Saturday, December 21, 2013

ಇಡೀ ಭಾರತವನ್ನು ಗುಜರಾತ್ ಮಾಡ್ತೀನಿ ಕಣ್ರೀ....

ಕಳೆದ ನವೆಂಬರ್ ತಿಂಗಳಲ್ಲಿ ನರೇಂದ್ರ ಮೋದಿ ಕರ್ನಾಟಕಕ್ಕೇ ಬಂದ ಸಂದರ್ಭದಲ್ಲಿ ಬರೆದ ಬುಡಬುಡಿಕೆ ಇದು.

ತಮ್ಮ ಭಾಷಣದಲ್ಲಿ ನರೇಂದ್ರ ಮೋದಿಯವರು ತಪ್ಪು ತಪ್ಪು ಇತಿಹಾಸಗಳನ್ನು ಹೇಳುತ್ತಿರುವುದು ಬಿಜೆಪಿಗೆ ಭಾರೀ ತಲೆನೋವಿನ ಸಮಸ್ಯೆಯಾಯಿತು.ಆರೆಸ್ಸೆಸ್ ಶಾಖೆಯಲ್ಲಿ ಕಲಿಸಿದ ಇತಿಹಾಸವನ್ನೇ ನರೇಂದ್ರ ಮೋದಿ, ಭಾಷಣದಲ್ಲೂ ಹೇಳುತ್ತಿರುವುದರಿಂದ ಈ ತಪ್ಪುಗಳಾಗುವುದು ಸಹಜವೇ ಆದರೂ, ಮುಂದಿನ ಪ್ರಧಾನಿ ಅಭ್ಯರ್ಥಿಯ ಭಾಷಣ ಹೀಗೆ ನಗೆಪಾಟಲಿಗೀಡಾದರೆ ಹೇಗೆ? ಎನ್ನುವುದು ಬಿಜೆಪಿಯನ್ನು ಕಾಡತೊಡಗಿತು. ಕರ್ನಾಟಕದ ಬೆಂಗಳೂರಿನಲ್ಲಿ ಇನ್ನು ಏನೋ ಹೇಳಲು ಹೋಗಿ ಇನ್ನೇನೋ ಆವಾಂತರ ಮಾಡಿದರೆ ಹೇಗೆ? ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಜೊತೆಗೂಡಿ ಚಿಂತನ ಶಿಬಿರ ನಡೆಸಿ, ನರೇಂದ್ರ ಮೋದಿಗೆ ಒಬ್ಬ ಇತಿಹಾಸ ಶಿಕ್ಷಕನನ್ನು ನೇಮಿಸುವುದೆಂದು ತೀರ್ಮಾನಿಸಲಾಯಿತು. ಕೊನೆಗೂ ಬೆಂಗಳೂರಿನ ಒಬ್ಬ ಬಡ ಇತಿಹಾಸ ಶಿಕ್ಷಕನನ್ನು ಆರಿಸಿ ನರೇಂದ್ರ ಮೋದಿಯಲ್ಲಿಗೆ ಕಳುಹಿಸಲಾಯಿತು.
ಬಡ ಇತಿಹಾಸ ಶಿಕ್ಷಕನೋ, ಹಸಿದ ತೋಳನ ಮುಂದೆ ಹೋಗುವ ಕುರಿಮರಿಯಂತೆ ನಡುಗುತ್ತಾ ನಡುಗುತ್ತಾ ಹೋದ.
ಮೋದಿ ತಲೆಯೆತ್ತಿದರು ‘‘ಹಾಂ...ಬೈಟಿಯೇ...ನನಗೆ ಇತಿಹಾಸ ಕಲಿಸಲು ಬಂದಿರುವ ಹೊಸ ಶಿಕ್ಷಕ ನೀನೇಯೋ? ಮೋದಿ ಗೊತ್ತಾ ನಿನಗೆ?’’
ಇತಿಹಾಸ ಶಿಕ್ಷಕ ತಕ್ಷಣ ಬಾಯಿ ತೆರೆದ ‘‘ಗೊತ್ತು ಸಾರ್..ಕರ್ನಾಟಕದ ಮನೆ ಮನೆಗೂ ಮೋದಿ ಗೊತ್ತು ಸಾರ್...’’
ನರೇಂದ್ರ ಮೋದಿ ರೋಮಾಂಚನಗೊಂಡರು. ಪ್ರಧಾನಿಯಾಗಿಯೇ ಬಿಟ್ಟೆ ಎನ್ನುವಂತೆ ಶಿಕ್ಷಕನನ್ನು ತಬ್ಬಿಕೊಂಡರು ‘‘ಕರ್ನಾಟಕದ ಮನೆ ಮನೆಗೂ ಗೊತ್ತಾ?ನಾನು ಅಷ್ಟೂ ಫೇಮಸ್ಸಾ?’’
ಶಿಕ್ಷಕ ಕಂಗಾಲಾದ...‘‘ಸಾರ್ ನಾನು ನೇತ್ರ ತಜ್ಞ ಮೋದಿಯ ಬಗ್ಗೆ ಮಾತನಾಡುತ್ತಾ ಇದ್ದೇನೆ ಸಾರ್...ಅವರು ಕರ್ನಾಟಕದಲ್ಲಿ ತುಂಬಾ ಫೇಮಸ್ಸು. ನೂರಾರು ಬಡವರಿಗೆ ಕಣ್ಣು ಕೊಟ್ಟಿದ್ದಾರೆ ಸಾರ್...’’
ನರೇಂದ್ರ ಮೋದಿ ಸಿಟ್ಟಾದರು ‘‘ರೀ...ನಿಮಗೆ ಕರ್ನಾಟಕದ ಇತಿಹಾಸ ಗೊತ್ತಿಲ್ಲರೀ...ಅವರು ಮಾತಡ್ತಾ ಇರುವುದು ನರೇಂದ್ರ ಮೋದಿಯ ಕುರಿತು. ಗುಜರಾತ್‌ನಲ್ಲಿ ಅಭಿವೃದ್ಧಿ ಮಾಡಿ ಜನರಿಗೆ ಕಣ್ಣು ನೀಡಿದ್ದೇನೆ. ನನ್ನ ಮಾತು ಕೇಳದವರ ಕಣ್ಣು ಕಿತ್ತಿದ್ದೇನೆ...ಇಡೀ ದೇಶದಲ್ಲಿ ಇರುವುದು ಒಬ್ಬನೇ ಮೋದಿ. ಅದು ನಾನು. ನರೇಂದ್ರಮೋದಿ...ಕರ್ನಾಟಕದ ಜನರು ನನ್ನನ್ನು ಮನೆಮನೆಯಲ್ಲಿ ನೆನೆದುಕೊಳ್ಳುತ್ತಾ ಇದ್ದಾರೆ...’’
‘‘ಸಾರ್ ಅವರು ಡಾಕ್ಟರ್ ಮೋದಿ ಸಾರ್. ನೀವು....ಆ್ಯಕ್ಟರ್ ಮೋದಿ ಸಾರ್...’’
‘‘ನನಗೂ ವಿದೇಶದ ದೊಡ್ಡ ದೊಡ್ಡ ಕಂಪೆನಿಗಳು ಡಾಕ್ಟರೇಟ್ ನೀಡಲು ಮುಂದೆ ಬಂದಿವೆ. ಚುನಾವಣೆ ಘೋಷಣೆಯಾದ ಬಳಿಕ ಅದನ್ನು ಕೊಡಿ ಎಂದಿದ್ದೇನೆ...ಇವನ್ಯಾವನೋ ನನ್ನ ಹೆಸರನ್ನಿಟ್ಚುಕೊಂಡು ಕರ್ನಾಟಕದಲ್ಲಿ ಪ್ರಚಾರ ಪಡೆದಿದ್ದಾನೆ ಅಷ್ಟೇ...’’ ಎಂದು ಹೂಂಕರಿಸಿದರು. ಇತಿಹಾಸ ಶಿಕ್ಷಕರು ತಲೆಯಾಡಿಸಿದರು.

‘‘ಇನ್ನು ಮುಂದೆ ಮೋದಿ ಅಂದ್ರೆ ಕರ್ನಾಟಕದಲ್ಲಿ ನಾನೇ...’’ ಘೋಷಿಸಿದರು ಮೋದಿ. ಶಿಕ್ಷಕ ತಲೆಯಾಡಿಸಿದ. ಶಿಕ್ಷಕ ಪಾಠ ಆರಂಭಿಸಿದ ‘‘ತಾಳಿಕೋಟೆ ಕದನದಲ್ಲಿ ವಿಜಯನಗರ ಅರಸರು...’’
ಮೋದಿ ಅರ್ಧದಲ್ಲೇ ತಡೆದರು ‘‘ಗೊತ್ತು ಗೊತ್ತು... ತಾಳಿಕೋಟೆ ಕದನದಲ್ಲಿ ಹೊಯ್ಸಳರು ಅಲೆಕ್ಸಾಂಡರ್‌ನನ್ನು ಸೋಲಿಸಿದರು ಅಲ್ಲವೆ... ಯುದ್ಧದಲ್ಲಿ ಸೋತ ಅಲೆಕ್ಸಾಂಡರ್ ತುಂಗ ಭದ್ರಾ ನದಿಯ ತಟ್ಟದಲ್ಲಿ ಸತ್ತು ಬಿದ್ದ...’’
ಶಿಕ್ಷಕನಿಗೆ ಲಘು ಹೃದಯಾಘಾತವಾಗಿ ಬಿಟ್ಟಿತು ‘‘ಸಾರ್...ಹೂಂಕಾರ ರ್ಯಾಲಿಯಲ್ಲಿ ನೀವೇ ಹೇಳಿದ್ರಲ್ಲಾ ಸಾರ್...ಅಲೆಕ್ಸಾಂಡರ್‌ನನ್ನು ಬಿಹಾರಿಗಳು ಸೋಲಿಸಿದರು ಅಂತಾ...’’
ಮೋದಿಗೆ ಸಿಟ್ಟು ಬಂತು ‘‘ಏನ್ರೀ ನೀವು? ಇತಿಹಾಸ ಶಿಕ್ಷಕರು ಅಂತ ಹೇಳ್ತೀರಿ...ಇಷ್ಟು ಗೊತ್ತಿಲ್ವಾ? ಬಿಹಾರದಲ್ಲಿ ಬಿಹಾರಿಗಳು ಸೋಲಿಸಿದ್ರು, ಕರ್ನಾಟಕದಲ್ಲಿ ಕನ್ನಡಿಗರು ಸೋಲಿಸಿದ್ರು. ಇನ್ನು ಆಂಧ್ರಕ್ಕೆ ಹೋದಾಗ ಆಂಧ್ರದವರೂ ಸೋಲಿಸಲಿಕ್ಕಿದ್ದಾರೆ. ನನಗೆ ಓಟು ಹಾಕುವ ಮತದಾರರಿಗೆ ಮೋದಿಯ ಕೊಡುಗೆ ಇದು. ಹಾಗೆಯೇ ಚಂಗೇಸ್‌ಖಾನ್‌ನನ್ನು ಕಿತ್ತೂರು ಚೆನ್ನಮ್ಮ ಸೋಲಿಸಿದರು....’’
‘‘ಸಾರ್...’’ ಶಿಕ್ಷಕ ಚೀರಿದ.
ಮೋದಿ ಬೆಚ್ಚಿ ಬಿದ್ದರು ‘‘ಏನಾಯ್ತು? ಸಿಬಿಐ ನೋರು ಬಂದ್ರಾ?’’
‘‘ಇಲ್ಲಾ ಸಾರ್...ಎಲ್ಲಿಯ ಚಂಗೇಸ್‌ಖಾನ್...ಎಲ್ಲಿಯ ಕಿತ್ತೂರು ಚೆನ್ನಮ್ಮ ಸಾರ್...’’ ಶಿಕ್ಷಕ ಅಳುತ್ತಾ ಕೇಳಿದ.
‘‘ನನಗೆ ಭಾಷಣ ಬರ್ದುಕೊಟ್ಟಿರೋ ಕಂಪೆನಿಯೋರು ಅದನ್ನೇ ಹೇಳಿದ್ದಾರೆ. ಹಾಗೆಯೇ ಸ್ವಾತಂತ್ರ ಹೋರಾಟಗಾರ ಹೊ. ವೆ. ಶೇಷಾದ್ರಿ ಇಂದಿರಾಗಾಂಧಿಯ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡುತ್ತಾ ಹುತಾತ್ಮರಾದರು....’’
ಮೋದಿಯ ಇತಿಹಾಸ ಪ್ರಜ್ಞೆಗೆ ಶಿಕ್ಷಕಕರು ಮೂಕ ವಿಸ್ಮಿತರಾದರು. ‘‘ಸಾರ್...ನೀವು ಇತಿಹಾಸವನ್ನು ಬದಲಿಸ್ತಾ ಇದ್ದೀರಾ’’
ನರೇಂದ್ರ ಮೋದಿ ಹಸನ್ಮುಖರಾದರು ‘‘ಹೂಂ. ಇತಿಹಾಸವನ್ನು ಬದಲಿಸುವುದಕ್ಕಾಗಿಯೇ ನಾನು ಪ್ರಧಾನಿಯಾಗಲು ಹೊರಟಿದ್ದೇನೆ....ಇಡೀ ಭಾರತವನ್ನೇ ನಾನು ಗುಜರಾತ್ ಮಾಡುತ್ತೇನೆ...’’
‘‘ಗುಜರಾತ್‌ನ್ನು ಭಾರತ ಮಾಡುವುದು ಯಾವಾಗ ಸಾರ್?’’
ಮೋದಿ ಸಿಟ್ಟಾದರು ‘‘ಏನ್ರೀ ಹೇಳುತ್ತಾ ಇದ್ದೀರಾ? ಗುಜರಾತ್‌ನೊಳಗೆ ಭಾರತ ಇದೆಯೇ ಹೊರತು, ಭಾರತದೊಳಗೆ ಗುಜರಾತ್ ಇಲ್ಲ. ಇಡೀ ಭಾರತ ನಮ್ಮನ್ನು ಗುಜರಾತ್ ಮಾಡಿ ಎಂದು ಅಳುತ್ತಾ ಇದೆ...ಅದಕ್ಕಾಗಿ ಒಂದು ಯೋಜನೆ ಹಾಕ್ತಾ ಇದ್ದೇನೆ.... ಭಾರತದ ಅಲ್ಲಲ್ಲಿ ಗುಜರಾತ್‌ನಲ್ಲಿ ನಡೆದಂತಹ ಹತ್ಯಾಕಾಂಡವನ್ನು ಹಮ್ಮಿಕೊಂಡು ಜನರ ಸ್ವಾಭೀಮಾನವನ್ನು ಎಚ್ಚರಿಸುತ್ತೇನೆ....ಭಾರತದ ಪ್ರತಿ ರೈಲುಗಳನ್ನು ಗೋದ್ರ ಮಾಡಿ...ಬಳಿಕ ಭಾರತವನ್ನು ಗೋಧ್ರೋತ್ತರ ಮಾಡುತ್ತೇನೆ...’’
‘‘ಕರ್ನಾಟಕದಲ್ಲಿ ಏನು ಮಾಡುತ್ತೀರಿ ಸಾರ್?’’
 ‘‘ಕರ್ನಾಟಕದಲ್ಲಿ ನನಗಾಗಿ ಈಗಾಗಲೇ ಇಲ್ಲಿನ ಪತ್ರಿಕೆಗಳು, ಪೊಲೀಸರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಇಡೀ ಕರ್ನಾಟಕದ ಇತಿಹಾಸವನ್ನು ಬದಲಿಸುತ್ತೇನೆ....ತಕ್ಷಶಿಲೆಯನ್ನು ಕರ್ನಾಟಕಕ್ಕೆ ತರುವೆ. ತಾಜ್‌ಮಹಲ್ ಆಗ್ರದಲ್ಲಿರುವುದಲ್ಲ, ಕರ್ನಾಟಕದಲ್ಲಿ ಎಂದು ಘೋಷಿಸುವೆ. ಶೇಕ್ಸ್‌ಪಿಯರ್ ಹುಟ್ಟಿದ್ದು ಕರ್ನಾಟಕದಲ್ಲಿ ಎಂದು ನಕಲಿ ಎನ್‌ಕೌಂಟರ್ ಮಾಡಿಸುವೆ....ಕರ್ನಾಟಕವನ್ನು ಅತಿಬೇಗದಲ್ಲಿ ಗುಜರಾತ್‌ನ ಹಾಗೆ ಅಭಿವೃದ್ಧಿಗೊಳಿಸುವೆ...ಗುಜರಾತ್‌ನಲ್ಲಿ 2000 ಮಂದಿ ಸತ್ತಿದ್ದರೆ, ಕರ್ನಾಟಕದಲ್ಲಿ ನಡೆಸುವ ಐತಿಹಾಸಿಕ ಹತ್ಯಾಕಾಂಡದಲ್ಲಿ....’’
‘‘ಸಾರ್...ನಿಲ್ಲಿಸಿ...’’ ಶಿಕ್ಷಕ ಚೀರಿದ. ‘‘ಇತಿಹಾಸ ಬದಲಿಸುವ ನಿಮ್ಮನ್ನೇ ಜನರು ಬದಲಿಸಿದರೆ ಏನು ಮಾಡುತ್ತೀರಿ...?’’
ಮೋದಿ ಸಿಟ್ಟಾದರು ‘‘ಏನ್ರೀ...ನಕಲಿ ಎನ್‌ಕೌಂಟರ್‌ನಲ್ಲಿ ಸಾಯ್ಬೇಕು ಅಂತ ಇದ್ದೀರೇನು...ನಾನೇ ಈ ಬಾರಿಯ ಪ್ರಧಾನಿ ಎಂದು ವಿದೇಶಿ ಕಂಪೆನಿಗಳು ಘೋಷಿಸಿ ಬಿಟ್ಟಿವೆ...’’
‘‘ಆದ್ರೆ ನಮ್ಮ ಪ್ರಜಾಸತ್ತೆ ಇನ್ನೂ ಘೋಷಿಸಿಲ್ಲ ಸಾರ್...’’
ಮೋದಿ ಕೆಂಡವಾದರು ‘‘ಯಾರ್ರಿ ನೀವು...ನಿಮ್ಮ ಹೆಸರೇನ್ರೀ?’’
‘‘ನನ್ನ ಹೆಸರು ಎಂಜಲು ಕಾಸಿ ಸಾರ್...ಕರ್ನಾಟಕದ ಬಡಪಾಯಿ ಪತ್ರಕರ್ತ...ನಿಮ್ಮ ಇಂಟರ್ಯೂ ಮಾಡೋದಕ್ಕೆ ಈ ವೇಷದಲ್ಲಿ ಬರಬೇಕಾಯಿತು...’’ ಎನ್ನುತ್ತಲೇ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ.

No comments:

Post a Comment