Wednesday, July 22, 2015

ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!

ಪ್ರಧಾನಿ ನರೇಂದ್ರ ಮೋದಿಯವರು "ಎರಡನೇ ಹಸಿರು ಕ್ರಾಂತಿ ತುರ್ತಾಗಿ ಆಗಬೇಕಾಗಿದೆ" ಎಂದು ಕರೆ ಕೊಟ್ಟ ಹಿನ್ನೆಲೆಯಲ್ಲಿ ಬರೆದ ಬುಡಬುಡಿಕೆ. ಜುಲೈ -05-2015ರ ವಾರ್ತಾ ಭಾರತಿ ದೈನಿಕದಲ್ಲಿ ಪ್ರಕಟವಾಗಿದೆ. 

‘‘ಗ್ರೀನ್ ರೆವಲ್ಯೂಷನ್ ಚಾಹಿಯೇ...ಹಸಿರು ಕ್ರಾಂತಿ ನಡೆಯಲಿ...ತುರ್ತಾಗಿ ಹಸಿರುಕ್ರಾಂತಿ ನಡೆಯಲಿ...’’
ನರೇಂದ್ರ ಮೋದಿಯವರು ದಿಲ್ಲಿಯಲ್ಲಿ ಕರೆ ಕೊಟ್ಟಿದ್ದೇ ತ್ರಿಶೂಲ ಹಿಡಿದು ನಿಂತಿದ್ದ ಸಂಘಪರಿವಾರದ ಜನರ ಕಿವಿ ನಿಮಿರಿತು. ಅದ್ಯಾವುದೋ ರಕ್ತಕ್ರಾಂತಿಗೆ ಕರೆ ಕೊಡುತ್ತಿದ್ದಾರೆ ಎಂದು ಭಾವಿಸಿ ಅವರು ತಮ್ಮ ತಮ್ಮ ತ್ರಿಶೂಲಗಳನ್ನು ಹರಿತ ಮಾಡಿಕೊಳ್ಳತೊಡಗಿದರು. ಅದ್ಯಾವುದೋ ‘‘ಹಸಿರು..ಹಸಿರು...’’ ಎನ್ನುತ್ತಿರುವುದು ಮುಸ್ಲಿಮರನ್ನುದ್ದೇಶಿಸಿ ಹೇಳುತ್ತಿದ್ದಾರೆ...ಎಂದು ಅವರು ಭಾವಿಸಿದರು. ಹಸಿರು ಮುಸ್ಲಿಮರ ಬಣ್ಣವಾಗಿದ್ದು, ಅವರ ವಿರುದ್ಧ ಕ್ರಾಂತಿ ಮಾಡಿರಿ ಎಂದು ಕರೆ ನೀಡುತ್ತಿದ್ದಾರೆ ಎಂದು ಭಾವಿಸಿದರು. ಆದುದರಿಂದ ಅವರು ತಮ್ಮ ಪೆಟ್ರೋಲ್, ತ್ರಿಶೂಲ, ಕತ್ತಿ ಇತ್ಯಾದಿಗಳ ಜೊತೆಗೆ ಹಸಿರು ಕ್ರಾಂತಿ ಸಿದ್ಧತೆ ನಡೆಸತೊಡಗಿದರು.
ಅಷ್ಟರಲ್ಲಿ ಯಾರೋ ಹೇಳಿದರು ‘‘ಅದು ನಮ್ಮನ್ನುದ್ದೇಶಿಸಿ ಹೇಳಿದ್ದಲ್ಲವಂತೆ...ಅದು ಬೇರೆ ಕ್ರಾಂತಿಯಂತೆ....’’
‘‘ಬೇರೆ ಕ್ರಾಂತಿಯೆಂದರೆ’’...? ಇನ್ನೊಬ್ಬ ಕೇಸರಿ ಕ್ರಾಂತಿಕಾರಿ ಕೇಳಿದ.
‘‘ಅದು ಹೊಲದಲ್ಲಿ ಮಾಡುವ ಕ್ರಾಂತಿಯಂತೆ...ಹೊಲದಲ್ಲಿ ಅಕ್ಕಿ ಬೆಳೀಬೇಕಂತೆ...’’ ಮಗದೊಬ್ಬ ಉತ್ತರಿಸಿದ.
ಸ್ವಯಂ ಸೇವಕರಿಗೆ ತಲೆ ಧಿಂ ಅಂದಿತು ‘ಸಂಘಪರಿವಾರದ ನಿಷ್ಠಾವಂತ ಕಾರ್ಯಕರ್ತರಾಗಿ ಹೊಲದಲ್ಲಿ ಅಕ್ಕಿ ಬೆಳೆಯುವುದೇ? ಅದೂ ನಾವು? ಹಿಂದುತ್ವದ ಶೌರ್ಯ, ವೀರ ಪರಾಕ್ರಮಗಳಿಗೆ ಇದು ಅವಮಾನವಲ್ಲವೇ?’’’ ಒಬ್ಬ ಕೇಳಿದ.
‘ಮೊಘಲರ ವಿರುದ್ಧ ಹೋರಾಡಿದ ಶಿವಾಜಿ ಅಕ್ಕಿ ಬೆಳೆದು ಕ್ರಾಂತಿ ಮಾಡಿರುವುದಲ್ಲ...ಹೀಗಿರುವಾಗ ನಾವು ಅಕ್ಕಿ ಬೆಳೆದು ಕ್ರಾಂತಿ ಮಾಡಿದರೆ ಶಿವಾಜಿಗೆ ಅವಮಾನ ಮಾಡಿದಂತಾಗುವುದಿಲ್ಲವೇ?’
‘ಇಷ್ಟಕ್ಕೂ ಅಕ್ಕಿ ಬೆಳೆಯುವುದು ಹೇಗೆ?’ ಮಗದೊಬ್ಬ ಬಜರಂಗಿ ಕೇಳಿದ.
 ‘‘ಅಕ್ಕಿಯನ್ನು ನಾವು ಯಾಕೆ ಬೆಳೆಯಬೇಕು? ಕೋಮುಗಲಭೆ ನಡೆದಾಗ ಅಂಗಡಿಗಳಿಗೆ ನುಗ್ಗಿ ದೋಚಿದರಾಯಿತಲ್ಲವೇ? ಅನಗತ್ಯವಾಗಿ ಇಡೀ ವರ್ಷ ಗದ್ದೆಯಲ್ಲಿ ಕೆಲಸ ಮಾಡಿ ಮೈ ಕೈ ಕೊಳಕು ಮಾಡಿಕೊಳ್ಳುವುದು ಸರಿಯೇ?’’ ಇನ್ನೊಬ್ಬ ಕುಖ್ಯಾತ ತಲೆಕೆಡಿಸಿಕೊಂಡ. ಈತ ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ.
‘‘ಇಷ್ಟಕ್ಕೂ ಈಗ ಅಕ್ಕಿ ಯಾಕೆ ಬೇಕು? ದೇಶಕ್ಕೆ ಬೇಕಾಗಿರುವುದು ಅಣುಬಾಂಬು, ಸ್ಫೋಟಕ ತ್ರಿಶೂಲ, ರಾಮಮಂದಿರ ಮೊದಲಾದವುಗಳಲ್ಲವೆ? ಇವೆಲ್ಲ ಇಲ್ಲದೇ ಇದ್ದುದರಿಂದ ಅಲ್ಲವೇ ಈ ದೇಶ ಇಷ್ಟು ಹಿಂದುಳಿದಿರುವುದು. ಅಕ್ಕಿ ಬೆಳೆಯಿರಿ ಎಂದು ಹೇಳುವುದಕ್ಕೆ ಹಿಂದುತ್ವ ಸರಕಾರ ಅಸ್ತಿತ್ವಕ್ಕೆ ಬರಬೇಕಾಗಿತ್ತೇ?’’ ಇನ್ನೊಬ್ಬ ಮುಖಂಡ ಅರ್ಥವಾಗದೆ ತಲೆಕೆರೆದುಕೊಂಡ.
‘‘ಪಾಕಿಸ್ತಾನದ ಜೊತೆಗೆ ಯುದ್ಧ ಮಾಡುವುದನ್ನೇ ಪರೋಕ್ಷವಾಗಿ ಹಸಿರುಕ್ರಾಂತಿ ಕರೆದಿರಬಹುದೇ?’’ ಇನ್ನೊಬ್ಬ ಹಿರಿಯ ಬಜರಂಗಿ ತಲೆ ಓಡಿಸಿದ.
ಎಲ್ಲರಿಗೂ ಹೌದು ಹೌದೆನಿಸಿತು. ಬಹುಶಃ ಬಹಿರಂಗವಾಗಿ ‘ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ’’ ಎಂದು ಕರೆ ಕೊಟ್ಟರೆ ವಿದೇಶಾಂಗ ನೀತಿಯನ್ನು ಉಲ್ಲಂಘಿಸಿದಂತಾಗುತ್ತದೆ. ಆದುದರಿಂದ ನರೇಂದ್ರ ಮೋದಿಯವರು ಜಾಣತನದಿಂದ ‘ಹಸಿರು’ ಕ್ರಾಂತಿಗೆ ಕರೆಕೊಟ್ಟು, ಭಾರತೀಯ ಯೋಧರನ್ನು ಬಡಿದೆಬ್ಬಿಸಿದ್ದಾರೆ. ಶೀಘ್ರದಲ್ಲೇ ಪಾಕಿಸ್ತಾನಕ್ಕೆ ನರೇಂದ್ರ ಮೋದಿಯವರು ಪಾಠ ಕಲಿಸಲಿದ್ದಾರೆ ಎಂದು ಸ್ವಯಂ ಸೇವಕರಲ್ಲ ಹಿರಿಹಿರಿ ಹಿಗ್ಗಿದರು.
***
ಇತ್ತ ಎಲ್ಲ ಆರೆಸ್ಸೆಸ್ ಕಚೇರಿಗಳಲ್ಲೂ ಸಭೆ ಕರೆಯಲಾಯಿತು. ಸಾಕ್ಷಾತ್ ನರೇಂದ್ರ ಮೋದಿಯವರೇ ‘ಹಸಿರು ಕ್ರಾಂತಿ’ಗೆ ಕರೆ ಕೊಟ್ಟಿದ್ದಾರೆ ಎಂದ ಮೇಲೆ ಕೃಷಿಗೆ ತಯಾರು ನಡೆಸಲೇಬೇಕಲ್ಲವೆ? ಎಲ್ಲರೂ ತಮ್ಮ ತಮ್ಮ ಪ್ಯಾಂಟು, ಕಚ್ಚೆಗಳನ್ನು ಕಳಚಿಟ್ಟು ಲಂಗೋಟಿ ಕಾಣುವಂತೆ ದೊಗಳೆ ಚೆಡ್ಡಿಗಳನ್ನು ಧರಿಸಿ ಕೃಷಿ ಕಾರ್ಯಕ್ಕಿಳಿದರು. ಈವರೆಗೆ ಶಾಖೆಯಲ್ಲಿ ಕಬಡ್ಡಿ ಆಡಿ ಮಾತ್ರ ಗೊತ್ತಿದ್ದ ಸರಸಂಘಚಾಲಕರು ಅಕ್ಕಿ ಕ್ರಾಂತಿಯ ಕುರಿತಂತೆ ತಮ್ಮ ಗಣವೇಷಧಾರಿಗಳಿಗೆ ತರಬೇತಿ ನೀಡತೊಡಗಿದರು.
ಮೊದಲು ಗದ್ದೆಯನ್ನು ಉಳಬೇಕು...ಎನ್ನುವುದರಿಂದ ಅವರು ಆರಂಭಿಸಿದರು.
‘‘ಗದ್ದೆಯನ್ನು ಯಾವುದರಿಂದ ಉಳುವುದು?’’ ಎನ್ನುವುದೇ ಅವರ ಸಮಸ್ಯೆಯಾಯಿತು.
‘‘ಗೋವುಗಳಿಂದ ಗದ್ದೆ ಉಳುವುದೇ? ಶಾಂತಂ ಪಾಪಂ!’’ ಎಂದು ಲಾಠಿಯಿಂದ ಸರಸಂಘಚಾಲಕರು ತಲೆ ಚಚ್ಚಿಕೊಂಡರು.
‘‘ಈ ದೇಶದಲ್ಲಿ ಗೋವುಗಳನ್ನು ಪೂಜಿಸುವುದಕ್ಕೋಸ್ಕರ ಸಾಕುತ್ತಿದ್ದರು. ಯಾವಾಗ ಗೋವುಗಳನ್ನು ಇಂತಹ ಕೆಲಸಕ್ಕೆ ಬಳಸಿ ಹಿಂಸೆ ನೀಡಲಾಯಿತೋ ಅಲ್ಲಿಂದ ಭಾರತ ಪತನಗೊಳ್ಳತೊಡಗಿತು...’’ ಎಂದು ಶಾಖೆಯ ಮುಖಂಡರು ಭಾಷಣ ಮಾಡತೊಡಗಿದರು.
‘‘ಆದರೆ ನಮ್ಮ ತಾತ ಗೋವುಗಳಿಂದಲೇ ಗದ್ದೆ ಉಳುತ್ತಿದ್ದರು’’ ಶಾಖೆಗೆ ಸೇರಿದ ಹೊಸ ಹುಡುಗನೊಬ್ಬ ಅನುಮಾನದಿಂದ ಪ್ರಶ್ನಿಸಿದ.
‘‘ಅದೆಲ್ಲ ಮ್ಲೇಚ್ಛರ ಸಂಚು. ಹಿಂದೆಲ್ಲ ದಲಿತರನ್ನು ಬಳಸಿಕೊಂಡು ಗದ್ದೆ ಉಳುತ್ತಿದ್ದೆವು. ಆಗ ಇಡೀ ಭಾರತ ಸುಖ, ಸಂತೋಷದಿಂದ ತುಂಬಿ ತುಳುಕುತ್ತಿದ್ದವು. ದಲಿತರು ಸಂತೋಷದಿಂದ ನೇಗಿಲ ನೊಗವನ್ನು ಹೊತ್ತುಕೊಂಡು ಗದ್ದೆಯನ್ನು ಉಳುತ್ತಿದ್ದರು. ಆಗ ಅವರಿಗೆ ನಿರುದ್ಯೋಗ ಸಮಸ್ಯೆಯೇ ಇರಲಿಲ್ಲ. ಆದರೆ ಯಾವಾಗ ಮ್ಲೇಚ್ಛರು, ಬ್ರಿಟಿಷರು ಭಾರತಕ್ಕೆ ಬಂದರೋ ಅವರು ಉಪಾಯವಾಗಿ ದಲಿತರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿದರು. ಅವರ ಉದ್ಯೋಗವನ್ನು ಕಿತ್ತುಕೊಂಡರು. ದೇವತೆಯಾಗಿದ್ದ ಗೋವುಗಳನ್ನು ಗದ್ದೆಯಲ್ಲಿ ಉಳುವುದಕ್ಕೆ ಬಳಸಿದರು. ಇದರಿಂದ ಭಾರತದಲ್ಲಿ ಕೃಷಿ ಇಳುವರಿ ಕಡಿಮೆ ಬರತೊಡಗಿತು. ಇದೀಗ ಹಸಿರುಕ್ರಾಂತಿ ಮಾಡಬೇಕಾದ ಸ್ಥಿತಿ ಬಂದಿದೆ...’’ ಎಂದು ಸರ ಸಂಘಚಾಲಕರು ಗೊಳೋ ಎಂದು ಅಳ ತೊಡಗಿದರು.
***
ನರೇಂದ್ರ ಮೋದಿಯವರು ‘‘ಹಸಿರು ಕ್ರಾಂತಿ...ತಕ್ಷಣ ಹಸಿರು ಕ್ರಾಂತಿ...’’ ಬೊಬ್ಬಿಟ್ಟದ್ದೇ ತಡ, ಸಾಕ್ಷಾತ್ ಶ್ರೀಮತಿ ಇಂದಿರಾಗಾಂಧಿಯೇ ಮೋದಿಯ ರೂಪದಲ್ಲಿ ಅವತಾರ ಎತ್ತಿದ್ದಾರೆ ಎನ್ನುವುದು ಪತ್ರಕರ್ತ ಎಂಜಲು ಕಾಸಿಗೆ ಮನವರಿಕೆಯಾಯಿತು. ರಾಜಪಥದಲ್ಲಿ ಯೋಗ ಮಾಡಿ ಮರಳುತ್ತಿರುವ ಮೋದಿಯನ್ನು ಅದು ಹೇಗೋ ಅವನು ಭೇಟಿ ಮಾಡಿ, ಸಂದರ್ಶನ ಮಾಡ ತೊಡಗಿದ.
‘‘ಸಾರ್...ಹಸಿರು ಕ್ರಾಂತಿಗಾಗಿ ಏನೇನು ಯೋಜನೆ ಹಾಕಿಕೊಂಡಿದ್ದೀರಿ....?’’
‘‘ನೋಡಿ...ರೈತರೆಲ್ಲ ಬಹಳ ಸೋಮಾರಿಗಳಾಗಿದ್ದಾರೆ. ಈ ಕುರಿತಂತೆ ನಾಡಿನ ಚಿಂತಕರು, ಕವಿಗಳು, ಬೃಹತ್ ಕಾದಂಬರಿಕಾರರು, ಜ್ಞಾನಪೀಠಿಗಳು, ಜ್ಞಾನಪೀಠ ವಂಚಿತರು ಎಲ್ಲರೂ ಚಿಂತೆಗೊಳಗಾಗಿದ್ದಾರೆ. ರೈತರು ಸೋಮಾರಿಗಳಾಗಿರುವುದೇ ನಮ್ಮ ಕೃಷಿ ಹಿಂದುಳಿಯಲು ಕಾರಣ. ಆದ್ದರಿಂದ, ರೈತರನ್ನು ಬಡಿದೆಬ್ಬಿಸಲು ಬೇಕಾದ ಎಲ್ಲ ಕ್ರಮಗಳನ್ನು ನಾವು ಮಾಡಿದ್ದೇವೆ...ಈಗಾಗಲೇ ಇದಕ್ಕಾಗಿ ವಿಶೇಷ ಪೊಲೀಸರನ್ನು, ಮಿಲಿಟರಿಯನ್ನು ನೇಮಿಸಬೇಕೆಂದಿದ್ದೇವೆ...ಅವರು ಸೋಮಾರಿಗಳಾಗಿ ಉಂಡು ಮಲಗದಂತೆ ನೋಡಿಕೊಂಡು ಚೆನ್ನಾಗಿ ದುಡಿಸಿ, ದೇಶದಲ್ಲಿ ಹಸಿರು ಕ್ರಾಂತಿಯನ್ನುಂಟು ಮಾಡುವುದು ನಮ್ಮ ಗುರಿ...’’
‘‘ಇದಕ್ಕಾಗಿ ವಿಶೇಷ ಹಣವನ್ನು ಬಿಡುಗಡೆ ಮಾಡಿದ್ದೀರಾ ಸಾರ್?’’ ಕಾಸಿ ಆತಂಕದಿಂದ ಕೇಳಿದ.
‘‘ಮಾಡಿದ್ದೇವೆ. ಈಗಾಗಲೇ ದೇಶದಲ್ಲಿರುವ ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ಸಾವಯವ ಕೃಷಿ ಯೋಜನೆಗಾಗಿ ಹಲವಾರು ಕೋಟಿಗಳನ್ನು ಬಿಡುಗಡೆ ಮಾಡಿದ್ದೇವೆ. ಅವರೆಲ್ಲ ಕೃಷಿಕರಿಗೆ ಸಾವಯವ ಗೊಬ್ಬರ ಬಳಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ಹಾಗೆಯೇ ಅನಿಲ್ ಅಂಬಾನಿ, ಅಧಾನಿಯಂತಹ ಶ್ರೇಷ್ಠಾತಿಶ್ರೇಷ್ಠ ಕೃಷಿಕರಿಗೆ ಬೇಕಾಗುವ ಭೂಮಿಯನ್ನು ಸೋಮಾರಿ ರೈತರಿಂದ ಕಿತ್ತು ಕೊಡುವ ಯೋಜನೆಯೂ ಇದೆ. ಸೋಮಾರಿ ರೈತರೇ ಭೂಮಿ ಬಿಟ್ಟು ತೊಲಗಿ, ದುಡ್ಡಿದ್ದವನೇ ಭೂಮಿಯ ಒಡೆಯ ಮೊದಲಾದ ಘೋಷಣೆ, ಯೋಜನೆಗಳನ್ನು ಶೀಘ್ರ ಜಾರಿಗೆ ತರಲಿದ್ದೇವೆ...’’ ಎನ್ನುತ್ತಿದ್ದಂತೆಯೇ ಪತ್ರಕರ್ತ ಕಾಸಿಯ ಕಣ್ಣ ಮುಂದೆ ಯಾಕೋ ಹಸಿರಿನ ಬದಲಿಗೆ ಕೆಂಪು ಬಣ್ಣ ಆವರಿಸಿಕೊಳ್ಳತೊಡಗಿತು. ‘‘ಈಗ ಬಂದೆ ಸಾರ್...’’ ಎಂದವನೇ ಅಲ್ಲಿಂದ ನೇರವಾಗಿ ಬೆಂಗಳೂರಿನ ಬಸ್ ಹತ್ತಿದ.
ಜುಲೈ -05-2015

No comments:

Post a Comment