Sunday, January 5, 2014

ಯಾರ ಜೊತೆಯಲಿ ಮಲಗಲಮ್ಮಾ....?

 ಜನವರಿ 5, 2014ರಂದು ವಾರ್ತಾ ಭಾರತಿಯಲ್ಲಿ ಪ್ರಕಟವಾದ ಬುಡಬುಡಿಕೆ

ತನ್ನ ನಾಲ್ಕು ತೆಂಗಿನ ಕಾಯಿಯನ್ನು ಹಿಡಿದುಕೊಂಡು ಯಡಿಯೂರಪ್ಪ ಕೊನೆಗೂ ತನ್ನ ತಾಯಿಯ ಮನೆಗೆ ಬಂದರು. ಮೋದಿ ಎಂಬ ಕೊಳೆತ ಕುಂಬಳ ಕಾಯಿ ಯನ್ನು ಇಟ್ಟುಕೊಂಡು ಬಿಜೆಪಿ ಎಂಬ ತಾಯಿ ಕಾಯುತ್ತಿದ್ದಳು.

‘‘ಬಂದೆಯಾ ಮಗನೇ....ಬಾ ಬಾ...ನಿನ್ನ ತೆಂಗಿನಕಾಯಿಗಾಗಿ ನಾನು ಕಾದು ಕುಳಿತಿದ್ದೆ...’’ ಎಂದು ಮಾತೃಪಕ್ಷವಾದ ಬಿಜೆಪಿ ಯಡಿಯೂರಪ್ಪರನ್ನೂ ಅವರ ನಾಲ್ಕು ತೆಂಗಿನ ಕಾಯಿಯನ್ನು ಮಡಿಲಲ್ಲಿಟ್ಟು ಜೋ ಜೋ ಹಾಡತೊಡಗಿತು.

ಅಷ್ಟರಲ್ಲಿ ಯಡಿಯೂರಪ್ಪ ನುಡಿದರು ‘‘ಅಮ್ಮಾ... ಇದರಲ್ಲಿ ಎರಡು ತೆಂಗಿನ ಕಾಯಿ ಕೆಟ್ಟು ಹೋಗಿದೆ. ಆದರೆ ಮೋದಿ ಎಂಬ ಕೊಳೆತ ಕುಂಬಳಕಾಯಿಗೆ, ಈ ಕೆಟ್ಟು ಹೋದ ತೆಂಗಿನಕಾಯಿ ಹಾಕಿದರೆ ರುಚಿ ಹೆಚ್ಚಾಗು ತ್ತದೆ ಎಂದು ಶೋಭಾ ಅವರು ಹೇಳಿದ್ದಾರೆ...’’

ತಾಯಿ ಮನೆ ಬಿಟ್ಟು ಹೋದ ಮಗನನ್ನು ಕುಳ್ಳಿರಿಸಿ ಉಪಚಾರ ಮಾಡತೊಡಗಿದಳು ‘‘ಮಗನೇ... ಕೆಟ್ಟದ್ದಾದರೂ ನಡೆಯುತ್ತದೆ...ಹುಳ ಬಂದದ್ದಾರೂ ನಡೆಯುತ್ತದೆ. ಖಾಲಿ ಗೆರಟೆಯಾದರೂ ಸರಿ. ಸದ್ಯಕ್ಕೆ ಪಲ್ಯ ಮಾಡುವಾಗ ತೆಂಗಿನ ಕಾಯಿಯ ಲೆಕ್ಕ ಸರಿ ಸಿಕ್ಕಿದರೆ ಸಾಕು...’’

‘‘ಅಮ್ಮಾ...ನಿನ್ನನ್ನು ತೊರೆದು ಹೋದುದಕ್ಕೆ ನನ್ನನ್ನು ಕ್ಷಮಿಸಿ ಬಿಡು. ತುತ್ತು ಕೊಟ್ಟವಳು ಕೊನೆಯವರೆಗೆ, ಮುತ್ತುಕೊಟ್ಟವಳು ಮನೆಯವರೆಗೆ ಎನ್ನುವ ಗಾದೆ ಮಾತನ್ನು ಮರೆತು ನಾನು ಮನೆ ಬಿಟ್ಟು ಹೋದೆ. ಇದೀಗ ಮೋದಿಯೆಂಬ ಕುಂಬಳಕಾಯಿಯ ಸಾರಿಗೆ ತೆಂಗಿನ ಕಾಯಿಯ ಕೊರತೆ ಬಿದ್ದುದು ತಿಳಿದು ನನಗೆ ಬೇಜಾರಾಯಿತು. ನನ್ನಿಂದಾಗಿ ಈ ಕುಂಬಳಕಾಯಿ ಕಸದ ತೊಟ್ಟಿಗೆ ಬೀಳುವುದು ಬೇಡ ಎಂದು ನನ್ನ ತೆಂಗಿನ ಕಾಯಿಯ ಜೊತೆಗೆ ಮಾತೃಪಕ್ಷಕ್ಕೆ ಮರಳಿದ್ದೇನೆ....ಅಮ್ಮಾ ನನ್ನ ಕೋಣೆ ಎಲ್ಲಿದೆ...ನಾನು ಸ್ವಲ್ಪ ನನ್ನ ಕೋಣೆಯಲ್ಲಿ ವಿಶ್ರಾಂತಿ ತೆಗೆಯುತ್ತೇನೆ...’’

ತಾಯಿ ಬೇಜಾರಿನಿಂದ ಹೇಳಿದಳು ‘‘ಮಗನೇ ಬಂದದ್ದು ಹೇಗೂ ಬಂದೆ. ಸ್ವಲ್ಪ ಅಡ್ಜೆಸ್ಟ್ ಮಾಡಿಕೋ.. ನಿನ್ನ ಕೋಣೆಯಲ್ಲಿ ಸದ್ಯಕ್ಕೆ ನನ್ನ ನಡು ಮಗ ಶೆಟ್ಟರ್ ಮಲಗಿದ್ದಾನೆ...ನೀನಿಲ್ಲದ ಇಷ್ಟು ದಿವಸ ಈ ಮನೆಯನ್ನು ಕಾಪಾಡಿದ್ದು ಅವನೇ ಅಲ್ಲವೆ. ಈಗ ಅವನನ್ನು ನಿನ್ನ ಕೋಣೆಯಿಂದ ಹೊರಗೆ ಹಾಕಿದರೆ ಅವನಿಗೆ ಬೇಜಾರಾದೀತು..’’

‘‘ಸರಿ. ಹಾಗಾದರೆ ನಾನು ನಿನ್ನ ಜೊತೆಯೇ ಮಲಗುತ್ತೇನೆ...ಅಮ್ಮನ ತೊಡೆಯಲ್ಲಿ ತಲೆಯಿಟ್ಟು ಮಲಗದೆ ತುಂಬಾ ದಿವಸವಾಯಿತು...’’ ಯಡಿಯೂರಪ್ಪ ಅಡ್ಜಸ್ಟ್ ಮಾಡಲು ತಯಾರಾದರು.

‘‘ಅಯ್ಯೋ ಮಗನೆ...ನನ್ನ ಜೊತೆ ಪಾಪು ಅನಂತಕುಮಾರ್ ಮಲಗುತ್ತಿದ್ದಾನೆ. ಏನು ತಿಳಿಯದ ಹಸುಗೂಸು ಅವನು. ಇನ್ನೂ ಮೊಲೆ ಹಾಲು ಬಿಟ್ಟಿಲ್ಲ. ಅಂಬೆಗಾಲಿಕ್ಕಿಕೊಂಡು ಪಕ್ಷಕ್ಕೆ ಭಾರವಾಗಿ ನಡೆಯು ತ್ತಿದ್ದಾನೆ. ನೀನು ಬಂದೆ ಎಂದು ಅವನನ್ನು ಹೊರಗೆ ಹಾಕುವುದಕ್ಕೆ ಆಗೋದಿಲ್ಲ ಮಗನೇ...ಸ್ವಲ್ಪ ಅಡ್ಜಸ್ಟ್ ಮಾಡಿಕೋ...ದಿಲ್ಲಿಯ ಅಡ್ವಾಣಿ ತಾತನಿಗೆ ಅವನೆಂದರೆ ತುಂಬಾ ಪ್ರೀತಿ. ಅವನನ್ನು ಜೊತೆಗೆ ಮಲಗಿಸಿಕೊಳ್ಳದೇ ಇದ್ದರೆ ಇಡೀ ರಾತ್ರಿ ಅತ್ತು ರಂಪಾಟ ಮಾಡುತ್ತಾನೆ...’’

ಯಡಿಯೂರಪ್ಪ ತಲೆತುರಿಸಿದರು. ಹಾಗಾದರೆ ಎಲ್ಲಿ ಮಲಗುವುದು? ‘‘ಅಮ್ಮಾ ಹಾಗಾದರೆ...ಮನೆಯ ಚಾವಡಿಯಲ್ಲೇ ಮಲಗುತ್ತೇನೆ....ಆಗದೆ...?’’

ತಾಯಿಗೆ ಮತ್ತೂ ಬೇಜಾರಾಯಿತು. ಪಾಪ ಮನೆ ಬಿಟ್ಟು ಹೋದ ಮಗ ತಿರುಗಿ ಬಂದಿದ್ದಾನೆ. ಆದರೆ ಮಲಗುವುದಕ್ಕೆ ಜಾಗವಿಲ್ಲ ‘‘ಮಗನೇ, ಚಾವಡಿಯಲ್ಲಿ ಮಲಗಬಹುದಿತ್ತು. ಆದರೆ ಸುರೇಶ್ ಕುಮಾರ್ ಮಲಗಿದ್ದಾನಪ್ಪ. ಹಿರಿಯರು. ಸಜ್ಜನರು ಬೇರೆ. ಆರೆಸ್ಸೆಸ್‌ನ್ನು ಚಡ್ಡಿಯಾಗಿಯೂ, ಲಂಗೋಟಿ ಯಾಗಿಯೂ, ಜನಿವಾರವಾಗಿಯೂ ಧರಿಸಿಕೊಂಡ ವರು. ಅವರನ್ನು ಹೊರಗೆ ಮಲಗಿಸುವುದಕ್ಕೆ ಆಗುತ್ತದೆಯೆ? ಅದೂ ಅಲ್ಲದೆ, ಮನೆಯ ಹಿರಿಯರು. ಬೆಳಗ್ಗೆ ಎದ್ದು ಕಿಟಕಿ ಬಾಗಿಲು, ತೆಗೆದು, ವೀರಸಾವರ್ಕರ್‌ಗೆ ಆರತಿ ಬೆಳಗಿ, ಸದಾ ವತ್ಸಲೆ ಎಂದು ಹಾಡಬೇಕಾದವರು...’’

ಯಡಿಯೂರಪ್ಪ ತನ್ನ ತೆಂಗಿನಕಾಯಿಯಿಂದ ಸಿಟ್ಟಲ್ಲಿ ಒಮ್ಮೆ ತಲೆಚಚ್ಚಿಕೊಂಡರು. ಅಷ್ಟರಲ್ಲಿ ಬಿಜೆಪಿ ಎಂಬ ಮಾತೆಗೆ ನೋವಾಯಿತು. ‘‘ಅಯ್ಯೋ ಮಗನೆ, ಅಷ್ಟು ಜೋರಾಗಿ ತೆಂಗಿನ ಕಾಯಿಯಿಂದ ತಲೆ ಚಚ್ಚಿಕೊಳ್ಳಬೇಡ. ತೆಂಗಿನಕಾಯಿ ಹೋಳಾಗಿ ಬಿಟ್ಟೀತು. ಮೋದಿ ಎಂಬ ಕುಂಬಳಕಾಯಿಯನ್ನು ಸಾಂಬಾರು ಮಾಡಬೇಕಾದರೆ ಆ ತೆಂಗಿನಕಾಯಿ ಬೇಕೇ ಬೇಕು. ಒಂದು ವೇಳೆ ನಿನಗೆ ತಲೆ ಚಚ್ಚಿಕೊಳ್ಳಲೇ ಬೇಕಾದರೆ, ಹೊರಗಡೆ ಕಲ್ಲಿದೆ. ಅದರಲ್ಲಿ ಚಚ್ಚಿಕೋ...’’ ಎಂದು ಮಗನನ್ನು ಸಮಾಧಾನಿಸಿದರು.
ತಾಯಿಗೆ ತನ್ನ ಮೇಲೆ ಇರುವ ಪ್ರೀತಿಯನ್ನು ನೆನೆದು ಯಡಿಯೂರಪ್ಪ ಗದ್ಗದಿತರಾದರು ‘‘ಅಮ್ಮಾ ಹಾಗಾದರೆ ನಾನು ಅಂಗಳದಲ್ಲಿ ಮಲಗಲೇ....’’

ತಾಯಿಗೆ ಮಗನ ಮೇಲೆ ಪ್ರೀತಿ ಉಕ್ಕಿ ಬಂತು. ಆದರೇನು ಮಾಡುವುದು...‘‘ಮಗನೇ...ಅಂಗಳದಲ್ಲಿ ಪುತ್ತೂರಿನ ಗೌಡರು ಮಲಗಿದ್ದಾರೆ. ದೇವೇಗೌಡರಿಗೆ ಪ್ರತಿಯಾಗಿ ನಮ್ಮಲ್ಲಿರುವುದು ಒಂದೇ ಒಂದು ಗೌಡ. ಅವರನ್ನು ಬಿಟ್ಟು ಬಿಡುವುದಕ್ಕೆ ಆಗುತ್ತದೆಯೆ? ಅವರನ್ನು ಎಬ್ಬಿಸಿದರೆ, ಅವರು ದೇವೇಗೌಡರ ಜೊತೆ ಕೈ ಜೋಡಿಸಿ ನಮ್ಮ ಮನೆಯನ್ನು ಕೆಡವಿ ಹಾಕಲೂ ಬಹುದು. ಮಂಗಳೂರಿನವರಲ್ಲವೆ? ಮೀನು ತಿಂದ ತಲೆ. ನಂಬಲಿಕ್ಕಾಗುವುದಿಲ್ಲ...’’

ಯಡಿಯೂರಪ್ಪ ಚಿಂತಾಕ್ರಾಂತರಾದರು. ಮಾತೃ ಪಕ್ಷಕ್ಕೆ ಮರಳಿ ಆಗಿದೆ. ಕಣ್ಣೀರು ಸುರಿಸಿ ಆಗಿದೆ. ಇನ್ನೂ ಎಲ್ಲಾದರೂ ಸರಿ. ಮಲಗಲೇ ಬೇಕಲ್ಲ? ‘‘ಅಮ್ಮ ನಾನು ಮನೆಯ ಹಿಂದಿರುವ ದನದ ಕೊಟ್ಟಿಗೆಯಲ್ಲಿ ಮಲಗಲೇ?’’

ತನ್ನ ಮಗನ ತ್ಯಾಗ ಬಲಿದಾನಕ್ಕೆ ಮಾತೃಪಕ್ಷದ ಕಣ್ಣಿನಿಂದ ಕಣ್ಣೀರು ದಳ ದಳನೆ ಸುರಿಯತೊಡಗಿತು ‘‘ಅಯ್ಯೋ ಮಗನೆ. ಅಪರೂಪಕ್ಕೆ ಮನೆಗೆ ಮತ್ತೆ ಮರಳಿ ಬಂದಿದ್ದೀಯ. ಅಷ್ಟೇ ಅಲ್ಲ, ಬರುವಾಗ ನಾಲ್ಕು ತೆಂಗಿನ ಕಾಯಿಯನ್ನು ಹಿಡಿದುಕೊಂಡು ಬಂದಿದ್ದೀಯ...ಆದರೆ ನಿನಗೆ ಮಲಗುವುದಕ್ಕೆ ಜಾಗ ಕೊಡಲು ನನಗೆ ಸಾಧ್ಯವಿಲ್ಲದಾಯಿತೆ...ಮಗನೆ, ನಿನ್ನನ್ನು ಕೊಟ್ಟಿಗೆಯಲ್ಲಿ ಮಲಗಿಸಬಹುದಿತ್ತು. ಆದರೆ ನಿನಗೇ ಗೊತ್ತಲ್ಲ, ತಲೆ ತಲಾಂತರದಿಂದ ನಮ್ಮ ಮನೆಯ ದನದ ಕೊಟ್ಟಿಗೆಯಲ್ಲಿ ಈಶ್ವರಪ್ಪ ಮಲಗಿಕೊಂಡು ಬಂದಿದ್ದಾನೆ. ಈಗ ನಿನಗಾಗಿ ಅವನನ್ನು ಎಬ್ಬಿಸುವುದು ಸರಿಯೆ? ಅದೂ ಅಲ್ಲದೆ ಸೆಗಣಿಯ ವಾಸನೆಯ ಜೊತೆಗೆ ಮಲಗಿ ಮಲಗೀ ಅವನಿಗೆ ಅಭ್ಯಾಸವಾಗಿ ಹೋಗಿದೆ. ಅದೂ ಅಲ್ಲದೆ ಮನು ಸಂವಿಧಾನ ಅವನಿಗೆ ಕೊಟ್ಟಿರುವ ಮೀಸಲಾತಿ ಅದು. ಅದನ್ನು ಕಿತ್ತುಕೊಂಡರೆ ಹಿಂದುಳಿದ ವರ್ಗಗಳ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ಆರೆಸ್ಸೆಸ್ ನವರಿಗೂ ಬೇಜಾರಾಗುತ್ತದೆ.....’’

ಯಡಿಯೂರಪ್ಪ ತಾಯಿಯ ಕೈಯನ್ನು ಹಿಡಿದು ಕೊಂಡು ಗಳಗಳನೆ ಅಳತೊಡಗಿದರು ‘‘ಹಾಗಾದರೆ ಯಾರ ಜೊತೆಗೆ ಮಲಗಲಮ್ಮ?’’ ಎಂದು ಪುಣ್ಯಕೋಟಿಯ ಜೊತೆಗೆ ಅದರ ಕರು ಕೇಳಿದ ಹಾಗೆ ಕೇಳಿದರು.

‘‘ಓ ಅಲ್ಲಿ ಮೂಲೆಯಲ್ಲಿ ಒಂದು ತೆಂಗಿನ ಮರ ಇದೆ. ಅದರ ಬುಡದಲ್ಲಿ ಸ್ವಲ್ಪ ಜಾಗ ಇದೆ. ಅಲ್ಲಿ ಮಲಗು. ಮುಂದೆ ನಿನಗೆ ಬೇರೆ ಒಳ್ಳೆಯ ವ್ಯವಸ್ಥೆಯನ್ನು ಮಾಡುವ. ನಿನ್ನ ಕೋಣೆಯನ್ನು ಬಿಟ್ಟು ಕೊಡಲು ಶೆಟ್ಟರ್‌ಗೆ ಮನವೊಲಿಸುತ್ತೇನೆ...ಈ ತಾಯಿಯ ಜೊತೆಗೆ ಬೇಜಾರು ಮಾಡದೆ ಅಲ್ಲಿ ಹೋಗು ಮಲಗು ಮಗು...’’ ಮಾತೃ ಪಕ್ಷ ಸಲಹೆ ನೀಡಿತು.

ಯಡಿಯೂರಪ್ಪ ಕೋಲೆ ಬಸವನಂತೆ ತಲೆಯಾಡಿಸಿ, ತನ್ನ ನಾಲ್ಕು ತೆಂಗಿನ ಕಾಯಿಯ ಜೊತೆಗೆ ಮಲಗಲು ಹೊರಟರು.
ಅಷ್ಟರಲ್ಲಿ ಮಾತೃಪಕ್ಷ ಹೇಳಿತು ‘‘ಮಗನೇ...ನೀನು ಹೋಗಿ ಮಲಗು. ಆದರೆ ಆ ತೆಂಗಿನ ಕಾಯಿಗಳನ್ನು ಓ ಅಲ್ಲಿ ಒಳಗೆ ಇಟ್ಟು ಹೋಗು. ಯಾಕೆಂದರೆ ಹೊರಗಡೆ ನೀನು ಇಟ್ಟುಕೊಂಡರೆ ಕಾಂಗ್ರೆಸ್‌ನವರು ಕಾಯ್ತೆ ಇದ್ದಾರೆ, ನಿನ್ನ ತೆಂಗಿನ ಕಾಯಿ ಕದಿಯಲು...’’

ಯಡಿಯೂರಪ್ಪ ತೆಂಗಿನ ಕಾಯಿಗಳನ್ನು ತಾಯಿಗೆ ಒಪ್ಪಿಸಿ ತೆಂಗಿನ ಮರದ ಬುಡದಲ್ಲಿ ಗುಮ್ಮನೆ ಮಲಗಿಕೊಂಡರು.
ಯಡಿಯೂರಪ್ಪ ಹೊರ ನಡೆದದ್ದೇ ಒಳಗಿರುವ ಶೆಟ್ಟರ್, ಅನಂತು, ಗೌಡ, ಈಶ್ವರಪ್ಪ ಎಲ್ಲ ಒಟ್ಟಾಗಿ ಮನೆಯ ಬಾಗಿಲ ಚಿಲಕವನ್ನು ಭದ್ರ ಪಡಿಸಿ, ಕುಂಬಳ ಕಾಯಿ ಸಾಂಬಾರು ಮಾಡಲು ಸಿದ್ಧತೆ ನಡೆಸಿದರು.

ರವಿವಾರ - ಜನವರಿ -05-2014

No comments:

Post a Comment