ಸರಣಿಯೋಪಾದಿಯಲ್ಲಿ ಪತ್ರಕರ್ತರು ನುಗ್ಗುತ್ತಿದ್ದಾರೆ....’’

ಕಾಸಿ ಹಲ್ಲು ಕಿರಿಯುತ್ತಾ ಕೇಳಿದ ‘‘ಹಾಗಾದ್ರೆ ಗೋಡೆ ಒಡೆದಿರುವುದು ನಿಜಾನಾ ಸಾರ್...?’’
ಆಂಜನೇಯ ಭುಜ ಕುಲುಕಿ ಹೇಳಿದರು ‘‘ಹೌದ್ರಿ...ನಾನು ಗೋಡೆ ಒಡೆದಿದ್ದೇನೆ...ಸಮಾಜ ಕಲ್ಯಾಣ ಸಚಿವನಾಗಿ ಏನನ್ನು ಮಾಡಬೇಕೋ ಅದನ್ನೇ ಮಾಡಿದ್ದೇನೆ...’’

ಕಾಸಿ ನಿಂತಲ್ಲೇ ಬೆಚ್ಚಿ ಬಿದ್ದ ‘‘ಸಾರ್...ಸಮಾಜ ಕಲ್ಯಾಣ ಸಚಿವರ ಕೆಲಸ ಗೋಡೆ ಒಡೆಯುವುದಾ ಸಾರ್?’’
‘‘ಹೌದ್ರಿ...ನಾನು ಒಡೆದಿರುವುದು ಅಸಮಾನತೆಯ ಗೋಡೆಯನ್ನು....ಸಮಾಜ ಕಲ್ಯಾಣ ಸಚಿವನಾಗಿ ಸಮಾಜದಲ್ಲಿ ಜಾತಿ, ಭೇದಗಳು ಇರಬಾರದು ಎನ್ನುವ ಕಾರಣಕ್ಕಾಗಿ ಸಾಂಕೇತಿಕವಾಗಿ ಗೋಡೆಯನ್ನು ಒಡೆದಿದ್ದೇನೆ...’’
ಕಾಸಿಗೆ ಯಾರೋ ತನ್ನ ತಲೆಯ ಮೇಲೆ ಸುತ್ತಿಗೆಯಿಂದ ಒಡೆದಂತಾಯಿತು...‘‘ಅದು ಅಸಮಾನತೆಯ ಗೋಡೆ ಸಾರ್...ಆದರೆ ಇದು ವಿಧಾನಸೌಧದ ಗೋಡೆ ಸಾರ್...’’ ಗೊಂದಲದಿಂದ ಕಾಸಿ ಕೇಳಿದ.

‘‘ಯಾವ ಗೋಡೆಯಾದ್ರೂ ಸಮಾಜದೊಳಗೆ ಇರಬಾರದು ಕಣ್ರೀ...ದುರ್ಬಲ ಜಾತಿಗೆ ಈ ಗೋಡೆಗಳು ಒಂದು ಸಮಸ್ಯೆಯಾಗಿ ಕಾಡುತ್ತಿವೆ. ಆದುದರಿಂದ ಗೋಡೆ ಕಂಡಲ್ಲೆಲ್ಲ ಅದನ್ನು ಒಡೆಯುವುದಕ್ಕೆ ಆದೇಶ ನೀಡಬೇಕೆಂದಿದ್ದೇನೆ... ಸಮಾಜದ ಎಲ್ಲಾ ಗೋಡೆಗಳು ಅಳಿತು ಹೊಸ ಕಲ್ಯಾಣ ರಾಜ್ಯವೊಂದನ್ನು ನಾನು ಕಟ್ಟಬೇಕೆಂದಿದ್ದೇನೆ... ಅದಕ್ಕೆಂದೇ ನಾನು ವಿಧಾನಸೌಧದ ಗೋಡೆಯಿಂದಲೇ ಆರಂಭಿಸಿದ್ದೇನೆ....’’

‘‘ಅಂದ್ರೆ ವಿಧಾನಸೌಧದ ಗೋಡೆಯಲ್ಲಿ ಅಸಮಾನತೆ ಇದೆ ಎಂದು ಹೇಳುತ್ತೀರಾ ಸಾರ್?’’ ಕಾಸಿ ತನ್ನ ಪೆನ್ನಿನ ತುದಿಯನ್ನು ಹರಿತ ಮಾಡತೊಡಗಿದ. 

‘‘ಮತ್ತೇನು? ಸಮಾಜ ಕಲ್ಯಾಣ ಇಲಾಖೆಗೆ ಸಣ್ಣ ಕೋಣೆ. ಇತರ ಇಲಾಖೆಗಳಿಗೆ ದೊಡ್ಡ ಕಚೇರಿ ಎಂದರೆ ಏನರ್ಥ? ಅಸಮಾನತೆ ತಾನೆ? ಸಮಾಜ ಕಲ್ಯಾಣ ಇಲಾಖೆಯ ಸಚಿವರ ಕಚೇರಿಯಲ್ಲಿ ಅಸಮಾನತೆ ಎಂದರೆ ಅದು ಇಡೀ ಸಮಾಜದ ಅಸಮಾನತೆಯನ್ನು ಸೂಚಿಸುತ್ತದೆ.ಆದುದರಿಂದ ನನ್ನ ಕಚೇರಿಯ ಗೋಡೆಯನ್ನು ಒಡೆದು ಅದನ್ನು ವಿಸ್ತರಿಸುವುದಕ್ಕೆ ಹೊರಟೆ. ಇದೊಂದು ರೀತಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಕಣ್ರೀ...ಆದ್ರೇ ಇದನ್ನೇ ದೊಡ್ಡದು ಮಾಡಿಕೊಂಡು, ಅಪಾರ್ಥ ಮಾಡಿಕೊಂಡು ಪತ್ರಕರ್ತರು ಏನೇನೆಲ್ಲ ಬರೀತಿದ್ದಾರೆ....’’ ಕಾಸಿ ಮಾತ್ರ ಆಂಜನೇಯರ ಬೆನ್ನು ಬಿಡಲಿಲ್ಲ ‘‘ಹಾಗಲ್ಲ ಸಾರ್...ಕೆಂಗಲ್ ಹನುಮಂತಯ್ಯ ಕಟ್ಟಿಸಿದ ವಿಧಾನಸೌಧ...’’

ಆಂಜನೇಯರು ಮತ್ತೆ ಗರಂ ಆದರು. ‘‘ಅವರು ಹನುಮಂತಯ್ಯ. ನಾನು ಆಂಜನೇಯ. ಹೆಸರಲ್ಲೇನು ವ್ಯತ್ಯಾಸ ಇಲ್ಲಾರೀ...ಇಬ್ಬರೂ ಒಂದೆ. ಇಬ್ಬರ ಹೆಸರೂ ಯ ಅಕ್ಷರದಲ್ಲೇ ಕೊನೆಯಾಗುತ್ತೆ. ಯ ಅಂದರೆ ನ್ಯಾಯ ಅಂತ ಅರ್ಥ. ಅಲ್ಲಾರೀ...ಹನುಮಂತಯ್ಯ ವಿಧಾನಸೌಧ ಕಟ್ಟುವಾಗ ಸಮಾಜಕಲ್ಯಾಣ ಇಲಾಖೆ ಅಂತ ಸಣ್ಣ ಕೋಣೆಯೇನಾದ್ರೂ ಕಟ್ಟಿದ್ದಾರಾ? ಅಥವಾ ಸಮಾಜ ಕಲ್ಯಾಣ ಇಲಾಖೆಗೆ ಸಣ್ಣ ಕಚೇರಿ ಕೊಡಿ ಎಂದು ಉಯಿಲು ಬರೆಸಿ ಹೋಗಿದ್ದಾರಾ? ಹನುಮಂತಯ್ಯ ಕಟ್ಟಿದ್ದು ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಕಾರಣಕ್ಕೆ. ಈ ಆಂಜನೇಯ ಕೆಡವಿದ್ದು ಕೂಡ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಕಾರಣಕ್ಕೆ...’’

ಯಾವುದೋ ಬಂಡಾಯ ಕವಿತೆ ಕೇಳಿದಂತೆ ಪತ್ರಕರ್ತ ಎಂಜಲು ಕಾಸಿ ರೋಮಾಂಚನ ಗೊಂಡ. ‘‘ಇನ್ನೇನೇನು ಒಡೆಯಬೇಕು ಅಂತ ಇದ್ದೀರಿ ಸಾರ್?’’ ಕಾಸಿ ಖುಷಿಯಿಂದ ಕೇಳಿದ.

 ‘‘ಸಮಾಜ ಕಲ್ಯಾಣ ಇಲಾಖೆಗೆ ಕೊಕ್ಕೆ ಇಡುವ ಅಧಿಕಾರಿಗಳ ಕಾಲನ್ನು ಒಡೆಯಬೇಕು ಎಂದಿದ್ದೇನೆ. ಹಾಗೆಯೇ ಬಾಯಿಗೆ ಬಂದಂತೆ ಬರೆಯುವ ಪತ್ರಕರ್ತರ ತಲೆ ಒಡೆಯಬೇಕು ಎಂದಿದ್ದೇನೆ...’’ ಎನ್ನುತ್ತಾ ಕಾಸಿಯನ್ನು ಕಣ್ಣಗಲಿಸಿ ನೋಡಿದರು.

ಕಾಸಿ ನಿಂತಲ್ಲೇ ಗದ್ದರ್ ಹಾಡು ಕೇಳಿದವನಂತೆ ನಡುಗಿದ. ‘‘ಸಾರ್...ಗೋಡೆ ಬಿಟ್ಟು ತಲೆಯನ್ನು ಒಡೆಯೋದಕ್ಕೆ ಸಿದ್ಧರಾಗಿದ್ದೀರಲ್ಲ ಸಾರ್...’’ 

‘‘ತಲೆಯಿರುವವರು ಗೋಡೆ ಕಟ್ಟುತ್ತಾರೆ. ಅದಕ್ಕಾಗಿ ಮೊದಲು ತಲೆ ಒಡೆದು ಅನಂತರ ಗೋಡೆ ಒಡೆದರೆ ಒಳ್ಳೆಯದು ಎಂಬ ತೀರ್ಮಾಣಕ್ಕೆ ಬಂದಿದ್ದೇನೆ...’’ ಆಂಜನೇಯ ಸ್ಪಷ್ಟವಾಗಿ ನುಡಿದರು. ಎಂಜಲು ಕಾಸಿ ತನ್ನ ತಲೆಯನ್ನೊಮ್ಮೆ ಸವರಿಕೊಂಡು ಕೇಳಿದ ‘‘ಆದರೂ...ಕಾನೂನನ್ನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಸಾರ್?’’

‘‘ಹಾಗಾದರೆ, ಗೋಡೆಯ ಬಗ್ಗೆ ತಲೆ ಬಿಸಿ ಮಾಡಿಕೊಳ್ಳದೆ ಕಲ್ಯಾಣ ಇಲಾಖೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿ...’’ ಆಂಜನೇಯರು ಆರ್ಡರ್ ಕೊಟ್ಟರು. ಬರೇ ಗೋಡೆಗಳ ಬಗ್ಗೆ ಮಾತ್ರ ಪ್ರಶ್ನೆ ಸಿದ್ಧ ಪಡಿಸಿಕೊಂಡು ಬಂದಿದ್ದ ಎಂಜಲು ಕಾಸಿ ಕಕ್ಕಾ ಬಿಕ್ಕಿಯಾದ. ಆದರೂ ಪ್ರಶ್ನೆ ಕೇಳ ತೊಡಗಿದ ‘‘ಸರ್, ಗೋಡೆ ಕೆಡವಿದ್ದಕ್ಕೆ ಸಿದ್ದರಾಮಯ್ಯ ತುಂಬಾ ಸಿಟ್ಟಾಗಿದ್ದಾರಂತೆ...ಹೌದಾ?’’

‘‘ಹೌದೌದು. ಶ್ಯಾನೆ ಸಿಟ್ಟಾಗಿದ್ರು. ನನ್ನನ್ನು ಬಿಟ್ಟು ನೀವೊಬ್ರೆ ಯಾಕೆ ಗೋಡೆ ಕೆಡವಿದ್ರಿ ಎಂದು ಸಿಟ್ಟಾದ್ರು. ಅಹಿಂದ, ಅಸಮಾನತೆ ಇತ್ಯಾದಿ ಗೋಡೆಗಳನ್ನು ಕೆಡಹುವಾಗ ಸಿದ್ದರಾಮಯ್ಯ ಅವರ ಜೊತೆ ಒಂದು ಮಾತು ಹೇಳಬೇಕಾಗಿತ್ತು. ಅದು ನನ್ನ ತಪ್ಪು. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಇನ್ನು ಮುಂದೆ ಗೋಡೆ ಕೆಡಹುವಾಗ ಸಿದ್ದರಾಮಯ್ಯ ಅವರ ಕೈಯಲ್ಲಿ ಗುದ್ದಲಿ ಪೂಜೆ ಮಾಡಿಸಿ ಹೊರಡುತ್ತೇನೆ....’’

‘‘ಸಾರ್...ನೀವು ಗೋಡೆ ಕೆಡವಲು ವಾಸ್ತು ಕಾರಣ ಅಂತ ಹೇಳ್ತಾರೆ ಹೌದಾ?’’ ಕಾಸಿ ಕೇಳಿದ.
‘‘ಹೇಳುವವರನ್ನು ಕರೆದುಕೊಂಡು ಬನ್ನಿ. ನಿರ್ಮಾಣ ಮಾಡಿದ ಹೊಸ ಗೋಡೆಯ ಮೇಲೆ ಅವರನ್ನು ತೂಗು ಹಾಕ್ತೇನೆ....’’ ಆಂಜನೇಯ ಮತ್ತೆ ಗರಂ ಆದದ್ದು ಕಂಡು ಕಾಸಿ ಮೆಲ್ಲ ಅಲ್ಲಿಂದ ಕಾಲ್ತೆಗೆದ.


ಅಷ್ಟರಲ್ಲಿ ಹೊರಗಡೆ ಆಂಜನೇಯರ ಪಿಎಯನ್ನು ನೋಡಿದ್ದೇ ಕಾಸಿ ಅವನನ್ನು ಇಂಟರ್ಯೂ ಮಾಡಲು ಹೊರಟ ‘‘ಸಾರ್...ಅದೇ ಸಾಹೇಬ್ರ ಗೋಡೆ ಕೆಡವಿದ್ರಲ್ಲ...ಅದರ ಬಗ್ಗೆ...ನಿಮಗೇನಾದ್ರೂ ಗೊತ್ತಾ...’’

ಪಿಎ ತಣ್ಣಗೆ ಹೇಳಿದ ‘‘ಹಂಗೇನಿಲ್ಲ. ಸಾಹೇಬರು ಎಂದಿನಂತೆ ಕಚೇರಿಗೆ ಬಂದಿದ್ದರು. ಆದರೆ ಕಚೇರಿ ಬಾಗಿಲ ಬೀಗದ ಕೀ ಕಾಣಿಯಾಗಿತ್ತು. ತುಂಬಾ ಹುಡುಕಾಡಿದ್ರೂ ಸಿಗಲಿಲ್ಲ. ಆದರೆ ಕೆಲಸದ ವಿಷಯದಲ್ಲಿ ಸಾಹೇಬರು ಸ್ಟ್ರಿಕ್ಟು. ಬಾಗಿಲು ಮುರಿದು ಹೋದರೆ ತಪ್ಪಾಗತ್ತೆ ಅಂತ, ಗೋಡೆ ಒಡೆಯೋದಕ್ಕೆ ಹೇಳಿದ್ರು. ಹಾಗೆ...ಗೋಡೆ ಒಡೆದು ಒಳ ಹೋಗಿ ಸಾಹೇಬ್ರು ಕೆಲಸ ಮಾಡ ತೊಡಗಿದ್ರು...ಅದನ್ನೇ ಪತ್ರಕರ್ತರು ಇಷ್ಟು ರಾದ್ಧಾಂತ ಮಾಡ್ತಾ ಇದ್ದಾರೆ....’’
ಅಷ್ಟರಲ್ಲಿ ಒಳಗಿನಿಂದ ಆಂಜನೇಯರ ಧ್ವನಿ ಕೇಳಿಸಿತು ‘‘ಅಂದ ಹಾಗೆ ನನ್ನ ಶಾಸಕರ ಭವನದ ಬೀಗದ ಕೈ ಕಾಣ್ತಾ ಇಲ್ಲಾ....ಸ್ವಲ್ಪ ಬಂದು ಇಲ್ಲಿ ಹುಡುಕ್ರೋ...’’ ಎನ್ನುತ್ತಿದ್ದ ಹಾಗೆಯೇ ಆಂಜನೇಯರ ಪಿಎ ಶಾಸಕ ಭವನದ ಗೋಡೆ ಒಡೆಯಲು ಗುದ್ದಲಿ ಹುಡುಕ ತೊಡಗಿದ.

Wednesday, January 8, 2014

ಹುಂಜ ಮೊಟ್ಟೆ ಇಡುತ್ತಾ ಸಾರ್...?

 ಬಿಜೆಪಿ - ಜೆಡಿಎಸ್ ಜೊತೆಯಾಗಿ ಸರಕಾರ ನಡೆಸುತ್ತಿದ್ದಾಗ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗ್ರಾಮ ವಾಸ್ತವ್ಯ ಸಖತ್ ಸುದ್ದಿಯಾಗ ತೊಡಗಿತು. ಆ ಸಂದರ್ಭದಲ್ಲಿ(ಆಗಸ್ಟ್ 5, 2007ರಂದು ) ಈ ಬುಡಬುಡಿಕೆ ಬರೆಯಲಾಗಿದೆ. ಕಳವಾದ ಕೋಳಿಯ ಬೆನ್ನು ಹತ್ತಿದ ಪತ್ರಕರ್ತ ಎಂಜಲು ಕಾಸಿಯ ಸ್ಕೂಪ್ ಸುದ್ದಿ ಇಲ್ಲಿದೆ.

 ಏಕಾಎಕಿ ಮುಖ್ಯಮಂತ್ರಿಗೆ ದೇವನೂರು ಮಹಾದೇವನವರ ಕಾದಂಬರಿ ‘ಒಡಲಾಳ’ದ ದಲಿತ ಮುದುಕಿ ಸಾಕವ್ವನ ಮನೆಯಲ್ಲಿ ವಾಸ್ತವ್ಯ ಹೂಡಿದರೆ ಹೇಗೆ ಅನಿಸಿತು. ತಕ್ಷಣ ಪತ್ರಿಕಾಗೋಷ್ಠಿ ಕರೆದರು. ವಾಸ್ತವ್ಯಕ್ಕೆ ಮೊದಲೆ ದಲಿತ ಕವಿ ಸಿದ್ದಲಿಂಗಯ್ಯನವರು ಮುಖ್ಯಮಂತ್ರಿಯನ್ನು ಅಭಿನಂಧಿಸಿದರು. ದಲಿತೆ ಸಾಕವ್ವನ ಗುಡಿಸಲಲ್ಲಿ ಮುಖ್ಯಮಂತ್ರಿಯ ವಾಸ್ತವ್ಯ ಎನ್ನುವ ಸುದ್ದಿಯನ್ನು ಪತ್ರಿಕೆಗಳು ‘ಧಾಂ... ಧೂಂ...’ ಎಂದು ಬರೆದವು. ಅಂತೂ ಇಂತೂ ಸಾಕವ್ವನ ಫೋಟೊ ಕೂಡ ಪತ್ರಿಕೆಯಲ್ಲಿ ಪ್ರಕಟವಾಯಿತು. ಕೊನೆಗೂ ಮಖ್ಯಮಂತ್ರಿಯವರ ಬಳಗ ಸಾಕವ್ವನ ಮನೆಯಲ್ಲಿ ಮಲಗಿ ಬೆಂಗಳೂರಿನ ಅಶೋಕ ಹೋಟೆಲ್‌ನಿಂದ ತಂದ ಊಟ ಉಂಡು, ಬೆಳ್ಳಂಬೆಳಗ್ಗೆ ಎದ್ದು ಬೆಂಗಳೂರು ಸೇರಿತು. ತಾತ್ಕಾಲಿಕವಾಗಿ ಆ ಗುಡಿಸಲು ಸೇರಿದ್ದ ವಿದ್ಯುತ್ ಬಲ್ಬು, ಫ್ಯಾನ್, ಮಂಚ ಕೂಡ ಅವರ ಹಿಂದೆಯೇ ಬೆಂಗಳೂರು ಸೇರಿದವು. ಅಂದು ಬೆಳಗ್ಗೆ ಸೂರ್ಯ ಮೂಡುವ ಹೊತ್ತಿಗೆ ಅಜ್ಜಿ ಸಾಕವ್ವ ಕೋಳಿ ಗೂಡಿಗೆ ಹೋಗಿ ಬಾಗಿಲು ತೆಗೆಯುತ್ತಾಳೆ. ಎದೆಯೇ ಬಾಯಿಗೆ ಬಂದಂತಾಯಿತು. ಸಾಕವ್ವನ ಹುಂಜ ಅಲ್ಲಿರಲಿಲ್ಲ. ‘ಲಬೋ.. ಲಬೋ...’ ಎಂದು ಬಾಯಿ ಬಡೆದು ಕೊಳ್ಳುತ್ತಾ ತನ್ನ ಮಕ್ಕಳು ಮತ್ತು ಸೊಸೆಯಂದಿರನ್ನು ಕರೆಯ ತೊಡಗಿದಳು. ‘‘ಬನ್ರಪ್ಪೋ ಬನ್ರೊ... ಆ ಮನೆ ಹಾಳಾ ಮುಖ್ಯಮಂತ್ರಿ ನನ್ನ ಮನೆ ಕೋಳಿ ಕದ್ಕೊಂಡು ಹೋಗಿದ್ದಾನಪ್ಪೋ ... ಬನ್ರೋ...’’ ಎಂದು ಮುಖ್ಯಮಂತ್ರಿಗೆ ಹಿಡಿಶಾಪ ಹಾಕಹತ್ತಿದಳು.
 ಎಲ್ಲರೂ ಅವರ ಸುತ್ತ ಸೇರಿದರು. ಕೆಲವರು ಅತ್ತಿತ್ತ ಹುಡುಕಾಡ ತೊಡಗಿದರು. ಸಾಕವ್ವ ಮಾತ್ರ ಬಂದವರಲ್ಲಿ ಗೋಳು ಹೇಳ ತೊಡಗಿದಳು. ‘‘ರಾತ್ರಿ ಊಟದ ಹೊತ್ತಿಗೇ ಆ ಮುಖ್ಯಮಂತ್ರಿಗೆ ಆ ನನ್ ಕೋಳಿ ಮೇಲೆ ಒಂದು ಕಣ್ಣಿತ್ತು. ಬೆಳಗ್ಗೆ ಯಾವುದೇ ಸುದ್ದಿಲ್ಲದೇ ಆ ವಯ್ಯ ಹೋಂಟೋದಾಗ್ಲೆ ನನ್ಗೆ ಅನುಮಾನ ಬಂದಿತ್ತು... ಹೋಗಿ ಕೋಳಿ ಗೂಡು ನೋಡಿದ್ರೆ ಅನುಮಾನ ನಿಜವಾಯಿತು... ಅಯ್ಯೋ... ನನ್ನ ಬಂಗಾರದಂತಾ ಕೋಳಿನಾ ಕದ್ಕೊಂಡು ಹೋಗಿ ಬಿಟ್ನೇ... ನಾನೇನ್ಮಾಡ್ಲಿ...’’ ಎಂದು ಎದೆ ಬಡಿದು ಅಳತೊಡಗಿದಳು. ಅಷ್ಟರಲ್ಲಿ ಅಲ್ಲಿಗೆ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಆಗಮಿಸಿದರು. ಅವರಲ್ಲಿ ಎಡ-ಬಲ ಅಂತ ಎರಡು ಗುಂಪು ಇತ್ತು ಸಾಕವ್ವನ ಎಡ ಮತ್ತು ಬಲಭಾಗದಲ್ಲಿ ಅವರು ನಿಂತು ‘ಸಾಕವ್ವನ ಕೋಳಿ ಕದ್ದ ಮುಖ್ಯಮಂತ್ರಿಗೆ ದಿಕ್ಕಾರ... ಮರಳಿಸಿ... ಮರಳಿಸಿ... ಸಾಕವ್ವನ ಕೋಳಿ ಮರಳಿಸಿ ... ಎಂದು ಕೂಗ ತೊಡಗಿದರು. ತನ್ನ ಕೋಳಿಗಾಗಿ ಇಷ್ಟು ಜನರು ಒಂದಾಗಿರುವುದು ನೋಡಿ ಸಾಕವ್ವನಿಗೆ ಅಚ್ಚರಿ, ಸಂತೋಷ ಎರಡೂ ಆಯಿತು. ತಕ್ಷಣ ಪತ್ರಿಕಾಗೋಷ್ಠಿ ಕರೆಯಾಯಿತು.

ಪತ್ರಕರ್ತ ಎಂಜಲು ಕಾಸಿ ತರಾತುರಿಯಿಂದ ಜೋಲಿಗೆಯನ್ನು ಹೆಗಲಿಗೇರಿಸಿ ದಲಿತರ ಕೇರಿಗೆ ಹೋದ. ಅಲ್ಲಿ ನೋಡಿದರೆ ಅವನಂತಹ ಒಂದೆರಡು ಪತ್ರಕರ್ತರು ಮಾತ್ರ ಇದ್ದರು. ಕನ್ನಡದ ಹೆಚ್ಚಿನ ಪತ್ರಕರ್ತರು ಜನಿವಾರದ ಜನ ಆಗಿರುವುದರಿಂದ ಅವರಿಗೆ ಆ ಕೇರಿಗೆ ಕಾಲಿಡುವಂತಿಲ್ಲ. ಆದುದರಿಂದ ಅವರಾರು ಅಲ್ಲಿರಲಿಲ್ಲ. ಸಾಕವ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡತೊಡಗಿದಳು ‘‘ಅವನ ಮನೆ ಹಾಳಾಗ... ಕೈ ಸೇದೋಗ... ಬಂಗಾರದ ಜುಟ್ಟು ಇರುವ ನನ್ನ ಹೂಂಜಾನ ಕದ್ಕೊಂಡು ಹೋದ್ನಲ್ಲಾ... ಅವನ ಹೊಟ್ಟೆ ಸಿಡಿದೋಗ’’ ಎಂಜಲು ಕಾಸಿ ಎಲ್ಲವನ್ನು ನೋಟ್ ಮಾಟ್ಕೊಂಡ.

ನಾಡಿನಾದ್ಯಂತ ಸಾಕವ್ವನ ಕೋಳಿ ಸುದ್ದಿಯಾಯಿತು. ವಿವಿಧ ಗಣ್ಯರು, ವಿರೋಧ ಪಕ್ಷದ ನಾಯಕರು ಈ ಕುರಿತಂತೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಎಂಜಲು ಕಾಸಿ ಎಲ್ಲ ನಾಯಕರ ಹಿಂದೆ ಅಭಿಪ್ರಾಯಕ್ಕಾಗಿ ಅಲೆದಾಡ ತೊಡಗಿದ.

 ***
ಎಂಜಲು ಕಾಸಿ ಕಾಂಗ್ರೆಸ್ ಮುಖಂಡ ಖರ್ಗೆಯನ್ನು ಭೇಟಿ ಮಾಡಿದಾಗ ಅವರು ಸಖತ್ ಗರಂ ಆಗಿದ್ರು. ‘‘ಅದು ಬರೀ ಕೋಳಿಯಾಗಿರಲಿಲ್ಲ. ಅದೊಂದು ದಲಿತ ಕೋಳಿಯಾಗಿತ್ತು. ಅದನ್ನು ಕದ್ದುಕೊಂಡು ಹೋಗಿದ್ದಾರೆ ಎನ್ನುವುದು ನಿಜಕ್ಕೂ ಖಂಡನಾರ್ಹ. ಮೊನ್ನೆ ಕುಮಾರಸ್ವಾಮಿ ಮನೇಲಿ ನಡೆದ ಬಿಜೆಪಿ-ಜೆಡಿಎಸ್ ಸಭೆಯಲ್ಲಿ ಆ ಕೋಳಿಯನ್ನು ಸಾರು ಮಾಡಿ ಎಲ್ಲರಿಗೂ ಬಡಿಸಲಾಗಿದೆ. ಕೋಳಿಯ ತೊಡೆಯನ್ನು ಯಡಿಯೂರಪ್ಪನವರೇ ತಿಂದಿದ್ದಾರೆ. ಎನ್ನುವ ಮಾಹಿತಿ ನನಗೆ ದೊರೆತಿದೆ. ಆದ್ದರಿಂದ ಸಾಕವ್ವನ ಕೋಳಿಯನ್ನು ಕದಿರುವುದು ಬರೇ ಕುಮಾರಸ್ವಾಮಿ ಮಾತ್ರ ಅಲ್ಲ, ಇಡೀ ಸರಕಾರವೇ ಇದರಲ್ಲಿ ಭಾಗಿಯಾಗಿದೆ. ಪೋಲಿಸರ ಸಹಕಾರವಿಲ್ಲದೆ ಇದು ಸಾಧ್ಯವಿಲ್ಲ. ಆದ್ದರಿಂದ ಸರಕಾರ ತಕ್ಷಣ ರಾಜೀನಾಮೆ ನೀಡಬೇಕು... ’’ ಎಂದವರು ಗುಡುಗಿದರು.
ಎಂಜಲು ಕಾಸಿ ಖರ್ಗೆಯ ಬಾಯಿಯಿಂದ ಬಿದ್ದಿದ್ದನ್ನು ಜೋಲಿಗೆಯಲ್ಲಿ ತುಂಬಿ ಅಲ್ಲಿಂದ ನೇರವಾಗಿ ವಾಟಳ್ ನಾಗರಾಜ್ ಮನೆಗೆ ತೆರಳಿದ. ಮನೆಯೊಳಗಿಂದ ವಾಟಳ್ ನಾಗರಾಜ್ ಬೊಬ್ಬಿಡುತ್ತಿರುವುದು ಬೀದಿಗೆ ಕೇಳಿಸುತ್ತಿತ್ತು. ಮನೆಯಂಗಳದಲ್ಲೇ ಕೇಳಿದ್ದನ್ನು ಕಾಸಿ ನೋಟ್ ಮಾಡಿಕೊಂಡ. ‘‘ಅದು ಕನ್ನಡದ ಕೋಳಿಯಾಗಿತ್ತು. ಆ ಕೋಳಿ ಬೆಳಗ್ಗೆ ಬರೇ ಕೂಗುತ್ತಿರಲಿಲ್ಲ. ಬೆಳಗ್ಗೆದ್ದು ನಾಡಗೀತೆಯನ್ನು ಸುಶ್ರಾವ್ಯವಾಗಿ ಹಾಡುತ್ತಿತ್ತು ಎಂದು ಸ್ಥಳಿಯರು ಹೇಳುತ್ತಿದ್ದಾರೆ. ಕುಮಾರಸ್ವಾಮಿಯವರು ಆ ಕೋಳಿಯನ್ನು ಕದ್ದು, ನೆರೆಯ ಕರುನಾನಿಧಿಯವರಿಗೆ ಕಬಾಬ್ ಮಾಡುವುದಕ್ಕೆಂದು ಕೊಟ್ಟಿದ್ದಾರೆ ಎನ್ನುವುದರ ಕುರಿತಂತೆ ನನಗೆ ಸುಳಿವು ದೊರಕಿದೆ. ಆ ಕೋಳಿಯನ್ನು ಮರಳಿ ಕರ್ನಾಟಕಕ್ಕೆ ಒಪ್ಪಿಸಲೇಬೇಕು. ಇದಕ್ಕಾಗಿ ನಾನು ಸಹಸ್ರಾರು ಕೋಳಿಗಳನ್ನು ಮುಂದಿಟ್ಟು ಧರಣಿಯನ್ನು ಹಮ್ಮಿಕೊಳ್ಳಲಿದ್ದೇನೆ ...’’
  ಸಾಕಷ್ಟಾಯಿತು ಎಂದು ಅಲ್ಲಿಂದ ನೇರವಾಗಿ ಕಾಸಿ ಧರಂ ಸಿಂಗ್‌ರಲ್ಲಿಗೆ ಓಡಿದ. ಕಾಸಿಯನ್ನು ನೋಡಿದ್ದೆ ಅವರು ತಾನು ತಿನ್ನುತ್ತಿದ್ದ ಕೋಳಿ ಪ್ರೈಯನ್ನು ಮೆಲ್ಲಗೆ ಮುಚ್ಚಿಟ್ಟರು. ಆದರೆ ಕಾಸಿಗೆ ಪರಿಮಳದಿಂದಲೇ ಅಲ್ಲೇನಿದೆ ಎನ್ನುವುದು ಮನವರಿಕೆಯಾಯಿತು. ಧರಂ ಹೇಳಿದರು "ನೋಡ್ರಿ...ದೇವರಾಣೆ ಹೇಳುತ್ತಿದ್ದೇನೆ...ಇದು ಕುಮಾರಸ್ವಾಮಿಯವರು ಕದ್ದುಕೊಂಡು ಬಂದ ಕೋಳಿಯಲ್ಲ. ನಾನೇ ಮನೆಯಲ್ಲಿ ಸಾಕಿರುವ ಕೋಳಿ ಇದು. ಕುಮಾರಸ್ವಾಮಿಯವರು ಕದ್ದುಕೊಂಡು ಬಂದ ಸಾಕವ್ವನ ಕೋಳಿ ಆಸುಪಾಸಿನಲ್ಲಿ ತುಂಬಾ ಹೆಸರರು ಪಡೆದಿತ್ತು ಕಣ್ರಿ. ನಾಡಿಗೆಲ್ಲ ಅದೇ ಕೋಳಿಯಿಂದ ಮೊಟ್ಟೆ ಸಪ್ಲೈ ಆಗುತ್ತಿತ್ತು. ಆ ಕೋಳಿ ಮೊಟ್ಟೆಯನ್ನೇ ಎಲ್ಲಾ ಶಾಲೆಗಳಿಗೆ ಬಿಸಿಯೂಟ ಜೊತೆಗೆ ಕೊಡಬೇಕು ಎಂದು ನಿರ್ಧರಿಸಿದ್ದೆವು. ಅದನ್ನು ತಪ್ಪಿಸುವುದಕ್ಕಾಗಿಯೇ ಆ ಕೋಳಿಯನ್ನು ಕುಮಾರಸ್ವಾಮಿಯವರು ಕದ್ದಿದ್ದಾರೆ... ರಾಜ್ಯದಲ್ಲಿ ಮೊಟ್ಟೆಯ ಅಭಾವ ಕಾಣಿಸಿಕೊಳ್ಳಲಿದೆ... ಕುಮಾರಸ್ವಾಮಿಯವರು ಆ ಕೋಳಿಯನ್ನು ಸಾಕವ್ವನಿಗೆ ಮರಳಿಸಲೇ ಬೇಕು... ಇಲ್ಲದಿದ್ದರೆ ಮೊಟ್ಟೆ ಉದ್ಯಮ ಸಂಪೂರ್ಣ ಕುಸಿಯಲಿದೆ.’’

 ಕಾಸಿ ಅಚ್ಚರಿಯಿಂದ ಕೇಳಿದ ‘‘ಸಾರ್... ಆದರೆ ಕಾಣೆಯಾದ ಕೋಳಿ ಹುಂಜ ಆಗಿತ್ತಲ್ಲ, ಹುಂಜ ಮೊಟ್ಟೆ ಇಡುತ್ತಾ ಸಾರ್...’’ ಧರಂ ಗರಂ ಆದರು ‘‘ಹುಂಜ ಮೊಟ್ಟೆ ಇಡುತ್ತಾ ಇಲ್ಲವೋ ಎಂಬುದು ತನಿಖೆಯಿಂದಷ್ಟೆ ಗೊತ್ತಾಗುತ್ತೆ ಕೆಲವು ವೇಳೆ ಅದು ಮೊಟ್ಟೆಯಿಡುವ ಹುಂಜ ಆಗಿರುವ ಸಾಧ್ಯತೆಯಿದೆ. ಏನೇ ಆಗಲಿ ಒಟ್ಟಿನಲ್ಲಿ ತನಿಖೆಯಾಗಬೇಕು... ಅಷ್ಟೆ ಅಲ್ಲ ಮುಖ್ಯಮಂತ್ರಿ ಎಲ್ಲೆಲ್ಲಾ ವಾಸ್ತವ್ಯ ಹೂಡಿದ್ದಾರೋ, ಅಲ್ಲಿ ಚೆಂಬು, ಚಪ್ಪಲಿ, ದುಡ್ಡು ಇತ್ಯಾದಿ ಕಳವಾಗಿದೆ. ಒಟ್ಟಿನಲ್ಲಿ ಸಿಬಿಐ ತನೆಖೆ ನಡೆಯಲೇಬೇಕು’’.
ಕಾಸಿ ಅಲ್ಲಿಂದ ನೇರವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಲಿತ ಕವಿ ಸಿದ್ದಲಿಂಗಯ್ಯನವರಲ್ಲಿಗೆ ಓಡಿದ. ಸಿದ್ದಲಿಂಗಯ್ಯ ಗರಿಗರಿ ಬಟ್ಟೆ ತೊಟ್ಟು ಕೊಂಡಿದ್ದರು. ಆಗಷ್ಟೆ ಫೂಜೆ ಮುಗಿಸಿ, ಹಣೆಯಲ್ಲಿ ಕುಂಕುಮ ಧರಿಸಿಕೊಂಡಿದ್ದರು. ಕಾಸಿಯನ್ನು ಕಂಡಂತೆಯೇ ಭಯ ಭಕ್ತಿಯಲ್ಲಿ ‘‘ ತಗೊಳ್ಳಿ ಪ್ರಸಾದ’’ ಎಂದು ನೀಡಿದರು. ಕಾಸಿ ಅದನ್ನು ಗಬಕ್ಕನೆ ನುಂಗಿದ. ‘‘ನನಗೆ ಗೊತ್ತು. ನೀವು ಕುಮಾರಸ್ವಾಮಿ ಕದ್ದ ಕೋಳಿಯ ಕುರಿತು ಅಭಿಪ್ರಾಯ ಕೇಳಲು ಬಂದಿದ್ದೀರಿ ಅಂತ.  ಇತ್ತೀಚೆಗೆ ದಲಿತರ ಕಾನೂನು ದುರ್ಬಳಕೆಯಾಗುತ್ತಿದೆ. ದಲಿತರು ಸುಮ್ಮಸುಮ್ಮನೆ ಮೇಲ್ಜಾತಿಯ ಮುಗ್ದರ ಮೇಲೆ ಆ ಕಾನೂನನ್ನು ಬಳಸುತ್ತಿದ್ದಾರೆ. ಸಾಕವ್ವ ಕೋಳಿಯನ್ನು ಸಾಕುತ್ತಿದ್ದಳೋ ಇಲ್ಲವೋ ಎಂಬುದನ್ನು ನಾವು ಪತ್ತೆ ಮಾಡಬೇಕು. ಯಾಕೆಂದರೆ ದಲಿತರು ಸಸ್ಯಹಾರಿಗಳು...’’
ಕಾಸಿಯ ತಲೆಯ ಮೇಲೆ ಧಿಂ ಅಂದಿತು. ‘‘ಸಾರ್ ದಲಿತರು ಸಸ್ಯಾಹಾರಿಗಳೇ ...?’’ ಕೇಳಿದ. ‘‘ಹೂಂ. ನನ್ನ ಮನೆಯಲ್ಲಿ ಕೋಳಿ, ಮಾಂಸ ಇತ್ಯಾದಿಗಳನ್ನು ತಪ್ಪಿಯೂ ಬಳಸುತ್ತಿರಲಿಲ್ಲ. ದಲಿತರು ಮಾಂಸಹಾರಿಗಳಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ನನ್ನ ಮನೆಯಲ್ಲಿ ಅಮ್ಮ ಬದನೆಕಾಯಿ ಗೊಜ್ಜು ತಿಳಿಸಾರು ಅದೆಷ್ಟೋ ಚೆನ್ನಾಗಿ ಮಾಡುತ್ತಿದ್ದಳು ಎಂದರೆ ಬ್ರಾಹ್ಮಣರು ಕೂಡ ಊಟ ಮಾಡಿ ಹೋಗುತ್ತಿದ್ದರು. ಹಿಂದೆ ಮೇಲ್ಜಾತಿ ಮತ್ತು ದಲಿತರ ನಡುವೆ ಅದೆಷ್ಟು ಹೊಂದಾಣಿಕೆಯಿತ್ತು ಎಂದರೆ...ಛೇ..! ಈಗ ದಲಿತರು ತುಂಬಾ ಕೆಟ್ಟು ಹೋಗಿದ್ದಾರೆ... ಮೊನ್ನೆ ಪೇಜಾವರಶ್ರೀಗಳು ಸಿಕ್ಕಿದ್ದರು. ಅವರಿಗೆ ನಾನೆಂದರೆ ತುಂಬಾ ಪ್ರೀತಿ...’’
ಕಾಸಿ ‘‘ ಸಾರ್ ಈಗ ಬಂದಿದೆ ...’’ ಎಂದವನೇ ಅಲ್ಲಿಂದ ಓಡಿ ನೇರ ದೇವನೂರು ಮಹಾದೇವನವರ ಮನೆಗೆ ಬಂದ. ನೋಡಿದರೇ ಮಹಾದೇವರು ತಂಬಾ ವರ್ಷಗಳ ಬಳಿಕ ಪೆನ್ನು ಕಾಗದ ಹಿಡಿದು ಕೂತಿದ್ದರು. ಕಾಸಿ ಅಚ್ಚರಿಯಿಂದ ಕೇಳಿದ ‘‘ಸಾರ್ ಹೊಸ ಕಾದಂಬರಿ ಬರೀತಾ ಇದ್ದಿರಾ ಸಾರ್...?’’ ಮಹಾದೇವ ಗಂಭೀರವಾಗಿ ನುಡಿದರು. ‘‘ಹೂಂ..ಈ ಹಿಂದೆ ಸಾಕವ್ವನ ಕೋಳಿಯನ್ನು ಪೊಲೀಸರು ಕದ್ಕೊಂಡು ಹೋದಾಗ ‘ಒಡಲಾಳ’ ಕಾದಂಬರಿ ಬರೆದಿದ್ದೆ. ಈಗ ಮುಖ್ಯಮಂತ್ರಿ ಕದ್ದಿದ್ದಾರೆ ಎಂದ ಮೇಲೆ ಬರೆಯದೇ ಇರೋಕ್ಕಾಗುತ್ತಾ...’’
ಅಲ್ಲಿಂದ ನೇರವಾಗಿ ಕಾಸಿ ಕುಮಾರಸ್ವಾಮಿಯ ಮನೆಗೆ ತೆರಳಿದ. ಅವರು ತಲೆ ಮೇಲೆ ಕೈಯಿಟ್ಟು ಕೂತಿದ್ದರು. ಕಾಸಿಯನ್ನು ಕಂಡದ್ದೇ ಹೇಳತೊಡಗಿದರು ‘‘ಅಪ್ಪಾಜಿಯಾಣೆ.. ನಾನು ಕದ್ದಿಲ್ಲ...ಯಡಿಯೂರಪ್ಪನವರ ಸಹವಾಸ ಬಳಿಕ ನಾನು ನಾನ್‌ವೆಜ್ ತಿನ್ನುವುದನ್ನೇ ಬಿಟ್ಟಿದ್ದೇನೆ... ಹೀಗಿರುವಾಗ ನಾನ್ಯಾಕೆ ಕೋಳಿಯನ್ನು ಕದೀಲಿ. ನನ್ನೊಟ್ಟಿಗೆ ಇಕ್ಬಾಲ್ ಅನ್ಸಾರಿ, ಮೀರಾಜುದ್ದೀನ್ ಪಟೇಲ್ ಕೂಡ ಇದ್ರು. ಅವರೇನಾದ್ರೂ ಕದ್ಕೊಂಡು ಹೋಗಿ ಬಿರಿಯಾನಿ ಮಾಡಿ ತಿಂದ್ರಾ ಎನ್ನುವ ಅನುಮಾನ ನನಗಿದೆ. ಸಾಬ್ರನ್ನ ನಂಬೋಕಾಗಲ್ಲ. ಏನಾದ್ರೂ ತನಿಖೆಯಲ್ಲಿ ಗೊತ್ತಾಗುತ್ತೆ....’’
 ಕಾಸಿ ಅಲ್ಲಿಂದ ಹೊರಡುವಷ್ಟರಲ್ಲಿ ಸುದ್ದಿ ಸಿಕ್ಕಿತ್ತು. ಸಾಕವ್ವನ ಕೋಳಿಯ ಹೆಣ ಚಿಕ್ಕಮಗಳೂರಿನ ಕಾಡಿನ ಸಮೀಪ ಬಿದ್ದಿದೆ, ಎನ್ನುವುದು. ಕಾಸಿಯಾದಿ ಪತ್ರಕರ್ತರು ಅತ್ತ ದಾವಿಸಿದರು. ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಪತ್ರಿಕಾಗೋಷ್ಠಿ ಕರೆದು ಇಡೀ ಪ್ರಕರಣವನ್ನು ಮುಗಿಸಿದರು. ‘‘ಸಾಕವ್ವನ ಕೋಳಿಗೆ ನಕ್ಸಲೀಯರ ಜೊತೆ ಸಂಪರ್ಕವಿತ್ತು. ಅದು ಪೊಲೀಸರ ಮೇಲೆ ಗುಂಡೆಸೆದಾಗ ಪೊಲೀಸರು ಪ್ರತಿಯಾಗಿದರ ಮೇಲೆ ಗುಂಡೆಸೆದರು. ಈ ಎನ್‌ಕೌಂಟರ್‌ನಲ್ಲಿ ಕೋಳಿ ಸತ್ತು ಹೋಗಿದೆ. ಇಬ್ಬರು ಪೊಲೀಸರಿಗೆ ಗಾಯವಾಗಿದೆ...’’
ಇದರ ಬೆನ್ನಿಗೇ ಗೃಹಸಚಿವ ಎಂ.ಪಿ. ಪ್ರಕಾಶಕರು ಕರೆ ನೀಡಿದರು ‘‘ ನಕ್ಸಲೀಯರು ಶಸ್ತ್ರಾಸ್ತ್ರ ಕೆಳಗಿಟ್ಟರೆ ಮಾತುಕತೆಗೆ ಸಿದ್ದ....’’

Sunday, January 5, 2014

ಯಾರ ಜೊತೆಯಲಿ ಮಲಗಲಮ್ಮಾ....?

 ಜನವರಿ 5, 2014ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ

ತನ್ನ ನಾಲ್ಕು ತೆಂಗಿನ ಕಾಯಿಯನ್ನು ಹಿಡಿದುಕೊಂಡು ಯಡಿಯೂರಪ್ಪ ಕೊನೆಗೂ ತನ್ನ ತಾಯಿಯ ಮನೆಗೆ ಬಂದರು. ಮೋದಿ ಎಂಬ ಕೊಳೆತ ಕುಂಬಳ ಕಾಯಿ ಯನ್ನು ಇಟ್ಟುಕೊಂಡು ಬಿಜೆಪಿ ಎಂಬ ತಾಯಿ ಕಾಯುತ್ತಿದ್ದಳು.

‘‘ಬಂದೆಯಾ ಮಗನೇ....ಬಾ ಬಾ...ನಿನ್ನ ತೆಂಗಿನಕಾಯಿಗಾಗಿ ನಾನು ಕಾದು ಕುಳಿತಿದ್ದೆ...’’ ಎಂದು ಮಾತೃಪಕ್ಷವಾದ ಬಿಜೆಪಿ ಯಡಿಯೂರಪ್ಪರನ್ನೂ ಅವರ ನಾಲ್ಕು ತೆಂಗಿನ ಕಾಯಿಯನ್ನು ಮಡಿಲಲ್ಲಿಟ್ಟು ಜೋ ಜೋ ಹಾಡತೊಡಗಿತು.

ಅಷ್ಟರಲ್ಲಿ ಯಡಿಯೂರಪ್ಪ ನುಡಿದರು ‘‘ಅಮ್ಮಾ... ಇದರಲ್ಲಿ ಎರಡು ತೆಂಗಿನ ಕಾಯಿ ಕೆಟ್ಟು ಹೋಗಿದೆ. ಆದರೆ ಮೋದಿ ಎಂಬ ಕೊಳೆತ ಕುಂಬಳಕಾಯಿಗೆ, ಈ ಕೆಟ್ಟು ಹೋದ ತೆಂಗಿನಕಾಯಿ ಹಾಕಿದರೆ ರುಚಿ ಹೆಚ್ಚಾಗು ತ್ತದೆ ಎಂದು ಶೋಭಾ ಅವರು ಹೇಳಿದ್ದಾರೆ...’’

ತಾಯಿ ಮನೆ ಬಿಟ್ಟು ಹೋದ ಮಗನನ್ನು ಕುಳ್ಳಿರಿಸಿ ಉಪಚಾರ ಮಾಡತೊಡಗಿದಳು ‘‘ಮಗನೇ... ಕೆಟ್ಟದ್ದಾದರೂ ನಡೆಯುತ್ತದೆ...ಹುಳ ಬಂದದ್ದಾರೂ ನಡೆಯುತ್ತದೆ. ಖಾಲಿ ಗೆರಟೆಯಾದರೂ ಸರಿ. ಸದ್ಯಕ್ಕೆ ಪಲ್ಯ ಮಾಡುವಾಗ ತೆಂಗಿನ ಕಾಯಿಯ ಲೆಕ್ಕ ಸರಿ ಸಿಕ್ಕಿದರೆ ಸಾಕು...’’

‘‘ಅಮ್ಮಾ...ನಿನ್ನನ್ನು ತೊರೆದು ಹೋದುದಕ್ಕೆ ನನ್ನನ್ನು ಕ್ಷಮಿಸಿ ಬಿಡು. ತುತ್ತು ಕೊಟ್ಟವಳು ಕೊನೆಯವರೆಗೆ, ಮುತ್ತುಕೊಟ್ಟವಳು ಮನೆಯವರೆಗೆ ಎನ್ನುವ ಗಾದೆ ಮಾತನ್ನು ಮರೆತು ನಾನು ಮನೆ ಬಿಟ್ಟು ಹೋದೆ. ಇದೀಗ ಮೋದಿಯೆಂಬ ಕುಂಬಳಕಾಯಿಯ ಸಾರಿಗೆ ತೆಂಗಿನ ಕಾಯಿಯ ಕೊರತೆ ಬಿದ್ದುದು ತಿಳಿದು ನನಗೆ ಬೇಜಾರಾಯಿತು. ನನ್ನಿಂದಾಗಿ ಈ ಕುಂಬಳಕಾಯಿ ಕಸದ ತೊಟ್ಟಿಗೆ ಬೀಳುವುದು ಬೇಡ ಎಂದು ನನ್ನ ತೆಂಗಿನ ಕಾಯಿಯ ಜೊತೆಗೆ ಮಾತೃಪಕ್ಷಕ್ಕೆ ಮರಳಿದ್ದೇನೆ....ಅಮ್ಮಾ ನನ್ನ ಕೋಣೆ ಎಲ್ಲಿದೆ...ನಾನು ಸ್ವಲ್ಪ ನನ್ನ ಕೋಣೆಯಲ್ಲಿ ವಿಶ್ರಾಂತಿ ತೆಗೆಯುತ್ತೇನೆ...’’

ತಾಯಿ ಬೇಜಾರಿನಿಂದ ಹೇಳಿದಳು ‘‘ಮಗನೇ ಬಂದದ್ದು ಹೇಗೂ ಬಂದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೋ.. ನಿನ್ನ ಕೋಣೆಯಲ್ಲಿ ಸದ್ಯಕ್ಕೆ ನನ್ನ ನಡು ಮಗ ಶೆಟ್ಟರ್ ಮಲಗಿದ್ದಾನೆ...ನೀನಿಲ್ಲದ ಇಷ್ಟು ದಿವಸ ಈ ಮನೆಯನ್ನು ಕಾಪಾಡಿದ್ದು ಅವನೇ ಅಲ್ಲವೆ. ಈಗ ಅವನನ್ನು ನಿನ್ನ ಕೋಣೆಯಿಂದ ಹೊರಗೆ ಹಾಕಿದರೆ ಅವನಿಗೆ ಬೇಜಾರಾದೀತು..’’

‘‘ಸರಿ. ಹಾಗಾದರೆ ನಾನು ನಿನ್ನ ಜೊತೆಯೇ ಮಲಗುತ್ತೇನೆ...ಅಮ್ಮನ ತೊಡೆಯಲ್ಲಿ ತಲೆಯಿಟ್ಟು ಮಲಗದೆ ತುಂಬಾ ದಿವಸವಾಯಿತು...’’ ಯಡಿಯೂರಪ್ಪ ಅಡ್ಜಸ್ಟ್ ಮಾಡಲು ತಯಾರಾದರು.

‘‘ಅಯ್ಯೋ ಮಗನೆ...ನನ್ನ ಜೊತೆ ಪಾಪು ಅನಂತಕುಮಾರ್ ಮಲಗುತ್ತಿದ್ದಾನೆ. ಏನು ತಿಳಿಯದ ಹಸುಗೂಸು ಅವನು. ಇನ್ನೂ ಮೊಲೆ ಹಾಲು ಬಿಟ್ಟಿಲ್ಲ. ಅಂಬೆಗಾಲಿಕ್ಕಿಕೊಂಡು ಪಕ್ಷಕ್ಕೆ ಭಾರವಾಗಿ ನಡೆಯು ತ್ತಿದ್ದಾನೆ. ನೀನು ಬಂದೆ ಎಂದು ಅವನನ್ನು ಹೊರಗೆ ಹಾಕುವುದಕ್ಕೆ ಆಗೋದಿಲ್ಲ ಮಗನೇ...ಸ್ವಲ್ಪ ಅಡ್ಜಸ್ಟ್ ಮಾಡಿಕೋ...ದಿಲ್ಲಿಯ ಅಡ್ವಾಣಿ ತಾತನಿಗೆ ಅವನೆಂದರೆ ತುಂಬಾ ಪ್ರೀತಿ. ಅವನನ್ನು ಜೊತೆಗೆ ಮಲಗಿಸಿಕೊಳ್ಳದೇ ಇದ್ದರೆ ಇಡೀ ರಾತ್ರಿ ಅತ್ತು ರಂಪಾಟ ಮಾಡುತ್ತಾನೆ...’’

ಯಡಿಯೂರಪ್ಪ ತಲೆತುರಿಸಿದರು. ಹಾಗಾದರೆ ಎಲ್ಲಿ ಮಲಗುವುದು? ‘‘ಅಮ್ಮಾ ಹಾಗಾದರೆ...ಮನೆಯ ಚಾವಡಿಯಲ್ಲೇ ಮಲಗುತ್ತೇನೆ....ಆಗದೆ...?’’

ತಾಯಿಗೆ ಮತ್ತೂ ಬೇಜಾರಾಯಿತು. ಪಾಪ ಮನೆ ಬಿಟ್ಟು ಹೋದ ಮಗ ತಿರುಗಿ ಬಂದಿದ್ದಾನೆ. ಆದರೆ ಮಲಗುವುದಕ್ಕೆ ಜಾಗವಿಲ್ಲ ‘‘ಮಗನೇ, ಚಾವಡಿಯಲ್ಲಿ ಮಲಗಬಹುದಿತ್ತು. ಆದರೆ ಸುರೇಶ್ ಕುಮಾರ್ ಮಲಗಿದ್ದಾನಪ್ಪ. ಹಿರಿಯರು. ಸಜ್ಜನರು ಬೇರೆ. ಆರೆಸ್ಸೆಸ್‌ನ್ನು ಚಡ್ಡಿಯಾಗಿಯೂ, ಲಂಗೋಟಿ ಯಾಗಿಯೂ, ಜನಿವಾರವಾಗಿಯೂ ಧರಿಸಿಕೊಂಡ ವರು. ಅವರನ್ನು ಹೊರಗೆ ಮಲಗಿಸುವುದಕ್ಕೆ ಆಗುತ್ತದೆಯೆ? ಅದೂ ಅಲ್ಲದೆ, ಮನೆಯ ಹಿರಿಯರು. ಬೆಳಗ್ಗೆ ಎದ್ದು ಕಿಟಕಿ ಬಾಗಿಲು, ತೆಗೆದು, ವೀರಸಾವರ್ಕರ್‌ಗೆ ಆರತಿ ಬೆಳಗಿ, ಸದಾ ವತ್ಸಲೆ ಎಂದು ಹಾಡಬೇಕಾದವರು...’’

ಯಡಿಯೂರಪ್ಪ ತನ್ನ ತೆಂಗಿನಕಾಯಿಯಿಂದ ಸಿಟ್ಟಲ್ಲಿ ಒಮ್ಮೆ ತಲೆಚಚ್ಚಿಕೊಂಡರು. ಅಷ್ಟರಲ್ಲಿ ಬಿಜೆಪಿ ಎಂಬ ಮಾತೆಗೆ ನೋವಾಯಿತು. ‘‘ಅಯ್ಯೋ ಮಗನೆ, ಅಷ್ಟು ಜೋರಾಗಿ ತೆಂಗಿನ ಕಾಯಿಯಿಂದ ತಲೆ ಚಚ್ಚಿಕೊಳ್ಳಬೇಡ. ತೆಂಗಿನಕಾಯಿ ಹೋಳಾಗಿ ಬಿಟ್ಟೀತು. ಮೋದಿ ಎಂಬ ಕುಂಬಳಕಾಯಿಯನ್ನು ಸಾಂಬಾರು ಮಾಡಬೇಕಾದರೆ ಆ ತೆಂಗಿನಕಾಯಿ ಬೇಕೇ ಬೇಕು. ಒಂದು ವೇಳೆ ನಿನಗೆ ತಲೆ ಚಚ್ಚಿಕೊಳ್ಳಲೇ ಬೇಕಾದರೆ, ಹೊರಗಡೆ ಕಲ್ಲಿದೆ. ಅದರಲ್ಲಿ ಚಚ್ಚಿಕೋ...’’ ಎಂದು ಮಗನನ್ನು ಸಮಾಧಾನಿಸಿದರು.
ತಾಯಿಗೆ ತನ್ನ ಮೇಲೆ ಇರುವ ಪ್ರೀತಿಯನ್ನು ನೆನೆದು ಯಡಿಯೂರಪ್ಪ ಗದ್ಗದಿತರಾದರು ‘‘ಅಮ್ಮಾ ಹಾಗಾದರೆ ನಾನು ಅಂಗಳದಲ್ಲಿ ಮಲಗಲೇ....’’

ತಾಯಿಗೆ ಮಗನ ಮೇಲೆ ಪ್ರೀತಿ ಉಕ್ಕಿ ಬಂತು. ಆದರೇನು ಮಾಡುವುದು...‘‘ಮಗನೇ...ಅಂಗಳದಲ್ಲಿ ಪುತ್ತೂರಿನ ಗೌಡರು ಮಲಗಿದ್ದಾರೆ. ದೇವೇಗೌಡರಿಗೆ ಪ್ರತಿಯಾಗಿ ನಮ್ಮಲ್ಲಿರುವುದು ಒಂದೇ ಒಂದು ಗೌಡ. ಅವರನ್ನು ಬಿಟ್ಟು ಬಿಡುವುದಕ್ಕೆ ಆಗುತ್ತದೆಯೆ? ಅವರನ್ನು ಎಬ್ಬಿಸಿದರೆ, ಅವರು ದೇವೇಗೌಡರ ಜೊತೆ ಕೈ ಜೋಡಿಸಿ ನಮ್ಮ ಮನೆಯನ್ನು ಕೆಡವಿ ಹಾಕಲೂ ಬಹುದು. ಮಂಗಳೂರಿನವರಲ್ಲವೆ? ಮೀನು ತಿಂದ ತಲೆ. ನಂಬಲಿಕ್ಕಾಗುವುದಿಲ್ಲ...’’

ಯಡಿಯೂರಪ್ಪ ಚಿಂತಾಕ್ರಾಂತರಾದರು. ಮಾತೃ ಪಕ್ಷಕ್ಕೆ ಮರಳಿ ಆಗಿದೆ. ಕಣ್ಣೀರು ಸುರಿಸಿ ಆಗಿದೆ. ಇನ್ನೂ ಎಲ್ಲಾದರೂ ಸರಿ. ಮಲಗಲೇ ಬೇಕಲ್ಲ? ‘‘ಅಮ್ಮ ನಾನು ಮನೆಯ ಹಿಂದಿರುವ ದನದ ಕೊಟ್ಟಿಗೆಯಲ್ಲಿ ಮಲಗಲೇ?’’

ತನ್ನ ಮಗನ ತ್ಯಾಗ ಬಲಿದಾನಕ್ಕೆ ಮಾತೃಪಕ್ಷದ ಕಣ್ಣಿನಿಂದ ಕಣ್ಣೀರು ದಳ ದಳನೆ ಸುರಿಯತೊಡಗಿತು ‘‘ಅಯ್ಯೋ ಮಗನೆ. ಅಪರೂಪಕ್ಕೆ ಮನೆಗೆ ಮತ್ತೆ ಮರಳಿ ಬಂದಿದ್ದೀಯ. ಅಷ್ಟೇ ಅಲ್ಲ, ಬರುವಾಗ ನಾಲ್ಕು ತೆಂಗಿನ ಕಾಯಿಯನ್ನು ಹಿಡಿದುಕೊಂಡು ಬಂದಿದ್ದೀಯ...ಆದರೆ ನಿನಗೆ ಮಲಗುವುದಕ್ಕೆ ಜಾಗ ಕೊಡಲು ನನಗೆ ಸಾಧ್ಯವಿಲ್ಲದಾಯಿತೆ...ಮಗನೆ, ನಿನ್ನನ್ನು ಕೊಟ್ಟಿಗೆಯಲ್ಲಿ ಮಲಗಿಸಬಹುದಿತ್ತು. ಆದರೆ ನಿನಗೇ ಗೊತ್ತಲ್ಲ, ತಲೆ ತಲಾಂತರದಿಂದ ನಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ಈಶ್ವರಪ್ಪ ಮಲಗಿಕೊಂಡು ಬಂದಿದ್ದಾನೆ. ಈಗ ನಿನಗಾಗಿ ಅವನನ್ನು ಎಬ್ಬಿಸುವುದು ಸರಿಯೆ? ಅದೂ ಅಲ್ಲದೆ ಸೆಗಣಿಯ ವಾಸನೆಯ ಜೊತೆಗೆ ಮಲಗಿ ಮಲಗೀ ಅವನಿಗೆ ಅಭ್ಯಾಸವಾಗಿ ಹೋಗಿದೆ. ಅದೂ ಅಲ್ಲದೆ ಮನು ಸಂವಿಧಾನ ಅವನಿಗೆ ಕೊಟ್ಟಿರುವ ಮೀಸಲಾತಿ ಅದು. ಅದನ್ನು ಕಿತ್ತುಕೊಂಡರೆ ಹಿಂದುಳಿದ ವರ್ಗಗಳ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ಆರೆಸ್ಸೆಸ್ ನವರಿಗೂ ಬೇಜಾರಾಗುತ್ತದೆ.....’’

ಯಡಿಯೂರಪ್ಪ ತಾಯಿಯ ಕೈಯನ್ನು ಹಿಡಿದು ಕೊಂಡು ಗಳಗಳನೆ ಅಳತೊಡಗಿದರು ‘‘ಹಾಗಾದರೆ ಯಾರ ಜೊತೆಗೆ ಮಲಗಲಮ್ಮ?’’ ಎಂದು ಪುಣ್ಯಕೋಟಿಯ ಜೊತೆಗೆ ಅದರ ಕರು ಕೇಳಿದ ಹಾಗೆ ಕೇಳಿದರು.

‘‘ಓ ಅಲ್ಲಿ ಮೂಲೆಯಲ್ಲಿ ಒಂದು ತೆಂಗಿನ ಮರ ಇದೆ. ಅದರ ಬುಡದಲ್ಲಿ ಸ್ವಲ್ಪ ಜಾಗ ಇದೆ. ಅಲ್ಲಿ ಮಲಗು. ಮುಂದೆ ನಿನಗೆ ಬೇರೆ ಒಳ್ಳೆಯ ವ್ಯವಸ್ಥೆಯನ್ನು ಮಾಡುವ. ನಿನ್ನ ಕೋಣೆಯನ್ನು ಬಿಟ್ಟು ಕೊಡಲು ಶೆಟ್ಟರ್‌ಗೆ ಮನವೊಲಿಸುತ್ತೇನೆ...ಈ ತಾಯಿಯ ಜೊತೆಗೆ ಬೇಜಾರು ಮಾಡದೆ ಅಲ್ಲಿ ಹೋಗು ಮಲಗು ಮಗು...’’ ಮಾತೃ ಪಕ್ಷ ಸಲಹೆ ನೀಡಿತು.

ಯಡಿಯೂರಪ್ಪ ಕೋಲೆ ಬಸವನಂತೆ ತಲೆಯಾಡಿಸಿ, ತನ್ನ ನಾಲ್ಕು ತೆಂಗಿನ ಕಾಯಿಯ ಜೊತೆಗೆ ಮಲಗಲು ಹೊರಟರು.
ಅಷ್ಟರಲ್ಲಿ ಮಾತೃಪಕ್ಷ ಹೇಳಿತು ‘‘ಮಗನೇ...ನೀನು ಹೋಗಿ ಮಲಗು. ಆದರೆ ಆ ತೆಂಗಿನ ಕಾಯಿಗಳನ್ನು ಓ ಅಲ್ಲಿ ಒಳಗೆ ಇಟ್ಟು ಹೋಗು. ಯಾಕೆಂದರೆ ಹೊರಗಡೆ ನೀನು ಇಟ್ಟುಕೊಂಡರೆ ಕಾಂಗ್ರೆಸ್‌ನವರು ಕಾಯ್ತೆ ಇದ್ದಾರೆ, ನಿನ್ನ ತೆಂಗಿನ ಕಾಯಿ ಕದಿಯಲು...’’

ಯಡಿಯೂರಪ್ಪ ತೆಂಗಿನ ಕಾಯಿಗಳನ್ನು ತಾಯಿಗೆ ಒಪ್ಪಿಸಿ ತೆಂಗಿನ ಮರದ ಬುಡದಲ್ಲಿ ಗುಮ್ಮನೆ ಮಲಗಿಕೊಂಡರು.
ಯಡಿಯೂರಪ್ಪ ಹೊರ ನಡೆದದ್ದೇ ಒಳಗಿರುವ ಶೆಟ್ಟರ್, ಅನಂತು, ಗೌಡ, ಈಶ್ವರಪ್ಪ ಎಲ್ಲ ಒಟ್ಟಾಗಿ ಮನೆಯ ಬಾಗಿಲ ಚಿಲಕವನ್ನು ಭದ್ರ ಪಡಿಸಿ, ಕುಂಬಳ ಕಾಯಿ ಸಾಂಬಾರು ಮಾಡಲು ಸಿದ್ಧತೆ ನಡೆಸಿದರು.

ರವಿವಾರ - ಜನವರಿ -05-2014

Saturday, January 4, 2014

ಪ್ರತಿಮನೆಯ ಅಂಗಳದಲ್ಲಿ ಒಂದು ಗೆರೆ ಎಳೆಯಲಾಗುತ್ತದೆ..............

 ದಿಲ್ಲಿಯಲ್ಲಿ ಬಸ್ಸೊಂದರಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ನಡೆದು ಕೊಲೆ ನಡೆದಾಗ ಆರೆಸ್ಸೆಸ್ ನಾಯಕರೊಬ್ಬರು ‘ಇಂಡಿಯಾದಲ್ಲಿ ಮಾತ್ರ ಅತ್ಯಾಚಾರ ನಡೆಯುತ್ತದೆ. ಭಾರತದಲ್ಲಿ ನಡೆಯುವುದಿಲ್ಲ’ ಎಂಬ ಹೇಳಿಕೆ ನೀಡಿದಾಗ, ಪತ್ರಕರ್ತ ಎಂಜಲು ಕಾಸಿ ನಡೆಸಿದ ಸಂದರ್ಶನ. ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

‘‘ಭಾರತದಲ್ಲಿ ಅತ್ಯಾಚಾರ ನಡೆಯುವುದೇ ಇಲ್ಲ. ಅತ್ಯಾಚಾರಗಳು ನಡೆಯುವುದು ಇಂಡಿಯಾದಲ್ಲಿ’’ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಭಾಗವತಿಕೆ ಕೇಳಿದ್ದೇ, ಪತ್ರಕರ್ತ ಎಂಜಲು ಕಾಸಿಗೆ ಗೊಂದಲವಾಯಿತು. ಹಾಗಾದರೆ ಈ ‘ಭಾರತ’ ಎನ್ನುವ ದೇಶ ಯಾವ ಖಂಡದಲ್ಲಿದೆ? ಎಂದು ಕೊಲಂಬಸ್‌ನಂತೆ ಪೆನ್ನು, ಜೋಳಿಗೆಯ ಜೊತೆಗೆ ಹುಡುಕಾಡಲು ಹೊರಟ. ತನ್ನ ತುಂಡು ಪೇಪರನ್ನು ದೋಣಿಯಾಗಿಸಿ, ಕೈಯಲ್ಲಿರುವ ಪೆನ್ನನ್ನೇ ಹುಟ್ಟಾಗಿ ಬಳಸಿ ಇಡೀ ಹಿಂದೂ ಮಹಾಸಾಗರವನ್ನು ಜಾಲಾಡಿದರೂ ಭಾರತ ಸಿಗದೇ ಸುಸ್ತಾಗಿ, ನೇರ ಭಾಗವತ್ ಮನೆಯ ಬಾಗಿಲನ್ನು ತಟ್ಟಿದ.
‘‘ಸಾರ್, ಅತ್ಯಾಚಾರಗಳೇ ನಡೆಯದ ಈ ಭಾರತ ಎನ್ನುವ ದೇಶ ಎಲ್ಲಿದೆ ಸಾರ್?’’ ಎಂಬ ಪ್ರಶ್ನೆ ಕೇಳಿದ್ದೇ, ಈತ ಪತ್ರಕರ್ತ ಎಂಜಲು ಕಾಸಿ ಎನ್ನುವುದು ಭಾಗವತ್‌ಗೆ ಅರ್ಥವಾಯಿತು. ಇಂತಹ ತಲೆಗೆಟ್ಟ ಪ್ರಶ್ನೆಗಳನ್ನು ಕಾಸಿಯಲ್ಲದೆ ಇನ್ನಾರು ಕೇಳಲು ಸಾಧ್ಯ? ಎಂಬುದು ಅವರಿಗೆ ಗೊತ್ತಿತ್ತು. ‘‘ಎಲ್ಲೆಲ್ಲ ಹೆಣ್ಣು ಮಕ್ಕಳು ಅತ್ಯಾಚಾರದ ವಿರುದ್ಧ ಧ್ವನಿಯೆತ್ತುತ್ತಾರೋ, ಅದೆಲ್ಲ ಇಂಡಿಯ ಅಲ್ಲ. ಎಲ್ಲಿ, ಅತ್ಯಾಚಾರಕ್ಕೊಳಗಾಗಿಯೂ ಮಾನ ಮರ್ಯಾದೆಗೆ ಅಂಜಿ ಬಾಯಿ ಮುಚ್ಚಿ ಕೂರುತ್ತಾರೋ ಅದೆಲ್ಲ ಭಾರತ’’ ಎಂದು ವ್ಯಾಖ್ಯಾನಿಸಿದ ಭಾಗವತ್ ಟಪ್ಪ್ ಎಂದು ಬಾಗಿಲು ಹಾಕಿದರು.
ಕಾಸಿ ಮತ್ತೆ ಬಾಗಿಲು ತಟ್ಟಿದ. ಭಾಗವತ್ ತನ್ನ ಲಾಠಿಯೊಂದಿಗೆ ಬಾಗಿಲು ತೆರೆದರು. ಲಾಠಿ ನೋಡಿದ್ದೆ ಕಾಸಿ ಸಣ್ಣಗೆ ಕಂಪಿಸಿದ. ಅದರೂ ಧೈರ್ಯವನ್ನು ಒಟ್ಟು ಸೇರಿಸಿ ಕೇಳಿದ ‘‘ಸಾರ್...ಭಾರತ ಇಂಡಿಯಾ ಆಗುವ ಮೊದಲು ಇಲ್ಲಿ ಅತ್ಯಾಚಾರ ನಡೆಯುತ್ತಲೇ ಇರಲಿಲ್ಲವೆ ಸಾರ್?’’
‘‘ಇಲ್ಲ ಇಲ್ಲ ಇಲ್ಲ...ಮೊಗಲರು, ಬ್ರಿಟಿಷರ ಸಂಸ್ಕೃತಿಯಿಂದಾಗಿ ಭಾರತದಲ್ಲಿ ಅತ್ಯಾಚಾರ ಜಾರಿಗೆ ಬಂತು....’’ ಭಾಗವತ್ ಮೀಸೆಯ ಮೇಲೆ ಕೈ ಹಾಕಿ ನುಡಿದರು.
‘‘ದೇವದಾಸಿ ಪದ್ಧತಿ ಅಂತಾ ಇತ್ತಲ್ಲ ಸಾರ್...ಅದು ಭಾರತದಲ್ಲಿದ್ದದ್ದೋ ಇಂಡಿಯಾದಲ್ಲೋ....’’ ಕಾಸಿ ಮೆಲ್ಲಗೆ ಕೇಳಿದ.
ಭಾಗವತ್ ಕನಲಿ ಕೆಂಡವಾದರು ‘‘ದೇವದಾಸಿ ಪದ್ಧತಿ ಭಾರತದ ಸಂಸ್ಕೃತಿಯಾಗಿತ್ತು. ಹಿಂದೆ ದೇವದಾಸಿ ಪದ್ಧತಿಯಂತಹ ಹತ್ತು ಹಲವು ಸಂಸ್ಕೃತಿಗಳಿದ್ದುದರಿಂದ ಅತ್ಯಾಚಾರ ಕಡಿಮೆಯಾಗಿತ್ತು....ಈಗಲೂ ಭಾರತೀಯ ಸಂಸ್ಕೃತಿಯುಳ್ಳ ಹಳ್ಳಿಗಳಲ್ಲಿ ಅತ್ಯಾಚಾರದ ಸುದ್ದಿ ಕೇಳುತ್ತದೆಯೆ? ಭಾರತದಲ್ಲಿ ಅತ್ಯಾಚಾರ ಆಗಲು ಸಾಧ್ಯವಿಲ್ಲ...’’
‘‘ಹಳ್ಳಿಯಲ್ಲಿ ಈಗಲೂ ಜಮೀನ್ದಾರರು, ಶ್ರೀಮಂತರು, ಕೆಳ ಜಾತಿಯ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದಾರಲ್ಲ ಸಾರ್?’’ ಕಾಸಿ ಅರ್ಥವಾಗದೆ ಕೇಳಿದ.
‘‘ನೋಡ್ರಿ...ಅದನ್ನು ಅತ್ಯಾಚಾರ ಎಂದು ಕರೆಯಬಾರದು. ಹೆಣ್ಣು ಮಕ್ಕಳು ಹಾಗೆಲ್ಲ ಮಾತನಾಡುವುದೇ ಭಾರತೀಯ ಸಂಸ್ಕೃತಿಗೆ ವಿರುದ್ಧ. ಹಳ್ಳಿಯಲ್ಲಿ ಅತ್ಯಾಚಾರ ನಡೆದರೂ ಅದು ಈ ರೀತಿ ಸುದ್ದಿಯಾಗುವುದಿಲ್ಲ. ಯಾಕೆ ಗೊತ್ತಾ? ಭಾರತೀಯ ಹೆಣ್ಣು ಮಕ್ಕಳಿಗೆ ಮಾನವೇ ಪ್ರಾಣ. ಮೇಲ್ವರ್ಣೀಯರು ಅತ್ಯಾಚಾರ ಮಾಡಲು ಮುಂದಾದಾಗ ಅದನ್ನು ಒಪ್ಪಿಕೊಳ್ಳುವುದು ಭಾರತದ ಧರ್ಮ. ಸಂಸ್ಕೃತಿ. ಇಂಡಿಯಾದಲ್ಲಿ ಮಾತ್ರ ಒಂದು ಅತ್ಯಾಚಾರವಾದಾಕ್ಷಣ ಬೊಬ್ಬೆ ಹೊಡೆಯುತ್ತಾರೆ. ಎಷ್ಟೊಂದು ಕ್ಯಾಂಡಲ್‌ಗಳು ವೇಸ್ಟ್ ಆದವು. ಆ ಕ್ಯಾಂಡಲ್‌ಗಳನ್ನು ಬಳಸಿಕೊಂಡು ಅದೆಷ್ಟೋ ಮುಸಲರ ಮನೆಗಳಿಗೆ ಬೆಂಕಿಕೊಡಲು ಉಪಯೋಗಿಸಬಹುದಿತ್ತು...’’
‘‘ಸಾರ್...ಸತಿಪದ್ಧತಿ ಭಾರತದಲ್ಲಿತ್ತೋ ಇಂಡಿಯಾದಲ್ಲಿತ್ತೋ?’’ ಕಾಸಿ ಭಾಗವತರ ಚೆಡ್ಡಿ ಎಳೆಯಲು ಯತ್ನಿಸಿದ.
‘‘ಎಂಥಾ ಮಾತೂಂತ ಆಡ್ತೀರ್ರಿ....ಮುಸಲರು ಅತ್ಯಾಚಾರ ಮಾಡಿದರೂಂತ ಅವರು ಬೆಂಕಿಗೆ ಹಾರ್ತಾ ಇದ್ದರು...ಗಂಡ ಸತ್ತ ಮೇಲೆ ಹೆಂಡತಿ ಒಬ್ಬಳೇ ಉಳಿದರೆ ಅವಳನ್ನು ಮುಸಲರು, ಬ್ರಿಟಿಷರು ಬಿಡ್ತಿದ್ದರೇನ್ರಿ...ಅದಕ್ಕೆ ಬೆಂಕಿಗೆ ಹಾರಿ ಸಾಯ್ತ ಇದ್ದರು. ಇದು ಭಾರತೀಯ ಸಂಸ್ಕೃತಿ. ಇಂದು ಗಂಡ ಸತ್ತರೆ ಬೆಂಕಿಗೆ ಹಾರುವ ಹೆಣ್ಣು ಮಕ್ಕಳೇ ಇಲ್ಲ...ಆದುದರಿಂದಲೇ ಈ ಅತ್ಯಾಚಾರಗಳು ಹೆಚ್ಚುತ್ತಿವೆ. ಭಾರತೀಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿದ್ದರೆ ಈ ಅತ್ಯಾಚಾರ ನಡೆಯುತ್ತಲೇ ಇರಲಿಲ್ಲ...’’
‘‘ಗುಜರಾತ್ ಭಾರತದಲ್ಲಿದೆಯೋ ಇಂಡಿಯಾದಲ್ಲಿದೆಯೋ?’’ ಕಾಸಿ ಮತ್ತೊಂದು ಪ್ರಶ್ನೆ ಒಗೆದ.
‘‘ಗುಜರಾತ್ ಅಪ್ಪಟ ಭಾರತದಲ್ಲಿದೆ’’
‘‘ಆದ್ರೆ...ಅಲ್ಲಿ ಮುಸಲರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಯಿತಲ್ಲ....?’’
‘‘ಅದು ಅತ್ಯಾಚಾರವಲ್ಲ ಕಣ್ರೀ...ಭಾರತದ ದಿಗ್ವಿಜಯ...ನಮ್ಮ ಆತ್ಮಾಭಿಮಾನದ ಸಂಕೇತ....’’ ಭಾಗವತರು ತನ್ನ ಕೈಯಲ್ಲಿದ್ದ ಲಾಠಿಯನ್ನೊಮ್ಮೆ ತಿರುಗಿಸಿದರು.
‘‘ಸಾರ್...ಇಂಡಿಯಾವನ್ನು ಮತ್ತೆ ಭಾರತವನ್ನಾಗಿಸುವುದು ಹೇಗೆ ಸಾರ್?’’ ಕಾಸಿ ಕೇಳಿದ.
‘‘ಬಹಳ ಸುಲಭ. ಮೊದಲು ಮನು ಸಂವಿಧಾನ ಜಾರಿಗೆ ಬರಬೇಕು. ಸತಿ ಪದ್ಧತಿ, ದೇವದಾಸಿ ಪದ್ಧತಿ, ಅನುಷ್ಠಾನಕ್ಕೆ ತರಬೇಕು. ಈ ಮೂಲಕ ಅತ್ಯಾಚಾರವನ್ನು ತಪ್ಪಿಸಬಹುದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅದೆಷ್ಟೋ ಅತ್ಯಾಚಾರಗಳು ನಡೆಯುತ್ತಿದ್ದರೂ ಅದು ಮಾಧ್ಯಮಗಳಲ್ಲಿ ಸುದ್ದಿಯಾಗೂದಿಲ್ಲ. ಅದನ್ನು ಅತ್ಯಾಚಾರಕ್ಕೊಳಗಾದ ನಗರ ಪ್ರದೇಶದ ಹೆಣ್ಣುಮಕ್ಕಳೂ ಪಾಲಿಸಬೇಕು. ಅತ್ಯಾಚಾರಕ್ಕೊಳಗಾದ ಹೆಣ್ಣು ಮಕ್ಕಳು ಯಾವಕಾರಣಕ್ಕೂ ಪೊಲೀಸ್ ಕೇಸು ದಾಖಲಿಸಕೂಡದು. ಹೆಣ್ಣು ಮಕ್ಕಳು ಇಂಗ್ಲಿಷ್ ಕಲಿಯಬಾರದು...ಬರೇ ಸಂಸ್ಕೃತ ಮಾತ್ರ ಕಲಿಯಬೇಕು...ಆಗ ಅತ್ಯಾಚಾರದ ಸಂಖ್ಯೆ ಕಡಿಮೆಯಾಗುತ್ತದೆ...ಮಾತು ಮಾತಿಗೆ ರೇಪ್ ರೇಪ್ ಎಂದು ಬೊಬ್ಬಿಟ್ಟು ಭಾರತವನ್ನು ಇಂಡಿಯಾ ಮಾಡಬಾರದು....’’
‘‘ರೇಪ್‌ನ್ನು ಮತ್ತೆ ಹೇಗೆ ಕರೆಯಬೇಕು ಸಾರ್....?’’
ಭಾಗವತ್ ಈಗ ಹಸನ್ಮುಖರಾದರು ‘‘ನೋಡ್ರಿ...ರೇಪ್ ಮಾಡಿದವರು ಮೇಲ್ವರ್ಣೀಯರು, ರೇಪ್‌ಗೊಳಗಾದವರು ಕೆಳವರ್ಣದ ಜನರಾದರೆ ಅದನ್ನು ರೇಪ್ ಎಂದು ಭಾರತದಲ್ಲಿ ಕರೆಯುವುದಿಲ್ಲ. ಯಾಕೆಂದರೆ ಕೆಳಜಾತಿಯನ್ನು ಅನುಭವಿಸುವುದು ಮೇಲ್ಜಾತಿಯವರ ಹಕ್ಕು ಎಂದು ಮನು ಹೇಳಿದ್ದಾನೆ. ಅದರ ವಿರುದ್ಧ ಧ್ವನಿಯೆತ್ತುವುದೆಂದರೆ ಭಾರತೀಯ ಸಂಸ್ಕೃತಿಯ ವಿರುದ್ಧ ಧ್ವನಿಯೆತ್ತುವುದು ಎಂದು ಅರ್ಥ. ಹಾಗೆಯೇ ಮುಸಲರ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾದರೆ ಅದನ್ನು ಭಾರತೀಯರ ಆತ್ಮಾಭಿಮಾನದ ಸಂಕೇತವಾಗಿ ಪರಿಗಣಿಸಲಾಗುವುದು....ಅತ್ಯಾಚಾರಕ್ಕೊಳಗಾದ ಯಾವುದೇ ಹೆಣ್ಣುಮಕ್ಕಳು ಅದನ್ನು ಬಹಿರಂಗಪಡಿಸುವುದನ್ನು ಭಾರತದಲ್ಲಿ ನಿಷೇಧಿಸಲಾಗಿದೆ....ಅವರು ಬೆಂಕಿಯ ಕುಂಡಕ್ಕೆ ಹಾಕಿ ತಮ್ಮ ಮಾನವನ್ನು, ಪಾತಿವ್ರತ್ಯವನ್ನು ಪರೀಕ್ಷೆ ಮಾಡಬಹುದು....ಹಾಗೆಯೇ ಭಾರತದ ಎಲ್ಲ ಮನೆಗಳ ಅಂಗಳದಲ್ಲಿ ಆರೆಸ್ಸೆಸ್‌ನ ಪರವಾಗಿ ಒಂದು ಗೆರೆಯನ್ನು ಎಳೆಯಲಾಗುವುದು...’’
‘‘ಯಾಕೆ ಸಾರ್? ಹೆಣ್ಣು ಮಕ್ಕಳು ಕುಂಟೆ ಬಿಲ್ಲೆ ಆಡುವುದಕ್ಕಾ??’’
‘‘ಅದು ಲಕ್ಷ್ಣಣ ರೇಖೆ ಕಣ್ರೀ. ರಾಮಾಯಣದಲ್ಲಿ ಸೀತೆಗೆ ಲಕ್ಷಣ ಎಳೆದ ರೇಖೆಯನ್ನು ಎಲ್ಲರ ಮನೆಯ ಅಂಗಳದಲ್ಲಿ ಎಳೆಯಲಾಗುವುದು. ಅದನ್ನು ದಾಟಿ ಹೊರಗೆ ಬಂದರೆ, ಆಕೆಗೆ ಯಾವುದೇ ಅನ್ಯಾಯವಾದರೂ ಅವಳೇ ಹೊಣೆಯಾಗುತ್ತಾಳೆ. ಲಕ್ಷ್ಮಣ ರೇಖೆ ದಾಟಿದೆ ಸೀತೆಗೆ ಏನೆಲ್ಲ ಗತಿಯಾಯಿತೋ, ಅದನ್ನು ಅನುಭವಿಸಲು ಭಾರತದ ಮಹಿಳೆಯರು ಸಿದ್ಧರಾಗಬೇಕು...ಯಾರಿಗಾದರೂ ಭಿಕ್ಷೆ ಕೊಡುವುದಿದ್ದರೂ ಆ ಮೂರು ಗೆರೆಯ ಒಳಗೆ ನಿಂತು ಭಿಕ್ಷೆ ಕೊಡಬೇಕು...’’
‘‘ಯಾರಾದರೂ ಮನೆಯೊಳಗೇ ಬಂದು ಅತ್ಯಾಚಾರ ಮಾಡಿದರೆ?’’ ಕಾಸಿ ಕೇಳಿದ.
‘‘ಸೀತೆ ಮಾಡಿದ ಹಾಗೆ ಬೆಂಕಿ ಕುಂಡಕ್ಕೆ ಹಾರಿ ಎಲ್ಲ ಹೆಣ್ಣು ಮಕ್ಕಳು ತಮ್ಮ ಪಾತಿವ್ರತ್ಯವನ್ನು ಸಾಬೀತು ಪಡಿಸಬೇಕು....’’
‘‘ಸಾರ್, ನಿಮ್ಮ ಭಾರತದಲ್ಲಿ ಸಾಮೂಹಿಕವಾಗಿ ಬಸ್‌ನಲ್ಲಿ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಏನು ಶಿಕ್ಷೆ ಸಾರ್?’’
 ‘‘ಭಾರತೀಯ ಸಂಸ್ಕೃತಿಯನ್ನು ಉಲ್ಲಂಘಿಸಿದ ಮಹಿಳೆಯರಿಗೆ ಪಾಠ ಕಲಿಸಿದ್ದಕ್ಕಾಗಿ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ...’’ ಎಂದದ್ದೇ ಪತ್ರಕರ್ತ ಎಂಜಲು ಕಾಸಿ, ಬದುಕಿದೆಯಾ ಬಡ ಜೀವ ಎಂದು ಭಾರತದಿಂದ ಇಂಡಿಯಾದ ಕಡೆಗೆ ಓಡತೊಡಗಿದ.