Sunday, April 13, 2014

ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?

 ವಾರ್ತಾಭಾರತಿ ದೈನಿಕದರವಿವಾರ - ಏಪ್ರಿಲ್ -13-2014ರ ಸಂಚಿಕೆಯಲ್ಲಿ  ಪ್ರಕಟವಾದ ಬುಡಬುಡಿಕೆ 

ವಿಶೇಷ ಸುದ್ದಿ ಏನು ಇಲ್ಲ ಎಂದು ಸಂಪಾದಕೀಯ ವಿಭಾಗದಲ್ಲಿ ಪತ್ರಕರ್ತ ಎಂಜಲು ಕಾಸಿ ಕಂಗಾಲಾಗಿ ಕುಳಿತಿರಲಾಗಿ, ಅದೇ ಹೊತ್ತಿಗೆ ಸಂಪಾದಕರ ಕರೆಯೂ ಮರಣದ ಗಂಟೆಯಂತೆ ಬಾರಿಸಿತು ‘‘ಏನ್ರೀ...ಡೆಡ್ ಲೈನ್ ಹೊತ್ತಾಯಿತು...ಇನ್ನೂ ಲೀಡ್ ಸುದ್ದಿ ಬಂದಿಲ್ಲ....’’
‘‘ವಿಶೇಷ ಸುದ್ದಿ ಏನೂ ಇಲ್ಲ ಸಾರ್....ಇಂಟರ್ಯೂ ಮಾಡೋಣ ಅಂದ್ರೆ ಚುನಾವಣಾ ಆಯೋಗ ಬಿಡ್ತಾ ಇಲ್ಲ ಸಾರ್....’’ ಕಾಸಿ ತಡಬಡಿಸಿ ಉತ್ತರಿಸಿದ.
‘‘ಗುಪ್ತಚರ ಇಲಾಖೆಗೆ ಫೋನ್ ಮಾಡ್ರಿ... ಯಾಸಿನ್ ಭಟ್ಕಳನ ಕುರಿತಂತೆ ಏನಾದ್ರೂ ಸುದ್ದಿ ಇದ್ದೇ ಇರತ್ತೇ...ಅದನ್ನು ಅವರು ಗುಪ್ತವಾಗಿ ನಿಮ್ಮಿಂದಿಗೆ ಹಂಚಿಕೊಳ್ಳುತ್ತಾರೆ....’’ ಸಂಪಾದಕರು ಸಲಹೆ ನೀಡಿದ್ದೇ...ಪತ್ರಕರ್ತ ಎಂಜಲು ಕಾಸಿ ಗುಪ್ತಚರ ಇಲಾಖೆಗೆ ಫೋನ್ ಮಾಡಿದ.
ಅತ್ತಲಿಂದ ಮಾತು ಬಾಂಬಿನಂತೆ ತೂರಿ ಬಂತು ‘‘ಹಲೋ...ಇಂಟೆಲಿಜೆಂಟ್ಸ್ ವಿಭಾಗ...ಗುಪ್ತ್ ಚರ ಇಲಾಖೆ...ಯಾಸಿನ್ ಭಟ್ಕಳ ಮಾತಾಡ್ತಾ ಇದ್ದೇನೆ....ನಿಮಗೇನು ಬೇಕು...’’
ಕಾಸಿಯ ಮೈಯೆಲ್ಲ ಕಂಪಿಸಿತು ‘‘ಸಾರ್...ನೀವು ಯಾಸಿನ್ ಭಟ್ಕಳ ಅವ್ರಾ...ನೀವು ಗುಪ್ತಚರ ಇಲಾಖೆಯಲ್ಲಿ ಕುಳಿತು ಅದೇನು ಮಾಡ್ತಾ ಇದ್ದೀರಿ ಸಾರ್...’’ ಅಚ್ಚರಿಯಿಂದ ಕೇಳಿದ.
‘‘ನಾನು ಗುಪ್ತಚರ ಇಲಾಖೆಯ ಪತ್ರಿಕಾವಕ್ತಾರ ಕಣ್ರೀ....ಎಲ್ಲ ಪತ್ರಿಕೆಗಳಿಗೆ ಗುಪ್ತವಾಗಿ ನನ್ನ ಕುರಿತ ಸುದ್ದಿಗಳನ್ನು ಹಂಚುವುದೇ ನನ್ನ ಕೆಲಸ. ಇತ್ತೀಚೆಗೆ ಸುದ್ದಿಸಂಸ್ಥೆಗಳೆಲ್ಲ ಸುದ್ದಿಗಳಿಲ್ಲದೆ ಬರಗಾಲ ಎದುರಿಸುತ್ತಿದೆ. ಆದುದರಿಂದ ಸರಕಾರವೇ ನನ್ನನ್ನು ಪ್ರತಿ ದಿನ ಮುಖ್ಯ ಸುದ್ದಿಯನ್ನು ಕೊಡಲು ಗುಪ್ತಚರ ಇಲಾಖೆಯಲ್ಲಿ ನೇಮಕ ಮಾಡಿದೆ...ಲೀಡ್ ಸುದ್ದಿ ಇಲ್ಲದೆ ಕಂಗಾಲಾಗಿರುವ ಪತ್ರಿಕೆಗಳಿಗೆ ಸುದ್ದಿ ಹಂಚುವುದೇ ನನ್ನ ಕೆಲಸ ಕಣ್ರೀ...ಹೇಳಿ...ನಿಮಗೆ ಯಾವ ಥರ ಸುದ್ದಿ ಬೇಕು? ಲೀಡ್ ಸುದ್ದಿ ಬೇಕೋ...ಚುನಾವಣಾ ಸುದ್ದಿ ಬೇಕೋ...ಹವಾಮಾನ ಸುದ್ದಿ ಬೇಕೋ...ಒಳಗಿನ ಪುಟಕ್ಕೆ ತುಂಬಿಸಲು ಸುದ್ದಿ ಬೇಕೋ...ಮ್ಯಾಗಸಿನ್‌ಗೆ ವರ್ಣರಂಜಿತ ಲೇಖನ ಬೇಕೋ...ಅದೇನೇ ಬೇಕಾದರೂ ನಾನು ಕೊಡುತ್ತೇನೆ...’’
ಕಾಸಿಯ ಹೆಗಲ ಮೇಲಿರುವ ಭಾರವೆಲ್ಲ ಇಳಿದಂತಾಯಿತು ‘‘ಸಾರ್...ಫ್ರಂಟ್ ಪೇಜ್‌ಗೆ ಮುಖ್ಯ ಸುದ್ದಿ ಇಲ್ಲಾ ಸಾರ್...ಏನಾದರೂ...ಕೊಡಿ...’’
‘‘ಇದು ಮೂಲವ್ಯಾಧಿಯ ಸುದ್ದಿ...ಆದುದರಿಂದ ಸ್ವಲ್ಪ ಜಾಗರೂಕತೆಯಿಂದ ಮೂಲಗಳಿಂದ ಎಂದು ಬಳಸಿ ಈ ಸುದ್ದಿಯನ್ನು ನೀವು ನೀಡಬೇಕಾಗುತ್ತದೆ’’ ಯಾಸಿನ್ ಭಟ್ಕಳ ಹೇಳಿದ.
‘‘ಖಂಡಿತಾ ಸಾರ್...ನಾವು ಮೂಲ ವ್ಯಾಧಿ ಸುದ್ದಿಗಳನ್ನು ಮಾತ್ರ ಹಾಕೋದು ಸಾರ್. ಮೂಲಗಳಿಂದ ತಿಳಿದು ಬಂದಿದೆ, ಮೂಲಗಳು ತಿಳಿಸಿವೆ, ಮೂಲದಿಂದ ಬಂದಿದೆ...ಮುಖ್ಯವಾಗಿ ನಮಗೆ ಗುಪ್ತಚರ ಇಲಾಖೆಯ ಮೂಲವ್ಯಾಧಿ ಎಂದರೆ ತುಂಬಾ ಇಷ್ಟ ಸಾರ್...’’ ಕಾಸಿ ಹೇಳಿದ.
‘‘ಸರಿ ಹಾಗಾದರೆ ಬರೆದುಕೊಳ್ಳಿ...ನಾಗಸಾಕಿ, ಹಿರೋಷಿಮಾ ಸ್ಫೋಟದಲ್ಲಿ ತನ್ನ ಕೈವಾಡ ಇರುವುದು ನಿಜ ಎನ್ನುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ಸ್ಪಷ್ಟಪಡಿಸಿವೆ. ಈ ಸ್ಫೋಟ ನಡೆಸುವ ಒಂದು ದಿನದ ಹಿಂದೆ ಉಸಾಮ ಬಿನ್ ಜೊತೆಗೆ ಮಾತುಕತೆ ನಡೆಸಿದ ಭಟ್ಕಳ್, ಅಂತಹದೇ ಸ್ಫೋಟವನ್ನು ಗುಜರಾತ್‌ನಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದೂ ಮೂಲಗಳು ಹೇಳಿವೆ....’’
‘‘ಸಾರ್...ಅದ್ಭುತ ಸುದ್ದಿಸಾರ್...ಇದು ನಿಜವಾ ಸಾರ್...?’’ ಕಾಸಿ ರೋಮಾಂಚನದಿಂದ ಕೇಳಿದ.
‘‘ನಿಮಗೆ ನಿಜ ಬೇಕಾ, ಸುದ್ದಿ ಬೇಕಾ?’’ ಆ ಕಡೆಯಿಂದ ಭಟ್ಕಳ್ ಕೇಳಿದ. ‘‘ನಿಜ ಯಾರಿಗೆ ಬೇಕು ಸಾರ್? ನಮಗೆ ಸುದ್ದಿ ಬೇಕು...ನಿಮ್ಮ ಕುರಿತಂತೆ ಇನ್ನಷ್ಟು ಗುಪ್ತಚರ ಮೂಲಗಳನ್ನು ನಮ್ಮ ಕಡೆಗೆ ಬಿಟ್ಟುಬಿಡಿ ಸಾರ್...ನಾವು ಬದ್ಕೋತೀವಿ...’’ ಕಾಸಿ ಅಂಗಲಾಚಿದ.
‘‘ಇಂದು ವಾತಾವರಣ ತೀವ್ರ ಬಿಸಿಯೇರಿದ್ದು, ಇದರಲ್ಲಿ ತನ್ನ ಕೈವಾಡವಿರುವುದನ್ನು ಯಾಸಿನ್ ಭಟ್ಕಳ್ ಒಪ್ಪಿಕೊಂಡಿದ್ದಾನೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಆ ಕಡೆಯಿಂದ ಭಟ್ಕಳ್ ಹೇಳಿದ.
‘‘ಸಾರ್...ಇದು ಹವಾಮಾನ ವರದಿ ಕಾಲಂನಲ್ಲಿ ಹಾಕ್ಕೋಬಹುದು ಸಾರ್...ನಮಗೆ ಫ್ರಂಟ್ ಪೇಜ್ ಸುದ್ದಿ ಬೇಕು ಸಾರ್...’’
‘‘ನೋಡಿ...ನೀವು ಪಿಟಿಐ ಸಹಿತ ವಿವಿಧ ಸುದ್ದಿ ಸಂಸ್ಥೆಗಳಿಗೆ ಸದಸ್ಯರಾಗುವಂತೆ ನಿಮ್ಮ ಹತ್ತಿರದ ಆರೆಸ್ಸೆಸ್ ಕಚೇರಿಗೆ ಸದಸ್ಯರಾಗಿ ಅಥವಾ ನಿಮ್ಮ ಪತ್ರಿಕೆಗಳ ಹೆಸರನ್ನು ಅಲ್ಲಿ ನಮೂದಿಸಿ. ನಾವು ಎಲ್ಲರಿಗೂ ಕರೆದು ಸುದ್ದಿಗಳನ್ನು ಕೊಡಲು ಸಾಧ್ಯವಿಲ್ಲ. ಆರೆಸ್ಸೆಸ್ ಕಚೇರಿಯಿಂದಲೇ ಜೆರಾಕ್ಸ್ ಕಾಪಿಗಳು ಬೇಕಾದಷ್ಟು ಸಿಗುತ್ತವೆ. ಅಲ್ಲಿಂದಲೇ ಸಿಗುತ್ತದೆ...ನೀವು ಅದನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಬಹುದಾಗಿದೆ....’’
‘‘ಆದರೆ ಆರೆಸ್ಸೆಸ್ ಕಚೇರಿಯವರು ಕೊಡೋದಕ್ಕಿಂತ ಇಂಟೆಲಿಜೆನ್ಸ್ ಕಚೇರಿ ಕೊಟ್ಟರೇನೇ ಅದಕ್ಕೆ ವ್ಯಾಲ್ಯೂ ಜಾಸ್ತಿ ಸಾರ್...’’ ಕಾಸಿ ಫೋನ್‌ನಲ್ಲೇ ಹಲ್ಲು ಕಿರಿದ.
‘‘ಯಾರು ಕೊಟ್ರೆ ನಿಮಗೇನ್ರೀ...ನೀವು ಮೂಲವ್ಯಾಧಿಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಿ....ಗುಪ್ತಚರ ಮೂಲಗಳು ಎಂದೇ ಬರೆಯಿರಿ. ‘‘ಮೋದಿಯ ವಿರುದ್ಧ ಸೊಳ್ಳೆಗಳ ಮೂಲಕ ಮಾರಕ ರೋಗವನ್ನು ಹಂಚಿ, ಹತ್ಯೆಗೆ ಯಾಸಿನ್ ಭಟ್ಕಳ ಸಂಚು ರೂಪಿಸಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ ಎಂದು ಬರೆಯಿರಿ....’’
‘‘ಸಾರ್...ಸೊಳ್ಳೆಗಳ ಮೂಲಕ ಮೋದಿಯನ್ನು ಕೊಲ್ಲುವ ಸಂಚೆ?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಹೌದು ಕಣ್ರೀ...ಆ ಸೊಳ್ಳೆಗಳಿಗೆ ಇಂಡಿಯನ್ ಮುಜಾಹಿದ್‌ನ ಮೂಲಕ ತರಬೇತಿ ಕೊಡಿಸಿ, ಅದನ್ನು ಮೋದಿಯ ಬಳಿಗೆ ಕಳುಹಿಸಿ ಅದರಿಂದ ಕಚ್ಚಿಸುವ ಒಂದು ದೊಡ್ಡ ಸಂಚನ್ನು ಯಾಸಿನ್ ಭಟ್ಕಳ್ ರೂಪಿಸಿದ್ದ. ಭಟ್ಕಳ್ ಬಂಧನದಿಂದ ಅದು ವಿಫಲವಾಯಿತು ಎಂದು ಗುಪ್ತಚರ ಮೂಲಗಳ ಅಧಿಕಾರಿಗಳು ತಿಳಿಸಿದ್ದಾರೆ....’’
‘‘ಸಾರ್... ಯಾಸಿನ್ ಭಟ್ಕಳ್ ಬಂಧನದ ಬಳಿಕ ಆ ಸೊಳ್ಳೆಗಳು ಏನಾಯಿತು ಸಾರ್? ಅವುಗಳನ್ನು ಬಂಧಿಸಲಿಲ್ಲವೆ?’’
‘‘ಅವುಗಳ ಹುಡುಕಾಟ ತೀವ್ರವಾಗಿದೆ. ಕೆಲವು ಸೊಳ್ಳೆಗಳು ತಪ್ಪಿಸಿಕೊಂಡು ಪಾಕಿಸ್ತಾನ ಸೇರಿವೆ. ಇನ್ನು ಕೆಲವು ಭಟ್ಕಳದಲ್ಲಿ ನೆಲೆಯೂರಿರುವ ಸಾಧ್ಯತೆ ಇದೆ. ಅದನ್ನು ಬಂಧಿ ಸಲು ವ್ಯಾಪಕ ಕಾರ್ಯಾಚರಣೆ ನಡೆದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...’’ ಭಟ್ಕಳ್ ಆ ಕಡೆಯಿಂದ ಸ್ಕೂಪ್ ಸುದ್ದಿಯನ್ನು ಹೇಳಿದ.
ಕಾಸಿಗೆ ತುಂಬಾ ಖುಷಿಯಾಯಿತು ‘‘ಸಾರ್...ಒಂದಿಷ್ಟು ಕೃಷಿ ಮಾಹಿತಿಯನ್ನು ನೀಡಿ ಸಾರ್...’’

‘‘ಮಲೆನಾಡು ಪ್ರದೇಶದಲ್ಲಿ ಅಡಿಕೆಗೆ ರೋಗ ಬರಲು ಯಾಸಿನ್ ಭಟ್ಕಳ್ ರೂಪಿಸಿದ ಸಂಚೇ ಕಾರಣ ಎನ್ನುವುದು ಯಾಸಿನ್ ಭಟ್ಕಳ್ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ...ಟೊಮೆಟೋ ಬೆಲೆ ಇಳಿಯುವುದಕ್ಕಾಗಿ ಭಟ್ಕಳ್ ಪಾಕಿಸ್ತಾನಿ ಕೃಷಿಕರ ಜೊತೆಗೆ ಸೇರಿ ಸಂಚು ರೂಪಿಸಿದ್ದು, ಇದರಿಂದಾಗಿ ಕೃಷಿಕರ ಮೂಲಕ ಸರಕಾರದ ವಿರುದ್ಧ ದಂಗೆ ಎಬ್ಬಿಸುವುದು ಭಟ್ಕಳ್ ಗುರಿಯಾಗಿತ್ತು ಎಂದು ಮೂಲಗಳು ತಿಳಿಸಿವೆ...’’ ಕಾಸಿ ಎಲ್ಲವನ್ನೂ ನೋಟ್ ಮಾಡಿಕೊಂಡ. ‘‘ಸಾರ್...ಈ ತಾವು ಪತ್ರಿಕೋದ್ಯಮದಲ್ಲಿ ಯಾವುದಾದರೂ ಡಿಗ್ರಿ ಮಾಡಿದ್ದೀರಾ...’’ ಕಾಸಿ ಅನಗತ್ಯ ಪ್ರಶ್ನೆಯೊಂದನ್ನು ಕೇಳಿದ.
‘‘ಹಾಗೇನಿಲ್ಲ ಕಣ್ರೀ...ಪತ್ರಿಕೋದ್ಯಮದಲ್ಲಿ ಡಿಗ್ರಿ ಮಾಡಿದವರಿಂದ ಇಂತಹ ಮೂಲವ್ಯಾಧಿ ಸುದ್ದಿಗಳು ಸಿಗಲು ಸಾಧ್ಯವಿಲ್ಲ. ಮುಖ್ಯವಾಗಿ ಮೂಲವ್ಯಾಧಿ ಪತ್ರಿಕೋದ್ಯಮದ ಬಗ್ಗೆ ಅಪಾರ ಅನುಭವ ಇರಬೇಕಾಗುತ್ತದೆ. ಗುಪ್ತಚರ ಇಲಾಖೆಗಳ ಮೂಲಗಳನ್ನು ಹುಡುಕಿಕೊಂಡು ಅಲ್ಲಿರುವ ಕೆಲವು ಜನಿವಾರದ ಮೂಲಗಳನ್ನು ಪತ್ತೆ ಹಚ್ಚಿ, ಅವರಿಂದ ಕೆಲವು ದೊಗಳೆ ಚಡ್ಡಿ ಮೂಲಗಳನ್ನು ಗುರುತಿಸಿ, ಆ ಚಡ್ಡಿಯೊಳಗೆ ಸುದ್ದಿಗಳನ್ನು ತಮ್ಮದಾಗಿಸಿಕೊಳ್ಳಲು ಅಪಾರ ಅನುಭವ ಬೇಕು ಕಣ್ರೀ...ಯಾವುದಕ್ಕೂ ನೀವು ನಾಳೆಯಿಂದ ಕಚೇರಿಯ ಪಕ್ಕದಲ್ಲಿರುವ ಶಾಖೆಗೆ ಬನ್ನಿ. ಅಲ್ಲಿ ನಾನೇ ನಿಮಗೆ ಇದರ ಕುರಿತಂತೆ ಪಾಠ ಹೇಳಿಕೊಡುತ್ತೇನೆ....’’ ಎಂದದ್ದೇ ಆ ಕಡೆಯಿಂದ ಫೋನ್ ಕಡಿಯಿತು.
‘‘ಸಾರ್...ಮುಖಪುಟಕ್ಕೆ ಲೀಡ್ ಸುದ್ದಿ ಸಿಕ್ಕಿತು...’’ ಎಂದು ಎಂಜಲು ಕಾಸಿ ಸಂಪಾದಕರ ಕೊಠಡಿಯೆಡೆಗೆ ಧಾವಿಸಿದ.

Sunday, April 6, 2014

ನೀಲೇಕಣಿಯವರ ಹೆಸರಲ್ಲಿ ನಾಟಕ ಬರೀತೀನಿ ಕಣ್ರಿ....

ವಾರ್ತಾ ಭಾರತಿ ದೈನಿಕದ ರವಿವಾರ - ಏಪ್ರಿಲ್ -06-2014 ಸಂಚಿಕೆಯಲ್ಲಿ ಪ್ರಕಟವಾದ ಬುಡಬುಡಿಕೆ

ಮಧ್ಯಾಹ್ನದ ಬಿಸಿಲು ಜಾಸ್ತಿಯಾಯಿತು ಎಂದು ಪತ್ರಕರ್ತ ಎಂಜಲು ಕಾಸಿ ಮನೆಯಲ್ಲಿ ತಣ್ಣಗೆ ಮಲಗಿದ್ದ. ಅಷ್ಟರಲ್ಲಿ ಯಾರೋ ಬಾಗಿಲು ತಟ್ಟಿದಂತಾಗಿ ಎದ್ದು ಬಾಗಿಲು ತೆರೆದರೆ ಗಿರೀಶ್ ಕಾರ್ನಾಡ್ ನಿಂತ್ಕೊಂಡಿದ್ದಾರೆ. ‘‘ಸಾರ್ ನೀವಾ....?’’ ಎಂದು ಕಾಸಿ ರೋಮಾಂಚನಗೊಂಡ.
‘‘ಅರೇ ಕಾಸಿಯವರೇ, ನಿಮ್ಮ ಮನೇನಾ ಇದು... ನಿಮ್ಮಲ್ಲಿ ಎಷ್ಟು ಜನ ಇದ್ದಾರೆ...’’ ಎಂದು ಕೇಳಿದರು.
ಕಾಸಿಗೆ ಗೊಂದಲವಾಯಿತು. ತಮ್ಮ ನಾಟಕಕ್ಕೆ ಜನ ಸೇರಿಸುವುದಕ್ಕಾಗಿ ಬಂದಿದ್ದಾರೆಯೇ ಎಂಬ ಅನುಮಾನದಿಂದ ‘‘ಸಾರ್...ನಾನು ನನ್ನ ಹೆಂಡತಿ ಸೂಸಿ ಸಾರ್. ಇಬ್ಬರು ಬರ್ತೇವೆ ಸಾರ್...ನಾಟಕ ಎಲ್ಲಿ ಇಟ್ಟಿದ್ದೀರಿ ಸಾರ್?’’ ಕೇಳಿದ.
‘‘ನಾಟಕ ಅಲ್ಲ ಕಣ್ರೀ...ಮತ ಕೇಳೋದಕ್ಕೆ ಬಂದಿದ್ದೇನೆ...’’ ಎಂದು ಕಾಸಿಗೆ ಶಾಕ್ ಕೊಟ್ಟು ಬಿಟ್ಟರು.
‘‘ಸಾರ್ ಓಟಿಗೆ ನಿಂತಿದ್ದೀರಾ...?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ಇಲ್ಲ ಕಣ್ರೀ...ನೀಲೇಕಣಿಯವರ ಪರವಾಗಿ ಓಟಿಗೆ ಇಳಿದಿದ್ದೇನೆ...’’ ಕಾರ್ನಾಡ್ ಸ್ಪಷ್ಟೀಕರಣ ನೀಡಿದರು.
ಕಾಸಿ ಮತ್ತೂ ರೋಮಾಂಚನಗೊಂಡ ‘‘ಹೌದಾ ಸಾರ್...ಶೂಟಿಂಗ್ ಇಲ್ವಾ ಸಾರ್...ಬಾಲಿವುಡ್‌ನಲ್ಲಿ ಇತ್ತೀಚೆಗೆ ನೀವು ಬಿಸಿ ನಟರಲ್ವಾ ಸಾರ್. ಅದನ್ನು ಬಿಟ್ಟು ಶೂಟಿಂಗ್‌ಗೆ ಬಂದಿದ್ದೀರಾ...’’
 ‘‘ನಾನೀಗ ಬಾಲಿವುಡ್‌ನಲ್ಲಿ ತುಂಬಾ ತುಂಬಾ ಬಿಸಿ ಕಣ್ರೀ...ಸಲ್ಮಾನ್‌ಖಾನ್ ಜೊತೆಗೆ ‘ಏಕ್ ಥಾ ಟೈಗರ್’ನಲ್ಲಿ ನಟಿಸಿದ ಬಳಿಕ ನನಗೆ ಸಿಕ್ಕಾಬಟ್ಟೆ ಡಿಮ್ಯಾಂಡ್ ಬರ್ತಾ ಇದೆ. ಸಲ್ಮಾನ್ ಖಾನ್ ಬದಲಿಗೆ ನನ್ನನ್ನೇ ಹಾಕೋಕೆ ನಿರ್ಮಾಪಕರು ರೆಡಿ ಇದ್ದಾರೆ. ಆದರೆ ಶರ್ಟ್ ಬಿಚ್ಚಿ ಎದೆ ತೋರಿಸೋದಕ್ಕೆ ತುಸು ನಾಚಿಕೆ ಕಣ್ರೀ...ಆಫರ್‌ನೆಲ್ಲ ಸಲ್ಮಾನ್‌ಖಾನ್‌ಗೆ ಬಿಟ್ಟುಕೊಟ್ಟೆ...ಇದೀಗ ನೀಲೇಕಣಿಯವರು ಕೆಲವು ದಿನದ ಕಾಲ್‌ಶೀಟ್ ಕೇಳಿದ್ದಾರೆ. ಆದ್ದರಿಂದ ನನ್ನ ಶೂಟಿಂಗನ್ನು ಬಾಲಿವುಡ್‌ನಿಂದ ಬೆಂಗಳೂರಿಗೆ ವರ್ಗಾಯಿಸಿದ್ದೇನೆ...’’
 ಕಾಸಿಗೆ ತಕ್ಷಣ ತಾನು ಶರ್ಟ್ ಹಾಕಿಕೊಳ್ಳದೇ ಇರುವುದು ನೆನಪಿಗೆ ಬಂತು. ಒಳ ಹೋದವನೇ ಶರ್ಟ್ ಹಾಕಿಕೊಂಡು ಬಂದು ಕಾರ್ನಾಡರ ಇಂಟರ್ಯೂ ಮಾಡಲು ಶುರು ಮಾಡಿದ.
‘‘ಸಾರ್...ಬಾಲಿವುಡ್‌ನಲ್ಲಿ ನಿಮ್ಮ ರೆಮ್ಯುನರೇಷನ್ ತುಂಬಾ ಜಾಸ್ತಿಯಾಗಿದೆಯಲ್ಲ... ನಿಮ್ಮ ಕಾಲ್‌ಶೀಟ್‌ನ ರೇಟ್ ಎಷ್ಟು ಸಾರ್?’’ ಕಾಸಿ ಕೇಳಿ ಬಿಟ್ಟ.
ಕಾರ್ನಾಡ್‌ಗೆ ಮುಜುಗರವಾಯಿತು ‘‘ನೀತಿ ಸಂಹಿತೆ ಉಲ್ಲಂಘನೆಯಾಗುತ್ತೆ ಕಣ್ರೀ...ಒಟ್ಟಾರೆಯಾಗಿ ನೀಲೇಕಣಿಯವರು ಗೆಲ್ಲಬೇಕು. ಅದಕ್ಕಾಗಿ ಪ್ರಚಾರಕ್ಕಿಳಿದಿದ್ದೇನೆ...’’
ಕಾಸಿ ಪ್ರಶ್ನೆಯನ್ನು ಬದಲಿಸಿದ ‘‘ನೀಲೇಕಣಿ ಯವರನ್ನೇ ಯಾಕೆ ಆರಿಸಿದ್ರಿ. ಅವರಲ್ಲಿ ಅದೇನು ವೈಶಿಷ್ಟವನ್ನು ಕಂಡ್ರೀ ಸಾರ್?’’
‘‘ನೋಡಿ ಕಾಸಿಯವ್ರೇ...ನನಗೆ ತುಘಲಕ್ ನಾಟಕ ಬರೆಯಲು ಸ್ಫೂರ್ತಿಯೇ ನೀಲೇಕಣಿಯವರು. ಅವರಿಲ್ಲದಿದ್ದರೆ ನಾನು ತುಘಲಕ್ ನಾಟಕವನ್ನು ಬರೆಯುತ್ತಿರಲಿಲ್ಲ’’
ಕಾಸಿಗೆ ಗೊಂದಲವಾಯಿತು ‘‘ಅದು ಹೇಗೆ ಸಾರ್?’’ ಕೇಳಿದ.
‘‘ನೋಡ್ರಿ...ತುಘಲಕ್ ಏನು ಮಾಡಿದ? ಚಿನ್ನ, ತಾಮ್ರದ ನಾಣ್ಯದ ಬದಲಿಗೆ ಚರ್ಮದ ನಾಣ್ಯಗಳನ್ನು ಜಾರಿಗೆ ತಂದ. ಒಂದು ಕ್ರಾಂತಿಯನ್ನೇ ಮಾಡಿದ. ಇದೀಗ ನೀಲೇಕಣಿಯವರು ಏನು ಮಾಡಿದರು? ರೇಷನ್ ಕಾರ್ಡ್ ಬದಲು ಆಧಾರ್‌ಕಾರ್ಡ್ ತಂದರು. ತುಘಲಕ್‌ನ ಮುಂದಾಲೋಚನೆ ನಮ್ಮ ನೀಲೇಕಣಿಯವರಿಗಿದೆ...’’ ಕಾರ್ನಾಡರು ವಿವರಿಸಿದರು.
ಕಾಸಿಗೂ ಹೌದೆನಿಸಿತು ‘‘ಆದರೆ ತುಘಲಕ್‌ನ ಚರ್ಮದ ನಾಣ್ಯಗಳನ್ನೆಲ್ಲ ತೆಂಗಿನ ಬುಡಕ್ಕೆ ಗೊಬ್ಬರವಾಗಿ ಬಳಸಲಾಯಿತಂತಲ್ಲ ಸಾರ್...’’ ಕಾಸಿ ಅನುಮಾನವೊಂದನ್ನು ಮುಂದಿಟ್ಟ.
‘‘ಬಳಸಿದರೇನಾಯಿತು...ಒಳ್ಳೆಯದೇ ಆಯಿತು. ತುಘಲಕ್‌ನ ರಾಜ್ಯದಲ್ಲಿ ತೆಂಗಿನ ಗಿಡದ ಫಸಲು ಜಾಸ್ತಿಯಾಯಿತು. ಮರಗಳು ಹೆಚ್ಚು ಹೆಚ್ಚು ಫಲವನ್ನು ಕೊಟ್ಟ ಕಾರಣ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಯಿತು..’’ ಕಾರ್ನಾಡ್ ಇತಿಹಾಸದ ಸೂಕ್ಷ್ಮಗಳನ್ನು ವಿವರಿಸಿದರು.
ಕಾಸಿ ಮತ್ತೆ ರೋಮಾಂಚನಗೊಂಡ. ತುಘಲಕ್‌ನ ಕಾಲದ ಈ ಘಟನೆಯನ್ನು ಯಾರೂ ವಿವರಿಸಿರಲಿಲ್ಲ. ‘‘ಸಾರ್...ಅಂದರೆ ನೀಲೇಕಣಿಯವರು ಮಾಡಿಸಿಕೊಟ್ಟಿರುವ ಆಧಾರ್‌ಕಾರ್ಡ್‌ಗಳಿಗೆ ತೆಂಗಿನ ಮರದ ಬುಡವೇ ಗತಿಯಾ?’’
ಕಾರ್ನಾಡರು ಸಿಟ್ಟಾದರು ‘‘ಅದರಿಂದ ಏನಾಯಿತು. ತೆಂಗಿನ ಬುಡಕ್ಕೆ ಹಾಕಿದರೆ ಫಸಲು ಜಾಸ್ತಿಯಾಗುತ್ತದೆ. ಎಕ್ಸ್‌ಪೋರ್ಟ್ ಜಾಸ್ತಿಯಾಗಿ ವಿದೇಶಿ ವಿನಿಮಯ ಹೆಚ್ಚಳವಾಗುತ್ತದೆ. ದೇಶದ ಆರ್ಥಿಕ ಬಿಕ್ಕಟ್ಟು ಸುಧಾರಣೆಯಾಗುತ್ತದೆ...’’ ಎನ್ನುತ್ತಾ ಭಾರತದ ಇಡೀ ಅರ್ಥವ್ಯವಸ್ಥೆಯನ್ನು ಕುಳಿತಲ್ಲೇ ಬುಡಮೇಲು ಗೊಳಿಸತೊಡಗಿದರು.
ಕಾಸಿಯ ತಲೆ ಗಿರ್ರೆಂದು ತಿರುಗತೊಡಗಿತು ‘‘ಹಾಗಾದ್ರೆ...ತೆಂಗಿನ ಮರದ ಫಸಲನ್ನು ಹೆಚ್ಚಿಸಲು ಈ ಆಧಾರ್ ಕಾರ್ಡ್ ಮಾಡಲಾಗಿದೆಯೇ ಸಾರ್...’’ ಕೇಳಿದ.
‘‘ಅದಲ್ಲದಿದ್ದರೆ ಇದು, ಇದಲ್ಲದಿದ್ದರೆ ಅದು....ಆಧಾರ್ ಒಂದು ಬಹುಪಯೋಗಿ ಕಾರ್ಡ್. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಬಳಸಬಹುದು ಎನ್ನುವುದಕ್ಕಾಗಿ ನಾನು ಹೇಳಿದೆ...’’
ಕಾಸಿಯ ಅನುಮಾನ ಮುಗಿಯಲಿಲ್ಲ ‘‘ಹಾಗಲ್ಲ ಸಾರ್...ಆಧಾರ್ ಕಾರ್ಡ್ ಪ್ಲಾಸ್ಟಿಕ್ ಸಾರ್. ಅದನ್ನು ಗೊಬ್ಬರವಾಗಿ ಬಳಸುವುದು ಹೇಗೆ...’’
‘‘ನೋಡ್ರಿ...ಅದನ್ನು ಹೇಗೆ ಬಳಸಬಹುದು ಎನ್ನುವುದರ ಸರ್ವ ಉಪಾಯ ನೀಲೇಕಣಿಯಲ್ಲಿದೆ. ನೀವು ಅವರನ್ನು ಮತಹಾಕಿ ಗೆಲ್ಲಿಸಿದರೆ ಆಧಾರನ್ನು ಯಾವ ರೀತಿಯಲ್ಲೆಲ್ಲ ಬಳಸಬಹುದು ಎನ್ನುವುದನ್ನು ನಿಮಗೆ ಹೇಳಿಕೊಡುತ್ತಾರೆ. ತುಘಲಕ್ ಮಾಡಿದ್ದ ರೀತಿಯಲ್ಲೇ ಆಧಾರ್ ಕಾರ್ಡನ್ನು ಮುಂದೆ ರೂಪಾಯಿಯ ಬದಲಿಗೆ ಕರೆನ್ಸಿಯ ರೂಪದಲ್ಲಿ ಹೇಗೆ ಬಳಸಬಹುದು ಎನ್ನುವುದರ ಬಗ್ಗೆ ನೀಲೇಕಣಿಯವರು ಸಂಶೋಧನೆ ನಡೆಸುತ್ತಿದ್ದಾರೆ. ಆ ಸಂಶೋಧನೆ ಯಶಸ್ವಿಯಾಗಬೇಕಾದರೆ ನೀವೆಲ್ಲ ನೀಲೇಕಣಿಯವರನ್ನು ಗೆಲ್ಲಿಸಬೇಕು...’’
ಕಾರ್ನಾಡ್ ಅವರ ಮಾತಿನಿಂದ ಕಾಸಿಗೆ ಖುಷಿಯಾಯಿತು ‘‘ಸಾರ್... ತುಘಲಕ್ ಥರ ಈ ನೀಲೇಕಣಿಯವರು ರಾಜಧಾನಿಯನ್ನು ಬದಲಿಸುವ ಸಾಧ್ಯತೆ ಇದೆಯಾ...’’ ಕೇಳಿದ.
‘‘ಯಾರಲ್ಲೂ ಹೇಳಬೇಡಿ. ಸ್ಕೂಪ್ ಸುದ್ದಿ ಇದು. ಗುಟ್ಟಾಗಿರಲಿ. ನೀಲೇಕಣಿ ಗೆದ್ದರೆ ರಾಜಧಾನಿಯನ್ನು ದಿಲ್ಲಿಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡುತ್ತಾರಂತೆ. ದಿಲ್ಲಿಯಲ್ಲಿದ್ದವರೆಲ್ಲ ಬೆಂಗಳೂರಿಗೆ ವಲಸೆ ಬರ್ಬೇಕಾಗತ್ತೆ. ಸುಪ್ರೀಂಕೋರ್ಚು, ಸಂಸತ್‌ಭವನ, ರಾಷ್ಟ್ರಪತಿ ಭವನ ಎಲ್ಲವನ್ನು ಬುಡ ಸಮೇತ ಎತ್ತಿ ಬೆಂಗಳೂರಿಗೆ ವರ್ಗಾಯಿಸುವ ಪ್ಲಾನ್ ಇದೆ. ನನ್ನ ತುಘಲಕ್ ನಾಟಕದಲ್ಲಿ ಬರುವ ದೃಶ್ಯವೊಂದರಿಂದ ಅವರು ಸ್ಫೂರ್ತಿ ಪಡೆದು ಈ ನಿರ್ಧಾರವನ್ನು ಮಾಡಿದ್ದಾರೆ. ಮುಖ್ಯವಾಗಿ ನೀವು ನಿಮ್ಮ ಪತ್ನಿ ಸೂಸಿ ಅವರು ನೀಲೇಕಣಿಯವರಿಗೆ ಮತ ನೀಡಬೇಕು. ನೀವು ಗೆಲ್ಲಿಸಿದರೆ ಇದೆಲ್ಲ ಸಾಧಿಸಲು ಸಾಧ್ಯ. ಮುಖ್ಯವಾಗಿ ಅವರು ಗೆದ್ದರೆ ಅವರ ಹೆಸರಿನಲ್ಲಿ ನಾಟಕವೊಂದು ಬರೆಯಬೇಕು ಎಂದಿದ್ದೇನೆ. ‘ಟಿಪ್ಪು ಸುಲ್ತಾನನ ಕನಸುಗಳು’ ಇದ್ದಂತೆಯೇ ‘ನೀಲೇಕಣಿಯವರ ಕನಸುಗಳು’ ಎಂಬ ನಾಟಕವನ್ನು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಿಸಬೇಕು ಎಂದಿದ್ದೇನೆ...’’
‘‘ನೀಲೇಕಣಿಯವರ ಕನಸುಗಳು ನಾಟಕ ಈಗಾಗಲೇ ಬಿಡುಗಡೆಯಾಗಿದೆ ಸಾರ್....ಚುನಾವಣಾ ಪ್ರಣಾಳಿಕೆಯನ್ನೇ ನಾಟಕವನ್ನಾಗಿ ಮರು ಪ್ರಿಂಟ್ ಮಾಡಿದರೆ ಆಯಿತು ಸಾರ್...ನಿಮಗೆ ಕೆಲಸ ಸುಲಭವಾಯಿತು....’’ ಕಾಸಿ ಸಲಹೆ ನೀಡಿದ್ದೇ....ಕಾರ್ನಾಡರು ‘‘ಬಾಲಿವುಡ್‌ನಿಂದ ಫೋನ್ ಬಂದಿದೆ...ಈಗ ಬಂದೆ...’’ ಎನ್ನುತ್ತಾ ತಮ್ಮ ಕಾರು ಹತ್ತಿ ರೊಂಯ್ಯನೆ ಹೊರಟರು.