Tuesday, May 19, 2015

ಹಲೋ.....ನಾನು ಯಾರು...ನೀನೇ ಹೇಳು ನೋಡೋಣ?

ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ಇದ್ದಾಗ ಬರೆದ ಬುಡ ಬುಡಿಕೆ. ಸೆಪ್ಟೆಂಬರ್ 18, 2005 ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

‘‘ಹಲೋ...’’
‘‘ಹ್ಯಾಂಗಿದ್ದೀಯ ದೇವು....’’
‘‘ಹಲೋ....ಯಾರು ಮಾತಾಡ್ತಾ ಇರೋದು?’’
‘‘ನೀನೇ ಹೇಳು ನೋಡೋಣ...ನಾನ್ಯಾರು?’’
‘‘ಹಿಂಗೆ ನಿದ್ದೆಯಿಂದ ನನ್ನನ್ನು ಎಬ್ಬಿಸಿ ತೊಂದರೆ ಕೊಡೋದು ನೋಡಿದ್ರೆ ನೀನು ಆ ಕುರುಬ ಸಿದ್ಧರಾಮಯ್ಯನೇ ಇರ್ಬೇಕು...’’
‘‘ಛೇಛೇ...ಸಿದ್ಧರಾಮಯ್ಯ ಫೋನ್ ಮಾಡೋದಾಗಿದ್ರೆ ಅಹಿಂದ ಯಾಕೆ ಹುಟ್ತಾ ಇತ್ತು? ಅವರು ಫೋನ್ ಮಾಡ್ತ ಇಲ್ಲ ಅಂತಾ ತಾನೆ ಅವರನ್ನು ನೀವು ಹೊರಗೆ ಹಾಕಿದ್ರಿ. ಸರಿಯಾಗಿ ಯೋಚ್ನೆ ಮಾಡು...ನೀನೇ ಹೇಳು...ನೀನು ನನ್ನನ್ನು ನೋಡಿದೀಯ. ಪ್ರೀತಿಯಿಂದ ಮಾತಾನಾಡಿದ್ದೀಯ...’’
‘‘ಪ್ರೀತಿಯಿಂದ ಮಾತನಾಡಿದ್ದೀನಾ. ಹಂಗಾದ್ರೆ ನೀನು ನನ್ನ ಮಗ ಕುಮಾರ ಸ್ವಾಮೀನೇ ಆಗಿರ್ಬೇಕು?’’
‘‘ಯಾವಾಗ ನೋಡಿದ್ರೂ ಮಕ್ಕಳ ಜಪ ಮಾಡ್ಕಂತೀಯಲ್ಲ. ಜಗತ್ತಿನಲ್ಲಿ ಯಾರಿಗೂ ಹುಟ್ಟದ ಮಕ್ಳು ನಿಂಗೆ ಹುಟ್ಟಿದ್ಯಾ... ಕೆಲವು ಕ್ಲೂ ಕೊಡ್ತೀನಿ ಓಕೇನಾ...?’’
‘‘ಕ್ಲೂ ಕೊಡ್ತೀಯ, ಹಂಗಾದ್ರೆ ನೀನು ಕರೋಡ್ಪತಿ ಅಮಿತಾಬಚ್ಚನ್ನೇ ಇರ್ಬೇಕು...ಕರೆಕ್ಟ್ ತಾನೆ...’’
‘‘ನಿಂಗೆ ಜನರಲ್ ನಾಲೆಜ್ಜು ಇಲ್ಲ ಅನ್ನೋದು ಲೋಕಕ್ಕೇ ಗೊತ್ತು. ಇನ್ನು ಅಮಿತಾಬ್‌ಗೆ ಗೊತ್ತಿರಾಕಿಲ್ವ?ಅವನ್ಯಾಕೆ ಫೋನ್ ಮಾಡ್ತಾನೆ ಬಿಡು’’
‘‘ಸರಿ ಬಿಡು ಹಂಗಾದ್ರೆ ಕ್ಲೂ ಕೊಡು...’’
‘‘ಚುನಾವಣೆ ಹೊತ್ತಲ್ಲಿ ನಾನು ನಿಂಗೆ ಬೇಕೇ ಬೇಕು...’’
‘‘ಹಂಗಾದ್ರೆ ಹಾಸನದ ಯಾವುದೋ ಗಲ್ಲಿಯ ಪುಂಡ ಪಟಾಲಾಂನ ಜನ ಇರ್ಬೇಕು. ಈಗ ಯಾಕೆ ಫೋನ್ ಮಾಡ್ತಿದ್ದೀಯಾ? ಚುನಾವಣೆ ಎನೌನ್ಸ್ ಆಗಿಲ್ವಲ್ಲ. ಹಂಗೇನಾದ್ರು ಎನೌನ್ಸ್ ಆದ್ರೆ ನಾನೇ ಹೇಳಿ ಕಳುಹಿಸ್ತೀನಿ, ಫೋನ್ ಮಡಗು...’’
‘‘ತಥ್ ನಿನ್ನ...ಮಾತೆತ್ತಿದ್ರೆ ನಿನ್ನ ರಾಜಕೀಯ ವರಸೆ ತೋರುಸ್ತೀಯಲ್ಲ... ಅವ್ನಲ್ರೀ ನಾನು...’’
‘‘ಅಲ್ವಾ? ಹಂಗಾರೆ... ಬೇರೇನಾದ್ರೂ ಕ್ಲೂ ಕೊಡು....’’
‘‘ನಾನಿಲ್ಲ ಅಂದ್ರೆ ನೀನಿಲ್ಲ...ಈಗ ಹೇಳು ನೋಡೋಣ ನಾನ್ಯಾರೂ...’’
‘‘ಈಗ ಗೊತ್ತಾಯ್ತು ಬಿಡಿ....ಮೊದಲೇ ಹೇಳೋಕಾಗಲ್ವೇನ್ರಿ....ನೀವು ಬೆಳ್ತಂಗಡಿಯಲ್ಲಿ ಕಳೆದ ಬಾರಿ ಚಂಡಿಕಾ ಹೋಮ ಮಾಡಿದ್ರಲ್ಲಾ...ಆ ಕಡೆ ಭಟ್ರಲ್ವಾ’’
‘‘ಅಲ್ಲರೀ....’’
‘‘ಹಂಗಾದ್ರೆ...ಕಳೆದ ತಿಂಗಳು ಕೊಲ್ಲೂರಿನಲ್ಲಿ ನನಗೆ ಒಂದು ತಾಯತ ಕೊಟ್ರಲ್ಲಾ ಆ ಜೋಯಿಸರಲ್ವಾ...’’
‘‘ಛೆ...ಛೆ..ಛೆ.. ಅಲ್ಲಾರೀ...’’
‘‘ಹಂಗಾದ್ರೆ ಸಾವಿರ ಕಂಟಕಗಳಿವೆ ಅಂತ ಕಳೆದವಾರ ನನ್ನ ಮನೇಲಿ ಹೋಮ ಮಾಡಿದ್ರಲ್ಲಾ... ಆ ಭಟ್ರಲ್ವಾ...’’
‘‘ಊ...ಹುಂ..ಅಲ್ವೇ ಅಲ್ಲಾ...’’
‘‘ಹಂಗಾದ್ರೆ ಕಳೆದ ಬಾರಿ ಸಿದ್ದರಾಮಯ್ಯರಿಗೆ ಮಾಟ ಮಾಡಿ ನನ್ನಿಂದ 1,201 ರೂಪಾಯಿ ಇಸ್ಕೊಂಡ್ರಲ್ಲಾ...ಆ ಮಂತ್ರವಾದಿಯಿರ್ಬೇಕು...’’
‘‘ತಥ್...
‘‘ಅದೂ ಅಲ್ಲಾಂತದ್ರೆ...ಹಾಂ ಗೊತ್ತಾಯ್ತು ಬಿಡಿ, ಮೂರು ದಿನದ ಹಿಂದೆ, ಸಿದ್ಧರಾಮಯ್ಯ, ಜಾಲಪ್ಪ ಸೇರಿ ನನ್ಗೂ ನನ್ನ ಮಕ್ಕಳಿಗೂ ಮಾಟ ಮಾಡಿದ್ದಾರೆ...ತೆಗೀತೀನಿ ಅಂತ ಬಂದ್ರಲ್ಲ ಅವ್ರೇ ತಾನೇ...’’
‘‘ನೀ ಇದೇ ತರ ಮಾತಾಡ್ತಾ ಇದ್ರೆ...ಫೋನ್‌ನಲ್ಲೇ ನಿನ್ಗೆ ಚಚ್ಚಿ ಬಿಡ್ತೀನಿ...’’
‘‘ಅಲ್ರೀ...ನೀವಿಲ್ಲದೇ ಇದ್ರೆ ನಾನಿಲ್ಲ ಅಂತ ಹೇಳ್ತೀರಿ...ಮತ್ತೆ ಜೋಯಿಸರ, ಭಟ್ಟರಾ, ಮಂತ್ರವಾದಿಗಳಾ, ಗಿಣಿಶಾಸ್ತ್ರದೋನಾ ಅಂತ ಕೇಳಿದ್ರೆ ಅಲ್ಲಾಂತ ಹೇಳ್ತೀರಿ... ಇದೇನ್ರಿ ಅನ್ಯಾಯಾ....ಒಳ್ಳೆ...ಆ ಅಹಿಂದದೋರು ಕಾಡಿದ ಹಾಗೆ ಕಾಡ್ತಿದ್ದೀರಲ್ರೀ...’’
‘‘ಇನ್ನೊಂದು ಕ್ಲೂ ಕೊಡ್ತೀನಿ. ನನ್ನ ಅಶೀರ್ವಾದದಿಂದ್ಲೆ ನಿನ್ನ ಸರಕಾರ ನಡೀತಾ ಇದೆ...’’
‘‘ಛೆ...ನಿಮ್ ವಾಯ್ಸು ಸೋನಿಯಾ ಮೇಡಂ ಥರ ಇಲ್ವಲ್ರೀ... ನಿಮ್ದು ಒಳ್ಳೆ... ರಾಜಕುಮಾರ್ ಫಿಲ್ಮಲ್ಲಿ ವಜ್ರಮುನಿ ವಾಯ್ಸು ಕೇಳ್ದಂಗೆ ಕೇಳತ್ತೆ...ಏನ್ ಮೇಡಂ...ವಾಯ್ಸು ಬದಲಾಗಿ ಬಿಟ್ಟಿದೆ... ದಿಲ್ಲೀಲಿ ಹವಾಮಾನ ಚೆನ್ನಾಗಿಲ್ವ... ನನ್ನ ಹಾಗೆ ನಿಮ್ಗೂ ಭಿನ್ನಮತೀಯ ವೈರಸ್ ಕಾಟಾನಾ...’’
‘‘ನಾನು ಸೋನಿಯಾ ಮೇಡಂ ಅಲ್ಲಾರೀ....’’
‘‘ನಿಮ್ ಆಶೀರ್ವಾದದಿಂದ್ಲೇ ಸರಕಾರ ನಡೀತಾ ಇದೆ ಅಂತ ಹೇಳ್ತೀರಿ...ಮತ್ತೆ ಸೋನಿಯಾ ಗಾಂಧಿ ಅಲ್ಲಾಂತ ಹೇಳ್ತೀರಲ್ಲಾ...?’’
‘‘ನನ್ನ ಮನೆಗೆ ಬಂದಿದ್ದೀರಿ. ಹೆಂಗಿದ್ದೀಯ ಅಂತ ನನ್ನ ತಲೆ ಸವರಿದ್ರಿ. ನೆನಪು ಮಾಡ್ಕೊಳ್ಳಿ...ನನ್ನ ಸಣ್ಣ ಮಗನ ಕೆನ್ನೆ ಹಿಂಡಿ ನೂರು ರೂಪಾಯಿ ನೋಟು ಕೊಟ್ರಿ....’’
‘‘ಹಂಗಾದ್ರೆ ನೀನು ರೇವಣ್ಣನ ಬೀಗರ ಕಡೆಯೋನು ಇರ್ಬೇಕು. ಹೆಂಗಿದ್ದೀಯಪ್ಪ... ಮನೇಲೆಲ್ವಾ ಸೌಕ್ಯವೆ? ಮಳೆ ಬೆಳೇಲ್ಲಾ ಹೆಂಗದೆ?’’
‘‘ನಿಮ್ಮ ರೇವಣ್ಣನ ಬೀಗ ನೆಗೆದು ಬಿದ್‌ಹೋದ. ಅಲ್ರೀ...ಇಷ್ಟು ಕ್ಲೂ ಕೊಟ್ರು ನಿಂಗೆ ಗೊತ್ತಾಗ್ಲಿಲ್ಲ ಅಂದ್ರೇನೂ....ನಾನು ಇದ್ದಾದ್ರೂ ಏನು ಪ್ರಯೋಜನ... ಅಯ್ಯೋ...’’
‘‘ರೀ...ಇನ್ನೂ ಒಂದಿಷ್ಟು ಚಾನ್ಸು ಕೊಡ್ರಿ....’’
‘‘ಹಾಂ...ಅದೇ...ನಾನು ಅದೆಷ್ಟು ಚಾನ್ಸು ಕೊಟ್ಟಿದ್ದೀನಿ ಗೊತ್ತ ನಿಮ್ಗೆ...ನಿಮ್ ಪಕ್ಸ ಒಡ್ದು ನುಚ್ಚು ನೂರು ಆದ್ರೂನು ಮತ್ತೆ ಮತ್ತೆ ಚಾನ್ಸು ಕೊಟ್ಟೆ....ನಾನು ಚಾನ್ಸು ಕೊಟ್ಟಿದ್ರಿಂದಾನೇ ಕಳೆದ ಬಾರಿ ಮತ್ತೆ ಗೆದ್ದು ಬಂದ್ರಿ.... ಹೋಗ್ಲಿ.... ದೇಹಲಕ್ಷಣ ಹೇಳ್ತೀನಿ ಕೇಳು...ನೋಡಿ...ನಾನು ಕರ್ರಗಿದ್ದೇನೆ..’’
‘‘ಹಂಗಾದ್ರೆ ನೀವು ಖರ್ಗೇನೆ..’’
‘‘ಬಡಕಲಾಗಿದ್ದೇನ್ರಿ....’’
‘‘ಅರೆ...ಹಂಗಾದ್ರೆ ನೀವು ಎಂ.ಪಿ ಪ್ರಕಾಸು...ನೀವ್ಯಾಕ್ರಿ ಇಷ್ಟೊತ್ನಾಗೆ ಫೋನು ಮಾಡ್ತಿದ್ದೀರಿ....’’
‘‘ಅಲ್ರೀ....ನೀರು ನೀರು ಅಂತ ಸಾಯ್ತ ಇದ್ದೇನ್ರಿ....’’
‘‘ಹಂಗಾದ್ರೆ...ನೀನು ತಮಿಳುನಾಡು ಜಯಲಲಿತಾ ಇರ್ಬೇಕು...ಜೀವ ಹೋದ್ರು ನಿಂಗೆ ಕಾವೇರಿ ನೀರು ಕೊಡಾಕಿಲ್ಲ...’’
‘‘ತಥ್ ನಿನ್ನ...ಇನ್ನೂ ನಿಂಗೆ ಗೊತ್ತಾಗಿಲ್ವಾ...ನೋಡಯ್ಯ ಸಾಲ ಗೀಲಾಂತ ಬಡ್ಡಿ ಕಟ್ಟದೆ ಒದ್ದಾಡ್ತಿದ್ದೀನಿ...’’
‘‘ಬಡ್ಡಿ ಕಟ್ಟೋಕಾಗ್ದೆ ದೇಶ ವಿಶ್ವ ಬ್ಯಾಂಕ್ ಹೇಳಿದಲ್ಲೆಲ್ಲಾ ಸಹಿ ಹಾಕ್ತಾ ಇದೇ. ಹಂಗಾದ್ರೆ ನೀನು ಭಾರತಮಾತೇನೇ ಇರ್ಬೇಕು...ಯಕಮ್ಮ ಈ ಅಪರಾತ್ರೀಲಿ ಫೋನ್ ಮಾಡಿ ಗಂಡಸಿನ ವಾಯ್ಸಲ್ಲಿ ಮಾತಾಡ್ತ ಇದ್ದೀಯ....’’
‘‘ನನ್ ಕರ್ಮ...ಭಾರತಮಾತೆಯ ನಾಲಗೆ ಕತ್ತರಿಸಿ, ಕೈ ಕಾಲು ಕಟ್ಟಿ ವಿದೇಶಿಯರಿಗೆ ಮಾರಿದ ಮೇಲೆ, ಅವಳೆಲ್ಲಿಂದ ಫೋನ್ ಮಾಡ್ಬೇಕು?ಇನ್ನೂ ಗೊತ್ತಾಗಿಲ್ವಾ...’’
‘‘ಇಲ್ಲಾರಿ...’’
‘‘ಗೊತ್ತಾಗ್ಲೇ ಇಲ್ವಾ...’’
‘‘ಊ...ಹುಂ....
‘‘ಮಗ್ನೆ...ಮುಂದಿನ ಚುನಾವಣೆಯ ಹೊತ್ತಿನಲ್ಲಿ ನಮ್ಮೂರಿಗೆ ಬರ್ತೀಯಲ್ಲ, ಆಗ ಗೊತ್ತಾಗತ್ತೆ ನಾನ್ಯಾರೂಂತ...’’
ಫೋನನ್ನು ದಡಾಲ್ಲನೆ ಕುಕ್ಕಿದ ಸದ್ದು. ಯಾರು ಪೋನು ಮಾಡಿರಬಹುದು ಎಂದು ರಾತ್ರಿಯಿಡೀ ನಿದ್ದೆಯಿಲ್ಲದೆ ಹೊರಳಾಡಿದ್ರು ಗೌಡ್ರು. 
ಸೆಪ್ಟೆಂಬರ್ 18, 2005

No comments:

Post a Comment