Sunday, October 11, 2009

ಚೆನ್ನಾಗಿದೆ. ಆದರೆ ಇನ್ನಷ್ಟು ಸ್ಟ್ರಾಂಗ್ ಆಗಬೇಕಾಗಿದೆ...!

ಆಚಾರ್ಯ ಕಂಪೆನಿಯಿಂದ ಹೊರಬಿದ್ದ ಹೊಸ ತಂಪು ಪಾನೀಯ ‘ಕೋಕಾ ಕಾಲ’ವನ್ನು ಯಡಿಯೂರಪ್ಪ ಉದ್ಘಾಟನೆ ಮಾಡಿದ್ದೇ, ಒಂದು ಗುಟುಕು ಬಾಯಿಗಿಟ್ಟು ಚಪ್ಪರಿಸಿ “ಅದ್ಭುತವಾಗಿದೆ!” ಎಂದರು. ಉದ್ಘಾಟನೆಯಾದುದಷ್ಟೇ, ಬಿಜೆಪಿ, ಸಂಘ ಪರಿವಾರದ ನಾಯಕರು ‘ಕೋಕಾ-ಕಾಲ’ ಬಾಟಲಿಗಾಗಿ ಒಬ್ಬರ ಮೇಲೆ ಒಬ್ಬರು ಬೀಳ ತೊಡಗಿದರು.

“ಎಲ್ಲರೂ ಸಾಲಾಗಿ ನಿಂತು, ಕೋಕಾ ಕಾಲ ಬಾಟಲಿಯನ್ನು ಪಡೆಯಬೇಕು. ಈ ತಂಪು ಪಾನೀಯ ಬಿಡುಗಡೆಯಲ್ಲಿ ಪತ್ರಕರ್ತರ ಪಾಲು ದೊಡ್ಡದಿರುವುದರಿಂದ ಮೊದಲು ಅವರು ಸೇವಿಸಿ, ಉಳಿದುದನ್ನು ಪಕ್ಷದ ಸಚಿವರು, ಶಾಸಕರು ಕುಡಿಯಬೇಕು...” ಆಚಾರ್ಯರು ಸಮಾರಂಭದಲ್ಲಿ ಮದು ಮಗನಂತೆ ಓಡಾಡುತ್ತಿದ್ದರು. ಪತ್ರಕರ್ತ ಎಂಜಲು ಕಾಸಿ ಆಚಾರ್ಯರ ಇಂಟರ‍್ಯೂಗಾಗಿ ಅವರ ಹಿಂದೆಯೇ ಓಡಾಡುತ್ತಿದ್ದ. ಆದರೆ ಅವರು ಕೈಗೆ ಸಿಗುತ್ತಿರಲಿಲ್ಲ. ಮೂರು ಮೂರು ಬಾಟಲು ಕೋಕಾ ಕಾಲವನ್ನು ಕುಡಿದ ಕಾರಣ, ಆಚಾರ್ಯರು ಶೌಚಾಲಯದೆಡೆಗೆ ಧಾವಿಸಿದಾಗ ಶೌಚಾಲಯದ ಬಾಗಿಲಿಗೆ ಅಡ್ಡ ನಿಂತ ಪತ್ರಕರ್ತ ಕಾಸಿ, ಅಲ್ಲೇ ಇಂಟರ‍್ಯೂ ಮಾಡಿದ. ಆಚಾರ್ಯರು ಅನಿವಾರ್ಯವಾಗಿ ಉತ್ತರಿಸಲೇ ಬೇಕಾಯಿತು.

“ಸಾರ್...ಈಗಾಗಲೇ ಕೋಕಾ ಕೋಲಾ ಇರುವಾಗ ನಿಮ್ಮ ತಂಪು ಪಾನೀಯ ಮಾರ್ಕೆಟ್‌ನಲ್ಲಿ ಹಣ ಮಾಡುತ್ತದೆ ಎಂದು ಹೇಳುತ್ತೀರಾ?”
ಆಚಾರ್ಯರು ಸಿಡುಕುತ್ತಾ ಹೇಳಿದರು “ಹಣ ಮಾಡದೇ ಇದ್ದರೂ, ಮತಗಳನ್ನಂತೂ ದೋಚು ತ್ತದೆ. ಮುಖ್ಯವಾಗಿ ಇದು ಅಪ್ಪಟ ಸ್ವದೇಶಿ ಪಾನೀಯ. ನಮ್ಮ ಆರೆಸ್ಸೆಸ್ ಕಚೇರಿಯಲ್ಲಿ ಹಲವು ಶತಮಾನಗಳಿಂದ ನಡೆಸಿದ ಸಂಶೋಧನೆಯ ಫಲ, ಈ ಕೋಕಾ ಕಾಲ. ಹಲವು ವಿಶೇಷ ಗಿಡಮೂಲಿಕೆಗಳಿಂದ ತಯಾರಿಸಿದ ಈ ಕೋಕಾವನ್ನು ನಾಡು ಒಕ್ಕೊರಲಿನಲ್ಲಿ ಸ್ವೀಕರಿಸುತ್ತದೆ ಎನ್ನುವ ಭರವಸೆ ನನಗಿದೆ”.
“ಸಾರ್, ವಿರೋಧ ಪಕ್ಷದ ನಾಯಕರಾರೂ ಕಾಣುತ್ತಿಲ್ಲವಲ್ಲ. ಇದು ನಿಮ್ಮ ಬ್ರಾಂಡ್‌ನ ಕುರಿತಂತೆ ತಪ್ಪು ಅಭಿಪ್ರಾಯವನ್ನು ಬಿತ್ತುವುದಿಲ್ಲವೇ?”
ಆಚಾರ್ಯರು ಕಾಸಿಯ ರೆಟ್ಟೆ ಹಿಡಿದು ವೇದಿಕೆಯ ಹಿಂಬದಿಗೆ ಎಳೆದೊಯ್ದರು. ನೋಡಿದರೆ, ಅಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿಯಾದಿಯಾಗಿ ಜೆಡಿ‌ಎಸ್- ಕಾಂಗ್ರೆಸ್ ನಾಯಕರೆಲ್ಲ ಹೆಗಲಿಗೆ ಕೈ ಹಾಕಿ ಆಚಾರ್ಯ ಕಂಪೆನಿಯ ಕೋಕಾಕಾಲವನ್ನು ಸವಿಯುತ್ತಿದ್ದರು.

ಕಾಸಿ ಅಚ್ಚರಿಯಿಂದ ಆ ಅದ್ಭುತವನ್ನು ನೋಡಿದ. ಆಚಾರ್ಯರು ತಮ್ಮ ಬೆನ್ನ ಹಿಂದೆ ಅದೃಶ್ಯವಾಗಿ ನೇತಾಡುತ್ತಿದ್ದ ಚಾಣಕ್ಯ ಜುಟ್ಟನ್ನೊಮ್ಮೆ ಸವರಿಕೊಂಡು ಹೇಳಿದರು “ನೋಡ್ರೀ...ಈ ಕೋಕಾ ಕಾಲಕ್ಕೆ ವಿರೋಧ ಪಕ್ಷದೋರೂ ಶೇರು ಹಾಕಿದ್ದಾರೆ. ನಾವೆಲ್ಲ ಜೊತೆಗೆ ಸೇರಿ ಈ ಪ್ರಾಡಕ್ಟನ್ನು ಮಾರ್ಕೆಟ್‌ಗೆ ಬಿಟ್ಟಿದ್ದೀವಿ. ಇದರಲ್ಲಿ ಬಂದ ಲಾಭವನ್ನು ಫಿಫ್ಟಿ-ಫಿಫ್ಟಿ ಹಂಚಿಕೊಳ್ಳುತ್ತೀವಿ”
“ಕೋಕಾ ಕಾಲದಿಂದ ಸಮಾಜಕ್ಕೆ ಹಾನಿಯಿದೆ ಎಂದು ಹೇಳುತ್ತಿದ್ದಾರೆ...” ಕಾಸಿ ಆತಂಕದಿಂದ ಕೇಳಿದ.

“ನೋಡ್ರೀ...ಸಮಾಜಕ್ಕೆ ಹಾನಿಯಾಗದೆ ಉದ್ಯಮಗಳು ಲಾಭ ಪಡೆಯುವುದು ಹೇಗೆ? ಉದ್ಯಮಗಳು ಲಾಭದಾಯಕವಾಗಿ ನಡೆಯಬೇಕೂ ಅಂತಂದ್ರೆ ಸಮಾಜ ಆ ಹಾನಿಯನ್ನು ಸಹಿಸಿಕೊಳ್ಳಬೇಕು. ಉದ್ಯಮ ಲಾಭದಾಯಕವಾಗಿ ನಡೆದರೆ ತಾನೇ ದೇಶ ಅಭಿವೃದ್ಧಿಯತ್ತ ಸಾಗುವುದು. ಆದರೆ ಈ ತಂಪು ಪಾನೀಯದಿಂದ ಮುಸಲರಿಗಷ್ಟೇ ಒಂದಿಷ್ಟು ಹಾನಿಯಾಗಬಹುದು. ಸಮಾಜಕ್ಕೆ ಯಾವ ಹಾನಿಯೂ ಆಗಲ್ಲ. ಮುಸಲರು ಈ ಹಾನಿಯನ್ನು ಸಹಿಸಿಕೊಂಡು ತಾವು ಉಗ್ರರಲ್ಲ, ದೇಶಪ್ರೇಮಿಗಳು ಎನ್ನುವುದನ್ನು ಸಾಬೀತು ಪಡಿಸಬೇಕು...” ಶೌಚಾಲಯದ ಗೋಡೆಗೆ ಒರಗಿ ಆಚಾರ್ಯರು ಕರೆಕೊಟ್ಟರು.
“ಮುಸಲರ ಮನೆ, ಮಠ, ಮಕ್ಕಳನ್ನು ಬೀದಿಗೆ ತಳ್ಳಿ, ಈ ಕೋಕಾ ಕಾಲ ಘಟಕವನ್ನು ಸ್ಥಾಪಿಸುತ್ತಿದ್ದೀರಿ ಅನ್ನೋ ಆರೋಪ ಇದೆ. ಹೌದಾ ಸಾರ್?”
“ಅಲ್ರೀ...ಮುಸಲರ ಮನೆ ಮಠಗಳನ್ನು ಬೀದಿ ತಳ್ಳದೆ ಈ ಕೋಕಾ ಕಾಲವನ್ನು ಇಷ್ಟು ರುಚಿಯಾಗಿ ತಯಾರಿಸುವುದು ಸಾಧ್ಯವಿತ್ತೇನ್ರೀ...ಮುಸಲರ ಕಣ್ಣೀರಿನಿಂದಲೇ ಈ ಕೋಕಾ ಕಾಲ ಐಟಂ ತಯಾರಿಸಲಾಗಿದೆ ಕಣ್ರೀ...ಮುಂದಿನ ದಿನಗಳಲ್ಲಿ ಈ ಕೋಕಾಗೆ ಅತ್ಯಧಿಕ ಬೇಡಿಕೆ ಇರುವುದರಿಂದ, ಮುಸಲರ ಕಣ್ಣೀರಿಗೂ ಅತ್ಯಧಿಕ ಬೇಡಿಕೆ ಇದೆ. ಈ ಕಣ್ಣೀರನ್ನು ಸಂಗ್ರಹಿಸಿ ಪೂರೈಸುವ ಕೆಲಸವನ್ನು ಮಾಡುವುದಾಗಿ ಕಾಂಗ್ರೆಸ್ ಮತ್ತು ಜೆಡಿ‌ಎಸ್ ನಾಯಕರು ಭರವಸೆ ನೀಡಿದ್ದಾರೆ. ನಮ್ಮದೇನಿದ್ದರೂ ಕೋಕಾ ತಯಾರಿಸುವ ಕೆಲಸ ಮಾತ್ರ. ಆದುದರಿಂದ ಭವಿಷ್ಯದಲ್ಲಿ ಮುಸಲರು ಕಣ್ಣೀರಲ್ಲಿ ಕೈತೊಳೆಯುವ ಹಾಗೆ ಮಾಡುವುದು ನಮ್ಮ ಉದ್ದೇಶ. ಉಳ್ಳಾಲದ ಕಡಲಿನಲ್ಲಿದ್ದ ಉಪ್ಪು ನೀರನ್ನು ಸಂಪೂರ್ಣ ಖಾಲಿ ಮಾಡಿ, ಅಲ್ಲಿ ಮುಸಲರ ಕಣ್ಣೀರನ್ನು ಸ್ಟಾಕಿಡಬೇಕು ಎಂದು ಸರಕಾರ ನಿರ್ಧರಿಸಿದೆ...”
“ಈ ಕೋಕಾ ಕಾಲಕ್ಕೆ ಯಾವ ರೀತಿಯಲ್ಲಿ ಮಾರ್ಕೆಟ್ ಮಾಡಬೇಕು ಅಂತ ಇದ್ದೀರಿ ಸಾರ್?”
“ನೋಡ್ರೀ...ಎಲ್ಲ ಪೊಲೀಸ್ ಠಾಣೆಗಳಲ್ಲೂ ಕಡ್ಡಾಯವಾಗಿ ಕೋಕಾ ಕಾಲದ ಬಳಕೆಯಿರಬೇಕು. ವಿವಿಧ ಸಂಘಪರಿವಾರ ಕಚೇರಿಗಳಲ್ಲಿ, ಪತ್ರಿಕೆಗಳ ಕಚೇರಿಗಳಲ್ಲಿಯೂ ಈ ಕೋಕಾಗಳ ಮಾರುಕಟ್ಟೆಯನ್ನು ವಿಸ್ತರಿಸಿದ್ದೇವೆ. ಪತ್ರಿಕೆಗಳು ಕೋಕಾ ಕಾಲಕ್ಕೆ ಹೆಚ್ಚು ಪ್ರಚಾರ ನೀಡುವ ಭರವಸೆ ನೀಡಿವೆ. ಅವರಿಗೆ ಸರಕಾರಿ ಜಾಹೀರಾತುಗಳನ್ನು ನೀಡುವ ಕುರಿತಂತೆಯೂ ಒಪ್ಪಂದವಾಗಿದೆ...”
“ಈ ಕೋಕಾ ತಂಪು ಪಾನೀಯಕ್ಕೆ ಮನೆ, ಮಠ ತ್ಯಾಗ ಮಾಡುವ ಮುಸಲರಿಗೆ ಏನು ಲಾಭ ಇದೆ ಸಾರ್...?”
ಆಚಾಯರು ಕಾಸಿಯ ಬೆನ್ನು ತಟ್ಟಿದರು “ನೋಡ್ರೀ...ಅದಕ್ಕಾಗಿ ಮುಸಲರಿಗೆ ಕೆಲವು ಸವಲತ್ತುಗಳನ್ನು ನೀಡಬೇಕೆಂದು ನಾವು ನಿರ್ಧರಿಸಿದ್ದೇವೆ. ಬಿಜೆಪಿ ಅಲ್ಪಸಂಖ್ಯಾತರ ಪರವಾಗಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಕೋಕಾ ಕಾಲಕ್ಕೆ ಸಹಕರಿಸಿದ ಎಲ್ಲ ಮುಸಲರನ್ನು ಬಳ್ಳಾರಿ ಜೈಲಿನಲ್ಲಿಟ್ಟು ಪುಕ್ಕಟೆ ಊಟ ಹಾಕಬೇಕೆಂದು ನಿರ್ಧರಿಸಿದೆ. ಅದಕ್ಕಾಗಿ ಮಂಗಳೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಜೈಲುಗಳನ್ನು ವಿಸ್ತರಿಸುವ ಕೆಲಸಕ್ಕೆ ಈಗಾಗಲೇ ಸರಕಾರ ಮುಂದಾಗಿದೆ. ಅದಕ್ಕಾಗಿ ಹಣವನ್ನೂ ಮೀಸಲಿಟ್ಟಿದೆ. ಕಾಂಗ್ರೆಸ್ ನಾಯಕರು ಈ ಹಿಂದೆ ಜೈಲುಗಳಿಗೆ ಮೀಸಲಿಟ್ಟ ಹಣಕ್ಕಿಂತಲೂ ಹೆಚ್ಚು ಹಣವನ್ನು ನಾವು ಮೀಸಲಿಡಲಿದ್ದೇವೆ. ಸ್ವಾತಂತ್ರೋತ್ಸವ, ಗಣರೋಜ್ಯೋತ್ಸವದ ಸಂದರ್ಭದಲ್ಲಿ ಅವರಿಗೆ ಜೈಲಿನಲ್ಲಿ ಹಣ್ಣು ಹಂಪಲು ವಿತರಣೆಯೂ ನಡೆಯುತ್ತದೆ. ಜೈಲಿನಲ್ಲಿ ಅವರಿಗೆ ಯೋಗ ಕಲಿಸುವ ಏರ್ಪಾಡೂ ಮಾಡಲಾಗುತ್ತದೆ...”

ಹೀಗೆ ಅಲ್ಪಸಂಖ್ಯಾತರಿಗಾಗಿ ಸಿದ್ಧಪಡಿಸಲಾಗಿರುವ ಸೌಲಭ್ಯಗಳ ಪಟ್ಟಿ ಕೇಳಿ ಕಾಸಿ ರೋಮಾಂಚನ ಗೊಂಡ.
“ಅಲ್ಲ ಸಾರ್...ಈ ಕೋಕಾ ಕಾಲ ಕಂಪೆನಿಯಲ್ಲಿ ಮುಸ್ಲಿಂ ಶಾಸಕರು, ಸಚಿವರು ಶೇರು ಹಾಕಿದ್ದಾರ ಸಾರ್...?”
ಆಚಾರ್ಯರು ತುಟಿಯ ಮರೆಯಲ್ಲೇ ನಕ್ಕು, ಕಾಸಿಯನ್ನು ವೇದಿಕೆಯ ಹಿಂಭಾಗದ ಒಂದು ಮೂಲೆಗೆ ಕರೆದೊಯ್ದರು. ಅಲ್ಲಿ ನೋಡಿದರೆ ಕುಡಿದು ಬಿಟ್ಟ ಕೋಕಾ ಕಾಲದ ಬಾಟಲಿಗಳನ್ನು ಗುಡ್ಡೆ ಹಾಕಿ ಯಾರೋ ಇಬ್ಬರು ತೊಳೆಯುತ್ತಿದ್ದರು. ಕಾಸಿ ಇನ್ನಷ್ಟು ಹತ್ತಿರ ಹೋಗಿ ನೋಡಿದರೆ, ಅದು ಉಳ್ಳಾಲದ ಶಾಸಕರು ಮತ್ತು ವಕ್ಫ್ ಸಚಿವರು. ಆಚಾರ್ಯರು ಹೇಳಿದರು “ಕೋಕಾ ಕಾಲ ಬಾಟಲಿಗಳನ್ನು ತೊಳೆದು ಮತ್ತೆ ಅದಕ್ಕೆ ಪಾನೀಯ ತುಂಬಿಸುವ ಕೆಲಸವನ್ನು ಇವರಿಬ್ಬರಿಗೆ ವಹಿಸಿದ್ದೇವೆ. ಹಾಗೆಯೇ ಖಾಲಿ ಬಾಟಲಿಗಳನ್ನು ಸಂಗ್ರಹಿಸಿ ತರುವ ಕೆಲಸವನ್ನೂ ಇವರಿಗೇ ವಹಿಸಿದ್ದೇವೆ. ಒಂದು ಬಾಟಲಿಗೆ ಇಷ್ಟೂ ಅಂತ ಕಮಿಶನ್ ನೀಡಲಾಗುತ್ತದೆ. ಅವರು ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ”

ಕಾಸಿ ಮೆಲ್ಲ ಉಳ್ಳಾಲದ ಶಾಸಕರತ್ತ ಬಾಗಿ ಕೇಳಿದ “ಸಾರ್..ಈ ಕೋಕಾ ಕಾಲದ ಬಗ್ಗೆ ನಿಮ್ಮ ಅನ್ನಿಸಿಕೆಯೇನು?”
ಬಾಟಲಿ ತೊಳೆಯುತ್ತಿದ್ದ ಶಾಸಕರು ಕಾಸಿಯತ್ತ ನೋಡಿ ಹಲ್ಲು ಕಿರಿದರು. ಪಕ್ಕದಲ್ಲೇ ಯಾರೋ ಅರ್ಧ ಕುಡಿದು ಬಿಟ್ಟ ಬಾಟಲಿಯನ್ನು ಎತ್ತಿ ಬಾಯಿಗೆ ಸುರಿದು ಚಪ್ಪರಿಸಿ ಹೇಳಿದರು “ಚೆನ್ನಾಗಿದೆ. ಆದರೆ ಇನ್ನಷ್ಟು ಸ್ಟ್ರಾಂಗ್ ಆಗಬೇಕಾಗಿದೆ...”

(ರಾಜ್ಯ ಸರಕಾರ ಉಗ್ರರ ವಿರುದ್ಧ ಕೋಕಾ ಕಾಯ್ದೆಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ. ರವಿವಾರ ಆಗಸ್ಟ್ ೨, ೨೦೦೯ರ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟವಾಗಿದೆ.)

1 comment:

  1. svarthakkagi kaanunugalannu rachisalaguttide. avugala kunikege common people, poor, farmers etc himse anubhavisuttiddare. kanunu sadanadalli mandaneyaguvaga, kelavomme adakku muncheye patrakatrigalige, prati pakshagalige adara mula tiliyuttade. adare yaaruu janavirodhi kanunioge viruddhvagi daniyettuvudilla. jaana kurudutana pradarshisuttaare. yakandre appanige hutiid manassu alli bahutekarige illa. sikiddu dochi summanaguvavara sante adu.

    ReplyDelete