Sunday, October 11, 2009

ಶವಾಸನವನ್ನು ಯೋಗಾಸನಗಳ ತಾಯಿ ಎಂದು ಕರೆಯುತ್ತಾರೆ....

ಶವಾಸನವನ್ನು ಯೋಗಾಸನಗಳ ತಾಯಿ ಎಂದು ಕರೆಯುತ್ತಾರೆ....

ಸುತ್ತೂರು ಮಠದಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ಮತ್ತು ಸಚಿವರ ಚಿಂತನ ಮತ್ತು ಮಂಥನ ಭರ್ಜರಿಯಾಗಿ ನಡೆಯುತ್ತಿತ್ತು. ಬದನೆಕಾಯಿ ಗೊಜ್ಜುವಿಗೆ ಇನ್ನೊಂದಿಷ್ಟು ಉಪ್ಪು ಕಡಿಮೆ ಬಿದ್ದಿದ್ದರೆ, ತಿಳಿಸಾರಿಗೆ ಹುಳಿ ಸರಿಯಾಗಿ ಬಿದ್ದಿದ್ದರೆ ಮಂಥನ ಸಂಪೂರ್ಣ ಯಶಸ್ವಿಯಾ ಗುತ್ತಿತ್ತು ಎನ್ನುವುದು ಅನಂತಕುಮಾರ್‌ರ ಖಾಸಗಿ ಅಭಿಪ್ರಾಯ ಎಂದು ಬಿಜೆಪಿ ರಾಜ್ಯಾ ಧ್ಯಕ್ಷರು ಪತ್ರಕರ್ತ ಎಂಜಲು ಕಾಸಿಗೆ ಫೋನಿನ ಮೂಲಕವೇ ಹೇಳಿಕೆ ನೀಡಿ ಸ್ಪಷ್ಟಪಡಿಸಿದ್ದರು. ತಿಳಿಸಾರು ಮತ್ತು ಗೊಜ್ಜಿಗಾಗಿ ವಿಶೇಷ ಅಡಿಗೆ ಯವರನ್ನು ಮಠಕ್ಕೆ ತರಿಸಲಾಗಿತ್ತು. ಗೊಜ್ಜು ವಿನಲ್ಲಿ ಯಾರೋ ಭಿನ್ನಮತೀಯರು ಅಡುಗೆ ಭಟ್ಟರ ಕಣ್ಣು ತಪ್ಪಿಸಿ ಉಪ್ಪು ಜಾಸ್ತಿ ಹಾಕಿರಬೇಕು ಎನ್ನುವುದು ಅವರ ಸ್ಪಷ್ಟನೆಯಾಗಿತ್ತು. ಕೊನೆಯ ದಿನ ಸಚಿವರೆಲ್ಲರೂ ಲಂಗೋಟಿ ಧಾರಿಗಳಾಗಿ ಸಭಾಂಗಣವನ್ನು ಸೇರಿದರು. ಗುಜರಾತ್‌ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಯಡಿಯೂರಪ್ಪಾದಿಯಾಗಿ ಎಲ್ಲ ಸಚಿವರಿಗೆ ಯೋಗ ಕಲಿಸಲಾರಂಭಿಸಿ ದರು.

ಮೋದಿ ವಿವರಿಸಿದರು “ಯೋಗವೆನ್ನುವುದು ಅತ್ಯಂತ ಪುರಾತನವಾದುದು. ರಾಜ ಕೀಯದ ಎಲ್ಲ ಸಮಸ್ಯೆಗಳಿಗೆ ಯೋಗ ದಲ್ಲಿ ಉತ್ತರವಿದೆ. ಆದುದರಿಂದ ಯಾವ ಯಾವ ಸಮಸ್ಯೆಗಳಿಗೆ ಯಾವ ಯಾವ ಆಸನಗಳನ್ನು ನಾವು ಮಾಡಬೇಕು ಎನ್ನು ವುದನ್ನು ನಾನಿಲ್ಲಿ ವಿವರಿಸಲಿದ್ದೇನೆ...”
ಆಸನ ಎನ್ನುವಾಗ ಯಡಿಯೂರಪ್ಪ ರಿಗೆ ತಮ್ಮ ಮುಖ್ಯಮಂತ್ರಿ ಕುರ್ಚಿ ನೆನಪಾಯಿತು. ಅನಂತಕುಮಾರ್ ಪಕ್ಕ ದಲ್ಲೇ ಇರುವುದು ನೋಡಿ ಸಮಾಧಾನ ವಾಯಿತು.

ಮೋದಿ ಮುಂದುವರಿಸಿದರು. “ಪಕ್ಷ ದೊಳಗೆ ಆರೆಸ್ಸೆಸ್ ಸಿಕ್ಕಾಪಟ್ಟೆ ಮೂಗು ತೂರಿಸುವಾಗ ಮಾಡಬೇಕಾದ ಆಸನ ಯಾವುದು ಎನ್ನುವುದನ್ನು ನಾನಿಲ್ಲಿ ನಿಮಗೆ ಹೇಳಿಕೊಡುತ್ತೇನೆ... ಮೊದಲು ಸೊಂಟವನ್ನು ನಿಧಾನಕ್ಕೆ ಬಗ್ಗಿಸ ಬೇಕು... ಆ ಮೇಲೆ ಎರಡೂ ಕೈಗಳನ್ನು ಜೋಡಿಸಿ ತಲೆಯ ಮೇಲಕ್ಕೆ ಕೊಂಡೊಯ್ಯಬೇಕು... ಬಳಿಕ ಮೂಗನ್ನು ನಿಧಾನಕ್ಕೆ ನೆಲದ ಬಳಿಗೆ ತರಬೇಕು...ಬಳಿಕ ಮೂಗನ್ನು ನೆಲಕ್ಕೆ ಉಜ್ಜುತ್ತಾ ಸಾಷ್ಟಾಂಗವೆರಗ ಬೇಕು...ಈ ಆಸನಕ್ಕೆ ಬಗ್ಗಾಸನ ಅಥವಾ ಸಾಷ್ಟಾಂಗಾಸನ ಎಂದು ಹೆಸರು. ಆರೆಸ್ಸೆಸ್ ಸಮಸ್ಯೆ ಕಾಡಿದಾಗಲೆಲ್ಲ ದಿನಕ್ಕೆ ಮೂರು ಹೊತ್ತು ಈ ಆಸನವನ್ನು ಮಾಡಿ. ಸಮಸ್ಯೆ ನಿವಾರಣೆಯಾಗುತ್ತದೆ....”
ಸಚಿವರೆಲ್ಲ ಆ ಆಸನವನ್ನು ಹಂತಹಂತವಾಗಿ ಮಾಡತೊಡಗಿದರು.

ಮೋದಿ ಮುಂದುವರಿಸಿದರು “ಕೋಮು ಗಲಭೆಗಳು, ಚರ್ಚ್ ಮೇಲೆ ದಾಳಿ, ದಲಿತರ ಮೇಲೆ ನಿರಂತರ ದಾಳಿ ನಡೆದಾಗ ಮಾಡ ಬೇಕಾದ ಆಸನವನ್ನು ನಾನು ಈಗ ಹೇಳಿ ಕೊಡುತ್ತೇನೆ. ಬಿಜೆಪಿಯ ಸರಕಾರವಿರುವಾಗ ಈ ಆಸನ ಮುಖ್ಯಮಂತ್ರಿ ಮತ್ತು ಸಚಿವರಿಗೆ ಅತ್ಯಗತ್ಯ ಬೀಳುತ್ತದೆ....ಮೊದಲು ನಿಧಾನಕ್ಕೆ ಕಣ್ಣನ್ನು ಮುಚ್ಚಬೇಕು. ಈಗ ನಾಭಿಯಿಂದ ‘ಓಂ..’ ಎಂಬ ಉದ್ಗಾರವನ್ನು ನಿಧಾನಕ್ಕೆ ಎಳೆದು ಕೊಳ್ಳಬೇಕು. ಆ ಬಳಿಕ ಕೈಗಳನ್ನು ಅಗಲಿಸಿ ಎರಡೂ ಕೈಗಳ ತೋರು ಬೆರಳುಗಳನ್ನು ಕಿವಿಯ ಎರಡೂ ತೂತುಗಳ ಬಳಿ ತಂದು ಒತ್ತಿ ಹಿಡಿಯ ಬೇಕು...ಹೊರಗಿನ ಗದ್ದಲ, ಚೀತ್ಕಾರ ಯಾವ ಕಾರಣಕ್ಕೂ ಕಿವಿಯ ತೂತಿನೊಳಗೆ ಹೋಗ ದಂತೆ ಜಾಗರೂಕತೆ ವಹಿಸಬೇಕು. ಇಷ್ಟಾದರೆ ಯೋಗದ ಅರ್ಧ ಹಂತ ಮುಕ್ತಾಯವಾ ಯಿತು. ಬಾಯಿಯಲ್ಲಿ ನಿಧಾನಕ್ಕೆ ಶಾಂತಿ, ಸೌಹಾರ್ದ ಮಂತ್ರಗಳನ್ನು ಉಚ್ಚರಿಸಿ. ಸುಮಾರು ಹೊತ್ತು ಹೀಗೇ ಇರಿ. ಬಳಿಕ ಮೆಲ್ಲಗೆ ನೆಲದಲ್ಲಿ ಹಾಸಿರುವ ತನಿಖಾ ಆಯೋಗದ ಮೇಲೆ ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ...ಹೀಗೆ ಮಾಡುತ್ತಿದ್ದರೆ ಮಾನವ ಹಕ್ಕು ಆಯೋಗದಂತಹ ಬೆನ್ನುನೋವುಗಳು ಸಂಪೂರ್ಣ ವಾಸಿಯಾಗುತ್ತವೆ. ಈ ಯೋಗಕ್ಕೆ ಕಿವುಡು-ಕುರುಡಾಸನ ಎಂದು ಹೆಸರು. ಈ ಆಸನವನ್ನು ಮಾಡಿ ಮುಗಿಸಿದ ಬಳಿಕ ಒಂದು ಲೋಟ ಹಾಲಿಗೆ ಕೇಸರಿಯನ್ನು ಕಲಸಿ ಕುಡಿಯಬೇಕು...”

ಸಚಿವರೆಲ್ಲ ಈ ಆಸನವನ್ನು ಸುಲಭವಾಗಿ ಮಾಡಿ ಮುಗಿಸಿದರು. ತನಗಿಂತಲೂ ತುಂಬಾ ಚೆನ್ನಾಗಿ ಈ ಯೋಗವನ್ನು ಮಾಡುತ್ತಿದ್ದಾರೆ ಎಂದು ಮೋದಿಗೆ ತುಂಬಾ ಸಂತೋಷವಾ ಯಿತು. ಅವರು ತಮ್ಮ ಯೋಗ ಪಾಠವನ್ನು ಮುಂದುವರಿಸಿದರು. “ಇದು ಬಹುಮುಖ್ಯ ವಾದ ಆಸನ. ಭಾರೀ ಮಳೆ ಸುರಿದು ನೆರೆ ಬಂದು ಜನರು ಕೊಚ್ಚಿ ಹೋಗುವಾಗ ಸಚಿ ವರು ಮಾಡಬೇಕಾದ ಆಸನ ಇದು...ನೆರೆಯಲ್ಲಿ ಮುಳುಗದೇ ತೇಲುವುದು ಹೇಗೆ ಎನ್ನುವುದನ್ನು ಈ ಯೋಗ ಸಚಿವರಿಗೆ, ಮುಖ್ಯಮಂತ್ರಿಯ ವರಿಗೆ ಕಲಿಸಿಕೊಡುತ್ತದೆ...ಮೊದಲು ಕಲಿಸಿದ ಕಿವುಡು-ಕುರುಡಾಸನವನ್ನು ಈ ಸಂದರ್ಭದಲ್ಲಿ ಮಾಡಬಹುದಾದರೂ, ಅದು ಕೆಲವೊಮ್ಮೆ ದೇಹದ ಸೂಕ್ಷ್ಮ ಭಾಗಗಳಿಗೆ ಧಕ್ಕೆ ತರುವ ಅಪಾಯವಿದೆ. ಆದುದರಿಂದ ತುಸು ಬೇರೆ ಯಾದ ಆಸನ ಇದಕ್ಕೆ ಅಗತ್ಯವಿದೆ...ಮೊದಲು ಬಲ ಮತ್ತು ಎಡದ ಕೈಯನ್ನು ತೆಗೆದು ತಲೆಯ ಮೇಲೆ ಇಟ್ಟುಕೊಳ್ಳಿ...ನಿಧಾನಕ್ಕೆ ಕಣ್ಣಿಂದ ಎರಡು ಹನಿಯನ್ನು ಉದುರಿಸಿ...ಬಳಿಕ ಪರಿಹಾರ... ಪರಿಹಾರ...ಕೋಟಿ...ಮಂಜೂರು ಎಂಬ ಮಂತ್ರವನ್ನು ನಿಧಾನಕ್ಕೆ ಪಠಿಸಿ. ಬಿಡುಗಡೆಯಾದ ಹಣವನ್ನೆಲ್ಲ ನಿಧಾನಕ್ಕೆ ಹೊಟ್ಟೆಯೊಳಗಡೆ ತೆಗೆದುಕೊಳ್ಳಿ...ಬಳಿಕ ಕೇಂದ್ರದತ್ತ ಮುಖ ಮಾಡಿ ಸುದೀರ್ಘ ನಿಟ್ಟುಸಿರನ್ನು ಬಿಡಿ...ಈ ಆಸನಕ್ಕೆ ಹಣವೃಷ್ಟಿಯಾಸನ ಅಥವಾ ನುಂಗಾ ಸನ ಎಂದು ಹೆಸರು. ಇದನ್ನು ನೆರೆಯ ಸಂದರ್ಭದಲ್ಲಿ ಮಾತ್ರವಲ್ಲ, ಬರದ ಸಂದರ್ಭದಲ್ಲೂ ಮಾಡಬಹುದು. ಬರ, ನೆರೆ ಮೊದಲಾದ ಹೊಟ್ಟೆನೋವಿಗೆ ಈ ಆಸನ ದಿವ್ಯ ಔಷಧ...”

ಸಚಿವರೆಲ್ಲ ಯಶಸ್ವಿಯಾಗಿ ನುಂಗಾಸನವನ್ನು ಮುಗಿಸಿದ ಬಳಿಕ ಮೋದಿ ಮತ್ತೆ ಮುಂದುವರಿ ದರು “ರೈತರು ಬೀಜ, ಗೊಬ್ಬರ ಕೇಳಿದಾಗ ಮಾಡುವ ಆಸನವನ್ನು ನಾನು ಈಗ ಹೇಳಿ ಕೊಡುತ್ತೇನೆ...ಇದು ಕಿವುಡು-ಕುರುಡಾಸನ ದೊಂದಿಗೆ ಸಂಬಂಧವಿರುವ ಆಸನವಾಗಿದೆ. ನಿಮ್ಮ ತೋರು ಬೆರಳನ್ನು ನಿಧಾನಕ್ಕೆ ಮುಂದಕ್ಕೆ ತನ್ನಿ. ಈಗ ಕೇಂದ್ರದ ಕಡೆಗೆ ಅದನ್ನು ತಿರುಗಿಸಿ... ಹೀಗೆ ಮಾಡುತ್ತಲೇ ಇರಿ...ಬಳಿಕ ಕಣ್ಣನ್ನು ಪೊಲೀಸರೆಡೆಗೆ ಕೇಂದ್ರೀಕರಿಸಿ...ಕಣ್ಣಲ್ಲಿ ಮೂರು ಬಾರಿ ಸನ್ನೆ ಮಾಡಿ...ಬಳಿಕ ಕಿವಿಯನ್ನು, ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಳ್ಳಿ...ಪಾದವನ್ನು ಮೇಲೆತ್ತಿ ಮೆಲ್ಲಗೆ ರೈತರ ತಲೆಯ ಮೇಲೆ ಇಟ್ಟು ಗಟ್ಟಿ ಯಾಗಿ ಒತ್ತಿ....ಇದೀಗ ಎಲ್ಲೋ ಗುಂಡಿನ ಸದ್ದುಗಳು ಕೇಳಿಸಿದಂತಾಗುತ್ತದೆ...ಮನಸ್ಸನ್ನು ಮತ್ತೆ ನಿಯಂತ್ರಣದಲ್ಲಿಟ್ಟು ಹಾಗೆಯೇ ಶವದ ಹಾಗೆ ಮಲಗಿ ಬಿಡಿ...ಈ ಯೋಗಾಸನಕ್ಕೆ ಶವಾಸನ ಎಂದು ಹೆಸರು. ಶವಾಸನದಿಂದ ರಾಜಕೀಯದ ಹಲವು ಸಮಸ್ಯೆಗಳು ಪರಿಹಾರ ವಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಶವಗಳು ಬಿದ್ದಾಗಲೂ ಇದೇ ಆಸನವನ್ನು ಮಾಡುತ್ತಾ ಇರಿ...ಶವಾಸನವನ್ನು ಯೋಗಾಸನಗಳ ತಾಯಿ ಎಂದು ಕರೆಯುತ್ತಾರೆ....”
ಸಚಿವರೆಲ್ಲರೂ ಶವಾಸನವನ್ನು ಯಶಸ್ವಿ ಯಾಗಿ ಮಾಡಿದರು. ಮುಖದಲ್ಲಿ ಪ್ರೇತಕಳೆ ಇದ್ದುದರಿಂದ ಅವರಿಗೆ ಶವಾಸನ ಮಾಡುವುದು ಸುಲಭವಾಯಿತು.

ಮೋದಿ ಮುಂದಿನ ಆಸನವನ್ನು ಕಲಿಸಲು ಆರಂಭಿಸಿದರು “ಇದು ಮುಖ್ಯವಾಗಿ ಮುಖ್ಯ ಮಂತ್ರಿಗಳು ಮಾಡಬಹುದಾದ ಆಸನ. ಪಕ್ಷ ದೊಳಗೆ ಭಿನ್ನಮತ ಎದ್ದಾಗ ಈ ಆಸನವನ್ನು ಮಾಡಬೇಕು. ಮೊದಲು ತಮ್ಮ ಸಮುದಾ ಯದ ಸ್ವಾಮೀಜಿಯನ್ನು ನೆನೆಯಿರಿ....ಮತ್ತೆ ಮೆಲ್ಲಗೆ ಅವರೆಡೆಗೆ ಬಗ್ಗಿ. ಇದಾದ ಬಳಿಕ ಸಚಿವ ಸಂಪುಟವನ್ನು ನಿಧಾನಕ್ಕೆ ವಿಸ್ತರಿಸಿ. ಸಾಧ್ಯ ವಾದಷ್ಟೂ ವಿಸ್ತರಿಸುತ್ತಲೇ ಹೋಗಿ...ದಿಲ್ಲಿಯ ಕಡೆಗೆ ಮುಖಮಾಡಿ...ಶಿಸ್ತುಕ್ರಮ ಮಂತ್ರವನ್ನು ಹತ್ತು ಬಾರಿ ಪಠಿಸಿ...ಈ ಆಸನಕ್ಕೆ ಉಚ್ಚಾಟ ನಾಸನ ಎಂದು ಹೆಸರು...”
ಅಷ್ಟರಲ್ಲಿ ಮೆಲ್ಲಗೆ ಜಗದೀಶ್ ಶೆಟ್ಟರು ಏದುಸಿರು ಬಿಟ್ಟು ಕೇಳಿದರು “ಸಾರ್... ಇರುವ ಮುಖ್ಯಮಂತ್ರಿಯನ್ನು ಕೆಳಗಿಳಿಸು ವುದಕ್ಕೆ ಯಾವುದಾದರೂ ಆಸನ ಇದೆಯೋ ಎಂದು ಹೇಳುತ್ತೀರಾ...”
ಒಮ್ಮೆಲೆ ಸಭಾಂಗಣದಲ್ಲಿ ಕಲರವ ಎದ್ದಿತ್ತು. ಯಡಿಯೂರಪ್ಪ ರೌದ್ರಾಸನವನ್ನು ಪ್ರಯೋಗಿಸಿದರೆ, ಈಶ್ವರಪ್ಪವರು ಟೀಕಾಸನ ವನ್ನು ಮಾಡತೊಡಗಿದರು. ಅನಂತ ಕುಮಾರ್ ‘ವರಿಷ್ಠರ ಓಲೈಕಾಸನ’ ಮಾಡು ವುದಕ್ಕಾರಂಭಿಸಿದರು. ರೆಡ್ಡಿ ಸಹೋದರರು ‘ಬೆಂಬಲ ವಾಪಾಸಾಸನ’ವನ್ನು ಮಾಡ ತೊಡಗಿದರು. ಅಷ್ಟರಲ್ಲಿ ಯಾರೋ ದೂರ ದಿಂದ ನೀರು ನೀರು ಎಂದು ಬೊಬ್ಬೊ ಹೊಡೆ ಯತೊಡಗಿದರು. ಎಲ್ಲರೂ ಒಮ್ಮೆಲೆ ತಮ್ಮ ಆಸನಗಳನ್ನು ಬದಲಿಸಿ ಶವಾಸನ ಮಾಡಿದರು.
ಮೋದಿ ಕೇಳಿದರು ‘ಅದೇನದು ನೀರು ನೀರು ಅನ್ನುತ್ತಾರಲ್ಲ...”
ಯಡಿಯೂರಪ್ಪ ಹೇಳಿದರು “ಬಹುಶಃ ಚಂದ್ರಲೋಕದಲ್ಲಿ ನೀರು ಸಿಕ್ಕಿತಲ್ಲ...ಇಸ್ರೋದ ವಿಜ್ಞಾನಿಗಳು ಸಂತೋಷದಿಂದ ನೀರು ಸಿಕ್ಕಿತು ಎಂದು ಚೀರುತ್ತಿರಬೇಕು...”
ಅಷ್ಟರಲ್ಲಿ ಉತ್ತರ ಕರ್ನಾಟಕದ ನೆರೆ ನೀರು ಸುತ್ತೂರು ಮಠಕ್ಕೆ ಒಂದು ಸುತ್ತು ಹಾಕಿ ಚಿಂತನ ಮಂಥನ ಸಂಭಾಂಗಣವನ್ನು ಪ್ರವೇಶಿಸಿತು.
ಎಲ್ಲರೂ ಗಾಬರಿಯಾಗಿ ಮೋದಿಯತ್ತ ನೋಡಿ ಹೇಳಿದರು “ಈಗ ಇದರಿಂದ ಪಾರಾ ಗಲು ಯಾವ ಆಸನವಿದೆ ಮೋದಿಯವರೆ...”
ನೀರನ್ನು ನೋಡಿದ್ದೇ ಮೋದಿ ಕೇಳಿದರು “ನಿಮಗೆ ಈಜು ಬರುತ್ತದೆಯೇ?”
ಎಲ್ಲರು ಒಕ್ಕೊರಲಲ್ಲಿ ಹೇಳಿದರು “ಇಲ್ಲ”
“ಹಾಗಾದರೆ...ಈ ನೀರಿನಲ್ಲಿ ನಿಧಾನಕ್ಕೆ ಮುಳುಗಿ...ಎರಡು ದಿನಗಳ ಬಳಿಕ ತನ್ನಷ್ಟಕ್ಕೇ ಈ ನೀರಿನಲ್ಲಿ ತೇಲುವುದಕ್ಕೆ ಆರಂಭಿಸು ತ್ತೀರಿ...ಈ ಶವಾಸನದಿಂದ ನಿಜವಾದ ಶಾಂತಿ, ನೆಮ್ಮದಿ ಸಿಗುತ್ತದೆ...ನಿಮಗಲ್ಲ ಈ ನಾಡಿನ ಜನತೆಗೆ....” ಎನ್ನುತ್ತಾ ನೀರಿಗೆ ಧುಮುಕಿ ಈಜುತ್ತಾ ಗುಜರಾತ್ ಸೇರಿದರು.

(ಸುತ್ತೂರು ಮಠದಲ್ಲಿ ರಾಜ್ಯದ ಸಂಪುಟ ಸಚಿವರಿಗಾಗಿ ಮೋದಿಯ ನೇತೃತ್ವದಲ್ಲಿ ನಡೆದ ‘ಚಿಂತನ-ಮಂಥನ’ ಶಿಬಿರದ ಹಿನ್ನೆಲೆಯಲ್ಲಿ ಬರೆದಿರುವುದು. ರವಿವಾರ ಅಕ್ಟೋಬರ್ ೪, ೨೦೦೯ರ ವಾರ್ತಾಭಾರತಿ ಸಂಚಿಕೆಯಲ್ಲಿ ಪ್ರಕಟ.)

No comments:

Post a Comment