Saturday, July 25, 2015

ಎಂಜಲು ಕಾಸಿಗೆ ಸಿಕ್ಕಿತು ರಾಜ್ಯೋತ್ಸವ ಪ್ರಶಸ್ತಿ

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ವ್ಯಾಪಕ ಹಸ್ತಕ್ಷೇಪ ನಡೆದ ಸಂದರ್ಭದಲ್ಲಿ ಬರೆದ ಬುಡಬುಡಿಕೆ. ವಾರ್ತಾಭಾರತಿ ದೈನಿಕದ  ಅಕ್ಟೋಬರ್ -31-2010 ರ ಸಂಚಿಕೆಯಲ್ಲಿ ಪ್ರಕಟವಾಗಿದೆ . 

ಕೊನೆಗೂ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಯಿತು. ಎಂಜಲು ಕಾಸಿ ಹಿರಿ ಹಿರಿ ಹಿಗ್ಗಿದ. ಯಾಕೆಂದರೆ ಈ ಬಾರಿ ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಎಂಜಲು ಕಾಸಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು. ಪತ್ರಕರ್ತನಾಗಿ ಎಂಜಲು ಕಾಸಿ ರಾಜಕಾರಣಿಗಳಿಗೆ ಸಲ್ಲಿಸಿದ ಸೇವೆ ಮತ್ತು ಜನರನ್ನು ರಂಜಿಸಿದ ರೀತಿಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು. ಉಳಿದಂತೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಕೃಷಿ ಕ್ಷೇತ್ರದಲ್ಲಿ ಪ್ರಶಸ್ತಿ ಪಡೆದವರು:
ಎಚ್. ಡಿ. ಕುಮಾರಸ್ವಾಮಿ: ರಾಜ್ಯದಲ್ಲಿ ಬಿಜೆಪಿ ಸರಕಾರವನ್ನು ಬಿತ್ತಿ, ಇಂದು ಅದರ ಫಲವನ್ನು ರಾಜ್ಯದ ಜನರು ಉಣ್ಣುವಂತೆ ಮಾಡಿದ ಅಗ್ರಮಾನ್ಯ ಕಷಿಕ ಮಣ್ಣಿನ ಮೊಮ್ಮಗ ಕುಮಾರಸ್ವಾಮಿಯವರಿಗೆ ಈ ಬಾರಿ ಕೃಷಿ ಕ್ಷೇತ್ರದ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಎಸ್. ಎಲ್. ಭೈರಪ್ಪ: ಸಾಹಿತ್ಯ ಕೃಷಿಯಲ್ಲಿ ದ್ವೇಷದ ಬೆಳೆಯನ್ನು ಬೆಳೆದು ಅದನ್ನು ಇಂದು ರಾಜ್ಯಾದ್ಯಂತ ಜನರಿಗೆ ಹಂಚಿರುವ ಸಾಧನೆಗಾಗಿ ಕಷಿ ಕ್ಷೇತ್ರದಲ್ಲಿ ಇವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ.
ಬಂಗಾರಪ್ಪ: ರಾಜಕೀಯ ಕೃಷಿ ಕ್ಷೇತ್ರದಲ್ಲಿ ವಿವಿಧ ಪಕ್ಷಗಳನ್ನು ಪ್ರಾಯೋಗಿಕವಾಗಿ ಬೆಳೆದು, ಅದರ ಫಲವನ್ನು ತಾನೊಬ್ಬನೇ ಉಂಡು, ಇಂದು ನಿವತ್ತರಾಗಿರುವ ಮಾಜಿ ರೈತ ಬಂಗಾರಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ಬಿಬಿಎಂಪಿಯ ಅಧಿಕಾರಿಗಳಿಗೆ: ರಾಜ್ಯಾದಾದ್ಯಂತ ಕೊಳೆಗೇರಿ ಗಟಾರಗಳಲ್ಲಿ, ಕುಡಿಯುವ ನೀರುಗಳಲ್ಲಿ ವಿವಿಧ ರೀತಿಯಲ್ಲಿ ಸೊಳ್ಳೆಗಳನ್ನು, ಕ್ರಿಮಿಗಳನ್ನು ಸಾಕಿ ಪೋಷಿಸಿ, ಅದನ್ನು ಮನೆ ಮನೆಗೆ ಹಂಚಿದ್ದಕ್ಕಾಗಿ.
ರಾಜ್ಯದ ಎಲ್ಲಾ ಬ್ಯಾಂಕ್ ಮತ್ತು ಫೈನಾನ್ಸ್‌ಗಳಿಗೆ: ರೈತರ ಆತ್ಮಹತ್ಯೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದಕ್ಕಾಗಿ.
ರೇಣುಕಾಚಾರ್ಯ: ಭಿನ್ನಮತಗಳನ್ನು ಬಿತ್ತಿ, ಅದನ್ನು ರಾಜ್ಯದ ಎಲ್ಲಾ ಪಕ್ಷಗಳಿಗೆ ಹಂಚಿದ ಸಾಧನೆಗಾಗಿ.
ವೈದ್ಯಕೀಯ ಕ್ಷೇತ್ರದಲ್ಲಿ ಪ್ರಶಸ್ತಿ:
ಜನಾರ್ದನ ರೆಡ್ಡಿ: ಹತ್ತು ಹಲವು ಆಪರೇಷನ್‌ಗಳನ್ನು ಮಾಡಿ ಬಿಜೆಪಿಯೆಂಬ ರೋಗಿಯನ್ನು ಉಳಿಸಿದ ಸಾಧನೆಗಾಗಿ.
ಸಮಾಜ ಸೇವೆ:
ಆರ್. ವಿ. ದೇಶಪಾಂಡೆ: ರಾಜ್ಯಕ್ಕೆ ಹೆಣಭಾರವಾಗಿದ್ದ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ ಸಾಧನೆಗಾಗಿ.
ಮಾಜಿ ಸಚಿವ ಸುಧಾಕರ್: ಭಿಕ್ಷುಕರ ಪುನರ್ವಸತಿ ಶಿಬಿರದಲ್ಲಿ ಮಾರಕ ರೋಗ ಹಬ್ಬಿಸಿ ಅಲ್ಲಿನ ಭಿಕ್ಷುಕರನ್ನು ಸಾಮೂಹಿಕವಾಗಿ ಸಾಯಿಸಿ, ರಾಜ್ಯದಲ್ಲಿ ಭಿಕ್ಷುಕರ ಕಾಟವನ್ನು ಕಮ್ಮಿ ಮಾಡಿದ್ದಕ್ಕಾಗಿ.
ಸಂಶೋಧಕ ಚಿದಾನಂದಮೂರ್ತಿ: ಹೊಸದಾಗಿ ಯಾವುದೇ ಸಂಶೋಧನೆ ಮಾಡದೇ ಸಮಾಜದ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡಿದ್ದಕ್ಕಾಗಿ.
ಎಲ್ಲ ದಲಿತ ಸಂಘಟನೆಗಳಿಗೆ: ದಲಿತರ ಒಗ್ಗಟ್ಟನ್ನು ಮುರಿದು, ಅವರನ್ನು ಮತ್ತೆ ಮನುವಿನ ಬಾಯಿಗೆ ತಳ್ಳಿದ್ದಕ್ಕಾಗಿ. ಈ ಮೂಲಕ ದಲಿತರ ನಿವಾರಣೆಗೆ ಕೊಡುಗೆ ನೀಡಿದ್ದಕ್ಕಾಗಿ.
ಸಾಂಸ್ಕೃತಿಕ ಕ್ಷೇತ್ರ:
ಸಿ. ಎಂ. ಇಬ್ರಾಹೀಂ: ರಾಜಕೀಯದಲ್ಲಿ ಜೋಕರ್ ಪಾತ್ರವನ್ನು ನಿರ್ವಹಿಸಿ ಹಾಸ್ಯದ ಹೊನಲನ್ನು ಹರಿಸಿ, ಜನರನ್ನು ರಂಜಿಸಿದ್ದಕ್ಕಾಗಿ.
ಸಿದ್ದರಾಮಯ್ಯ ಮತ್ತು ಮೋಟಮ್ಮ: ಬಳ್ಳಾರಿ ಪಾದಯಾತ್ರೆಯ ಸಂದರ್ಭದಲ್ಲಿ ಅಮೋಘವಾಗಿ ನರ್ತಿಸಿದ್ದಕ್ಕಾಗಿ.
ಪ್ರಮೋದ್ ಮುತಾಲಿಕ್: ದರೋಡೆ, ಹಲ್ಲೆ, ಕೊಲೆ ಇತ್ಯಾದಿ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿದು, ಅದಕ್ಕಾಗಿ ಹಗಲು ರಾತ್ರಿ ದುಡಿದದ್ದಕ್ಕಾಗಿ. ಹಾಗೂ ಮುಖಕ್ಕೆ ಮಸಿ ಬಳಿಸಿಕೊಂಡದ್ದಕ್ಕಾಗಿ.
ನೀರಾವರಿ ಕ್ಷೇತ್ರ:
ಮುಖ್ಯಮಂತ್ರಿ ಯಡಿಯೂರಪ್ಪ: ಸದಾ ಅಳುತ್ತಾ ರಾಜ್ಯದ ಹಳ್ಳ ಕೊಳ್ಳಗಳನ್ನು ತುಂಬಿಸಿದ್ದಕ್ಕಾಗಿ.
ಎಲ್ಲ ಟಿ. ವಿ. ಧಾರಾವಾಹಿಗಳಿಗೆ: ಸ್ತ್ರೀ ಪ್ರಧಾನ ಧಾರಾವಾಹಿಗಳನ್ನು ಮಾಡಿ, ಎಲ್ಲ ಮಹಿಳೆಯರ ಕಣ್ಣಲ್ಲಿ ಸದಾ ನೀರು ತುಂಬಿ ತುಳುಕುವಂತೆ ಮಾಡಿದುದಕ್ಕಾಗಿ. ರಾಜ್ಯದ ನೀರಿನ ಬರವನ್ನು ಕಡಿಮೆ ಮಾಡಿದುದಕ್ಕಾಗಿ.
ಸಾಹಿತ್ಯಕ್ಷೇತ್ರ:
ವೀರಪ್ಪ ಮೊಯ್ಲಿ: ಇತ್ತೀಚೆಗೆ ಯಾವುದೇ ಕಾದಂಬರಿಗಳನ್ನು ಬರೆಯದೇ ದಿಲ್ಲಿ ರಾಜಕೀಯದಲ್ಲಿ ಮಗ್ನರಾಗಿರುವುದಕ್ಕಾಗಿ.
ವಿಜ್ಞಾನ ಕ್ಷೇತ್ರ:
ಜೋತಿಷ್ಯ, ಪುನರ್ಜನ್ಮ, ಭೂತ, ಪಿಶಾಚಿ ಮೊದಲಾದ ವೈಜ್ಞಾನಿಕ ಸಂಗತಿಗಳನ್ನು ಪಸರಿಸುತ್ತಿರುವುದಕ್ಕಾಗಿ ಎಲ್ಲ ಕನ್ನಡ ಚಾನೆಲ್‌ಗಳಿಗೆ.
ಮಾಟ ಮಂತ್ರಗಳನ್ನು ಮಾಡಿ ಈ ರಾಜ್ಯದ ಕ್ಷೇಮವನ್ನು ಕಾಪಾಡಿದ ಎಲ್ಲ ಮಂತ್ರವಾದಿಗಳಿಗೆ.
ರಾಜಕೀಯ ಕ್ಷೇತ್ರ:
ಕಟ್ಟಾ ಸುಬ್ರಹ್ಮಣ್ಯ ನಾಯ್ಡು: ಹಲವು ಭ್ರಷ್ಟಾಚಾರಗಳನ್ನು ಮಾಡಿಯೂ ಇನ್ನೂ ಸಚಿವ ಸಂಪುಟದಲ್ಲಿ ಉಳಿದು ರಾಜಕಾರಣಿಗಳಿಗೆ ಮಾದರಿಯಾದುದಕ್ಕೆ.
ಬಾಬಾಬುಡಾನ್‌ಗಿರಿಯ ಸೂಫಿ ಹಾಗೂ ದತ್ತ್ತಾತ್ರೇಯರಿಗೆ: ರಾಜಕೀಯದಲ್ಲಿ ಕೆಲವು ರಾಜಕಾರಣಿಗಳಿಗೆ ರಾಜಕೀಯ ಭವಿಷ್ಯವನ್ನು ರೂಪಿಸಿದ್ದಕ್ಕಾಗಿ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮದ ನೇತತ್ವವನ್ನು ವಹಿಸಿ ಇನ್ನಷ್ಟು ರಾಜಕಾರಣಿಗಳ ಹುಟ್ಟಿಗೆ ಕಾರಣವಾಗಲಿರುವುದಕ್ಕಾಗಿ.
ಉದ್ಯಮ ಕ್ಷೇತ್ರ:
ಎಲ್ಲ ಶಾಸಕರಿಗೆ: ರಾಜಕೀಯ ಕ್ಷೇತ್ರದಲ್ಲಿ ಹಲವು ಕೋಟಿ ರೂಪಾಯಿಗಳ ವ್ಯವಹಾರಗಳನ್ನು ಮಾಡಿ, ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿದುದಕ್ಕೆ.
ಸಿನಿಮಾ ಕ್ಷೇತ್ರ:
ನಿರ್ದೇಶಕ ಸಾಯಿ ಪ್ರಕಾಶ್: ಆತ್ಮಹತ್ಯೆಗೆ ಪ್ರಯತ್ನಿಸಿದ್ದಕ್ಕಾಗಿ.
ದೇವೇಗೌಡ: ಅತ್ಯುತ್ತಮವಾಗಿ ವಿವಿಧ ರಾಜಕೀಯ ಚಿತ್ರಗಳಲ್ಲಿ ನಟಿಸಿದ್ದಕ್ಕಾಗಿ. ಹಿರಿಯ ಪೋಷಕ ನಟ ಎಂಬ ಕಾರಣಕ್ಕಾಗಿ.
ಪ್ರೇಕ್ಷಕ ವರ್ಗಕ್ಕೆ: ಕಳಪೆ ಕನ್ನಡ ಚಿತ್ರಗಳನ್ನು ನೋಡದೇ ಇದ್ದುದಕ್ಕೆ ಹಾಗೂ ಪೋಷಿಸದೇ ಇದ್ದುದಕ್ಕೆ.
ರಾಘವೇಂದ್ರ ರಾಜಕುಮಾರ್: ಚಿತ್ರಗಳಲ್ಲಿ ನಟಿಸದೇ ಇದ್ದುದಕ್ಕೆ.
ಯಕ್ಷಗಾನ ಕ್ಷೇತ್ರ:
ಕುಂಬಳೆ ಸುಂದರರಾವ್: ಸುರತ್ಕಲ್ ಗಲಭೆಯಲ್ಲಿ ರಾಕ್ಷಸ ವೇಷವನ್ನು ಧರಿಸಿ, ತಮ್ಮ ಅಪಾರ ಕಲಾ ಪ್ರೌಢಿಮೆಯನ್ನು ಮೆರೆದುದಕ್ಕೆ. ಉಳಿದ ಮರಿ ರಾಕ್ಷಸ ವೇಷಧಾರಿಗಳಿಗೆ ಮಾರ್ಗದರ್ಶಿಯಾದುದಕ್ಕೆ.
ಅಕ್ಟೋಬರ್ -31-2010

No comments:

Post a Comment