Thursday, April 23, 2015

ನನ್ನದೂ ಗಾಂಧಿ ಫ್ಯಾಮಿಲೀನೇ ಕಣ್ರೀ...

2013 ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಪೂಜಾ ಗಾಂಧೀ ರಾಜಕೀಯ ಪ್ರವೇಶಿಸಿ ಪಕ್ಷಾಂತರದಲ್ಲಿ ದಾಖಲೆ ಬರೆದ ಹಿನ್ನೆಲೆಯಲ್ಲಿ ಸೃಷ್ಟಿಯಾದ ಬುಡಬುಡಿಕೆ. ಮಾರ್ಚ್ -09-2013 ರಲ್ಲಿ ವಾರ್ತಾಭಾರತಿ ದೈನಿಕದಲ್ಲ್ಲಿ ಪ್ರಕಟವಾಗಿದೆ 

ಸಿನಿಮಾ ನಟಿ ಹೂಜಾ ಗಾಂಧಿ ಇನ್ನೊಂದು ಪಕ್ಷಕ್ಕೆ ಸೇರಿದರು ಎಂಬ ಸುದ್ದಿ ಕೇಳಿದ್ದೆ ಪತ್ರಕರ್ತ ಎಂಜಲು ಕಾಸಿಗೆ ಸಿಟ್ಟು ಒತ್ತರಿಸಿ ಬಂತು. ಈಗಷ್ಟೇ ಹೂಜಾ ಗಾಂಧಿ ಪಕ್ಷಾಂತರ ಮಾಡಿದ ಸುದ್ದಿ ಮಾಡಿ ಕಳುಹಿಸಿದ್ದ. ಅಷ್ಟರಲ್ಲೇ ಆಕೆ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ್ದರು. ಹೀಗೆ ಆದಲ್ಲಿ ಪಕ್ಷಾಂತರ ಮಾಡುವುದರಲ್ಲಿ ನಟಿ ಹೂಜಾಗಾಂಧಿ ಆಸ್ಕರ್ ಅವಾರ್ಡ್ ಪಡೆಯುವುದು ಗ್ಯಾರಂಟಿ ಅನ್ನಿಸಿತು ಎಂಜಲು ಕಾಸಿಗೆ. ನೇರವಾಗಿ ಹೂಜಾ ಗಾಂಧಿಯ ಮನೆಬಾಗಿಲನ್ನು ತಟ್ಟಿ, “ಮೇಡಂ ನಿಮ್ಮ ಇಂಟರ‍್ಯೂಗೆ ಬಂದಿದ್ದೇನೆ” ಎಂದ.
“ನಾನೀಗ ಪಕ್ಷಾಂತರ ಮಾಡುವುದರಲ್ಲಿ ತುಂಬಾ ಬಿಸಿಯಾಗಿದ್ದೇನೆ....ಈಗಾಗ್ಲೇ ಹೊಸ ಪಕ್ಷದೋರು ನನ್ನನ್ನು ಸಂಪರ್ಕಿಸಿದ್ದಾರೆ....ಡೇಟ್ ಕೊಟ್ಟಿದ್ದೇನೆ...ಇನ್ನೇನೂ ಶೂಟಿಂಗ್ ರೆಡಿಯಾಗತ್ತೆ...” ಹೂಜಾಗಾಂಧಿ ಬಳುಕುತ್ತಾ ಕುರ್ಚಿಯಲ್ಲಿ ಕುಳಿತುಕೊಂಡರು.
“ಅಲ್ಲ ಮೇಡಂ ಬೆಳಗ್ಗೆ ಯಡಿಯೂರಪ್ಪ ಪಕ್ಷದಲ್ಲಿ, ಮಧ್ಯಾಹ್ನ ಶ್ರೀರಾಮುಲು ಪಕ್ಷದಲ್ಲಿ ರಾತ್ರಿ... ಕುಮಾರಸ್ವಾಮಿ ಪಕ್ಷದಲ್ಲಿ....ಹೀಗಾದ್ರೆ....ನೀವು ಸಿನಿಮಾ ಶೂಟಿಂಗ್‌ಗೆ ಯಾವಾಗ ಹೋಗ್ತೀರಿ...”
ಹೂಜಾಗಾಂಧಿ ನಕ್ಕಳು “ಇತ್ತೀಚಿನ ಚಿತ್ರಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಗೋದೆ ಕಡಿಮೆ. ಕಲಾತ್ಮಕ ಚಿತ್ರಗಳಲ್ಲಿ ನಟಿಸೋಣ ಅಂದ್ರೆ ಅದ್ರಲ್ಲಿ ಸಂಭಾವನೆ ಕಡಿಮೆ. ಆದುದರಿಂದ ರಾಜಕೀಯ ಸಿನಿಮಾದಲ್ಲಿ ನಟಿಸುವುದಕ್ಕೆ ಹೊರಟಿದ್ದೇನೆ....ಇದರಲ್ಲಿ ನಟಿಸುವುದಕ್ಕೂ ಸಾಕಷ್ಟು ಅವಕಾಶವಿದೆ. ಹಾಗೆಯೇ ಸಂಭಾವಣೆಯೂ ಕೈತುಂಬಾ ಸಿಗತ್ತೆ...”
“ನಿಮ್ಮ ದಿನಚರಿಯನ್ನು ಸ್ವಲ್ಪ ವಿವರಿಸುತ್ತೀರಾ...” ಕಾಸಿ ಕುತೂಹಲದಿಂದ ಕೇಳಿದ.
“ಬೆಳಗ್ಗೆ ಎದ್ದವಳೇ ಸೀದಾ ಶ್ರೀರಾಮುಲು ಪಕ್ಷಕ್ಕೆ ತೆರಳಿ ಮುಖ ಮತ್ತು ಇತರೆಲ್ಲವನ್ನು ತೊಳೆಯುತ್ತೇನೆ. ಹತ್ತು ಗಂಟೆಗೆ ಯಡಿಯೂರಪ್ಪ ಪಕ್ಷಕ್ಕೆ ಪಕ್ಷಾಂತರ ಮಾಡಿ ಟಿಫಿನ್ ಮುಗಿಸ್ತೇನೆ. ಮಧ್ಯಾಹ್ನ ಒಂದು ಗಂಟೆಗೆ ಕಾಂಗ್ರೆಸ್ ಪಕ್ಷದಲ್ಲಿ ಊಟ. ಸಂಜೆ ಜೆಡಿಎಸ್‌ಗೆ ಪಕ್ಷಾಂತ್ರ ಮಾಡಿ ಕಾಫಿ ತಿಂಡಿ. ರಾತ್ರಿ....ಇನ್ನಿತರ ಹಲವು ಪಕ್ಷಗಳಿಗೆ ಏಕಕಾಲದಲ್ಲಿ ಪಕ್ಷಾಂತರ ಮಾಡುತ್ತೇನೆ...” ಹೂಜಾಗಾಂಧಿಯ ಮಾತು ಕೇಳಿ ಕಾಸಿಗೆ ತಲೆ ತಿರುಗಿತು.
“ಅಲ್ಲಾ ಮೇಡಂ...ಎಲ್ಲರೂ ನಿಮ್ಮ ಹಿಂದೆ ಯಾಕೆ ಬಿದ್ದಿದ್ದಾರೆ....?” ಕಾಸಿ ಕೇಳಿದ.
“ಕಾಂಗ್ರೆಸ್‌ನೋರು ಸೋನಿಯಾಗಾಂಧಿ ಹಿಂದೆ ಬಿದ್ದ ಹಾಗೆ ಕರ್ನಾಟಕದ ಪಕ್ಷದೋರು ಹೂಜಾಗಾಂಧಿಯ ಹಿಂದೆ ಬಿದ್ದಿದ್ದಾರೆ...ಗಾಂಧಿ ಹೆಸರಿನೋರು ಇದ್ದರೆ ಪಕ್ಷಕ್ಕೊಂದು ಮರ್ಯಾದೆ ಅಲ್ವಾ...ಅದಕ್ಕೆ”
“ಆದ್ರೆ ಸೋನಿಯಾ ಗಾಂಧಿ ಫ್ಯಾಮಿಲಿಯೋರು....ನೀವು...?”
ಹೂಜಾಗಾಂಧಿ ಒಮ್ಮೆ ನೊಂದುಕೊಂಡರು. ಅಳುವುದಕ್ಕೆ ಪ್ರಯತ್ನಿಸಿದರು. ಆದರೆ ಪಕ್ಕದಲ್ಲಿ ಗ್ಲಿಸರಿನ್ ಇಲ್ಲದೇ ಇರುವುದರಿಂದ ಅಳುವ ಪ್ರಯತ್ನ ವಿಫಲವಾಯಿತು.
“ನೋಡ್ರಿ...ನನ್ನನ್ನು ಯಾರು ಅಂತ ತಿಳ್ಕೊಂಡಿದ್ದೀರಿ? ನಾನೂ ಗಾಂಧೀ ಫ್ಯಾಮಿಲೀನೇ...ಗೊತ್ತಾ....ನನ್ಗೂ ಗೊತ್ತು ಗಾಂಧಿ ಎಂದ್ರೆ ಯಾರು ಅಂತ...” ಎನ್ನುತ್ತಾ ಕಣ್ಣೊರೆಸುವ ನಟನೆ ಮಾಡಿದರು.
“ಗಾಂಧಿಗೂ ನಿಮಗೂ ಏನು ಸಂಬಂಧ...” ಕಾಸಿ ಕುತೂಹಲದಿಂದ ಕೇಳಿದ.
“ನೋಡ್ರಿ ರಾಹುಲ್‌ಗಾಂಧಿ ಯಾವತ್ತೂ ನನ್ನ ಜೊತೆ ಮಾತಾಡ್ತಾ ಇರ‍್ತಾರೆ...ನಾವೆಲ್ಲ ಒಂದೇ ಫ್ಯಾಮಿಲಿ ಗೊತ್ತಾ...” ಹೂಜಾಗಾಂಧಿ ಮತ್ತೊಮ್ಮೆ ಘೋಷಿಸಿದರು.
“ಅದು ಹ್ಯಾಗೆ ಮೇಡಂ...” ಕಾಸಿ ಕೇಳಿದ.
“ಅದೆಲ್ಲ ಹೇಳೋಕ್ಕಾಗಲ್ಲ....ನನಗೂ ಗಾಂಧಿಗೂ ಹತ್ತಿರದ ಸಂಬಂಧ ಇದೆ....ನನ್ನ ಅಜ್ಜೀನೂ ಸ್ವಾತಂತ್ರ ಓರಾಟದಲ್ಲಿ ಭಾಗವಹಿಸಿದ್ದಾರೆ ಗೊತ್ತಾ...? ಗಾಂಧಿ ನಮಗೂ ದೂ...ರದಿಂದ ಸಂಬಂಧ....ನನ್ನ ಅಜ್ಜಿಯ ಚಿಕ್ಕಪ್ಪನ ಮಗನ ಮಾವನ...ಅತ್ತೆಯ ಎರಡನೆ ಮಗನ ಅಜ್ಜ ಗಾಂಧೀಜಿಯ ದೂರದ ಸಂಬಂಧಿಕರು. ಸೋನಿಯಾಗಾಂಧಿ ನಕಲಿ. ನಾನು ನಿಜವಾದ ಗಾಂಧಿ ಗೊತ್ತಾ?”
ಕಾಸಿ ರೋಮಾಂಚನಗೊಂಡ. ಅಂದರೆ ಮುಂದಿನ ದಿನಗಳಲ್ಲಿ ಈ ರಾಜ್ಯವನ್ನು ಗಾಂಧಿ ಫ್ಯಾಮಿಲಿ ಆಳುತ್ತೆ ಅಂತ ಆಯ್ತು “ಮೇಡಂ...ಗಾಂಧಿ ಫ್ಯಾಮಿಲಿಯವರಾಗಿದ್ದು ನೀವು ಸಿನಿಮಾಕ್ಕೆ ಯಾಕೆ ಬಂದ್ರಿ?”
ಹೂಜಾಗೆ ಮತ್ತೆ ಬೇಜಾರಾಯ್ತು “ಯಾಕೆ ಬರಬಾರದು? ನಮ್ಮ ಗಾಂಧೀನು ಸಿನಿಮಾದಲ್ಲಿ ನಟಿಸಿರಲಿಲ್ವ? ಗಾಂಧಿ ಚಿತ್ರದಲ್ಲಿ ಅವರಿಗೆ ಆಸ್ಕರ್ ಅವಾರ್ಡ್ ಸಿಕ್ಕಿದೆಯಲ್ಲ...ಅದಕ್ಕೆ ನಾನು ಸಿನಿಮಾ ಪ್ರವೇಶಿಸಿ ಮತ್ತೆ ರಾಜಕೀಯ ಪ್ರವೇಶಿಸಿದೆ. ಗಾಂಧಿ ಸಿನಿಮಾದಲ್ಲಿ ನಟಿಸಿದ ಬಳಿಕ ಅವರು ಸ್ವಾತಂತ್ರ ಹೋರಾಟ ಮಾಡಿ ಬ್ರಿಟಿಷರನ್ನು ಓಡಿಸಿದ್ದು. ಹಾಗೆಯೇ ನಾನು ಈಗ ರಾಜಕೀಯಕ್ಕೆ ಕಾಲಿಡುತ್ತಾ ಇದ್ದೇನೆ....”
“ಆದ್ರೆ ಗಾಂಧಿಯನ್ನು ಯಾರೋ ನಾಥೂರಾಂ ಅನ್ನೋನು ಕೊಂದನಲ್ಲಾ...ಹಾಗೆ ನೀವು ಸಾಯೋದಕ್ಕೆ ಇಷ್ಟ ಪಡುತ್ತೀರಾ?” ಕಾಸಿ ಮೆಲ್ಲಗೆ ಕೇಳಿದ.
“ಅದೆಷ್ಟೋ ಸಿನಿಮಾ ಶೂಟಿಂಗ್‌ನಲ್ಲಿ ನಾನು ಸತ್ತಿದ್ದೇನೆ...ಹೂಜಾಗಾಂಧಿ ಅಂತ ಸಿನಿಮಾ ತೆಗಿತೀನಿ. ಅದರಲ್ಲಿ ಒಂದಲ್ಲ ಎರಡು ಬಾರಿ ಸಾಯ್ತೀನಿ...ಮತ್ತೆ ಹುಟ್ಟಿ ಮತ್ತೆ ಬೇರೆ ಬೇರೆ ಪಕ್ಷ ಸೇರ‍್ತೀನಿ...”
“ಮೇಡಂ...ಈ ಬಾರಿ ನೀವು ಶಾಶ್ವತವಾಗಿ ಯಾವ ಪಕ್ಷದಲ್ಲಿ ಉಳ್ಕೊಳ್ಳುತ್ತೀರಿ?” ಕಾಸಿ ಕೇಳಿದ.
“ನಾನು ಶಾಶ್ವತವಾಗಿ ಯಾವ ಪಕ್ಷಕ್ಕೂ ಸೇರುವುದಿಲ್ಲ. ಗಾಂಧೀ ಈ ದೇಶಕ್ಕೆ ಸೇರಿದವರು. ಆದುದರಿಂದ ನಾನು ಎಲ್ಲ ಪಕ್ಷದಲ್ಲೂ ಸ್ವಲ್ಪ ಕಾಲ ನೆಲೆಸಬೇಕೆಂದು ಬಯಸಿದ್ದೇನೆ.  ಚುನಾವಣೆಯ ನಂತರ ಯಾವ ಪಕ್ಷ ನನಗೆ ಹುದ್ದೆ ಕೊಡುತ್ತದೋ ಆ ಪಕ್ಷದಲ್ಲಿ ಐದು ವರ್ಷ ಸೇವೆ ಮಾಡಬೇಕು ಎನ್ನುವಂತಹ ಆಸೆ ನನಗಿದೆ...”
ಅಷ್ಟರಲ್ಲಿ ವೊಬೈಲ್ ರಿಂಗಣಿಸಿತು. “ಹಲೋ....ಯಾರು....ವಾಟಾಳ್ ಅವರಾ...ನಿಮ್ಮ ಪಕ್ಷಕ್ಕೆ ಸೇರೋದಕ್ಕೆ ಆಗೊಲ್ಲಾರಿ....ಊಹುಂ...ನಿಮ್ಮ ಪಕ್ಷಕ್ಕೆ ನಿರ್ಮಾಪಕರು ಹಣ ಹಾಕ್ತಾರೇನ್ರಿ...ವೊದಲು ನನಗೆ ಸಂಭವಾನೆ ಒಳ್ಳೆದಾಗಿ ಕೊಡಬೇಕು. ಚೆಕ್ ಬ್ಯಾಡ ಕ್ಯಾಶ್. ಆ ಬಳಿಕ ಒಳ್ಳೆಯ ಕತೆ ಇರುವ ಸ್ಕ್ರಿಪ್ಟ್ ಬೇಕು. ಹಾಗೆಯೇ ಸಂಭಾಷಣೆ ಒಳ್ಳೆಯ ಕತೆಗಾರರಿಂದಲೇ ಬರೆಸಿ. ಪತ್ರಕರ್ತರಲ್ಲಿ ಹೇಗೆ ಹೇಗೆ ಮಾತನಾಡಬೇಕು ಎಂಬಿತ್ಯಾದಿ ಯಾಗಿ ಚೆನ್ನಾಗಿರಬೇಕು ಸಂಭಾಷಣೆ....ಇಲ್ಲ...ಇಲ್ಲ ಕಣ್ರೀ...ನಿಮ್ಮ ಎಮ್ಮೆ, ಕತ್ತೆಯ ಜೊತೆಗೆಲ್ಲ ಧರಣಿ ಮಾಡೋದಕ್ಕೆ ನನ್ನಿಂದ ಸಾಧ್ಯವಿಲ್ಲ. ಬೇಕಾದ್ರೆ ಜಗ್ಗೇಶನ್ನು ನಿಮ್ಮ ಪಕ್ಷಕ್ಕೆ ತೆಗೆದುಕೊಳ್ಳಿ....” ಎಂದು ಫೋನ್ ಕಟ್ ಮಾಡಿದರು.
ಎಂಜಲು ಕಾಸಿ ಕೇಳಿದ “ಮೇಡಂ ಯಾರು? ವಾಟಾಳ್ ನಾಗರಾಜ?”
ಹೂಜಾ ಗಾಂಧಿ ಮುಖ ಸಿಂಡರಿಸಿ ಹೇಳಿದರು “ಹೌದು. ನಾಳೆ ಅರ್ಧಗಂಟೆ ಅವರ ಪಕ್ಷ ಸೇರ್ಕೋಬೇಕಂತೆ. ಅರ್ಧಗಂಟೆಗೆ ಹತ್ತು ಲಕ್ಷ ಕೊಡ್ತಾರಂತೆ....ಕಾಂಗ್ರೆಸ್‌ನೋರು ಕರೆದಿದ್ದಾರೆ...ಅರ್ಧಗಂಟೆಗೆ ಒಂದು ಕೋಟಿ ಕೊಡ್ತಾರಂತೆ ಗೊತ್ತಾ....? ಆದ್ರೆ ನಾನು ಸೇರೋದು ಸೋನಿಯಾಗಾಂಧಿಗೆ ಇಷ್ಟ ಇಲ್ಲ. ಕರ್ನಾಟಕದಲ್ಲಿ ಆಕೆಗೆ ಪ್ರತಿಸ್ಪರ್ಧಿಯಾಗಿ  ಒಂದು ಗಾಂಧಿ ಹುಟ್ಟಿ ಬಿಟ್ಟು ಎಲ್ಲಿ ಪ್ರಧಾನಿ ಕುರ್ಚಿ ನಾನು ಕಸಿದುಕೊಳ್ತೇನೋ ಎನ್ನೋ ಭಯ ಆಕೆಗೆ...”
ಅಷ್ಟರಲ್ಲಿ ಮತ್ತೆ ಫೋನ್‌ರಿಂಗಣಿಸಿತು.... “ಹಲೋ... ಯಾವುದು ಹೊಸ ಪಕ್ಷವಾ? ಯಾರೂ ಗೌಡರ... ದೇವೇ ಗೌಡರ ಅಲ್ವಾ.... ಹಾಗಾದ್ರೆ... ಮತ್ಯಾರು? ಸುಳ್ಯದ ಗೌಡ್ರ....ಓಹೋ ಕೇಳಿದ್ದೇನೆ ನಿಮ್ಮ ಹೆಸರು... ನೀವು ದೇವೇಗೌಡ್ರ ಕಿರಿಯ ಮಗ ತಾನೆ? ಅಲ್ವಾ....ನೀವು ಬೇರೆಯೇ ಗೌಡ್ರ...ಹೊಸ ಪಕ್ಷ ಕಟ್ತೀರಾ...ನಿಮ್ಮ ಪಕ್ಷದಲ್ಲಿ ಎಷ್ಟು ನಿಮಿಷ ನಟಿಸಬೇಕು...?” ಎನ್ನುತ್ತಿದ್ದಂತೆಯೇ ಸ್ಕೂಪ್ ಸುದ್ದಿ ಸಿಕ್ಕಿದ ಖುಷಿಯಿಂದ ಎಂಜಲು ಕಾಸಿ ಅಲ್ಲಿಂದ ಪತ್ರಿಕಾಕಚೇರಿ ಕಡೆಗೆ ಓಡತೊಡಗಿದ.
ಮಾರ್ಚ್ -09-2013 

No comments:

Post a Comment