Sunday, December 15, 2013

‘‘ಕಸಬರಿಕೆ ಹಿಡಿಯುವುದಕ್ಕೆ ನಿಮ್ಮ ಹಸ್ತ ಬೇಕು....’’

ಡಿಸೆಂಬರ್ 15 ರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾಗಿರುವ ಬುಡಬುಡಿಕೆ

ಹಿಡಿಸೂಡಿಯ ಅಥವಾ ಕಸಬರಿಕೆಯ ಚಿಹ್ನೆಯನ್ನು ಇಟ್ಟುಕೊಂಡು ಕೇಜ್ರಿವಾಲ್ ಗೆದ್ದಿರುವುದು ಕಾಂಗ್ರೆಸ್‌ಗೆ ಚಿಂತೆಗೀಡು ಮಾಡಿತು. ‘‘ಹಿಡಿಸೂಡಿ ದೊಡ್ಡದೋ ಅದನ್ನು ಹಿಡಿಯುವ ಕೈ ದೊಡ್ಡದೋ...ನಮ್ಮ ಜನರಿಗೆ ಇಷ್ಟು ಗೊತ್ತಾಗುವುದಿಲ್ಲವೆಂದರೆ ಹೇಗೆ? ಇದು ನಿಜಕ್ಕೂ ಪ್ರಜಾಸತ್ತೆಯ ದುರಂತವೇ ಸರಿ’’ ಎಂದು ಕಾಂಗ್ರೆಸ್‌ನ ಚಿಂತನಾಶಿಬಿರದಲ್ಲಿ ಎಲ್ಲರೂ ತಲೆಯ ಮೇಲೆ ಕೈ ಹೊತ್ತು ಕೂತಿದ್ದರು.

ಕಸದ ಬುಟ್ಟಿಯೊಳಗೆ ಕೂತಿದ್ದ ಶೀಲಾ ದೀಕ್ಷಿತ್ ಅಲ್ಲಿಂದಲೇ ಕೂಗಿ ಹೇಳಿದರು ‘‘ನಮ್ಮ ಚಿಹ್ನೆಯನ್ನೇ ಬದಲಿಸಬೇಕು...ಹಿಡಿಸೂಡಿಯ ಹಾಗೆಯೇ ಇರುವ ಇನ್ನೊಂದು ಚಿಹ್ನೆಯನ್ನು ನಾವು ಬಳಸಬೇಕು...’’ ಎಂದು ಸಲಹೆ ನೀಡಿದರು.

ಇಡೀ ಕಾಂಗ್ರೆಸ್ ಕಸದಬುಟ್ಟಿಯೊಳಗೆ ಕೂತು ‘‘ಹೌದು ಹೌದು’’ ಎಂದಿತು.

‘‘ಈಗಿನ ಕಾಲದಲ್ಲಿ ಹಿಡಿಸೂಡಿಯಿಂದ ಕಸಗುಡಿ ಸುವ ಕಾಲ ಹೋಯಿತು...ನಾವು...ವ್ಯಾಕ್ಯುಂ ಕ್ಲೀನರ್ ಮಶಿನ್‌ನ್ನು ಚಿಹ್ನೆ ಮಾಡಿದ್ದಿದ್ದರೆ ಗೆಲ್ಲುತ್ತಿದ್ದೆವು. ನನ್ನ ಮನೆಯಲ್ಲೂ ಅಂತಹದೊಂದು ಕ್ಲೀನರ್ ಇದೆ. ಅದು ಎಲ್ಲವನ್ನೂ ಪೂರ್ತಿಯಾಗಿ ಕ್ಲೀನ್ ಮಾಡುತ್ತದೆ...ಒಂದು ಸಣ್ಣ ಧೂಳನ್ನೂ ಬಿಡುವುದಿಲ್ಲ’’ ಎಂದು ಶೀಲಾ ದೀಕ್ಷಿತ್ ಸಲಹೆ ನೀಡಿದರು.

‘‘ಹಿಡಿಸೂಡಿಯ ಬದಲು ವ್ಯಾಕ್ಯುಂ ಕ್ಲೀನರ್‌ನ್ನು ಚಿಹ್ನೆಯಾಗಿ ಇಟ್ಟುಕೊಂಡಿದ್ದರೆ ಕಾಂಗ್ರೆಸ್‌ನ ಆ ಎಂಟು ಸ್ಥಾನವೂ ಕಸದ ಬುಟ್ಟಿ ಸೇರಬೇಕಾಗುತ್ತಿತ್ತು. ದಿಲ್ಲಿ ಸಂಪೂ ರ್ಣ ಕ್ಲೀನ್ ಆಗಿ ಬಿಡುತ್ತಿತ್ತು. ಆಮ್ ಆದ್ಮಿ ಪಕ್ಷ ಹಿಡಿಸೂಡಿಯಿಂದ ಗುಡಿಸಿಯೇ ಇಷ್ಟೆಲ್ಲ ಅನಾಹುತ ಆಯಿತು. ಇನ್ನು ಆ ಮಶಿನ್ ಬಳಸಿದ್ದಿದ್ದರೆ ಕಾಂಗ್ರೆಸ್‌ನ ಸ್ಥಿತಿ ಏನಾಗಿ ಬಿಡುತ್ತಿತ್ತು ಗೊತ್ತೆ?’’ ಕಪಿಲ್ ಸಿಬಲ್ ಕೇಳಿದರು. ಶೀಲಾದೀಕ್ಷಿತ್ ನಡುಗಿದರು.

‘‘ನಾನೇ ಗುಡಿಸಿ ಹೋದ ಮೇಲೆ ಉಳಿದವರು ಇದ್ದರೆಷ್ಟು ಬಿಟ್ಟರೆಷ್ಟು...?’’ ಎಂದು ಕಸದ ಬುಟ್ಟಿಯೊಳಗೇ ನಿಟ್ಟುಸಿರಿಟ್ಟರು. ಅಷ್ಟರಲ್ಲಿ ವೀರಪ್ಪ ಮೊಯ್ಲಿ ಸಲಹೆ ನೀಡಿದರು ‘‘ನಾವು ಚುನಾವಣಾ ಆಯೋಗದ ಮೊರೆ ಹೋಗಬೇಕು. ಅವರು ಹಿಡಿಸೂಡಿಯನ್ನು ಚಿಹ್ನೆಯಾಗಿ ಬಳಸಿದ್ದೇನೋ ಸರಿ. ಆದರೆ ಅದನ್ನು ಬಳಸುವುದಕ್ಕೆ ಹಸ್ತವಿಲ್ಲದೇ ಸಾಧ್ಯವಿಲ್ಲ. ನಮ್ಮ ಹಸ್ತವನ್ನು ಬಳಸಿಕೊಂಡು ಅವರು ದಿಲ್ಲಿಯನ್ನು ಗುಡಿಸಿದ್ದು ಅಕ್ಷಮ್ಯ.

ಹಸ್ತವಿಲ್ಲದೆ ಹಿಡಿಸೂಡಿಯನ್ನು ಬಳಸಲು ಸಾಧ್ಯವೇ ಇಲ್ಲ. ಆದುದರಿಂದ ಆಮ್ ಆದ್ಮಿ ಪಕ್ಷ ನಮ್ಮ ಚಿಹ್ನೆಯಾದ ಹಸ್ತವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ನಾವು ಚುನಾವಣಾ ಆಯೋಗಕ್ಕೆ ದೂರು ನೀಡಬೇಕು. ಆಮ್ ಆದ್ಮಿ ಪಕ್ಷ ಪಡೆದಿರುವ ಅಷ್ಟು ಸ್ಥಾನಗಳು ಹಸ್ತಕ್ಕೆ ಸೇರಬೇಕು. ಆದುದರಿಂದ ಬಹುಮತವನ್ನು ಪಡೆದಿರುವುದು ನಾವೇ ಎಂದು ರಾಜ್ಯಪಾಲರಿಗೆ ಅರ್ಜಿ ನೀಡಬೇಕು...ನಾವೇ ದಿಲ್ಲಿಯನ್ನು ಆಳಬೇಕು...’’ ಎಂದು ಹೇಳಿ, ಮೆಚ್ಚುಗೆ ಗಾಗಿ ರಾಹುಲ್ ಗಾಂಧಿಯ ಮುಖ ನೋಡಿದರು.

ಆದರೆ ರಾಹುಲ್‌ಗಾಂಧಿಯ ಸಿಟ್ಟು ಇಳಿದಿರಲಿಲ್ಲ. ವೀರಪ್ಪ ಮೊಯ್ಲಿಯನ್ನು ನೋಡಿದವರೇ...‘‘ನಿಮ್ಮನ್ನು ಇಂಧನ ಸಚಿವ ಮಾಡುವ ಬದಲು, ಇದ್ದಿಲು ಸಚಿವ ಮಾಡಬೇಕಾಗಿತ್ತು...’’ ಎಂದು ಹೇಳಿ ಬಿಟ್ಟರು. ಮೊಯ್ಲಿ ಅವರ ಮುಖ ಇದ್ದಿಲಿನಂತೆ ಕಪ್ಪಿಟ್ಟಿತು.

‘‘ಸಾರ್, ನಮ್ಮ ಚಿಹ್ನೆಯನ್ನು ಹಸ್ತದ ಬದಲು ಕಸದ ಬುಟ್ಟಿಯಾಗಿ ಮಾರ್ಪಡಿಸಿದರೆ ಹೇಗೆ? ನಾನಂತು ಕಳೆದ 20 ವರ್ಷಗಳಿಂದ ಕಸದ ಬುಟ್ಟಿಯಲ್ಲೇ ಕೊಳೆ ಯುತ್ತಿದ್ದೇನೆ....ಕಸದ ಬುಟ್ಟಿಯಿಲ್ಲದೆ ನಮ್ಮ ನಾಡು ಶುಚಿಯಾಗುವುದಕ್ಕೆ ಸಾಧ್ಯವಿಲ್ಲ. ಗುಡಿಸಿದರೆ ಸಾಕಾಗು ವುದಿಲ್ಲ.

ಕಸವನ್ನು ಹಾಕಲು ಸರಿಯಾದ ಕಸದ ಬುಟ್ಟಿ ಇಲ್ಲದೆ ಇದ್ದರೆ ನಾಡು ಕೊಳೆತು ನಾರ ತೊಡಗು ತ್ತದೆ...ಬೆಂಗಳೂರನ್ನು ನೋಡಿದರೆ ಗೊತ್ತಾಗುವುದಿಲ್ಲವ? ಮೂಗು ಬಿಡ್ಲಿಕ್ಕೆ ಗೊತ್ತಿಲ್ಲ...’’ ಎಂದು ಹೊರಗೆ ಬಾಗಿಲ ಮರೆಯಲ್ಲಿ ನಿಂತು ಯಾರೋ ಸಲಹೆ ನೀಡಿದರು. ಯಾರಿರಬಹುದು? ಎಂದು ಸೋನಿಯಾಗಾಂಧಿ ಎದ್ದು ಇಣುಕಿ ನೋಡಿದರು. ನೋಡಿದರೆ ಕುದ್ರೋಳಿಯ ಜನಾರ್ದನ ಪೂಜಾರಿ. ಈಗಷ್ಟೇ ಮಂಗಳೂರಿನ ಕಸದ ತೊಟ್ಟಿಯಿಂದ ಎದ್ದು ಬಂದಿದ್ದರು ಅವರು. ದೀರ್ಘ ವಾದ ನಿಟ್ಟುಸಿರಿಟ್ಟು ಸೋನಿಯಾ ಮತ್ತೆ ಆಸನದಲ್ಲಿ ಕುಳಿತುಕೊಂಡರು.

‘‘ಅಮ್ಮ ನನ್ನನ್ನು ನೋಡಿ ಬಿಟ್ಟರು...ಅಮ್ಮ ನನ್ನನ್ನು ಎದ್ದು ನಿಂತು ನೋಡಿ ಬಿಟ್ಟರು’’ ಎಂದು ಬಾಗಿಲಲ್ಲೇ ಜನಾರ್ದನ ಪೂಜಾರಿ ಕುಣಿದಾಡ ತೊಡಗಿದರು. ಇನ್ನು ಅವಕಾಶ ಕೊಟ್ಟರೆ ಅಲ್ಲೇ ಉರುಳು ಸೇವೆ ಮಾಡ ಬಹುದು ಎಂದು ಸೋನಿಯಾಗಾಂಧಿಯವರಿಗೆ ಹೆದ ರಿಕೆಯಾಯಿತು.

ತಕ್ಷಣ ವಾಚ್‌ಮೆನ್‌ಗಳಿಗೆ ಕಣ್ಣಲ್ಲೇ ಸಲಹೆ ನೀಡಿದರು. ಅವರು ಪೂಜಾರಿಯವರನ್ನು ಎತ್ತಿಕೊಂಡು ಹೋಗಿ, ದಿಲ್ಲಿಯ ದೊಡ್ಡ ಕಸದ ತೊಟ್ಟಿಗೆ ಹಾಕಿ ಬಂದರು. ‘‘ಮಂಗಳೂರಿನ ಕಸದ ತೊಟ್ಟಿಗಿಂತ ದಿಲ್ಲಿಯ ಕಸದ ತೊಟ್ಟಿ ಚೆನ್ನಾಗಿದೆ. ಮಲಗುವುದಕ್ಕೆ, ಪತ್ರಿಕಾಗೋಷ್ಠಿ ಮಾಡುವುದಕ್ಕೆ ಇಲ್ಲಿ ಅನುಕೂಲ ಇದೆ...’’ ಎಂದು ಇಂತಹದೊಂದು ಕಸದ ತೊಟ್ಟಿಯಲ್ಲಿ ತನ್ನನ್ನು ಬಿಟ್ಟ ಭಾರತದ ಸ್ವಘೋಷಿತ ಮಾತೆ ಸೋನಿಯಾಗಾಂಧಿಯವರಿಗೆ ಕೃತಜ್ಞರಾದರು.

ಅಷ್ಟರಲ್ಲಿ ದಿಗ್ವಿಜಯ ಸಿಂಗ್ ಒಂದು ಸಲಹೆ ನೀಡಿ ದರು ‘‘ನಾವು ಮೊತ್ತ ಮೊದಲಾಗಿ, ಈ ದೇಶದ ಎಲ್ಲ ಕಸದ ಬುಟ್ಟಿಗಳನ್ನೂ ಆಧುನೀಕರಣಗೊಳಿಸಬೇಕು... ಅದರಿಂದ ಕಾಂಗ್ರೆಸ್‌ಗೆ ಭಾರೀ ಲಾಭವಿದೆ. ಅವರು ಕಸಬರಿಕೆಯಿಂದ ಗುಡಿಸಿ ಹಾಕಿದರೆ, ನಾವು ಆರಾಮ ವಾಗಿ ಕಸದ ಬುಟ್ಟಿಯಲ್ಲಿ ಜೀವನ ಮಾಡಬೇಕಲ್ಲ... ಅದುದರಿಂದ, ದೇಶದ ಎಲ್ಲ ಸಂಸದೀಯ ಕ್ಷೇತ್ರ ಗಳಲ್ಲಿರುವ ಕಸದ ಬುಟ್ಟಿಗಳನ್ನು ಹವಾನಿಯಂತ್ರಿತ ವಾಗಿ ಪರಿವರ್ತಿಸಬೇಕು.

ಅದರಲ್ಲಿ ಎಲ್ಲ ರೀತಿಯ ಆಧುನಿಕ ಸಲಕರಣೆಗಳೂ ಇರಬೇಕು. ಆರಾಮವಾಗಿ ಬದುಕುವ ಅವಕಾಶ ಅಲ್ಲಿ ಇರಬೇಕು...ಮುಖ್ಯವಾಗಿ ಪಾರ್ಲಿಮೆಂಟಿನಲ್ಲಿರುವ ಎಲ್ಲ ಅನುಭವ, ಸುಖ, ಸಂತೋಷ, ನೆಮ್ಮದಿ, ನಿದ್ದೆ ಕಸದಬುಟ್ಟಿಯೊಳಗೂ ಸಿಗುವ ಹಾಗಿರಬೇಕು...ಈ ಮುಂಜಾಗ್ರತೆಯನ್ನು ವಹಿಸಿದರೆ ಅದರ ಲಾಭವನ್ನು ಮುಂದೆ ಕಾಂಗ್ರೆಸ್ ಪಡೆದುಕೊಳ್ಳಬಹುದು. ಕಸದಬುಟ್ಟಿಯಲ್ಲಿ ಮುಂದಿನ ಜೀವನವನ್ನು ಸುಖವಾಗಿ ಕಳೆಯಬಹುದು...’’

ರಾಹುಲ್ ಗಾಂಧಿ ರೋಮಾಂಚನಗೊಂಡರು. ‘‘ದಿಗ್ಗು ಅಂಕಲ್ ಹೇಳಿರುವುದು ಸರಿಯಾಗಿದೆ...ತಕ್ಷಣ ಇದನ್ನು ಅಮೇಠಿಯಿಂದಲೇ ಜಾರಿಗೊಳಿಸಬೇಕು....ನನ್ನ ಕಸದ ಬುಟ್ಟಿಯಂತೂ ನನ್ನ ತಾತ ಮೋತಿಲಾಲ್ ನೆಹರೂ ಅವರ ಬಂಗಲೆ ‘ಆನಂದ ಭವನ’ದ ಥರ ಇರಬೇಕು...’’

ಮಗನ ರಾಜಕೀಯ ಮುಂದಾಲೋಚನೆಗೆ ಸೋನಿಯಾಗಾಂಧಿ ಖುಷಿ ಪಟ್ಟರು. ಹೀಗೆ ಆದಲ್ಲಿ ಮುಂದೊಂದು ದಿನ ನಾನು ನನ್ನ ತವರಿಗೆ ಹೋಗಿ ವಿಶ್ರಾಂತಿ ಜೀವನವನ್ನು ಆರಾಮವಾಗಿ ಕಳೆಯಬಹುದು ಎಂಬ ಆತ್ಮವಿಶ್ವಾಸ ಅವರಿಗೆ ಬಂತು. ಅಷ್ಟರಲ್ಲಿ ಪಿಎ ಬಂದು ಹೇಳಿದ ‘‘ಮೇಡಂ..ಯಾರೋ ಬಂದಿದ್ದಾರೆ....ನಿಮ್ಮನ್ನು ಭೇಟಿ ಮಾಡಬೇಕಂತೆ...’’

‘‘ಯಾರು ಬಂದಿರುವುದು?’’ ಇಡೀ ಸಭೆ ಒಕ್ಕೊರ ಲಲ್ಲಿ ಕೇಳಿತು. ಯಾಕೆಂದರೆ ಈ ಸ್ಥಿತಿಯಲ್ಲೂ ನಮ್ಮನ್ನು ಭೇಟಿ ಮಾಡಲು ಬಂದಿರುವ ಮಹಾತ್ಮ ಯಾರು ಎನ್ನುವುದರ ಕುರಿತಂತೆ ಅವರಿಗೆ ಕುತೂಹಲವಿತ್ತು. ‘‘ಯಾರೋ ಗೊತ್ತಿಲ್ಲ. ಆದರೆ ಅವರ ಕೈಯಲ್ಲಿ ಹಿಡಿಸೂಡಿಯಿದೆ...’’ ಪಿಎ ಹೇಳಿದ. ಹಿಡಿಸೂಡಿ ಎನ್ನುವುದು ಕೇಳಿದ್ದೇ ಎಲ್ಲ ಕಾಂಗ್ರೆಸ್ ಸಂಸದರೂ ತಮ್ಮ ತಮ್ಮ ಕಸದಬುಟ್ಟಿಯೊಳಗೆ ಅಡಗಿ ಕೊಂಡರು.

ಸ್ವಲ್ಪ ಹೊತ್ತಾದ ಬಳಿಕ ಹೊರಗಿನಿಂದ ಒಂದು ಜನ ಹಿಡಿಸೂಡಿಯೊಂದಿಗೆ ಬಂತು. ತಲೆಗೆ ಟೋಪಿ ಹಾಕಿ ಕೊಂಡಿತ್ತು. ಕೈಯಲ್ಲಿ ಇನ್ನು ಒಂದಿಷ್ಟು ಟೋಪಿ ಇತ್ತು. ಬಹುಶಃ ಇತರರಿಗೆ ಹಾಕುವುದಕ್ಕಾಗಿ ಅದನ್ನು ಹಿಡಿದುಕೊಂಡಿರಬೇಕು. ‘‘ನಾನು ಮೇಡಂ... ಕೇಜ್ರಿವಾಲ್...’’ ಎಂದು ಬಂದ ವ್ಯಕ್ತಿ ಕೂಗಿ ಹೇಳಿತು. ಇದು ಕೇಳಿ ಅಡಗಿ ಕೂತವರಿಗೆಲ್ಲ ಮುಜುಗರ ವಾಯಿತು.

‘‘ಮೇಡಂ...ದಯವಿಟ್ಟು ಕಸದ ಬುಟ್ಟಿಯಿಂದ ಹೊರಗೆ ಬನ್ನಿ...ಕಸಬರಿಕೆ ಹಿಡಿಯುವುದಕ್ಕೆ ನನಗೆ ನಿಮ್ಮ ಸಹಾಯ ‘ಹಸ್ತ’ ಬೇಕಾಗಿದೆ...ಇಲ್ಲವಾದರೆ ದಿಲ್ಲಿ ಅನಾಥವಾಗುತ್ತದೆ...ನಾವು ಕಸಬರಿಕೆಯ ಜೊತೆಗೆ ಅಧಿಕಾರ ಹಿಡಿಯುತ್ತೇವೆ...ನೀವು ನಿಮ್ಮ ಸಹಾಯ ಹಸ್ತ ನೀಡಿ....’’

ಕೇಜ್ರಿವಾಲ್ ಹೀಗೆ ಹೇಳಿದ್ದೇ ತಡ ‘‘ನನಗೆ ಸಚಿವ ಸ್ಥಾನ...ನನಗೆ ಸಚಿವ ಸ್ಥಾನ...’’ ಎಂದು ಕಸದಬುಟ್ಟಿಯೊಳಗಿಂದ ಕಾಂಗ್ರೆಸ್ ನಾಯಕರು ಎದ್ದು ಓಡಿ ಕೇಜ್ರಿವಾಲ್‌ರನ್ನು ಮುತ್ತಿಕೊಂಡರು.  


1 comment: