Thursday, December 5, 2013

ಚುನಾವಣಾ ಹಬ್ಬದ ಹೊಸ ರುಚಿ

 (2008 ರಲ್ಲಿ ಚುನಾವಣೆಯ ಹೊತ್ತಿಗೆ ಬರೆದ ಬುಡಬುಡಿಕೆ ಇದು. ಆಗಿನ್ನೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಲಿಲ್ಲ. ಪಶ್ಚಿಮಬಂಗಾಳದಲ್ಲಿ ನಂದಿಗ್ರಾಮದ ಗಲಾಟೆ. ಈ ಸಂದರ್ಭದಲ್ಲಿ ಮಾಡಿದ ಪತ್ರಕರ್ತ ಎಂಜಲು ಕಾಸಿ ಮಾಡಿದ ಹೊಸ ರುಚಿಯನ್ನು ಮತ್ತೆ ನಿಮ್ಮ ಮುಂದೆ ಬಡಿಸಲಾಗಿದೆ. ರುಚಿ ಹೇಗಿದೆ, ನೋಡಿ ಹೇಳಿ.)

ರಾಜ್ಯದಲ್ಲಿ ಚುನಾವಣಾ ಹಬ್ಬ ಹತ್ತಿರ ಬಂದಿರುವುದರಿಂದ ವಿವಿಧ ಪಕ್ಷಗಳು ಸಿದ್ಧಪಡಿಸಿರುವ ಹೊಸರುಚಿಗಳನ್ನು ಇಲ್ಲಿ ನೀಡಲಾಗಿದೆ.

ಕಾಂಗ್ರೆಸ್ ಬಿರಿಯಾನಿ
ನೂರು ದಷ್ಟಪುಷ್ಟ ಅಲ್ಪಸಂಖ್ಯಾತ ಕುರಿಗಳನ್ನು ತೆಗೆದುಕೊಂಡು ಕತ್ತರಿಸಿ ಮಾಂಸವನ್ನು ಚೆನ್ನಾಗಿ ಶುದ್ಧಿಗೊಳಿಸಿ ತೆಗೆದಿಟ್ಟುಕೊಳ್ಳಿ. ಈ ಕುರಿಗಳನ್ನು ಕತ್ತರಿಸುವ ಸಂದರ್ಭದಲ್ಲಿ ಅಲ್ಪಸಂಖ್ಯಾತ ಕಸಾಯಿಗಳನ್ನೇ ಬಳಸಿ ಹಲಾಲ್ ಮಾಡಿದರೆ ಒಳ್ಳೆಯದು. ಬಳಿಕ ನೂರು ಕೆಜಿ ‘ಬ್ರಾಹ್ಮಿಣ್’ ಕಂಪೆನಿಯ ಗಂಧಸಾಲೆ ಅಕ್ಕಿಯನ್ನು ನೀರಿನಲ್ಲಿ ನೆನೆ ಹಾಕಿ. ಇದಾದ ಬಳಿಕ ದಲಿತ, ಶೂದ್ರರನ್ನು ಒಟ್ಟಿಗೆ ಹಾಕಿ ಮಸಾಲೆ ಅರೆಯಿರಿ. ಮಸಾಲೆ ಸಿದ್ಧವಾದ ಬಳಿಕ ಬ್ರಾಹ್ಮಿಣ್ ಅಕ್ಕಿಯನ್ನು ಒಲೆಯ ಮೇಲೆ ಇಟ್ಟು ಕುರಿ ಮಾಂಸ ಮತ್ತು ಮಸಾಲೆಯನ್ನು ಒಟ್ಟಿಗೆ ಸುರಿಯಿರಿ. ಬೇಯುತ್ತಾ ಹೋದ ಹಾಗೆಯೇ ರಾಹುಲ್ ಕಂಪೆನಿಯ ತುಪ್ಪವನ್ನು ಹಾಕಿರಿ. ಈಗ ಬಿರಿಯಾನಿ ನಿಧಾನಕ್ಕೆ ಘಮಘಮಿಸಲಾರಂಭಿಸುತ್ತದೆ.ಬಳಿಕ, 2 ರೂಪಾಯಿ ಬೆಲೆಯ ಒಂದು ಕೆಜಿ ಅಕ್ಕಿಯನ್ನು ಹಾಕಿ ಚೆನ್ನಾಗಿ ತಿರುವಿರಿ. ಬಣ್ಣಕ್ಕೆ ತಕ್ಕಂತೆ ಕಲರ್ ಟಿ.ವಿ.ಗಳನ್ನು ಹಾಕಿ. ಯಾವುದೇ ಕಾರಣಕ್ಕೂ ಕೇಸರಿಯನ್ನು ಬಳಸಬೇಡಿ. ಅಲ್ಪಸಂಖ್ಯಾತ ಕುರಿ ಮಾಂಸಕ್ಕೆ ಕೇಸರಿ ಬೆರೆತರೆ ಅಷ್ಟು ರುಚಿಯಾಗಿರುವುದಿಲ್ಲ. ಆಮೇಲೆ ರೈತನನ್ನು ಕೈಗೆತ್ತಿಕೊಳ್ಳಿ. ಸಣ್ಣ ಸಣ್ಣ ಚೂರುಗಳನ್ನಾಗಿ ಮಾಡಿ ಬಿರಿಯಾನಿಯನ್ನು ಅಲಂಕರಿಸಿ, ಬಡ್ಡಿರಹಿತ ಸಾಲ, ಸಾಲಮನ್ನಾ ಮೊದಲಾದ ಪ್ಯಾಕೆಟ್ ಮಸಾಲೆಗಳನ್ನು ಬಳಸಿದರೂ ತೊಂದರೆಯಿಲ್ಲ. ಬಾಬರೀ ಮಸೀದಿ, ಗುಜರಾತ್ ಹತ್ಯಾಕಾಂಡ ಮೊದಲಾದ ಹಳಸಲು ಮಸಾಲೆಗಳನ್ನು ಹೆಚ್ಚು ಬಳಸಬೇಡಿ. ಹಾಗೆಂದು ಸಂಪೂರ್ಣ ಬಳಸದೇ ಇದ್ದರೆ, ಅಲ್ಪಸಂಖ್ಯಾತ ಕುರಿ ಮಾಂಸದ ಪ್ರಮಾಣಕ್ಕೆ ತಕ್ಕಂತೆ ಈ ಮಸಾಲೆಗಳನ್ನು ಹಾಕಿ ಚೆನ್ನಾಗಿ ಬೆಂದ ಹಾಗೆ, ಬೇಗ ಬೇಗನೆ ಬಡಿಸಿ. ಬಿಸಿಯಿದ್ದಷ್ಟು ರುಚಿ ಹೆಚ್ಚು. ತಣ್ಣಗಾದರೆ, ಬಿರಿಯಾನಿ ಕೆಟ್ಟು ಹೋಗುವ ಸಂಭವವಿದೆ.
               
**

ಬಿಜೆಪಿ ಕೇಸರಿ ಬಾತ್ (ವಿಶೇಷ ಸೂಚನೆ: ಮಾಮೂಲಿ ಕೇಸರಿ ಬಾತ್‌ನ ರುಚಿಗೂ, ಈ ಬಾತ್‌ಗೂ ವ್ಯತ್ಯಾಸವಿದೆ):
"ಮೋದಿ’ ಕಂಪೆನಿಯ ರವೆಯನ್ನು ನೂರು ಕೆಜಿ ಸಿದ್ಧವಾಗಿಟ್ಟುಕೊಳ್ಳಿ. 25 ಕೆಜಿ ಬಾಬಾಬುಡಾನ್‌ಗಿರಿ, 10 ಕೆಜಿ ಹಂಪಿ ದೇವಸ್ಥಾನವನ್ನು ಜೊತೆಗೆ ಸೇರಿಸಿ. ಈಗ ‘ಬ್ರಾಹ್ಮಿಣ್’ ಕಂಪೆನಿಯ ಹರಿತವಾದ ಚೂರಿಯನ್ನು ಕೈಗೆತ್ತಿಕೊಳ್ಳಿ, ಅಲ್ಪಸಂಖ್ಯಾತ ನೀರುಳ್ಳಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ. ಇದೀಗ ‘ಗೋಮಾಂಸ’ವನ್ನು ಚೆನ್ನಾಗಿ ಕೊಚ್ಚಿ, ಅಲ್ಪಸಂಖ್ಯಾತ ನೀರುಳ್ಳಿಗಳ ಜೊತೆಗೆ ಮಿಶ್ರ ಮಾಡಿ. ಆ ಬಳಿಕ ಚೆನ್ನಾಗಿ ಬಲಿತ ಸುಮಾರು ಹತ್ತು ಸಿದ್ದಲಿಂಗಯ್ಯ ಮತ್ತು ಈಶ್ವರಪ್ಪರನ್ನು ತೆಗೆದುಕೊಂಡು ಮೃದುವಾಗಿ ನೋವಾಗದಂತೆ ಅವರಿಗೆ ಇರಿಯಿರಿ. ಅನಂತರ ಅವುಗಳನ್ನು ಚೆನ್ನಾಗಿ ಗೋಮೂತ್ರದಲ್ಲಿ ಕುದಿಸಿ, ಮೋದಿ ರವೆಗೆ ಬೆರೆಸಿ, ಪಾಕ ಒಂದು ಹದಕ್ಕೆ ಬಂದಾಗ, ರವೆಯಷ್ಟೇ ಪ್ರಮಾಣದಲ್ಲಿ ‘ಗಣಿ’ ತುಂಡುಗಳನ್ನು ಹಾಕಿ ತಿರುವಿರಿ.ಬಳಿಕ ಮಂಗಳೂರು ಗಲಭೆ, ಉಳ್ಳಾಲ ಗಲಭೆಯಲ್ಲಿ ಅರೆದಿಟ್ಟ ಮಸಾಲೆಗಳನ್ನು ಹೊರ ತೆಗೆದು ಸುರಿಯಿರಿ. ಪಾಕ ಕುದಿಯುತ್ತ ಹೋದ ಹಾಗೆಯೇ ಪರಿಮಳ ಹೊರ ಚಾಚ ತೊಡಗುತ್ತದೆ. ರುಚಿಗೆ ತಕ್ಕಷ್ಟು ಯಡಿಯೂರಪ್ಪ ಕಂಪೆನಿಯ ಮೊಸಳೆ ಕಣ್ಣೀರನ್ನು ಹಾಕಿ ಬಳಿಕ ಕೆಳಗಿಳಿಸಿ. ಯಾವುದೇ ಕಾರಣಕ್ಕೂ ಬಿಸಿ ಆರಲು ಬಿಡಬೇಡಿ. ಹೊಗೆಯಾಡುತ್ತಾ ಇದ್ದರೆ ರುಚಿ ಜಾಸ್ತಿ. ಆಲಂಕಾರಕ್ಕೆ ನಕ್ವಿ, ನಜ್ಮಾಹೆಪ್ತುಲ್ಲಾ ಗೋಡಂಬಿಗಳನ್ನು ಇಡಬಹುದು. ರುಚಿಗೆ ಬೇಕಾದಷ್ಟು ಜಾತ್ಯತೀತತೆಯನ್ನು ಮೇಲ್ಮೈಗೆ ಹರಡಿದರೆ, ಅದು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.
 ***
 ಸಿಪಿಐ-ಎಂ ಚಿಲ್ಲಿ

ಇದು  ಮಾಮೂಲಿ ಸಿಪಿಐಎಂ ಚಿಲ್ಲಿಯಲ್ಲ. ಹಿಂದೆ ಸಿಪಿಐಎಂ ಚಿಲ್ಲಿಯಲ್ಲಿ ಸೆಝ್ ಮಸಾಲೆ, ಜಾಗತೀಕರಣ ಮೊದಲಾದವುಗಳನ್ನು ಬಳಸುತ್ತಿರಲಿಲ್ಲ. ಆದರೆ ಇದೀಗ ಈ ಚಿಲ್ಲಿಯಲ್ಲಿ ಅವುಗಳನ್ನು ರುಚಿಗೆ ಪೂರಕವಾಗಿ ಬಳಸಲಾಗಿದೆ. ಮೊದಲು ನಂದಿಗ್ರಾಮ ತಳಿಯ ಕೋಳಿಗಳನ್ನು ತೆಗೆದುಕೊಂಡು ಕುಡುಗೋಲಿನಿಂದ ಕತ್ತರಿಸಿ. ಬಳಿಕ ರೈತರು, ಕಾರ್ಮಿಕರನ್ನು ತೆಗೆದು ಮಸಾಲೆ ಮಾಡಿ, ಕತ್ತರಿಸಿಟ್ಟ ನಂದಿಗ್ರಾಮಕ್ಕೆ ಬೆರೆಸಿ ಅನಂತರ ಬಾಣಲೆಗೆ ಸೆಝ್ ಕಂಪೆನಿಯ ಎಣ್ಣೆಯನ್ನು ಸುರಿದು, ಕೆಳಗೆ ಜಾಗತೀಕರಣದ ಬೆಂಕಿಯನ್ನು ಹಚ್ಚಿ ನಿಧಾನಕ್ಕೆ ಒಂದೊಂದೇ ತುಂಡು ಕೋಳಿಯನ್ನು ಎಣ್ಣೆಗೆ ಇಳಿಸಿ. ತುಸು ಹೊತ್ತಲ್ಲೇ ಪರಿಮಳ ಘಮಘಮಿಸತೊಡಗುತ್ತದೆ. ಇದನ್ನು ಅಮೆರಿಕದ ಬುಶ್‌ಗೆ ಬಡಿಸಿದರೆ ಭಾರತದ ಕಮ್ಯುನಿಸ್ಟ್ ಪಕ್ಷದ ಗೌರವ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.
* * *
ಜೆ ಡಿಎಸ್ ರಾಗಿಮುದ್ದೆ
ಒಂದಿಷ್ಟು  ದೇವೇಗೌಡ ಕಂಪೆನಿಯ ಕಣ್ಣೀರನ್ನು ಸಂಗ್ರಹಿಸಿಟ್ಟುಕೊಳ್ಳಿ. ಆ ಕಣ್ಣೀರಿಗೆ ನೆಲದ ತಾಜಾ ಮಣ್ಣನ್ನು ಚೆನ್ನಾಗಿ ಬೆರೆಸಿ ಕಲಸಿ ಅಷ್ಟೇ ಪ್ರಮಾಣದಲ್ಲಿ ಒಳಮೀಸಲಾತಿ ಹಿಟ್ಟನ್ನು ಕಲಸಿ ಇಟ್ಟುಕೊಳ್ಳಿ. ಅಲ್ಪಸಂಖ್ಯಾತ ಕುರಿಗಳನ್ನು ಕಡಿದು, ಅದನ್ನು ದೇವೇಗೌಡ ಕಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ. ಮಾಂಸವನ್ನು ಚೆನ್ನಾಗಿ ಅರೆಯಿರಿ. ಆ ಬಳಿಕ ಜಾತ್ಯತೀತ ಮಸಾಲೆಯನ್ನು ಮಾಂಸಕ್ಕೆ ಚೆನ್ನಾಗಿ ಬೆರೆಸಿ. ಈ ಹಿಂದೆ ಜಾತ್ಯತೀತ ಮಸಾಲೆಯಿಲ್ಲದೆ ಅಡುಗೆ ಮಾಡಲು ಹೋಗಿ, ಅದು ರುಚಿ ಕೆಟ್ಟಿರುವುದರಿಂದ ಯಾವ ಕಾರಣಕ್ಕೂ ಜಾತ್ಯತೀತ ಮಸಾಲೆ ಉಪಯೋಗಿಸಲು ಮರೆಯಬೇಡಿ. ಆ ಬಳಿಕ ಮೀರಾಜುದ್ದೀನ್ ಸೊಪ್ಪು ಬಳಸಿ ಒಗ್ಗರಣೆಯನ್ನು ಕೊಡಿ. ಖೇಣಿಯನ್ನು ತೆಗೆದು ಚೆನ್ನಾಗಿ ಕೊಯ್ದು, ಪಾತ್ರೆಗೆ ಹಾಕಿ. ಇದೀಗ ರಾಗಿ ಮುದ್ದೆ ಸಿದ್ಧ. ಇದನ್ನು ದೇವೇಗೌಡ ಕಂಪೆನಿಯ ಕಣ್ಣೀರಲ್ಲಿ ಮುಳುಗಿಸಿ ತಿಂದರೆ ರುಚಿ ಹೆಚ್ಚು.
    ***
 ಸ್ರೀರಾಮ್‌ಸೇನಾ ಬಜ್ಜಿ

ಹೊಸ ಖಾದ್ಯವಾದರೂ ಕೂಡಾ ಬಿಜೆಪಿ ಕೇಸರಿ ಬಾತ್‌ನ ರುಚಿಯನ್ನೇ ಹೋಲುತ್ತದೆ. ಬಾಬಾಬುಡಾನ್‌ಗಿರಿ, ಮಂಗಳೂರು ಗಲಭೆ ಮೊದಲಾದ ಮಸಾಲೆಯ ಜೊತೆಗೆ ಗೋಮಾಂಸವನ್ನೇ ಹೆಚ್ಚು ಬಳಸಿ ಸಿದ್ಧಗೊಂಡ ಖಾದ್ಯ. ಇದು ಗೋಮಾಂಸ ಹೆಚ್ಚು ಹೆಚ್ಚು ಹಾಕಿದಷ್ಟು ಇದರ ರುಚಿ ಹೆಚ್ಚುತ್ತದೆ. ರುಚಿಯಾಗಿದೆಯೆಂದು ಇದನ್ನು ಹೆಚ್ಚು ತಿನ್ನುವಂತಿಲ್ಲ. ಇದನ್ನು ಹೆಚ್ಚು ಸೇವಿಸಿದರೆ ಅಲ್ಸರ್, ಕ್ಯಾನ್ಸರ್ ಮೊದಲಾದ ಕಾಯಿಲೆಗಳು ಬರಬಹುದು ಎಂದು ಆರೋಗ್ಯ ಸಚಿವ ಅಣ್ಣಾ ಮಣಿ ಈಗಾಗಲೇ ಎಚ್ಚರಿಸಿದ್ದಾರೆ. ಇದನ್ನು ಸ್ಪೂನ್‌ನ ಬದಲು ತ್ರಿಶೂಲವನ್ನು ಬಳಸಿ ತಿಂದರೆ ರುಚಿ ಹೆಚ್ಚು.
(ಎಪ್ರಿಲ್ 13, 2008 ರವಿವಾರ)

1 comment:

  1. ಬುಡ ಬುಡಕೆ ಬುಡ ಬುಡಿಕೆ ಬುಡ ಬುಡಕ್ಕೆ!?

    ReplyDelete