Sunday, December 29, 2013

ವಿದೇಶಗಳಲ್ಲಿ ಅಹಿಂದ ಚಳವಳಿಯ ಬಗ್ಗೆ ಅಧ್ಯಯನ ಮಾಡಲಿದ್ದೇವೆ...

 ವಾರ್ತಾ ಭಾರತಿ ದೈನಿಕದಲ್ಲಿ ರವಿವಾರ 29 ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ  

‘ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರಿ ಶಾಸಕರ ಪ್ರವಾಸಕ್ಕೆ ಜಯವಾಗಲಿ’ ಎಂದು ಎಲ್ಲರೂ ವಿಮಾನನಿಲ್ದಾಣದೆಡೆಗಿನ ಬಸ್ ಹತ್ತುತ್ತಿದ್ದಾಗ, ಅವರೆಡೆ ಯಲ್ಲೇ ನುಸುಳಿ ಪತ್ರಕರ್ತ ಎಂಜಲು ಕಾಸಿಯೂ ಬಸ್ ಹತ್ತಿ ಬಿಟ್ಟ. ಪತ್ರಕರ್ತ ಎಂಜಲು ಕಾಸಿಯನ್ನು ಕಂಡದ್ದೇ, ಎಲ್ಲ ಶಾಸಕರು ಬೆಕ್ಕು ಕಂಡವರಂತೆ ಆಡಿ, ಜೋತಿಷಿಗಳು ಕೊಟ್ಟ ಲಿಂಬೆ ಹುಳಿಯನ್ನು ಕೈಯಲ್ಲಿ ಹಿಡಿದುಕೊಂಡರು. ‘‘ಸಾರ್ ಪ್ರವಾಸಕ್ಕೆ ಹೋಗುತ್ತಿದ್ದೀರಾ’’ ಎಂಜಲು ಕಾಸಿ ಹಲ್ಲುಗಿಂಜಿ ಕೇಳಿ ಬಿಟ್ಟ. ಶಾಸಕರಿಗೆ ಸಿಟ್ಟು ಬುರ್ರೆಂದು ಬಂತು. ಪ್ರವಾಸ ಹೋಗುತ್ತಿದ್ದವರನ್ನು ಪ್ರವಾಸ ಹೋಗುತ್ತಿದ್ದೀರಾ ಎಂದು ಕೇಳಿದರೆ ಅಪಶಕುನವಲ್ಲವೆ? ಯಾರೂ ಉತ್ತರ ಕೊಡಲಿಲ್ಲ.

‘‘ಈ ಪ್ರವಾಸದಲ್ಲಿ ಅಹಿಂದ ಶಾಸಕರಿಗೆ ಪ್ರತ್ಯೇಕ ಮೀಸಲಾತಿ ಇದೆಯಂತೆ ಹೌದಾ?’’ ಕಾಸಿ ಕೇಳಿ ಬಿಟ್ಟ. ‘‘ಅದು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ. ನಾವು ರಾಜಕಾರಣಿಗಳೆಲ್ಲ ಒಂದೇ ಜಾತಿ...’’ ಮುಂದೆ ಕೂತಿದ್ದ ಶಾಸಕ ಹೇಳಿದ. ‘‘ರಾಜ್ಯದಲ್ಲಿ ಬರ ಇದೆ. ರಾಜ್ಯಪಾಲರು ಸಿಟ್ಟಾಗಿದ್ದಾರೆ. ಹೀಗಿರುವಾಗ ನೀವು ವಿದೇಶಕ್ಕೆ ಹೋಗಿ ಅದೇನು ಮಾಡ್ತೀರೀ?’’ ಕಾಸಿ ಕೇಳಿದ. ‘‘ನೋಡ್ರಿ. ಇದೊಂದು ರೀತಿ ಸಾಮಾಜಿಕ ನ್ಯಾಯ ಕೊಟ್ಟ ಹಾಗೆ. ನಾವು ಪ್ರಾಥಮಿಕ ಶಾಲೆಗೆ ಹೋಗು ತ್ತಿದ್ದಾಗ ನಮಗೆ ಪ್ರವಾಸದ ಸೌಲಭ್ಯ ಇರಲಿಲ್ಲ. ಪ್ರವಾಸಕ್ಕೆ ಮೀಸಲಾತಿ ಇರಲಿಲ್ಲ. ಇದೀಗ ಆ ಮೀಸಲಾತಿಯನ್ನು ಪಡೆದುಕೊಂಡು ಪ್ರವಾಸಗೈದು, ಅಲ್ಲಿ ವಿವಿಧ ಹೊಟೇಲ್‌ಗಳಲ್ಲಿ ಕುಳಿತು ಆ ದೇಶದ ರೈತರ ಕುರಿತಂತೆ ಅಧ್ಯಯನ ಮಾಡಲಿದ್ದೇವೆ...’’

‘‘ಸಾರ್ ಹೊಟೇಲ್‌ಗಳಲ್ಲಿ ಕುಳಿತು ಆ ದೇಶದ ರೈತರ ಅಧ್ಯಯನ ಹೇಗೆ ನಡೆಸಲಿದ್ದೀರಿ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೊಟೇಲ್‌ಗಳಲ್ಲಿ ವಿವಿಧ ಬಗೆಯ ಆಹಾರಗಳು ಒಂದೆಡೆ ಸಿಗುತ್ತದೆ. ರೈತರ ಬೆಳೆದ ಬೆಳೆಯಿಂದ ತಾನೆ ಹೊಟೇಲ್‌ನಲ್ಲಿ ಆಹಾರ ತಯಾರು ಮಾಡುವುದು. ಆ ಆಹಾರದ ರುಚಿಯನ್ನು ಸವಿದು, ಅಲ್ಲಿನ ರೈತರ ಕುರಿತಂತೆ ನಾವು ವರದಿಯನ್ನು ತಯಾರಿಸಲಿದ್ದೇವೆ...’’ ಅಷ್ಟರಲ್ಲಿ ಇನ್ನೊಬ್ಬ ಶಾಸಕ ನುಡಿದ ‘‘ಸ್ವಿಮ್ಮಿಂಗ್ ಫೂಲ್‌ನಲ್ಲಿ ಈಜಾಡಿ ಅಲ್ಲಿನ ನೀರಿನ ಬಗ್ಗೆ ಅಧ್ಯಯನ ಮಾಡಲಿದ್ದೇವೆ...’’

‘‘ಚಿಕನ್ ಸುಕ್ಕಾ, ಚಿಕನ್ ತಂದೂರಿ ತಿಂದು ಅಲ್ಲಿನ ಕೋಳಿ ಉದ್ಯಮಗಳ ಬಗ್ಗೆ ಅಧ್ಯಯನ ನಡೆಸಲಿ ದ್ದೇವೆ...’’ ‘‘ವಿವಿಧ ಮಾಲ್‌ಗಳಲ್ಲಿ ಶಾಪಿಂಗ್ ಮಾಡಿ, ಅಲ್ಲಿನ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ವರದಿ ತರಲಿದ್ದೇವೆ...’’ ತಮ್ಮ ಶಾಸಕರ ಅಧ್ಯಯನ ಕಂಡು ರೋಮಾಂಚನ ಗೊಡ ಕಾಸಿ. ಅಷ್ಟರಲ್ಲಿ ಕರಾವಳಿ ಶಾಸಕರೊಬ್ಬರು ಎದ್ದು ನಿಂತು ‘‘ಸಾರ್...ನಾನು ಕಡಲು ಕೊರೆತದ ಅಧ್ಯಯನಕ್ಕೆ ಹೋಗಲಿ ದ್ದೇನೆ....ಅಲ್ಲಿ ಕಡಲಿಗೆ ಹಾಕಿದ ಕಲ್ಲು ಗಳನ್ನು ಪರಿಶೀಲಿಸಿ, ಅದೇ ಕಲ್ಲುಗಳನ್ನು ಕರಾವಳಿಯ ಜನರ ತಲೆಗೂ ಹಾಕುವು ದರ ಬಗ್ಗೆ ಅಧ್ಯಯನ ನಡೆಸಲಿದ್ದೇನೆ....’’ ಎಂದರು.

ಕಾಸಿಗೆ ಸಂತೋಷವಾಯಿತು. ಕಡಲಿಗೆ ಕಲ್ಲು ಹಾಕಿ ವ್ಯರ್ಥ ಮಾಡುವುದರ ಬದಲು, ಜನರ ತಲೆಗೆ ಕಲ್ಲು ಹಾಕುವುದರೊಂದಿಗೆ ಜನರ ಸಮಸ್ಯೆಯನ್ನು ಶಾಶ್ವತವಾಗಿ ಇಲ್ಲವಾಗಿಸುವುದು ಅರ್ಥಪೂರ್ಣವಾಗಿದೆ ಎಂದು ಅನ್ನಿಸಿತು. ‘‘ಸಾರ್, ಮತ್ತೇನೇನು ಅಧ್ಯಯನ ಮಾಡಲಿ ದ್ದೀರಿ...’’ ಕಾಸಿ ಇನ್ನಷ್ಟು ಆಸಕ್ತಿಯಿಂದ ಕೇಳಿದ. ‘‘ವಿದೇಶಗಳಲ್ಲಿ ಅಹಿಂದ ಚಳವಳಿ ಎನ್ನುವ ಕುರಿತಂತೆ ಅಧ್ಯಯನ ಮಾಡಲಿದ್ದೇವೆ ಕಣ್ರೀ...’’ ನೋಡಿದರೆ ಯಾರೋ ಹಿಂದುಳಿದ ಶಾಸಕನಂತೆ ಕಾಣುತ್ತಿದ್ದ. ‘‘ಆದರೆ ಅಲ್ಲಿ ಜಾತಿಗಳು ಇಲ್ಲವಲ್ಲ ಸಾರ್?’’ ಕಾಸಿ ಪ್ರಶ್ನಿಸಿದ.

‘‘ಕರ್ನಾಟಕದ ರಾಜಕಾರಣಿಗಳು ಕಾಲಿಟ್ಟಲ್ಲೆಲ್ಲ ಜಾತಿಗಳು ತನ್ನಷ್ಟಕ್ಕೆ ಸೃಷ್ಟಿಯಾಗಿ ಬಿಡುತ್ತವೆ ಕಣ್ರೀ...ಜಾತಿಗಳು ಸೃಷ್ಟಿಯಾದಾಕ್ಷಣ ಅಲ್ಲಿನ ರಾಜಕಾರಣಿಗಳಿಗೆ ನಾವು ಜಾತಿ ರಾಜಕಾರಣದ ಬಗ್ಗೆ ಒಂದು ಸುದೀರ್ಘ ಉಪನ್ಯಾಸ ನೀಡಿ, ಜಾತಿಗಳನ್ನು ರಾಜಕೀಯವಾಗಿ ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದರ ಕುರಿತಂತೆ ಮಾರ್ಗದರ್ಶನ ನೀಡುತ್ತೇವೆ... ಕರ್ನಾಟಕದ ಅಹಿಂದ ಚಳವಳಿಗೆ ವಿದೇಶಿ ಅಹಿಂದ ಚಳವಳಿಯ ಜೊತೆಗೆ ಸಂಪರ್ಕವನ್ನು ಬೆಸೆಯುತ್ತೇವೆ...’’

ಕಾಸಿ ರೋಮಾಂಚನ ಗೊಂಡ. ಇದೊಂದು ಅತ್ಯುತ್ತಮವಾದ ಪ್ರವಾಸ ಎನ್ನಿಸಿತು. ಕಾಸಿಗೆ ಇನ್ನೊಂದು ನೆನಪಾಯಿತು ‘‘ಸಾರ್...ಈಗ ವಿದೇಶ ಗಳಲ್ಲಿ ತಪಾಸಣೆ ಜಾಸ್ತಿ. ಅಲ್ಲಿ ನಿಮ್ಮನ್ನು ಬಟ್ಟೆ ಬಿಚ್ಚಿ ತಪಾಸಣೆ ಮಾಡಿದರೆ ಅದು ಅವಮಾನವಲ್ಲವೆ?’’
ಶಾಸಕರು ಪಕಪಕ ನಗತೊಡಗಿದರು ‘‘ಬಟ್ಟೆ ಬಿಚ್ಚುವುದಕ್ಕೆ ಅವರಿಗೆ ಸಾಧ್ಯವೇ ಇಲ್ಲ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ...’’ ಒಕ್ಕೊರಲಲ್ಲಿ ಹೇಳಿದರು. ಕಾಸಿಗೆ ಹೆಮ್ಮೆಯೆನಿಸಿತು ‘‘ಅದು ಹೇಗೆ ಸಾರ್? ಅವರಿಗೆ ನಿಮ್ಮ ಬಗ್ಗೆ ಅಷ್ಟು ಗೌರವ?’’

ಶಾಸಕನೊಬ್ಬ ಕಾಸಿಯನ್ನು ಎಳೆದು ತನ್ನ ಸೀಟಿನ ಪಕ್ಕ ಕೂರಿಸಿ ಹೇಳಿದ ‘‘ನೋಡಿ, ವಿದೇಶಗಳಲ್ಲಿ ಬಟ್ಟೆ ಬಿಚ್ಚಿಸುವುದು ಈಗೀಗ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ನಾವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾವು ಬಟ್ಟೆ ಹಾಕಿದರೆ ತಾನೆ ಅವರು ಬಟ್ಟೆ ಬಿಚ್ಚಿಸುವುದು. ವಿದೇಶಗಳಲ್ಲಿ ವಿಮಾನದಿಂದ ಇಳಿದದ್ದೇ ನಾವೇ ನಮ್ಮ ನಮ್ಮ ಬಟ್ಟೆಗಳನ್ನು ಬಿಚ್ಚಿ ಬ್ಯಾಗಿನೊಳಗೆ ಹಾಕಿಕೊಳ್ಳುತ್ತೇವೆ. ಇದರಿಂದಾಗಿ ಅವರಿಗೂ ರಗಳೆಯಿಲ್ಲ.

ನಮಗೂ ಬಟ್ಟೆ ಬಿಚ್ಚಿಸಿದ ಅವಮಾನವಾಗುವುದಿಲ್ಲ...ಆಗಾಗ ಈ ನಾಡಿನ ಪತ್ರಕರ್ತರೇ ನಮ್ಮ ಬಟ್ಟೆ ಬಿಚ್ಚಿಸಿ ಸಾರ್ವಜನಿಕವಾಗಿ ಬೆತ್ತಲೆ ಮಾಡುತ್ತಿರುವಾಗ, ನಾವೇಕೆ ವಿದೇಶಗಳಲ್ಲಿ ನಗ್ನರಾಗುವುದಕ್ಕೆ ಹೆದರಬೇಕು...ಇಷ್ಟಕ್ಕೂ ಶ್ರವಣಬೆಳಗೊಳದ ಬೆತ್ತಲೆ ಗೋಮಟನನ್ನು ನೋಡಲು ಇದೇ ವಿದೇಶಿಯರು ಬರುತ್ತಾರೆ. ನಾವು ಶ್ರವಣಬೆಳಗೊಳದವರು ಎಂದರೆ, ತಕ್ಷಣ ನಮ್ಮನ್ನು ಬಿಟ್ಟು ಬಿಡುತ್ತಾರೆ...’’

ಮತ್ತೊಬ್ಬ ಶಾಸಕ ಧ್ವನಿಗೂಡಿಸಿದ ‘‘ನೋಡಿ, ವಿದೇಶದಲ್ಲಿ ಬಟ್ಟೆ ಬಿಚ್ಚಿಸುವುದರ ಕುರಿತಂತೆ ಅನಗತ್ಯ ವಿವಾದ ಮಾಡುವುದು ತಪ್ಪು. ನಾವೇ ಬಟ್ಟೆಯನ್ನು ಸ್ವತಃ ಬಿಚ್ಚಿದರೆ ಅವರು ಬಿಚ್ಚಿಸುವ ಕೆಲಸವೂ ಉಳಿಯುತ್ತದೆ. ಉಭಯ ದೇಶಗಳ ನಡುವೆ ಸಂಬಂಧ ಹೆಚ್ಚುತ್ತದೆ....’’ ‘‘ನೀವು ವಿದೇಶಕ್ಕೆ ಹೋದರೆ ಕರ್ನಾಟಕದ ಜನತೆಗೆ ಬೇರೇನು ಲಾಭ ಸಾರ್?’’ ಕಾಸಿ ಇನ್ನಷ್ಟು ಕೆದಕಿದ.

‘‘ನೋಡ್ರಿ...ರಾಜ್ಯದೊಳಗೆ ಶಾಸಕರಿದ್ದರೆ ಅವರು ಆ ಅವ್ಯವಹಾರ ಈ ಅವ್ಯವಹಾರ ಎಂದೂ ಸಿಕ್ಕಿಹಾಕಿ ಕೊಂಡು ಸರಕಾರಕ್ಕೂ, ಜನರಿಗೂ ತಲೆನೋವು ಆಗುತ್ತಾರೆ. ಜನಪ್ರತಿನಿಧಿಗಳು ಓಡಾಡುವಾಗ ಅನವಶ್ಯಕ ಟ್ರಾಫಿಕ್ ಸಮಸ್ಯೆ. ನಾವು ವಿದೇಶಗಳಲ್ಲಿ ಅಧ್ಯಯನ ಮಾಡುತ್ತಾ ಇದ್ದರೆ ಜನರೂ ಒಂದಿಷ್ಟು ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಾಗುತ್ತದೆ. ಸರಕಾರವೂ ಯಾವುದೇ ಅವ್ಯವಹಾರದಲ್ಲಿ ಸಿಲುಕಿಕೊಳ್ಳದೆ ನೆಮ್ಮದಿಯಿಂದ ಇರುತ್ತದೆ...’’ ಬೆಂಗಳೂರಿನ ಶಾಸಕನೊಬ್ಬ ವಿವರಿಸಿದ.

 ಎಂಜಲು ಕಾಸಿಗೆ ಸರಿ ಅನ್ನಿಸಿತು ‘‘ರಾಜ್ಯಪಾಲರು ನಿಮ್ಮ ಪ್ರವಾಸದಿಂದ ಸಿಟ್ಟಾಗಿದ್ದಾರಂತಲ್ಲ...’’ ಕೇಳಿದ.
‘‘ಪಾಪ...ಅವರನ್ನೂ ಯಾವುದಾದರೂ ವಿದೇಶಿ ರಾಯಭಾರಿಯಾಗಿ ರೆಕಮಂಡ್ ಮಾಡಿದ್ದಿದ್ರೆ ಅವರೂ ಪ್ರವಾಸಕ್ಕೆ ಬೆಂಬಲ ನೀಡುತ್ತಿದ್ದರೋ ಏನೋ...’’ ಶಾಸಕರು ಬೇಜಾರು ವ್ಯಕ್ತಪಡಿಸಿದರು. ಅಷ್ಟರಲ್ಲಿ ಸಿದ್ದರಾಮಯ್ಯ ಕೈಯಲ್ಲಿ ಬೆತ್ತ ಹಿಡಿದುಕೊಂಡು ಬಸ್ಸನ್ನೇರಿದರು ‘‘ಚುನಾವಣೆ ಹತ್ತಿರಬಂತು...ರಾಜ್ಯದ ಗ್ರಾಮ ಗ್ರಾಮಕ್ಕೆ ಪ್ರವಾಸ ಮಾಡಿ ಎಂದರೆ ನೀವಿಲ್ಲಿ....ವಿದೇಶ ಪ್ರವಾಸಕ್ಕೆ ಹೊರಟಿದ್ದೀರ...ಇಳೀರಿ ಕೆಳಗೆ’’ ಎಂದು ಸಿದ್ದರಾಮಯ್ಯನವರು ಉಗ್ರವಾಗಿ ಬೆತ್ತ ಬೀಸಿದರು.
ಶಾಸಕರೆಲ್ಲ ‘ಬದುಕಿದೆಯಾ ಬಡಜೀವ’ ಎಂದು ಕಿಟಕಿಯಿಂದ ಹಾರಿ, ಸಿಎಂ ವಿರುದ್ಧ ದೂರು ಹೇಳಲು ದಿಲ್ಲಿ ವಿಮಾನ ಹತ್ತಿದರು.
ರವಿವಾರ - ಡಿಸೆಂಬರ್-29-2013

No comments:

Post a Comment