Friday, April 3, 2015

ಹಲ್ಲೆಗೊಳಗಾದ ಗೋಮಾತೆಗೆ ಒಂದು ಲಕ್ಷ ರೂ. ಪರಿಹಾರ...

ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ ಗೋ ಹತ್ಯೆ ನಿಷೇಧ ಕಾನೂನು ಜಾರಿ ಗೊಳಿಸಲು ಹವಣಿಸಿತು. ಈ ಹಿನ್ನೆಲೆಯಲ್ಲಿ ಮಾರ್ಚ್ -28-2010 ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಗೋ ಹತ್ಯೆ ನಿಷೇಧ ವಿಧೇಯಕ ಜಾರಿಗೆ ಬಂದ ಬಳಿಕ ರಾಜ್ಯದ ಸ್ಥಿತಿ ಹೇಗಿರಬಹುದು ಎನ್ನುವುದನ್ನು ಪತ್ರಕರ್ತ ಎಂಜಲು ಕಾಸಿ ಗೋಮಾಂಸ ಸವಿಯುತ್ತಾ ಯೋಚಿಸಿದಾಗ ಹೊಳೆದ ಕೆಲವು ಸುದ್ದಿಯ ಹನಿಗಳನ್ನು ಇಲ್ಲಿ ಯಥಾವತ್ ನೀಡಲಾಗಿದೆ.
 ಹನಿ-1
ಗೋಮಾತೆಗೆ ಹಲ್ಲೆ: ರೈತನ ಬಂಧನ
ಹಾಲು ಕರೆಯುವಾಗ ಒದೆಯಿತೆಂದು ಆರೋಪಿಸಿ ರೈತನೊಬ್ಬ ಗೋಮಾತೆಗೆ ಥಳಿಸಿದ ಘಟನೆ ಉಡುಪಿಯಲ್ಲಿ ಸಂಭವಿಸಿದೆ. ರೈತನನ್ನು ಕೋಕಾ ಕಾಯ್ದೆಯಲ್ಲಿ ಬಂಧಿಸಲಾಗಿದೆ. ಗೋಮಾತೆಗೆ ಥಳಿಸಲು ಬಳಸಿದ ಬೆತ್ತವನ್ನು ವಶಪಡಿಸಿಕೊಳ್ಳಲಾಗಿದ್ದು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಗೋಮಾತೆಯನ್ನು ಹತ್ತಿರದ ಖಾಸಗಿ ಮಠವೊಂದರ ಗೋಮಾಳವೊಂದಕ್ಕೆ ಸೇರಿಸಲಾಗಿದ್ದು, ಅದರ ಆರೈಕೆಗಾಗಿ ಒಂದು ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.
ಪೇಜಾವರ ಖಂಡನೆ:
 ಗೋಮಾತೆಗೆ ಥಳಿಸಿದ ಬರ್ಬರ ಘಟನೆಯನ್ನು ಪೇಜಾವರ ಶ್ರೀ ತೀವ್ರವಾಗಿ ಖಂಡಿಸಿದ್ದಾರೆ. ಹಾಲು ಕೊಡುವುದು ಅಥವಾ ಕೊಡದೇ ಇರುವುದು ಗೋಮಾತೆಯ ಅಧಿಕಾರವಾಗಿದ್ದು, ಅದರ ಮೇಲೆ ಬಲ ಪ್ರಯೋಗಿಸುವುದು ತಪ್ಪು ಎಂದು ಅವರು ಹೇಳಿಕೆ ನೀಡಿದ್ದಾರೆ.
 ‘‘ಗೋಮಾತೆಯ ಮೇಲೆ ಹಲ್ಲೆ ನಡೆಸಿರುವುದರ ಹಿಂದೆ ಭಯೋತ್ಪಾದಕರ ಪಿತೂರಿ ಇರುವುದರಿಂದ, ಇದನ್ನು ಗಂಭೀರ ತನಿಖೆಗೆ ಒಳಪಡಿಸಬೇಕು. ಥಳಿಸುವುದಕ್ಕೆ ಪ್ರೇರಣೆ ನೀಡಿರುವ ಭಯೋತ್ಪಾಕರನ್ನು ಬಂಧಿಸಬೇಕು’’ ಎಂದು ಆಗ್ರಹಿಸಿದ್ದಾರೆ.
ಪರಿಹಾರ ಘೋಷಣೆ:
 ಹಲ್ಲೆಗೊಳಗಾದ ಗೋಮಾತೆಗೆ ಒಂದು ಲಕ್ಷ ರೂ. ಪರಿಹಾರವನ್ನು ಘೋಷಿಸಲಾಗಿದ್ದು, ಇದನ್ನು, ಸ್ಥಳೀಯ ಮಠದ ಸ್ವಾಮೀಜಿಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದ್ದಾರೆ.
ಹನಿ-2
ಹತ್ತು ಮನೆಗಳಿಗೆ ದಾಳಿ: ಅಕ್ರಮ ಮಾಂಸ ವಶ
 ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ವಿಶೇಷ ಪಡೆಯು ಹಲವು ಮನೆಗಳಿಗೆ ವಿಶೇಷ ದಾಳಿಯನ್ನು ಆಯೋಜಿಸಿದ್ದು, ಅಡುಗೆ ಮನೆಯ ಒಲೆಯಲ್ಲಿ ಬೇಯುತ್ತಿದ್ದ ಅಕ್ರಮ ಮಾಂಸದ ಸಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
 ಈ ಮಾಂಸದ ಸಾರು ಗೋಮಾತೆಯ ಮಾಂಸದಿಂದ ಮಾಡಲಾಗಿದೆ ಎಂದು ಪೊಲೀಸರು ಆರೋಪಿಸಿದ್ದು, ಅಲ್ಪಸಂಖ್ಯಾತರು ಅದನ್ನು ನಿರಾಕರಿಸಿದ್ದರು. ನಾವು ಒಲೆಯಲ್ಲಿ ಬೇಯಿಸಿರುವುದು ಕೋಳಿಯ ಸಾರು ಎಂದು ಅವರು ಹೇಳಿಕೆ ನೀಡಿದ್ದಾರೆ. ‘‘ನಾವು ಸ್ಥಳೀಯ ಕೋಳಿ ಫಾರಂನಿಂದ ತಂದ ಕೋಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಪೊಲೀಸರಿಗೆ ಒದಗಿಸಿದ್ದೇವೆ. ಕೋಳಿಯ ಗರಿಗಳನ್ನು, ಅದರ ಕರುಳು, ಕಾಲು ಮೊದಲಾದ ಅವಶೇಷಗಳನ್ನು ತೋರಿಸಿದ್ದರೂ ಪೊಲೀಸರು ನಮ್ಮ ಮಾಂಸದ ಸಾರುಗಳನ್ನು ವಶಪಡಿಸಿ, ನಮ್ಮ ಮನೆಯ ಯುವಕರ ಮೇಲೆ ಭಯೋತ್ಪಾದಕ ಕೇಸುಗಳನ್ನು ದಾಖಲಿಸಿದ್ದಾರೆ’’ ಎಂದು ದೂರಿದ್ದಾರೆ.
ಆದರೆ ಈ ಹೇಳಿಕೆಯನ್ನು ಪೊಲೀಸರು ತಳ್ಳಿ ಹಾಕಿದ್ದು, ಸಾರು ಗೋಮಾತೆಯದ್ದೋ ಅಥವಾ ಕೋಳಿಯದ್ದೋ ಎಂಬುದರ ತನಿಖೆ ನಡೆಯುತ್ತಿದೆ. ಈ ಕುರಿತಂತೆ ಹಲವರನ್ನು ವಶಪಡಿಸಿ ವಿಚಾರಣೆ ನಡೆಸಿದ್ದೇವೆ. ಸ್ಥಳೀಯ ಮಠದ ಎರಡು ಗೋವುಗಳು ಕಾಣೆಯಾಗಿದ್ದು ಆ ಗೋವುಗಳನ್ನೇ ಸಾರು ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈಗಾಗಲೇ ಪೊಲೀಸರು ಸಾರನ್ನು ಅನ್ನದ ಜೊತೆ ಬೆರೆಸಿ ಅದನ್ನು ತಿಂದು ಪರೀಕ್ಷೆ ನಡೆಸಿದ್ದಾರೆ. ನಿನ್ನೆ ವಶಪಡಿಸಿಕೊಂಡಿರುವ ಎಲ್ಲ ಮನೆಗಳ ಬಿರಿಯಾನಿಯನ್ನು ನಾವು ತಿಂದು ಕೋಳಿಯದ್ದೋ, ಗೋವಿನದ್ದೋ ಎಂದು ಪರೀಕ್ಷೆ ನಡೆಸಿದ್ದೇವೆ. ವರದಿ ಹೊರ ಬೀಳುವುದನ್ನಷ್ಟೇ ಕಾಯುತ್ತಿದ್ದೇವೆ’’ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ಮಾಂಸದ ಸಾರಿಗೆ ಸಂಬಂಧಿಸಿ ಈಗಾಗಲೇ 25 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಹಲವರ ಮೇಲೆ ಕೋಕಾ ಕಾಯ್ದೆಯನ್ನು ಹಾಕಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಅಕ್ರಮ ಗೋವಿನ ಸಾರು ವಶಪಡಿಸಿಕೊಂಡ ಪೊಲೀಸರಿಗೆ ಪೊಲೀಸ್ 10 ಸಾವಿರ ರೂ. ಬಹುಮಾನವನ್ನು ಘೋಷಿಸಿದ್ದಾರೆ.
ಹನಿ-3
ಗೋಮಾಳಕ್ಕಾಗಿ ಭೂಮಿ ವಶಹೆಚ್ಚುತ್ತಿರುವ ವೃದ್ಧ ಮತ್ತು ಗೊಡ್ಡು ಗೋವುಗಳಿಂದಾಗಿ ಇರುವ ಗೋಮಾಳಗಳು ತುಂಬಿ ತುಳುಕುತ್ತಿದ್ದು, ಗೋಮಾಳಗಳನ್ನು ವಿಸ್ತರಿಸಲು ಸರಕಾರ ನಿರ್ಧರಿಸಿದೆ. ಈಗಾಗಲೇ ಗೋಮಾಳಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಠಗಳಿಗೆ ಒಂದು ಸಾವಿರ ಎಕರೆ ಭೂಮಿಯನ್ನು ಕೊಡಲು ಸರಕಾರ ನಿರ್ಧರಿಸಿದ್ದು, ಇದಕ್ಕಾಗಿ ಇನ್ನಷ್ಟು ರೈತರ ಭೂಮಿಯನ್ನು ವಶಪಡಿಸಿಕೊಳ್ಳಲು ಆದೇಶ ಹೊರಡಿಸಿದೆ.ಗೋಮಾಳಕ್ಕೆ ಭೂಮಿ ಕೊಡಲು ವಿರೋಧ ವ್ಯಕ್ತಪಡಿಸುವ ರೈತರನ್ನು ಗೋಹತ್ಯೆ ನಿಷೇಧ ಕಾಯ್ದೆಯಡಿ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.
ಅಭಿವದ್ಧಿಗಾಗಿ ಭೂಮಿ ಕೊಡಿ: ಮುಖ್ಯಮಂತ್ರಿ ಕರೆ
ಗೋವುಗಳ ಅಭಿವದ್ಧಿಗಾಗಿ ರೈತರು ಭೂಮಿಯನ್ನು ಕೊಡುವುದು ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಕರೆ ನೀಡಿದ್ದು, ಅಭಿವದ್ಧಿ ವಿರುದ್ಧ ಧ್ವನಿಯೆತ್ತಿದವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗುವುದು ಎಂದು ತಿಳಿಸಿದ್ದಾರೆ.ರೈತರಿಗೆ ಪರಿಹಾರಭೂಮಿಯನ್ನು ಕೊಟ್ಟ ರೈತರಿಗೆ ಪರಿಹಾರವಾಗಿ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಹನಿ-4
ಗೋಮಾರಾಟ: ಮಠಾಧೀಶರ ಮೇಲೆ ಆರೋಪ
ತಮ್ಮ ಉಸ್ತುವಾರಿಯಲ್ಲಿದ್ದ ಒಂದು ಸಾವಿರ ಗೋವುಗಳು ಕಾಣೆಯಾಗಿವೆ ಎಂದು ಸ್ಥಳೀಯ ಮಠಾಧೀಶರು ಪೊಲೀಸರಿಗೆ ದೂರು ನೀಡಿದ್ದು, ಈ ಒಂದು ಸಾವಿರ ಗೋವುಗಳನ್ನು ಸ್ವಾಮೀಜಿಗಳು ವಿದೇಶಗಳಿಗೆ ಮಾರಾಟ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಠಗಳು ಅಕ್ರಮವಾಗಿ ಗೋಮಾರಾಟ ದಂಧೆಯನ್ನು ಆರಂಭಿಸಿವೆ ಎಂದು ಅವರು ಟೀಕಿಸಿದ್ದಾರೆ.ಆದರೆ ಈ ಆರೋಪವನ್ನು ಎಲ್ಲ ಸ್ವಾಮೀಜಿಗಳು ಒಕ್ಕೊರಲಲ್ಲಿ ವಿರೋಧಿಸಿದ್ದು, ಗೋವುಗಳ ಮಾರಾಟವನ್ನು ಮಾಡಿಲ್ಲ. ಗೋವುಗಳನ್ನು ನಾವು ದಾನ ಮಾಡಿದ್ದೇವೆ. ಅವುಗಳು ವಿದೇಶಿ ಹವಾನಿಯಂತ್ರಿತ ದೊಡ್ಡಿಗಳಲ್ಲಿ ಸುಖವಾಗಿ ಬಾಳುತ್ತಿವೆ ಎಂದು ಹೇಳಿದ್ದಾರೆ.
ಹನಿ-5
ಕುರಿಗಳಿಗೆ ಕೊಂಬುಗಳು
ಗೋವುಗಳನ್ನು ಅಕ್ರಮವಾಗಿ ಕಡಿದು ಮಾಂಸ ಮಾಡುತ್ತಿರುವ ಸಂದರ್ಭದಲ್ಲಿ ಮೂವರು ಸಂಘಪರಿವಾರ ಕಾರ್ಯಕರ್ತರನ್ನು ಬಂಧಿಸಲಾಗಿದ್ದು, ಆದರೆ ನಾವು ಮಾಂಸ ಮಾಡುತ್ತಿದ್ದುದು ಗೋವನ್ನಲ್ಲ, ಕುರಿಗಳನ್ನು ಎಂದು ಅವರು ಹೇಳಿದ್ದಾರೆ.ಕುರಿಗಳಿಗೆ ಕೊಂಬು ಇರುವುದಿಲ್ಲ ಎಂದು ಪ್ರಗತಿಪರ ಸಂಘಟನೆಗಳು ಆರೋಪಿಸಿದ್ದು, ಅದು ಕೊಂಬುಗಳು ಇರುವ ಕುರಿಗಳು ಎಂದು ಸಂಘಪರಿವಾರದ ಕಾರ್ಯಕರ್ತರು ಸಮರ್ಥಿಸಿದ್ದಾರೆ.
ಆರೆಸ್ಸೆಸ್‌ನ ಕಾರ್ಯಕರ್ತರು ಹೇಳಿರುವುದರಿಂದಾಗಿ, ಆ ಕುರಿಗಳಿಗೆ ಕೊಂಬುಗಳಿವೆ ಎಂದು ಮುಖ್ಯಮಂತ್ರಿ ಸಮರ್ಥಿಸಿದ್ದಾರೆ.
ಹನಿ-6
ಮುಖ್ಯಮಂತ್ರಿ ಆತಂಕ
ಗೋ ಹತ್ಯೆ ನಿಷೇಧ ಜಾರಿಗೆ ಬಂದ ಬಳಿಕ ರೈತರ ಹಟ್ಟಿಗಳಲ್ಲಿ ಗೋವುಗಳು ಗಣನೀಯವಾಗಿ ಕಡಿಮೆಯಾಗಿದ್ದು, ಗೋಮಾಳಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿರುವುದಕ್ಕೆ ಮುಖ್ಯಮಂತ್ರಿ ಆತಂಕ ವ್ಯಕ್ತಪಡಿಸಿದ್ದಾರೆ.ಗೋ ಸಾಕಣೆ ದುಬಾರಿಯೆಂದು ಗೋವುಗಳನ್ನು ಸಾಕಲು ಹಿಂಜರಿಯುವ ರೈತರ ಮೇಲೆ ಗೋ ಹತ್ಯೆ ನಿಷೇಧ ಮೊಕದ್ದಮೆ ಹಾಕಲಾಗುವುದು ಎಂದು ಎಚ್ಚರಿಸಿರುವ ಮುಖ್ಯಮಂತ್ರಿ, ಬ್ಯಾಂಕಿನಿಂದ ಸಾಲ ತೆಗೆದು ಗೋವುಗಳನ್ನು ಕಡ್ಡಾಯವಾಗಿ ಸಾಕತಕ್ಕದ್ದು ಎಂದು ಎಚ್ಚರಿಸಿದ್ದಾರೆ.ಗೋವುಗಳನ್ನು ಸಾಕಿದ ರೈತರು ದಿನದಿಂದ ದಿನಕ್ಕೆ ದುರ್ಬಲರಾಗುತ್ತಿದ್ದರೂ, ಗೋಮಾಳಗಳನ್ನಿಟ್ಟು ಗೊಡ್ಡು ದನಗಳನ್ನು ಸಾಕುವ ಸ್ವಾಮೀಜಿಗಳು ದಷ್ಟ ಪುಷ್ಟರಾಗುತ್ತಿರುವುದಕ್ಕೆ ಮುಖ್ಯಮಂತ್ರಿ ಹರ್ಷ ವ್ಯಕ್ತಪಡಿಸಿದ್ದಾರೆ.ಗೋವುಗಳನ್ನು ಸಾಕುವ ರೈತರಿಗೆ ಅವರ ಭೂಮಿ, ಮನೆಯ ಆಧಾರವಿಟ್ಟು ಇನ್ನಷ್ಟು ಸಾಲವನ್ನು ನೀಡಲಾಗುವುದು.
ಹಾಗೆಯೇ, ಗೊಡ್ಡು ದನಗಳನ್ನು ಗೋಮಾಳದಲ್ಲಿಟ್ಟು ಸಾಕುವ ಮಠಾಧಿಪತಿಗಳಿಗೆ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನವನ್ನು ಒದಗಿಸಲಾಗುವುದು. ಸರಕಾರದ ಕೆಚ್ಚಲಿನಿಂದ ಯಾವಾಗಬೇಕಾದರೂ ಹಾಲು ಕರೆಯಲು ಅವರಿಗೆ ಪೂರ್ಣ ಅವಕಾಶವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರವಿವಾರ - ಮಾರ್ಚ್ -28-2010

No comments:

Post a Comment