Saturday, November 30, 2013

ನನ್ನವರೇ ನನ್ನನ್ನು ಸದನದ ಬಾವಿಗೆ ನೂಕಿದ್ರೂ....

ಯಾರೋ ಬಾವಿಯೊಳಗಿಂದ ಕಾಪಾಡಿ ಕಾಪಾಡಿ ಎಂದು ಕೂಗಿದಂತಾಯಿತು.
ಅರೇ! ಬಾವಿಯೊಳಗಿಂದ ಯಾರೋ ಕೂಗಿದಂತೆ ಕೇಳುತ್ತಿದೆ. ಯಾರಿದು? ಪರಿಚಿತ ಧ್ವನಿ. ಪತ್ರಕರ್ತ ಎಂಜಲು ಕಾಸಿ ತಲೆಕೆರೆದುಕೊಂಡ. ಅತ್ತಿತ್ತ ನೋಡಿದರೆ, ದೂರದ ಸದನದ ಬಾವಿಯಲ್ಲಿ ಕೂತು ಯಡಿಯೂರಪ್ಪ ‘‘ಕಾಪಾಡಿ ಕಾಪಾಡಿ’ ಎಂದು ಕೂಗುತ್ತಿದ್ದಾರೆ. ಸದನದಲ್ಲೇ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ ಇದ್ದರೂ ಯಾರೂ ಅವರನ್ನು ಬಾವಿಯಿಂದ ಮೇಲೆತ್ತುವ ಕೆಲಸ ಮಾಡುತ್ತಿಲ್ಲ.
ಬಾವಿಯ ಮೇಲಿನಿಂದಲೇ ನಿಂತು ಪತ್ರಕರ್ತ ಎಂಜಲು ಕಾಸಿ ಕೇಳಿದ ‘‘ಸಾರ್...ಏನಿದು ನೀವಿಲ್ಲಿ? ಸದನದಲ್ಲಿ ಚರ್ಚೆ ನಡೆಸುವುದು ಬಿಟ್ಟು ಬಾವಿಯೊಳಗೆ ಬಿದ್ದು ಬಿಟ್ಟಿದ್ದೀರಲ್ಲ? ಯಾರು ಸಾರ್ ನೂಕಿದ್ದು?’’
ಯಡಿಯೂರಪ್ಪ ಅಲ್ಲಿಂದಲೇ ಸಿಟ್ಟಾದರು ‘‘ನಾನಿಲ್ಲಿ ಬಾವಿಗೆ ಬಿದ್ದಿದ್ದೇನೆ...ನೀನು ಮೇಲೆ ನಿಂತು ಕಷ್ಟ ಸುಖ ಮಾತನಾಡ್ತಾ ಇದ್ದೀಯ? ಮೊದಲು ನನ್ನನ್ನು ಮೇಲೆತ್ತುವ ಪ್ರಯತ್ನ ಮಾಡು...ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಹೇಳ್ತೇನೆ...’’
‘‘ಬಾವಿಗೆ ಹಗ್ಗ ಇಳಿಸಲಾ ಸಾರ್?’’ ಕಾಸಿ ಅವಸರದಿಂದ ಕೇಳಿದ.
‘‘ಅಂಬರೀಷ್ ಹಗ್ಗ ಇಳಿಸಿದರು. ಆಗಲೇ ನಾನು ಮೇಲೆ ಹತ್ತಲಿಲ್ಲ. ಇನ್ನು ಚಿಲ್ಲರೆ ಪತ್ರಕರ್ತ ನೀನು ಹಗ್ಗ ಇಳಿಸಿದರೆ ಮೇಲೆ ಹತ್ತುತ್ತೀನಾ?’’ ಯಡಿಯೂರಪ್ಪ ಕೇಳಿದರು.
‘‘ಹಾಗಾದರೆ ದೊಡ್ಡ ಪತ್ರಕರ್ತ ತರುಣ್ ತೇಜ್‌ಪಾಲ್‌ರನ್ನು ಕರೆಸ್ಲಾ ಸಾರ್...?’’ ಕಾಸಿ ವ್ಯಂಗ್ಯದಿಂದ ಕೇಳಿದ.
‘‘ಅವನು ನನಗಿಂತ ದೊಡ್ಡ ಬಾವಿಗೆ ಬಿದ್ದಿದ್ದಾನೆ. ನನ್ನನ್ನು ಅವನು ಮೇಲೆತ್ತುವುದು ಹೇಗೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಹಗ್ಗ ಇಳಿಸಿದ್ರೆ ಮೇಲೆ ಬರುತ್ತೇನೆ...,’’ ಯಡಿಯೂರಪ್ಪ ಸದನದ ಬಾವಿಯಿಂದಲೇ ಕೂಗಿ ಹೇಳಿದರು.
‘‘ಸಾರ್...ಅದಿರ್ಲಿ, ಬಾವಿಗೆ ಯಾಕೆ ಹಾರಿದ್ರಿ...?’’ ಕಾಸಿ ಕೇಳಿದ.
‘‘ಅದೇರಿ, ಹಳೇ ಸಮಸ್ಯೆ...ಮದುವೆ ಪ್ರಾಬ್ಲೆಮ್ಮು...’’ ಯಡಿಯೂರಪ್ಪ ಹೇಳಿದರು.
‘‘ಶೋಭಕ್ಕ ಏನಾದ್ರು ಅಂದ್ರಾ ಸಾರ್...ಅಥವಾ ವರದಕ್ಷಿಣೆ ಸಮಸ್ಯೆನಾ ಸಾರ್?’’ ಕಾಸಿ ಮೆಲ್ಲಗೆ ಕೇಳಿದ.
‘‘ಏನ್ರಿ ಹಾಗಂದ್ರೆ...?’’
‘‘ಅದೇ ಸಾರ್...ವರದಕ್ಷಿಣೆ ಕಡಿಮೆ ಆಯಿತು ಅಂತ ಸೊಸೆಯನ್ನು ಬಾವಿಗೆ ನೂಕ್ತಾರಲ್ಲ...ಹಂಗೇನಾದ್ರೂ ನೂಕಿದ್ರಾ ಸಾರ್?’’
‘‘ನನ್ನನ್ನು ನನ್ನವರೇ ಬಾವಿಗೆ ನೂಕಿದ್ರು ಕಣ್ರೀ...ಬಿಜೆಪಿ ಎನ್ನೋ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಿದ್ದೇನೆ ಕಣ್ರೀ...’’ ಎನ್ನುತ್ತಾ ಅಳತೊಡಗಿದರು.
‘‘ಜೋರಾಗಿ ಅಳಬೇಡಿ ಸಾರ್...ಬಾವಿಯಲ್ಲಿ ನೀರು ತುಂಬಿ ನೀವು ಮುಳುಗಿ ಬಿಟ್ಟೀರಿ...’’ ಕಾಸಿ ಸಮಾಧಾನ ಮಾಡಿದ.
‘‘ಇದು ಪಾಳು ಬಾವಿ ಕಣ್ರೀ...ಅದಕ್ಕೆ ಹಾರಿದ್ದೇನೆ. ಶಾದಿ ಭಾಗ್ಯದಲ್ಲಿ ಕೆಜೆಪಿಗೂ ಒಂದು ಪಾಲು ಕೊಡ ಬೇಕು ಎಂದು ಬಾವಿಗೆ ಬಿದ್ದಿದ್ದೇನೆ. ಈಗ ನೋಡಿದ್ರೆ... ಯಾರೂ ನನ್ನನ್ನು ಮೇಲೆ ಎತ್ತುತ್ತಾ ಇಲ್ಲ...ಇದು ನ್ಯಾಯವೇನ್ರಿ...’’
‘‘ಪರವಾಗಿಲ್ಲ ಸಾರ್..ಪಾಳು ಬಾವಿ ತಾನೆ... ಅಧಿವೇಶನ ಮುಗಿಯುವವರೆಗೆ ಅದರೊಳಗೆ ನೆಮ್ಮದಿ ಯಿಂದ ನಿದ್ದೆ ಮಾಡಿ. ಯಾರೂ ನೋಡೋಲ್ಲ...’’
‘‘ಆದ್ರೆ ಹೊರಗಡೆ ರೈತನೊಬ್ಬ ನಾನು ಬಾವಿಗೆ ಬಿದ್ದುದಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಕಣ್ರೀ...ಆದ್ರೂ ಸಿದ್ದರಾಮಯ್ಯ ನನ್ನನ್ನು ಮೇಲೆತ್ತೋದಕ್ಕೆ ಮುಂದೆ ಬಂದಿಲ್ಲ. ನಿರ್ದಯಿ ಕಣ್ರೀ...ಒಂದಿಷ್ಟು ಕರುಣೆ ಇಲ್ಲ ಕಣ್ರೀ...’’ ಎನ್ನುತ್ತಾ ‘‘ದಯೆಯೇ ಧರ್ಮದ ಮೂಲವಯ್ಯ, ನೀನಾರವ ನೀನಾರವ ಎನ್ನದಿರು, ನೀ ನಮ್ಮವ...’’ ಎನ್ನುವ ವಚನವನ್ನು ಬಾವಿಯಲ್ಲಿ ಕೂತು ಹಾಡತೊಡಗಿದರು.
‘‘ಆದರೆ ಹೊರಗಡೆ ಆತ್ಮಹತ್ಯೆ ಮಾಡಿಕೊಂಡಿರುವುದು ಕಬ್ಬುಬೆಲೆ ಸರಿಯಾಗಿ ಸಿಗ್ತಾ ಇಲ್ಲ ಎನ್ನುವ ಕಾರಣಕ್ಕಾಗಿ ಸಾರ್...’’ ಎಂಜಲು ಕಾಸಿ ತಿದ್ದಿದ.
ಯಡಿಯೂರಪ್ಪ ಸಿಟ್ಟಾದರು ‘‘ಏನ್ರಿ...ಸಿದ್ದರಾಮಯ್ಯ ಜೊತೆಗೆ ನೀವು ರಾಜಕೀಯ ಮಾಡ್ತಾ ಇದ್ದೀರಾ... ಆತ್ಮಹತ್ಯೆ ಮಾಡಿಕೊಂಡಿರುವುದು ನನ್ನ ಅಭಿಮಾನಿ ಕಬ್ಬು ಬೆಳೆಗಾರ...ಎರಡೂ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ...ಒಂದು ಕಬ್ಬಿಗೆ ಬೆಂಬಲ ಬೆಲೆ. ಇನ್ನೊಂದು ಯಡಿಯೂರಪ್ಪಗೆ ಬೆಂಬಲ ಬೆಲೆ....’’
‘‘ನಿಮಗೆ ಕನಿಷ್ಠ ಬೆಂಬಲ ಬೆಲೆ ಎಷ್ಟು ಸಿಗಬೇಕು... ಸಾರ್?’’ ಕಾಸಿ ಕೇಳಿದ.
ಯಡಿಯೂರಪ್ಪ ಆಲೋಚಿಸಿ ಹೇಳಿದರು ‘‘ನೋಡ್ರಿ...ನನ್ನ ಗರಿಷ್ಠ ಬೆಂಬಲ ಬೆಲೆ ಮುಖ್ಯಮಂತ್ರಿ ಸ್ಥಾನ. ಕನಿಷ್ಠ ಬೆಂಬಲ ಬೆಲೆ ವಿರೋಧ ಪಕ್ಷ ಸ್ಥಾನ. ಆದರೆ ಬಿಜೆಪಿಯೋರು ನನ್ನ ದುಡಿಮೆಗೆ ತಕ್ಕ ಬೆಂಬಲ ನೀಡದೆ ನನ್ನನ್ನು ಸದನದ ಬಾವಿಗೆ ತಳ್ಳಿ ಬಿಟ್ಟರು. ಇದರ ಪರಿಣಾಮವಾಗಿ ಇಂದು ರೈತರು ಆತ್ಮಹತ್ಯೆ ಮಾಡಿ ಕೊಳ್ತಾ ಇದ್ದಾರೆ. ಇಂದು ರೈತರು ಆತ್ಮಹತ್ಯೆ ಮಾಡಿ ಕೊಳ್ಳುವುದನ್ನು ತಡೆಯಬೇಕಾದರೆ ಯಡಿಯೂರಪ್ಪ ಅವರಿಗೆ ಕನಿಷ್ಠ ಬೆಂಬಲ ಬೆಲೆಯೊಂದನ್ನು ಎಲ್ಲರೂ ಸೇರಿ ಘೋಷಿಸಬೇಕು. ಆಗ ಮಾತ್ರ ರೈತರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯ. ಹಾಗೆಯೇ ನಾನು ಬಾವಿಯಿಂದ ಮೇಲೆ ಬಂದು ಕುರ್ಚಿಯಲ್ಲಿ ಕೂರುವುದಕ್ಕೆ ಸಾಧ್ಯ....’’
‘‘ಸಾರ್...ರೈತರಿಗೆ ಬೆಂಬಲ ಬೆಲೆ ಸಿಗುವ ಸಾಧ್ಯತೆ ಯಿದೆ. ಆದರೆ ನಿಮಗೆ ಅದೇನಾದರೂ ಬೆಂಬಲ ಬೆಲೆ ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ...’’ ಕಾಸಿ ಮೆಲ್ಲಗೆ ಯಡಿಯೂರಪ್ಪರನ್ನು ಹೆದರಿಸಿದ.
‘‘ಅದು ಯಾಕೆ ಕೊಡುವುದಿಲ್ಲವಂತೆ? ನನ್ನ ಪರವಾಗಿ ಇಡೀ ರಾಜ್ಯದ ರೈತರು ಆತ್ಮಹತ್ಯೆ ಮಾಡಿಕೊಂಡು ಪ್ರತಿಭಟನೆ ಮಾಡ್ತಾರೆ ನೆನಪಿಡಿ....’’
‘‘ಸಾರ್...ನಿಮಗಾಗಿ ರೈತರು ಯಾಕೆ ಪ್ರತಿಭಟನೆ ಮಾಡಬೇಕು? ನೀವು ತಾನೆ ರೈತರಿಗೆ ಗುಂಡಿಟ್ಟಿರು ವುದು...ಅಂತ ಮುಖ್ಯಮಂತ್ರಿ ಕೇಳ್ತಾ ಇದ್ದಾರೆ...’’ ಕಾಸಿ ಮೆಲ್ಲಗೆ ಚಿವುಟಿದ.
‘‘ನಾನು ಗುಂಡಿಕ್ಕುವುದಾದರೆ ರೈತರಿಗಲ್ಲ, ನೇರವಾಗಿ ಸಿದ್ದರಾಮಯ್ಯ, ಈಶ್ವರಪ್ಪ, ಎಲ್. ಕೆ. ಅಡ್ವಾಣಿ ಇವರಿಗೆಲ್ಲ ಗುಂಡಿಕ್ಕುತ್ತಿದ್ದೆ. ಅಂದು ಗುಂಡಿಕ್ಕದ ಫಲವಾಗಿ ಇಂದು ನನ್ನನ್ನು ಈ ಸ್ಥಿತಿಗೆ ತಂದು ಹಾಕಿದ್ದಾರೆ... ಬಿಡುವುದಿಲ್ಲ...ಇಂದು ಕಬ್ಬು ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ...ನಾಳೆ ಭತ್ತ ಬೆಳೆಗಾರ...ನಾಡಿದ್ದು ಅಡಿಕೆ ಬೆಳೆಗಾರ...ಹೀಗೆ ಎಲ್ಲರೂ ನನಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆಗ ಸಿದ್ದರಾಮಯ್ಯ ಏನು ಮಾಡುತ್ತಾರೋ ನೋಡೋಣ...’’ ಯಡಿಯೂರಪ್ಪ ಬಾವಿಯೊಳಗಿಂದಲೇ ಶಪಥ ಹಾಕಿದರು.
ಅಷ್ಟರದಲ್ಲಿ ದೂರದಿಂದ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ, ಅನಂತಕುಮಾರ್ ಮೊದಲಾದವರು ಸದನದ ಬಾವಿಯ ಕಡೆಗೆ ಬರುವುದನ್ನು ಕಾಸಿ ನೋಡಿ ಕೂಗಿ ಹೇಳಿದ ‘‘ಸಾರ್ ಸಿದ್ದರಾಮಯ್ಯ, ಈಶ್ವರಪ್ಪ, ಕುಮಾರಸ್ವಾಮಿ ಎಲ್ಲರೂ ಈ ಬಾವಿಯ ಕಡೆಗೆ ಧಾವಿಸಿ ಬರುತ್ತಿದ್ದಾರೆ....’’
ಯಡಿಯೂರಪ್ಪ ಬಾವಿಯೊಳಗಿಂದಲೇ ಖುಷಿ ಯಾದರು ‘‘ಗೊತ್ತಿತ್ತು. ಬರದೇ ಎಲ್ಲಿಗೆ ಹೋಗುತ್ತಾರೆ? ನನ್ನನ್ನು ಮೇಲೆ ಎತ್ತುವುದಕ್ಕೆ ಬರುತ್ತಿದ್ದಾರೆ ಹ್ಹಹ್ಹ...’’ ಎಂದು ನಗ ತೊಡಗಿದರು.
ಕಾಸಿ ಮತ್ತಷ್ಟು ಗಾಬರಿಯಿಂದ ಹೇಳಿದ ‘‘ಸಾರ್ ಅವರ ಕೈಯಲ್ಲಿ ದೊಡ್ಡ ದೊಡ್ಡ ಕಲ್ಲಿದೆ ಸಾರ್...ನೀವು ಬಿದ್ದ ಬಾವಿಗೆ ಕಲ್ಲು ಹಾಕುವುದಕ್ಕೆ ಬರುತ್ತಿರಬೇಕು...’’
ಯಡಿಯೂರಪ್ಪ ‘‘ದ್ರೋಹಿಗಳು... ದ್ರೋಹಿಗಳು... ನಾನು ಬಾವಿಗೆ ಬಿದ್ದಿದ್ದರೆ ಎತ್ತೋದು ಬಿಟ್ಟು ಕಲ್ಲು ಹಾಕೋದಕ್ಕೆ ಬರುತ್ತಿದ್ದಾರೆ...’’ ಎಂದವರೇ ತಾವೇ ತಾವಾಗಿ ಸರಸರನೇ ಬಾವಿ ಏರಿ ಹೋಗಿ, ಸದನದ ಕುರ್ಚಿಯಲ್ಲಿ ಕುಳಿತುಕೊಂಡರು.
‘‘ಛೆ ಸ್ವಲ್ಪದರಲ್ಲಿ ಮಿಸ್ಸಾಗಿ ಹೋಯಿತು...’’ ಎಂದು ಸಿದ್ದರಾಯಮ್ಯ, ಈಶ್ವರಪ್ಪಾದಿಗಳು ಕೈ ಕೈ ಹಿಸುಕಿಕೊಂಡರು.

No comments:

Post a Comment