Tuesday, March 31, 2015

ಪೂಜೆಯಿಂದ ಅಸ್ಸಾಂನಲ್ಲಿ ರಕ್ತದ ಮಳೆಯಾಗಿದೆ...!

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ, ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಮಳೆಗಾಗಿ ಪೂಜೆ ಮಾಡಲು ಸರಕಾರದಿಂದ ದೇವಸ್ಥಾನಗಳಿಗೆ ಅನುದಾನ ಬಿಡುಗಡೆ ಮಾಡಿದರು. ಈ ಹಿನ್ನೆಲೆಯಲ್ಲಿ ರವಿವಾರ -ಜುಲೈ -29-2012 ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ 

ಮುಜರಾಯಿ ಇಲಾಖೆಯ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು ಕೊಡೆ ಹಿಡಿದುಕೊಂಡು ಉಡುಪಿಯಲ್ಲಿ ಓಡಾಡುತ್ತಿದ್ದರು. ಬಹುಶಃ ಬಿಸಿಲಿಗಾಗಿ ಕೊಡೆ ಹಿಡಿದಿರಬಹುದು ಎಂದು ಎಲ್ಲರೂ ಭಾವಿಸಿದ್ದರು. ಪತ್ರಕರ್ತ ಎಂಜಲು ಕಾಸಿ ಮೆಲ್ಲಗೆ ಆ ಕೊಡೆಯಲ್ಲಿ ಸೇರಿಕೊಂಡ ‘‘ಸಾರ್ ನಾನು ಸಾರ್...ಪತ್ರಕರ್ತ ಎಂಜಲು ಕಾಸಿ...ತುಂಬಾ ಬಿಸಿಲಲ್ವಾ ಸಾರ್...’’
ಖೋಟಾ ಶ್ರೀನಿವಾಸ ಪೂಜಾರಿಯವರು ಸಿಟ್ಟಾದರು ‘‘ಎಂತ ಬಿಸಿಲು ನಿಮ್ಮ ಕರ್ಮ. ಇದು ಬಿಸಿಲ, ಮಳೆಯಲ್ಲವಾ? ಮಳೆಗಾಗಿ ಕೋಟ್ಯಂತರ ಖರ್ಚು ಮಾಡಿ ಪೂಜೆ ಮಾಡಿದ್ದೇವೆ. ಹೊರಗಡೆ ಧಾರಾಕಾರ ಮಳೆ ಸುರೀತಾ ಉಂಟು... ನೀವು ಬಿಸಿಲು ಎಂದು ಹೇಳುತ್ತೀರಾಲ್ಲ...ಮಂಡೆ ಸರಿ ಇಲ್ವಾ....’’ ಒದ್ದೆ ಹಣೆಯನ್ನು ಒರೆಸಿಕೊಂಡರು. ಹನಿಗಳು ಪಟಪಟನೆ ತೊಟ್ಟಿಕ್ಕಿತು. ಅವರ ಅಂಗಿ, ಲುಂಗಿ ಕೂಡ ಒದ್ದೆಯಾಗಿತ್ತು.
‘‘ಸಾರ್ ಅದು ಮಳೆಹನಿಯಲ್ಲ, ಬೆವರ ಹನಿ ಸಾರ್...’’ ಕಾಸಿ ಗೊಂದಲದಲ್ಲಿ ಹೇಳಿದ.
‘‘ಎಂತ ಮಾರ್ರೆ...ಬಿಜೆಪಿ ಸರಕಾರವನ್ನು ಹೀಗೂ ಟೀಕಿಸುವುದಾ...ಪೂಜಾರಿಗಳು ಮಳೆ ಬರುತ್ತದೆ ಎಂದ ಮೇಲೆ ಮುಗಿಯಿತು...’’ ಖೋಟಾ ನುಡಿದರು.
‘‘ಯಾವ ಪೂಜಾರಿ ಸಾರ್? ಜನಾರ್ದನ ಪೂಜಾರಿಯ?’’ ಕಾಸಿ ಕೇಳಿದ.
‘‘ನಿಮಗೆಂತ ತಲೆಕೆಟ್ಟಿದೆಯಾ? ಅವರು ಬರೇ ಬಿಲ್ಲವರಿಗೆ ಮಾತ್ರ ಪೂಜಾರಿ. ನಾನು ದೇವಸ್ಥಾನದ ಪೂಜಾರಿಗಳ ವಿಷಯ ಹೇಳಿದ್ದು. ಅವರಿಗೆ ದುಡ್ಡಿನ ಮಳೆ ಸುರಿದಿದ್ದೇವೆ. ಅದಕ್ಕಾಗಿ ಪೂಜೆ ಮಾಡಿದ್ದಾರೆ. ಆದುದರಿಂದ ಮಳೆ ಬರಲೇ ಬೇಕು. ಅದಕ್ಕಾಗಿಯೇ ಅಲ್ಲವಾ ನಾನು ಕೊಡೆ ಹಿಡಿದು ತಿರುಗಾಡುತ್ತಿರುವುದು...ಸರಕಾರಿ ಪೂಜೆಗಾಗಿ ಮಾತ್ರ ಹಣಕೊಟ್ಟದ್ದಲ್ಲ...ಜೋರಾಗಿ ಮಳೆ ಬರುತ್ತದಲ್ಲ...ಅದಕ್ಕಾಗಿ ಕೊಡೆಯನ್ನು ಕೂಡ ಇಡೀ ರಾಜ್ಯದ ಪೂಜಾರಿಗಳಿಗೆ ವಿತರಣೆ ಮಾಡಿದ್ದೇನೆ....’’
‘‘ಸಾರ್ ನೀವು ಪೂಜಾರಿಗಳು ಅನ್ನುವಾಗ ಸ್ವಲ್ಪ ಗೊಂದಲ...ನೀವು ಕೂಡ ಪೂಜಾರಿ ಅಲ್ಲವಾ...’’ ಕಾಸಿ ಹಲ್ಲು ಕಿರಿದ.
‘‘ನಿಮ್ಮ ತಲೆ...ನಾನು ಹೇಳುವುದು ಕೃಷ್ಣ ಮಠದ ಪೂಜಾರಿಗಳ ಬಗ್ಗೆ....ಅವರ ದೇವಸ್ಥಾನದ ಪೂಜಾರಿಗಳು. ನಾವು ಬರೇ ಖಾಲಿ ಪೂಜಾರಿಗಳು...ಬರೇ ಪೂಜಾರಿಗಳಿಗೆ ಮಾತ್ರ ಕೊಡೆ ಕೊಡುವುದಕ್ಕೆ ನಾನೇನು ಜಾತೀವಾದಿಯಲ್ಲ...’’
‘‘ಸಾರ್ ಕೊಡೆ ಮಡಚಿ ಸಾರ್. ಮಳೆಯಲ್ಲೇ ನೆಂದು ಹೋಗುವ...’’ ಕಾಸಿ ಸಲಹೆ ನೀಡಿದ.
‘‘ಹೌದಲ್ಲ...ಮಳೆಯಲ್ಲಿ ನೆನೆದುಕೊಂಡು ಹೋಗುವುದಕ್ಕೆ ತುಂಬಾ ಕುಸಿಯಾಗುತ್ತದೆ’’ ಎನ್ನುತ್ತಾ ಕೊಡೆ ಮಡಚುವುದಕ್ಕೆ ಮುಂದಾದರು. ಆದರೆ ಅಷ್ಟರಲ್ಲಿ ಬಿಸಿಲ ಝಳ ಅವರ ನೆತ್ತಿಯ ಮೇಲೆ ಹೊಡೆಯಿತು ‘‘ಓಹ್ ಮಳೆ ಭಾರೀ ಜೋರುಂಟು ಮಾರ್ರೆ...ಒಟ್ಟಿನಲ್ಲಿ ನಮ್ಮ ಮುಜರಾಯಿ ಇಲಾಖೆ ಹಣ ಬಿಡುಗಡೆ ಮಾಡಿದ್ದರಿಂದ ಇದೊಂದು ಒಳ್ಳೆದಾಯಿತು ನೋಡಿ....’’
‘‘ಸಾರ್...ಹಾಗಾದರೆ ಮೋಡ ಬಿತ್ತನೆಗೂ ಈ ಮಳೆ ಪೂಜೆಗೂ ಏನು ವ್ಯತ್ಯಾಸ?’’ ಕಾಸಿ ಕೇಳಿದ.
‘‘ಯತ್ಯಾಸ ಎಂತದು ಮಣ್ಣು...ಅದರಲ್ಲಿ ವಿಜ್ಞಾನಿಗಳಿಗೆ ಹಣ ಹೋಗ್ತದೆ...ಇದರಲ್ಲಿ ಪಾಪ ಪೂಜಾರಿಗಳಿಗೆ ಅಂದರೆ ದೇವಸ್ತಾನದ ಪೂಜಾರಿಗಳಿಗೆ ಹೋಗ್ತದೆ. ಅಷ್ಟೇ ವ್ಯತ್ಯಾಸ. .’’
‘‘ಸಾರ್...ಮಳೆಗಾಗಿ ಸರಕಾರಿ ಪೂಜೆ ಮಾಡಿದ ಎಲ್ಲ ಪೂಜಾರಿಗಳು ತಮ್ಮನ್ನು ಸರಕಾರಿ ನೌಕರರೆಂದು ಗುರುತಿಸಬೇಕು ಎಂದು ಕೇಳುತ್ತಿದ್ದಾರಂತೆ ಹೌದಾ?’’ ಕಾಸಿ ಚುಚ್ಚಿದ.
‘‘ಕೇಳಿದರೆ ಕೇಳಲಿ ಮಾರಾಯರೆ...ನಿಮ್ಮದೇನು ಗಂಟು ಹೋಯಿತು? ಪೂಜೆಯೂ ಸರಕಾರಿ ಕೆಲಸವೇ ಅಲ್ಲವಾ....ಸರಕಾರಿ ಕೆಲಸ ದೇವರ ಕೆಲಸ ಅಂದ ಮೇಲೆ ದೇವರ ಕೆಲಸ ಸರಕಾರಿ ಕೆಲಸ ಅಲ್ಲವಾ? ಆದುದರಿಂದ ಇನ್ನು ಮುಂದೆ ನಾವು ದೇವಸ್ಥಾನದ ಎಲ್ಲ ಪೂಜಾರಿಗಳನ್ನು ಸರಕಾರಿ ನೌಕರರೆಂದು ನೇಮಕ ಮಾಡುತ್ತೇವೆ...ಅವರ ಕೆಲಸವನ್ನು ಶೀಘ್ರದಲ್ಲೇ ಖಾಯಂ ಮಾಡುವ ಉದ್ದೇಶ ಉಂಟು...’’
‘‘ಸಾರ್...ಹಾಲಾಡಿ...ಶ್ರೀನಿವಾಸ ಶೆಟ್ಟಿ....’’ ಎಂದು ಕಾಸಿ ಬಾಯಿತೆರೆದದ್ದೇ ಖೋಟಾ ಶ್ರೀನಿವಾಸರು ಸಿಟ್ಟಾದರು ‘‘ಅವರು ಹಾಲಾಡಿಯಲ್ಲ, ನನ್ನ ಪಾಲಿಗೆ ಹಾಳಾಡಿ...ಅವರ ವಿಷಯ ಯಾಕೆ ಈಗ?’’
‘‘ಅವರು ಕುಂದಾಪುರದ ವಾಜಪೇಯಿಯಂತೆ ಹೌದಾ?’’
‘‘ಅದಕ್ಕೆ ನಾನೇನು ಮಾಡುವುದು? ಬೇಕಾದರೆ ಅವರನ್ನು ಪ್ರಧಾನಮಂತ್ರಿ ಮಾಡಲಿ. ನಾನೇನು ಬೇಡ ಅನ್ನುತ್ತೇನಾ? ಸಚಿವ ಸ್ಥಾನ ಸಿಗಲಿಲ್ಲ ಅಂತ ಅವರು ನನ್ನ ಮೇಲೆ ಕಾರ್ಗಿಲ್ ಯುದ್ಧ ಮಾಡುವುದು ಸರಿಯ?’’
‘‘ಸಚಿವ ಸ್ಥಾನ ಸಿಗಬೇಕಾದರೆ ಪ್ರಭಾಕರ ಭಟ್ಟರ ಕಾಲು ಹಿಡಿಯುವುದು ಅನಿವಾರ್ಯವಂತೆ...ನೀವೇನಾದರೂ ಹಿಡಿದಿದ್ದೀರಾ...?’’ ಕಾಸಿ ಮೆಲ್ಲಗೆ ಬುದ್ಧಿ ತೋರಿಸಿದ.
‘‘ನನಗೆ ಸಿಟ್ಟು ಬರುತ್ತದೆ...ಭಟ್ಟರ ಕಾಲು ಹಿಡಿದರೆ ಅದರಲ್ಲಿ ನಮಗೆ ಪುಣ್ಯ ಉಂಟು ಗೊತ್ತುಂಟ. ಒಂದು ವೇಳೆ ನಾವು ಕಾಲು ಮುಟ್ಟಲು ಹಿಂದೇಟು ಹಾಕಿದರೆ ಅದು ಅಸ್ಪಶತೆ ಆಗುವುದಿಲ್ಲವಾ...ಭಟ್ಟರು ಅಂತ ನಾವು ಕಾಲು ಮುಟ್ಟದೆ ಭೇದಭಾವ ತೋರಿಸುವುದಕ್ಕಾಗುತ್ತದ? ಅದು ಜಾತೀಯವಾದವಲ್ಲವ?’’
‘‘ನಿಮ್ಮ ಮುಂದಿನ ಕಾರ್ಯಕ್ರಮಗಳು ಏನೇನು ಎನ್ನುವುದನ್ನು ಹೇಳುತ್ತೀರಾ....’’
‘‘ಕಾರ್ಯಕ್ರಮ ತುಂಬಾ ಉಂಟು ಮಾರೆಯರೆ...ಆದರೆ ದೊಡ್ಡ ತಲೆಬಿಸಿಯೆಂದರೆ ಸರಕಾರ ಎಷ್ಟರವರೆಗೆ ಉಳಿಯುತ್ತದೆ ಎಂದು ಗೊತ್ತಿಲ್ಲ...ತುಂಬಾ ಪೂಜೆ ಕಾರ್ಯಕ್ರಮ ಮಾಡ್ಲಿಕ್ಕೆ ಉಂಟು. ಮುಖ್ಯವಾಗಿ ನಮ್ಮ ಸರಕಾರಕ್ಕೆ ಯಾರೋ ಮಾಟ ಮಾಡಿದ್ದಾರೆ. ಅದಕ್ಕಾಗಿ ಎಲ್ಲ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಒಂದು ಆದೇಶ ಹೊರಡಿಸುತ್ತೇನೆ...ಆಮೇಲೆ, ಹಾಲಾಡಿಯವರು ಪಕ್ಷದಲ್ಲೇ ಉಳಿದು, ಪ್ರಭಾಕರ ಭಟ್ಟರತ್ರ ಕ್ಷಮೆಯಾಚಿಸಬೇಕು ಎಂದು ಎಲ್ಲ ದೇವಾಸ್ಥಾನಗಳಲ್ಲಿ ಪೂಜೆ ಮಾಡಿಸುವುದಕ್ಕೆ ಈಗಾಗಲೇ ಆದೇಶ ಹೊರಡಿಸಿದ್ದೇನೆ. ಅದು ಸ್ವಲ್ಪ ಮಟ್ಟಿಗೆ ಪ್ರಯೋಜನಕ್ಕೆ ಬಂದಿದೆ...ಈಗ ಮೊದಲಿನ ಹಾಗೆ ಅವರು ಮಂಡೆಬೆಚ್ಚದಿಂದ ಮಾತನಾಡುವುದಿಲ್ಲ...ರೈತರ ಆತ್ಮಹತ್ಯೆ ತಡೆಯುವುದಕ್ಕೆ, ರಾಜ್ಯದಲ್ಲಿ ಬಡತನ ನಿವಾರಣೆ ಮಾಡುವುದಕ್ಕೆ ಪೂಜೆ ಮಾಡುವ ಕಾರ್ಯಕ್ರಮ ಉಂಟು. ಅದಕ್ಕಾಗಿ ಎಲ್ಲ ದೇವಸ್ಥಾನಗಳಿಗೆ ಕೆಲವು ಕೋಟಿ ಬಿಡುಗಡೆ ಮಾಡಬೇಕೂಂತ ಉಂಟು...’’
‘‘ಬಿಜೆಪಿಯ ವರಿಷ್ಠರಿಗೆ, ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸಬಹುದಲ್ಲ ಸಾರ್?’’
‘‘ಮೊದಲು ಪತ್ರಕರ್ತರ ಮಂಡೆ ಸರಿಯಾಗಲಿ ಅಂತ ಪೂಜೆ ಮಾಡಿಸ್ಲಿಕ್ಕೆ ಉಂಟು. ಬಳಿಕ ನಮ್ಮ ನಾಯಕರಿಗೆ ಬುದ್ಧಿ ಕೊಡ್ಲಿಕ್ಕೆ ಪೂಜೆ ಮಾಡಿಸ್ತೇನೆ...ಆಗಬಹುದಾ...?’’ ಎಂದು ಒಮ್ಮೆಲೆ ಖೋಟಾ ಸಚಿವರು ಸಿಟ್ಟಾಗಿ ತನ್ನ ಕೊಡೆಯನ್ನು ಮಡಿಚಿದರು.
ಅಷ್ಟರಲ್ಲಿ ಯಾರದೋ ಫೋನ್ ಬಂತು. ಅದರಲ್ಲಿ ಮಾತನಾಡಿದ್ದೆ ಪೂಜಾರಿಯವರು ಖುಷಿಯಾದರು ‘‘ನೋಡ್ರಿ ಕಾಶಿಯವರೆ...ಮಳೆಯಾಗಿದೆ...ನಮ್ಮ ಪೂಜೆಯಿಂದ ಈಶಾನ್ಯ ಭಾರತದ ಅಸ್ಸಾಂನಲ್ಲಿ ಭಾರೀ ರಕ್ತದ ಮಳೆಯಾಗಿದೆ...ಇನ್ನೇನು ಅದು ಕರ್ನಾಟಕಕ್ಕೆ ಬರುವ ಸಾಧ್ಯತೆ ಇದೆಯಂತೆ...’’
ಆ ಗುಡುಗಿಗೆ ಪತ್ರಕರ್ತ ಕಾಸಿ ನಿಂತಲ್ಲೇ ಸಣ್ಣಗೆ ನಡುಗಿದ.
ರವಿವಾರ - ಜುಲೈ -29-2012

Monday, March 30, 2015

ನರಕದಲ್ಲೊಂದು ಸ್ವಚ್ಛತಾ ಆಂದೋಲನ!

ನರೇಂದ್ರ ಮೋದಿ ಸ್ವಚ್ಚತಾ ಆಂದೋಲನಕ್ಕೆ ಇಳಿದ ಸಂದರ್ಭದಲ್ಲಿ ಶನಿವಾರ - ಅಕ್ಟೋಬರ್ -18-2014ರಂದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ 

ನರೇಂದ್ರ ಮೋದಿ, ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್, ಶಶಿ ತರೂರ್, ಸಾನಿಯಾ ಮಿರ್ಝಾ ಎಲ್ಲರೂ ಬೀದಿಗಿಳಿದು ಕಸ ಗುಡಿಸುತ್ತಿರುವುದನ್ನು ಮೇಲಿನಿಂದ ನೋಡಿದ ಮಹಾತ್ಮಾ ಗಾಂಧೀಜಿಗೆ ಫುಲ್ ಕಂಫ್ಯೂಶನ್. ಎಲ್ಲರೂ ತನ್ನ ಭಾವಚಿತ್ರದ ಜೊತೆಗೆ ಪೊರಕೆ ಹಿಡಿದುಕೊಂಡಿದ್ದಾರಲ್ಲ ಎಂದುಕೊಂಡು ಭಯಭೀತರಾದರು. ಸಾರ್ವಜನಿಕವಾಗಿ ನನಗೆ ಪೊರಕೆ ಸೇವೆ ಮಾಡುವ ಉದ್ದೇಶವೇನಾದರೂ ಇದೆಯಾ...ಎಂದು ಸ್ವರ್ಗಲೋಕದಿಂದ ತನ್ನ ದೂತರಿಗೆ ಕರೆ ಕಳುಹಿಸಿದರು ‘‘ಇವತ್ತಿನ ಹರಿಜನ ಸಂಚಿಕೆ ಒಂದನ್ನು ಭೂಲೋಕದಿಂದ ಹಿಡಿದುಕೊಂಡು ಬನ್ನಿ. ನಿಜವಾದ ವಿಷಯವೇನು ಎನ್ನುವುದು ನನಗೆ ತಿಳಿಯ ಬೇಕಾಗಿದೆ....’’
ದೂತ ವಿಷಾದದ ನಗೆ ನಕ್ಕು ಹೇಳಿದ ‘‘ಬಾಪೂಜಿ... ನಿಮ್ಮ ಹರಿಜನ ಪತ್ರಿಕೆ ಸ್ವಾತಂತ್ರ ಸಿಗುವ ಮೊದಲೇ ನಿಂತು ಹೋಗಿದೆ ಗೊತ್ತಿದೆಯಲ್ಲ...ಈಗ ಏನಿದ್ದರೂ ನಂ.1, ನಂ.2 ಪತ್ರಿಕೆಗಳದ್ದೇ ಕಾರುಬಾರು...ಎಲ್ಲ ಪುಕ್ಕಟೆ ಹಂಚುತ್ತಾರೆ...ನಮ್ಮ ನರಕಕ್ಕೆ ಎಲ್ಲ ದಿನ ಪತ್ರಿಕೆಗಳೂ ಪೂರೈಸಲಾಗುತ್ತದೆ. ಪುಕ್ಕಟೆಯಾಗಿ....’’
 ‘ಹೇ ರಾಮ್...’ ಎಂದು ನಿಟ್ಟುಸಿರಿಟ್ಟ ಗಾಂಧೀಜಿ ‘‘ಸರಿ...ಯಾರಿಂದಾದರೂ ಒಂದು ಪತ್ರಿಕೆ ತನ್ನಿ...’’ ಎಂದು ಹೇಳಿದರು. ದೂತ ತಕ್ಷಣವೇ ನರಕಕ್ಕೆ ಹೋಗಿ ಒಂದಿಷ್ಟು ದಿನ ಪತ್ರಿಕೆಗಳನ್ನು ತಂದ...‘‘ಯಾರೂ ಪತ್ರಿಕೆಗಳನ್ನು ಕೊಡಲು ಒಪ್ಪಲಿಲ್ಲ ಬಾಪೂಜಿ. ಆದರೆ ಗಾಂಧೀಜಿಗೆ ಎಂದು ಗೊತ್ತಾದ ಕೂಡಲೇ ನಾಥೂರಾಂ ಗೋಡ್ಸೆ ತನ್ನಲ್ಲಿದ್ದ ಪತ್ರಿಕೆಯನ್ನು ತಕ್ಷಣ ಕೊಟ್ಟ...ನರಕಕ್ಕೆ ಸಂಬಂಧಿಸಿ ಯಾವುದೇ ವರದಿಗಳನ್ನು ಅವರು ನೇರವಾಗಿ ಭೂಲೋಕದ ಪತ್ರಿಕೆಗಳಿಗೆ ತಲುಪಿಸುತ್ತಾರೆ..ಕ್ಯಾಮರಾಮ್ಯಾನ್ ಸಾವರ್ಕರ್ ಜೊತೆಗೆ ವರದಿಗಾರ ನಾಥೂರಾಂ ಗೋಡ್ಸೆ...ಎಂದು ಈಗ ದಿನಾ ಟೀವಿಯಲ್ಲಿ ಸುದ್ದಿಗಳು ಬರುತ್ತಿರುತ್ತವೆ...ಇವತ್ತು ನರಕಲೋಕವನ್ನು ಸ್ವಚ್ಛಗೊಳಿಸುವ ಕೆಲಸಕ್ಕೆ ಇಳಿದಿದ್ದಾರೆ ಸಾವರ್ಕರ್...ಗಾಂಧಿಜಯಂತಿ ದಿನ ಭೂಲೋಕದಲ್ಲಿ ನರೇಂದ್ರ ಮೋದಿಯವರು ಸ್ವಚ್ಛತಾ ಆಂದೋಲನ ಮಾಡುತ್ತಿದ್ದಾರಂತೆ...ಅದರ ಪರವಾಗಿ ನರಕಲೋಕವನ್ನು ಸ್ವಚ್ಛಗೊಳಿಸುವ ಆಂದೋಲನಕ್ಕೆ ನಾಥೂರಾಂ ಗೋಡ್ಸೆ ಮತ್ತು ಬಳಗ ಇಳಿದಿದೆ. ನೀವು ಅದರ ಉದ್ಘಾಟನೆ ಮಾಡಬೇಕು ಎಂದು ಹೇಳುತ್ತಿದ್ದಾರೆ. ಬರೇ ಫೋಟೋಕ್ಕೆ ನಾಥೂರಾಂ ಜೊತೆಗೆ ಒಂದು ಭಂಗಿಯನ್ನು ನೀಡಿದರೆ ಸಾಕಂತೆ. ಗುಡಿಸಬೇಕಾಗಿಲ್ಲ ಅಂತೆ. ಬಾಪೂಜಿ ಇದು ಒಳ್ಳೆಯ ಅವಕಾಶ. ಈಗ ಅವರದೇ ಸರಕಾರ ಇರೋದು. ಹೋಗಿ ನರಕದ ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿ ಬನ್ನಿ...’’
‘‘ಹೇ ರಾಮ್...ಮೊದಲು ನಾಥೂರಾಂ ಗೋಡ್ಸೆ ತನ್ನ ತಪ್ಪನ್ನು ಒಪ್ಪಿಕೊಳ್ಳಲಿ. ಅಂತರಂಗವನ್ನು ಶುಚಿಗೊಳಿಸಲಿ. ಅವನು ನನ್ನನ್ನು ಕೊಂದು ಹಾಕಿದ್ದಕ್ಕೆ ನನಗೆ ಬೇಸರವಿಲ್ಲ. ನನ್ನ ಆಲೋಚನೆಗಳನ್ನು ಕೊಂದು ಹಾಕಲು ಅವನಿಗೆ ಸಾಧ್ಯವಿಲ್ಲ. ನನ್ನ ಆಶ್ರಮದಲ್ಲಿ ಹಿಂಸೆಯನ್ನು ಮಾಡಿದ್ದಕ್ಕಾಗಿ ಮಾತ್ರ ನನಗೆ ದುಃಖವಿದೆ. ಆದುದರಿಂದ ಆ ಹಿಂಸೆಗಾಗಿ ಅವನು ಪಶ್ಚಾತಾಪ ಪಟ್ಟು ಮರಳಿದರೆ ನಾನು ಗೋಡ್ಸೆಯ ಜೊತೆಗೆ ಕೈ ಜೋಡಿಸಿ ನರಕದಲ್ಲಿರುವ ಬ್ರಾಹ್ಮಣರ ಅಗ್ರಹಾರವನ್ನು ಶುಚಿಗೊಳಿಸಲು ಸಿದ್ಧನಿದ್ದೇನೆ. ಭಾರತದಲ್ಲಿರುವ ದಲಿತರನ್ನು ಅತ್ಯಂತ ಹೀನಯವಾಗಿ ಶೋಷಣೆ ಮಾಡಿದವರಿಗಾಗಿ ಇರುವ ನರಕದ ಅತ್ಯಂತ ಕೊಳಚೆ ಪೀಡಿತವಾಗಿರುವ ಅಗ್ರಹಾರ ಅದು. ಮೊದಲು ಗೋಡ್ಸೆ ತನ್ನ ಮನಸ್ಸನ್ನು ಪರಿವರ್ತನೆಗೊಳಿಸಲಿ. ಅಂತರಂಗವನ್ನು ಸ್ವಚ್ಛಗೊಳಿಸಲು. ನಾವಿಬ್ಬರು ಜೊತೆಯಾಗಿ ನರ ದಲ್ಲಿರುವ ಅಗ್ರಹಾರಗಳನ್ನು ಶುಚಿಗೊಳಿಸಿ ಅದರಿಂದ ಅವರನ್ನು ಮುಕ್ತಗೊಳಿಸುವೆವು...’’
ಸ್ವರ್ಗದ ದೂತನಿಗೆ ನಗು ಬಂತು ‘‘ಬಾಪೂಜಿ. ಅವರಿಗೆ ನಿಮ್ಮ ಜೊತೆಗೆ ಒಂದು ಫೋಟೋ ಹೊಡೆಸಿಕೊಂಡು ಅದನ್ನು ಭೂಲೋಕಕ್ಕೆ ತುರ್ತಾಗಿ ಕಳುಹಿಸಬೇಕಾಗಿದೆಯಂತೆ. ಭಾರತದಲ್ಲೀಗ ನೀವು ಮತ್ತು ಗೋಡ್ಸೆ ಭಾಯಿ ಭಾಯಿ. ಎರಡು ಸಿದ್ದಾಂತಗಳ ನಡುವೆ ಒಂದು ಸೇತುವೆ ಕಟ್ಟುವ ಕೆಲಸ ನಡೆದಿದೆ...ನಿಮ್ಮ ಫೋಟೋ ಒಂದು ಇದ್ದರೆ ರಾಜಕೀಯವಾಗಿ ಅವರಿಗೆ ತುಂಬಾ ಲಾಭವಾಗುತ್ತದೆ...’’
‘‘ಹೇ ರಾಮ್...’’ ಗಾಂಧೀಜಿ ಮತ್ತೆ ನೊಂದು ಕೊಂಡರು. ‘‘ನರಕದಲ್ಲಿ ಇಷ್ಟು ಸಮಯ ನರಳಿ ದರೂ ಆತನ ಮನಸ್ಸು ಬದಲಾಗಲಿಲ್ಲ. ಬರೇ ಹಿಂಸೆಯ ಶಿಕ್ಷೆಯಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ. ಅವರನ್ನೆಲ್ಲ ನಾನು ಬದಲಾವಣೆ ಮಾಡುತ್ತೇನೆ ಎಂದು ಯಮರಾಜನ ಬಳಿ ಹೇಳಿದೆ. ಆದರೆ ಅದಕ್ಕೆ ಯಮರಾಜ ಒಪ್ಪಲಿಲ್ಲ...ಬರೇ ಅಹಿಂಸೆಯಿಂದ ಒಬ್ಬನನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಯಮರಾಜರು ತಿಳಿದಿದ್ದಾರೆ...ಇರಲಿ. ಭಾರತದಲ್ಲಿ ಅನಿಲ್ ಅಂಬಾನಿ, ಸಚಿನ್ ತೆಂಡೂಲ್ಕರ್ ಮೊದಲಾದವರೆಲ್ಲ ಬೀದಿಯಲ್ಲಿ ಏನು ಮಾಡುತ್ತಿದ್ದಾರೆ...’’ ಬಾಪೂಜಿ ಕೇಳಿದರು.
‘‘ಅವರೆಲ್ಲ ಸ್ವಚ್ಛತಾ ಆಂದೋಲನದ ಪರವಾಗಿ ಫೋಟೋಗಳಿಗೆ ಭಂಗಿ ನೀಡುತ್ತಿದ್ದಾರೆ....’’ ದೂತ ಹೇಳಿದ.
‘‘ಅಂದರೆ...ಅವರೆಲ್ಲ ರಸ್ತೆ ಗುಡಿಸುತ್ತಾರೆಯೇ... ಭಾರತವನ್ನು ಸ್ವಚ್ಛಗೊಳಿಸುತ್ತಾರೆಯೆ?’’ ಬಾಪೂಜಿ ಆಸೆಯಿಂದ ಕೇಳಿದರು.
ದೂತ ನಕ್ಕ ‘‘ಬಾಪೂಜಿ, ಅವರೆಲ್ಲ ಇಡೀ ಭಾರತದ ಸಂಪನ್ಮೂಲವನ್ನು, ಬಡವರನ್ನು ಗುಡಿಸಿ ಸ್ವಚ್ಛಗೊಳಿಸುವ ಯೋಜನೆ ಹಾಕಿದ್ದಾರೆ. ಅದಕ್ಕಾಗಿ ಕೆಲವು ಸಂಚುಗಳನ್ನು ಹಾಕಿದ್ದಾರೆ. ಅದರ ಭಾಗವಾಗಿ ಈಗ ಗುಡಿಸುವ ನಾಟಕ ಮಾಡುತ್ತಿದ್ದಾರೆ...’’
‘‘ಆದರೆ ಮೋದಿಯವರು ಒಂದು ಬೀದಿಯನ್ನು ಗುಡಿಸುವ ಹಾಗೆ ಕಾಣುತ್ತಿದೆಯಲ್ಲ...’’ ಗಾಂಧಿ ಮೇಲಿ ನಿಂದಲೇ ದಿಲ್ಲಿಯ ಒಂದು ಬೀದಿಯನ್ನು ನೋಡುತ್ತಾ ಕೇಳಿದರು.
 ‘‘ಅವರು ಗುಡಿಸುವುದಕ್ಕಾಗಿಯೇ ಅಲ್ಲಿ ವಿಶೇಷ ಕಸಗಳನ್ನು ತಂದು ಹಾಕಲಾಗಿದೆ ಬಾಪೂಜಿ. ಹಾಗೆಯೇ ಅವರಿಗಾಗಿ ವಿಶೇಷ ಕೈಗವಚ, ವಿಶೇಷ ಕಸಬರಿಕೆಗಳನ್ನು ಒದಗಿಸಲಾಗಿದೆ. ಟಿವಿಯವರಿಗಾಗಿ ಮತ್ತು ಪತ್ರಿಕೆ ಗಳಿಗಾಗಿ ಈ ವ್ಯವಸ್ಥೆ ಮಾಡಲಾಗಿದೆ...’’
 ‘‘ಆತ್ಮ ಪರಿವರ್ತನೆಯಾಗದೆ ಕೇವಲ ನಾಟಕಕ್ಕಾಗಿ ಈ ರೀತಿ ಮಾಡಿದರೆ ದೇಶ ಉದ್ಧಾರ ಸಾಧ್ಯವೆ...ಅದಿರಲಿ. ಗ್ರಾಮೀಣ ಪ್ರದೇಶದಲ್ಲಿರುವ ಭಂಗಿ ಸಮುದಾಯದ ಜನರು ಏನು ಮಾಡುತ್ತಿದ್ದಾರೆ...’’
‘‘ಅವರಿನ್ನೂ ಮಲ ಹೊರುತ್ತಲೇ ಇದ್ದಾರೆ. ರಸ್ತೆ ಗುಡಿಸುತ್ತಲೇ ಇದ್ದಾರೆ...’’ ದೂತ ಹೇಳಿದ.
‘‘ನಿಜಕ್ಕೂ ಈ ದೇಶವನ್ನು ಸ್ವಚ್ಛಗೊಳಿಸುತ್ತಿರುವವರು ಅವರಲ್ಲವೆ? ಅವರ ಚಿತ್ರಗಳನ್ನು ಯಾಕೆ ಪತ್ರಿಕೆಗಳು ಹಾಕುತ್ತಿಲ್ಲ...?’’ ಗಾಂಧೀಜಿ ಅಚ್ಚರಿಯಿಂದ ಕೇಳಿದರು.
 ‘‘ಅಯ್ಯೋ...ಇವರೆಲ್ಲ ಸೇರಿ ಅಕ್ಟೋಬರ್ 2ನ್ನು ಯಾಕೆ ಇಷ್ಟು ಕ್ರೂರವಾಗಿ ಆಚರಿಸುತ್ತಿದ್ದಾರೆ. ನನ್ನನ್ನು ಒಂದು ಬಾರಿ ಗೋಡ್ಸೆ ಕೊಂದು ಮುಗಿಸಿದ್ದಾನೆ. ಆದರೆ ಇವರೆಲ್ಲ ಮತ್ತೆ ಮತ್ತೆ ಕೊಂದು ಹಾಕಲು ಅಕ್ಟೋಬರ್ 2ನ್ನು ಬಳಸುತ್ತಿದ್ದಾರಲ್ಲ...’’ ಎಂದು ಗಾಂಧೀಜಿ ಸ್ವರ್ಗದಲ್ಲಿರುವ ತನ್ನ ಆಶ್ರಮದ ನೆಲದಲ್ಲಿ ಕುಸಿದು ಬಿದ್ದರು. ಅಷ್ಟರಲ್ಲಿ ಅವರ ಕೋಣೆಯ ಟಿವಿಯನ್ನು ದೂತ ಆನ್ ಮಾಡಿದ. ಅದರಲ್ಲಿ ಗೋಡ್ಸೆ ವರದಿಯನ್ನು ಬಿತ್ತರಿಸುತ್ತಿದ್ದ. ‘‘ಇದೀಗ ಬೆಳಗ್ಗೆ ಗಾಂಧಿಜಯಂತಿ ಕಾರ್ಯಕ್ರಮ ನರಕದಲ್ಲಿ ಯಶಸ್ವಿಯಾಗಿ ನಡೆಯಿತು. ನರಕದಲ್ಲಿರುವ ಶೋಷಿತ ಸಮುದಾಯವಾಗಿರುವ ಬ್ರಾಹ್ಮಣ ಅಗ್ರಹಾರವನ್ನು ಸ್ವಚ್ಛತಾ ಆಂದೋಲನದ ಪರವಾಗಿ ಗುಡಿಸುವ ಕಾರ್ಯಕ್ರಮ ಜರಗುತ್ತಿದೆ. ಈ ಸ್ವಚ್ಛತಾ ಆಂದೋಲನದಲ್ಲಿ ಹೆಡಗೇವಾರ್, ಗೋಲ್ವಾಲ್ಕರ್ ಅವರು ಭಾಗವಹಿಸಿದ್ದಾರೆ. ಕಾರ್ಯಕ್ರಮವನ್ನು ಮಹಾತ್ಮಗಾಂಧೀಜಿಯವರೇ ಖುದ್ದಾಗಿ ಬಂದು ಉದ್ಘಾಟಿಸುವುದರಲ್ಲಿದ್ದರು. ಆದರೆ ತುರ್ತಾಗಿ ನೆಹರೂ ಅವರ ಜೊತೆಗೆ ಮೀಟಿಂಗ್ ಇದ್ದುದರಿಂದ ಅವರು ಕಾರ್ಯಕ್ರಮದಲ್ಲಿ ಹಾಜರಾಗಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಪ್ಪಟ ಗಾಂಧೀವಾದಿಯಾಗಿರುವ ಗೋಲ್ವಾಲ್ಕರ್ ಅವರು ಸ್ವಚ್ಛತಾ ಆಂದೋಲನವನ್ನು ಉದ್ಘಾಟಿಸಿದರು. ಈ ಸ್ವಚ್ಛತಾ ಆಂದೋಲನದಲ್ಲಿ ಸಿಖ್ ಮುಖಂಡರಾಗಿರುವ ಬಿಂದ್ರನ್‌ವಾಲೆ ಕೂಡ ಭಾಗವಹಿಸಿದ್ದಾರೆ. ಹಾಗೆಯೇ ಅಂತಾರಾಷ್ಟ್ರೀಯ ಮಟ್ಟದ ಉಸಾಮಬಿನ್ ಲಾದೆನ್ ಅವರು ಕಾರ್ಯಕ್ರಮಕ್ಕೆ ಶುಭಾಶಯ ಕೋರಿದ್ದಾರೆ. ಕ್ಯಾಮರಾಮೇನ್ ಸಾವರ್ಕರ್ ಜೊತೆಗೆ ನಾಥೂರಾಂ ಗೋಡ್ಸೆ....ನರಕದಿಂದ...’’
ಅಷ್ಟರಲ್ಲಿ ಪತ್ರಕರ್ತ ಎಂಜಲು ಕಾಸಿಗೆ ಎಚ್ಚರ ವಾಯಿತು. ತಾನು ಈವರೆಗೆ ನೋಡಿದ್ದು ವಾಸ್ತವವೋ, ಕನಸೋ ಎಂಬ ಗೊಂದಲ ಇನ್ನೂ ಅವನೊಳಗಿತ್ತು. ಟಿವಿ ಆನ್ ಮಾಡಿದ.ನೋಡಿದರೆ ಅದರಲ್ಲಿ ‘‘ಸಚಿನ್, ಅನಿಲ್ ಅಂಬಾನಿ ಮೊದಲಾದವರೆಲ್ಲ ಕಸ ಗುಡಿಸುವ ವರದಿ’’ ಬಿತ್ತರವಾಗುತ್ತಿತ್ತು. 
ಅಕ್ಟೋಬರ್ -18-2014

Sunday, March 29, 2015

ಅಂಬಾನೀಜಿ ಕಂಹಾಹೇ.. ಅದಾನಿಜೀ ಕಂಹಾಹೇ...!

ನರೇಂದ್ರ ಮೋದಿ ಧರಿಸಿದ ಲಕ್ಷಾಂತರ ಬೆಲೆಯ ಸೂಟು ಕೋಟ್ಯಂತರ ಬೆಲೆಗೆ ಹರಾಜಾದ ಹಿನ್ನೆಲೆಯಲ್ಲಿ ರವಿವಾರ - ಫೆಬ್ರವರಿ -22-2015 ರ ವಾರ್ತಾ ಭಾರತಿ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ. 

ಹರಾಜು...ಹರಾಜು...ಹರಾಜು...
ದೇಶದಲ್ಲೆಲ್ಲ ಹರಾಜಿನದ್ದೇ ಸುದ್ದಿ. ಬೆಳಗ್ಗೆ ಸುದ್ದಿಯ ವಾಸನೆ ಹಿಡಿದು ಓಡಾಡುತ್ತಿದ್ದ ಎಂಜಲು ಕಾಸಿಗೆ ಈ ಹರಾಜು ಸುದ್ದಿ ಕೇಳಿ ಅಚ್ಚರಿಯಾಯಿತು. ಅರೆ! ಈ ದೇಶದಲ್ಲಿ ಯಾವುದನ್ನು ಹರಾಜಿಗಿಟ್ಟಿದ್ದಾರೆ?
ಗಾಂಧಿಯನ್ನು ಹರಾಜಿಗಿಟ್ಟಾಯಿತು. ನೆಹರೂವನ್ನು ಹರಾಜಿಗಿಟ್ಟಾಯಿತು. ನೇತಾಜಿಯನ್ನು ಹರಾಜಿಗಿಟ್ಟಾಯಿತು. ವಿವೇಕಾನಂದರನ್ನು ಹರಾಜಿಗಿಟ್ಟಾಯಿತು. ದೇಶದ ನ್ಯಾಯಾಲಯವನ್ನು ಹರಾಜು ಕೂಗಿದ್ದಾಯಿತು. ರಕ್ಷಣಾ ಇಲಾಖೆ, ಕೃಷಿ, ಚಿಲ್ಲರೆ ಅಂಗಡಿಗಳು ಎಲ್ಲವನ್ನೂ ವಿದೇಶಿಯರಿಗೆ ಹರಾಜು ಹಾಕಿ ಪ್ರಧಾನಿ ಮೋದಿಯವರು ದೇಶವನ್ನು ಶ್ರೀಮಂತಗೊಳಿಸಿರುವಾಗ ಇನ್ನು ಈ ದೇಶದಲ್ಲಿ ಹರಾಜಿಗೆ ಉಳಿದಿರುವುದಾದರೂ ಏನು ಎನ್ನುವ ಸಮಸ್ಯೆ ಎಂಜಲು ಕಾಸಿಯನ್ನು ಕಾಡತೊಡಗಿತು. ಕುತೂಹಲದಿಂದ ಕಿವಿ ನಿಮಿರಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿರುವ ಕೋಟು ಕೋಟ್ಯಂತರ ರೂಪಾಯಿಗೆ ಹರಾಜಾಗುತ್ತಿರುವುದು ಗೊತ್ತಾಗಿಬಿಟ್ಟಿತು. ಇಡೀ ದೇಶ ಆ ಕೋಟಿಗಾಗಿ ಹರಾಜು ನಿಂತಿರುವುದಾಗಿ ಟಿವಿ ವಾಹಿನಿಯೊಂದು ಒದರುತ್ತಿತ್ತು. ಕಾಸಿ ತಾನು ಧರಿಸಿದ ಹಳೆಯ ತೇಪೆ ಹಾಕಿದ ಜುಬ್ಬಾವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟ. ಸರಿ. ಆದದ್ದಾಗಲಿ ಎಂದು ನೇರವಾಗಿ ಹರಾಜು ನಡೆಯುವಲ್ಲಿಗೇ ಹೋದ. ನೋಡಿದರೆ ಭಾರೀ ದೊಡ್ಡ ಸಂತೆ. ಸಂತೆಯ ಮಧ್ಯೆ ನಿಂತು ಅಮಿತ್ ಶಾ ಮೋದಿಯನ್ನು ಕೋಟನ್ನು ಹಿಡಿದುಕೊಂಡು ಹರಾಜು ಕೂಗುತ್ತಿದ್ದಾರೆ.
‘‘ಆಯಿಯೇ...ಆಯಿಯೇ...ಇದು ದೇಶದ ಅತ್ಯಂತ ಆತ್ಮಾಭಿಮಾನದ ಕೋಟು. ಸ್ವತಃ ಅಮೆರಿಕದ ಒಬಾಮ ಅವರು ಇದನ್ನು ಅಪ್ಪಿಕೊಂಡಿದ್ದು, ಅವರ ಬೆವರಿನ ವಾಸನೆ ಇನ್ನೂ ಹಾಗೇ ಘಮಘಮಿಸುತ್ತಿದೆ...ಹರಾಜು ಕೂಗಿ...ದೇಶದ ಮಾನ ಉಳಿಸಿ...ದೇಶದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿ...ನಿಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ...’’

ಸೇರಿದ ಜನರೆಲ್ಲ ತಮ್ಮ ತಮ್ಮ ಭೂಮಿಯನ್ನು, ಗೂಡಂಗಡಿಗಳನ್ನು, ಕಾಡನ್ನು, ನದಿಯನ್ನು, ಕಡಲನ್ನು ಒತ್ತೆಯಿಟ್ಟು ನರೇಂದ್ರ ಮೋದಿಯ ಕೋಟಿಗೆ ಹರಾಜು ಕೂಗುತ್ತಿದ್ದರು. ಅದೆಷ್ಟು ಸಂಪತ್ತು ತಂದು ಸುರಿದರೂ ನರೇಂದ್ರ ಮೋದಿಯ ಕೋಟಿನ ಬೆಲೆಗೆ ಅದು ಸಮಗಟ್ಟುತ್ತಿಲ್ಲ. ರೈತರ ಪತ್ನಿಯರೆಲ್ಲ ತಮ್ಮ ಕೊರಳಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಅಮಿತ್ ಶಾಗೆ ಕೊಟ್ಟರು. ಎಲ್ಲವನ್ನೂ ಕಿತ್ತು ಕಿತ್ತು ಅಮಿತ್ ಶಾ ತಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದರು. ಆದರೂ ಕೋಟಿನ ಬೆಲೆ ಏರುತ್ತಲೇ ಇತ್ತು. ಅಮಿತ್ ಷಾ ಮತ್ತೆ ಘೋಷಣೆ ಕೂಗತೊಡಗಿದರು ‘‘ಈ ಕೋಟು ಭಾರತದ ಆತ್ಮಾಭಿಮಾನದ ಸಂಕೇತ...ಬನ್ನಿ...ಇದನ್ನು ಕೊಂಡುಕೊಳ್ಳಿ...ಹರಾಜು ಕೂಗಿ...ಇಂದು ಈ ದೇಶದ ಮಾನವನ್ನು ಕಾಪಾಡಬೇಕಾದರೆ ಈ ಕೋಟು ಅತ್ಯಗತ್ಯ. ನಿಮ್ಮ ಮಾನ ಮಾತ್ರ ಅಲ್ಲ...ಪ್ರಾಣವನ್ನೂ ತೆತ್ತು ಹರಾಜು ಕೂಗಿ....’’
ಎಂದದ್ದೇ ತಡ...ದೇಶದ ಹಲವೆಡೆ ಕೋಮುಗಲಭೆಗಳನ್ನು ನಡೆಸಿ ತಲೆಬುರುಡೆಗಳನ್ನು ರಾಶಿರಾಶಿಯಾಗಿ ಅಮಿತ್ ಶಾ ಮುಂದೆ ಸುರಿಯಲಾಯಿತು. ಆದರೂ ಕೋಟಿನ ಬೆಲೆ ಸರಿಗಟ್ಟಲಾಗುತ್ತಿಲ್ಲ. ನೂರಾರು ಮನೆಗಳಿಗೆ ಬೆಂಕಿ ಹಚ್ಚಿ, ಅದರ ಬೂದಿಯನ್ನು ತಂದು ಅಮಿತ್ ಶಾ ಮುಂದೆ ನೀಡಲಾಯಿತು. ಊಹೂಂ...ಅದೇನಿದ್ದರೂ ಕೋಟಿನ ಬೆಲೆಯನ್ನು ಸರಿಗಟ್ಟಲಾಗುವುದಿಲ್ಲ. ವಲ್ಲಭಭಾಯಿ ಪಟೇಲ್ ಪ್ರತಿಮೆಗೆಂದು ತಂದ ಕಬ್ಬಿಣವನ್ನೆಲ್ಲ ಅಲ್ಲಿ ಸುರಿಯಲಾಯಿತು. ಎಲ್ಲವೂ ಕೋಟಿನ ಮುಂದೆ ನಗಣ್ಯವಾದವು. ಈ ದೇಶದ ಅದಿರುಗಳನ್ನು, ಹಸಿರುಗಳನ್ನು, ಮರಳುಗಳನ್ನು...ಹೀಗೆ ಯಾವುದಕ್ಕೂ ನರೇಂದ್ರ ಮೋದಿಯವರ ಸೂಟು ಸರಿಗಟ್ಟುತ್ತಿಲ್ಲ.
ಅಷ್ಟರಲ್ಲಿ ಅಲ್ಲಿಗೆ ಅಂಬಾನಿ, ಅದಾನಿಗಳಾದಿಯಾಗಿ ನಿಜ ದೇಶಭಕ್ತರ ಪ್ರವೇಶವಾಯಿತು. ನರೇಂದ್ರ ಮೋದಿಯವರ ಸೂಟಿಗೆ ಸರಿಯಾದ ಬೆಲೆ ನೀಡುವವರಿಲ್ಲದೆ ದೇಶದ ಮಾನ ಹರಾಜಾಗುತ್ತಿರುವುದನ್ನು ಕಂಡು ತಕ್ಷಣ ಅವರು ಮಧ್ಯೆ ಪ್ರವೇಶಿಸಿದರು. ಅಂಬಾನಿ, ಅದಾನಿ ಸೂಟಿನ ಮೇಲೆ ಕೈ ಸ್ಪರ್ಶ ಮಾಡಿದ್ದೇ ಸೂಟು ಧನ್ಯವಾಯಿತು. ತಕ್ಷಣ ಅಮಿತ್ ಷಾ ಅವರು ಸೂಟಿಗಾಗಿ ದೇಶದ ಜನರು ಕೊಟ್ಟ ಎಲ್ಲ ಸಂಪತ್ತನ್ನು ಅಂಬಾನಿ, ಅದಾನಿಯಾದಿಗಳಿಗೆ ಒಪ್ಪಿಸಿ, ಸೂಟಿನ ಮರ್ಯಾದೆ ಉಳಿಸಿದ್ದಕ್ಕೆ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು.

ಮೇಲಿನ ಎಲ್ಲ ದೃಶ್ಯಗಳನ್ನು ನೋಡಿದ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ನೇರವಾಗಿ ಅಮಿತ್ ಷಾ ಬಳಿಗೆ ಹಾರಿದ. ‘‘ಸಾರ್...ಇನ್ನು ಹರಾಜು ಹಾಕುವುದಕ್ಕೆ ಬೇರೇನೇನು ಇದೆ...’’ ಕಾಸಿ ಕೇಳಿದ.
ಅಮಿತ್ ಶಾ ಅವರು ತಮ್ಮ ಗಡ್ಡ ನೇವರಿಸುತ್ತಾ ಹೇಳಿದರು ‘‘ನೋಡ್ರಿ...ನಾವು ಗಾಂಧಿಯ ಚರಕವನ್ನು ಹರಾಜು ಹಾಕಿದೆವು. ಆದರೆ ಅದು ಒಂದು ರೂಪಾಯಿಯೂ ಬೆಲೆ ಬಾಳಲಿಲ್ಲ. ದೇಶ ಸಂಕಷ್ಟದಲ್ಲಿದೆ ಎಂದು ವಲ್ಲಭಭಾಯಿ, ವಿವೇಕಾನಂದರನ್ನೂ ಹರಾಜು ಹಾಕಿದೆವು. ಆದರೂ ವಿಶೇಷ ಬೆಲೆ ದಕ್ಕಲಿಲ್ಲ. ದೇಶದ ಅಭಿವೃದ್ಧಿಗೆ ದುಡ್ಡು ಸಾಲುವುದಿಲ್ಲ ಎಂದು ನಮ್ಮ ಸಂವಿಧಾನ, ನ್ಯಾಯಾಂಗ, ರಕ್ಷಣಾ ಇಲಾಖೆ ಎಲ್ಲವನ್ನೂ ಹರಾಜು ಹಾಕಿದೆವು. ಆದರೂ ದೇಶವನ್ನು ಅಭಿವೃದ್ಧಿಗೊಳಿಸಲು ಬೇಕಾದಷ್ಟು ದುಡ್ಡು ನಮಗೆ ಸಿಗಲಿಲ್ಲ. ಇದೀಗ ನರೇಂದ್ರ ಮೋದಿಯವರು ತಮ್ಮ ದೇಶಕ್ಕಾಗಿ ತಾವು ಧರಿಸಿದ ಕೋಟನ್ನೇ ಹರಾಜು ಹಾಕಿದ್ದಾರೆ...ಇದೀಗ ಇದಕ್ಕೆ ಭಾರೀ ಬೆಲೆ ಬಂದಿದೆ. ಇದರಿಂದಾಗಿ ನಮ್ಮ ಅಂಬಾನಿ, ಅದಾನಿ ಮೊದಲಾದವರು ಸಂತೋಷಗೊಂಡಿದ್ದಾರೆ. ದೇಶದ ಜನರು ತಮ್ಮ ತಮ್ಮ ಸಂಪತ್ತು, ಸೊತ್ತುಗಳನ್ನು ಈ ಸೂಟಿಗಾಗಿ ಒಪ್ಪಿಸಿರುವುದು ಅಂಬಾನಿಯವರಿಗೆ ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯವರು ಹಾಕಿದ ಇತರ ವಸ್ತ್ರ ಗಳನ್ನೂ ಹರಾಜು ಹಾಕಲಿದ್ದೇವೆ...’’

‘‘ಅಂದರೆ ಮೋದಿಯವರು ಇನ್ನು ಮುಂದೆ ವಸ್ತ್ರ ವಿಲ್ಲದೆಯೇ ವಿದೇಶ ಪ್ರಯಾಣ ಮಾಡಲಿದ್ದಾರೆಯೇ?’’ ಕಾಸಿ ಆತಂಕದಿಂದ ಕೇಳಿದ. ‘‘ಅವರಿಗೆ ವಸ್ತ್ರ ದ ಅಗತ್ಯವೇನೂ ಇಲ್ಲ. ಆದರೂ ಅವರು ಧರಿಸಿ ಎಸೆದ ವಸ್ತ್ರಗಳಿಗೆ ದೇಶವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹರಾಜಿನಲ್ಲಿ ಅದು ಕೋಟಿಗಟ್ಟಲೆ ಬೆಲೆಬಾಳುತ್ತದೆ. ಇದರಿಂದಾಗಿ ದೇಶ ಆರ್ಥಿಕವಾಗಿ ಅಭಿವೃದ್ಧಿಗೊಳ್ಳುತ್ತದೆ. ದೇಶವನ್ನು ಆರ್ಥಿಕವಾಗಿ ಬಲಗೊಳಿಸುವುದಕ್ಕಾಗಿ ನರೇಂದ್ರ ಮೋದಿಜಿ ಬಟ್ಟೆ ಧರಿಸುತ್ತಾರೆ. ಇನ್ನು ಮುಂದೆ ನರೇಂದ್ರ ಮೋದಿಯವರು ಧರಿಸಿ ಎಸೆದ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ. ಈ ಮೂಲಕ ದೇಶವನ್ನು ಆರ್ಥಿಕವಾಗಿ ಮೇಲೆತ್ತುವ ಯೋಜನೆಯನ್ನು ಹಾಕಿಕೊಂಡಿದ್ದೇವೆ...’’
‘‘ಮುಂದೆ ಮೋದಿಯ ಯಾವ್ಯಾವ ರಿಸುಗಳನ್ನು ಹರಾಜು ಹಾಕಲಿದ್ದೀರಿ ಸಾರ್...’’ ಕಾಸಿ ಕೇಳಿದ.
‘‘ಮುಖ್ಯವಾಗಿ ಅವರ ಒಳಚೆಡ್ಡಿ ಮತ್ತು ಒಳಅಂಗಿಗಳಿಗೂ ಭಾರೀ ಬೇಡಿಕೆ ಇದೆ. ಅವರ ಒಳಚೆಡ್ಡಿ ಪುರಾತನ ಕಾಲದಲ್ಲಿ ಆರೆಸ್ಸೆಸ್ ಶಾಖೆಯಲ್ಲಿ ಧರಿಸಿರುವುದರಿಂದ ಅದು ಒಳಗೇ ಬಲವಾಗಿ ಅಂಟಿಕೊಂಡಿರುವ ಸಾಧ್ಯತೆ ಇದೆ. ಶಸಚಿಕಿತ್ಸೆಯ ಮೂಲಕ ಅವರ ದೇಹದಿಂದ ಅವರ ಒಳಚೆಡ್ಡಿಯನ್ನು ಬೇರ್ಪಡಿಸಿ ಅದನ್ನು ಹರಾಜು ಹಾಕಬೇಕು ಎಂದಿದ್ದೇವೆ...ಹಾಗೆಯೇ ಅವರು ಧರಿಸಿರುವ ಕೌಪೀನಕ್ಕೆ ಅಮೆರಿಕದ ಎನ್‌ಆರ್‌ಐಗಳು ಭಾರೀ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಅದನ್ನು ಹರಾಜಿನಲ್ಲಿ ಕೊಂಡು ದೇಶವನ್ನು ಉದ್ಧರಿಸುವ ಮಹಾ ಕನಸನ್ನು ಅವರು ಹೊಂದಿದ್ದಾರೆ....’’
ಅಷ್ಟರಲ್ಲಿ ಯಾರೋ ಒಂದು ಕೆಂಪು ಬಟ್ಟೆಯನ್ನು ಹಿಡಿದುಕೊಂಡು ಬಂದರು ‘‘ನೋಡಿ...ಇಲ್ಲಿ ಮೋದಿಯವರ ಕುರ್ಚಿಯನ್ನು ಒರೆಸುವ ಬಟ್ಟೆ ಇದೆ...ಇದನ್ನು ಹರಾಜು ಹಾಕಿ ಬಿಡಿ...’’
ಆ ಬಟ್ಟೆ ಕೆಂಪಗಿತ್ತು. ಅಮಿತ್ ಶಾ ಅದನ್ನು ಮೂಸಿ ನೋಡಿದರು ‘‘ಈ ಬಟ್ಟೆ ರಕ್ತದ ಪರಿಮಳ ಬರುತ್ತಿದೆಯಲ್ಲ...’’ ಎಂದು ಬಟ್ಟೆ ತಂದುಕೊಟ್ಟವನ ಮುಖ ನೋಡಿದರು.
 ನೋಡಿದರೆ ಆಮ್ ಆದ್ಮಿ ನಾಯಕ ಕೇಜ್ರಿವಾಲ್. ‘‘ಅದು ಗುಜರಾತ್ ಹತ್ಯಾಕಾಂಡದ ರಕ್ತ. ಅವರು ಕುಳಿತ ಕುರ್ಚಿಯಲ್ಲಿ ಅಂಟಿದ್ದ ರಕ್ತವನ್ನು ಶುಚಿ ಮಾಡಿದ ಬಟ್ಟೆ ಇದು...’’ ಎನ್ನುತ್ತಾ ಕೇಜ್ರಿವಾಲ್ ಹಲ್ಲು ಕಿರಿದರು.
ಭೂತವನ್ನು ಕಂಡವರಂತೆ ಅಮಿತ್ ಶಾ ಕೈಯಲ್ಲಿದ್ದ ಕೆಂಪು ಬಟ್ಟೆಯನ್ನು ಎಸೆದವರೇ ‘‘ಅಂಬಾನೀಜಿ ಕಂಹಾಹೇ... ಅಧಾನಿಜೀ ಕಂಹಾಹೇ...’’ ಎನ್ನುತ್ತಾ ಸಂತೆಯಲ್ಲಿ ಹುಡುಕ ತೊಡಗಿದರು.
ರವಿವಾರ - ಫೆಬ್ರವರಿ -22-2015