Sunday, March 29, 2015

ಅಂಬಾನೀಜಿ ಕಂಹಾಹೇ.. ಅದಾನಿಜೀ ಕಂಹಾಹೇ...!

ನರೇಂದ್ರ ಮೋದಿ ಧರಿಸಿದ ಲಕ್ಷಾಂತರ ಬೆಲೆಯ ಸೂಟು ಕೋಟ್ಯಂತರ ಬೆಲೆಗೆ ಹರಾಜಾದ ಹಿನ್ನೆಲೆಯಲ್ಲಿ ರವಿವಾರ - ಫೆಬ್ರವರಿ -22-2015 ರ ವಾರ್ತಾ ಭಾರತಿ ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ. 

ಹರಾಜು...ಹರಾಜು...ಹರಾಜು...
ದೇಶದಲ್ಲೆಲ್ಲ ಹರಾಜಿನದ್ದೇ ಸುದ್ದಿ. ಬೆಳಗ್ಗೆ ಸುದ್ದಿಯ ವಾಸನೆ ಹಿಡಿದು ಓಡಾಡುತ್ತಿದ್ದ ಎಂಜಲು ಕಾಸಿಗೆ ಈ ಹರಾಜು ಸುದ್ದಿ ಕೇಳಿ ಅಚ್ಚರಿಯಾಯಿತು. ಅರೆ! ಈ ದೇಶದಲ್ಲಿ ಯಾವುದನ್ನು ಹರಾಜಿಗಿಟ್ಟಿದ್ದಾರೆ?
ಗಾಂಧಿಯನ್ನು ಹರಾಜಿಗಿಟ್ಟಾಯಿತು. ನೆಹರೂವನ್ನು ಹರಾಜಿಗಿಟ್ಟಾಯಿತು. ನೇತಾಜಿಯನ್ನು ಹರಾಜಿಗಿಟ್ಟಾಯಿತು. ವಿವೇಕಾನಂದರನ್ನು ಹರಾಜಿಗಿಟ್ಟಾಯಿತು. ದೇಶದ ನ್ಯಾಯಾಲಯವನ್ನು ಹರಾಜು ಕೂಗಿದ್ದಾಯಿತು. ರಕ್ಷಣಾ ಇಲಾಖೆ, ಕೃಷಿ, ಚಿಲ್ಲರೆ ಅಂಗಡಿಗಳು ಎಲ್ಲವನ್ನೂ ವಿದೇಶಿಯರಿಗೆ ಹರಾಜು ಹಾಕಿ ಪ್ರಧಾನಿ ಮೋದಿಯವರು ದೇಶವನ್ನು ಶ್ರೀಮಂತಗೊಳಿಸಿರುವಾಗ ಇನ್ನು ಈ ದೇಶದಲ್ಲಿ ಹರಾಜಿಗೆ ಉಳಿದಿರುವುದಾದರೂ ಏನು ಎನ್ನುವ ಸಮಸ್ಯೆ ಎಂಜಲು ಕಾಸಿಯನ್ನು ಕಾಡತೊಡಗಿತು. ಕುತೂಹಲದಿಂದ ಕಿವಿ ನಿಮಿರಿಸಿದರೆ ಪ್ರಧಾನಿ ನರೇಂದ್ರ ಮೋದಿಯವರು ಧರಿಸಿರುವ ಕೋಟು ಕೋಟ್ಯಂತರ ರೂಪಾಯಿಗೆ ಹರಾಜಾಗುತ್ತಿರುವುದು ಗೊತ್ತಾಗಿಬಿಟ್ಟಿತು. ಇಡೀ ದೇಶ ಆ ಕೋಟಿಗಾಗಿ ಹರಾಜು ನಿಂತಿರುವುದಾಗಿ ಟಿವಿ ವಾಹಿನಿಯೊಂದು ಒದರುತ್ತಿತ್ತು. ಕಾಸಿ ತಾನು ಧರಿಸಿದ ಹಳೆಯ ತೇಪೆ ಹಾಕಿದ ಜುಬ್ಬಾವನ್ನೊಮ್ಮೆ ನೋಡಿ ನಿಟ್ಟುಸಿರಿಟ್ಟ. ಸರಿ. ಆದದ್ದಾಗಲಿ ಎಂದು ನೇರವಾಗಿ ಹರಾಜು ನಡೆಯುವಲ್ಲಿಗೇ ಹೋದ. ನೋಡಿದರೆ ಭಾರೀ ದೊಡ್ಡ ಸಂತೆ. ಸಂತೆಯ ಮಧ್ಯೆ ನಿಂತು ಅಮಿತ್ ಶಾ ಮೋದಿಯನ್ನು ಕೋಟನ್ನು ಹಿಡಿದುಕೊಂಡು ಹರಾಜು ಕೂಗುತ್ತಿದ್ದಾರೆ.
‘‘ಆಯಿಯೇ...ಆಯಿಯೇ...ಇದು ದೇಶದ ಅತ್ಯಂತ ಆತ್ಮಾಭಿಮಾನದ ಕೋಟು. ಸ್ವತಃ ಅಮೆರಿಕದ ಒಬಾಮ ಅವರು ಇದನ್ನು ಅಪ್ಪಿಕೊಂಡಿದ್ದು, ಅವರ ಬೆವರಿನ ವಾಸನೆ ಇನ್ನೂ ಹಾಗೇ ಘಮಘಮಿಸುತ್ತಿದೆ...ಹರಾಜು ಕೂಗಿ...ದೇಶದ ಮಾನ ಉಳಿಸಿ...ದೇಶದ ಆರ್ಥಿಕ ವ್ಯವಸ್ಥೆಯನ್ನು ಗಟ್ಟಿಗೊಳಿಸಿ...ನಿಮ್ಮ ದೇಶಪ್ರೇಮವನ್ನು ಸಾಬೀತು ಪಡಿಸಿ...’’

ಸೇರಿದ ಜನರೆಲ್ಲ ತಮ್ಮ ತಮ್ಮ ಭೂಮಿಯನ್ನು, ಗೂಡಂಗಡಿಗಳನ್ನು, ಕಾಡನ್ನು, ನದಿಯನ್ನು, ಕಡಲನ್ನು ಒತ್ತೆಯಿಟ್ಟು ನರೇಂದ್ರ ಮೋದಿಯ ಕೋಟಿಗೆ ಹರಾಜು ಕೂಗುತ್ತಿದ್ದರು. ಅದೆಷ್ಟು ಸಂಪತ್ತು ತಂದು ಸುರಿದರೂ ನರೇಂದ್ರ ಮೋದಿಯ ಕೋಟಿನ ಬೆಲೆಗೆ ಅದು ಸಮಗಟ್ಟುತ್ತಿಲ್ಲ. ರೈತರ ಪತ್ನಿಯರೆಲ್ಲ ತಮ್ಮ ಕೊರಳಲ್ಲಿದ್ದ ಕರಿಮಣಿ ಸರವನ್ನು ಕಿತ್ತು ಅಮಿತ್ ಶಾಗೆ ಕೊಟ್ಟರು. ಎಲ್ಲವನ್ನೂ ಕಿತ್ತು ಕಿತ್ತು ಅಮಿತ್ ಶಾ ತಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದರು. ಆದರೂ ಕೋಟಿನ ಬೆಲೆ ಏರುತ್ತಲೇ ಇತ್ತು. ಅಮಿತ್ ಷಾ ಮತ್ತೆ ಘೋಷಣೆ ಕೂಗತೊಡಗಿದರು ‘‘ಈ ಕೋಟು ಭಾರತದ ಆತ್ಮಾಭಿಮಾನದ ಸಂಕೇತ...ಬನ್ನಿ...ಇದನ್ನು ಕೊಂಡುಕೊಳ್ಳಿ...ಹರಾಜು ಕೂಗಿ...ಇಂದು ಈ ದೇಶದ ಮಾನವನ್ನು ಕಾಪಾಡಬೇಕಾದರೆ ಈ ಕೋಟು ಅತ್ಯಗತ್ಯ. ನಿಮ್ಮ ಮಾನ ಮಾತ್ರ ಅಲ್ಲ...ಪ್ರಾಣವನ್ನೂ ತೆತ್ತು ಹರಾಜು ಕೂಗಿ....’’
ಎಂದದ್ದೇ ತಡ...ದೇಶದ ಹಲವೆಡೆ ಕೋಮುಗಲಭೆಗಳನ್ನು ನಡೆಸಿ ತಲೆಬುರುಡೆಗಳನ್ನು ರಾಶಿರಾಶಿಯಾಗಿ ಅಮಿತ್ ಶಾ ಮುಂದೆ ಸುರಿಯಲಾಯಿತು. ಆದರೂ ಕೋಟಿನ ಬೆಲೆ ಸರಿಗಟ್ಟಲಾಗುತ್ತಿಲ್ಲ. ನೂರಾರು ಮನೆಗಳಿಗೆ ಬೆಂಕಿ ಹಚ್ಚಿ, ಅದರ ಬೂದಿಯನ್ನು ತಂದು ಅಮಿತ್ ಶಾ ಮುಂದೆ ನೀಡಲಾಯಿತು. ಊಹೂಂ...ಅದೇನಿದ್ದರೂ ಕೋಟಿನ ಬೆಲೆಯನ್ನು ಸರಿಗಟ್ಟಲಾಗುವುದಿಲ್ಲ. ವಲ್ಲಭಭಾಯಿ ಪಟೇಲ್ ಪ್ರತಿಮೆಗೆಂದು ತಂದ ಕಬ್ಬಿಣವನ್ನೆಲ್ಲ ಅಲ್ಲಿ ಸುರಿಯಲಾಯಿತು. ಎಲ್ಲವೂ ಕೋಟಿನ ಮುಂದೆ ನಗಣ್ಯವಾದವು. ಈ ದೇಶದ ಅದಿರುಗಳನ್ನು, ಹಸಿರುಗಳನ್ನು, ಮರಳುಗಳನ್ನು...ಹೀಗೆ ಯಾವುದಕ್ಕೂ ನರೇಂದ್ರ ಮೋದಿಯವರ ಸೂಟು ಸರಿಗಟ್ಟುತ್ತಿಲ್ಲ.
ಅಷ್ಟರಲ್ಲಿ ಅಲ್ಲಿಗೆ ಅಂಬಾನಿ, ಅದಾನಿಗಳಾದಿಯಾಗಿ ನಿಜ ದೇಶಭಕ್ತರ ಪ್ರವೇಶವಾಯಿತು. ನರೇಂದ್ರ ಮೋದಿಯವರ ಸೂಟಿಗೆ ಸರಿಯಾದ ಬೆಲೆ ನೀಡುವವರಿಲ್ಲದೆ ದೇಶದ ಮಾನ ಹರಾಜಾಗುತ್ತಿರುವುದನ್ನು ಕಂಡು ತಕ್ಷಣ ಅವರು ಮಧ್ಯೆ ಪ್ರವೇಶಿಸಿದರು. ಅಂಬಾನಿ, ಅದಾನಿ ಸೂಟಿನ ಮೇಲೆ ಕೈ ಸ್ಪರ್ಶ ಮಾಡಿದ್ದೇ ಸೂಟು ಧನ್ಯವಾಯಿತು. ತಕ್ಷಣ ಅಮಿತ್ ಷಾ ಅವರು ಸೂಟಿಗಾಗಿ ದೇಶದ ಜನರು ಕೊಟ್ಟ ಎಲ್ಲ ಸಂಪತ್ತನ್ನು ಅಂಬಾನಿ, ಅದಾನಿಯಾದಿಗಳಿಗೆ ಒಪ್ಪಿಸಿ, ಸೂಟಿನ ಮರ್ಯಾದೆ ಉಳಿಸಿದ್ದಕ್ಕೆ ಅವರಿಗೆ ಉದ್ದಂಡ ನಮಸ್ಕಾರ ಹಾಕಿದರು.

ಮೇಲಿನ ಎಲ್ಲ ದೃಶ್ಯಗಳನ್ನು ನೋಡಿದ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ನೇರವಾಗಿ ಅಮಿತ್ ಷಾ ಬಳಿಗೆ ಹಾರಿದ. ‘‘ಸಾರ್...ಇನ್ನು ಹರಾಜು ಹಾಕುವುದಕ್ಕೆ ಬೇರೇನೇನು ಇದೆ...’’ ಕಾಸಿ ಕೇಳಿದ.
ಅಮಿತ್ ಶಾ ಅವರು ತಮ್ಮ ಗಡ್ಡ ನೇವರಿಸುತ್ತಾ ಹೇಳಿದರು ‘‘ನೋಡ್ರಿ...ನಾವು ಗಾಂಧಿಯ ಚರಕವನ್ನು ಹರಾಜು ಹಾಕಿದೆವು. ಆದರೆ ಅದು ಒಂದು ರೂಪಾಯಿಯೂ ಬೆಲೆ ಬಾಳಲಿಲ್ಲ. ದೇಶ ಸಂಕಷ್ಟದಲ್ಲಿದೆ ಎಂದು ವಲ್ಲಭಭಾಯಿ, ವಿವೇಕಾನಂದರನ್ನೂ ಹರಾಜು ಹಾಕಿದೆವು. ಆದರೂ ವಿಶೇಷ ಬೆಲೆ ದಕ್ಕಲಿಲ್ಲ. ದೇಶದ ಅಭಿವೃದ್ಧಿಗೆ ದುಡ್ಡು ಸಾಲುವುದಿಲ್ಲ ಎಂದು ನಮ್ಮ ಸಂವಿಧಾನ, ನ್ಯಾಯಾಂಗ, ರಕ್ಷಣಾ ಇಲಾಖೆ ಎಲ್ಲವನ್ನೂ ಹರಾಜು ಹಾಕಿದೆವು. ಆದರೂ ದೇಶವನ್ನು ಅಭಿವೃದ್ಧಿಗೊಳಿಸಲು ಬೇಕಾದಷ್ಟು ದುಡ್ಡು ನಮಗೆ ಸಿಗಲಿಲ್ಲ. ಇದೀಗ ನರೇಂದ್ರ ಮೋದಿಯವರು ತಮ್ಮ ದೇಶಕ್ಕಾಗಿ ತಾವು ಧರಿಸಿದ ಕೋಟನ್ನೇ ಹರಾಜು ಹಾಕಿದ್ದಾರೆ...ಇದೀಗ ಇದಕ್ಕೆ ಭಾರೀ ಬೆಲೆ ಬಂದಿದೆ. ಇದರಿಂದಾಗಿ ನಮ್ಮ ಅಂಬಾನಿ, ಅದಾನಿ ಮೊದಲಾದವರು ಸಂತೋಷಗೊಂಡಿದ್ದಾರೆ. ದೇಶದ ಜನರು ತಮ್ಮ ತಮ್ಮ ಸಂಪತ್ತು, ಸೊತ್ತುಗಳನ್ನು ಈ ಸೂಟಿಗಾಗಿ ಒಪ್ಪಿಸಿರುವುದು ಅಂಬಾನಿಯವರಿಗೆ ತುಂಬಾ ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿಯವರು ಹಾಕಿದ ಇತರ ವಸ್ತ್ರ ಗಳನ್ನೂ ಹರಾಜು ಹಾಕಲಿದ್ದೇವೆ...’’

‘‘ಅಂದರೆ ಮೋದಿಯವರು ಇನ್ನು ಮುಂದೆ ವಸ್ತ್ರ ವಿಲ್ಲದೆಯೇ ವಿದೇಶ ಪ್ರಯಾಣ ಮಾಡಲಿದ್ದಾರೆಯೇ?’’ ಕಾಸಿ ಆತಂಕದಿಂದ ಕೇಳಿದ. ‘‘ಅವರಿಗೆ ವಸ್ತ್ರ ದ ಅಗತ್ಯವೇನೂ ಇಲ್ಲ. ಆದರೂ ಅವರು ಧರಿಸಿ ಎಸೆದ ವಸ್ತ್ರಗಳಿಗೆ ದೇಶವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಹರಾಜಿನಲ್ಲಿ ಅದು ಕೋಟಿಗಟ್ಟಲೆ ಬೆಲೆಬಾಳುತ್ತದೆ. ಇದರಿಂದಾಗಿ ದೇಶ ಆರ್ಥಿಕವಾಗಿ ಅಭಿವೃದ್ಧಿಗೊಳ್ಳುತ್ತದೆ. ದೇಶವನ್ನು ಆರ್ಥಿಕವಾಗಿ ಬಲಗೊಳಿಸುವುದಕ್ಕಾಗಿ ನರೇಂದ್ರ ಮೋದಿಜಿ ಬಟ್ಟೆ ಧರಿಸುತ್ತಾರೆ. ಇನ್ನು ಮುಂದೆ ನರೇಂದ್ರ ಮೋದಿಯವರು ಧರಿಸಿ ಎಸೆದ ಬಟ್ಟೆಗಳನ್ನು ಹರಾಜು ಮಾಡಲಾಗುತ್ತದೆ. ಈ ಮೂಲಕ ದೇಶವನ್ನು ಆರ್ಥಿಕವಾಗಿ ಮೇಲೆತ್ತುವ ಯೋಜನೆಯನ್ನು ಹಾಕಿಕೊಂಡಿದ್ದೇವೆ...’’
‘‘ಮುಂದೆ ಮೋದಿಯ ಯಾವ್ಯಾವ ರಿಸುಗಳನ್ನು ಹರಾಜು ಹಾಕಲಿದ್ದೀರಿ ಸಾರ್...’’ ಕಾಸಿ ಕೇಳಿದ.
‘‘ಮುಖ್ಯವಾಗಿ ಅವರ ಒಳಚೆಡ್ಡಿ ಮತ್ತು ಒಳಅಂಗಿಗಳಿಗೂ ಭಾರೀ ಬೇಡಿಕೆ ಇದೆ. ಅವರ ಒಳಚೆಡ್ಡಿ ಪುರಾತನ ಕಾಲದಲ್ಲಿ ಆರೆಸ್ಸೆಸ್ ಶಾಖೆಯಲ್ಲಿ ಧರಿಸಿರುವುದರಿಂದ ಅದು ಒಳಗೇ ಬಲವಾಗಿ ಅಂಟಿಕೊಂಡಿರುವ ಸಾಧ್ಯತೆ ಇದೆ. ಶಸಚಿಕಿತ್ಸೆಯ ಮೂಲಕ ಅವರ ದೇಹದಿಂದ ಅವರ ಒಳಚೆಡ್ಡಿಯನ್ನು ಬೇರ್ಪಡಿಸಿ ಅದನ್ನು ಹರಾಜು ಹಾಕಬೇಕು ಎಂದಿದ್ದೇವೆ...ಹಾಗೆಯೇ ಅವರು ಧರಿಸಿರುವ ಕೌಪೀನಕ್ಕೆ ಅಮೆರಿಕದ ಎನ್‌ಆರ್‌ಐಗಳು ಭಾರೀ ಬೇಡಿಕೆ ವ್ಯಕ್ತಪಡಿಸಿದ್ದಾರೆ. ಅದನ್ನು ಹರಾಜಿನಲ್ಲಿ ಕೊಂಡು ದೇಶವನ್ನು ಉದ್ಧರಿಸುವ ಮಹಾ ಕನಸನ್ನು ಅವರು ಹೊಂದಿದ್ದಾರೆ....’’
ಅಷ್ಟರಲ್ಲಿ ಯಾರೋ ಒಂದು ಕೆಂಪು ಬಟ್ಟೆಯನ್ನು ಹಿಡಿದುಕೊಂಡು ಬಂದರು ‘‘ನೋಡಿ...ಇಲ್ಲಿ ಮೋದಿಯವರ ಕುರ್ಚಿಯನ್ನು ಒರೆಸುವ ಬಟ್ಟೆ ಇದೆ...ಇದನ್ನು ಹರಾಜು ಹಾಕಿ ಬಿಡಿ...’’
ಆ ಬಟ್ಟೆ ಕೆಂಪಗಿತ್ತು. ಅಮಿತ್ ಶಾ ಅದನ್ನು ಮೂಸಿ ನೋಡಿದರು ‘‘ಈ ಬಟ್ಟೆ ರಕ್ತದ ಪರಿಮಳ ಬರುತ್ತಿದೆಯಲ್ಲ...’’ ಎಂದು ಬಟ್ಟೆ ತಂದುಕೊಟ್ಟವನ ಮುಖ ನೋಡಿದರು.
 ನೋಡಿದರೆ ಆಮ್ ಆದ್ಮಿ ನಾಯಕ ಕೇಜ್ರಿವಾಲ್. ‘‘ಅದು ಗುಜರಾತ್ ಹತ್ಯಾಕಾಂಡದ ರಕ್ತ. ಅವರು ಕುಳಿತ ಕುರ್ಚಿಯಲ್ಲಿ ಅಂಟಿದ್ದ ರಕ್ತವನ್ನು ಶುಚಿ ಮಾಡಿದ ಬಟ್ಟೆ ಇದು...’’ ಎನ್ನುತ್ತಾ ಕೇಜ್ರಿವಾಲ್ ಹಲ್ಲು ಕಿರಿದರು.
ಭೂತವನ್ನು ಕಂಡವರಂತೆ ಅಮಿತ್ ಶಾ ಕೈಯಲ್ಲಿದ್ದ ಕೆಂಪು ಬಟ್ಟೆಯನ್ನು ಎಸೆದವರೇ ‘‘ಅಂಬಾನೀಜಿ ಕಂಹಾಹೇ... ಅಧಾನಿಜೀ ಕಂಹಾಹೇ...’’ ಎನ್ನುತ್ತಾ ಸಂತೆಯಲ್ಲಿ ಹುಡುಕ ತೊಡಗಿದರು.
ರವಿವಾರ - ಫೆಬ್ರವರಿ -22-2015

No comments:

Post a Comment