Sunday, March 30, 2014

ಗುಜರಾತಿನ ಮೊಟ್ಟೆ ನೋಡಿದ್ದೀರಾ....!

ಮಾರ್ಚ್ 30 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

‘‘ಅಭಿವೃದ್ದಿ ನೋಡಿ... ಅಭಿವೃದ್ಧಿ ನೋಡಿ...ಗುಜರಾತ್ ಅಭಿವೃದ್ಧಿ ನೋಡಿ....ಗುಜರಾತ್ ರೈತರನ್ನು ನೋಡಿ...ಗುಜರಾತ್ ಉದ್ಯಮವನ್ನು ನೋಡಿ...ಗುಜರಾತ್ ಸೆಕ್ಯುಲರಿಸಂ ನೋಡಿ...ಗುಜರಾತ್ ತೆಂಗಿನಕಾಯಿ ನೋಡಿ...ಗುಜರಾತ್ ಲಿಂಬೆಹಣ್ಣು ನೋಡಿ...ಬನ್ನಿ....ಬನ್ನಿ...’’

ಚುನಾವಣಾ ಸಂತೆಯಲ್ಲಿ ಮೋದಿ ಬ್ರಿಗೇಡ್‌ನ ನರಕವರ್ತಿ ಬೇಲೆಸೂಲಿಯವರು ತಮ್ಮ ಡಮರುಗವನ್ನು ತಿರುಗಿಸಿ ಜಾಗೋ ಮಾಡುತ್ತಿದ್ದರು. ಎಲ್ಲರೂ ಕುತೂಹಲದಿಂದ ನರಕವರ್ತಿ ಬೇಲಿಸೂಲಿ ಯವರ ಜಾದೂ ನೋಡುವುದಕ್ಕೆ ಸುತ್ತುವರಿದರು.

‘‘ಗುಜರಾತ್ ದೇಶಪ್ರೇಮ ನೋಡಿ...ಗುಜರಾತ್‌ನ ಅಣೆಕಟ್ಟು ನೋಡಿ...ಗುಜರಾತ್ ಬಿಕ್ಕಟ್ಟು ನೋಡಿ...’’ ಎಂದು ಟುರ್ರ್‌ ಟುರ್ರ್‌ ಎಂದು ತಿರುಗಿಸುತ್ತಿರುವಾಗ ಅಲ್ಲಿಗೆ ಪತ್ರಕರ್ತ ಎಂಜಲು ಕಾಸಿಯ ಆಗಮನವಾಯಿತು. ‘‘ಸಾರ್ ಗುಜರಾತ್‌ನ ಕೋಳಿ ಮೊಟ್ಟೆಯನ್ನು ತೋರಿಸುತ್ತೀರಾ...’’ ಕನ್ನಡದ ಬಡಪಾಯಿ ಕೋಳಿ ಸಾಕಣೆಗಾರನೊಬ್ಬ ಆಸೆಯಿಂದ ನರಕವರ್ತಿ ಬೇಲೆ ಸೂಲಿಯವರಲ್ಲಿ ಕೇಳಿದ.

‘‘ತೋರಿಸುವೆ...ತೋರಿಸುವೆ...ಸಹನೆ ಯಿಂದಿರಿ...ಮೋದಿಗೆ ಮತ ಹಾಕಿ...ಮೋದಿಯ ಅಭಿವೃದ್ಧಿಯನ್ನು ಕರ್ನಾಟಕಕ್ಕೂ ತರೋಣ...ನೋಡಿ ಗುಜರಾತ್‌ನ ಕೋಳಿಮೊಟ್ಟೆ...’’ ನೋಡಿದರೆ ರುಬ್ಬುವ ಕಲ್ಲಿನಂತೆ ಭಾಸವಾಗುವ ಅದೇನೋ ಅಲ್ಲಿತ್ತು... ‘‘ಸಾರ್...ಅದು ರುಬ್ಬುವ ಕಲ್ಲು ಅಲ್ಲವಾ?’’ ಪತ್ರಕರ್ತ ಎಂಜಲು ಕಾಸಿ ಅನುಮಾನದಿಂದ ಕೇಳಿದ. ‘‘ಅಭಿವೃದ್ಧಿ ಕಣ್ರೀ...ಅಭಿವೃದ್ಧಿ. ಗುಜರಾತ್‌ನಲ್ಲಿ ಕೋಳಿಗಳು ರುಬ್ಬುವ ಕಲ್ಲಿನಷ್ಟು ದೊಡ್ಡ ಮೊಟ್ಟೆಯನ್ನು ಇಡುತ್ತವೆ. ಈ ಒಂದು ಮೊಟ್ಟೆಯಿಂದ ಇಡೀ ಗುಜರಾತ್‌ಗೇ ಆಮ್ಲೆಟ್ ಮಾಡಿ ಬಡಿಸಬಹುದು...ಈ ಕೋಳಿಮೊಟ್ಟೆಗಾಗಿ ಅದೆಷ್ಟೋ ದೇಶಗಳ ಉದ್ಯಮಿಗಳು ಬಂಡವಾಳ ಹೂಡಲು ಗುಜರಾತ್‌ಗೆ ಆಗಮಿಸುತ್ತಿದ್ದಾರೆ...ಗೊತ್ತೇನ್ರೀ.....’’ ‘‘ಸಾರ್...ಮೊಟ್ಟೆಯೇ ಇಷ್ಟು ದೊಡ್ಡದಿದ್ದರೆ ಕೋಳಿ ಎಷ್ಟು ದೊಡ್ಡದಿರಬೇಡ?’’ ಕಾಸಿ ಅಚ್ಚರಿ ಯಿಂದ ಕೇಳಿದ.

ಬೇಲೆಸೂಲಿ ತನ್ನ ಜಾಗೋ ಭಾರತ್ ಮುಂದು ವರಿಸಿದ ‘‘ಹೌದು ಕಣ್ರೀ...ಅದು ಗುಜರಾತ್ ಕೋಳಿಗಳು. ದೇಶಪ್ರೇಮಿ ಕೋಳಿಗಳು. ಮೋದಿ ಯಿಂದಾಗಿ ಅವುಗಳು ದೇಶಪ್ರೇಮವನ್ನು ಕಲಿತು ಕೊಂಡಿದೆ. ದೊಡ್ಡ ದೊಡ್ಡ ಮೊಟ್ಟೆಯಿಟ್ಟು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಂಡಿವೆ...ಆದರೆ ಸಿದ್ದರಾಮಯ್ಯ ಅವರ ರಾಜ್ಯದ ಕೋಳಿಗಳು ಮೊಟ್ಟೆಯನ್ನೇ ಇಡುವುದಕ್ಕೆ ಸೋಮಾರಿತನ ಮಾಡಿವೆ...ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಿ ದರೆ ನಮ್ಮ ಕೋಳಿಗಳೂ ಇಷ್ಟು ದೊಡ್ಡ ಮೊಟ್ಟೆಯನ್ನು ಹಾಕಿ ದೇಶವನ್ನು ಅಭಿವೃದ್ಧಿಗೊಳಿಸುತ್ತದೆ...’’

ಬೇಲೆಸೂಲಿಯ ಮಾತನ್ನು ಕೇಳಿ ಎಂಜಲು ಕಾಸಿ ರೋಮಾಂಚನ ಗೊಂಡ. ‘‘ಮೊಟ್ಟೆಯೇ ಇಷ್ಟು ದೊಡ್ಡದಿದ್ದರೆ ಕೋಳಿ ಎಷ್ಟು ದೊಡ್ಡದಿರಬಹುದು ಸಾರ್...’’ ಕಾಸಿ ಕೇಳಿದ. ‘‘ತುಂಬಾ ಅದ್ಭುತವಾದ, ದೇಶಪ್ರೇಮ ಭರಿತವಾದ ಪ್ರಶ್ನೆಯನ್ನು ಕೇಳಿದಿರಿ. ನಿಮಗೆ ಅಭಿನಂದನೆಗಳು. ಗುಜರಾತ್‌ನ ಕೋಳಿಗಳು ರಾಜಸ್ತಾನದಲ್ಲಿರುವ ಒಂಟೆಯಷ್ಟು ದೊಡ್ಡ ದಿರುತ್ತವೆ...ಕೆಲವು ಹೆಣ್ಣು ಕೋಳಿಗಳು ಹಾಲನ್ನೂ ಕೊಡುತ್ತವೆ...ಗುಜರಾತ್‌ನಲ್ಲಿ ಅಮುಲ್ ಕಂಪೆನಿಗಳಿಗೆ ಈ ಹಾಲು ಪೂರೈಕೆಯಾಗುತ್ತವೆ...ಒಂದು ವೇಳೆ ನರೇಂದ್ರಮೋದಿಯವರು ದೇಶದ ಪ್ರಧಾನಿಯಾದರೆ ಈ ಹಾಲು ಕೊಡುವ ಕೋಳಿ ಗಳಲ್ಲಿ ಕೆಲವನ್ನು ಕರ್ನಾಟಕಕ್ಕೆ ನೀಡುವ ಬಗ್ಗೆ ತುಂಬಾ ಆಸಕ್ತಿ ತಳೆದಿದ್ದಾರೆ...’’ ಬೇಲೆಸೂಲಿ ತನ್ನ ಬೇಳೆ ಬೇಯಿಸುತ್ತಿರುವಾಗ ಕಾಸಿ ಮೆಲ್ಲನೆ ಕೇಳಿದ ‘‘ಅಲ್ಲ ಸಾರ್...ಅದನ್ನೊಮ್ಮೆ ಮುಟ್ಟಿ ನೋಡಬಹುದೆ?’’

ಬೇಲೆ ಸೂಲಿ ಸಿಟ್ಟಾದರು ‘‘ಮುಟ್ಟಿ ನೋಡುವುದಕ್ಕೆ ಅದು ಕಾಂಗ್ರೆಸ್ ಅಭ್ಯರ್ಥಿ ನಗ್ಮಾ ಅವರ ಕೆನ್ನೆಯಲ್ಲ. ಗುಜರಾತ್‌ನ ಅಭಿವೃದ್ಧಿಯ ಸಂಕೇತವಾಗಿರುವ ಮೊಟ್ಟೆ ಅದು. ಅದರೊಳಗೆ ಗುಜರಾತ್‌ನ ಕನಸು ಗಳಿವೆ. ಆ ಕನಸುಗಳು ಮುಂದಿನ ಚುನಾವಣೆಯಲ್ಲಿ ಮರಿ ಹಾಕಲಿವೆ...’’ ಎನ್ನುತ್ತಾ ‘‘ಯಧಾ ಯಧಾಹಿ ಧರ್ಮಸ್ಯ...’’ ಎಂದು ಸಂಸ್ಕೃತ ಶ್ಲೋಕವನ್ನು ಉಗುಳ ತೊಡಗಿದರು. ಕಾಸಿಗೆ ಹೆದರಿಕೆಯಾಯಿತು. ಸಂಸ್ಕೃತದಲ್ಲಿ ಶಾಪ ಹಾಕುತ್ತಿದ್ದಾರೋ ಎಂದು ಹೆದರಿ ವಿಷಯಾಂತರ ಮಾಡಿದ ‘‘ಸಾರ್...ಗುಜರಾತ್‌ನ ಅಭಿವೃದ್ಧಿಗೆ ಉದಾಹರಣೆಯಾಗಿ ಬೇರೇನೇನು ಇದೆ...’’

ಬೇಲೆ ಸೂಲಿಯವರಿಗೆ ಸಂತೋಷವಾಯಿತು ‘‘ನೋಡಿ...ಇವನೇ ಗುಜರಾತಿನ ರೈತ...ಮೈತುಂಬಾ ಚಿನ್ನಾಭರಣಗಳನ್ನು ಧರಿಸಿಕೊಂಡಿದ್ದಾನೆ...ದೇಹ ದಷ್ಟಪುಷ್ಟವಾಗಿದೆ...ಕರ್ನಾಟಕದ ರೈತರು ಪೀಚಲು ಆಗಿದ್ದಾರೆ...ಧರಿಸುವುದಕ್ಕೆ ಬಟ್ಟೆಯೂ ಇಲ್ಲ...ಆದರೆ ಗುಜರಾತ್‌ನ ರೈತರು ಬಹಳ ಶ್ರೀಮಂತರು...’’ ಗುಜರಾತ್‌ನ ರೈತನನ್ನು ಕಾಸಿ ಕಣ್ಣು ಪಿಳುಕಿಸಿ ನೋಡಿದ್ದೇ ಕಾಸಿಗೆ ಅನುಮಾನ ಬಂತು. ಇವನನ್ನು ಎಲ್ಲೋ ನೋಡಿದ್ದೇನಲ್ಲ....‘‘ಸಾರ್...ಇವನು ಸಂಗೀತ ನಿರ್ದೇಶಕ ಬಪ್ಪಿ ಲಹರಿ ಥರ ಇದ್ದಾನೆ...ಇವನು ಗುಜರಾತ್‌ನ ರೈತ ಆಗಲು ಹೇಗೆ ಸಾಧ್ಯ...?’’

‘‘ಗುಜರಾತ್‌ನ ರೈತರೆಲ್ಲರೂ ಬಪ್ಪಿ ಲಹರಿ ಥರವೇ ಇರ್ತಾರೆ...ಮೈತುಂಬಾ ಬಂಗಾರ...ಯಾಕೆಂದರೆ ಅವರ ಗದ್ದೆಯಲ್ಲಿ ಅಕ್ಕಿ ಬೆಳೆಯುವುದಿಲ್ಲ. ಬೇರೆ ಬೇರೆ ಥರದ ಚಿನ್ನದ ಸರಗಳನ್ನು ಬೆಳೆಯುತ್ತಾರೆ...ಕೆಲವನ್ನು ಮಾರಿ ಉಳಿದದ್ದನ್ನು ಕತ್ತಿಗೆ, ಸೊಂಟಕ್ಕೆ ಬೆರಳಿಗೆ ಸುತ್ತಿಕೊಳ್ಳುತ್ತಾರೆ...’’ ‘‘ಗುಜರಾತಿನಲ್ಲಿ ಪಿಜ್ಜಾ ತಿನ್ನುತ್ತಾರೆ ಕಣ್ರೀ...ಶ್ರೀಮಂತ ರೈತರಲ್ಲವೆ? ಅವರು ಪಿಜ್ಜಾವನ್ನು ಬೆಳೆದು ಮಾರುತ್ತಾರೆ. ಕರ್ನಾಟಕದಲ್ಲಿರುವ ಪಿಜ್ಜಾ ಹಟ್‌ಗಳಿಗೆ ಪಿಜ್ಜಾ ಸಪ್ಲೈ ಮಾಡೋದೆ ಗುಜರಾತ್‌ನ ರೈತರು ಕಣ್ರೀ...ದೇಶಪ್ರೇಮಿ ರೈತರು ಕಣ್ರೀ...ಮಳೆಗಾಲದಲ್ಲಿ ಗದ್ದೆಯಲ್ಲಿ ಚಿನ್ನ, ಬೆಳ್ಳಿ ಬೆಳೆಯುತ್ತಾರೆ. ಚಳಿಗಾಲದಲ್ಲಿ ತಿನ್ನುವುದಕ್ಕಾಗಿ ಪಿಜ್ಜಾ ಬೆಳೆಯುತ್ತಾರೆ. ಬೇಸಿಗೆ ಗಾಲದಲ್ಲಿ ಗಡಿಯಲ್ಲಿ ಹೋಗಿ ದೇಶ ಕಾಯ್ತಾರೆ....’’
ಕಾಸಿಗೆ ಇಡೀ ಚುನಾವಣಾ ಸಂತೆಯೇ ಗರಗರ ತಿರುಗಿದಂತಾಯಿತು. ‘‘ಆದರೆ ಇವರು ಟಿವಿಯಲ್ಲಿ ಹಾಡು ಹೇಳುವುದನ್ನು ನಾನು ಕೇಳಿದ್ದೇನೆ...ಇವನು ಬಪ್ಪಿ ಲಹರಿ ಸಾರ್...’’ ಕಾಸಿ ಹೇಳಿದ.

ಬೇಲೆಸೂಲಿಗೆ ಸಿಟ್ಟು ಬಂತು ‘‘ದೇಶದ್ರೋಹಿಗಳ ಸಂಚು ಕಣ್ರೀ...ಆದುದರಿಂದ ನರೇಂದ್ರ ಮೋದಿಯ ಸಾಧನೆಯನ್ನು ಮುಚ್ಚಿ ಹಾಕಲು ನಿಮ್ಮಿಂದ ಇಂತಹ ಮಾತನ್ನಾಡಿಸುತ್ತಾರೆ... ಗುಜರಾತ್‌ನ ರೈತರು ಹಾಡನ್ನೂ ಹಾಡುತ್ತಾರೆ ಕಣ್ರೀ....ಅವರು ಹುಟ್ಟು ಸಂಗೀತಗಾರರು...ಅವರು ಬೇಕಾದ್ರೆ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ಗಳಾಗಿಯೂ ಭಾಗವಹಿಸುತ್ತಾರೆ.

ಯಾಕೆಂದರೆ ಗುಜರಾತ್ ಸಂಪೂರ್ಣ ಅಭಿವೃದ್ಧಿ ಹೊಂದಿದೆ....ಗುಜರಾತ್‌ನ ರೈತರು ಹುಟ್ಟು ದೇಶಪ್ರೇಮಿಗಳು...ನೀವು ಬಾಯಿ ಮುಚ್ಚದೇ ಇದ್ದರೆ ಗುಜರಾತಿ ದೇಶಪ್ರೇಮಿ ಯುವಕರು ನಿಮ್ಮ ಬಾಯಿ ಮುಚ್ಚಿಸುತ್ತಾರೆ ಎಚ್ಚರಿಕೆ...’’ ಕಾಸಿ ಬಾಯಿ ಮುಚ್ಚಿದ. ಈಗ ನರಕವರ್ತಿ ಬೇಲೆಸೂಲಿ ತನ್ನ ಜೇಬಿನಿಂದ ಮೊಟ್ಟೆಯಾಕಾರದ ಅದೇನನ್ನೋ ಹೊರಗೆ ತೆಗೆದ ‘‘ಇದೇನು ಹೇಳಿ...’’
ಸಂತೆಯಲ್ಲಿ ಸೇರಿದ್ದ ಎಲ್ಲರೂ ಒಂದಾಗಿ ಹೇಳಿದರು ‘‘ಕೋಳಿ ಮೊಟ್ಟೆ...’’

‘‘ನಾನು ಮೊದಲು ಹಾಗೆ ತಿಳಿದುಕೊಂಡಿದ್ದೆ. ಸತ್ಯ ಗೊತ್ತಾದದ್ದೇ ನಾನು ಮೋದಿಯ ಅಭಿಮಾನಿ ಯಾಗಿ ಬಿಟ್ಟೆ. ಇದು ಮೊಟ್ಟೆ ಅಲ್ಲ ಕಣ್ರೀ...ಗುಜರಾತಿನ ರೈತರು ಬೆಳೆದಿರುವ ಗೋದಿಯ ಕಾಳುಗಳು...ಒಂದು ಕಾಳು ಮೊಟ್ಟೆಯಷ್ಟು ದೊಡ್ಡದು. ಒಂದು ಚಪಾತಿ ಮಾಡಲು ಗುಜರಾತಿ ನಲ್ಲಿ ಬೆಳೆದ ಎರಡು ಗೋದಿ ಕಾಳುಗಳು ಸಾಕು. ಇಂದು ಗುಜರಾತಿನಲ್ಲಿ ಎಲ್ಲರೂ ಹೊಟ್ಟೆ ತುಂಬಾ ತಿಂದು ತೇಗಿ ಸುಖವಾಗಿದ್ದಾರೆ. ಬೇರೇನು ಕೆಲಸ ಇಲ್ಲ ಎಂದು ಹೊಡೆದಾಡಿಕೊಳ್ಳುತ್ತಾರೆ. ಅದನ್ನೇ ದೊಡ್ಡದು ಮಾಡಿ ಕೋಮುಗಲಭೆ ಎಂದು ಕಾಂಗ್ರೆಸ್‌ನೋರು ಗಲಭೆ ಎಬ್ಬಿಸಿದ್ದಾರೆ....’’

‘‘ಗುಜರಾತಿನ ತೆಂಗಿನ ಕಾಯಿ ಗೋಲಗುಮ್ಮಟ ದಷ್ಟು ದೊಡ್ಡದಿರುತ್ತದೆ. ಅಲ್ಲಿ ಒಂದು ತೆಂಗಿನ ಕಾಯಿ ಒಂದು ವರ್ಷಕ್ಕೆ ಸಾಕಾಗತ್ತೆ. ಅದನ್ನು ಹೊತ್ತುಕೊಂಡು ಬರುವುದು ಕಷ್ಟವೆಂದು ಇಲ್ಲಿಗೆ ತರಲಿಲ್ಲ...ಗುಜರಾತಿನ ದನಗಳು ಕೊಡುವ ಹಾಲು ಬೆಣ್ಣೆಯಷ್ಟು ಗಟ್ಟಿಯಾಗಿರುತ್ತೆ....ಅಲ್ಲಿಯ ದನಗಳು ಬೆಳಗ್ಗೆ ಎದ್ದು ವಂದೇಮಾತರಂ ಹಾಡನ್ನು ರಾಗವಾಗಿ ಹಾಡುತ್ತೆ...ಯಾಕೆಂದರೆ ಅವುಗಳು ಗುಜರಾತಿನ ದೇಶ ಪ್ರೇಮಿ ದನಗಳು ಕಣ್ರೀ...ದನಗಳಿಗೆ, ಕೋಳಿ ಗಳಿಗೆ, ತೆಂಗಿನಮರಗಳಿಗೆ ಮೋದಿಯ ಮಹತ್ವ ಗೊತ್ತು. ಆದರೆ ನಮಗೆ ಮಾತ್ರ ಇನ್ನೂ ಗೊತ್ತಾಗಿಲ್ಲ ಕಣ್ರೀ...’’

ಅಷ್ಟರಲ್ಲಿ ಕಾಸಿ ಕೇಳಿದ ‘‘ಸಾರ್...ಗುಜರಾತ್‌ನಲ್ಲಿ ರೈಲುಗಳು ಹಳಿಯಿಲ್ಲದೆಯೇ ಓಡುತ್ತದೆಯಂತೆ ಹೌದಾ...’’
‘‘ಹೌದು ಕಣ್ರೀ...ಹೌದು...’’ ಎಂದು ಬೇಲೆಸೂಲಿ ಏನೋ ಹೇಳಲು ಹೊರಟವನಿಗೆ ಅನುಮಾನ ಬಂದು ಕಾಸಿಯನ್ನು ನೋಡಿದ. ಕಾಸಿ ಹಳಿತಪ್ಪಿದ ರೈಲಿನಂತೆ ಅಲ್ಲಿಂದ ದಡಬಡನೆ ಓಡತೊಡಗಿದ.

No comments:

Post a Comment