Wednesday, May 13, 2015

‘ಅಯ್ಯೋ... ಇವನೂ ಬಂದಿದ್ದಾನಲ್ಲಪ್ಪ...!’

ಮಂಗಳಗ್ರಹದಲ್ಲಿ ಮಹಿಳೆಯನ್ನು ಹೋಲುವ ಚಿತ್ರವೊಂದನ್ನು ಉಪಗ್ರಹವೊಂದು  ತೆಗೆದಾಗ, "ಮಂಗಳ ಗ್ರಹದಲ್ಲಿ ಮಹಿಳೆ'' ಎಂದು ಮಾಧ್ಯಮಗಳಲ್ಲಿ ಬಾರೀ ಚರ್ಚೆಯಾಯಿತು. ಫೆಬ್ರವರಿ 17, 2008ರಂದು ವಾರ್ತಾಭಾರತಿ ದೈನಿಕದಲ್ಲಿ ಪ್ರಕಟವಾದ ಬುಡಬುಡಿಕೆ. 

ಮಂಗಳ ಗ್ರಹದಲ್ಲಿ ‘ಮಹಿಳೆ’ಯೊಬ್ಬಳಿದ್ದಾಳೆನ್ನುವ ಸಂಗತಿ ಭೂಮಿಯ ಜನರಿಗೆ ಸಾಕಷ್ಟು ಅಹ್ಲಾದವನ್ನು ನೀಡಿದ್ದು, ಮಂಗಳ ಗ್ರಹದ ಕುರಿತಂತೆ ಆಸಕ್ತಿಯನ್ನು ತೀವ್ರವಾಗುವಂತೆ ಮಾಡಿತು. ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಈ ಸುದ್ದಿ ಕೇಳಿದ್ದೇ, ತಕ್ಷಣ ಖಗೋಳ ವಿಜ್ಞಾನಿಗಳಿಗೆ ಫೋನಾಯಿಸಿ, ‘‘ಆಕೆಯ ವಯಸ್ಸೆಷ್ಟಿರಬಹುದು? ಮದುವೆಯಾಗಿದೆಯೇ? ಆಕೆಯ ಮೊಬೈಲ್ ನಂಬರ್ ಸಿಕ್ಕುವ ಚಾನ್ಸ್ ಇದೆಯೇ? ತಕ್ಷಣ ನನಗೆ ಮಂಗಳ ಗ್ರಹಕ್ಕೊಂದು ಟಿಕೆಟ್ ಮಾಡಿ’’ ಎಂದರು.
ಸಿಕ್ಕರೂ ಸಿಕ್ಕಬಹುದು ಎಂದು ಯುವಕರೆಲ್ಲ ಕ್ರಿಕೆಟ್, ಸಿನಿಮಾ ಇತ್ಯಾದಿಗಳನ್ನೆಲ್ಲಾ ಬಿಟ್ಟು ಮಂಗಳಗ್ರಹದ ಅಧ್ಯಯನಕ್ಕೆ ತೊಡಗಿದರು. ಆ ಮಂಗಳಗ್ರಹದ ಹುಡುಗಿಯ ಜೊತೆಗೆ ಚಾಟಿಂಗ್‌ಗೆ ಪ್ರಯತ್ನಿಸಿದರು. ಗೂಗಲ್‌ಗೆ ಹೋಗಿ ‘ಮಂಗಳಾ’ ಎಂದು ಹುಡುಕುವುದಕ್ಕೆ ಶುರು ಹಚ್ಚಿದರು. ಚಾಟಿಂಗ್ ರೂಂಗೆ ಹೋಗಿ, ಮಂಗಳಾ ಎಂದು ಹೆಸರಿರುವ ಹುಡುಗಿಯರನ್ನೆಲ್ಲ ‘ನೀನಿರುವುದು ಮಂಗಳ ಗ್ರಹದಲ್ಲಿಯ?’ ಎಂದು ಆಸೆಯಿಂದ ಕೇಳತೊಡಗಿದರು. ಮಂಗಳದಲ್ಲಿ ‘ಮಹಿಳೆಯ ಚಿತ್ರ’ ಕಂಡುದರಿಂದ ಆ ಗ್ರಹವನ್ನು ನೋಡುವುದಕ್ಕೆ ಕ್ಯೂನಲ್ಲಿ ಜನ ನಿಂತರು. ಅಮೆರಿಕ ಮಂಗಳ ಗ್ರಹವನ್ನು ಪ್ರವಾಸೋದ್ಯಮ ತಾಣವಾಗಿ ಮಾಡಿತು.
ಇದೇ ಸಂದರ್ಭದಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳಿಗೂ ಆ ಗ್ರಹದ ಮೇಲೆ ಆಸಕ್ತಿ ಹೆಚ್ಚಿತು. ಪೊಟೊದಲ್ಲಿ ಕಂಡ ಮಹಿಳೆ ‘ಬುಡಕಟ್ಟು ಮಹಿಳೆ’ಯ ತರಹ ಕಂಡುದರಿಂದ ಕ್ರಿಶ್ಚಿಯನ್ ಪಾದ್ರಿಗಳು ಶಿಲುಬೆಯ ಜೊತೆಗೆ ಮಂಗಳ ಗ್ರಹಕ್ಕೆ ಹೊರಟರು. ಪಾದ್ರಿಗಳು ಹೊರಟಿರುವುದನ್ನು ಕಂಡದ್ದೇ ಒರಿಸ್ಸಾದ ಸಂಘಪರಿವಾರದ ಕಾರ್ಯಕರ್ತರು ತ್ರಿಶೂಲ ಹಿಡಿದು ಅವರ ಹಿಂದೆಯೇ ಹೊರಟರು.
ಭಾರತದ ಮುಸ್ಲಿಮರೆಲ್ಲ ಹಣ ಸಂಗ್ರಹಿಸಿ ಅಲ್ಲೊಂದು ಮಸೀದಿ ಕಟ್ಟುವುದು ಎಂದು ತೀರ್ಮಾನಿಸಿದರು. ಮಂಗಳ ಗ್ರಹದ ಮಹಿಳೆ ಮಸೀದಿಗೆ ಬರಬಹುದೋ, ಬೇಡವೋ ಎನ್ನುವ ಕುರಿತಂತೆ ಮುಸ್ಲಿಮರೊಳಗೇ ಭಿನ್ನಮತ ಸಷ್ಟಿಯಾಯಿತು. ಕೊನೆಗೂ ಅಮತಶಿಲೆಯನ್ನು ಹಾಸಿ ಒಂದು ಮಸೀದಿಯನ್ನು ಕಟ್ಟಿದರು. ಇನ್ನೇನು ಅದರೊಳಗೆ ಪ್ರಾರ್ಥನೆ ಮಾಡಬೇಕು ಎನ್ನುವಷ್ಟರಲ್ಲಿ ಸಂಘಪರಿವಾರದ ನಾಯಕರು ತಕರಾರು ತೆಗೆದರು. ಈ ಮಸೀದಿಯನ್ನು ಮಂಗಳ ಗ್ರಹದ ಪುರಾತನ ದೇವಾಲಯವನ್ನು ಕೆಡವಿ ನಿರ್ಮಿಸಲಾಗಿದೆ ಎಂದು ಮಂಗಳ ಗ್ರಹದಾದ್ಯಂತ ರಥಯಾತ್ರೆ ಆರಂಭಿಸಿದರು.
‘‘ಇದಕ್ಕೆ ನಿಮ್ಮಲ್ಲಿ ಸಾಕ್ಷಿಯೇನಿದೆ?’’ ಮುಸ್ಲಿಂ ಮುಖಂಡರು ಕೇಳಿದರು. ಪ್ರಗತಿಪರರು ಅವರ ಜೊತೆ ನಿಂತರು.
‘‘ಸೀತೆ ಹುಟ್ಟಿದ್ದು ಮಂಗಳಗ್ರಹದಲ್ಲಿ. ಉಪಗ್ರಹವೊಂದು ಮೊತ್ತ ಮೊದಲು ತೆಗೆದ ಮಂಗಳಗ್ರಹದ ಮಹಿಳೆಯ ಚಿತ್ರ ರಾಮಾಯಣದ ಸೀತೆಯ ಚಿತ್ರವಾಗಿದೆ’’. ಎಂದು ಸಂಘ ಪರಿವಾರದ ನಾಯಕರು ವಾದಿಸಿದರು.
‘‘ರಾಮಾಯಣಕ್ಕೂ ಮಂಗಳಗ್ರಹಕ್ಕೂ ಏನು ಸಂಬಂಧ’’ ಎಂದು ಕಮ್ಯುನಿಷ್ಟ್ ಇತಿಹಾಸ ತಜ್ಞರು ಕೇಳಿ ತಮಾಷೆ ಮಾಡತೊಡಗಿದ್ದರು.
 ಸಂಘಪರಿವಾರದ ಇತಿಹಾಸ ತಜ್ಞರು ತಕ್ಷಣ ಎಚ್ಚರವಾದರು. ಬೆಂಗಳೂರಿನಿಂದ ತಕ್ಷಣ ಚಿದಾನಂದಮೂರ್ತಿಗೆ ಬುಲಾವ್ ಹೋಯಿತು. ಅವರು ಸಂಶೋಧನೆ ಮಾಡಿದರು. ‘‘ರಾಮಾಯಣ ‘ಮಂಗ’ಗಳಿಂದ ಈ ಗ್ರಹಕ್ಕೆ ‘ಮಂಗ’ಳ ಎಂಬ ಹೆಸರು ಬಂತು. ಮಂಗಗಳ ಗ್ರಹ ಮಂಗಳ ಗ್ರಹ’’ ಎಂದು ಚಿದಾನಂದ ಮೂರ್ತಿ ಕಂಡು ಹಿಡಿದರು. ಸಂಘಪರಿವಾರದ ನಾಯಕರು ಮಂಗಗಳಂತೆ ಕುಣಿದಾಡಿದರು.
‘‘ಹಾಗಾದ್ರೆ ಸೇತು ಸಮುದ್ರಂನ ಕತೆಯೇನು?’’ ಎಂದು ಕೇಳಿದರು ಕೆಲವರು.
‘‘ಮಂಗಗಳು ಭೂಮಿ ಮತ್ತು ಮಂಗಳ ಗ್ರಹದ ನಡುವೆ ಸೇತುವೆ ಕಟ್ಟಿದವು. ಈಗಲೂ ಅದರ ಪಳೆಯುಳಿಕೆ ಇದೆ...’’ ಎಂದರು. ‘‘ತೇತ್ರಾಯುಗದಲ್ಲಿ ಮತ್ತು ದ್ವಾಪರಯುಗದಲ್ಲಿ ಮಂಗಳ ಮತ್ತು ಭೂಮಿಯ ನಡುವೆ ಈ ಸೇತುವೆಯಲ್ಲೇ ಎಲ್ಲರೂ ಓಡಾಡುತ್ತಿದ್ದರು...’’
‘‘ಎಲ್ಲಿದೆ ತೋರಿಸಿ... ಅದರ ಪಳೆಯುಳಿಕೆಯನ್ನು...’’ ಎಂದು ಕಮ್ಯುನಿಷ್ಟರು ಕೇಳಿದರು.
‘‘ಅದು ಬರಿ ಕಣ್ಣಿಗೆ ಕಾಣುವುದಿಲ್ಲ. ನಮ್ಮದೇ ವಿಶೇಷ ವಿಜ್ಞಾನಿಯೊಬ್ಬರು ಅದರ ಬಗ್ಗೆ ಅಧ್ಯಯನ ನಡೆಸಿದ್ದಾರೆ...’’ ಎಂದರು.
ಚಿದಾನಂದ ಮೂರ್ತಿ ಮಂಗಳದಲ್ಲಿ ಒಂದು ಸೈಟ್ ಮಾಡಿ ಸೆಟ್ಲಾದದ್ದೇ, ಒಬ್ಬಂಟಿಯಾಗಿ ಬದುಕುವುದಕ್ಕೆ ಬೋರಾಯಿತು. ಒಂದು ಮದುವೆಯಾದರೆ ಏನು? ಎಂದು ಯೋಚಿಸಿದರು. ಮಂಗಳ ಗ್ರಹದಲ್ಲಿ ತಕ್ಕ ಜೋಡಿ ಇಲ್ಲ ಅನ್ನಿಸಿತು. ಕೊನೆಗೆ ಅವರು ಎಸ್.ಎಲ್. ಭೈರಪ್ಪನವರನ್ನು ಆಹ್ವಾನಿಸಿದರು. ಅವರಿಬ್ಬರು ಜೊತೆಯಾಗಿ ಸುಖ ಸಂಸಾರ ನಡೆಸತೊಡಗಿದರು. ಭೈರಪ್ಪರು ಮಂಗಳ ಗ್ರಹಕ್ಕೆ ಬಂದವರೇ, ಅಲ್ಲಿನ ಪ್ರತೀ ಅವಶೇಷವನ್ನು ನೋಡಿ ಕಣ್ಣೀರು ಸುರಿಸತೊಡಗಿದರು. ಅದೆಲ್ಲವೂ ಔರಂಗಜೇಬನ ದಾಳಿಯಿಂದ ಅಳಿದುಳಿದ ಅವಶೇಷದಂತೆ ಅವರಿಗೆ ಕಂಡಿತು. ಅಲ್ಲಿ ಔರಂಗಜೇಬ್ ಏನನ್ನೆಲ್ಲ ಪುಡಿ ಮಾಡಿದ್ದಾನೆ. ಎಷ್ಟು ದೇವಸ್ಥಾನ ಒಡೆದಿದ್ದಾನೆ ಎನ್ನುವುದನ್ನೆಲ್ಲ ‘ಹಧ್ಯಯನ’ ನಡೆಸಿ ಬರೆಯತೊಡಗಿದರು. ಆ ಕಾದಂಬರಿಗೆ ‘ಆ ವಣ’ ಎಂದು ಹೆಸರಿಟ್ಟರು. ಉಪಗಹದಲ್ಲಿ ಕಂಡ ಮಂಗಳಗಹದ ಮೊದಲ ಮಹಿಳೆಯನ್ನೇ ತನ್ನ ಕಥಾನಾಯಕಿಯನ್ನಾಗಿಸಿದರು. ಆ ಮಹಿಳೆ ‘ಮಾಂಸ’ ತಿನ್ನುತ್ತಿರಲಿಲ್ಲ. ಸಾಬರನ್ನು ಮುಟ್ಟುತ್ತಿರಲಿಲ್ಲ...’’ ಎಂದೆಲ್ಲ ವರ್ಣಿಸಿದರು.
‘ಆ ವಣ’ ಮಂಗಳ ಗ್ರಹವನ್ನು ಗಬ್ಬೆಬ್ಬಿಸುತ್ತಿದ್ದ ಹಾಗೆಯೇ, ಕೋಮು ಸೌಹಾರ್ದ ವೇದಿಕೆಯ ತಂಡ ಅತ್ತ ಧಾವಿಸಿತು. ‘ಆ ವಣ’ದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿತು. ಅವರನ್ನು ಕಂಡದ್ದೇ ‘ಮಂಗಳಗಹದಲ್ಲಿ ನಕ್ಸಲೈಟ್‌ಗಳು’ ಎಂದು ಪತ್ರಿಕೆಗಳು ಬರೆಯತೊಡಗಿದವು. ತಕ್ಷಣ ಬಿದರಿಗೆ ಬುಲಾವ್ ಹೋಯಿತು. ಬಿದರಿ ತನ್ನ ನಕ್ಸಲ್ ಸ್ಕ್ವಾಡ್ ಜೊತೆಗೆ ಹೊರಟೇ ಬಿಟ್ಟರು. ಬಿದರಿಯ ಹಿಂದೆ ಎಲ್ಲ ಪತ್ರಕರ್ತರು ಹೊರಟು ಬಿಟ್ಟರು.
ಅಷ್ಟರಲ್ಲಿ ಮಂಗಳ ಗಹ ತನ್ನ ಕೈ ತಪ್ಪುತ್ತದೆ ಎನ್ನುವುದು ಅಮೆರಿಕ ಮನಗಂಡಿತು. ‘‘ಮಂಗಳ ಗ್ರಹದಲ್ಲಿ ಉಸಾಮಬಿನ್ ಲಾದೆನ್ ಅಡಗಿದ್ದಾನೆ...’’ ಎಂದು ತನ್ನ ಸೈನ್ಯವನ್ನೆಲ್ಲ ತಂದು ಅಲ್ಲಿ ನಿಲ್ಲಿಸಿತು. ಅಲ್ಲಿಗೆ ಮಂಗಳ ಗ್ರಹದ ‘ಗ್ರಹ’ಚಾರ ಸಂಪೂರ್ಣ ಕೆಟ್ಟಿತು.
***
ಬೆಂಗಳೂರಿನಲ್ಲಿ ಕಂಡ ಕಂಡ ರಾಜಕಾರಣಿಗಳ ಹಿಂದೆ ಸುತ್ತುತ್ತಿದ್ದ ಪತ್ರಕರ್ತ ಎಂಜಲು ಕಾಸಿಯನ್ನು ಸಂಪಾದಕರು ನೇರ ಮಂಗಳಗ್ರಹಕ್ಕೆ ವರ್ಗಾವಣೆ ಮಾಡಿಬಿಟ್ಟರು. ಕಾಸಿ ಮಂಗಳಗ್ರಹದಲ್ಲಿ ‘ಸ್ಕೂಪ’ನ್ನು ಹುಡುಕತೊಡಗಿದ. ಉಪಗ್ರಹ ಮೊತ್ತ ಮೊದಲ ಬಾರಿ ತೆಗೆದ ಮಹಿಳೆಯ ಚಿತ್ರ ಅವನ ನೆನಪಲ್ಲಿತ್ತು. ಆ ಮಹಿಳೆಯನ್ನು ಹುಡುಕಿ ತೆಗೆದು ಆಕೆಯ ಇಂಟರ್ಯೂ ಮಾಡಿದರೆ ಹೇಗೆ? ಎಂದು ಹೊಳೆದದ್ದೇ, ಮಂಗಳ ಗ್ರಹದ, ಗುಡ್ಡ, ಕುಳಿ ಯಾವುದನ್ನೂ ಬಿಡದೇ ಹುಡುಕಾಡ ತೊಡಗಿದ. ಹೀಗೆ ಹುಡುಕುತ್ತಾ ಹುಡುಕುತ್ತಾ ಹೋದ ಹಾಗೆಯೇ ಗುಡ್ಡದ ಕೊನೆಗೆ ತಲೆಗೆದರಿದ ಒಂದು ಹೆಂಗಸು ಏನನ್ನೋ ಯೋಚಿಸುತ್ತಾ ಕುಳಿತ್ತಿತ್ತು. ನೋಡಿದರೆ, ಅದೇ ಹೆಂಗಸು! ಉಪಗ್ರಹ ತೆಗೆದ ಪೋಟೊದಲ್ಲಿದ್ದ ಹೆಂಗಸು ಅದಾಗಿತ್ತು!
ಕಾಸಿ ಇಂಟರ್ಯೂಗೆ ರೆಡಿಯಾದ. ‘‘ಯಾರಮ್ಮಾ ನೀನು’’!
ಹೆಂಗಸು ಕಾಸಿಯನ್ನು ನೋಡಿದ್ದೇ ‘‘ನೀನು ಇಲ್ಲಿಗೂ ಬಂದೆಯಾ?’’ ಎಂದಿತು.
 ಕಾಸಿಗೆ ಅಚ್ಚರಿ. ‘‘ಅರೆ! ಈ ಹೆಂಗಸಿಗೆ ನನ್ನ ಪರಿಚಯವಿದೆ’’ ‘‘ನಿನಗೆ ನನ್ನ ಪರಿಚಯವಿದೆಯೇ?’’ ಕೇಳಿದ.
‘‘ಇಲ್ಲದೇ ಏನು? ನಿನ್ನದು ಮಾತ್ರ ಅಲ್ಲ. ಭೂಮಿಯಿಂದ ಇಲ್ಲಿಗೆ ಬಂದಿರುವ ಎಲ್ಲರ ಪರಿಚಯವೂ ಇದೆ’’
‘‘ಅದು ಹೇಗೆ?’’
ಮಹಿಳೆ ನಿಟ್ಟುಸಿರಿಟ್ಟು ಹೇಳಿದಳು ‘‘ನಾನು ಕೂಡಾ ಭೂಮಿಯವಳೇ?’’
ಕಾಸಿ ಅಚ್ಚರಿಯಿಂದ ನೋಡತೊಡಗಿದ. ಮಹಿಳೆ ಹೇಳಿದಳು ‘‘ಭೂಮಿಯಲ್ಲಿ ನನ್ನ ಮೇಲೆ ನಡೆದ ದೌರ್ಜನ್ಯದಿಂದ ಪಾರಾಗಿ ಬದುಕಿದೆಯಾ ಬಡ ಜೀವವೇ ಎಂದು ಈ ಮಂಗಳ ಗ್ರಹದಲ್ಲಿ ಬಂದು ಒಂದಿಷ್ಟು ನೆಮ್ಮದಿಯಿಂದ ಇದ್ದೆ. ಆದರೆ ಅಷ್ಟರಲ್ಲಿ ಆ ಬೋ... ಮಗಂದು... ಉಪಗ್ರಹ ನನ್ನ ಚಿತ್ರ ತೆಗೆದು ಕಳುಹಿಸಿತು. ಈಗ ನೋಡಿದರೆ ಇಲ್ಲಿಗೂ ಬಂದು ನನ್ನನ್ನು ಕಾಡುತ್ತಿದ್ದಾರೆ...ಇನ್ನು ಬುಧ ಗ್ರಹವೋ, ಶನಿಗ್ರಹವೋ ಹುಡುಕಬೇಕು... ಈ ಶನಿಗಳಿಂದ ಪಾರಾಗುವುದಕ್ಕೆ...’’
ಕಾಸಿ ಕೇಳಿದ ‘‘ನಿನ್ನ ಹೆಸರೇನಮ್ಮ?’’
ಹೆಂಗಸು ಕಾಸಿಯನ್ನು ದುರುಗುಟ್ಟಿ ನೋಡಿ ಹೇಳಿತು ‘‘ಅದ್ಯಾವ ಸೀಮೆಯ ಪತ್ರಕರ್ತನೋ ನೀನು... ಇನ್ನೂ ಗೊತ್ತಾಗಲಿಲ್ಲವೇ ನಾನು ಯಾರೆಂದು? ನಾನೇ ಭಾರತ ಮಾತೆ. ಅಲ್ಲಿಂದ ಪಾರಾಗಿ ಇಲ್ಲಿ ಮಂಗಳ ಗ್ರಹದಲ್ಲಿ ಸ್ವಲ್ಪ ಸಮಯ ನೆಮ್ಮದಿಯಿಂದ ಇದ್ದೆ. ಇನ್ನು ಅದೂ ಸಾಧ್ಯವಿಲ್ಲ...’’
‘‘ಭಾರತ ಮಾತೆ’’ ಎಂಬ ಶಬ್ದ ಕೇಳಿದ್ದೇ... ಯಾರೋ ಓಡೋಡಿ ಬಂದಂತಾಯ್ತು. ಕಾಸಿ ತಿರುಗಿ ನೋಡಿದರೆ ಚಿತ್ರ ಕಲಾವಿದ ಎಂ.ಎಫ್.ಹುಸೇನರು ಕೈಯಲ್ಲಿ ಕುಂಚ ಹಿಡಿದು ಓಡೋಡಿ ಬರುತ್ತಿದ್ದರು. ಹುಸೇನರನ್ನು ನೋಡಿದ್ದೇ... ‘‘ಅಯ್ಯೋ... ನನ್ನ ಅಳಿದುಳಿದ ಮಾನವನ್ನು ತೆಗೆಯಲು ಇವನೂ ಬಂದಿದ್ದಾನಲ್ಲಪ್ಪ...’’ ಎಂದು ಭಾರತ ಮಾತೆ ಸೆರಗಿನಿಂದ ಎದೆಯನ್ನು ಮುಚ್ಚಿಕೊಂಡು ಓಡತೊಡಗಿದಳು.
(ಫೆಬ್ರವರಿ 17, 2008, ರವಿವಾರ)

No comments:

Post a Comment