Tuesday, May 12, 2015

‘ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ...’

ಇದು ಜನವರಿ, 20, 2008, ರವಿವಾರ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ 

ಮಂಗಳ ಗ್ರಹದ ಜೀವಿಗಳು ಕೊನೆಗೂ ಭೂಮಿಯಲ್ಲಿ ಜೀವಿಗಳಿರುವುದನ್ನು ಪತ್ತೆ ಮಾಡಿದವು. ತಕ್ಷಣ ಮಂಗಳ ಗ್ರಹದ ವಿಜ್ಞಾನಿಗಳು ಸಭೆ ಸೇರಿದರು. ಒಂದು ತಂಡವನ್ನು ಮಾಡಿ ಭೂಮಿಗೆ ಕಳುಹಿಸುವುದೆಂದು ತೀರ್ಮಾನಿಸಲಾಯಿತು. ಭೂಮಿಯ ಬಗೆಗಿನ ವಿವರಗಳನ್ನು, ಅಲ್ಲಿಯ ಜನಜೀವನ, ಬದುಕಿನ ಶೈಲಿಯನ್ನು ಅಧ್ಯಯನ ಮಾಡಿ ಒಂದು ವರದಿಯನ್ನು ಮಾಡಬೇಕೆಂದು ಈ ತಂಡಕ್ಕೆ ತಿಳಿಸಲಾಯಿತು. ಮಂಗಳ ಗ್ರಹದಿಂದ ಈ ತಂಡ ನೇರವಾಗಿ ಕರ್ನಾಟಕಕ್ಕೇ ಬಂದಿಳಿದು, ಗುಪ್ತವಾಗಿ ಜನರ ನಡುವೆ ಓಡಾಡಿ ಒಂದು ವರದಿಯನ್ನು ಸಿದ್ಧ ಪಡಿಸಿ, ಮರಳಿ ತಮ್ಮ ಗ್ರಹಕ್ಕೆ ತೆರಳಿತು. ಒಂದು ದಿನ ಮುಂಜಾನೆ ಪತ್ರಕರ್ತ ಎಂಜಲು ಕಾಸಿ ಮೂತ್ರ ಮಾಡಲೆಂದು ಎದ್ದಾಗ ಆಕಾಶದಿಂದ ಎನೋ ಬಿದ್ದಂತಾಯಿತು. ನೋಡಿದರೆ ಅದು ಮಂಗಳ ಗ್ರಹದ ಜೀವಿಗಳು ಸಿದ್ಧ ಪಡಿಸಿದ ವರದಿ. ಬಹುಶಃ ಕೈ ಜಾರಿ ಕೆಳಗೆ ಬಿದ್ದಿರಬಹುದು ಎಂದು ಕಾಸಿ ಒಮ್ಮೆ ಆಕಾಶ ನೋಡಿದ. ಮಂಗಳ ಗ್ರಹದ ಜೀವಿಗಳು ತಮ್ಮ ವಿಜ್ಞಾನಿಗಳಿಗೆ ನೀಡಿದ ಆ ಸ್ಕೂಪ್ ವರದಿ ಈ ಕೆಳಗಿನಂತಿದೆ.
***
1. ನಾವು ಕರ್ನಾಟಕ ಎಂಬ ಊರಿಗೆ ಮೊದಲು ಇಳಿದೆವು. ಇದು ಸಂಪೂರ್ಣ ಧೂಳಿನಿಂದಾವತವಾದ ಒಂದು ಗ್ರಹ. ಇಳಿದಾಕ್ಷಣ ನಾವು ಬಹತ್ ಕುಳಿಗಳನ್ನು ಅಥವಾ ಹೊಂಡಗಳನ್ನು ಕಂಡೆವು. ಈ ಕುಳಿಗಳನ್ನು ಇಲ್ಲಿನ ಜನರು ರಸ್ತೆಗಳೆಂದು ಕರೆಯುತ್ತಾರೆ.
2. ನಮ್ಮ ಗ್ರಹದಲ್ಲಿರುವಂತೆ ಭೂಮಿಯಲ್ಲಿಯೂ ಕಳ್ಳರು, ದರೋಡೆಕೋರರು ಇದ್ದಾರೆ. ಆದರೆ ಅವರನ್ನು ಈ ಗ್ರಹದಲ್ಲಿ ರಾಜಕಾರಣಿಗಳು ಎಂಬ ವಿಚಿತ್ರ ಹೆಸರಿನಿಂದ ಕರೆಯುತ್ತಾರೆ. ಅವರಿಗಾಗಿಯೇ ಭಾರೀ ಸೌಧವೊಂದನ್ನು ಕಟ್ಟಿದ್ದಾರೆ. ಅದನ್ನು ವಿಧಾನ ಸೌಧ ಎಂದು ಕರೆಯುತ್ತಾರೆ. ದರೋಡೆ ಮಾಡುವುದಕ್ಕಾಗಿಯೇ ಇಲ್ಲಿ ಸಭೆಗಳು ಬಹಿರಂಗವಾಗಿ ನಡೆಯುತ್ತವೆ. ಅದನ್ನು ಈ ಗ್ರಹದ ಜನರು ಅಧಿವೇಶನ ಎಂದು ಕರೆಯುತ್ತಾರೆ. ಅತ್ಯುತ್ತಮ ದರೋಡೆಕೋರರನ್ನು ಆಯ್ಕೆ ಮಾಡುವುದಕ್ಕಾಗಿ ಇಲ್ಲಿ ಚುನಾವಣೆಗಳೂ ನಡೆಯುತ್ತವೆ. ಇಲ್ಲಿ ಹೊಟ್ಟೆಗೆ ತಿನ್ನಲು ಏನೂ ಇಲ್ಲದವರನ್ನು ಕಳ್ಳರು, ನಕ್ಸಲೀಯರು ಎಂದು ಕರೆಯುತ್ತಾರೆ. ಅವರನ್ನು ಕೊಂದು ಹಾಕುವುದಕ್ಕಾಗಿಯೇ ಇಲ್ಲಿ ವಿಶೇಷ ಪಡೆಗಳಿವೆ. ಈ ಪಡೆಗಳನ್ನು ಆ ಹೊಟ್ಟೆಗೆ ಇಲ್ಲದವರೇ ದುಡ್ಡುಕೊಟ್ಟು ಸಾಕುತ್ತಾರೆ.
3. ಇದೊಂದು ವಿಚಿತ್ರ ಗ್ರಹ. ಇಲ್ಲಿ ಜನರನ್ನು ಹಿಂಸಿಸುವುದಕ್ಕಾಗಿಯೇ, ಅಮಾಯಕರನ್ನು ಬಂಧಿಸಿ ಅವರ ಮೇಲೆ ಮೊಕದ್ದಮೆ ಹೂಡುವುದಕ್ಕಾಗಿಯೇ ಒಂದು ಇಲಾಖೆ ಇದೆ. ಆ ಇಲಾಖೆಯನ್ನು ಅವರು ಪೊಲೀಸ್ ಇಲಾಖೆ ಎಂದು ಕರೆಯುತ್ತಾರೆ. ಕದಿಯದವರನ್ನು ಕದಿಯುವಂತೆ ಮಾಡುವುದು ಇವರ ಮುಖ್ಯ ಕೆಲಸ.
4. ಇಲ್ಲೊಂದು ಉಡುಪಿ ಎನ್ನುವ ಸ್ಥಳ ಇದೆ. ಇದನ್ನೇ ‘ಜಗತ್ತು’ ಎಂದೂ ಇಲ್ಲಿನವರು ಕರೆಯುತ್ತಾರೆ. ಈ ಜಗತ್ತಿಗೆ ಗುರುಗಳೂ ಇದ್ದಾರೆ. ಅವರು ತಮ್ಮನ್ನು ತಾವು ಜಗದ್ಗುರು ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಇಲ್ಲಿ ಉಡುಪಿ ಮಾತ್ರ ಜಗತ್ತು ಮತ್ತು ಅದರಾಚೆಗೆ ಜಗತ್ತು ಇಲ್ಲ ಎನ್ನುವ ವಿಷಯದಲ್ಲಿ ಭಾರೀ ಜಗಳವಾಯಿತು. ಒಬ್ಬ ಜಗದ್ಗುರು ಸಮುದ್ರದಾಚೆಗೂ ಜಗತ್ತು ಇದೆ ಎಂದರೆ, ಉಳಿದವರೆಲ್ಲಾ ಸಮುದ್ರದಾಚೆಗೆ ಜಗತ್ತು ಇಲ್ಲ ಎಂದು ವಾದಿಸಿದರು. ಈ ಜಗಳವನ್ನು ಇಲ್ಲಿ ‘ಪರ್ಯಾಯೋತ್ಸವ’ ಎಂದು ಕರೆಯುತ್ತಾರೆ.
5. ಇಲ್ಲಿ ‘ಸಂಸ್ಕೃತಿ’ ಎನ್ನುವ ವಿಚಿತ್ರ ಪದವನ್ನು ಬಳಸುತ್ತಾರೆ. ಹೆಣ್ಣಿನ ಮೇಲೆ ಸಾಮೂಹಿಕ ಅತ್ಯಾಚಾರ, ಸಾರ್ವಜನಿಕವಾಗಿ ಅಮಾಯಕರನ್ನು ಬೆತ್ತಲೆ ಮಾಡಿ ಥಳಿಸುವುದು, ಆದಿವಾಸಿಗಳು ಎಂದು ಕರೆಸಿಕೊಳ್ಳುವವರನ್ನು ಯರ್ರಾಬಿರ್ರಿ ಥಳಿಸುವುದು ಹೀಗೆ ಇವರು ತಮ್ಮ ಸಂಸ್ಕೃತಿಯನ್ನು ಆಚರಿಸಿಕೊಳ್ಳುತ್ತಾರೆ. ಸುಮಾರು 5 ವರ್ಷಗಳ ಹಿಂದೆ ಗುಜರಾತ್ ಎಂಬ ಊರಿನಲ್ಲಿ ಭಾರೀ ಸಾಂಸ್ಕೃತಿಕ ಉತ್ಸವ ಆಚರಣೆಯಾಯಿತಂತೆ. ನರೇಂದ್ರ ಮೋದಿ ಎಂಬ ನಾಯಕನೇ ಆ ಸಾಂಸ್ಕೃತಿಕ ಆಚರಣೆಯ ನೇತತ್ವವನ್ನು ವಹಿಸಿದ್ದರಿಂದ, ಜನರು ಆತನನ್ನೇ ಮತ್ತೆ ತಮ್ಮ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಇದನ್ನು ಇಲ್ಲಿಯ ಜನರು ಸಾಂಸ್ಕೃತಿಕ ಪುನರುತ್ಥಾನ ಎಂದೂ ಕರೆಯುತ್ತಾರೆ.
6. ಇಲ್ಲಿ ‘ದನ’ ಎನ್ನುವ ಒಂದು ಪ್ರಾಣಿ ಇದೆ. ಇದು ಹಾಲು ಕೊಡುತ್ತದೆ. ಜೊತೆಗೆ ಇದನ್ನು ಹಾಲಿಗಷ್ಟೇ ಅಲ್ಲದೆ ಇನ್ನಿತರ ಪ್ರಯೋಜನಗಳಿಗೆ ಬಳಸಲು ಸಾಧ್ಯವೇ ಎನ್ನುವ ನಿಟ್ಟಿನಲ್ಲಿ ಇಲ್ಲಿನ ಜೀವಿಗಳು ಪ್ರಯೋಗ ನಡೆಸುತ್ತಿವೆ. ಕರೆದರೆ ಹಾಲು ಮಾತ್ರ ಅಲ್ಲ, ಅಧಿಕಾರದ ಕುರ್ಚಿ, ರಕ್ತ, ಹಿಂಸೆ ಇತ್ಯಾದಿಗಳು ಬರಲು ಸಾಧ್ಯವೆ ಎಂದು ಅವರು ಪ್ರಯೋಗ ಮಾಡುತ್ತಿದ್ದಾರೆ. ಈ ಪ್ರಯೋಗ ಭಾಗಶಃಯಾಗಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ. ಈವರೆಗೆ ಈ ದನ ಎನ್ನುವ ಪ್ರಾಣಿ ಬಿಳಿ ಹಾಲನ್ನು ಮಾತ್ರ ಕೊಡುತ್ತಿತ್ತು. ಕೇಸರಿ ಬಣ್ಣದ ಹಾಲನ್ನು ತೆಗೆಯಲು ಸಾಧ್ಯವೆ ಎಂಬ ಕುರಿತಂತೆಯೂ ಭಾರೀ ಪ್ರಯೋಗಗಳು ನಡೆಯುತ್ತಿವೆ.
7. ಇಲ್ಲಿ ಕಾಡುಗಳಿರುವಂತೆಯೇ ಅಲ್ಲಲ್ಲಿ ‘ಹಳ್ಳಿ’ ಎನ್ನುವುದು ಇವೆಯಂತೆ. ಇವುಗಳಲ್ಲಿ ತುಂಬಾ ಹಿಂದೆ ‘ರೈತ’ ಎಂಬ ಜೀವಿ ವಾಸಿಸುತ್ತಿತ್ತಂತೆ. ಇದೊಂದು ಭಯಂಕರ ಜೀವಿಯಾಗಿತ್ತಂತೆ. ಮುಖ್ಯವಾಗಿ ಭಯೋತ್ಪಾದನೆ, ಉಗ್ರವಾದ ಮೊದಲಾದ ಚಟುವಟಿಕೆಗಳನ್ನು ಈ ಜೀವಿ ನಡೆಸುತ್ತಿತ್ತಂತೆ. ಇವುಗಳು ತಮ್ಮ ಉಗ್ರ ಚಟುವಟಿಕೆಗಳಿಗಾಗಿ ‘ನೇಗಿಲು’ ಎಂಬ ಭಯಾನಕ ಆಯುಧವನ್ನು ಬಳಸುತ್ತಿತ್ತಂತೆ. ಆದುದರಿಂದ ಇವುಗಳನ್ನು ಎನ್‌ಕೌಂಟರ್‌ನಿಂದ ಕೊಲ್ಲಲಾಯಿತಂತೆ. ಈಗಲೂ ಈ ‘ರೈತ’ ಎನ್ನುವ ಜೀವಿ ಅಲ್ಲಲ್ಲಿ ಉಳಿದುಕೊಂಡಿದೆಯಂತೆ. ಅದನ್ನು ಹುಡುಕಿ ಹತ್ಯೆಗೈಯುವುದಕ್ಕಾಗಿಯೇ ‘ಸೆಝ್’ ‘ಐಟಿ ಪಾರ್ಕ್’ ಮೊದಲಾದ ಯೋಜನೆಗಳನ್ನು ಜಾರಿಗೆ ತರಲಾಗಿದೆಯಂತೆ. ಇದರ ವಿರುದ್ಧವೂ ಈ ಅಳಿದುಳಿದ ‘ರೈತ’ರು ಎನ್ನುವ ಜೀವಿಗಳು ಭಾರೀ ಸಂಚು ನಡೆಸುತ್ತಿವೆಯಂತೆ.
8. ಇಲ್ಲಿ ಭಾರೀ ಶ್ರೀಮಂತರು ಮುಖ ಒರೆಸಿಕೊಳ್ಳುವುದಕ್ಕೆ ಹಾಗೂ ಟಾಯ್ಲೆಟ್‌ನಲ್ಲಿ ಹೊಲಸನ್ನು ಒರೆಸಿಕೊಳ್ಳುವುದಕ್ಕೆ ಕಾಗದಗಳನ್ನು ಬಳಸುತ್ತಾರೆ. ಈ ಕಾಗದಗಳಿಗೆ ಇಲ್ಲಿ ‘ಪತ್ರಿಕೆಗಳು’ ಎಂದು ಕರೆಯುತ್ತಾರೆ. ಈ ಪತ್ರಿಕೆಗಳನ್ನು ಬಣ್ಣ ಬಣ್ಣವಾಗಿ ಮುದ್ರಿಸುತ್ತಾರೆ. ವಿವಿಧ ಕಂಪೆನಿಗಳು ವಿವಿಧ ಹೆಸರುಗಳಿಂದ ಇವುಗಳನ್ನು ಮುದ್ರಿಸುತ್ತವೆ. ಇಲ್ಲಿ ಮೇಲೆ ಹೇಳಿದ ‘ಸಂಸ್ಕೃತಿ’ಯ ವಕ್ತಾರರು ಎಂದು ಕರೆಸಿಕೊಂಡವರೂ ಈ ಕಾಗದಗಳನ್ನು ಬಳಸುತ್ತಾರೆ. ಅವರು ವಾಂತಿ ಮಾಡಲು ಬಳಸುವುದು ಇದೇ ಕಾಗದಗಳನ್ನು. ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳನ್ನೇ ಈ ಕೆಲಸಕ್ಕೆ ಹೆಚ್ಚು ಬಳಸುತ್ತಾರೆ. ಹಾಗೆಯೇ ಸಮಾಜದ ಉನ್ನತ ವರ್ಣೀಯರು ಮುದ್ಸಿುವ ಪತ್ರಿಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಯಾಕೆಂದರೆ ಅದು ಹೊಲಸನ್ನು ಒರೆಸುವುದಕ್ಕೆ, ವಾಂತಿ ಮಾಡುವುದಕ್ಕೆ ಹೆಚ್ಚು ಕ್ವಾಲಿಟಿ ಹೊಂದಿರುತ್ತದೆ ಎನ್ನುವುದು ಈ ಗ್ರಹದವರ ನಂಬಿಕೆ.
9. ಇಲ್ಲಿ ಕಸದ ತೊಟ್ಟಿ ಎಂಬ ಒಂದು ಪೆಟ್ಟಿಗೆ ಇದೆ. ಇದನ್ನು ಆಗಷ್ಟೇ ಹುಟ್ಟಿದ ಅನಾಥ ಮಕ್ಕಳನ್ನು ಎಸೆಯುವುದಕ್ಕೆ, ‘ಹೆಣ್ಣು’ ಎಂಬ ಭಯಾನಕ ಜೀವಿಯೊಂದು ಜನಿಸಿದರೆ ಅದನ್ನು ಕತ್ತು ಹಿಸುಕಿ ಕೊಂದು ಎಸೆಯುವುದಕ್ಕೆ, ಹೊಟ್ಟೆಯೊಳಗಿರುವ ಭ್ರೂಣವನ್ನು ಎಸೆಯುವುದಕ್ಕೆ ಬಳಸುತ್ತಾರೆ. ಇಂತಹ ಕೆಲಸಕ್ಕಾಗಿಯೇ ಈ ಗ್ರಹದಲ್ಲಿ ಚರಂಡಿ, ಗಟಾರ ಮೊದಲಾದವುಗಳನ್ನು ಮಾಡದ್ದಾರೆ. ಕಸಗಳನ್ನು ಎಸೆಯುವುದಕ್ಕೆ ಸಾರ್ವಜನಿಕ ಸ್ಥಳ, ಇನ್ನೊಬ್ಬರ ಅಂಗಳ, ರಸ್ತೆ ಇತ್ಯಾದಿಗಳನ್ನು ಬಳಸುತ್ತಾರೆ.
10. ಈ ಎಲ್ಲ ವರದಿಗಳ ಆಧಾರದಲ್ಲಿ ಸಾಬೀತಾಗುವುದೇನೆಂದರೆ, ಈ ಭೂಮಿ ಎಂಬ ಗ್ರಹ ಯಾವ ಕಾರಣಕ್ಕೂ ‘ಮನುಷ್ಯ’ರು ವಾಸ ಮಾಡುವುದಕ್ಕೆ ಯೋಗ್ಯವಾದ ಗ್ರಹ ಅಲ್ಲ. ಆದುದರಿಂದ ಮಂಗಳ ಗ್ರಹದ ಯಾವ ಮನುಷ್ಯರು ಕೂಡ ತಪ್ಪಿಯೂ ಈ ಭೂಮಿ ಎಂಬ ಗ್ರಹದಲ್ಲಿ ವಾಸ ಮಾಡುವ ಕುರಿತು ಯೋಜನೆ ಮಾಡಬಾರದು. ಹಾಗೆ ಯೋಚನೆ ಮಾಡಿದರೆ ಆಗುವ ಅನಾಹುತಕ್ಕೆ ಮಂಗಳ ಗ್ರಹದ ವಿಜ್ಞಾನಿಗಳಾಗಲಿ, ಸರಕಾರವಾಗಲಿ ಹೊಣೆಯಾಗುವುದಿಲ್ಲ.
(ಜನವರಿ, 20, 2008, ರವಿವಾರ)

Sunday, May 10, 2015

ನಾನೇ ಮೂತ್ರ ಸುರಿದು ಬೆಳೆಸಿದ ಪಕ್ಷ!


ನನ್ನ ಮೂತ್ರವನ್ನು ತೋಟಕ್ಕೆ ಗೊಬ್ಬರವಾಗಿ ಬಳಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯ ಹಿನ್ನೆಲೆಯಲ್ಲಿ 10-5-2015ರ ರವಿವಾರ  ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ 

ಸಚಿವ ನಿತಿನ್ ಗಡ್ಕರಿಯ ಮನೆಯ ಬಾಗಿಲನ್ನು ಯಾರೋ ತಟ್ಟಿದಂತಾಯಿತು. ಅದಾಗಷ್ಟೇ ಹಿಂದುಗಡೆಯಿರುವ ತೋಟದಲ್ಲಿ ಮೂತ್ರ ವಿಸರ್ಜನೆ ಮಾಡಿ ಒಳ ಬಂದಿದ್ದ ಗಡ್ಕರಿಯವರು ಕಿಟಕಿಯಿಂದ ಇಣುಕಿ ನೋಡಿದರು. ನೋಡಿದರೆ ಪತ್ರಕರ್ತ ಎಂಜಲು ಕಾಸಿ.
ಬಾಗಿಲು ತೆಗೆದದ್ದೇ ‘‘ಏನ್ರೀ...ಇಂಟರ್ಯೂ ಮಾಡಲು ಬಂದಿದ್ದೀರಾ...’’ ಎಂದು ಕೇಳಿದರು.
‘‘ಇಲ್ಲಾ ಸಾರ್...ಮೂತ್ರ ಮಾಡುವುದಕ್ಕೆ ಬಂದಿದ್ದೇನೆ....ನಿಮ್ಮ ತೋಟಕ್ಕೆ ನೀವು ಮೂತ್ರವನ್ನೇ ಬಳಸುತ್ತಿದ್ದೀರಿ ಎಂದು ಗೊತ್ತಾಯಿತು. ಕರ್ನಾಟಕದ ಮಂತ್ರಿಗಳನ್ನು ಇಂಟರ್ಯೂ ಮಾಡಲು ಬಂದಿದ್ದೆ. ಮೂತ್ರ ವಿಸರ್ಜನೆ ಮಾಡಲು ಎಲ್ಲೂ ಶೌಚಾಲಯ ಸಿಗಲಿಲ್ಲ. ಯಾರೋ ನಿಮ್ಮ ಮನೆ ತೋರಿಸಿದರು...’’ ಎಂದು ಹಲ್ಲು ಗಿಂಜಿದ. ‘‘ಬನ್ನಿ...ಬನ್ನಿ...ನನ್ನ ತೋಟ ನಿಮ್ಮನ್ನೇ ಕಾಯುತ್ತಿದೆ...ಇಡೀ ದಿಲ್ಲಿಯ ಜನರೆಲ್ಲ ನನ್ನ ತೋಟವನ್ನೇ ಸುಲಭ ಶೌಚಾಲಯ ಮಾಡಿದ್ದಾರೆ...ಶುಚಿತ್ವಕ್ಕಾಗಿ ಪ್ರಧಾನಿಯವರು ಬಿಡುಗಡೆ ಮಾಡಿದ ಅನುದಾನದಲ್ಲಿ ಒಂದು ಭಾಗವನ್ನು ನಾನು ನನ್ನ ತೋಟಕ್ಕೆ ಹಾಕಿದ್ದೇನೆ...ಸುಲಭ ಶೌಚಾಲಯವೂ ಆಯಿತು...ಸುಲಭದಲ್ಲಿ ತೋಟವೂ ಆಯಿತು...ಇನ್ನು ಮುಂದೆ ಶೌಚಾಲಯಕ್ಕಾಗಿ ಮೀಸಲಿರುವ ಹಣವನ್ನು ಆಯಾ ಊರಿನಲ್ಲಿರುವ ಅಡಿಕೆ ತೋಟದ ಮಾಲಕರಿಗೆ ವಿತರಿಸಲಾಗುತ್ತದೆ. ಆಯಾ ಊರಿನ ಜನರು ಅವರ ತೋಟದಲ್ಲೇ ಮೂತ್ರ ಮತ್ತು ಇನ್ನಿತರ ವಿಸರ್ಜನೆಯನ್ನು ಮಾಡಿ ತೋಟಕ್ಕೆ ಗೊಬ್ಬರ ಒದಗಿಸಬೇಕು. ಹಾಗೆಯೇ ಎರಡೂ ಕಾರ್ಯವೂ ಆದಂತಾಯಿತು. ರೈತರ ಗದ್ದೆಗೆ ಗೊಬ್ಬರ ಪೂರೈಸುವ ಬದಲು ಅವರ ಗದ್ದೆ ತೋಟಗಳನ್ನೆಲ್ಲ ಸುಲಭ ಶೌಚಾಲಯ ಮಾಡುವ ಯೋಜನೆ ನನ್ನ ಬಳಿ ಇದೆ. ಪ್ರಧಾನಿಯವರೂ ಇದಕ್ಕೆ ಸಮ್ಮತಿ ನೀಡಿದ್ದಾರೆ...ಹೀಗೆ ಪ್ರತಿ ಊರಲ್ಲೂ ವಿಶಾಲ ಶೌಚಾಲಯ ನಿರ್ಮಾಣ ಮಾಡಿದಂತಾಗುತ್ತದೆ....’’
ಇದ್ದಕ್ಕಿದ್ದಂತೆಯೇ ಗಡ್ಕರಿಯ ಹಿತ್ತಲಿನಿಂದ ದುರ್ವಾಸನೆ ಮೂಗಿಗೆ ಬಡಿಯಿತು. ಎಂಜಲು ಕಾಸಿ ಮೂಗು ಮುಚ್ಚಿಕೊಂಡೇ ಸಂದರ್ಶನ ಮಾಡತೊಡಗಿದ ‘‘ಸಾರ್...ನಿಮ್ಮ ಮೂತ್ರವನ್ನೇ ಗೊಬ್ಬರವಾಗಿ ಬಳಸುವುದನ್ನು ನೀವು ಕಂಡು ಹಿಡಿದದ್ದು ಹೇಗೆ ಸಾರ್?’’
‘‘ನಾನದನ್ನು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷನಾಗಿದ್ದಾಗಲೇ ಪ್ರಯೋಗ ಮಾಡುತ್ತಾ ಬಂದೆ. ಕೊನೆಗೂ ಒಳ್ಳೆಯ ಲಿತಾಂಶ ಸಿಕ್ಕಿತು. ಇದೀಗ ನನ್ನ ಲಿತಾಂಶವನ್ನು ಘೋಷಿಸಿದ್ದೇನೆ.....’’
‘‘ನೀವು ಅದನ್ನು ಹೇಗೆ, ಎಲ್ಲಿ ಪ್ರಯೋಗ ಮಾಡಿದಿರಿ ಸಾರ್?’’ ಕಾಸಿ ಕುತೂಹಲದಿಂದ ಕೇಳಿದ.
‘‘ನೋಡ್ರಿ...ನಮ್ಮ ಬಿಜೆಪಿ ಅನ್ನೋ ತೋಟ ಅದೇನು ಗೊಬ್ಬರ ಹಾಕಿದ್ರೂ ಸರಿಯಾಗಿ ಬೆಳೀತಾ ಇರ್ಲಿಲ್ಲ.....ರಾಮಜನ್ಮಭೂಮಿ ಗೊಬ್ಬರ ಹಾಕಿಯಾಯಿತು. ಗುಜರಾತ್ ಹತ್ಯಾಕಾಂಡ ಗೊಬ್ಬರ ಹಾಕಿ ಆಯಿತು...ಮುಂಬಯಿ ಗಲಭೆ ಗೊಬ್ಬರ...ಹೀಗೆ ಹಾಕದ ಗೊಬ್ಬರಗಳೇ ಇಲ್ಲ....ಬಳಿಕ ನನ್ನನ್ನು ಅಧ್ಯಕ್ಷರನ್ನಾಗಿ ಮಾಡಿದರು ನೋಡಿ. ನಾನು ಹೊಸ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದೆ. ಪ್ರತಿ ದಿನ ನನ್ನ ಮೂತ್ರವನ್ನೆಲ್ಲ ಸಂಗ್ರಹಿಸಿ, ಗೊಬ್ಬರ ರೂಪದಲ್ಲಿ ಬಳಸಿದೆ. ಬರೇ ಒಂದೆರಡು ವರ್ಷಗಳಲ್ಲಿ ಬಿಜೆಪಿ ವಿಶ್ವದೆತ್ತರ ಬೆಳೆದು ನಿಂತು ಇದೀಗ ಮೋದಿ ಪ್ರಧಾನಿಯಾಗಿ, ಕಾಂಗ್ರೆಸ್ ಮೂಲೆಗುಂಪಾಗಿ ಬಿಟ್ಟಿದೆ....’’ ಗಡ್ಕರಿ ಗುಟ್ಟನ್ನು ಬಿಚ್ಚಿಟ್ಟರು.
‘‘ಅಂದರೆ ಬಿಜೆಪಿ ಈ ಪ್ರಮಾಣದಲ್ಲಿ ಬೆಳೆಯುವುದಕ್ಕೆ ನಿಮ್ಮ ಗೊಬ್ಬರವೇ ಕಾರಣ ಎನ್ನುತ್ತೀರಾ?’’ ಕಾಸಿ ಅನುಮಾನದಿಂದ ಮತ್ತೆ ಕೇಳಿದ.
‘‘ಯಾಕ್ರೀ ಅನುಮಾನ?’’ ಗಡ್ಕರಿ ಸಿಟ್ಟಿನಿಂದ ಕೇಳಿದರು.
‘‘ಮತ್ಯಾಕೆ ಸಾರ್ ನಿಮ್ಮನ್ನು ಪಕ್ಷದಿಂದ ಕೆಳಗಿಳಿಸಿದರು? ನಿಮ್ಮನ್ನು ಕೆಳಗಿಳಿಸಿ ರಾಜ್‌ನಾಥ್ ಸಿಂಗ್‌ನನ್ನು ಯಾಕೆ ಪಕ್ಷಾಧ್ಯಕ್ಷ ಮಾಡಿದರು?’’ ಕಾಸಿ ಗೊಂದಲದಿಂದ ಕೇಳಿದ. ‘‘ನೋಡ್ರಿ...ಮೂತ್ರವನ್ನು ಗೊಬ್ಬರವಾಗಿ ಬಳಸುವಾಗ ಒಂದಿಷ್ಟು ದುರ್ವಾಸನೆ ಬರುವುದು ಸಹಜ. ಆದರೆ ಅದನ್ನು ಮುಂದಿಟ್ಟುಕೊಂಡು ‘ನನ್ನ ಅವ್ಯವಹಾರದ ದುರ್ವಾಸನೆ’ ಎಂದು ಆರೋಪಿಸಿದರು. ನಾನು ಮೂತ್ರ ಮಾಡಿ ಬೆಳೆಸಿದ ಪಕ್ಷದ ನಾಯಕ ಸ್ಥಾನದಿಂದ ನನ್ನನ್ನು ಕೆಳಗಿಳಿಸಿಬಿಟ್ಟರು. ಆದರೂ ತೋಟ ತುಂಬಾ ಚೆನ್ನಾಗಿ ಬೆಳೆದು ಇದೀಗ ಆ ತೋಟದ ಲವನ್ನು ನರೇಂದ್ರ ಮೋದಿಯಾದಿಯಾಗಿ ಎಲ್ಲರೂ ಅನುಭವಿಸುತ್ತಿದ್ದಾರೆ. ಮೂತ್ರ ಮಾಡಿದ ನನ್ನನ್ನು ಕಡೆಗಣಿಸಿದ್ದಾರೆ...’’
ಕಾಸಿಗೆ ತುಂಬಾ ಬೇಜಾರಾಯಿತು. ಆದರೂ ಮೂತ್ರದಿಂದಲೇ ಬಿಜೆಪಿ ಯೆನ್ನುವ ಮರ ಮುಗಿಲೆತ್ತರ ಬೆಳೆದಿದೆ ಎನ್ನುವುದು ಅವನಲ್ಲಿ ರೋಮಾಂಚನವನ್ನು ತರಿಸಿತು ‘‘ಸಾರ್...ಇನ್ನು ಈ ಮೂತ್ರದಿಂದ ಏನೇನು ಬೆಳೆಸುವುದೆಂದು ಮಾಡಿದ್ದೀರಿ?’’
ಗಡ್ಕರಿ ತನ್ನ ಯೋಜನೆಯನ್ನು ಮುಂದಿಟ್ಟರು ‘‘ಈ ದೇಶದ ಗದ್ದೆಗಳಿಗೆ, ತೋಟಗಳಿಗೆ ಮೂತ್ರವನ್ನೇ ಗೊಬ್ಬರವಾಗಿ ವಿತರಿಸಬೇಕು ಎಂದು ಮಾಡಿದ್ದೇವೆ...’’
ಕಾಸಿ ಬೆಚ್ಚಿ ಬಿದ್ದ ‘‘ಸಾರ್...ಇಡೀ ದೇಶಕ್ಕೆ ನೀವೊಬ್ಬರೇ ಮೂತ್ರವನ್ನು ಪೂರೈಸುತ್ತೀರಾ? ಅಷ್ಟೂ ಮೂತ್ರವನ್ನು ವಿಸರ್ಜಿಸಲು ನಿಮ್ಮಿಂದ ಸಾಧ್ಯವೆ?’’
ಗಡ್ಕರಿ ಸ್ಪಷ್ಟನೆ ನೀಡಿದರು ‘‘ಬರೇ ನನ್ನ ಮೂತ್ರ ಮಾತ್ರವಲ್ಲ....ಇಡೀ ಸಚಿವ ಸಂಪುಟದ ಪ್ರಮುಖರು ಮತ್ತು ಸಂಸದರ ಮೂತ್ರಗಳನ್ನು ಸಂಗ್ರಹಿಸಿ ಅದನ್ನು ದೇಶಕ್ಕೆ ಪೂರೈಸುವ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ....’’
‘‘ಇದಕ್ಕೆ ಎಲ್ಲ ಸಂಸದರೂ ಸಮ್ಮತಿಸಿದ್ದಾರಾ ಸಾರ್?’’ ಕಾಸಿಗೆ ಮತ್ತೆ ಅನುಮಾನ ಹತ್ತಿತು.
‘‘ನರೇಂದ್ರ ಮೋದಿಯವರು ತಕ್ಷಣ ಸಮ್ಮತಿಸಿದರು. ಈಗಾಗಲೇ ಬಿಜೆಪಿಯೊಳಗೆ ಕೆಲವು ಸ್ವಾಮೀಜಿಗಳ, ಸಾ್ವಗಳ ವೇಷದಲ್ಲಿರುವ ಸಂಸದರು ಕಂಡ ಕಂಡಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ನರೇಂದ್ರ ಮೋದಿಯವರ ಗಮನಕ್ಕೂ ಬಂದಿದೆ. ಭಾಷಣದ ಹೆಸರಿನಲ್ಲಿ, ಪತ್ರಿಕಾ ಹೇಳಿಕೆಯ ಹೆಸರಿನಲ್ಲಿ ಬಾಯಿಯಿಂದಲೂ ಮೂತ್ರ ವಿಸರ್ಜನೆ ಮಾಡುವ ಸಾಮರ್ಥ್ಯವನ್ನು ಅವರು ಈಗಾಗಲೇ ಪ್ರದರ್ಶಿಸಿದ್ದಾರೆ. ಇವರ ಈ ಸಾಮರ್ಥ್ಯ ಬಿಜೆಪಿಯ ಪರಿಸರದಲ್ಲಿ ವ್ಯರ್ಥವಾಗಿ ಹರಿಯುತ್ತಿರುವುದರಿಂದ ಎಲ್ಲರೂ ಬಿಜೆಪಿ ಕಾಂಪೌಂಡ್‌ನೊಳಗೆ ಮೂಗು ಮುಚ್ಚಿ ಬರಬೇಕಾದ ಪರಿಸ್ಥಿತಿ ಇದೆ. ಹೀಗಿರುವಾಗ, ಈ ವಿಸರ್ಜನೆಯನ್ನೆಲ್ಲ ಸಂಗ್ರಹಿಸಿ ದೇಶದಲ್ಲಿರುವ ತೋಟ, ಗದ್ದೆಗಳಿಗೆ ವಿತರಿಸಿದರೆ ಗೊಬ್ಬರಕ್ಕೆ ಗೊಬ್ಬರವೂ ಆಯಿತು. ನಮ್ಮ ಫಸಲೂ ಜಾಸ್ತಿಯಾಗುತ್ತದೆ...’’
‘‘ಸಾರ್...ಹೀಗಾದಲ್ಲಿ ನರೇಂದ್ರ ಮೋದಿಯವರ ಶುಚಿತ್ವದ ಆಂದೋಲನದ ಗತಿ?’’ ಕಾಸಿ ಆತಂಕದಿಂದ ಕೇಳಿದ.
‘‘ಶುಚಿತ್ವ ಆಂದೋಲನ ಯಶಸ್ವಿಯಾಗಿ ನಡೆಯುತ್ತದೆ. ನಾವು ಪೂರೈಸಿದ ಮೂತ್ರಕ್ಕೆ ಬದಲಿಯಾಗಿ ಶುಚಿತ್ವಕ್ಕಾಗಿ ಬಿಡುಗಡೆ ಮಾಡಿದ ಹಣವನ್ನೆಲ್ಲ ಸಮಾನವಾಗಿ ಹಂಚಿಕೊಳ್ಳುತ್ತೇವೆ...ಹಾಗೆಯೇ ಈ ಗೊಬ್ಬರಕ್ಕೆ ‘ದೇಶಪ್ರೇಮಿ’ ಎಂದು ನಾಮಕರಣ ಮಾಡಿದ್ದೇವೆ...ನಮ್ಮ ಆಸಕ್ತಿಯನ್ನು ಕಂಡ ಅಮೆರಿಕದ ಅಧ್ಯಕ್ಷ ಒಬಾಮ ಅವರು ಕೂಡ ತಮ್ಮ ಅಮೂಲ್ಯ ಮೂತ್ರವನ್ನು ಕಳುಹಿಸಿಕೊಡುತ್ತೇನೆ...ಪ್ರತಿಯಾಗಿ ನಿಮ್ಮ ದೇಶದಲ್ಲಿ ವ್ಯರ್ಥವಾಗಿ ಬಿದ್ದಿರುವ ವಿಜ್ಞಾನಿಗಳನ್ನು, ತಂತ್ರಜ್ಞಾನಿಗಳನ್ನು ನಮಗೆ ಕಳುಹಿಸಿಕೊಡಿ ಎಂದಿದ್ದಾರೆ...ಈ ಒಪ್ಪಂದಕ್ಕೆ ಶೀಘ್ರ ಮೋದಿಯವರು ಸಹಿ ಹಾಕಲಿದ್ದಾರೆ...’’ ಇನ್ನೂ ಇಲ್ಲಿ ನಿಂತರೆ ಒಬಾಮನ ಮೂತ್ರಕ್ಕೆ ಬದಲಿಯಾಗಿ ತನ್ನನ್ನೇ ಕಳುಹಿಸಿಕೊಡಬಹುದು ಎಂದು ಕಾಸಿಗೆ ಭಯವಾಯಿತು. ‘‘ಸಾರ್ ಹೊರಟೆ...’’ ಎಂದ ಕಾಸಿ.
‘‘ನಿಲ್ರೀ...ಎಳೆನೀರು ಕುಡಿದುಕೊಂಡು ಹೋಗಿ. ನನ್ನದೇ ಮನೆಯ ತೋಟದ ಎಳೆನೀರು...ತುಂಬಾ ರುಚಿ ಯಾಗಿದೆ...ನಾನೇ ಗೊಬ್ಬರ ಹಾಕಿ ಸಾಕಿದ ಮರ...’’ ಎನ್ನುತ್ತಿದ್ದಂತೆಯೇ ಕಾಸಿಗೆ ಹೊಟ್ಟೆ ತೊಳೆಸಿದಂತಾಗಿ ಅಲ್ಲಿಂದ ಓಡ ತೊಡಗಿದ. 
೧೦.೫.೨೦೧೫

Saturday, May 9, 2015

ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ...!

ಈ ಬುಡಬುಡಿಕೆ  ಮೇ 4, 2008 ರವಿವಾರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

ಈ ಬಾರಿ ಪಿಯುಸಿಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಫೇಲಾಗಿ ಶಿಕ್ಷಣ ವ್ಯವಸ್ಥೆಯ ಮೇಲೆ, ಪಾಲಕರ ಮೇಲೆ ವಿದ್ಯಾರ್ಥಿಗಳು ಸೇಡು ತೀರಿಸಿಕೊಂಡ ವರದಿಯನ್ನು ಓದಿ ಪತ್ರಕರ್ತ ಎಂಜಲು ಕಾಸಿಗೆ ರೋಮಾಂಚನವಾಯಿತು. ಆತನಿಗೆ ಆ ವಿದ್ಯಾರ್ಥಿಗಳ ಉತ್ತರ ಪತ್ರಿಕೆಯನ್ನು ಒಮ್ಮೆ ನೋಡಬೇಕೆನ್ನಿಸಿತು. ವಿದ್ಯಾರ್ಥಿಗಳ ಉತ್ತರ ಪತ್ರಿಕೆಯೊಂದು ಅದು ಹೇಗೋ ಪತ್ರಕರ್ತ ಎಂಜಲು ಕಾಸಿಯ ಕೈ ಸೇರಿತು. ವಿದ್ಯಾರ್ಥಿಯೊಬ್ಬ ಕೆಲವು ಪ್ರಶ್ನೆಗೆ ಉತ್ತರಿಸಿದ ರೀತಿ ಕುತೂಹಲಕರವಾಗಿದ್ದುದರಿಂದ ಅದನ್ನು ಇಲ್ಲಿ ನೀಡಲಾಗಿದೆ.
1. ‘ಕ್ರಿಕೆಟ್’ ಇದರ ಕುರಿತಂತೆ ಐದು ವಾಕ್ಯಗಳಿಗೆ ಮೀರದಂತೆ ಉತ್ತರ ಬರೆಯಿರಿ.
ಕ್ರಿಕೆಟ್ ಒಂದು ಆಕರ್ಷಣೀಯ ಆಟ. ಇದನ್ನು ಬಯಲಿನಲ್ಲಿ ಕ್ಯಾಬರೆ ನರ್ತಕಿಯರು ಆಡುತ್ತಾರೆ. ಅವರಿಗೆ ಚಿಯರ್‌ಗರ್ಲ್ಸ್ ಎಂದು ಕರೆಯಲಾಗುತ್ತದೆ. ಶಾರುಕ್ ಖಾನ್ ಅತ್ಯುತ್ತಮ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ವಿಜಯ್ ಮಲ್ಯ, ಪ್ರೀತಿ ಝಿಂಟಾ ಮೊದಲಾದವರು ಭಾರತದ ಉಳಿದ ಅತ್ಯುತ್ತಮ ಆಟಗಾರರು. ಈ ಆಟಗಾರರು ಪೆವಿಲಿಯನ್‌ನಲ್ಲಿ ಕುಳಿತು ಆಡುತ್ತಿರುವಾಗ ಅದನ್ನು ನೋಡಲೆಂದು ಸಾವಿರಾರು ಜನರು ನೆರೆಯುತ್ತಾರೆ. ವಿರಾಮದ ಸಂದರ್ಭದಲ್ಲಿ ಸಚಿನ್, ಗಂಗುಲಿ ಮೊದಲಾದವರು ಮೈದಾನದ ಮಧ್ಯೆ ಬಾಲ್, ಬ್ಯಾಟ್‌ಗಳ ಮೂಲಕ ಪ್ರೇಕ್ಷಕರಿಗೆ ಬೇಜಾರಾಗದಂತೆ ನೋಡಿಕೊಳ್ಳುತ್ತಾರೆ. ಇದಕ್ಕಾಗಿ ಅವರಿಗೆ ಭಾರೀ ಹಣವನ್ನು ಕೊಟ್ಟು ಹರಾಜಿನಲ್ಲಿ ಕೊಂಡುಕೊಳ್ಳಲಾಗಿದೆ.
2. ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವೇನು? ಬೆಲೆಯೇರಿಕೆಯನ್ನು ಹೇಗೆ ತಡೆಯಬಹುದು?
ಇತ್ತೀಚೆಗೆ ಬಡವರು ಹೆಚ್ಚು ಹೆಚ್ಚು ಊಟ ಮಾಡಲು ತೊಡಗಿರುವುದೇ ಆಹಾರ ಧಾನ್ಯಗಳ ಬೆಲೆಯೇರಿಕೆಗೆ ಕಾರಣವಾಗಿದೆ. ಮೊದಲು ಬಡವರು ಎರಡು ದಿನಕ್ಕೊಮ್ಮೆ ಉಣ್ಣುತ್ತಿದ್ದರು. ಇದೀಗ ಅವರು ದಿನಕ್ಕೊಮ್ಮೆ ಉಣ್ಣುವುದಕ್ಕೆ ತೊಡಗಿದ್ದಾರೆ. ಅವರ ವರಮಾನ ಹೆಚ್ಚಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಆದುದರಿಂದ ಬಡವರ ವರಮಾನ ಹೆಚ್ಚದಂತೆ ನೋಡಿಕೊಂಡರೆ ಬೆಲೆಯೇರಿಕೆಯನ್ನೂ ತಡೆಯಬಹುದಾಗಿದೆ. ಬಡವರು ಆದಷ್ಟು ಕಡಿಮೆ ಊಟ ಮಾಡುವಂತೆ ಅವರಿಗೆ ತಿಳಿ ಹೇಳಬೇಕು. ಉಳಿತಾಯವನ್ನು ಕಲಿಸಬೇಕು. ಕನಿಷ್ಠ ಅವರು ವಾರಕ್ಕೊಮ್ಮೆ ಊಟ ಮಾಡುವಂತಾದರೆ ಬೆಲೆಯಿಳಿಕೆಯಾಗಿ ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ಬರುತ್ತದೆ. ದೇಶ ಅಭಿವದ್ಧಿಯಾಗುತ್ತದೆ. ಅವರು ತಮ್ಮ ಹಣವನ್ನು ಆಹಾರ ಧಾನ್ಯಗಳಿಗೆ ವ್ಯಯ ಮಾಡದೆ, ಉಳಿತಾಯ ಮಾಡಿ ಅದರಿಂದ ನ್ಯಾನೋ ಕಾರುಗಳನ್ನು, ಕಂಪ್ಯೂಟರ್‌ಗಳನ್ನು ಕೊಂಡುಕೊಳ್ಳಬೇಕು. ಮೊಬೈಲ್‌ಗಳನ್ನು ಕೊಳ್ಳಬೇಕು. ಈ ಮೂಲಕ, ದೇಶದ ಮುಖ್ಯ ವಾಹಿನಿಯಲ್ಲಿ ಒಂದಾಗಬೇಕು.
2. ನಕ್ಸಲೀಯರ ಕುರಿತಂತೆ ಐದು ವಾಕ್ಯಗಳನ್ನು ಬರೆಯಿರಿ.
ಉತ್ತರ: ನಕ್ಸಲೀಯರು ಎನ್ನುವುದು ಕಾಡು ಪ್ರಾಣಿಗಳ ಹೆಸರು. ತಲೆಯಲ್ಲಿ ಎರಡು ಕೊಂಬು, ಭೀಕರ ಕೋರೆ ಹಲ್ಲುಗಳಿರುವ ಈ ಕಾಡು ಪ್ರಾಣಿಗಳು ಹುಲಿ, ಚಿರತೆ, ಕರಡಿಗಳಂತೆ ಕಾಡಿನಲ್ಲಿ ಹುಟ್ಟಿ ನಾಡಿದ ಅಮಾಯಕ ಜನರಿಗೆ ತೊಂದರೆ ಕೊಡುತ್ತದೆ. ಆದುದರಿಂದ ಈ ಪ್ರಾಣಿಗಳ ನಿಯಂತ್ರಣಕ್ಕೆ ಸರಕಾರ ಈಗಾಗಲೇ ಕೋಟಿಗಟ್ಟಲೆ ರೂಪಾಯಿಗಳನ್ನು ವೆಚ್ಚ ಮಾಡಿದೆ. ಆದರೂ ಇವುಗಳ ಸಂತಾನೋತ್ಪತ್ತಿ ಅಧಿಕವಾಗುತ್ತಾ ಹೋಗುತ್ತಿರುವುದು ಸರಕಾರದ ಆತಂಕಕ್ಕೆ ಕಾರಣವಾಗಿದೆ. ಈ ನಕ್ಸಲೀಯ ಪ್ರಾಣಿಗಳು ಡೈನೋಸರ್ ಕಾಲಕ್ಕೆ ಸೇರಿದವುಗಳು ಎನ್ನಲಾಗಿದೆ. ‘ಜುರಾಸಿಕ್ ಪಾರ್ಕ್’ನಿಂದ ತಪ್ಪಿಸಿಕೊಂಡು ಬಂದ ಈ ಕ್ರೂರ ಪ್ರಾಣಿಗಳು ಕಾಡುಗಳನ್ನು ಸೇರಿರಬಹುದು ಎಂದು ಸರಕಾರ ಸಂಶಯ ವ್ಯಕ್ತಪಡಿಸಿದೆ. ಇವುಗಳು ಮಾಂಸಹಾರಿಗಳು. ಶ್ರೀಮಂತ ವ್ಯಕ್ತಿಗಳ ಮಾಂಸವೆಂದರೆ ಇವುಗಳಿಗೆ ಬಹಳ ಇಷ್ಟ. ತುಪ್ಪ, ಬೆಣ್ಣೆ ಮತ್ತು ಬಡವರ ರಕ್ತ ಕುಡಿದ ಈ ಶ್ರೀಮಂತ ವ್ಯಕ್ತಿಗಳ ಮಾಂಸ ತುಂಬಾ ರುಚಿಯಾಗಿರುತ್ತವೆ.
 ಒಮ್ಮೆ ಇದರ ರುಚಿ ಹಿಡಿದ ಈ ಪ್ರಾಣಿಗಳು ಮತ್ತೆ ಮತ್ತೆ ನಾಡಿಗೆ ಬಂದು ಅವರನ್ನು ಎಳೆದುಕೊಂಡು ಹೋಗುತ್ತದೆ ಎನ್ನಲಾಗಿದೆ. ನಾಡಿನಲ್ಲಿರುವ ‘ಬಡವರು’ ಎನ್ನುವ ಕೆಲ ಬಡಕಲು ಪ್ರಾಣಿಗಳ ವರ್ಣಸಂಕರವಾಗಿಯೂ ಈ ನಕ್ಸಲ್ ಪ್ರಾಣಿಗಳು ಹುಟ್ಟಿರಬಹುದು ಎಂದು ಸರಕಾರ ನಂಬಿದೆ. ಇದಕ್ಕಾಗಿ ಈಗಾಗಲೇ ವಿಜ್ಞಾನಿಗಳನ್ನು ಅಧ್ಯಯನಕ್ಕಾಗಿ ನೇಮಿಸಿ ಅದಕ್ಕೊಂದು ಪ್ರಾಧಿಕಾರವನ್ನೂ ರಚಿಸಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಸಾಧ್ಯವಾದಷ್ಟು ಬಡವರನ್ನು ಬಂಧಿಸಿ ಗುಂಡಿಟ್ಟುಕೊಳ್ಳುವ ಯೋಜನೆಯನ್ನು ಈಗಾಗಲೇ ರೂಪಿಸಲಾಗಿದೆ.
4. ‘ವಿಶೇಷ ಆರ್ಥಿಕ ವಲಯ’ ದೇಶದ ಅಭಿವದ್ಧಿಗೆ ನೀಡುವ ಕಾಣಿಕೆಗಳು ಯಾವುವು?
 ‘ವಿಶೇಷ ಆರ್ಥಿಕ ವಲಯ’ ದೇಶದ ಬಡತನ, ರೈತರ ಸಮಸ್ಯೆಗಳನ್ನು ಇಲ್ಲವಾಗಿಸುತ್ತದೆ. ರೈತನಿಗೆ ಬೀಜಕೊಳ್ಳುವ, ಗೊಬ್ಬರ ಹಾಕುವ, ಗದ್ದೆಗಳಲ್ಲಿ ದುಡಿಯುವ ಶ್ರಮವನ್ನು ಇಲ್ಲವಾಗಿಸುತ್ತದೆ. ವಿಶೇಷ ಆರ್ಥಿಕ ವಲಯಕ್ಕಾಗಿ ಭೂಮಿ ಕಿತ್ತುಕೊಂಡ ಮೇಲೆ ರೈತ ಗೊಬ್ಬರ, ಬೀಜಗಳನ್ನು ಕೊಂಡುಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಈ ಮೂಲಕ ಈ ದೇಶದ ರೈತರ ಬಹುದೊಡ್ಡ ಸಮಸ್ಯೆ ಇಲ್ಲವಾಗುತ್ತದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿಲ್ಲ. ಸೆಝ್ ವಿರುದ್ಧ ಪ್ರತಿಭಟನೆ ಮಾಡಿದರೆ ಸರಕಾರವೇ ರೈತರನ್ನು ಗುಂಡು ಹಾಕಿ ಕೊಲ್ಲುತ್ತದೆ. ಆದುದರಿಂದ ರೈತರ ಆತ್ಮಹತ್ಯೆ ಸಮಸ್ಯೆ ಭಾರೀ ಸಂಖ್ಯೆಯಲ್ಲಿ ಇಳಿಮುಖವಾಗುತ್ತದೆ. ಆತ್ಮಹತ್ಯೆಗೆ ಬಳಸುವ ವಿಷಕ್ಕೆ ತೆರಬೇಕಾದ ಹಣ ಉಳಿತಾಯವಾಗಿ ರೈತ ಕುಟುಂಬ ಶ್ರೀಮಂತವಾಗುತ್ತದೆ. ಆಹಾರದ ಬೆಲೆ ಅಧಿಕವಾಗಿ ಬಡವರು ಊಟ ಮಾಡದೇ ಸಾಯಬೇಕಾಗುತ್ತದೆ. ಈ ಮೂಲಕ ದೇಶದಲ್ಲಿ ಬಡವರ ಸಂಖ್ಯೆ ಕಡಿಮೆಯಾಗುತ್ತದೆ.

5. ಸಂವಿಧಾನದ ಕುರಿತಂತೆ ಕೆಲವು ವಾಕ್ಯಗಳನ್ನು ಬರೆಯಿರಿ? ಈ ದೇಶದಲ್ಲಿ ಹಲವು ಬಾರಿ ಕೊಲೆಗೀಡಾಗಿರುವ ವ್ಯಕ್ತಿಯ ಹೆಸರು ಸಂವಿಧಾನ. ಈತನಿಗೆ ಇರಿದರೆ, ತದುಕಿದರೆ ಅದು ಅಪರಾಧವಾಗುವುದಿಲ್ಲ. ಆದುದರಿಂದ ಯಾರು ಬೇಕಾದರೂ ಈತನ ಮೇಲೆ ಹಲ್ಲೆ ನಡೆಸಬಹುದಾಗಿದೆ. ಇವನನ್ನು ಮಾರಾಣಾಂತಿಕವಾಗಿ ಇರಿದವರನ್ನು ಈ ದೇಶದ ಉಪಪ್ರಧಾನಿಯಾಗಿ ಮಾಡಿ ಗೌರವಿಸಲಾಗುತ್ತದೆ. ಅಥವಾ ಯಾವುದಾದರೂ ಒಂದು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ. ಈತನ ತಾತನನ್ನು ಗುಂಡಿಟ್ಟು ಕೊಲ್ಲಲಾಯಿತು. ಈತನ ಅಪ್ಪನನ್ನು ಇನ್ನೊಂದು ಧರ್ಮಕ್ಕೆ ಓಡಿಸಲಾಯಿತು. ಈತನ ಮಕ್ಕಳನ್ನು ಇದೀಗ ಹಂತಹಂತವಾಗಿ ಕೊಂದು ಹಾಕುವ ಯೋಜನೆಯೊಂದನ್ನು ರೂಪಿಸಲಾಗಿದೆ.
6. ‘ಗೋವಿನ ಹಾಡು’ ಪದ್ಯದ ನೀತಿಯನ್ನು ಬರೆಯಿರಿ.
 ಗೋವಿನ ಹಾಡು ಪದ್ಯದಲ್ಲಿ ಪುಣ್ಯಕೋಟಿಯ ಒಂದು ಬ್ರಾಹ್ಮಣ ಜಾತಿಯ ಹಸುವಾಗಿರುತ್ತದೆ. ಅದು ದೇವಸ್ಥಾನದಲ್ಲಿ ಪೂಜೆ ಮುಗಿಸಿ ಬರುವಾಗ ದಲಿತ ಜಾತಿಗೆ ಸೇರಿದ ಹುಲಿಯೊಂದು ಎದುರಾಗುತ್ತದೆ. ಹುಲ್ಲು ತಿಂದು ಮಾರ್ಯದೆಯಲ್ಲಿ ಬದುಕಬೇಕಾದ ಹುಲಿ ಈ ಹಸುವನ್ನು ತಿನ್ನುವ ದುರಾಲೋಚನೆಯನ್ನು ಮಾಡುತ್ತದೆ. ದುರಾಲೋಚನೆಗಾಗಿ ಅದು ಸಾವನ್ನಪ್ಪಬೇಕಾಗುತ್ತದೆ. ಬ್ರಾಹ್ಮಣರನ್ನು ಕಾಡಿಸುವ ಎಲ್ಲರ ಸ್ಥಿತಿಯೂ ಇದೇ ಆಗಿರುತ್ತದೆ ಎನ್ನುವುದೇ ಈ ಕವಿತೆಯ ಪಾಠವಾಗಿದೆ.
ಹುಲಿ ಮಾಂಸವನ್ನು ತಿನ್ನುವುದು ತಪ್ಪು. ಅದು ಹುಲ್ಲನ್ನು ತಿನ್ನಬೇಕು. ಒಂದು ವೇಳೆ ಹಸುವನ್ನು ತಿನ್ನುವ ಯೋಚನೆ ಮಾಡಿದರೂ ಅದಕ್ಕಾಗಿ ತನ್ನ ಪ್ರಾಣವನ್ನು ತೆರಬೇಕು. ದನ ಹುಲಿಯ ಪ್ರಾಣವನ್ನು ತೆಗೆದರೆ ಅದರಲ್ಲಿ ತಪ್ಪೇನೂ ಇಲ್ಲ. ಇದೇ ಗೋವಿನ ಹಾಡು ಪದ್ಯದ ನೀತಿ ಪಾಠ.
ಎಲ್ಲವನ್ನು ಓದಿದ ಎಂಜಲು ಕಾಸಿಗೆ ಆಶ್ಚರ್ಯವಾಯಿತು. ‘ಅರೆ! ಎಲ್ಲ ಉತ್ತರಗಳೂ ಸರಿಯೇ ಇದೆಯಲ್ಲ. ಮತ್ಯಾಕೆ ಈ ವಿದ್ಯಾರ್ಥಿಗಳು ಫೇಲಾದರು ಎಂದು ತಲೆ ತುರಿಸತೊಡಗಿದ.
(ಮೇ 4, 2008 ರವಿವಾರ)

Thursday, April 30, 2015

ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು?

ಯಡಿಯೂರಪ್ಪ ಕೃಪೆಯಿಂದ ಸದಾನಂದ ಗೌಡರು  ಮುಖ್ಯ ಮಂತ್ರಿಯಾಗಿ, ಬಳಿಕ ಸ್ಥಾನವನ್ನು ಯಡಿಯೂರಪ್ಪ ಅವರಿಗೆ ಬಿಟ್ಟು ಕೊಡಲು ಗೌಡರು ನಿರಾಕರಿಸಿದಾಗ ಬರೆದ ಬುಡಬುಡಿಕೆ. ಫೆಬ್ರವರಿ -26-2012ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕಾಶಿಗೆ ಹೋಗಿ ಬಂದ ಸುದ್ದಿ ಕೇಳಿದ್ದೇ ಎಲ್ಲರಿಗೂ ಕುತೂಹಲ. ಸಾಧಾರಣವಾಗಿ ಕಾಶಿಗೆ ಹೋಗಿಬಂದವರು ಗಂಗಾನದಿಯಲ್ಲಿ ಏನನ್ನಾದರೂ ಬಿಟ್ಟು ಬರಲೇ ಬೇಕು. ಯಡಿಯೂರಪ್ಪ ಏನನ್ನು ಬಿಟ್ಟು ಬಂದಿರ ಬಹುದು? ಎಲ್ಲರೂ ತಲೆ ಕೆಡಿಸತೊಡಗಿದರು. ಪತ್ರಕರ್ತ ಎಂಜಲು ಕಾಸಿ ಕೂಡ ಈ ಕುರಿತಂತೆ ತಲೆ ಕೆಡಿಸತೊಡಗಿದ. ಏನು ಬಿಟ್ಟು ಬಂದಿರ ಬಹುದು? ಎಲ್ಲಿಯೂ ಯಡಿಯೂರಪ್ಪ ಕೈಗೆ ಸಿಗುತ್ತಿಲ್ಲ. ಪತ್ರಕರ್ತ ಎಂಜಲು ಕಾಸಿ ನೇರ ಈಶ್ವರಪ್ಪನವರಲ್ಲಿಗೆ ಹೋದ.
‘‘ಸಾರ್...ಯಡಿಯೂರಪ್ಪನವರು ಕಾಶಿಗೆ ಹೋದರಂತಲ್ಲ ಸಾರ್. ಏನು ಬಿಟ್ಟು ಬಂದರು?’’
‘‘ಅದೇ ನನಗೂ ಕುತೂಹಲ. ನೀವು ಪತ್ತೆ ಮಾಡಿ ಹೇಳುವುದು ಬಿಟ್ಟು ನನ್ನಲ್ಲಿ ಕೇಳ್ತೀರಲ್ಲ...ಸದನದಲ್ಲಿ ಯಾರ್ಯಾರು ಬ್ಲೂಫಿಲಂ ನೋಡ್ತಾರೆ ಎನ್ನೋದನ್ನು ಕಂಡು ಹಿಡಿಯೋದಕ್ಕಾಗುತ್ತೆ. ಇದು ನಿಮಗೆ ಕಂಡು ಹಿಡಿ ಯೋದಕ್ಕಾಗೋದಿಲ್ವ?’’ ಈಶ್ವರಪ್ಪ ಸಿಟ್ಟಾದರು.
‘‘ಹಾಗಲ್ಲ ಸಾರ್...ಯಡಿಯೂರಪ್ಪರವರ ಅಂತ ರಂಗದ ವಿಷಯ ಇದು. ನಿಮಗೆ ಗೊತ್ತಿರಬಹುದು...’’ ಕಾಸಿ ಹಲ್ಲು ಕಿರಿದ.
‘‘ಅವರ ಅಂತರಂಗದ ವಿಷಯವನ್ನು ಅವರ ಅಂತ ರಂಗಕ್ಕೆ ಹತ್ತಿರವಿರುವವರತ್ರ ಕೇಳ್ರೀ...ನನ್ನತ್ರ ಯಾಕೆ ಕೇಳ್ತೀರಿ...’’ ಈಶ್ವರಪ್ಪ ಮತ್ತೆ ಸಿಡುಕಿದರು.
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ಸಾರ್... ಯಡಿಯೂರಪ್ಪ ಏನನ್ನು ಕಾಶಿಯಲ್ಲಿ ಬಿಟ್ಟು ಬಂದರೆ ಚೆನ್ನಾಗಿತ್ತು...ಅದನ್ನಾದರೂ ಹೇಳಿ’’
ಈಶ್ವರಪ್ಪ ಒಂದು ಕ್ಷಣ ಯೋಚಿಸಿ ಹೇಳಿದರು ‘‘ಗಂಗಾನದಿಯಲ್ಲಿ ಶೋಭಾ ಕರಂದ್ಲಾಜೆಯನ್ನು ಬಿಟ್ಟು ಬಂದಿದ್ದರೆ ರಾಜ್ಯದ ಎಲ್ಲ ಸಮಸ್ಯೆಗಳೂ ಮುಗಿಯು ತ್ತಿತ್ತು...’’
‘‘ಆದರೆ ಶೋಭಾ ಅವರು ಇಲ್ಲೇ ಬೆಂಗಳೂರಿನಲ್ಲಿ ಸುತ್ತಾಡ್ತಾ ಇದ್ದಾರಲ್ಲ ಸಾರ್?’’ ಕಾಸಿ ಕೇಳಿದ.
‘‘ಹೌದೌದು. ಅವರೆಲ್ಲಿ ಬಿಡ್ತಾರೆ. ಒಂದು ವೇಳೆ ಅವರು ನಮಗೆ ಒಪ್ಪಿಗೆ ಕೊಟ್ಟರೂ ಸಾಕು, ನಾವೇ ಶೋಭಾರನ್ನು ಗೋಣಿ ಚೀಲದಲ್ಲಿ ಹಾಕಿ ಗಂಗಾನದಿಗೆ ಎಸೆದು ಬರ್ತೇವೆ...’’ ಎಂದು ಹಣೆ ಒರೆಸಿಕೊಂಡರು.
‘‘ಥ್ಯಾಂಕ್ಯೂ ಸಾರ್ ಬರ್ತೇನೆ’’ ಕಾಸಿ ಹೊರಟ.
‘‘ಹೋಗಿ, ಬರ್ಬೇಡಿ...’’ ಎಂದರು ಈಶ್ವರಪ್ಪ.
***
ಕಾಸಿ ಅಲ್ಲಿಂದ ನೇರ ಸದಾನಂದ ಗೌಡರ ಮನೆಗೆ ಓಡಿದ. ಕಾಸಿಯನ್ನು ಕಂಡದ್ದೇ ‘‘ಬಂದ ಮಂಡೆ ಬೆಚ್ಚ ಮಾಡ್ಲಿಕ್ಕೆ’’ ಎಂದು ಸದಾನಂದರು ತಲೆ ಚಚ್ಚಿಕೊಂಡರು. ಆದರೂ ನಗುನಗುತ್ತಾ ಕೇಳಿದರು ‘‘ಏನು ಕಾಸಿಯವ್ರೇ ಬಂದದ್ದು...?’’
‘‘ಸಾರ್...ಕಾಶಿಯಲ್ಲಿ ಯಡಿಯೂರಪ್ಪ ಏನು ಬಿಟ್ಟು ಬಂದರು ಅಂತ ಗೊತ್ತುಂಟಾ...?’’
ಸದಾನಂದ ಗೌಡರ ಹುಬ್ಬು ಗಂಟಿಕ್ಕಿತು, ‘‘ಹೋಗು ವಾಗ, ಬರ್ತೀನೇನ್ರಿ ಕಾಶಿಗೆ ಅಂತ ನನ್ನನ್ನು ಕರೆದರು. ನನಗೆ ಹೋಗಲಿಕ್ಕೆ ಹುಚ್ಚುಂಟಾ? ನಾನು ಬರುವುದಿಲ್ಲ ಎಂದೆ. ನನಗೆ ಗೊತ್ತಿತ್ತು. ಇವರು ನನ್ನನ್ನೇ ಕಾಶಿಯಲ್ಲಿ ಬಿಡಲಿಕ್ಕೆ ಪ್ಲಾನ್ ಮಾಡಿದ್ದಾರೆ ಅಂತ. ಏನನ್ನು ಬಿಟ್ಟು ಬರುತ್ತಾರೆ... ಅವರ ಲಂಗೋಟಿಯನ್ನು ಬಿಟ್ಟು ಬರ್ಬೇಕಷ್ಟೇ...ಬೇರೇನು ಬಿಟ್ಟು ಬರುವ ಜಾತಿಯಲ್ಲ ಅದು....’’
‘‘ಹಾಗಲ್ಲ ಸಾರ್...ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಬಿಟ್ಟು ಬಂದಿದ್ದಾರೆ ಅಂತ ಸುದ್ದಿ ಉಂಟು, ಹೌದಾ’’ ಕಾಸಿ ಸುಮ್ಮಗೆ ಒಂದು ತುಂಡು ಬಿಸ್ಕೆಟ್ ಬಿಸಾಡಿದ.
ಸದಾನಂದ ಗೌಡರು ಒಮ್ಮೆಲೆ ಚುರುಕಾಗಿ, ಕಾಸಿಯತ್ತ ಬಾಗಿದರು ‘‘ಹೌದಾ? ಮುಖ್ಯಮಂತ್ರಿ ಕುರ್ಚಿಯ ಆಸೆ ಯನ್ನು ಕಾಸಿಯಲ್ಲಿ ಬಿಟ್ಟು ಬಂದದ್ದು ಹೌದಾ? ಏನಾದರೂ ವಿಷಯ ಉಂಟಾ...ನಾನು ಪುತ್ತೂರಿನ ಸಹಸ್ರಲಿಂಗೇಶ್ವರ ನಲ್ಲಿ ಹರಕೆ ಹೊತ್ತಿದ್ದೆ. ಅವರಿಗೆ ಈ ಕುರ್ಚಿಯ ವ್ಯಾಮೋ ಹ ಒಂದು ಬಿಡಿಸಪ್ಪ ಅಂತ...ಇದು ನಿಜವಾ...ಬಿಟ್ಟದ್ದು ಹೌದಾ?’’ ಗೌಡರು ಮತ್ತೆ ಮತ್ತೆ ಕೇಳಿದರು.
‘‘ಗೊತ್ತಿಲ್ಲ ಸಾರ್, ನಿಮಗೇನಾದರೂ ಗೊತ್ತಾ ಅಂತ ಕೇಳಿದ್ದು...’’ ಕಾಸಿ ಹೇಳಿದ.
‘‘ನೀವು ಸುಮ್ಮನೆ ಏನೇನೆಲ್ಲ ಹೇಳಿ ನನಗೆ ಆಸೆ ಹುಟ್ಟಿಸಬೇಡಿ ಗೊತ್ತಾಯಿತಾ? ಗಂಗಾನದಿಯಲ್ಲಿ ಕುರ್ಚಿಯ ಆಸೆಯನ್ನು ಬಿಡುವುದು ಅಷ್ಟು ಸುಲಭವಲ್ಲ. ಅವರೇ ಗಂಗಾನದಿಯಲ್ಲಿ ಕೊಚ್ಚಿ ಹೋದರೆ, ಆಸೆಯೂ ಅವರ ಜೊತೆಗೇ ಹೋದೀತು. ಅದು ಬಿಟ್ಟು ಅವರು ಕುರ್ಚಿಯ ಆಸೆಯನ್ನು ಬಿಟ್ಟು ಬರ್ಲಿಕ್ಕುಂಟಾ? ಅದರ ಆಸೆ ಅವರ ರಕ್ತದ ಕಣಕಣದಲ್ಲೂ ಉಂಟು ಗೊತ್ತುಂಟಾ?’’
***
ಸರಿ ಕಾಸಿ ನೇರವಾಗಿ ರೇಣುಕಾಚಾರ್ಯರಲ್ಲಿಗೆ ಹೋದ. ‘‘ಯಡಿಯೂರಪ್ಪನವರು ಏನು ಬಿಟ್ಟು ಬಂದಿದ್ದಾರೆ ಅಂತ ನಿಮಗೇನಾದರೂ ಗೊತ್ತಾ?’’
ರೇಣುಕಾಚಾರ್ಯರು ತೇಲುಗಣ್ಣು ಮಾಡುತ್ತಾ ಮಾತನಾಡತೊಡಗಿದರು ‘‘ಯಾಕೆ? ಯಾಕೆ ಬಿಡ ಬೇಕು... ಹಾಗೆಲ್ಲ ಅಷ್ಟು ಸುಲಭದಲ್ಲಿ ಅವರು ಬಿಡು ವುದಿಲ್ಲ ಗೊತ್ತಾಯಿತಲ್ಲ? ವೀರಶೈವರೇ ಯಾಕೆ ಬಿಡಬೇಕು...ಈ ಬ್ರಾಹ್ಮಣರು ಬಿಡಲಿ ನೋಡುವ... ಲಿಂಗಾಯತರಿಗೆ ಈಗಾಗಲೇ ಭಾರೀ ಅನ್ಯಾಯವಾಗಿದೆ. ನಾವು ಬಿಡುವುದಿಲ್ಲ, ಬಿಡಿವುದಿಲ್ಲ... ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ...’’
ಕಾಸಿ ಒಂದೂ ಅರ್ಥವಾಗದೆ ತಲೆ ಕೆರೆದುಕೊಂಡು ಮತ್ತೆ ಹೇಳಿದ ‘‘ಹಾಗಲ್ಲ ಸಾರ್...ಕಾಶಿಗೆ ಹೋದರೆ ನಮ್ಮೆಳಗಿನ ಕೆಡುಕುಗಳಲ್ಲಿ ಒಂದನ್ನು ಗಂಗಾನದಿಯಲ್ಲಿ ಬಿಟ್ಟು ಬರಬೇಕು ಅಂತ ಸಂಪ್ರದಾಯವಿದೆ. ಯಡಿಯೂ ರಪ್ಪ ಯಾವ ಕೆಡುಕು ಬಿಟ್ಟು ಬಂದಿದ್ದಾರೆ...’’
ರೇಣುಕಾಚಾರ್ಯರು ತಕ್ಷಣ ಉತ್ತರಿಸಿದರು ‘‘ಅದರ ಬಗ್ಗೆ ಕೇಳುತ್ತಿದ್ದೀರಾ? ನೋಡಿ ಇವ್ರೆ, ಯಡಿಯೂರಪ್ಪನವರಿಗೆ ಎಲ್ಲ ಕೆಡುಕುಗಳನ್ನು ಗಂಗಾನದಿಯಲ್ಲಿ ಬಿಡಬೇಕು ಅಂತ ಮನಸ್ಸಿತ್ತು. ಅದಕ್ಕಾಗಿ ಈಶ್ವರಪ್ಪ, ಸದಾನಂದ ಗೌಡ, ಅಶೋಕ್ ಎಲ್ಲರನ್ನೂ ಕಾಶಿಗೆ ಕರೆದುಕೊಂಡು ಹೋಗಿ ಅಲ್ಲಿ ಬಿಡಲು ತೀರ್ಮಾನಿಸಿದ್ದರು. ಆದರೆ ಯಡಿಯೂರಪ್ಪ ನಿಮ್ಮನ್ನು ಗಂಗಾನದಿಯ ಲ್ಲಿ ಬಿಟ್ಟು ಬಿಡುತ್ತಾರೆ ಎನ್ನುವುದನ್ನು ಯಾರೋ ಭಿನ್ನಮತೀಯರು ಅವರಿಗೆ ತಿಳಿಸಿರಬೇಕು. ಎಲ್ಲರೂ ಕೈಕೊಟ್ಟರು. ಪಾಪ ಯಡಿಯೂರಪ್ಪ ನವರು ಏನು ಮಾಡುವುದು? ಬರಿಗೈಯಲ್ಲಿ ಬಂದು ಬಿಟ್ಟರು....’’
***
ಇವರೊಂದಿಗೆಲ್ಲ ಕೇಳಿ ಪ್ರಯೋಜನವಿಲ್ಲವೆಂದು ಎಂಜಲು ಕಾಸಿ ಯಡಿಯೂರಪ್ಪರನ್ನು ಹುಡುಕತೊಡ ಗಿದ. ನೋಡಿದರೆ ಯಾವುದೋ ಒಂದು ಮೂಲೆಯ ಊರಿನಲ್ಲಿರುವ ಸ್ವಾಮಿಯ ಆಶೀರ್ವಾದ ಪಡೆಯುತ್ತಿದ್ದರು.
‘‘ಸಾರ್..ಕಾಶಿಯಲ್ಲಿ ನೀವೇನಾದರು ಬಿಟ್ಟು ಬಂದಿರಾ?’’ ಕಾಸಿ ಯಡಿಯೂರಪ್ಪರಲ್ಲಿ ಕೇಳಿಯೇ ಬಿಟ್ಟ.
‘‘ಹೂಂ..ಬಿಟ್ಟು ಬಂದೆ....’’ಗಂಭೀರವಾಗಿ ನುಡಿದರು ಯಡಿಯೂರಪ್ಪ.
‘‘ಏನನ್ನು ಬಿಟ್ಟು ಬಂದಿರಿ ಸಾರ್?’’
‘‘ನನ್ನೊಳಗಿದ್ದ ಅಳಿದುಳಿದ ಮಾನ, ಮರ್ಯಾದೆ, ನಾಚಿಕೆ ಎಲ್ಲವನ್ನೂ ಬಿಟ್ಟು ಬಂದೆ. ಈಗ ನಾನು ತುಂಬಾ ಹಗುರವಾಗಿದ್ದೇನೆ. ಇನ್ನು ಮುಖ್ಯಮಂತ್ರಿ ಗಾದಿಗಾಗಿ ನನ್ನ ಹೋರಾಟ ತೀವ್ರವಾಗುತ್ತದೆ....’’
ರವಿವಾರ - ಫೆಬ್ರವರಿ -26-2012

Monday, April 27, 2015

ರಾಹುಲ್ ಗಾಂಧಿ ಕುರಿತು ದುರಂತ ಕಾವ್ಯಮಂ ಬರೆವೆಂ....

ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ಸ್ ನೊಳಗೆ ಜನಾರ್ದನ ಪೂಜಾರಿ ಮತ್ತು ವೀರಪ್ಪ ಮೊಯ್ಲಿ ಸುಪುತ್ರ ಹರ್ಷ ಮೊಯ್ಲಿ ನಡುವೆ ಟಿಕೆಟ್ ಗಾಗಿ ಹಗ್ಗ ಜಗ್ಗಾಟ ನಡೆದಾಗ ಬರೆದ ಬುಡಬುಡಿಕೆ. ಫೆಬ್ರವರಿ -23-2014ರ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

‘ಕೊನೆಗೂ ಚುನಾವಣೆ ಘೋಷಣೆಯಾಯಿತು’ ಎಂದು ಯಾರೋ ಹೇಳಿದ್ದು ಕೇಳಿ ‘ಇಷ್ಟು ಬೇಗವಾ?’ ಎಂದು ಪತ್ರಕರ್ತ ಎಂಜಲು ಕಾಸಿ ಬೆಚ್ಚಿ ಬಿದ್ದ. ಅಷ್ಟರಲ್ಲಿ ಜನಾರ್ದನ ಪೂಜಾರಿಯವರು ಮಂಗಳೂರಿನ ಬೀದಿಯಲ್ಲಿ ಪಾದಯಾತ್ರೆ ಮಾಡುವುದನ್ನು ಟಿವಿಗಳು ಅತ್ಯುತ್ಸಾಹದಿಂದ ತೋರಿಸುತ್ತಿದ್ದವು. ‘‘ಅರೆ! ಪೂಜಾರಿಯವರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟೂ ಆಯಿತಾ?’’ ಎಂದು ಕಾಸಿ ಮತ್ತೊಮ್ಮೆ ಆಘಾತಕ್ಕೀಡಾದ.
‘‘ಅವರ ಎದುರು ಯಾರು ಚುನಾವಣೆಗೆ ನಿಂತದ್ದು?’’ ಎಂದು ಕಾಸಿ ತನ್ನಷ್ಟಕ್ಕೆ ಕೇಳುತ್ತಿರುವಾಗ ಯಾರೋ ಜೋರಾಗಿ ಹೇಳಿದರು ‘‘ಮೊಯ್ಲಿ ಕಣ್ರೀ...’’ ‘‘ಅಂದರೆ ಈಗ ಕಾಂಗ್ರೆಸ್ ಕ್ಯಾಂಡಿಡೇಟು ಯಾರು? ಬಂಡಾಯ ಯಾರು?’’ ‘‘ಎಲವೋ ಮಂಕೆ...ಇದು ಕಾಂಗ್ರೆಸ್‌ನೊಳಗಿನ ಚುನಾವಣೆ. ಮಂಗಳೂರಿನಲ್ಲಿ ಯಾರು ಚುನಾವಣೆಗೆ ನಿಲ್ಲಬೇಕು ಎನ್ನುವುದನ್ನು ನಿರ್ಧರಿಸಲು ಚುನಾವಣೆ...’’ ಹೀಗೆಂದು ದಾರಿ ಹೋಕರಾರೋ ಕಾಸಿಯ ತಲೆಗೆ ಮೊಟಕಿದರು. ಈಗ ಕಾಸಿಯ ಟ್ಯೂಬ್‌ಲೈಟ್ ಹತ್ತಿಕೊಂಡಿತು. ತಕ್ಷಣ ಪೂಜಾರಿಯವರ ಇಂಟರ್ಯೂ ಮಾಡಿ ಬರೋಣ ಎಂದು ಮಂಗಳೂರು ಕಡೆಯ ಲಾರಿ ಹತ್ತಿದ ಕಾಸಿ.
ಮಂಗಳೂರಿನ ಪಂಪ್‌ವೆಲ್‌ನಲ್ಲಿ ಇಳಿಯುತ್ತಿರು ವಾಗಲೇ ಜನಾರ್ದನ ಪೂಜಾರಿ ಕೈಕೊಟ್ಟು ಕಾಸಿಯನ್ನು ಇಳಿಸಿದರು ‘‘ಈ ಸಾರಿ ಗೆಲ್ಲುವುದು ನಾನೇ ಗೊತ್ತುಂಟಾ...’’ ಎನ್ನುತ್ತಾ ಪೂಜಾರಿ ಮಾತಿಗೆ ಶುರು ಮಾಡಿದರು. ‘‘ಲೋಕಸಭಾ ಚುನಾವಣೆಯಲ್ಲಿಯಾ...ಅಥವಾ ಮೊಯ್ಲಿ ವಿರುದ್ಧದ ಚುನಾವಣೆಯಲ್ಲಿಯಾ?’’ ಕಾಸಿ ಅರ್ಥವಾಗದೆ ಕೇಳಿದ.
‘‘ಯಾವ ಇಲಿ, ಬೆಕ್ಕು ನಿಂತರೂ ನಾನು ಹೆದರುವುದಿಲ್ಲ. ಅವರು ಇಲಿಯಾದರೆ ನಾನು ಹುಲಿ. ಸ್ವಲ್ಪ ವಯಸ್ಸಾಗಿದೆ. ಹಲ್ಲು, ಉಗುರು ಹೋಗಿದೆ ಅಂತಾ ನನ್ನನ್ನು ಮೂಲೆಗೆ ತಳ್ಳುವುದಾ....ನಾನು ಸುಮ್ಮನಿರುವುದಿಲ್ಲ... ಭರ್ಜರಿ ಪ್ರಚಾರ ಮಾಡಿ ಗೆಲ್ಲುವುದು ಗೆಲ್ಲುವುದೇ...’’
‘‘ಯಾರ ವಿರುದ್ಧ ಸಾರ್....?’’
‘‘ಮೊದಲು ಮೊಯ್ಲಿಯ ವಿರುದ್ಧ ಗೆಲ್ಲುವುದು... ಅನಂತರ ನೋಡುವ...’’ ಪೂಜಾರಿ ತಡವರಿಸಿ ಹೇಳಿದರು.
‘‘ಅಂದರೆ ಅನಂತರ ಗೆಲ್ಲದಿದ್ದರೂ ಪರವಾಗಿಲ್ಲ ಅಂತವಾ?’’ ಕಾಸಿ ಕೇಳಿದ.
‘‘ಬಿಜೆಪಿಯವರೊಟ್ಟಿಗೆ ಗೆಲ್ಲುವುದು ದೊಡ್ಡ ವಿಷಯ ಅಲ್ಲ. ನನ್ನ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಗೆಲ್ಲುವುದು ದೊಡ್ಡ ವಿಷಯ...ನಾನು ಬಿಡುವುದಿಲ್ಲ...ದೊಡ್ಡ ಯುದ್ಧ ಮಾಡುತ್ತೇನೆ...’’ ಪೂಜಾರಿಯವರು ಕಣ್ಣು ತಿರುಗಿಸುತ್ತಾ ಹೇಳಿದರು.
‘‘ಮೊಯ್ಲಿಯವರಿಗೆ ಕೇಂದ್ರದಲ್ಲಿ ಬೆಂಬಲ ಇದೆ. ನಿಮಗೆ ಯಾರು ಯಾರು ಬೆಂಬಲ ನೀಡುತ್ತಾರೆ ಸಾರ್?’’ ಕಾಸಿ ಕೇಳಿದ.
‘‘ಕಲ್ಲಡ್ಕದ ಭಟ್ಟರು ನನಗೆ ಪೂರ್ತಿ ಬೆಂಬಲ ಘೋಷಿಸಿದ್ದಾರೆ....ಈ ಚುನಾವಣೆಯಲ್ಲಿ ಗೆದ್ದರೆ...ಭಟ್ಟರಿಗೆ ಮೀಸಲಾತಿ ಕೊಡುವುದು ಗ್ಯಾರಂಟಿ...’’ ಪೂಜಾರಿ ಹೇಳಿದರು.
‘‘ಸಾರ್... ಬಿಲ್ಲವರಿಗೆ...?’’ ಕಾಸಿ ಆತಂಕದಿಂದ ಕೇಳಿದ.
‘‘ಬಿಲ್ಲವರಿಗೆ ಎಂತಕ್ಕೆ ಕೊಡುವುದು? ಅವರಿಗೆ ಕೊಟ್ಟರೆ ಏನೂ ಫಾಯಿದ ಇಲ್ಲ...ಭಟ್ಟರಿಗೆ ಕೊಟ್ಟರೆ ನಮ್ಮ ಬಿಲ್ಲವರಿಗೆ ಸಂತೋಸ ಆಗ್ತದೆ...’’ ಪೂಜಾರಿ ಹೇಳಿದರು.
‘‘ಕಾಂಗ್ರೆಸ್‌ನಿಂದ ನೀವು ನಿಂತರೆ ಬಿಜೆಪಿಯ ವಿರುದ್ಧ ಗೆಲ್ಲುವ ಚಾನ್ಸ್ ಉಂಟಾ?’’ ಕಾಸಿ ಅನುಮಾನದಿಂದ ಕೇಳಿದ.
‘‘ಈ ಬಾರಿ ಭಟ್ಟರು ನನ್ನ ಕಡೆಗೆ ಕಣ್ಣು ಹೊಡೆದಿದ್ದಾರೆ ಗೊತ್ತುಂಟಾ...’’ ಜನಾರ್ದನ ಪೂಜಾರಿ ನಾಚಿ ಹೇಳಿದರು.
‘‘ಸಾಧಾರಣವಾಗಿ ಕಲ್ಲಡ್ಕದ ಭಟ್ಟರು ಕಲ್ಲು ಹೊಡೆದು ಫೇಮಸು. ನಿಮಗೇಕೆ ಕಣ್ಣು ಹೊಡೆದರು...’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಭಟ್ಟರ ಮೇಲೆ ಸುಮ್ಮಸುಮ್ಮಗೆ ಆರೋಪ ಮಾಡಬೇಡಿ...ಈ ಪೇಪರ್‌ನವರಿಗೆ ಕೆಲಸವಿಲ್ಲ...ಹಾಗೆ ನೋಡಿದರೆ ಒಂದೆರಡು ಕಲ್ಲು ಹೊಡೆದರೆ ಏನೂ ನಷ್ಟವಿಲ್ಲ...ಸದ್ಯಕ್ಕೆ ಅವರು ನನ್ನ ಕಡೆ ಕಣ್ಣು ಹೊಡೆದಿದ್ದಾರೆ ಆದುದರಿಂದ ನಾನು ಗೆಲ್ಲುತ್ತೇನೆ...’’
‘‘ಆದರೆ ಕಾಂಗ್ರೆಸ್ ಆಂತರಿಕ ಚುನಾವಣೆಯಲ್ಲಿ ಸೋತರೆ ಏನು ಮಾಡುತ್ತೀರಿ?’’ ಕಾಸಿ ಕೇಳಿದ.
‘‘ಸೋತರೆ ಬಿಡುವುದಿಲ್ಲ....ಭಟ್ಟರು ಭರವಸೆ ಕೊಟ್ಟಿದ್ದಾರೆ... ಕಲ್ಲಡ್ಕವನ್ನು ಪ್ರತ್ಯೇಕ ಲೋಕಸಭಾ ಕ್ಷೇತ್ರ ಮಾಡಿ ಚುನಾವಣೆಗೆ ನಿಲ್ಲಿಸುತ್ತೇನೆ ಎಂದಿದ್ದಾರೆ. ನಾನು ಸೋತರೂ ಪರವಾಗಿಲ್ಲ ಮೊಯ್ಲಿಯನ್ನು ಗೆಲ್ಲಲು ಬಿಡುವುದಿಲ್ಲ...’’
‘‘ನೀವು ಕಾಂಗ್ರೆಸನ್ನು ಸೋಲಿಸಲು ಬಂಡಾಯ ನಿಲ್ಲುತ್ತೀರಾ?’’ ಕಾಸಿ ಕೇಳಿದ.
‘‘ಹ್ಹೆ ಹ್ಹೆ...ಹಾಗೆ ಮಾಡುವುದಕ್ಕೆ ಹುಚ್ಚುಂಟ ನನಗೆ. ನಾನು ಹರ್ಷ ಮೊಯ್ಲಿ ಪರವಾಗಿ ಪ್ರಚಾರ ಮಾಡಿದರೆ ಸಾಕು...ಜನ ಬಿಜೆಪಿಗೆ ಓಟು ಹಾಕಿ ಬಿಡ್ತಾರೆ...’’ ಪೂಜಾರಿ ತಮ್ಮ ಮೀಸೆ ತಿರುವಿದರು.
‘‘ಸಾರ್... ಅದಿರಲಿ... ಹರ್ಷ ಮೊಯ್ಲಿಯ ವಿರುದ್ಧ ಸ್ಪರ್ಧೆಗೆ ಪ್ರಚಾರ ಹೇಗೆ ನಡೆದಿದೆ?’’ ಕಾಸಿ ಪ್ರಶ್ನಾಂತರ ಮಾಡಿದ.
‘‘ಭರ್ಜರಿ ಪ್ರಚಾರ ಸಿಕ್ಕಿದೆ ಮಾರ್ರೆ... ಬಿಜೆಪಿ ಯವರು ಫುಲ್ ಸಪೋರ್ಟ್ ಮಾಡಿದ್ದಾರೆ. ಅವರೆಲ್ಲ ಓಟ್ ಹಾಕ್ಲಿಕ್ಕೆ ಬರ್ತೇನೆ ಅಂದಿದ್ದಾರೆ... ಹಾಗೆಯೇ ನನ್ನ ಪರವಾಗಿ ಪ್ರಚಾರ ಮಾಡಲು ಬೇಕಾದರೆ ಮೋದಿ ಯನ್ನು ಗುಜರಾತಿನಿಂದ ಕರೆಸುವ ಎಂದು ಸದಾನಂದ ಗೌಡ ಭರವಸೆ ನೀಡಿದ್ದಾರೆ... ನಳಿನ್ ಕುಮಾರ್ ಕಟೀಲ್ ಕೂಡ ತುಂಬಾ ಸಂತೋ ಷದಿಂದ ನನಗೆ ಬೆಂಬಲ ಘೋಷಿಸಿದ್ದಾರೆ. ಬಿಜೆಪಿ ಯವರೇ ನನಗೆ ಬೆಂಬಲ ಘೋಷಿಸಿರುವಾಗ, ಇನ್ನು ಕಾಂಗ್ರೆಸ್‌ನವರು ನನ್ನನ್ನು ಆಯ್ಕೆ ಮಾಡಬೇಕೋ ಬೇಡವೋ? ನನ್ನ ಬೆಲೆ ಬಿಜೆಪಿಯವರಿಗೆ ಗೊತ್ತುಂಟು. ಆದರೆ ದಿಲ್ಲಿಯಲ್ಲಿರುವ ನಾಯಕರಿಗೆ ಗೊತ್ತಿಲ್ಲ. ಎಂಥ ಬೇಜಾರಿನ ವಿಷಯ ಗೊತ್ತುಂಟಾ?’’ ಪೂಜಾರಿ ಯವರು ಬೇಜಾರಿನಲ್ಲಿ ಹೇಳಿದರು.
ಕಾಸಿ ಪೂಜಾರಿಯವರ ಸಂದರ್ಶನವನ್ನು ಭರ್ಜರಿ ಯಾಗಿ ಮಾಡುತ್ತಿರುವುದು ಮೊಯ್ಲಿಯವರಿಗೆ ಗೊತ್ತಾಗಿ ಕಿಡಿಕಿಡಿಯಾದರು. ಇದರ ಬಿಸಿ ಕಾವ್ಯ ರೂಪದಲ್ಲಿ ಕಾಸಿಯ ಮೈಯನ್ನು ಸುಡುತ್ತಿರಲಾಗಿ ‘‘ಈಗ ಬಂದೆ....’’ ಎನ್ನುತ್ತಾ ಮೊಯ್ಲಿಯ ಹೆಬ್ಬಾಗಿಲೊಳು ನಿಂತಿರಲು, ಸ್ಫೋಟಗೊಳ್ಳಲ್ ನಿಂತ ಗ್ಯಾಸ್‌ಸಿಲಿಂಡರ್‌ನಂದದಿ ಮೊಯ್ಲಿಯುಂ ಕಾಸಿಯಂ ನೋಡಿದರು.
‘‘ಸಾರ್...ಲಾರಿಯಿಂದ ಇಳಿದ ಕೂಡಲೇ ಪೂಜಾರಿ ನನ್ನನ್ನು ಕೈ ಹಿಡಿದು ನಿಲ್ಲಿಸಿದರು. ನಾನು ನಿಜಕ್ಕೂ ನಿಮ್ಮ ಸುಪುತ್ರರನ್ನು ಇಂಟರ್ಯೂ ಮಾಡಲು ಬಂದಿರುವುದು...’’ ಎಂದು ಕಾಸಿಯುಂ ವಿನೀತನಾಗಿ ಉಸಿರ್ದಂ.
ಇತ್ತ ತನ್ನ ಕಂಕುಳೊಳ್ ಪುತ್ರನಂ ಇರಿಸಿ, ಬಾಯಿಗೆ ಮೊಲೆಬತ್ತಿಯಂ ಅಂಟಿಸಿ, ದಶರಥಂ ಶ್ರೀರಾಮನಂ ತೂಗುವಂದದಿ ತೂಗುತಿರ್ಪರ್. ಇದಕಂಡು ಕಾಸಿಯುಂ ಇಂತು ಕೇಳ್ವರ್ ‘‘ಸಾರ್....ಹರ್ಷ ಮೊಯ್ಲಿಯವರು ಈ ಬಾರಿ ಪೂಜಾರಿಯ ವಿರುದ್ಧ ಗೆಲ್ಲುವುದು ಖಚಿತವೇ?’’
ಇದ ಕೇಳಿ ಮೊಯ್ಲಿಯುಂ ಸಿಟ್ಟಾಗಿ ‘ಗೆಲ್ವರ್. ಖಂಡಿತಾ ಗೆಲ್ವರ್. ಶ್ರೀರಾಮನಂ ಎದುರಿಸಿ ಲವಕುಶರ್ ಗೆಲ್ಲಲಿಲ್ಲವೆ? ಅಂತಿರ್ಪೊಡೆ ನನ್ನ ಹರ್ಷಕುಮಾರ್ ಬರಿದೇ ಈ ಪೊಳ್ಳುನಾಯಕನಂ ಗೆಲ್ಲದೇ ಇರ್ಪರೇ...ಹಹಹ’’ ಎಂದು ಹಳೆ ಗನ್ನದೊಡಳ್ ವದರಿದರ್.
ಇತ್ತ ಕಾಸಿಯುಂ ಬಿಡದೇ ಮತ್ತೆ ಪ್ರಶ್ನೆ ಕೇಳ್ಪರ್ ‘‘ಸಾರ್...ಪೂಜಾರಿಯವರನ್ನೇನೋ ಗೆಲ್ಲಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಗನ ಸ್ಥಿತಿ ಚಕ್ರವ್ಯೆಹದೊಳ್ ನುಗ್ಗಿದ ಅಭಿಮನ್ಯುವಿನಂತೆ ದುರ್ಗತಿಯಾದರೆ ಗತಿಯೇನು?’’
ಇದ ಕೇಳಿ, ಮೊಯ್ಲಿಯ ಕಂಕುಳಲ್ಲಿದ್ದ ಹರ್ಷ ಕುಮಾರನ್ ಭಯದಿಂದ ಚೀರಿದನ್. ಮಗು ಬೆಚ್ಚಿ ಬಿದ್ದುದ ಕಂಡು ಕಾಸಿಯಂ ರೋಷದಿಂ ನೋಡಿ ‘‘ಎಲವೋ ಅಧಮಾಧಮ...ಲೋಕಸಭಾ ಚುನಾವಣೆ ಯೊಳ್ ಎನ್ನ ಪುತ್ರನ್ ಗೆದ್ದರೆಷ್ಟು, ಬಿಟ್ಟರೆಷ್ಟು. ಲೋಕ ಸಭೆಯೊಳ್ ಸೋತರೆ ರಾಜ್ಯಸಭೆಯೆಂಬ ಹಿಂಬಾಗಿ ಲೊಳ್ ನನ್ನ ಪುತ್ರನಂ ಕಳುಹಿಸಿ ಕೇಂದ್ರ ಸಚಿವನಾಗಿ ಮಾಳ್ಪೆ...’’
‘‘ಸಾರ್...ಹೀಗೆ ಆದರೆ ನಿಮ್ಮ ಹರ್ಷಕುಮಾರ ಮೋದಿ ಸರಕಾರದಲ್ಲಿ ಕೇಂದ್ರ ಸಚಿವರಾಗುವುದು ಸತ್ಯ. ಆದರೆ ನಿಮ್ಮನ್ನು ನಂಬಿದ ರಾಹುಲ್ ಗಾಂಧಿ ಮಾತ್ರ ಚಕ್ರವ್ಯೆಹದಲ್ಲಿ ಸಿಕ್ಕಿದ ಅಭಿಮನ್ಯು ಆಗುವುದು ಖಚಿತ...’’ ಎಂದು ಓಡಲು ಅಣಿಯಾದ.
ವೀರಪ್ಪ ಮೊಯ್ಲಿ ಸಂತೋಷದಿಂದ ಹೇಳಿದರು ‘‘ಅಭಿಮನ್ಯು ಆದರೇನಂತೆ? ರಾಹುಲ್‌ಗಾಂಧಿಯ ಹೆಸರಿನೊಳ್ ನಾನ್ ದುರಂತ ಕಾವ್ಯಮಂ ಬರೆದು, ಮಹಾಕವಿಯೆಂಬ ಬಿರುದನ್ ಪೇಜಾವರಶ್ರೀ ಮೂಲಕ ಪಡೆವೆಂ’’ ಎಂದು ರಾಹುಲ್‌ಗಾಂಧಿಯ ದುರಂತ ಕಾವ್ಯವನ್ನು ಬರೆಯಲು ಮಡಿಯುಟ್ಟು ಕುಳಿತರು.
ರವಿವಾರ - ಫೆಬ್ರವರಿ -23-2014

Sunday, April 26, 2015

‘ಎರಡು ನ್ಯಾನೋ ಕಾರಿದ್ದರೆ ಅವರು ಅತಿ ಬಡವರು’

ಪಶ್ಚಿಮ ಬಂಗಾಳದಲ್ಲಿ ಬಡವರಿಗಾಗಿ ನ್ಯಾನೋ ಕಾರು ತಯಾರಿಸಲು ಅಲ್ಲಿನ ಕಮ್ಯುನಿಸ್ಟ್ ಸರಕಾರ ರೈತರ ಜಮೀನು ಕಿತ್ತು ಕೊಳ್ಳಲು ಹೊರಟಾಗ 2008ರಲ್ಲಿ ಬರೆದ ಬುಡಬುಡಿಕೆ. ಜನವರಿ, 13, 2008ರಲ್ಲಿ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾಗಿದೆ 

‘ಕ್ರಾಂತಿ’ ‘ಕ್ರಾಂತಿ’ ‘ಕ್ರಾಂತಿ’ ಹೀಗೆ ಪತ್ರಿಕೆಗಳಲ್ಲೆಲ್ಲಾ ಕ್ರಾಂತಿಯ ತಲೆ ಬರಹಗಳು ಕಾಣಿಸಿಕೊಂಡದ್ದೇ ಮಲೆನಾಡಿನ ಕಾಡಿನಲ್ಲಿ ಅವಿತುಕೊಂಡಿದ್ದ ನಕ್ಸಲೀಯರು  ಕಂಗಾಲಾದರು. ನಕಲಿ ಎನ್‌ಕೌಂಟರ್ ಭಯದಿಂದ ನಾವಿಲ್ಲಿ ಕಾಡಿನಲ್ಲಿ ದಿಗ್ಭಂಧನಕ್ಕೊಳಗಾಗಿರುವಾಗ ನಾಡಿನಲ್ಲಿ ಕ್ರಾಂತಿ ಮಾಡುತ್ತಿರುವವರು ಯಾರಾಗಿರಬಹುದು? ನಮ್ಮ ಹೆಸರಿನಲ್ಲಿ ಮತ್ತೆ ಯಾರಾದರೂ ಮನೆಗಳಿಗೆ ನುಗ್ಗಿದರೋ? ಅಥವಾ ನಮ್ಮಿಂದ ಸಿಡಿದವರು ಹೊಸತಾಗಿ ಗುಂಪು ಕಟ್ಟಿ ಬಂಡವಾಳ ಶಾಹಿಗಳ ವಿರುದ್ಧ ಕೋವಿ ಎತ್ತಿರಬಹುದೋ, ನಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಪತ್ರಿಕಾ ಹೇಳಿಕೆ ನೀಡಿರಬಹುದೋ... ಹೀಗೆ ಸಾವಿರಾರು ಪ್ರಶ್ನೆಗಳು ಅವರನ್ನು ಕಾಡಿತು. ಅಷ್ಟರಲ್ಲಿ ಒಬ್ಬಾತ ನುಡಿದ ‘‘ಇದು ಬೇರೆ ಕ್ರಾಂತಿ ಸಂಗಾತಿಗಳೇ... ಪತ್ರಿಕೆಗಳು ಬರೆಯುತ್ತಿರುವುದು ಮಾವೋ ಕ್ರಾಂತಿಯ ಬಗ್ಗೆಯಲ್ಲ...’’
ನಕ್ಸಲ್ ನಾಯಕನಿಗೆ ಅರ್ಥವಾಗಲಿಲ್ಲ. ‘‘ಕಾರ್ಲ್ ಮಾರ್ಕ್ಸ್‌ವಾದಿಗಳ ಕ್ರಾಂತಿಯ ಬಗ್ಗೆ ಬರೆದಿದ್ದಾರೆಯೆ?’’
ಸಂಗಾತಿ ನುಡಿದ ‘‘ಇದು ಕಾರ್ಲ್ ಮಾರ್ಕ್ಸ್‌ವಾದಿಗಳ ಬಗ್ಗೆ ಅಲ್ಲ... ಕಾರ್ ಮಾರ್ಕ್ಸ್‌ವಾದಿಗಳ ಬಗ್ಗೆ....’’
ನಾಯಕನಿಗೆ ತಲೆ ಬಿಸಿಯಾಯಿತು. ‘‘ಅದು ಯಾವುದು ಕಾರ್ ಮಾರ್ಕ್ಸ್‌ವಾದಿಗಳು... ಮಾರ್ಕ್ಸ್‌ವಾದಿಗಳ ಇನ್ನೊಂದು ಗುಂಪೇ? ಯಾರದರ ನಾಯಕ?’’
ಸಂಗಾತಿ ವಿವರಿಸಿದ ‘‘ ಈ ಗುಂಪು ಕ್ರಾಂತಿ ಮಾಡಲು ಹೊರಟಿರುವುದು ಕೋವಿಯಲ್ಲಲ್ಲ. ಕಾಮ್ರೇಡ್.. ಕಾರ್‌ನಲ್ಲಿ. ಈ ಕಾರ್ ಕ್ರಾಂತಿಗೆ ಕಾರ್ಲ್‌ಮಾಕ್ಸ್ ಬೆಂಬಲವಿದೆಯಂತೆ. ಇನ್ನು ಮುಂದೆ ಕಾರ್ಲ್‌ಮಾಕ್ಸ್ ಎನ್ನುವ ಹೆಸರನ್ನು ಕಾರಲ್ಲಿ ಮಾರ್ಕ್ಸ್ ಎಂದು ತಿದ್ದಿ ಓದಲಾಗುವುದೆಂದು ಪಶ್ಚಿಮಬಂಗಾಳದ ಕಮ್ಯುನಿಷ್ಟ್ ನಾಯಕರು ಹೇಳಿಕೆ ನೀಡಿದ್ದಾರೆ.’’
ನಾಯಕನಿಗೆ ಅರ್ಥವಾಗಲಿಲ್ಲ ‘‘ ರಸ್ತೆ ಅಪಘಾತದಲ್ಲಿ ನಡೆಯುತ್ತಿರುವ ಸಾವು ನೋವುಗಳನ್ನು ಗಮನಿಸಿದರೆ, ನಮ್ಮ ಕೋವಿಗಿಂತ ಕಾರೇ ಹಿಂಸೆಗೆ ಹೆಚ್ಚು ಅನುಕೂಲ. ಆದುದರಿಂದ ನಮ್ಮ ಪಶ್ಚಿಮ ಬಂಗಾಳದ ಸಂಗಾತಿಗಳು ಕ್ರಾಂತಿಗೆ ಕಾರನ್ನು ಬಳಸಲು ಹೊರಟಿರಬೇಕು...’’
ಸಂಗಾತಿ ನುಡಿದ ‘‘ಬಡವರ ಕೈಗೆಟಕುವ ದರದಲ್ಲಿ ಕಾರನ್ನು ಉತ್ಪಾದಿಸುತ್ತಿದ್ದಾರಂತೆ. ಈ ಕಾರಿಗೆ ಪಶ್ಚಿಮ ಬಂಗಾಳದ ಕಮ್ಯುನಿಷ್ಟರು ಬೆಂಬಲ ನೀಡಿದ್ದಾರೆ. ಬಡವರಿಗೆ ಕಾರು ಎಟಕುತ್ತದೆ ಎಂದ ಮೇಲೆ ಅದು ಕ್ರಾಂತಿಯೇ ತಾನೆ... ಇದೀಗ ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಬದಲಿಗೆ ಸಿಪಿಐ(ಟಿ) ಎಂದು ಕರೆಯಲಾಗುತ್ತದೆಯಂತೆ...’’
‘‘ಟಿ ಎಂದರೆ?’’
‘‘ಟಿ ಎಂದರೆ ಟಾಟಾ ಅಂತ. ಇನ್ನು ಮುಂದೆ ಸಿಪಿಐಎಂ ಟಾಟಾ...’’
‘‘ಹಾಗಾದರೆ ಮಾರ್ಕ್ಸ್...’’
‘‘ಅವನಿಗೆ ಈಗಾಗಲೇ ಟಾಟಾ ಹೇಳಿಯಾಗಿದೆ...ಅವರ ಸ್ಥಾನದಲ್ಲಿ ಟಾಟಾವನ್ನೇ ಶಾಶ್ವತವಾಗಿ ನಿಲ್ಲಿಸಲಾಗುತ್ತದೆಯಂತೆ...’’
***
ರತನ್ ಟಾಟಾ ಬೆಳಗ್ಗೆ ಎದ್ದಾಗ ಅವರ ಪುಟ್ಟ ಮೊಮ್ಮಗಳು ಏನೋ ಬರೆಯುತ್ತಿದ್ದಳು. ಟಾಟಾ ಮೆಲ್ಲಗೆ ಮೊಮ್ಮಗಳ ಹತ್ತಿರ ಹೋಗಿ’’ ಪುಟ್ಟಿ ಏನು ಬರೆಯುತ್ತಿದ್ದೀಯಮ್ಮ...?’’ ಎಂದು ಕೇಳಿದರು.
ಪುಟ್ಟಿ ಹೇಳಿದಳು ‘‘ಕತೆ ಬರೆಯುತ್ತಿದ್ದೇನೆ ತಾತಾ...’’
‘‘ಯಾರ ಕತೆ ಪುಟ್ಟಿ?’’
‘‘ಬಡವರ ಕತೆ ತಾತಾ’’
ಟಾಟಾಗೆ ಖುಷಿಯಾಯಿತು. ತನ್ನ ಹಾಗೆಯೇ ಈಕೆಯೂ ಬಡವರ ಕುರಿತಂತೆ ಆಲೋಚಿಸುವುದು ನೋಡಿದರೆ, ನನ್ನ ಮೊಮ್ಮಗಳು ದೊಡ್ಡ ಉದ್ಯಮಿಯಾಗುವುದು ಗ್ಯಾರಂಟಿ ಅನ್ನಿಸಿತು. ‘‘ಇಲ್ಲಿ ಕೊಡಮ್ಮ ನಾನೊಮ್ಮೆ ಓದಿ ಕೊಡುತ್ತೇನೆ’’ ಎಂದರು. ಪುಟ್ಟಿ ಕೊಟ್ಟಳು.
‘‘ಒಂದಾನೊಂದು ಊರಿನಲ್ಲಿ ಒಬ್ಬ ದಟ್ಟ ದರಿದ್ರ ಬಡವನಿದ್ದ. ಅವನು ಅದೆಷ್ಟು ಬಡವನಾಗಿದ್ದ ಎಂದರೆ ಓಡಾಡುವದಕ್ಕೆ ಅವನಲ್ಲಿ ಒಂದೇ ಒಂದು ‘ನ್ಯಾನೋ’ ಕಾರು ಇತ್ತು. ಅವರ ಮನೆ ಅದೆಷ್ಟು ಸಣ್ಣದಾಗಿತ್ತು ಎಂದರೆ, ಅಲ್ಲಿ ಒಂದು ಹೂವಿನ ಗಾರ್ಡನ್ ಕೂಡಾ ಇದ್ದಿರಲ್ಲಿಲ್ಲ. ಮನೆಗೆ ಎಸಿ ಕೂಡ ಇದ್ದಿರಲಿಲ್ಲ. ಪಾಪ ಅವನ ಮಕ್ಕಳಿಗೆ ಓದುವುದಕ್ಕೆ ಮನೆಯಲ್ಲಿ ರೀಡಿಂಗ್ ರೂಮ್ ಕೂಡಾ ಇದ್ದಿರಲಿಲ್ಲ. ಆ ಬಡವನ ಮನೆಯಲ್ಲಿ ಅಡುಗೆ ಕೆಲಸಕ್ಕೆ ಆಳು ಕೂಡಾ ಇದ್ದಿರಲಿಲ್ಲ. ಆದುದರಿಂದ ಬಡವನ ಹೆಂಡತಿಯೇ ಅಡುಗೆ ಕೆಲಸ ಮಾಡಬೇಕಾಗಿತ್ತು....’’
 ಟಾಟಾಗೆ ಕತೆ ಓದುತ್ತಾ ಓದುತ್ತಾ ಕಣ್ಣೀರು ಉಕ್ಕಿ ಬಂತು. ಈ ದೇಶದಲ್ಲಿ ಬಡವರು ಎಷ್ಟು ಕಷ್ಟ ಪಡುತ್ತಿದ್ದಾರೆ ಅನ್ನಿಸಿತು. ತನ್ನ ಮೊಮ್ಮಗಳು ಬಡವರ ಬಗ್ಗೆ ಎಷ್ಟೆಲ್ಲ ತಿಳಿದುಕೊಂಡಿದ್ದಾಳಲ್ಲ ಎಂದು ಅಚ್ಚರಿಯೂ ಆಯಿತು. ತನ್ನ ಮೊಮ್ಮಗಳ ಹೆಸರಿನಲ್ಲಿ ಕಡಿಮೆ ದರಕ್ಕೆ ಫ್ರಿಜ್ಜು, ಕಡಿಮೆ ಬೆಲೆಯ ಎಸಿ ಇತ್ಯಾದಿಗಳನ್ನು ಅತಿ ಬಡವರಿಗಾಗಿ ಸಿದ್ಧಗೊಳಿಸುವ ನಿರ್ಧಾರವನ್ನು ಅದಾಗಲೇ ಅವರು ತೆಗೆದುಕೊಂಡಾಗಿತ್ತು.
***
ರಾಜ್ಯದಲ್ಲಿ ನ್ಯಾನೋ ಕಾರು ಬಿಡುಗಡೆಯಾದದ್ದೇ ರಾಜ್ಯಪಾಲರು ಪತ್ರಿಕಾಗೋಷ್ಠಿ ಕರೆದರು. ಎಂಜಲು ಕಾಸಿ ಮನಸ್ಸಿಲ್ಲದ ಮನಸ್ಸಿನಿಂದ ರಾಜ್ಯಪಾಲರ ಪತ್ರಿಕಾಗೋಷ್ಠಿಗೆ ಹಾಜರಾದ. ಮುಖ್ಯಮಂತ್ರಿಗಳು ಕರೆದ ಪತ್ರಿಕಾಗೋಷ್ಠಿಯ ಮಜಾ ರಾಜ್ಯಪಾಲರ ಪತ್ರಿಕಾಗೋಷ್ಠಿಯಲ್ಲಿ ಸಿಗುತ್ತಿರಲಿಲ್ಲ. ಮುಖ್ಯವಾಗಿ ರಾಜ್ಯಪಾಲರು ತರಿಸುವ ಟೀ ಜೊತೆಗಿರುವ ಇಡ್ಲಿಯ ಚಟ್ನಿ ಅಷ್ಟು ಚೆನ್ನಾಗಿರುತ್ತಿರಲಿಲ್ಲ. ಅದಲ್ಲದೆ, ಮುಖ್ಯಮಂತ್ರಿಗಳಾದರೆ, ಪಕ್ಕಕ್ಕೆ ಕರೆದು ನೂರೋ ಇನ್ನೂರೋ ಕಿಸೆಗೆ ತಳ್ಳಿಬಿಡುತ್ತಿದ್ದರು. ಆ ಸೌಜನ್ಯವೂ ರಾಜ್ಯಪಾಲರಲ್ಲಿರಲಿಲ್ಲ. ಆದರೂ ಸಂಪಾದಕ ಒತ್ತಡದಿಂದಾಗಿ ಪತ್ರಿಕಾಗೋಷ್ಠಿಗೆ ಆಗಮಿಸಿದ್ದ. ರಾಜ್ಯಪಾಲರು ಅದಾಗಲೇ ಪತ್ರಿಕಾಗೋಷ್ಠಿಯನ್ನು ಆರಂಭಿಸಿ ಬಿಟ್ಟಿದ್ದರು. ಅವರ ಮುಖದಲ್ಲಿ ಸಂಭ್ರಮ ಕುಣಿಯುತ್ತಿತ್ತು.
‘‘ರಾಜ್ಯದ ಬಡವರ ಪಾಲಿಗೆ ಇದೊಂದು ಸುದಿನ. ನನ್ನ ಆಳ್ವಿಕೆಯಲ್ಲಿ ಇಂತಹ ದಿನವೊಂದು ಬಂದಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ನ್ಯಾನೋ ಕಾರು ಬಿಡುಗಡೆಗೊಂಡಿರುವುದರಿಂದ ದೂರ ದೂರದ ಹಳ್ಳಿಗಳಿಂದ ಜನತಾದರ್ಶನಕ್ಕೆ ಬರುವ ಬಡವರಿಗೆ ತುಂಬಾ ಅನುಕೂಲವಾಗಲಿದೆ. ಅವರು ತಮ್ಮ ಸಮಸ್ಯೆಗಳನ್ನು ಹೇಳಲು ಈ ನ್ಯಾನೋ ಕಾರಿನಲ್ಲೇ ಆಗಮಿಸಬಹುದು. ಹಾಗೆಯೇ ಜನತಾದರ್ಶನಕ್ಕೆಂದು ಬಂದವರು ತಮ್ಮ ಕೆಲಸ ಮುಗಿದ ಬಳಿಕ ಬೆಂಗಳೂರನ್ನು ಸುತ್ತಾಡಿಕೊಂಡೂ ಹೋಗಬಹುದು. ಇನ್ನು ಮುಂದೆ ನ್ಯಾನೋ ಕಾರು ಯಾರೆಲ್ಲಾ ಹೊಂದಿದ್ದಾರೋ ಅವರನ್ನೆಲ್ಲ ಬಡತನ ರೇಖೆಗಿಂತ ಕೆಳಗಿನವರೆಂದು ಗುರುತಿಸಲಾಗುತ್ತದೆ. ಬಡವರೊಂದೂ, ಬಡತನ ರೇಖೆಗಿಂತ ಕೆಳಗಿನವರೆಂದೂ ಗುರುತಿಸಬೇಕಾದರೆ ಅವರು ಕಡ್ಡಾಯವಾಗಿ ‘ನ್ಯಾನೋ’ ಕಾರನ್ನು ಹೊಂದಿರಬೇಕಾಗುತ್ತದೆ. ಯಾರೆಲ್ಲ ನ್ಯಾನೋ ಕಾರು ಹೊಂದಿಲ್ಲವೋ ಅವರ ಹಸಿರು ಕಾರ್ಡನ್ನು ಹಿಂದಕ್ಕೆ ಪಡೆಯಲಾಗುತ್ತದೆ...’’
ಸಾಲ ಸೋಲ ಮಾಡಿಯಾದರೂ ನ್ಯಾನೋ ಕಾರು ತೆಗೆದುಕೊಳ್ಳುವುದು ಅನಿವಾರ್ಯ ಎನಿಸಿತು ಎಂಜಲು ಕಾಸಿಗೆ. ಇಲ್ಲವಾದರೆ ಅವನ ಮನೆಯ ಹಸಿರು ಕಾರ್ಡು ವಜಾ ಆಗುವ ಅಪಾಯವಿತ್ತು. ಅದನ್ನು ನೆನೆಸಿಕೊಂಡೇ ಕೇಳಿದ ‘‘ಒಂದು ವೇಳೆ ಕೆಲವರಲ್ಲಿ ಎರಡು ನ್ಯಾನೋ ಕಾರು ಇದ್ದರೆ...’’
ರಾಜ್ಯಪಾಲರಲ್ಲಿ ಉತ್ತರ ಸಿದ್ಧವಿತ್ತು. ‘‘ನೋಡಿ, ಒಂದು ನ್ಯಾನೋ ಕಾರು ಇದ್ದರೆ ಅವರನ್ನು ಬಡವರು ಎಂದು ಗುರುತಿಸಲಾಗುತ್ತದೆ. ಎರಡು ನ್ಯಾನೋ ಕಾರು ಇದ್ದರೆ ಅವರನ್ನು ಅತಿ ಬಡವರು ಎಂದು ಗುರುತಿಸಲಾಗುತ್ತದೆ. ಅಂತವರನ್ನು ಬಡತನ ರೇಖೆಗಿಂತ ಕೆಳಗಿನವರ ಪಟ್ಟಿಯಲ್ಲಿ ನಾವು ಗುರುತಿಸುತ್ತೇವೆ...’’
‘‘ನ್ಯಾನೋ ಕಾರು ಇಲ್ಲದೇ ಇದ್ದರೆ...’’
ರಾಜ್ಯಪಾಲರು ಕಡ್ಡಿ ಮುರಿದಂತೆ ಹೇಳಿದರು ‘‘ಯಾರಲ್ಲೆಲ್ಲಾ ಬಡವರಿಗಾಗಿ ತಯಾರಿಸಿರುವ ನ್ಯಾನೋ ಕಾರು ಇಲ್ಲವೋ ಅವರನ್ನು ಶ್ರೀಮಂತರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಮತ್ತು ಅವರ ಮೇಲೆ ತೆರಿಗೆಗಳನ್ನು ಹಾಕಲಾಗುತ್ತದೆ. ಆದುದರಿಂದ ಇನ್ನೂ ಎರಡು ತಿಂಗಳ ಒಳಗಾಗಿ ಎಲ್ಲ ಬಡವರು ನ್ಯಾನೋ ಕಾರುಗಳನ್ನು ಕೊಂಡು ತಾವು ಬಡವರು ಎನ್ನುವುದನ್ನು ಸಾಬೀತು ಪಡಿಸಬೇಕಾಗಿದೆ’’ ಎನ್ನುತ್ತಾ ಎದ್ದು ನಿಂತರು. ಅಷ್ಟರಲ್ಲಿ ಶೀರ, ಉಪ್ಪಿಟ್ಟು ಹಿಡಿದುಕೊಂಡು ಬಂದರು. ಎಂಜಲು ಕಾಸಿ ಎಂಜಲು ಸುರಿಸುತ್ತಾ ಆ ಕಡೆಗೆ ತಿರುಗಿದ.
(ಜನವರಿ, 13, 2008, ರವಿವಾರ)

Saturday, April 25, 2015

ಕೆಲವು ಜಾಹಿರಾ ‘ಥೂ’ಗಳು

2008ನೇ ಇಸವಿಯಲ್ಲಿ ವಿಧಾನಸಭಾ ಚುನಾವಣೆಯ ಹೊತ್ತು. ಪಕ್ಷಾಂತರದಲ್ಲಿ ಕುಖ್ಯಾತರಾಗಿದ್ದ ಬಂಗಾರಪ್ಪರನ್ನು ಬಿಜೆಪಿ ಹೊರ ಹಾಕಿದ ಸಂದರ್ಭ. ಬಿಜೆಪಿ ಅಧಿಕಾರಕ್ಕೇರಲು ಸಿದ್ಧತೆ ನಡೆಸುತ್ತಿರುವ ಸಮಯ ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ

ವರ ಬೇಕಾಗಿದೆ
 ಈಗಾಗಲೇ ಹತ್ತು ಬಾರಿ ಡೈವರ್ಸ್ ಪಡೆದ 70ರ ತಾರುಣ್ಯದ ಯುವತಿಗೆ ಯೋಗ್ಯ ವರ ಬೇಕಾಗಿದೆ. ಯಾವ ಧರ್ಮ, ಜಾತಿ, ವರ್ಗಗಳಿಗೆ ಸೇರಿದ್ದರೂ ಚಿಂತೆಯಿಲ್ಲ. ಈ ಹಿಂದೆ ಡೈವರ್ಸ್ ನೀಡಿದ ಗಂಡಂದಿರಾದರೂ ಆದೀತು. ಈಗಾಗಲೇ ಪೂಜಾರಿಗಳು ಮುಹೂರ್ತ, ಸಮಯ, ಮದುವೆ ಹಾಲ್ ಎಲ್ಲವನ್ನೂ ನಿಗದಿ ಪಡಿಸಿರುವುದರಿಂದ ಅರ್ಜೆಂಟಾಗಿ ಮದುವೆಯಾಗಬೇಕಾಗಿದೆ. ತಾಳಿಯ ಹಣವನ್ನು ವಧುವೇ ಭರಿಸಲಿರುವುದರಿಂದ ವರ ಸೀದಾ ಮಂಟಪಕ್ಕೆ ಬಂದು ತಾಳಿ ಕಟ್ಟಿದರೆ ಆಯಿತು. ಈಡಿಗ ಜಾತಿಗೆ ಸೇರಿರುವ ಈ ಹುಡುಗಿ ಅತಿ ಸುಂದರಿ, ಹಲವು ಮದುವೆಯಾಗಿ ಸಾಕಷ್ಟು ಅನುಭವವಿರುವುದರಿಂದ ವರನಿಗೆ ಅನುಕೂಲ. ವಧುವಿನ ಕೈಯಲ್ಲಿ ಸ್ವಲ್ಪ ಪಿತ್ರಾರ್ಜಿತ ಆಸ್ತಿ ಇದೆ. ಆಸಕ್ತಿ ಇರುವವರು ತಕ್ಷಣ ಮುಖತಃ ಸಂಪರ್ಕಿಸಬೇಕು.
ಬಂಗಾರಮ್ಮ, ಸಮಾಜವಾದಿ ವಿಲ್ಲಾ, ಸಮಯ ಸಾಧಕ ರಸ್ತೆ, ಬಿಜೆಪಿ ಮೊದಲ ತಿರುವು, ಹಳೇ ಕ್ರಾಂತಿರಂಗ ಬೀದಿ, ಕಾಂಗ್ರೆಸ್ ಮುಖ್ಯರಸ್ತೆ, ಶಿವಮೊಗ್ಗ-111 (ಮೊಬೈಲ್ ಫೋನ್‌ನ ಕರೆನ್ಸಿ ಮುಗಿದಿರುವುದರಿಂದ ಹಳೆ ನಂಬರನ್ನು ಸಂಪರ್ಕಿಸಬಾರದಾಗಿ ವಿನಂತಿ)
***

ಕುರಿಗಳು ಮಾರಾಟಕ್ಕಿವೆ
ನಾನೇ ನನ್ನ ದೊಡ್ಡಿಯಲ್ಲಿ ಸಾಕಿದ ದಷ್ಟಪುಷ್ಟ ಅಲ್ಪಸಂಖ್ಯಾಕ ಕುರಿಗಳು ಮಾರಾಟಕ್ಕಿವೆ. ಇರಾಕ್‌ನಿಂದ ತರಿಸಿದ ಸದ್ದಾಂ ಕಂಪೆನಿಯ ಹುಲ್ಲು ಹಾಕಿ ಈ ಕುರಿಗಳನ್ನು ಸಾಕಲಾಗಿದೆ. ಬಲಿ ಕೊಡುವುದಕ್ಕೆ ಯೋಗ್ಯ ಕುರಿಗಳು ಇವು. ನನಗೆ ವಯಸ್ಸಾಗಿರುವುದರಿಂದ ಈ ಕುರಿಗಳನ್ನು ಮಾರಿ, ನನ್ನ ಅಳಿಯ ಮತ್ತು ಮೊಮ್ಮಕ್ಕಳಿಗೆ ಸಲ್ಲಬೇಕಾದುದನ್ನು ಕೊಟ್ಟು, ನಾನು ನಿವತ್ತ ಜೀವನ ಮಾಡಬೇಕೆಂದಿದ್ದೇನೆ. ಆದುದರಿಂದ ಯಾರಾದರೂ ಸರಿ, ಒಳ್ಳೆಯ ದರ ಕೊಟ್ಟರೆ ಈ ಕುರಿಗಳನ್ನು ಮಾರುವುದಕ್ಕೆ ಸಿದ್ಧ. ಕುರಿಗಳ ಜೊತೆಗೆ ಕತ್ತಿಗಳನ್ನು ಪುಕ್ಕಟ್ಟೆಯಾಗಿ ನೀಡಲಾಗುವುದು. ಬಿರಿಯಾನಿ ಮಾಡಲು ಯೋಗ್ಯ ಕುರಿಗಳು. ನನ್ನ ಮಕ್ಕಳು, ಮೊಮ್ಮಕ್ಕಳಿಗಾಗಿಯೇ ಸಾಕಿರುವ ಕುರಿಗಳು ಇವಾಗಿರುವುದರಿಂದ ದರದಲ್ಲಿ ಯಾವುದೇ ರಾಜಿಯಿಲ್ಲ. ಇವನ್ನು ಮಾರಿ ಸಿಕ್ಕಿದ ಲಾಭವನ್ನು ಅಳಿಯ, ಮೊಮ್ಮಕ್ಕಳಿಗೆ ಸಮನಾಗಿ ಹಂಚಿ ಅಲ್ಪಸಂಖ್ಯಾತ ಸಮುದಾಯವನ್ನು ಉದ್ಧಾರ ಮಾಡುವುದು ನನ್ನ ಉದ್ದೇಶ. ಆದುದರಿಂದ ಈ ಕುರಿಗಳನ್ನು ಅತಿ ಹೆಚ್ಚು ದರ ಕೊಟ್ಟು ಖರೀದಿಸಿ ಅಲ್ಪಸಂಖ್ಯಾತರ ಏಳಿಗೆ ಮಾಡಬೇಕೆಂದು ಮನವಿ. ಅಲ್ಪಸಂಖ್ಯಾತ ಕುರಿಗಳಿಂದ ಮಾಡಲ್ಪಟ್ಟ ಚಿಲ್ಲಿ, ಫ್ರೈ, ಸುಕ್ಕ ಇತ್ಯಾದಿಗಳು ಇತ್ತೀಚೆಗೆ ಗುಜರಾತ್‌ನಲ್ಲಿ ಭಾರೀ ಖ್ಯಾತಿಯನ್ನು ಪಡೆದಿದ್ದವು. ಈ ಕುರಿಗಳನ್ನು ಕಡಿದು ಯಾವ ಥರದ ಸುಕ್ಕ, ಫ್ರೈ, ಟಿಕ್ಕಾ ಮಾಡಿ ತಿಂದರೂ ನನ್ನ ಮತ್ತು ನನ್ನ ಮೊಮ್ಮಕ್ಕಳ ಅಭ್ಯಂತರವಿಲ್ಲ. 
ಜೋಕರ್ ಶರೀಫ್, ಅಲ್ಪಸಂಖ್ಯಾತರ ದೊಡ್ಡಿ, ಕಾಂಗ್ರೆಸ್ ವದ್ದಾಶ್ರಮ ರಸ್ತೆ, ಸದ್ದಾಂ ಹುಸೇನ್ ಅಡ್ಡ ಹಾದಿ, ರೈಲ್ವೆ ಹಳಿಗಳ ಸಮೀಪ, ಶಿವಾಜಿನಗರ
*** 

ಕಾಣೆಯಾಗಿದ್ದಾರೆ
ವಾರದ ಹಿಂದೆ ಚುನಾವಣಾ ಸಂತೆಯನ್ನು ನೋಡಿ ಬರುತ್ತೇನೆ ಎಂದು ಹೋದ ಸತ್ಯ, ಆತ್ಮಗೌರವ ಮತ್ತು ಪ್ರಾಮಾಣಿಕತೆ ಎಂಬ ಮೂವರು ಮಕ್ಕಳು ಕಾಣೆಯಾಗಿದ್ದಾರೆ. ಆತ್ಮಸಾಕ್ಷಿ ಎಂಬ ಊರಿನ ನಿವಾಸಿಗಳಾಗಿರುವ ಈ ಮಕ್ಕಳು ಕೇಸರಿ, ಬಿಳಿ, ಹಸಿರು ಬಣ್ಣವನ್ನು ಹೊಂದಿದ್ದು, ಹದಯದ ಭಾಷೆಯನ್ನು ಮಾತನಾಡುತ್ತಾರೆ. ಯಾರಾದರೂ ಈ ಮಕ್ಕಳನ್ನು ನೋಡಿದರೆ ದಯವಿಟ್ಟು ಅವರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಬೇಡಿ. ಯಾಕೆಂದರೆ ಅವರು ನಕಲಿ ಎನ್‌ಕೌಂಟರ್‌ನಲ್ಲಿ ಕೊಲ್ಲುವ ಸಾಧ್ಯತೆಯಿದೆ. ಸ್ಥಳೀಯ ರಾಜಕಾರಣಿಗಳಿಗೂ ಒಪ್ಪಿಸಬೇಡಿ. ಅವರು ಚಿಲ್ಲರೆ ಹಣಕ್ಕೆ ಆ ಮಕ್ಕಳನ್ನು ಮಾರಾಟ ಮಾಡುವ ಸಾಧ್ಯತೆಯಿದೆ. ಸಿಕ್ಕಿದರೆ ನಿಮ್ಮ ನಿಮ್ಮ ಆತ್ಮ ಸಾಕ್ಷಿಯೊಳಗೆ ಭದ್ರವಾಗಿ ಬಚ್ಚಿಟ್ಟುಕೊಳ್ಳಿ. ಚುನಾವಣೆ ಸಂತೆ ಮುಗಿಯುವವರೆಗೆ ಅವರನ್ನು ಹೊರಗೆ ಬಿಡಬೇಡಿ.
ಪ್ರಜಾಪ್ರಭುತ್ವ, ಕಾಣೆಯಾದ ಮಕ್ಕಳ ನಿರ್ಭಾಗ್ಯ ತಂದೆ
***
ಹರಾಜು ಪ್ರಕಟನೆ
ಅತ್ಯುತ್ತಮ ತಳಿಯ 20 ಕ್ರಿಕೆಟ್ ಆಟಗಾರರು ಹರಾಜಿಗಿದ್ದಾರೆ. ಸ್ಫುರದ್ರೂಪಿಗಳಾಗಿರುವ ಈ ಕ್ರಿಕೆಟ್ ಆಟಗಾರರು ಅತ್ಯಂತ ಚೆಂದ ಹಾಡಬಲ್ಲರು. ಫ್ಯಾಶನ್ ಶೋಗಳಲ್ಲಿ ಮಾರ್ಜಾಲ ನಡಿಗೆಯ ಕುರಿತಂತೆ ವಿಶೇಷ ತರಬೇತಿ ಪಡೆದಿದ್ದಾರೆ. ಬಿಕಿನಿ ಹಾಕಿದ ಹುಡುಗಿಯರೊಂದಿಗೆ ಅದ್ಭುತವಾಗಿ ಕುಣಿಯಬಲ್ಲರು. ಯಾವ ಯಾವ ಸಂದರ್ಭಗಳಲ್ಲಿ ಹೇಗೆ ವಿವಾದಿತರಾಗಿ ಸುದ್ದಿಯಾಗಬೇಕು ಎನ್ನುವುದರ ಕುರಿತಂತೆ ವಿಶೇಷ ತರಬೇತಿಯನ್ನು ಪಡೆದಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಸಹನಟರಾಗಿ ಅಭಿನಯಿಸಿದ್ದಾರೆ. ಬೇಕಾದರೆ ಆಟಕ್ಕೂ ಕೂಡಾ ಇವರನ್ನು ಬಳಸಬಹುದು. ಆದರೆ ಇವರ ಮೇಕಪ್ ಕೆಡದಂತೆ ಜಾಗತೆ ವಹಿಸಬೇಕು. ಬಿಸಿಲಿಗೆ ಹೆಚ್ಚು ಹೊತ್ತು ನಿಲ್ಲಿಸಬಾರದು. ಆಟಗಾರರ ಜೊತೆಗೆ ಅವರ ನಾಚಿಕೆ, ಮಾನ ಮರ್ಯಾದೆ, ಸ್ವಂತಿಕೆ ಇವುಗಳಿಗೆ ಪ್ರತ್ಯೇಕ ದರ ವಿಧಿಸಲಾಗುವುದಿಲ್ಲ. ಅದನ್ನು ಪುಕ್ಕಟೆಯಾಗಿ ನೀಡಲಾಗುತ್ತದೆ.
ಡಾಲರ್ ಕುಮಾರ್, ಆತ್ಮ ಗೌರವವಿಲ್ಲ, ಹಾಕಿ ಆಟದ ಗೋರಿಯ ಎದುರುಗಡೆ, ಬಹುರಾಷ್ಟ್ರೀಯ ಕಂಪೆನಿ, ಭಾರತ
***
ಅನಾಥ ಶವ ಪತ್ತೆ
ಗುಜರಾತ್‌ನ ಗೋಧ್ರಾ ರೈಲು ಹಳಿ ಬಳಿ ಒಂದು ಅನಾಥ ಶವ ಪತ್ತೆಯಾಗಿದೆ. ಮುಖ ಗುರುತು ಸಿಕ್ಕಲಾರದಷ್ಟು ಜಜ್ಜಿ ಹೋಗಿದೆ. ಆತ್ಮಹತ್ಯೆಯೋ, ಕೊಲೆಯೋ ತಿಳಿಯದಾಗಿದೆ. ಮತ ದೇಹದ ಅಂಗಿಯ ಕಾಲರ್ ಬಳಿ ‘ಅಂಬೇಡ್ಕರ್ ಟೈಲರ್ ಶಾಪ್’ ಎನ್ನುವ ಮಾರ್ಕ್ ಇದೆ. ಕಿಸೆಯಲ್ಲೊಂದು ಗುರುತು ಚೀಟಿ ಸಿಕ್ಕಿದ್ದು, ಅದರಲ್ಲಿ ‘ಸಂವಿಧಾನ’ ಎಂಬ ಹೆಸರಿದ್ದು, ಅದು ಮತ ವ್ಯಕ್ತಿಯ ಹೆಸರಾಗಿರಬೇಕೆಂದು ಶಂಕಿಸಲಾಗಿದೆ. ಗುರುತು ಚೀಟಿಯಲ್ಲಿ ತಂದೆಯ ಹೆಸರು ಸ್ವಾತಂತ್ರ, ತಾಯಿಯ ಹೆಸರು ಭಾರತಮಾತೆ ಎಂದು ಬರೆದಿದೆ. ವ್ಯಕ್ತಿಯ ದೇಹದಾದ್ಯಂತ ಚೂರಿಯ ಗಾಯಗಳಿವೆ. ವ್ಯಕ್ತಿಯ ಎದೆ ಭಾಗಕ್ಕಿಂತ ಬೆನ್ನಿನ ಭಾಗಕ್ಕೆ ಹೆಚ್ಚು ಇರಿಯಲಾಗಿದೆ. ಗಾಯದ ಗುರುತು ನೋಡಿದಾಗ ತ್ರಿಶೂಲಗಳಿಂದ ಬೆನ್ನಿಗೆ ಇರಿಯಲಾಗಿದೆ ಎಂಬ ಅನುಮಾನ ಬರುತ್ತದೆ. ಬೆನ್ನಿಗೆ ಇರಿದ ಪರಿಣಾಮವಾಗಿಯೇ ವ್ಯಕ್ತಿ ಸತ್ತಿರಬೇಕೆಂದು ಶಂಕಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ಮೊಕದ್ದಮೆ ಎಂದು ದಾಖಲಿಸಲಾಗಿದೆ. ವಾರಸುದಾರರು ಯಾರಾದರೂ ಇದ್ದಲ್ಲಿ ಮತದೇಹವನ್ನು ಕೊಂಡೊಯ್ಯಬಹುದು.
ನರೀಂದ್ರ ಮೊ. ದಿ. ಮುಖ್ಯಸ್ಥರು ಗುಜರಾತ್ ಶವಾಗಾರ ವಿಭಾಗ.
(ಎಪ್ರಿಲ್ 27, 2008, ರವಿವಾರ)